Homeಕರ್ನಾಟಕಯಡ್ಯೂರಪ್ಪಗೆ ಅಡ್ಡಗಾಲು ಹಾಕುವ ಸಂತೋಷ್`ಜಿ’ ತಂತ್ರ ಅವರಿಗೇ ಮುಳುವಾಯಿತೇ?

ಯಡ್ಯೂರಪ್ಪಗೆ ಅಡ್ಡಗಾಲು ಹಾಕುವ ಸಂತೋಷ್`ಜಿ’ ತಂತ್ರ ಅವರಿಗೇ ಮುಳುವಾಯಿತೇ?

- Advertisement -
- Advertisement -

ಮಾಚಯ್ಯ |

ಲೋಕಸಭಾ ಎಲೆಕ್ಷನ್ ರಿಜಲ್ಟ್ ಬಂದ ನಂತ್ರ ಬಿಜೆಪಿ ಆಪರೇಷನ್ ಕಮಲ ನಡೆಸುತ್ತೆ, ಈ ಸಮ್ಮಿಶ್ರ ಸರ್ಕಾರ ಬಿದ್ದೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಅನ್ನೋ ಚರ್ಚೆ ಜೋರಾಗಿ ನಡೀತಿದೆ. ಕನ್ನಡದ ಸಕಲಷ್ಟು ಟೀವಿ ಚಾನೆಲ್ಲುಗಳು ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿಯವರ ಸುತ್ತ ಕ್ಯಾಮೆರಾ ಹಿಡಿದು ನಿದ್ದೆಗೆಟ್ಟು ನಿಂತಿವೆ, ಯಾವ ಕ್ಷಣದಲ್ಲಾದ್ರು `ಬ್ರೇಕಿಂಗ್’ ಸುದ್ದಿ ಹೊರಬೀಳಬಹುದಾ ಅಂತ. ಆದ್ರೆ ಅಸಲೀ ಬ್ರೇಕಿಂಗ್ ಸಮಾಚಾರ ಬಿಜೆಪಿ ಅಂಗಳದಲ್ಲೇ ಆಟವಾಡುತ್ತಿದೆ. ಅದ್ರೆ ಕ್ಯಾಮೆರಾಗಳಿಗೆ ಅತ್ತ ತಿರುಗಿ ನೋಡಲು ಸಮಯ ಸಿಗುತ್ತಿಲ್ಲವಷ್ಟೇ! ಹೌದು, ಯಾವ ಬಿಜೆಪಿ, ರಾಜ್ಯದಲ್ಲಿ ಮತ್ತೆ ಸರ್ಕಾರ ರಚಿಸುತ್ತೆ ಅಂತ ನಮ್ಮ ಮೀಡಿಯಾಗಳು `ನೂರಾ ನಾಕು’ ಡಿಗ್ರಿ ಜ್ವರ ಏರಿಸಿಕೊಂಡು ನರಳಾಡುತ್ತಿವೆಯೋ ಅದೇ ಬಿಜೆಪಿ ಆಂತರಿಕ ಭಿನ್ನಮತದಿಂದ ತತ್ತರಿಸುತ್ತಿದೆ.

