Homeಮುಖಪುಟಪೇಜಾವರರ ಗಂಟಲಲ್ಲಿ ಹಿಂದೂತ್ವದ ಪುಂಡ!!

ಪೇಜಾವರರ ಗಂಟಲಲ್ಲಿ ಹಿಂದೂತ್ವದ ಪುಂಡ!!

- Advertisement -
- Advertisement -

ವರದಿಗಾರ |

ಸಂಘಪರಿವಾರದ ಆಸ್ಥಾನ ಪುರೋಹಿತ ಪೇಜಾವರ ವಿಶ್ವೇಶತೀರ್ಥ ಸ್ವಾಮಿಯ ಅಸಲಿ ಅವತಾರ ಅನಾವರಣವಾಗಿದೆ. ಕಳೆದ ವಾರ ಮಂಗಳೂರಲ್ಲಿ ವಿಶ್ವಹಿಂದೂ ಪರಿಷತ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬೇಗ ಆಗಬೇಕೆಂದು ಜನದ್ರೋಹ ಸಭೆಯೊಂದನ್ನು ನಡೆಸಿತ್ತಲ್ಲ, ಅಲ್ಲಿ ಪೇಜಾವರರ ದಿವ್ಯ ಸಾನಿಧ್ಯವಿತ್ತು. ರಾಮಮಂದಿರಕ್ಕಾಗಿ ಪೇಜಾವರ ಸ್ವಾಮಿ ಕ್ಯಾತೆ ತೆಗೆದು ಕೂಗಾಡಿದ ಪರಿ ಭಯೋತ್ಪಾದನೆಯ ಸ್ಯಾಂಪಲ್ಲಿನಂತಿತ್ತು. ನಳಿನ್‌ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ, ಪ್ರತಾಪ್‌ಸಿಂಹ, ಪ್ರಮೋದ್ ಮುತಾಲಿಕ್ ಮುಂತಾದ ಮೂರನೇ ದರ್ಜೆ ಹಿಂದೂತ್ವದ ಹಿಕಮತ್ತುದಾರರ ಗಂಟಲಲ್ಲಿ ಪೇಜಾವರ ಮಾತನಾಡಿದ್ದು ಕೇಳಿದ ಜನ ಬೆಚ್ಚಿಬಿದ್ದಿದ್ದಾರೆ. ಅಲ್ಲಿಗೆ ಈ ಅದ್ವೈತ ಸನ್ಯಾಸಿಯ ದೋಖಾ ದ್ವಂದ್ವ ಸಿದ್ಧಾಂತ ಮತ್ತೊಮ್ಮೆ ಜಗಜ್ಜಾಹೀರಾಗಿ ಹೋಗಿದೆ!

ಪರಧರ್ಮ ಸಹಿಷ್ಣು ಸಂತನ ಗೆಟಪ್ಪಿನಲ್ಲಿ ಓಡಾಡುವ ಈ ಪೊಲಿಟಿಕಲ್ ಸ್ವಾಮಿಯ ನಡೆ-ನುಡಿಯಲ್ಲಿ ಯಾವಾಗಲೂ ವಿರೋಧಾಭಾಸ-ವಿಪರ‍್ಯಾಸಗಳೇ, ಬ್ರಾಹ್ಮಣ್ಯದಡಿಯ ಅಸಮಾನತೆ-ಅಸ್ಪೃಶ್ಯತೆಗಳ ಅರ್ಥ ಮಾಡಿಸುತ್ತವೆ. ಹರಿಜನರ ಕೇರಿಗಳಿಗೆ ಹೋಗಿ ಪಾದ ತೊಳೆಸಿಕೊಳ್ಳುವ ಪೇಜಾವರರು ಮರಳಿ ಉಡುಪಿ ಮಠಕ್ಕೆ ಬರುವಾಗಲೇ ಜನಿವಾರ ಬದಲಿಸಿ ಶುದ್ಧೀಕರಣಗೊಳ್ಳುತ್ತಾರೆ. ಧರ್ಮೋನ್ಮಾದಿ ಕರಸೇವಕರು ಬಾಬರಿ ಮಸೀದಿ ಗುಮ್ಮಟ ಉರುಳಿಸುವಾಗ ಕಣ್ಣಾರೆ ಕಂಡು ಧನ್ಯತಾಭಾವದಿಂದ ಮಂದಹಾಸ ಬೀರುವ ಈ ಸ್ವಾಮಿ ತನ್ನ ಮಠದ ಆವರಣದಲ್ಲೇ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸುವ ನಾಟಕವಾಡಬಲ್ಲರು.

