Homeಕರ್ನಾಟಕಮೊಯ್ಲಿ-ಮುನಿಯಪ್ಪ: ತ್ರಿವಳಿ ಜಿಲ್ಲೆಗಳಿಗೆ ಅಮರಿಕೊಂಡಿರುವ ಅವಳಿಗಳು

ಮೊಯ್ಲಿ-ಮುನಿಯಪ್ಪ: ತ್ರಿವಳಿ ಜಿಲ್ಲೆಗಳಿಗೆ ಅಮರಿಕೊಂಡಿರುವ ಅವಳಿಗಳು

- Advertisement -
- Advertisement -

ನೀಲಗಾರ |

ಮೂರು ದಿನಗಳ ಹಿಂದೆ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೆಲವು ಜಿಲ್ಲೆಗಳ ಕಾಂಗ್ರೆಸ್‌ನ ಮುಖಂಡರ ಜೊತೆ ಒಂದು ಸಭೆ ನಡೆಸಿದರು. ಆಗ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಹಿರಿಯ ಎಂ.ಪಿ.ಗಳಾದ ಕೆ.ಎಚ್.ಮುನಿಯಪ್ಪ ಮತ್ತು ವೀರಪ್ಪ ಮೊಯಿಲಿಯವರಿಗೆ ಈ ಸಾರಿ ಟಿಕೆಟ್ ಕೊಡಬಾರದೆಂದು ಸ್ಥಳೀಯ ಮುಖಂಡರು ಆಗ್ರಹಿಸಿದರೆಂದು ವರದಿಯಾಗಿದೆ. ಪತ್ರಿಕೆಗಳಲ್ಲಿ ಸುಳ್ಳು ವರದಿಗಳೂ ಬರಲು ಸಾಧ್ಯ. ಆದರೆ, ಈ ಎರಡು ಜಿಲ್ಲೆಗಳಲ್ಲಿ ಇವರಿಬ್ಬರ ಬಗ್ಗೆ ಸ್ಥಳೀಯ ಕಾರ್ಯಕರ್ತರಿಗಿರುವ ಸಿಟ್ಟಂತೂ ಸುಳ್ಳಲ್ಲ. ಇವರಿಬ್ಬರಿಂದ ಮುಕ್ತಿ ಸಿಗುವವರೆಗೂ ಈ ಜಿಲ್ಲೆಗಳು ಮತ್ತು ಇಲ್ಲಿನ ಕಾಂಗ್ರೆಸ್ ಪಕ್ಷ ಉದ್ಧಾರವಾಗಲ್ಲ ಎಂಬುದು ಬಹಳ ಹಳೆಯ ಮಾತು.

ಅವಿಭಜಿತ ಕೋಲಾರ ಜಿಲ್ಲೆಯ ಎಲ್ಲಾ ತಾಲೂಕುಗಳೊಂದಿಗೆ ಹಿಂದೆ ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎರಡು ತಾಲೂಕುಗಳನ್ನು ಸೇರಿಸಿಕೊಂಡು ಇವೆರಡು ಲೋಕಸಭಾ ಕ್ಷೇತ್ರಗಳು ರೂಪುಗೊಂಡಿದ್ದವು. 2009ರ ಚುನಾವಣೆಯ ಹೊತ್ತಿಗೆ ಕ್ಷೇತ್ರಗಳ ವ್ಯಾಪ್ತಿ ಬದಲಾಗುವ ಹೊತ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಕೋಲಾರ ಜಿಲ್ಲೆಯಿಂದ ಪ್ರತ್ಯೇಕವಾಗಿತ್ತು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಕೆ.ಎಚ್.ಮುನಿಯಪ್ಪನವರ ಸ್ವಂತ ತಾಲೂಕಾದ ಶಿಡ್ಲಘಟ್ಟಗಳು ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರಿಕೊಂಡಿದ್ದವು. ಚಿಕ್ಕಬಳ್ಳಾಪುರ ಜಿಲ್ಲೆಯ ಉಳಿದ ತಾಲೂಕುಗಳೊಂದಿಗೆ, ಇಡೀ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ವೀರಪ್ಪ ಮೊಯಿಲಿಯವರು ಪ್ರತಿನಿಧಿಸುವ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸೇರುತ್ತವೆ. ಆ ರೀತಿಯಲ್ಲಿ ಈ ಇಬ್ಬರೂ ತಲಾ ಎರಡೆರಡು ಜಿಲ್ಲೆಗಳ ರಾಜಕಾರಣದೊಳಗೆ ತಲೆ ದೂರಿಸುವ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ.

ಈ ಮೂರೂ ಜಿಲ್ಲೆಗಳು, ಬೆಂಗಳೂರು ಮಹಾನಗರವನ್ನು ಬೆಳೆಸುತ್ತಾ, ತಾವು ಮಾತ್ರ ಹಿಂಡಿ ಹೋಗುತ್ತಿವೆ. ನೀರಾವರಿಯ ದೃಷ್ಟಿಯಿಂದ, ರಾಜಕಾರಣದ ದೃಷ್ಟಿಯಿಂದ, ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲದರಲ್ಲೂ ಇವು ನತದೃಷ್ಟ ಜಿಲ್ಲೆಗಳಾಗಿವೆ. ನತದೃಷ್ಟತನಕ್ಕೆ ಇವರಿಬ್ಬರು ಲೋಕಸಭಾ ಸದಸ್ಯರನ್ನು ಸೇರಿಸಿದರೆ, ಅಲ್ಲಿಗೆ ಮೂರು ಜಿಲ್ಲೆಗಳ ಜನರಿಗೂ ಮೂರುನಾಮ ಹಾಕುವಷ್ಟು ಐರನ್‌ಲೆಗ್ ಅದೃಷ್ಟ ಇವರಿಬ್ಬರದ್ದಾಗಿದೆ.