ನೋ ಡೌಟ್, ಅನಂತ್ಕುಮಾರರ ನಿಧನದ ನಂತ್ರ ಈಗ ಎದುರಾಬದುರಾ ನಿಲ್ಲಲು ಬಿಜೆಪಿಯೊಳಗೆ ಇರೋದು ಎರಡೇ ಬಣಗಳು. ಒಂದು ಯಡ್ಯೂರಪ್ಪನವರ ಬಣವಾದ್ರೆ, ಮತ್ತೊಂದು ಆರೆಸೆಸ್ ಸೂತ್ರಧಾರಿ ಸಂತೋಷ್.ರ ಬಣ. ಒಳಗೊಳಗೇ ಶೀತಲ ಸಮರದಂತಿದ್ದ ಕದನ, ದಿವಂಗತ ಅನಂತ್ಕುಮಾರರ ಮಡದಿ ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿದ ಘಟನೆಯಿಂದಾಗಿ ಬೀದಿಗೆ ಬಂದಿದ್ದು ಈಗ ಹಳೆಯ ಸುದ್ದಿ. ಲೇಟೆಸ್ಟ್ ಸಂಗತಿ ಏನಂದ್ರೆ, ಆ ಕದನ ಈಗ ಮತ್ತೊಂದು ಹಂತ ತಲುಪಿದ್ದು ಬಿಜೆಪಿಯೊಳಗೆ ಸ್ಪಷ್ಟ ಬಿರುಕು ಗೋಚರಿಸತೊಡಗಿದೆ. ಸದಾ ತಾಳ್ಮೆಯಿಂದ, ಜಾಣ್ಮೆಯಿಂದ ಮಾತಾಡುವ ಸಂತೋಷ್ ಮೊನ್ನೆ ತುಸು ಆಕ್ರೋಶದಿಂದಲೇ ಬಿ.ಎಸ್.ವೈ ಬಣದ ಮೇಲೆ ಪರೋಕ್ಷವಾಗಿ ರೇಗಾಡಿದ ಮಾತುಗಳೇ ಇದಕ್ಕೆ ಸಾಕ್ಷಿ.

ಸೋಮವಾರ, ಏಪ್ರಿಲ್ 29ರಂದು ಸಭೆಯೊಂದನ್ನು ಮುಗಿಸಿ ಹೊರನಡೆಯುತ್ತಿದ್ದ ಸಂತೋಷ್`ಜಿ’ ಪಕ್ಷದೊಳಗಿನ ಆಂತರಿಕ ಭಿನ್ನಮತಕ್ಕೆ ಸಂಬಂಧಪಟ್ಟಂತೆ ತುಸು ಅಸಂತೋಷದಿಂದಲೇ “ನನ್ನ ವಿರುದ್ಧವೇ ಬರ್ತಾರಂತಾ? ಬರಲಿ ಬಿಡಿ” ಎಂಬ ಮಾತುಗಳನ್ನಾಡಿದ್ದಾರೆಂದು ದೃಶ್ಯ ಮಾಧ್ಯಮವೊಂದು ಸುದ್ದಿ ಮಾಡಿದೆ. ಮೇಲ್ನೋಟಕ್ಕೆ ಇದು `ಡೋಂಟ್ ಕೇರ್’ ಶೈಲಿಯ ಹೇಳಿಕೆಯಂತೆ ಕಂಡುಬಂದರು ಬಿಜೆಪಿ ಪಾಲಿಗೆ ಮಾಸ್ಟರ್ ಮೈಂಡ್ ಎಂದೇ ಗುರುತಿಸಿಕೊಂಡಿದ್ದ ಸಂತೋಷ್`ಜಿ’ ಸಣ್ಣಗೆ ಶೇಕ್ ಆಗಿರೋದು ಇಲ್ಲಿ ಎದ್ದು ಕಾಣುತ್ತೆ.

‘ನನ್ನ ವಿರುದ್ಧವೇ ಬರ್ತಾರಂತಾ? ಬರಲಿ ಬಿಡಿ’: ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ..!