ಉಡುಪಿ ಮಾಧ್ವಮಠದಲ್ಲಿ ಪಂಕ್ತಿಭೇದವೇ ಇಲ್ಲವೆಂದು ಹಸಿ-ಹಸಿ ಸುಳ್ಳು ಹೇಳುವ ಪೇಜಾವರ ಸ್ವಾಮಿ ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನಕ್ಕೆ ಪರ‍್ಯಾಯವಾಗಿ ಉಡೆಸ್ನಾನದ ಆವಿಷ್ಕಾರ ಮಾಡಿ ಅಮಾಯಕ ಅಬ್ರಾಹ್ಮಣರ ದಿಕ್ಕು ತಪ್ಪಿಸುತ್ತಾರೆ. ಇವತ್ತಿಗೂ ಪೇಜಾವರರು ಗೋ-ಗೂಂಡಾಗಳಿಗೆ, ಬಾಬರಿ ಮಸೀದಿ ಧ್ವಂಸಕರಿಗೆ ಸ್ಫೂರ್ತಿಯ ಚಿಲುಮೆ. ತನ್ನ ಧಾರ್ಮಿಕ ಕಾರ್ಯಾಚರಣೆಗೆ ಅನುಕೂಲ ಆಗುತ್ತದೆಂದಾಗ ಸಾಬರನ್ನು ಮಠಕ್ಕೆ ಕರೆದು ಇಫ್ತಾರ್ ಕೂಟ ಮಾಡುವ ಪೇಜಾವರರು ಶಾಸಕ ರಘುಪತಿ ಭಟ್ಟನಂಥವರು ಕಣ್ಣುಬಿಟ್ಟರೆ ಹೆದರಿ ಮರು ವರ್ಷ ಆ ಇಫ್ತಾರ್ ಪ್ರಹಸನ ಮಾಡುವುದೇ ಇಲ್ಲಾ! ಹಿಂದೂತ್ವದ ಸೈತಾನರು ಪಾಪದ ಸಾಬರ ಬೆತ್ತಲೆ ಮಾಡಿ ಬಡಿದು ಕೇಕೆ ಹಾಕಿದರೂ, ಕೊಂದು ಎಸೆದರೂ ಕಂಡೂ ಕಾಣದಂತಿರುತ್ತಾರೆ ಪೇಜಾವರ ಸ್ವಾಮಿ. ಹಾಗಂತ ಶಾಂತಿ, ಸಹಬಾಳ್ವೆ, ಸಹಿಷ್ಣುತೆ, ಸಂವಿಧಾನದ ಬಗ್ಗೆ ಉದ್ದುದ್ದ ವ್ಯಾಖ್ಯಾನ ಕೊಡಲು ಮಾತ್ರ ಮರೆಯುವುದಿಲ್ಲ……..

ಇಂಥ ಗುಣಧರ್ಮದ ಪೇಜಾವರ ಸ್ವಾಮೀಜಿ ಮೊನ್ನೆ ಮಂಗಳೂರಲ್ಲಿ ಕೇಸರಿ ಕೂಟದಲ್ಲಿ ಉದುರಿಸಿದ ಭೀಭತ್ಸ ಅಣಿ ಮುತ್ತುಗಳು ಅವರ ಜಾಯಮಾನಕ್ಕೆ ತಕ್ಕಂತೆಯೇ ಇದೆ. ಮಾತಿನುದ್ದಕ್ಕೂ ಪೇಜಾವರರ ಮೇಲೆ ಹಿಂದೂತ್ವದ ಭಯೋತ್ಪಾದಕನ ಆವಾಹನೆ ಆದಂತಿತ್ತು. ಹಿಂದೂತ್ವದ ಕಾಳಗದ ಕಾಲಾಳುಗಳಾದ ಅವಿಭಜಿತ ದಕ್ಷಿಣ ಕನ್ನಡದ ಅಬ್ರಾಹ್ಮಣರನ್ನು ಅನಾಹುತಕ್ಕೆ ಪ್ರಚೋದಿಸುವ ಓಘ ಪೇಜಾವರರ ಭಾಷಣಕ್ಕಿತ್ತು. ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಮಾಮನ ಗೆಲ್ಲಿಸುವ ಮಸಲತ್ತಿನ ಮಾತುಗಾರಿಕೆ ಇದಾಗಿತ್ತೆಂಬುದು ಎಂಥ ಗಾಂಪನಿಗೂ ಅರ್ಥವಾಗುತ್ತದೆ!! ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೃವೀಕರಣಗೊಂಡಿರುವ ಹಿಂದೂತ್ವದ ಓಟ್‌ಬ್ಯಾಂಕ್ ಇನ್ನಾರು ತಿಂಗಳಲ್ಲಿ ಬರಲಿರುವ ಪಾರ್ಲಿಮೆಂಟ್ ಇಲೆಕ್ಷನ್ ತನಕ ಕಾಪಿಟ್ಟುಕೊಳ್ಳುವ ತಂತ್ರಗಾರಿಕೆ ಪೇಜಾವರ ಟೇಮಿನದಾಗಿತ್ತು.