ಮೊಯ್ಲಿ ಮಹಾತ್ಮೆ ಇಲ್ಲಿಗೆ ಬಿದ್ದಿದ್ದು ಈಗಷ್ಟೇ. ಕೆ.ಎಚ್.ಮುನಿಯಪ್ಪನವರು ಕೋಲಾರಕ್ಕೆ ವಕ್ಕರಿಸಿಕೊಂಡಿದ್ದು ’ಪುರಾತನ ಕಾಲದಲ್ಲಿ. ಅವಿಭಜಿತ ಕೋಲಾರ ಜಿಲ್ಲೆಯು ರಾಜ್ಯದಲ್ಲೆ ಅತ್ಯಂತ ಹೆಚ್ಚು ದಲಿತ ಸಮುದಾಯವಿರುವ ಜಿಲ್ಲೆಗಳಲ್ಲೊಂದು. ಹಾಗಾಗಿಯೇ ಕೋಲಾರ ಲೋಕಸಭಾ ಕ್ಷೇತ್ರವು ಎಸ್.ಸಿ. ಮೀಸಲು ಕ್ಷೇತ್ರವಾಗಿದೆ. ಮೂರ್‍ನಾಲ್ಕು ಟರ್ಮ್ ಪ್ರತಿನಿಧಿಸಿದ ಬೋವಿ ಸಮುದಾಯದ ಜಿ.ವೈ.ಕೃಷ್ಣನ್ ಆಗಲೀ, ಇಂದಿರಾ ಗಾಂಧಿ ಸಾವಿನ ಅನುಕಂಪದ ಅಲೆಯನ್ನು ದಾಟಿ ಗೆದ್ದು ಬಂದ ವೆಂಕಟೇಶ್ ಆಗಲೀ ವಿಶೇಷ ಕೊಡುಗೆಯನ್ನೇನೂ ನೀಡಿರಲಿಲ್ಲ. ಹೀಗಿರುವಾಗ ಆಗಿನ್ನೂ ಕೋಲಾರ ಕ್ಷೇತ್ರಕ್ಕೆ ಸೇರಿರದ ಶಿಡ್ಲಘಟ್ಟದ ಕೆ.ಎಚ್.ಮುನಿಯಪ್ಪರಿಗೆ ಟಿಕೆಟ್ ಸಿಕ್ಕಿದ್ದಕ್ಕೆ ಒಂದು ಸ್ವಾರಸ್ಯಕರ ಹಿನ್ನೆಲೆಯಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಇಂದಿರಾ ಅಲೆಯಲ್ಲಿ ಗೆದ್ದು ಬಂದಿದ್ದ ವಿ.ಕೃಷ್ಣರಾವ್‌ರಿಗೆ ದೆಹಲಿಯಲ್ಲಿ ಕೆ.ಎಚ್.ಮುನಿಯಪ್ಪ ಒಳ್ಳೇ ಸಾಥ್ ಕೊಡುತ್ತಿದ್ದರು. ಯಾವುದರಲ್ಲಿ ಎಂದುಕೊಂಡಿರೋ….. ದೆಹಲಿಯ ದೇವಸ್ಥಾನಗಳನ್ನು ಒಂದಾದ ಮೇಲೆ ಒಂದು ಸುತ್ತುತ್ತಿದ್ದ ಬ್ರಾಹ್ಮಣ ವಿ.ಕೃಷ್ಣರಾವ್‌ರಿಗೆ ದಲಿತ ಸಮುದಾಯಕ್ಕೆ ಸೇರಿದ್ದ ಕೆ.ಎಚ್.ಮುನಿಯಪ್ಪರೇ ಸಾಥಿ. ಇಂತಹ ಜೊತೆಗಾರ ಪಕ್ಕದ ಕ್ಷೇತ್ರದಿಂದ ಗೆದ್ದರೆ ಒಳ್ಳೆಯದೆಂದು ಕೃಷ್ಣರಾವ್ ಪ್ರಭಾವ ಬೀರಿ, ಮುನಿಯಪ್ಪಗೆ ಟಿಕೆಟ್ ಕೊಡಿಸಿದ್ದರು. ನಂತರದಲ್ಲಿ ವಿ.ಕೃಷ್ಣರಾವ್, ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಕೆಪಿಸಿಸಿಗೇ ಅಧ್ಯಕ್ಷರಾಗಿದ್ದು ಮತ್ತೊಂದು ಆಶ್ಚರ್ಯಕರವಾದ ಸಂಗತಿಯಾಗಿತ್ತು. ಆಗಿನ ಮುಖ್ಯಮಂತ್ರಿ ವೀರಪ್ಪಮೊಯಿಲಿ ಮತ್ತು ಕೃಷ್ಣರಾವ್ ಇಬ್ಬರೂ ಸೇರಿ ಕರ್ನಾಟಕದ ಕಾಂಗ್ರೆಸ್‌ಗೆ 1994ರ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಅಲ್ಲಿಂದ ಮುಂದೆ ಕೃಷ್ಣರಾವ್ ಮುಂದಿನ ಚುನಾವಣೆಯಲ್ಲಿ ಆಗ ಜನತಾದಳದಲ್ಲಿದ್ದ ಆರ್.ಎಲ್.ಜಾಲಪ್ಪನವರೆದುರು ಸೋತು ಮೂಲೆಗುಂಪಾದರು. ಮುಂದಿನ ಸಾರಿಯೂ ಗೆದ್ದ ಕೆ.ಎಚ್. ಕೋಲಾರ ಕ್ಷೇತ್ರದಲ್ಲಿ ನೆಲೆಯೂರಿದರು.