ಇದಕ್ಕೆ ಕಾರಣಗಳುಂಟು. ಸಂತೋಷ್`ಜಿ’ ಹೀಗೆ ತಾಳ್ಮೆ ಕಳೆದುಕೊಳ್ಳುವುದಕ್ಕೂ ಕೆಲ ದಿನಗಳ ಹಿಂದಷ್ಟೇ ಬಸನಗೌಡ ಯತ್ನಾಳ್  “ಕೆಲವರು ರಾಜ್ಯ ಬಿಜೆಪಿಯನ್ನು ತಮ್ಮ ಕೈವಶ ಮಾಡಿಕೊಳ್ಳುವ ಸಂತೋಷದಲ್ಲಿದ್ದಾರೆ. ಆದರೆ ಅಂತವರಿಗೆ ಅಸಂತೋಷದ ದಿನಗಳು ಹತ್ತಿರದಲ್ಲೇ ಕಾದಿವೆ” ಎಂಬ ಮಾತುಗಳನ್ನಾಡಿದ್ದರು. ಅದೂ ತೇಜಸ್ವಿನಿ ಅನಂತ್ಕುಮಾರರನ್ನು ಅವರ ಮನೆಯಲ್ಲೇ ಭೇಟಿಯಾಗಿ ಹೊರಬಂದು ಮಾಧ್ಯಮದವರಿಗೆ ಹೀಗೆ ಹೇಳಿದ್ದರು. ತಮ್ಮ ಮಾತುಗಳಲ್ಲಿ ಅವರು `ಸಂತೋಷ’ ಮತ್ತು `ಅಸಂತೋಷ’ ಎಂಬ ಪದಗಳನ್ನು ಉದ್ದೇಶಪೂರ್ವಕವಾಗಿಯೇ ಬಳಸಿದ್ದರು ಮತ್ತು ಪರೋಕ್ಷವಾಗಿ ಸಂತೋಷರನ್ನೇ ತಿವಿಯುವ ಪ್ರಯತ್ನ ಮಾಡಿದ್ದರು.

ಇದಕ್ಕೆ ಅವರ ಮುಂದುವರಿದ ಮಾತುಗಳೇ ಸಾಕ್ಷಿ “ತೇಜಸ್ವಿನಿಯವರಿಗೆ ಟಿಕೇಟ್ ತಪ್ಪಿರೋದು ದುರಂತ. ಕರ್ನಾಟಕದಲ್ಲಿ ಬಿಜೆಪಿಗೆ ನೆಲೆ ಒದಗಿಸಿದ್ದು ಇಬ್ಬರೇ. ಅದರಲ್ಲಿ ಒಬ್ಬರು ಯಡ್ಯೂರಪ್ಪನವರಾದ್ರೆ, ಮತ್ತೊಬ್ಬರು ಅನಂತ್ಕುಮಾರ್. ಅವರ ನಾಯಕತ್ವದಲ್ಲೇ ನಮ್ಮಂತವರು ಎಂಎಲ್ಎ ಆಗಲು, ಎಂಪಿಗಳಾಗಲು, ಕೇಂದ್ರ ಮಂತ್ರಿಗಳಾಗಲು ಸಾಧ್ಯವಾದದ್ದು. ಅಂತದ್ದರಲ್ಲಿ ಅನಂತ್ಕುಮಾರರ ಹೆಂಡತಿಗೆ ಹೀಗೆ ಕೊನೇಕ್ಷಣದಲ್ಲಿ ಟಿಕೆಟ್ ತಪ್ಪಿಸಬಾರದಿತ್ತು”. ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿಸುವಲ್ಲಿ ಬಿಎಲ್ ಸಂತೋಷರ ಪಾತ್ರವಿದೆ ಎಂಬ ಗುಮಾನಿಯನ್ನು ದಟ್ಟವಾಗಿಸುವಂತೆ ಸ್ವತಃ ಅವರೇ ಚಾಮರಾಜನಗರದಲ್ಲಿ ಮಾತಾಡುತ್ತಾ “ಜೀನ್, ಡಿಎನ್ಎ ಆಧಾರದಲ್ಲಿ ಟಿಕೆಟ್ ಕೊಡುತ್ತಾ ಹೋದ್ರೆ ಪಕ್ಷದ ರಸೀತಿ ಪುಸ್ತಕಕ್ಕೆ ಬೆಲೆ ಎಲ್ಲಿರುತ್ತೆ” ಎಂದು ಹೇಳಿ ತಾನೇ ಟಿಕಟ್ ತಪ್ಪಿಸಿದ್ದನ್ನು ಹೆಚ್ಚೂಕಮ್ಮಿ ಒಪ್ಪಿಕೊಂಡ ಮೇಲೆ ಯತ್ನಾಳ್ ತೇಜಸ್ವಿನಿಯವರ ಮನೆಗೆ ಭೇಟಿ ನೀಡಿ `ಸಂತೋಷ’, `ಅಸಂತೋಷ’ದ ಈ ಮಾತುಗಳನ್ನಾಡಿದ್ದರು.