ನಾಲ್ಕುವರೆ ವರ್ಷದಿಂದ ಸಂಘಪರಿವಾರದ ಬ್ರಾಹ್ಮಣ ರಿಂಗ್‌ಮಾಸ್ಟರ್‌ಗಳ ಪಾದುಕಾ ಪೂಜಾರಿ ಮೋದಿ ಪ್ರಧಾನಿಯಾಗಿದ್ದರೂ ಆತನಿಂದ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲಿಕ್ಕೆ ಯಾಕಾಗಲಿಲ್ಲ ಎಂಬ ಮೂಲಭೂತ ಪ್ರಶ್ನೆ ಮರೆಮಾಚಿದ ಪೇಜಾವರರು ಏಕಾಏಕಿ ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ಆ ಮೂಲಕ ಇಲೆಕ್ಷನ್ ಪ್ರಚಾರ ಶುರುಮಾಡಿದ್ದಾರೆ. ಹಿಂದೂತ್ವಕ್ಕಾಗಿ ತನ್ನನ್ನು ಸಂಸದನಾಗಿಸಿದ ಜಿಲ್ಲೆಗೇ ಬೆಂಕಿ ಹಾಕ್ತೇನೆಂದು ಯಾವ ಮುಲಾಜೂ, ಮನುಷ್ಯತ್ವವೂ ಇಲ್ಲದೆ ಆರ್ಭಟಿಸುವ ನಳಿನ್‌ಕುಮಾರ್ ಕಟೀಲ್‌ನಂಥವರನ್ನು ಬಗಲಲ್ಲಿಟ್ಟುಕೊಂಡು ಪೇಜಾವರರು ಮಾಡಿದ ಭಾಷಣದ ನೀತಿ-ರೀತಿಗೆ ಕೂಗುಮಾರಿ ಖ್ಯಾತಿಯ ಚೈತ್ರಾ ಕುಂದಾಪುರ, ಸೂಲಿಬೆಲೆ ಚಕ್ರವರ್ತಿಯಂಥವರೇ ನಾಚಿ ತಲೆ ತಗ್ಗಿಸುವಂತಿತ್ತು!

ಪ್ರತಿದಿನ ಸಾವಿರ ಸುಳ್ಳು ಸಬೂಬು ಹೇಳುವ ಮೋದಿ 2019ರ ಚುನಾವಣೆಯಲ್ಲಿ ಬಚಾವಾಗದ ಪ್ರಪಾತಕ್ಕೆ ಹೋಗಿಬಿದ್ದಿದ್ದಾರೆಂಬುದು ಪೇಜಾವರರಂಥ ಹಿಂದೂ ಸಂತ ಸಂತಾನಕ್ಕೆ ಪಕ್ಕಾ ಆಗಿಹೋಗಿದೆ. ಮೋದಿಯಂಥ ಹುಂಬ ಶೋ ಮ್ಯಾನ್ ದೇಶದ ಚುಕ್ಕಾಣಿ ಹಿಡಿಯುವುದು ಸಂಘಪರಿವಾರಕ್ಕೆ ಅನಿವಾರ್ಯ ಅಗತ್ಯ. ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಬರುತ್ತಿದೆ ಎಂದು ಬಿಂಬಿಸಿದರೆ ಜನರ ಭಾವನೆ ಕೆರಳಿಸಬಹುದೆಂಬ ದೂ(ದು)ರಾಲೋಚನೆ ಕಾವಿ ಕೂಟದ್ದು. ಹಾಗಾಗಿಯೇ ಮಂಗಳೂರಲ್ಲಿ ಪೇಜಾವರರು ಮಾತುಮಾತಿಗೆ ಕಾಂಗ್ರೆಸ್ ರಾಮಮಂದಿರ ವಿರೋಧಿ ಎಂಬಂತೆ ಪ್ರವಚನ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ವಿಶೇಷ ಕಾನೂನು ಮಾಡಬೇಕೆಂದು ಹೇಳುವ ಪೇಜಾವರ ಮಾತಿನ ಅರ್ಥ ಸುಗ್ರೀವಾಜ್ಞೆ ಮೂಲಕ ಅಯೋಧ್ಯೆಯಲ್ಲಿ ರಾಮನಿಗೆ ಗುಡಿಕಟ್ಟಬೇಕೆನ್ನುವುದೇ ಆಗಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಗೆ ಕಾಂಗ್ರೆಸ್ ಸಹಕರಿಸಬೇಕೆಂದು ಎಚ್ಚರಿಕೆಯೂ ಪೇಜಾವರ ಸ್ವಾಮಿ ಕೊಟ್ಟಿದ್ದಾರೆ. ಕಾಂಗ್ರೆಸೇನಾದರೂ ರಾಮಮಂದಿರಕ್ಕೆ ಅಡ್ಡಗಾಲು ಹಾಕಿದರೆ ಮುಂಬರುವ ಚುನಾವಣೆಯಲ್ಲಿ ಆ ಪಾರ್ಟಿ ಮಣ್ಣು ಮುಕ್ಕುತ್ತದೆಯೆಂದು ಮೋದಿಯನ್ನು ಮೀರಿಸುವ ಸ್ಟೈಲಲ್ಲಿ ಪೇಜಾವರರು ಭಾಷಣ ಬಿಗಿದಿದ್ದಾರೆ. ಅಷ್ಟೇ ಅಲ್ಲ, ಮುಸ್ಲಿಮರು ರಾಮ ಮಂದಿರಕ್ಕೆ ಬೆಂಬಲಿಸಿ ಹಿಂದೂಗಳೊಂದಿಗೆ ಬಾಂಧವ್ಯ ಹೆಚ್ಚಿಸಿಕೊಳ್ಳಬೇಕು ಎಂದಿದ್ದಾರೆ. ಏನಿದರ ಅರ್ಥ? ಸಾಬರು ಅಯೋಧ್ಯೆಯಲ್ಲಿ ರಾಮ ಮಂದಿರ ಆಗದಿದ್ದರೆ ಗಂಡಾಂತರಕ್ಕೆ ಸಿಲುಕಲಿದ್ದಾರೆಂದಾ? ಹಿಂದೂತ್ವದ ದಾದಾಗಿರಿಗೆ ಶರಣಾಗದಿದ್ದರೆ ಉಳಿಗಾಲವಿಲ್ಲವೆಂದಾ? ಸಾತ್ವಿಕ ಸಂತ ತಾನೆಂದೂ ತೋರಿಸಿಕೊಳ್ಳಲು ತಿಣಕಾಡುವ ಪೇಜಾವರರ ಮಾತುಗಾರಿಕೆ ಯಾವ ಹಿಂದೂ ಭಯೋತ್ಪಾಕ ಕಾವಿ ಅಥವಾ ಖಾದಿ ಪುಂಡರ ಭಾಷಣಕ್ಕೆ ಕಮ್ಮಿಯಿದೆ?!