ನೆಲೆಯೂರಿದ್ದು ಎಂದರೆ ಹಂಗಿಂಗಲ್ಲ; ಕೋಲಾರದ ಯಾವುದೇ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಥವಾ ಸೋತ ಅಭ್ಯರ್ಥಿ ತನ್ನ ಪರವಾಗಿ ಬಲವಾಗಿ ನಿಲ್ಲದೇ ಹೋಗಬಹುದು ಎನಿಸಿದರೆ, ಅವರ ವಿರೋಧಿ ಪಕ್ಷದ ನಾಯಕನನ್ನೇ ಪಟಾಯಿಸುವುದರಲ್ಲಿ ಕೆ.ಎಚ್.ಗಿಂತ ಸಾಟಿ ಯಾರೂ ಇಲ್ಲ. ಹಾಗಾಗಿಯೇ ಚಿಂತಾಮಣಿಯ ಸುಧಾಕರ್ ವಿರುದ್ಧವಾಗಿ ಜೆಡಿಎಸ್‌ನ ಆಗಿನ ಕೃಷ್ಣಾರೆಡ್ಡಿ, ಈಗಿನ ಜೆ.ಕೆ.ಕೃಷ್ಣಾರೆಡ್ಡಿ, ಮಾಲೂರಿನ ಬಿಜೆಪಿ ನಾಯಕ ಕೃಷ್ಣಯ್ಯಶೆಟ್ಟಿ ಒಳಗೊಂಡಂತೆ ವಿರೋಧ ಪಕ್ಷದಲ್ಲಿದ್ದರೂ ಕೆ.ಎಚ್. ಪರವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಲು ಯಶಸ್ವಿಯಾಗುತ್ತಿದ್ದರು. ಆ ಹೊತ್ತಿಗೆ ಕೋಲಾರ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ನಲ್ಲಿ ಅಂತಹ ಧುರೀಣರೂ ಇರಲಿಲ್ಲ. ಕೆ.ಎಚ್.ಗಿಂತ ಹಿರಿಯರಾದ ರಮೇಶ್‌ಕುಮಾರ್ ಕಾಂಗ್ರೆಸ್‌ಗೆ ಬಂದದ್ದು ಎಸ್.ಎಂ.ಕೃಷ್ಣ ಕಾಲದಲ್ಲಿ. ರಮೇಶ್‌ಕುಮಾರ್ರೇ ಪ್ರಳಯಾಂತಕ ಎಂಬ ಅಭಿಪ್ರಾಯ ಹಲವರಲ್ಲಿದೆಯಾದರೂ, ದಾನಿಕಿ ಮಿಂಚಿನ ಪ್ರಳಯಾಂತಕುಡು (ಅದನ್ನು ಮೀರಿಸಿದ ಪ್ರಳಯಾಂತಕುಡು) ಕೆ.ಎಚ್. ಎಂಬುದು ಇಲ್ಲಿ ಜನಜನಿತ.

V Krishna rao

ತನ್ನ ಕ್ಷೇತ್ರಕ್ಕೂ ನಯಾಪೈಸೆ ಕೆಲಸ ಮಾಡದ, ವಿರೋಧಿಗಳನ್ನು ಸೈಲೆಂಟಾಗಿಯೇ ಬಗ್ಗು ಬಡಿವ ಕೆ.ಎಚ್. ಅಲ್ಲಿಂದ ಇಲ್ಲಿಯವರೆಗೆ ಗೆದ್ದು ಬಂದಿದ್ದು ಬರೋಬ್ಬರಿ 7 ಸಾರಿ, ಒಟ್ಟು ಮೂವತ್ತು ವರ್ಷಗಳು. ಮೀಸಲು ಕ್ಷೇತ್ರದಿಂದ ಗೆದ್ದು ಬರುತ್ತಿರುವುದು ಮಾತ್ರವಲ್ಲದೇ, ಇದೇ ಅವಧಿಯಲ್ಲಿ ಮೇಲೆದ್ದ ಒಳಮೀಸಲಾತಿ ಕೂಗಿನ ಲಾಭವೂ ಎಡಗೈ ಸಮುದಾಯದ ಕೆ.ಎಚ್. ಅವರಿಗೆ ಆಗುತ್ತಲೇ ಇದೆ. ಆ ಕಾರಣದಿಂದ ಕಾಂಗ್ರೆಸ್ ಹೈಕಮ್ಯಾಂಡ್ ಅವರನ್ನು ನಿರ್ಲಕ್ಷಿಸುವಂತಿಲ್ಲ. ಆದರೆ, ದಲಿತ ಸಮುದಾಯಕ್ಕಾಗಲೀ, ಮಾದಿಗ ಸಮುದಾಯಕ್ಕಾಗಲೀ ಇವರಿಂದ ನಯಾಪೈಸೆ ಉಪಯೋಗವಾಗಿಲ್ಲ. ಆ ಸಮುದಾಯಕ್ಕಾಗಿ ಅವರು ಮಾಡಿದ ಉಪಯೋಗವೆಂದರೆ, ಅದೇ ಸಮುದಾಯಕ್ಕೆ ಸೇರಿದ ಒಬ್ಬ ಮಹಿಳೆಗೆ ಕೆಜಿಎಫ್ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡಿದ್ದು ಮತ್ತು ಅವರು ಮಂತ್ರಿಯಾಗಬೇಕೆಂದು ಒತ್ತಡ ಹೇರುತ್ತಿರುವುದು. ಆ ಮಹಿಳೆಯ ಹೆಸರು ರೂಪಾ ಶಶಿಧರ್, ಕೆ.ಎಚ್.ಮುನಿಯಪ್ಪನವರ ಸ್ವಂತ ಪುತ್ರಿ!