ಅಷ್ಟಕ್ಕೂ ತೇಜಸ್ವಿ ಸೂರ್ಯನಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಅಸಮಾಧಾನಗೊಂಡ ಆರ್.ಅಶೋಕ್, ವಿ.ಸೋಮಣ್ಣ, ಸತೀಶ್ ರೆಡ್ಡಿ ಮೊದಲಾದ ಬೆಂಗಳೂರು ಬಿಜೆಪಿ ಎಂಎಲ್ಎಗಳು ಬಿಎಲ್ ಸಂತೋಷರನ್ನು ಭೇಟಿ ಮಾಡಿದಾಗ “ಇದು ಪಕ್ಷದ ನಿರ್ಧಾರ, ನಿಮ್ಮ ಇಷ್ಟಕಷ್ಟಗಳನ್ನು ಬದಿಗಿರಿಸಿ ಅಭ್ಯರ್ಥಿ ಪರ ಕೆಲಸ ಮಾಡಿ, ಇಲ್ಲವೇ ಶಿಸ್ತು ಕ್ರಮಕ್ಕೆ ಸಿದ್ಧರಾಗಿ” ಎಂದು ನೇರವಾಗಿ ಕುಟುಕಿದ್ದರು ಎನ್ನಲಾಗುತ್ತಿದೆ. ಅವರೆಲ್ಲ ನೆಪ ಮಾತ್ರಕ್ಕೆ ಸೂರ್ಯನ ಪರ ಕೆಲಸ ಮಾಡಿದ್ದು ಮಾತ್ರವಲ್ಲ, ಒಂದು ಹಂತದಲ್ಲಿ ಆರ್.ಅಶೋಕ್ “ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ನಾನೂ ಆಕಾಂಕ್ಷಿ” ಎನ್ನುವ ಮೂಲಕ ಯಡ್ಯೂರಪ್ಪರನ್ನು ಸೈಡ್ಲೈನ್ ಮಾಡಿ ಸಿಎಂ ಆಗುವ ಹವಣಿಕೆಯಲ್ಲಿರುವ ಸಂತೋಷರಿಗೆ ಟಾಂಗ್ ಕೊಟ್ಟಿದ್ದರು.

ಅಂದಹಾಗೆ, ಬಿಬಿಎಂಪಿ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಹೊರತಾಗಿಯೂ ಅಧಿಕಾರ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ಹೆಣೆಯುವಲ್ಲಿ ಸೋತಿದ್ದ ಆರ್.ಅಶೋಕರನ್ನೇ ಗುರಿಯಾಗಿಸಿಕೊಂಡು ಸಂತೋಷ್ “ತಂಡಸ್ಫೂರ್ತಿ ಇಲ್ಲದವರು ಹಾಗೂ ಗೆಲುವಿನ ಕೀರ್ತಿಯನ್ನು ಹಂಚಿಕೊಳ್ಳಲು ಸಿದ್ಧರಿಲ್ಲದವರು ಎಂದಿಗೂ ಗೆಲುವು ಕಾಣಲಾರರು” ಎಂಬ ಚಾಣಕ್ಯ ನುಡಿಯನ್ನು ಟ್ವೀಟ್ ಮಾಡಿ ಕುಟುಕಿದ್ದರು. ಆಗ ಅಶೋಕ್ ಬೆಂಬಲಕ್ಕೆ ಬಂದದ್ದು ಯಡ್ಯೂರಪ್ಪ. “ಬಿಬಿಎಂಪಿ ಮೇಯರ್ ಪಟ್ಟ ದಕ್ಕಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾದದ್ದಕ್ಕೆ ಅಶೋಕ್ ಕಾರಣರಲ್ಲ. ಕೇಂದ್ರಮಂತ್ರಿ ಸದಾನಂದ ಗೌಡ, ನಿರ್ಮಲಾ ಸೀತಾರಾಮನ್ ಮತದಾನಕ್ಕೆ ಲಭ್ಯವಿದ್ದರೆ ಕಥೆಯೇ ಬೇರೆ ಇರುತ್ತಿತ್ತು. ಅಶೋಕ್ ಮೇಲೆ ಅಪವಾದ ಹೊರಿಸುವುದು ಸರಿ ಕಾಣುವುದಿಲ್ಲ” ಎಂದಿದ್ದ ಯಡ್ಯೂರಪ್ಪನವರು ಪರೋಕ್ಷವಾಗಿ ಸಂತೋಷರಿಗೆ ಬಿಸಿ ಮುಟ್ಟಿಸಿದ್ದರು.

