Homeಮುಖಪುಟಪೇಜಾವರರ ಗಂಟಲಲ್ಲಿ ಹಿಂದೂತ್ವದ ಪುಂಡ!!

ಪೇಜಾವರರ ಗಂಟಲಲ್ಲಿ ಹಿಂದೂತ್ವದ ಪುಂಡ!!

- Advertisement -
- Advertisement -

ವರದಿಗಾರ |

ಸಂಘಪರಿವಾರದ ಆಸ್ಥಾನ ಪುರೋಹಿತ ಪೇಜಾವರ ವಿಶ್ವೇಶತೀರ್ಥ ಸ್ವಾಮಿಯ ಅಸಲಿ ಅವತಾರ ಅನಾವರಣವಾಗಿದೆ. ಕಳೆದ ವಾರ ಮಂಗಳೂರಲ್ಲಿ ವಿಶ್ವಹಿಂದೂ ಪರಿಷತ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬೇಗ ಆಗಬೇಕೆಂದು ಜನದ್ರೋಹ ಸಭೆಯೊಂದನ್ನು ನಡೆಸಿತ್ತಲ್ಲ, ಅಲ್ಲಿ ಪೇಜಾವರರ ದಿವ್ಯ ಸಾನಿಧ್ಯವಿತ್ತು. ರಾಮಮಂದಿರಕ್ಕಾಗಿ ಪೇಜಾವರ ಸ್ವಾಮಿ ಕ್ಯಾತೆ ತೆಗೆದು ಕೂಗಾಡಿದ ಪರಿ ಭಯೋತ್ಪಾದನೆಯ ಸ್ಯಾಂಪಲ್ಲಿನಂತಿತ್ತು. ನಳಿನ್‌ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ, ಪ್ರತಾಪ್‌ಸಿಂಹ, ಪ್ರಮೋದ್ ಮುತಾಲಿಕ್ ಮುಂತಾದ ಮೂರನೇ ದರ್ಜೆ ಹಿಂದೂತ್ವದ ಹಿಕಮತ್ತುದಾರರ ಗಂಟಲಲ್ಲಿ ಪೇಜಾವರ ಮಾತನಾಡಿದ್ದು ಕೇಳಿದ ಜನ ಬೆಚ್ಚಿಬಿದ್ದಿದ್ದಾರೆ. ಅಲ್ಲಿಗೆ ಈ ಅದ್ವೈತ ಸನ್ಯಾಸಿಯ ದೋಖಾ ದ್ವಂದ್ವ ಸಿದ್ಧಾಂತ ಮತ್ತೊಮ್ಮೆ ಜಗಜ್ಜಾಹೀರಾಗಿ ಹೋಗಿದೆ!

ಪರಧರ್ಮ ಸಹಿಷ್ಣು ಸಂತನ ಗೆಟಪ್ಪಿನಲ್ಲಿ ಓಡಾಡುವ ಈ ಪೊಲಿಟಿಕಲ್ ಸ್ವಾಮಿಯ ನಡೆ-ನುಡಿಯಲ್ಲಿ ಯಾವಾಗಲೂ ವಿರೋಧಾಭಾಸ-ವಿಪರ‍್ಯಾಸಗಳೇ, ಬ್ರಾಹ್ಮಣ್ಯದಡಿಯ ಅಸಮಾನತೆ-ಅಸ್ಪೃಶ್ಯತೆಗಳ ಅರ್ಥ ಮಾಡಿಸುತ್ತವೆ. ಹರಿಜನರ ಕೇರಿಗಳಿಗೆ ಹೋಗಿ ಪಾದ ತೊಳೆಸಿಕೊಳ್ಳುವ ಪೇಜಾವರರು ಮರಳಿ ಉಡುಪಿ ಮಠಕ್ಕೆ ಬರುವಾಗಲೇ ಜನಿವಾರ ಬದಲಿಸಿ ಶುದ್ಧೀಕರಣಗೊಳ್ಳುತ್ತಾರೆ. ಧರ್ಮೋನ್ಮಾದಿ ಕರಸೇವಕರು ಬಾಬರಿ ಮಸೀದಿ ಗುಮ್ಮಟ ಉರುಳಿಸುವಾಗ ಕಣ್ಣಾರೆ ಕಂಡು ಧನ್ಯತಾಭಾವದಿಂದ ಮಂದಹಾಸ ಬೀರುವ ಈ ಸ್ವಾಮಿ ತನ್ನ ಮಠದ ಆವರಣದಲ್ಲೇ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸುವ ನಾಟಕವಾಡಬಲ್ಲರು.