ಕೋಲಾರ ಜಿಲ್ಲೆಯು ಎದುರಿಸುತ್ತಿರುವ ತೀವ್ರ ಬರ, ನೀರಾವರಿ ಸಮಸ್ಯೆಗೆ ಪರ್ಯಾಯವನ್ನು ಕಂಡುಕೊಳ್ಳುವುದು ಇವಕ್ಕೂ ಮುನಿಯಪ್ಪನವರಿಗೂ ಸಂಬಂಧವೇ ಇಲ್ಲ. ತಾನೇ ರೈಲ್ವೇ ಖಾತೆಯನ್ನೂ ಸೇರಿದಂತೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದಾಗಲೂ, ಕ್ಷೇತ್ರದ ಚಹರೆಯಲ್ಲಿ ಯಾವ ದೊಡ್ಡ ಬದಲಾವಣೆಯೂ ಬರಲಿಲ್ಲ. ರೈಲ್ವೇ ಇಲಾಖೆಗೆ ಸೇರಿದ ಒಂದು ಕಾರ್ಖಾನೆ ಮತ್ತು ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಒಂದು ರೈಲನ್ನು ಮುನಿಯಪ್ಪನವರ ಸಾಧನೆಗಿಂತ, ಮಿತಿಯನ್ನು ತೋರಿಸಲು ಉದಾಹರಣೆಯನ್ನಾಗಿ ಬಳಸಬಹುದು.

ಯಾವ ರೀತಿಯ ವರ್ಚಸ್ಸನ್ನಾಗಲೀ, ಕ್ಷೇತ್ರದ ಸಂಪರ್ಕವಾಗಲೀ ಇಲ್ಲದ ಜೆಡಿಎಸ್‌ನ ಕೇಶವ ಅವರ ಮೇಲೆ ಕಳೆದ ಸಾರಿ ಕೇವಲ 47,850 ಮತಗಳಿಂದ ಕೆ.ಎಚ್.ಗೆದ್ದಿದ್ದರು. ಬಿಜೆಪಿಯ ನಾರಾಯಣಸ್ವಾಮಿಗೂ 2.67 ಲಕ್ಷಕ್ಕೂ ಹೆಚ್ಚು ಮತಗಳು ಬಿದ್ದಿದ್ದವು. ಈ ಸಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾದರೂ ಮುನಿಯಪ್ಪ ವಿರೋಧಿ ಮತಗಳು ಕನ್ಸಾಲಿಡೇಟ್ ಆಗಿ ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲು ಕಟ್ಟಿಟ್ಟ ಬುತ್ತಿಯೆಂಬುದು ಸ್ವತಃ ಕಾಂಗ್ರೆಸ್‌ನ ಮುಂಚೂಣಿ ಮುಖಂಡರ ಅಭಿಪ್ರಾಯ.

ತನ್ನ ವರಸೆಗಳಲ್ಲಿ ಕೆ.ಎಚ್.ಗೆ ಪೈಪೋಟಿ ನೀಡುವಂತಹ ಇನ್ನೊಬ್ಬ ನಾಯಕ ವೀರಪ್ಪ ಮೊಯಿಲಿಯವರ ಮಹಾತ್ಮೆಯನ್ನು ಪಕ್ಕದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಕಳೆದ 10 ವರ್ಷಗಳಲ್ಲಿ ಕಾಣುತ್ತಿವೆ. ತಮ್ಮ ಸ್ವಂತ ಕ್ಷೇತ್ರಗಳಲ್ಲಿ ಭೀಕರ ಸೋಲು ಕಾಣುತ್ತಾ ರಾಷ್ಟ್ರೀಯ ನಾಯಕರಾಗುವ ಕರಾವಳಿಯ ನಾಲ್ಕು ಬೃಹತ್ ನಾಯಕರಲ್ಲಿ ವೀರಪ್ಪ ಮೊಯಿಲಿಯೂ ಒಬ್ಬರು. ಜನಾರ್ಧನ ಪೂಜಾರಿ ಕಡೆಯ ಬಾರಿಗೆ ಗೆಲ್ಲುವ ಸಾಧ್ಯತೆಯಿದ್ದ ಅವಧಿಯಲ್ಲಿ, ಅವರನ್ನು ಪಕ್ಕಕ್ಕೆ ಸರಿಸಿ ಮಂಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮೊಯ್ಲಿ ಅಲ್ಲಿ ಸೋತರಷ್ಟೇ ಅಲ್ಲದೇ, ಅಲ್ಲಿಂದ ಮುಂದಕ್ಕೆ ಕಾಂಗ್ರೆಸ್ ಗೆಲುವೇ ಕಾಣದಾಯಿತು.