ಇಲ್ಲಿ ಒಂದು ಸೂಕ್ಷ್ಮವನ್ನು ಗಮನಿಸಬೇಕು. ಬಿಜೆಪಿ ತೊರೆದು ಕೆಜೆಪಿ ಕಟ್ಟಿಕೊಂಡು, ಮತ್ತೆ ಅಲ್ಲಿಂದ ವಾಪಾಸ್ ಬಿಜೆಪಿಗೆ ಬಂದ ನಂತರ ಯಡಿಯೂರಪ್ಪನವರಿಗೆ ಈ ಮೊದಲಿದ್ದ ಬಲ ಉಳಿದಿರಲಿಲ್ಲ. ಸಿಟಿ ರವಿ, ಈಶ್ವರಪ್ಪ, ಸೊಗಡು ಶಿವಣ್ಣ, ಎಸ್.ಎ.ರವೀಂದ್ರನಾಥರಂತಹ ಪ್ರಬಲ ದುಶ್ಮನಿಗಳ ಮಾತು ಒತ್ತಟ್ಟಿಗಿರಲಿ ಒಂದು ಕಾಲಕ್ಕೆ ಯಡ್ಯೂರಪ್ಪನವರ ಅಪ್ಪಟ ಬೆಂಬಲಿಗರಾಗಿದ್ದ ಆರ್.ಅಶೋಕ್, ವಿ.ಸೋಮಣ್ಣ, ಬಸನಗೌಡ ಯತ್ನಾಳ್ ಥರದವರೇ ಯಡ್ಯೂರಪ್ಪನವರಿಂದ ಒಂದುಮಟ್ಟಿಗಿನ ಅಂತರ ಕಾಯ್ದುಕೊಂಡಿದ್ದರು. ಯಡಿಯೂರಪ್ಪನವರ ಮುಂಗೋಪ, ಶೋಭಾ ಕರಂದ್ಲಾಜೆಯವರಿಗೆ ಅತಿಯೆನ್ನಿಸುವಷ್ಟು ಮನ್ನಣೆ, ಸರ್ವಾಧಿಕಾರಿ ಧೋರಣೆಗಳಿಂದಾಗಿ ಇವರೆಲ್ಲ ಯಡಿಯೂರಪ್ಪನವರಿಂದ ದೂರವೇ ಉಳಿದಿದ್ದರು. ಆದರೆ ಏಕ್.ಧಂ ವಿರೋಧಿಗಳಾಗಿರಲಿಲ್ಲ ಅಷ್ಟೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿದ್ದರು ಕಳೆದ ವರ್ಷ ನಡೆದ ರಾಜ್ಯ ಅಸೆಂಬ್ಲಿ ಚುನಾವಣೆಯ ನೆಪದಲ್ಲಿ ರಾಜ್ಯ ರಾಜಕಾರಣಕ್ಕೆ ವಾಪಾಸಾದ ಬಿ.ಎಲ್.ಸಂತೋಷ್ ಯಡ್ಯೂರಪ್ಪನವರ ಈ ಏಕಾಕಿತನವನ್ನು ಸೂಕ್ಷ್ಮವಾಗಿ ಗಮನಿಸಿ, ತನಗಿರುವ ಸಂಘ ಪರಿವಾರದ ಪ್ರಭಾವ ಬಳಸಿಕೊಂಡು ನಿಧಾನಕ್ಕೆ ತಂತ್ರಗಾರಿಕೆ ಹೆಣೆಯುತ್ತಾ ಬಂದಿದ್ದರು. ಆರೆಸೆಸ್ ಸೀನಿಯರ್ ಲೀಡರ್ ಮೈಚಾ ಜಯದೇವ್ ಅವರ ನಿಧನದ ನಂತರ ಸಂಘ ಪರಿವಾರದಲ್ಲಿ ತನ್ನ ಪರ ವಕಾಲತ್ತು ವಹಿಸವಂತ ನಾಯಕರು ಇರದ ಯಡ್ಯೂರಪ್ಪನವರು ಸಂತೋಷರ ತಂತ್ರಗಳಿಂದ ತತ್ತರಿಸುತ್ತಾ ಬಂದದ್ದು ಸುಳ್ಳಲ್ಲ.  ಆದರೆ ತೀರಾ ಇತ್ತೀಚೆಗೆ ಅಂದರೆ, ಮುಖ್ಯವಾಗಿ ಅನಂತ್ಕುಮಾರರ ನಿಧನದ ನಂತರ, ಸಂತೋಷರ ಆಟಗಳು ವೇಗ ಪಡೆದುಕೊಂಡವು. ಅಂದಹಾಗೆ, ಆರಂಭದಲ್ಲಿ ಯಡ್ಯೂರಪ್ಪನವರ ಆಪ್ತರಾಗಿದ್ದ ಸಂತೋಷರನ್ನು ಕಂಡರೆ ಅನಂತ್ಕುಮಾರರಿಗೆ ಅಷ್ಟಕ್ಕಷ್ಟೆ. ಅದೇ ಕಾರಣಕ್ಕೆ ಆರೆಸೆಸ್ ವಲಯದಲ್ಲಿ ಸಂತೋಷರಷ್ಟೇ ಪ್ರಭಾವ ಹೊಂದಿದ್ದ ಅನಂತ್ಕುಮಾರ್, ಈ ಸ್ವಜಾತಿ ಪ್ರತಿಸ್ಪರ್ಧಿ ಮಿತಿಮೀರಿ ಬೆಳೆಯುವುದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಹಾಗಾಗಿ ಹೆಚ್ಚೆಂದರೆ ಯಡ್ಯೂರಪ್ಪರ ಬಲ ಕುಗ್ಗಿಸುವುದಕ್ಕಷ್ಟೇ ಸಂತೋಷರ ತಂತ್ರಗಳು ಸೀಮಿತವಾಗಿದ್ದವು.