ಉಡುಪಿ ಮಾಧ್ವಮಠದಲ್ಲಿ ಪಂಕ್ತಿಭೇದವೇ ಇಲ್ಲವೆಂದು ಹಸಿ-ಹಸಿ ಸುಳ್ಳು ಹೇಳುವ ಪೇಜಾವರ ಸ್ವಾಮಿ ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನಕ್ಕೆ ಪರ‍್ಯಾಯವಾಗಿ ಉಡೆಸ್ನಾನದ ಆವಿಷ್ಕಾರ ಮಾಡಿ ಅಮಾಯಕ ಅಬ್ರಾಹ್ಮಣರ ದಿಕ್ಕು ತಪ್ಪಿಸುತ್ತಾರೆ. ಇವತ್ತಿಗೂ ಪೇಜಾವರರು ಗೋ-ಗೂಂಡಾಗಳಿಗೆ, ಬಾಬರಿ ಮಸೀದಿ ಧ್ವಂಸಕರಿಗೆ ಸ್ಫೂರ್ತಿಯ ಚಿಲುಮೆ. ತನ್ನ ಧಾರ್ಮಿಕ ಕಾರ್ಯಾಚರಣೆಗೆ ಅನುಕೂಲ ಆಗುತ್ತದೆಂದಾಗ ಸಾಬರನ್ನು ಮಠಕ್ಕೆ ಕರೆದು ಇಫ್ತಾರ್ ಕೂಟ ಮಾಡುವ ಪೇಜಾವರರು ಶಾಸಕ ರಘುಪತಿ ಭಟ್ಟನಂಥವರು ಕಣ್ಣುಬಿಟ್ಟರೆ ಹೆದರಿ ಮರು ವರ್ಷ ಆ ಇಫ್ತಾರ್ ಪ್ರಹಸನ ಮಾಡುವುದೇ ಇಲ್ಲಾ! ಹಿಂದೂತ್ವದ ಸೈತಾನರು ಪಾಪದ ಸಾಬರ ಬೆತ್ತಲೆ ಮಾಡಿ ಬಡಿದು ಕೇಕೆ ಹಾಕಿದರೂ, ಕೊಂದು ಎಸೆದರೂ ಕಂಡೂ ಕಾಣದಂತಿರುತ್ತಾರೆ ಪೇಜಾವರ ಸ್ವಾಮಿ. ಹಾಗಂತ ಶಾಂತಿ, ಸಹಬಾಳ್ವೆ, ಸಹಿಷ್ಣುತೆ, ಸಂವಿಧಾನದ ಬಗ್ಗೆ ಉದ್ದುದ್ದ ವ್ಯಾಖ್ಯಾನ ಕೊಡಲು ಮಾತ್ರ ಮರೆಯುವುದಿಲ್ಲ……..

ಇಂಥ ಗುಣಧರ್ಮದ ಪೇಜಾವರ ಸ್ವಾಮೀಜಿ ಮೊನ್ನೆ ಮಂಗಳೂರಲ್ಲಿ ಕೇಸರಿ ಕೂಟದಲ್ಲಿ ಉದುರಿಸಿದ ಭೀಭತ್ಸ ಅಣಿ ಮುತ್ತುಗಳು ಅವರ ಜಾಯಮಾನಕ್ಕೆ ತಕ್ಕಂತೆಯೇ ಇದೆ. ಮಾತಿನುದ್ದಕ್ಕೂ ಪೇಜಾವರರ ಮೇಲೆ ಹಿಂದೂತ್ವದ ಭಯೋತ್ಪಾದಕನ ಆವಾಹನೆ ಆದಂತಿತ್ತು. ಹಿಂದೂತ್ವದ ಕಾಳಗದ ಕಾಲಾಳುಗಳಾದ ಅವಿಭಜಿತ ದಕ್ಷಿಣ ಕನ್ನಡದ ಅಬ್ರಾಹ್ಮಣರನ್ನು ಅನಾಹುತಕ್ಕೆ ಪ್ರಚೋದಿಸುವ ಓಘ ಪೇಜಾವರರ ಭಾಷಣಕ್ಕಿತ್ತು. ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಮಾಮನ ಗೆಲ್ಲಿಸುವ ಮಸಲತ್ತಿನ ಮಾತುಗಾರಿಕೆ ಇದಾಗಿತ್ತೆಂಬುದು ಎಂಥ ಗಾಂಪನಿಗೂ ಅರ್ಥವಾಗುತ್ತದೆ!! ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೃವೀಕರಣಗೊಂಡಿರುವ ಹಿಂದೂತ್ವದ ಓಟ್‌ಬ್ಯಾಂಕ್ ಇನ್ನಾರು ತಿಂಗಳಲ್ಲಿ ಬರಲಿರುವ ಪಾರ್ಲಿಮೆಂಟ್ ಇಲೆಕ್ಷನ್ ತನಕ ಕಾಪಿಟ್ಟುಕೊಳ್ಳುವ ತಂತ್ರಗಾರಿಕೆ ಪೇಜಾವರ ಟೇಮಿನದಾಗಿತ್ತು.