ಹೀಗಾಗಿ, ಬೇರೊಂದು ಕ್ಷೇತ್ರದ ಹುಡುಕಾಟದಲ್ಲಿದ್ದ ಅವರಿಗೆ ಕಂಡಿದ್ದು, ಆರ್.ಎಲ್.ಜಾಲಪ್ಪನವರು ತೆರವು ಮಾಡಲಿದ್ದ ಚಿಕ್ಕಬಳ್ಳಾಪುರ. ಮೂರು ಬಾರಿ ಕೃಷ್ಣರಾವ್ ಮತ್ತು ನಾಲ್ಕು ಬಾರಿ ಜಾಲಪ್ಪನವರು ಗೆದ್ದಿದ್ದ ಆ ಕ್ಷೇತ್ರದಲ್ಲಿ, ಒಮ್ಮೆ ಸ್ವತಃ ಜಾಲಪ್ಪನವರೇ ಜನತಾದಳದಿಂದ ಗೆದ್ದಿದ್ದು ಬಿಟ್ಟರೆ ಸದಾ ಕಾಂಗ್ರೆಸ್ಸಿಗೇ ಗೆಲುವು ಸಂದಿತ್ತು. ವಯಸ್ಸಿನ ಕಾರಣ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ವಿರೋಧ ಕಟ್ಟಿಕೊಂಡಿದ್ದರಿಂದ ಜಾಲಪ್ಪ, ಚುನಾವಣಾ ರಾಜಕಾರಣದಿಂದ ಒಂದು ಕಾಲು ಹೊರಗಿಟ್ಟಿದ್ದರು. ಕಾಂಗ್ರೆಸ್ಸಿನ ಋಣ ತೀರಿಸಲು ಅಣುಒಪ್ಪಂದದ ಸಂದರ್ಭದಲ್ಲಿ ಓಟು ಹಾಕಿ, ಸೋನಿಯಾರಿಗೊಂದು ಪತ್ರ ಬರೆದು ಕಾಂಗ್ರೆಸ್ಸಿಗೂ, ರಾಜಕಾರಣಕ್ಕೂ ಜಾಲಪ್ಪ ಗುಡ್‌ಬೈ ಹೇಳಿದ್ದರು. ಅವರ ಮಗ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು, ಆಪರೇಷನ್ ಕಮಲಕ್ಕೆ ಒಳಗಾದಾಗ, ಅದರಲ್ಲಿ ತನ್ನ ಪಾತ್ರವೇನೂ ಇಲ್ಲವೆಂದು ಜಾಲಪ್ಪ ಹೇಳುವುದನ್ನು ಯಾರೂ ನಂಬುವ ಪರಿಸ್ಥಿತಿಯಲ್ಲಿರಲಿಲ್ಲ.

ಹಾಗಾಗಿ 2009ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರವೇ ಸೇಫ್ ಸೀಟೆಂದು ಅಲ್ಲಿಗೆ ಮೊಯ್ಲಿ ಜಂಪ್ ಮಾಡಿದ್ದರು. ಮೊದಲ ಬಾರಿಗಾದ್ದರಿಂದ ಕ್ಷೇತ್ರದಲ್ಲೂ ಹೆಚ್ಚಿನ ವಿರೋಧ ಬರದೇ ಗೆಲುವು ದಕ್ಕಿತ್ತು. ಮುಖ್ಯಮಂತ್ರಿಯಾಗಿದ್ದಾಗ ಸುಳ್ಳಿನ ಸರದಾರರೆಂದು ಖ್ಯಾತಿ ಗಳಿಸಿದ್ದ ಮಹಾತ್ಮರನ್ನು ಚಿಕ್ಕಬಳ್ಳಾಪುರದ ಜನತೆ ಹತ್ತಿರದಿಂದ ನೋಡಿ ದಂಗುಬಡಿದು ಹೋಗಿತ್ತು. ಯಾರಿಗೂ ಯಾವ ಕೆಲಸವನ್ನೂ ಮಾಡಿಕೊಡದೇ, ಅಗತ್ಯವಿಲ್ಲದೇ ಇದ್ದರೂ ಸುಳ್ಳು ಹೇಳುವ ಮತ್ತು ಪ್ರಭಾವಿಯೂ ಆಗುವ ರಾಜಕಾರಣಿಯೂ ಇರುವುದು ಸಾಧ್ಯವೆಂದು ಇಲ್ಲಿನ ಜನರಿಗೆ ಇನ್ನೊಮ್ಮೆ ಮನವರಿಕೆಯಾಯಿತು. ಈ ಎಲ್ಲಾ ಗುಣಗಳಲ್ಲಿ ಹಳೆಯ ಕೃಷ್ಣರಾವ್‌ರನ್ನು ಮೀರಿಸಿದ ನಾಯಕನಾಗಿ ಮೆರೆದರಷ್ಟೇ ಅಲ್ಲದೇ, 2014ರ ಚುನಾವಣೆಗೆ ಮುಂಚೆ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಿಸಿ ಇನ್ನೊಂದು ದ್ರೋಹವನ್ನೂ ಎಸಗಿದರು.