ಆದರೆ ಅನಂತ್ಕುಮಾರರ ಅನುಪಸ್ಥಿತಿಯ ಈ ಹೊತ್ತಿನಲ್ಲಿ ಸಂತೋಷರವರು ಹೀಗೆ ಅಗ್ರೆಸಿವ್ ಆಗಿ ಬೆಳೆಯುತ್ತಿರೋದು ಮತ್ತು ಕೋರ್ ಕಮಿಟಿಯನ್ನೂ ಧಿಕ್ಕರಿಸಿ ತಮ್ಮ ಬೆಂಬಲಿಗರನ್ನು ಬೆಳೆಸುತ್ತಿರೋದು ಪಕ್ಷದೊಳಗೆ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಎಷ್ಟರಮಟ್ಟಿಗೆಂದರೆ ಈ ಮೊದಲು ಯಡ್ಯೂರಪ್ಪನವರನ್ನು `ಸರ್ವಾಧಿಕಾರಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತೀರ್ಮಾನ ತೆಗೆದುಕೊಳ್ತಾರೆ’ ಎನ್ನುತ್ತಿದ್ದ ಸೆಕೆಂಡ್ ಲೈನ್ ಲೀಡರುಗಳಿಗೆಲ್ಲ ಈಗ ಅದೇ ಯಡ್ಯೂರಪ್ಪನವರೇ ವಾಸಿ ಎನ್ನಿಸಲು ಶುರುವಾಗಿದೆ. ಹಾಗಾಗಿ ಅವರೆಲ್ಲ ಮತ್ತೆ ಯಡ್ಯೂರಪ್ಪನವರತ್ತ ದೃವೀಕರಣಗೊಳ್ಳಲು ಶುರು ಮಾಡಿದ್ದಾರೆ. ಇಲ್ಲದೇ ಹೋಗಿದ್ದರೆ ಯಡ್ಯೂರಪ್ಪನವರಿಂದ ತಟಸ್ಥ ಅಂತರ ಕಾಯ್ದುಕೊಂಡಿದ್ದ ಅಶೋಕ್ ಮತ್ತೆ ಯಡ್ಯೂರಪ್ಪನ ಪೂರ್ಣಕಾಲಿಕ ಬಣಗಾರನಾಗುತ್ತಿರಲಿಲ್ಲ, ಲಿಂಗಾಯತ ಲೀಡರುಗಿರಿಗಾಗಿ ಯಡ್ಯೂರಪ್ಪನವರನ್ನು ಹೀನಾಮಾನ ದ್ವೇಷಿಸಿ ಬಿಜೆಪಿ ಬಿಟ್ಟು ಜೆಡಿಎಸ್ಗೆ ಹೋಗಿ  ಬಂದಿದ್ದ ಬಸನಗೌಡ ಯತ್ನಾಳ್ ಯಡ್ಯೂರಪ್ಪನ ಅಪ್ಪಟ ಮರುಅಭಿಮಾನಿಯಾಗುತ್ತಿರಲಿಲ್ಲ. ಇಂಥಾ ದೃವೀಕರಣಕ್ಕೆ ವೇಗ ಸಿಕ್ಕಿದ್ದು ತೇಜಸ್ವಿನಿ ಅನಂತ್ಕುಮಾರ್ ಪ್ರಕರಣದಿಂದ.