ನಾಲ್ಕುವರೆ ವರ್ಷದಿಂದ ಸಂಘಪರಿವಾರದ ಬ್ರಾಹ್ಮಣ ರಿಂಗ್‌ಮಾಸ್ಟರ್‌ಗಳ ಪಾದುಕಾ ಪೂಜಾರಿ ಮೋದಿ ಪ್ರಧಾನಿಯಾಗಿದ್ದರೂ ಆತನಿಂದ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲಿಕ್ಕೆ ಯಾಕಾಗಲಿಲ್ಲ ಎಂಬ ಮೂಲಭೂತ ಪ್ರಶ್ನೆ ಮರೆಮಾಚಿದ ಪೇಜಾವರರು ಏಕಾಏಕಿ ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ಆ ಮೂಲಕ ಇಲೆಕ್ಷನ್ ಪ್ರಚಾರ ಶುರುಮಾಡಿದ್ದಾರೆ. ಹಿಂದೂತ್ವಕ್ಕಾಗಿ ತನ್ನನ್ನು ಸಂಸದನಾಗಿಸಿದ ಜಿಲ್ಲೆಗೇ ಬೆಂಕಿ ಹಾಕ್ತೇನೆಂದು ಯಾವ ಮುಲಾಜೂ, ಮನುಷ್ಯತ್ವವೂ ಇಲ್ಲದೆ ಆರ್ಭಟಿಸುವ ನಳಿನ್‌ಕುಮಾರ್ ಕಟೀಲ್‌ನಂಥವರನ್ನು ಬಗಲಲ್ಲಿಟ್ಟುಕೊಂಡು ಪೇಜಾವರರು ಮಾಡಿದ ಭಾಷಣದ ನೀತಿ-ರೀತಿಗೆ ಕೂಗುಮಾರಿ ಖ್ಯಾತಿಯ ಚೈತ್ರಾ ಕುಂದಾಪುರ, ಸೂಲಿಬೆಲೆ ಚಕ್ರವರ್ತಿಯಂಥವರೇ ನಾಚಿ ತಲೆ ತಗ್ಗಿಸುವಂತಿತ್ತು!

ಪ್ರತಿದಿನ ಸಾವಿರ ಸುಳ್ಳು ಸಬೂಬು ಹೇಳುವ ಮೋದಿ 2019ರ ಚುನಾವಣೆಯಲ್ಲಿ ಬಚಾವಾಗದ ಪ್ರಪಾತಕ್ಕೆ ಹೋಗಿಬಿದ್ದಿದ್ದಾರೆಂಬುದು ಪೇಜಾವರರಂಥ ಹಿಂದೂ ಸಂತ ಸಂತಾನಕ್ಕೆ ಪಕ್ಕಾ ಆಗಿಹೋಗಿದೆ. ಮೋದಿಯಂಥ ಹುಂಬ ಶೋ ಮ್ಯಾನ್ ದೇಶದ ಚುಕ್ಕಾಣಿ ಹಿಡಿಯುವುದು ಸಂಘಪರಿವಾರಕ್ಕೆ ಅನಿವಾರ್ಯ ಅಗತ್ಯ. ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಬರುತ್ತಿದೆ ಎಂದು ಬಿಂಬಿಸಿದರೆ ಜನರ ಭಾವನೆ ಕೆರಳಿಸಬಹುದೆಂಬ ದೂ(ದು)ರಾಲೋಚನೆ ಕಾವಿ ಕೂಟದ್ದು. ಹಾಗಾಗಿಯೇ ಮಂಗಳೂರಲ್ಲಿ ಪೇಜಾವರರು ಮಾತುಮಾತಿಗೆ ಕಾಂಗ್ರೆಸ್ ರಾಮಮಂದಿರ ವಿರೋಧಿ ಎಂಬಂತೆ ಪ್ರವಚನ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ವಿಶೇಷ ಕಾನೂನು ಮಾಡಬೇಕೆಂದು ಹೇಳುವ ಪೇಜಾವರ ಮಾತಿನ ಅರ್ಥ ಸುಗ್ರೀವಾಜ್ಞೆ ಮೂಲಕ ಅಯೋಧ್ಯೆಯಲ್ಲಿ ರಾಮನಿಗೆ ಗುಡಿಕಟ್ಟಬೇಕೆನ್ನುವುದೇ ಆಗಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಗೆ ಕಾಂಗ್ರೆಸ್ ಸಹಕರಿಸಬೇಕೆಂದು ಎಚ್ಚರಿಕೆಯೂ ಪೇಜಾವರ ಸ್ವಾಮಿ ಕೊಟ್ಟಿದ್ದಾರೆ. ಕಾಂಗ್ರೆಸೇನಾದರೂ ರಾಮಮಂದಿರಕ್ಕೆ ಅಡ್ಡಗಾಲು ಹಾಕಿದರೆ ಮುಂಬರುವ ಚುನಾವಣೆಯಲ್ಲಿ ಆ ಪಾರ್ಟಿ ಮಣ್ಣು ಮುಕ್ಕುತ್ತದೆಯೆಂದು ಮೋದಿಯನ್ನು ಮೀರಿಸುವ ಸ್ಟೈಲಲ್ಲಿ ಪೇಜಾವರರು ಭಾಷಣ ಬಿಗಿದಿದ್ದಾರೆ. ಅಷ್ಟೇ ಅಲ್ಲ, ಮುಸ್ಲಿಮರು ರಾಮ ಮಂದಿರಕ್ಕೆ ಬೆಂಬಲಿಸಿ ಹಿಂದೂಗಳೊಂದಿಗೆ ಬಾಂಧವ್ಯ ಹೆಚ್ಚಿಸಿಕೊಳ್ಳಬೇಕು ಎಂದಿದ್ದಾರೆ. ಏನಿದರ ಅರ್ಥ? ಸಾಬರು ಅಯೋಧ್ಯೆಯಲ್ಲಿ ರಾಮ ಮಂದಿರ ಆಗದಿದ್ದರೆ ಗಂಡಾಂತರಕ್ಕೆ ಸಿಲುಕಲಿದ್ದಾರೆಂದಾ? ಹಿಂದೂತ್ವದ ದಾದಾಗಿರಿಗೆ ಶರಣಾಗದಿದ್ದರೆ ಉಳಿಗಾಲವಿಲ್ಲವೆಂದಾ? ಸಾತ್ವಿಕ ಸಂತ ತಾನೆಂದೂ ತೋರಿಸಿಕೊಳ್ಳಲು ತಿಣಕಾಡುವ ಪೇಜಾವರರ ಮಾತುಗಾರಿಕೆ ಯಾವ ಹಿಂದೂ ಭಯೋತ್ಪಾಕ ಕಾವಿ ಅಥವಾ ಖಾದಿ ಪುಂಡರ ಭಾಷಣಕ್ಕೆ ಕಮ್ಮಿಯಿದೆ?!