ಜನಾಗ್ರಹ ಸಭೆ ಚುನಾವಣಾ ರಾಜಕೀಯ ಅಲ್ಲ ಅನ್ನುತ್ತಲೇ ಬಿಜೆಪಿ ಪರ ಪರೋಕ್ಷವಾಗಿ ಬಹಿರಂಗ ಪ್ರಚಾರ ಪೇಜಾವರ ಸ್ವಾಮಿ ಮಾಡಿದ್ದಾರೆ. ಬಿಜೆಪಿ ರಾಮ ಮಂದಿರಕ್ಕೆ ಸಂಪೂರ್ಣ ಬೆಂಬಲ ಕೊಡಬೇಕೆಂದು ಹೇಳಿರುವುದೇ ವಿಕಟ ವ್ಯಂಗ್ಯ! ಲೋಕಸಭೆ ಸ್ಥಾನ ತ್ಯಜಿಸಲು ರಾಮ ಮಂದಿರಕ್ಕಾಗಿ ಬಿಜೆಪಿ ಸಂಸದರು ರೆಡಿಯಾಗಬೇಕೆಂದು ಹೇಳಿದ್ದಾರೆ. ಬರೀ ಆರು ತಿಂಗಳು ಬಾಕಿಯಿರುವಾಗ ಚೆಡ್ಡಿ ಎಂಪಿಗಳಿಗೆ ರಾಜೀನಾಮೆ ಕೊಡಿಯೆಂದು ಪೇಜಾವರರು ಹೇಳೋದು ಬಿಜೆಪಿಯನ್ನು ತಾರೀಫು ಮಾಡುವ ತಂತ್ರಗಾರಿಕೆಯಿಂದಷ್ಟೇ. ರಾಮನ ಹೆಸರಲ್ಲಿ ಪ್ರಧಾನಿಯಾದ ಮೋದಿ ನಾಲ್ಕುವರೆ ವರ್ಷದಿಂದ ಏಕೆ ರಾಮನಿಗೊಂದು ನೆಲೆಕೊಡುವ ಕೃತಜ್ಞತಾ ಭಾವದಿಂದ ಪ್ರಾಮಾಣಿಕ ಕೆಲಸ ಮಾಡಲಿಲ್ಲ ಎಂದು ಕೇಳುವ ಗಟ್ಸ್ ಪೇಜಾವರರೇಕೆ ತೋರಿಸುತ್ತಿಲ್ಲ?

ಹಿಂದೂತ್ವದ ದಿವಾಳಿಕೋರತನಕ್ಕೆ ಪೇಜಾವರರು ಸಂಕೇತವಾಗುತ್ತಿರುವುದು ದುರಂತ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...