`ಡಿ.ಎನ್.ಎ ನೆಪ ಹೇಳಿ ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿಸಿದ್ದ ಸಂತೋಷ್, ಚಿಂಚೋಳಿ ಉಪ ಚುನಾವಣೆಗೆ ಉಮೇಶ್ ಜಾಧವ್ ಮಗ ಅವಿನಾಶ್ ಜಾಧವ್ಗೆ ಟಿಕೇಟ್ ಕೊಟ್ಟಾಗ ಯಾಕೆ ಸುಮ್ಮನಿದ್ದಾರೆ’ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಈ ಬಣ ಸಂತೋಷರ ಮೇಲೆ ಮುಗಿಬೀಳಲು ತಯಾರಿ ನಡೆಸಿದ ವರ್ತಮಾನ ತಿಳಿದಿದ್ದರಿಂದಲೇ ಅವರು ಅವತ್ತು `ಬರಲಿ ಬಿಡಿ ನೋಡಿಕೊಳ್ಳೋಣ’ ಎಂಬರ್ಥದಲ್ಲಿ ಮಾತಾಡಿರೋದು.

ರೋಚಕ ಸಂಗತಿ ಇರೋದೆ ಇಲ್ಲಿ. ಬಿಜೆಪಿ ಒಂದು ಸ್ವತಂತ್ರ ರಾಜಕೀಯ ಪಕ್ಷವಾದರು ಆರೆಸೆಸ್ಸಿನ ಕೈಗೊಂಬೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಆರೆಸೆಸ್ಸಿನಲ್ಲಿ ಬ್ರಾಹ್ಮಣರಿಗೆ ಇರುವ ಮಾನ್ಯತೆ, ಉಳಿದ ಬೇರಾವ ಜಾತಿಯವರಿಗೂ ಇಲ್ಲ. ಯಡ್ಯೂರಪ್ಪನವರ ಪರ ಎಷ್ಟೇ ನಾಯಕರು ದೃವೀಕರಣಗೊಳ್ಳಬಹುದು, ಆದರೆ ಅವೆಲ್ಲವೂ ಆರೆಸೆಸ್ ಫರ್ಮಾನಿನ ಮುಂದೆ ಠುಸ್ ಆಗಿಬಿಡುತ್ತವೆ. ಯಡ್ಯೂರಪ್ಪನವರು ಸಿಎಂ ಆಗಿ ಅಧಿಕಾರದಲ್ಲಿದ್ದಾಗಲೇ, ಸುಮಾರು ಅರವತ್ತಕ್ಕು ಹೆಚ್ಚು ಎಂಎಲ್ಎಗಳನ್ನು ರೆಸಾರ್ಟ್.