ಕಾಂಗ್ರೆಸ್ ಹೈಕಮ್ಯಾಂಡ್ ಜೊತೆಗೆ ಚೆನ್ನಾಗಿದ್ದ ಮೊಯ್ಲಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂಧನ ಖಾತೆ ಮತ್ತು ಅರಣ್ಯ ಹಾಗೂ ಪರಿಸರ ಖಾತೆ ಹೊಂದಿದ್ದ ಏಕೈಕ ಸಚಿವ. ಅಂಬಾನಿಗೆ ಕೃಷ್ಣಾ ಗೋದಾವರಿ ಕಣಿವೆಯಲ್ಲಿನ ತೈಲ ನಿಕ್ಷೇಪವನ್ನು ಬರೆದುಕೊಡಲೆಂದೇ ಆ ಅರೇಂಜ್‌ಮೆಂಟ್ ಆಗಿತ್ತು. ಆಮ್‌ಆದ್ಮಿ ಪಕ್ಷದ ಮೊದಲ ಅವಧಿಯಲ್ಲಿ ದೆಹಲಿ ಎಸಿಬಿ ಮೂಲಕ ಈ ಡೀಲ್‌ಗೆ ಸಂಬಂಧಿಸಿದಂತೆ ಎಫ್‌ಐಆರ್ ಆದಾಗ, ಮೊಯ್ಲಿಯೂ ಅದರಲ್ಲಿ ಆರೋಪಿಯಾಗಿದ್ದರು. ಮೊಯ್ಲಿ ಮತ್ತು ಅಂಬಾನಿಯನ್ನು ಉಳಿಸಲು ಯುಪಿಎ ಸರ್ಕಾರವು ಕೇಂದ್ರ ಸರ್ಕಾರದ ವ್ಯವಹಾರಗಳನ್ನು ತನಿಖೆ ಮಾಡುವ ದೆಹಲಿ ಎಸಿಬಿಯ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿತ್ತು!!

R L Jalappa

ಸ್ಥಳೀಯವಾಗಿ ಸೋತು ಹೋಗಿದ್ದ ಸಂಪಂಗಿ ಥರದವರನ್ನು ಬಿಟ್ಟರೆ ಬಹುತೇಕ ಎಂಎಲ್‌ಎಗಳ ಅಸಮಾಧಾನಕ್ಕೆ ಗುರಿಯಾಗಿದ್ದ ಮೊಯ್ಲಿಯವರನ್ನು ಇನ್ನೊಂದು ಅವಧಿಗೆ ಗೆಲ್ಲಿಸಿ ಕಳಿಸಲು ಯಾರೂ ಸಿದ್ಧರಿರಲಿಲ್ಲ. ಹೈಕಮ್ಯಾಂಡ್‌ನ ಹುಕುಂ ಇದ್ದರೂ ತನಗೆ ಗೆಲುವು ಕಷ್ಟವೆಂದು ಮೊಯ್ಲಿಯವರಿಗೆ ಅರಿವಾಗಿತ್ತು. ಕೆ.ಎಚ್. ಸ್ಥಳೀಯವಾಗಿ ವಿರೋಧ ಪಕ್ಷದಲ್ಲಿರುವ ಎಂಎಲ್‌ಎ ಅಥವಾ ಎಂಎಲ್‌ಎ ಕ್ಯಾಂಡಿಡೇಟ್‌ಗಳನ್ನು ಮ್ಯಾನೇಜ್ ಮಾಡಿದರೆ, ಮೊಯ್ಲಿ ವಿರೋಧ ಪಕ್ಷದ ನಾಯಕನನ್ನೇ ಮ್ಯಾನೇಜ್ ಮಾಡಿದರು. ಎಲ್ಲೆಡೆ ಇರುವ ವದಂತಿಯೆಂದರೆ, ಅಂಬಾನಿ ಮೂಲಕ ಭಾರೀ ದೊಡ್ಡ ಮೊತ್ತವನ್ನು ನೀಡಿ, ಮೊಯ್ಲಿ ಜೆಡಿಎಸ್‌ನೊಂದಿಗೆ ಡೀಲ್ ಕುದುರಿಸಿದರು. ಅದರಿಂದ 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಿಂದ ಚಿಕ್ಕಬಳ್ಳಾಪುರಕ್ಕೆ ಬಂದ ಕುಮಾರಸ್ವಾಮಿ ಮೂರನೇ ಸ್ಥಾನ ಪಡೆದುಕೊಂಡರು. ಹೊಸಕೋಟೆಯನ್ನೊಂದು ಬಿಟ್ಟರೆ ಇನ್ನೆಲ್ಲಾ ಕ್ಷೇತ್ರಗಳಲ್ಲಿ ಒಂದು ಅಥವಾ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್ ಮೂರನೆ ಸ್ಥಾನಕ್ಕೆ ಹೋಗಿದ್ದೇಕೆ? ಇದರ ಲಾಭ ಯಾರಿಗೆ? ಎಂಬುದು ಚಿದಂಬರ ರಹಸ್ಯವೇನಾಗಿರಲಿಲ್ಲ. ಮೊಯ್ಲಿ ವಿರುದ್ಧವಿದ್ದ ಮತಗಳನ್ನು ಒಡೆದು ಎಚ್‌ಡಿಕೆ, ಬಚ್ಚೇಗೌಡರನ್ನು ಸೋಲಿಸಿದ್ದರು!!! ಮಾಜಿ ಮುಖ್ಯಮಂತ್ರಿ, ಪ್ರಭಾವಿ ಕೇಂದ್ರ ಮಂತ್ರಿ ವೀರಪ್ಪ ಮೊಯ್ಲಿ ಕೇವಲ 9,520 ಮತಗಳ ಅಂತರದಿಂದ ಬಚಾವಾಗಿದ್ದರು.