ಜನಾಗ್ರಹ ಸಭೆ ಚುನಾವಣಾ ರಾಜಕೀಯ ಅಲ್ಲ ಅನ್ನುತ್ತಲೇ ಬಿಜೆಪಿ ಪರ ಪರೋಕ್ಷವಾಗಿ ಬಹಿರಂಗ ಪ್ರಚಾರ ಪೇಜಾವರ ಸ್ವಾಮಿ ಮಾಡಿದ್ದಾರೆ. ಬಿಜೆಪಿ ರಾಮ ಮಂದಿರಕ್ಕೆ ಸಂಪೂರ್ಣ ಬೆಂಬಲ ಕೊಡಬೇಕೆಂದು ಹೇಳಿರುವುದೇ ವಿಕಟ ವ್ಯಂಗ್ಯ! ಲೋಕಸಭೆ ಸ್ಥಾನ ತ್ಯಜಿಸಲು ರಾಮ ಮಂದಿರಕ್ಕಾಗಿ ಬಿಜೆಪಿ ಸಂಸದರು ರೆಡಿಯಾಗಬೇಕೆಂದು ಹೇಳಿದ್ದಾರೆ. ಬರೀ ಆರು ತಿಂಗಳು ಬಾಕಿಯಿರುವಾಗ ಚೆಡ್ಡಿ ಎಂಪಿಗಳಿಗೆ ರಾಜೀನಾಮೆ ಕೊಡಿಯೆಂದು ಪೇಜಾವರರು ಹೇಳೋದು ಬಿಜೆಪಿಯನ್ನು ತಾರೀಫು ಮಾಡುವ ತಂತ್ರಗಾರಿಕೆಯಿಂದಷ್ಟೇ. ರಾಮನ ಹೆಸರಲ್ಲಿ ಪ್ರಧಾನಿಯಾದ ಮೋದಿ ನಾಲ್ಕುವರೆ ವರ್ಷದಿಂದ ಏಕೆ ರಾಮನಿಗೊಂದು ನೆಲೆಕೊಡುವ ಕೃತಜ್ಞತಾ ಭಾವದಿಂದ ಪ್ರಾಮಾಣಿಕ ಕೆಲಸ ಮಾಡಲಿಲ್ಲ ಎಂದು ಕೇಳುವ ಗಟ್ಸ್ ಪೇಜಾವರರೇಕೆ ತೋರಿಸುತ್ತಿಲ್ಲ?

ಹಿಂದೂತ್ವದ ದಿವಾಳಿಕೋರತನಕ್ಕೆ ಪೇಜಾವರರು ಸಂಕೇತವಾಗುತ್ತಿರುವುದು ದುರಂತ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...