ಈ ಸಾರಿ ಕೋಲಾರದಲ್ಲಾಗುವಂತೆ, ಮೊಯ್ಲಿ ವಿರುದ್ಧದ ಮತಗಳ ಕ್ರೋಢೀಕರಣವಾಗುವ ಎಲ್ಲಾ ಸಾಧ್ಯತೆಯಿದೆ. ಈಗಾಗಲೇ ಬಚ್ಚೇಗೌಡರೇ ಇಲ್ಲಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿಯಾಗಿದೆ. ಮೀಸಲು ಕ್ಷೇತ್ರಗಳೆರಡನ್ನು ಬಿಟ್ಟರೆ ಉಳಿದೆಲ್ಲೆಡೆ ಇರುವ ಒಕ್ಕಲಿಗ/ರೆಡ್ಡಿ ಶಾಸಕರು ಮೊಯ್ಲಿಗೆ ಮುಳ್ಳಾಗುವುದರಲ್ಲಿ ಸಂದೇಹ ಯಾರಿಗೂ ಉಳಿದಿಲ್ಲ.

ಇವೆಲ್ಲದರ ಪರಿಣಾಮವಾಗಿ ಈ ಜಿಲ್ಲೆಗಳಲ್ಲಿ ಎಂಪಿಗಳು ನಾಯಕರಾಗುಳಿದಿಲ್ಲ. ಪ್ರತೀ ತಾಲೂಕಿಗೂ ಅಲ್ಲಿನ ಎಂಎಲ್‌ಎನೇ ನಾಯಕ. ಜಿಲ್ಲಾ ಮಟ್ಟದ ನಾಯಕರು ಅಂತ ಯಾರೂ ಇಲ್ಲ. ಡಿಸಿಸಿ ಅಧ್ಯಕ್ಷನ ಸ್ಥಾನ ಇರಲಿ, ಜಿಪಂ ಅಧ್ಯಕ್ಷನದ್ದಿರಲಿ, ಡಿಸಿಸಿ ಬ್ಯಾಂಕ್‌ದಿರಲಿ ಎಲ್ಲವೂ ಕಿತ್ತಾಡಿಯೇ ಬಗೆಹರಿಯಬೇಕು. ಜಿ.ಪಂ ಅಧ್ಯಕ್ಷನ ಸ್ಥಾನದ್ದು ದೊಡ್ಡ ಗಲಾಟೆಯೇ ಆಗಿ ಹೋಯಿತು. ಅದಕ್ಕೆ ಸಂಬಂಧಿಸಿದ ಜಗಳವು ರಾಹುಲ್‌ಗಾಂಧಿಯವರೆಗೂ ಹೋಗಿತ್ತು. ಬೆಂಗಳೂರು ಏರ್‌ಪೋರ್ಟ್‌ನಲ್ಲಿ ರಾಹುಲ್, ಡಿಕೆಶಿ, ಸಿದ್ದು, ಮುನಿಯಪ್ಪ ಮಾತಾಡುತ್ತಿದ್ದಾಗ ದೂರದಿಂದ ವಿಡಿಯೋ ಮಾಡಿದ ಒಬ್ಬಾತ ಚಿಕ್ಕಬಳ್ಳಾಪುರದ ಸಮಸ್ಯೆಯ ಕುರಿತು ನಡೆದ ಸಂಭಾಷಣೆಯ ಧ್ವನಿ ಸಮೇತ ವೈರಲ್ ಮಾಡಿದ್ದ.

ಆದರೆ, ಇಂತಹವು ಯಾವುವೂ ಈ ಇಬ್ಬರು ಹಿರಿಯ ನಾಯಕರ ವರಸೆಗಳನ್ನು ಬದಲಿಸುವುದಿಲ್ಲ. ಹಳೆಯ ಮುಖಗಳಿಗೇ ಮಣೆ ಹಾಕಬೇಕೆಂದು ಕಾಂಗ್ರೆಸ್ ನಿರ್ಧರಿಸಿದರೆ, ಈ ಕ್ಷೇತ್ರಗಳನ್ನು ಕಳೆದುಕೊಳ್ಳುವುದು ಖಚಿತ. ಅದರ ಬದಲು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ, ಸಮಾನ ಶತ್ರುವನ್ನಾದರೂ ಸೋಲಿಸುವ ಸಾಧ್ಯತೆ ಇರುತ್ತದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...

ಬಿಜೆಪಿಯೊಂದಿಗೆ ಕೈಜೋಡಿಸಿದ ಗೌಡರೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ ಕೇರಳ ಜೆಡಿಎಸ್; ಹೊಸ ಪಕ್ಷದೊಂದಿಗೆ ವಿಲೀನ

ಜನತಾ ದಳ (ಜಾತ್ಯತೀತ) ದ ಕೇರಳ ಘಟಕವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧವನ್ನು ಕಡಿದುಕೊಂಡು ಹೊಸ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ನಿರ್ಧಾರದ ಕುರಿತು ಶೀಘ್ರದಲ್ಲೇ ಅಧಿಕೃತ...

‘ಚೀನಾ, ರಷ್ಯಾ, ಕ್ಯೂಬಾ, ಇರಾನ್‌ಗಳನ್ನು ಹೊರಗಿಡಿ’: ವೆನೆಜುವೆಲಾಗೆ ಟ್ರಂಪ್ ತಂಡದ ಹೊಸ ತೈಲ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ನೇತೃತ್ವದ ಹೊಸ ಆಡಳಿತಕ್ಕೆ ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು "ಕಿತ್ತುಹಾಕಬೇಕು" ಮತ್ತು "ಕಡಿತಗೊಳಿಸಬೇಕು" ಎಂದು...

ದೆಹಲಿ ಫೈಜ್-ಎ-ಇಲಾಹಿ ಮಸೀದಿ ಬಳಿ ತೆರವು ಕಾರ್ಯಾಚರಣೆಗೆ ಸ್ಥಳೀಯರಿಂದ ವಿರೋಧ, ಉದ್ವಿಗ್ನತೆ; ಅಶ್ರುವಾಯು ಪ್ರಯೋಗ, 10 ಜನರ ಬಂಧನ

ದೆಹಲಿಯ ತುರ್ಕಮನ್ ಗೇಟ್-ರಾಮ್ಲೀಲಾ ಮೈದಾನ ಪ್ರದೇಶದಲ್ಲಿರುವ ಶತಮಾನಗಳಷ್ಟು ಹಳೆಯದಾದ ಫೈಜ್-ಎ-ಇಲಾಹಿ ಮಸೀದಿಯ ಬಳಿ ಬುಧವಾರ ಮುಂಜಾನೆ ನಡೆದ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಆ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ, ಇದು...

ಮೋದಿ, ಶಾ ವಿರುದ್ಧ ಘೋಷಣೆ ಆರೋಪ: ತನ್ನದೇ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಮನವಿ ಮಾಡಿದ ಜೆಎನ್‌ಯು ಆಡಳಿತ ಮಂಡಳಿ

ಸೋಮವಾರ ರಾತ್ರಿ ವಿದ್ಯಾರ್ಥಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಆ ಘೋಷಣೆಗಳು "ಪ್ರಚೋದನಕಾರಿ, ಪ್ರಚೋದನಕಾರಿ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿ ತನಿಖೆ ಪಕ್ಷಪಾತದಿಂದ ಕೂಡಿದೆ ಎಂಬ ವಿಪಕ್ಷಗಳ ಆರೋಪ ತಿರಸ್ಕರಿಸಿದ ಕೇರಳ ಹೈಕೋರ್ಟ್

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆಯು ಪಕ್ಷಪಾತದಿಂದ ಕೂಡಿದೆ ಅಥವಾ ಸರ್ಕಾರದ ಒತ್ತಡದಲ್ಲಿದೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ತಿರಸ್ಕರಿಸಿರುವ ಕೇರಳ ಹೈಕೋರ್ಟ್, ಪ್ರಸ್ತುತ ನಡೆಯುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯ...

ಆರ್‌ಎಸ್‌ಎಸ್ ಕುರಿತ ಹೇಳಿಕೆ: ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ನಲಪಾಡ್‌ಗೆ ಕೋರ್ಟ್ ನೋಟಿಸ್

ಬೆಂಗಳೂರು: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮತ್ತು ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಂಸದ/ಶಾಸಕರ...

‘ನಾನು ಹಿಂದೂ ಅಲ್ಲ, ಮನುಷ್ಯ’: ಎಸ್‌ಪಿ ನಾಯಕ ಶಿವರಾಜ್ ಸಿಂಗ್ ಯಾದವ್ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು

ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಹಾಗೂ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಸಿಂಗ್ ಯಾದವ್ ‘ನಾನು ಹಿಂದೂ ಅಲ್ಲ, ನಾನು...

ಛತ್ತೀಸ್‌ಗಢ : ಎಂಟು ಮಂದಿ ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ವರದಿ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಯ್‌ಪುರ ಜಿಲ್ಲೆಯ ಕಟೋವಾಲಿ...

‘ಉಮರ್ ಮತ್ತು ಶಾರ್ಜಿಲ್ ಜಾಮೀನು ನಿರಾಕರಣೆ’: ಶಾಸಕಾಂಗ, ನ್ಯಾಯಾಂಗದ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆ: ಶ್ರೀಪಾದ್ ಭಟ್

ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ?...