ನಲ್ಲಿಟ್ಟುಕೊಂಡು ಆಟ ಆಡಲು ನೋಡಿದರೂ, ದಿಲ್ಲಿಯಿಂದ ಬಂದಿದ್ದ ಕೇಂದ್ರ ಮಂತ್ರಿಗಳಿಗೆ ತನ್ನ ಬೆಂಬಲಿಗ ಶಾಸಕರಿಂದ ಮುತ್ತಿಗೆ ಹಾಕಿಸುವ ಪ್ರಯತ್ನ ನಡೆಸಿದರೂ ಕೊನೆಗವರು ಕುರ್ಚಿಯಿಂದ ಕೆಳಗಿಳಿಯುವುದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಮೇಲ್ನೋಟಕ್ಕೆ ಕೋರ್ಟ್ ಕೇಸಿನ ಕಾರಣಕ್ಕೆ ಅವರನ್ನು ಕೆಳಗಿಳಿಸಿದಂತೆ ಕಂಡಬಂದರೂ ಆನಂತರದಲ್ಲಿ ಯಡ್ಯೂರಪ್ಪನವರ ಪ್ರಭಾವ ಪಕ್ಷದ ಲೀಡರುಗಳ ಮೇಲೆ ಕ್ರಮೇಣ ಕುಗ್ಗುವಂತೆ ಮಾಡಿದ್ದು, ಯಡ್ಯೂರಪ್ಪನವರೇ ಸಿಎಂ ಆಗಿ ನೇಮಿಸಿದ್ದ ಸದಾನಂದಗೌಡರು ಅವರ ವಿರುದ್ಧ ತಿರುಗಿಬಿದ್ದದ್ದು, ಜೈಲಿನಿಂದ ವಾಪಾಸು ಬಂದ ನಂತರ ಪಕ್ಷದೊಳಗೆ ಇರಲಾಗದಂತ ವಾತಾವರಣ ಸೃಷ್ಟಿಯಾದದ್ದು ಎಲ್ಲವೂ ಆರೆಸೆಸ್ಸಿನ ತಂತ್ರಗಾರಿಕೆಗಳಿಂದ. ಅವುಗಳನ್ನು ಎಕ್ಸಿಕ್ಯೂಟ್ ಮಾಡಿದ್ದು ಇದೇ ಸಂತೋಷ್`ಜಿ’.

ಈಗ ಯಡ್ಯೂರಪ್ಪನವರಿಗೆ ಅಧಿಕಾರವೂ ಇಲ್ಲ, ಆರೆಸೆಸ್ಸಿನಲ್ಲಿ ತನ್ನಪರ ವಕಾಲತ್ತು ವಹಿಸುತ್ತಿದ್ದ ಜೈದೇವ್ ತರಹದ ಹಿರಿಯರೂ ಇಲ್ಲ. ಹಾಗಾಗಿ ಯಾರೆಷ್ಟೇ ಯಡ್ಯೂರಪ್ಪ ಪರ ದೃವೀಕರಣಗೊಂಡರು ಸ್ಟ್ರಾಟಜಿಕಲ್ ಫರ್ಮಾನುಗಳಿಂದ ಅವರನ್ನೆಲ್ಲ ನಿಶ್ಯಸ್ತ್ರಗೊಳಿಸುವ ವಿಶ್ವಾಸ ಸಂತೋಷರಿಗೆ ಇದ್ದಂತಿದೆ. ಹಾಗಂತ ಯಡ್ಯೂರಪ್ಪ ಕೂಡಾ ಸುಮ್ಮನೇ ಕೂರುವ ಜಾಯಮಾನದವರಲ್ಲ.

ಈ ಆಂತರಿಕ ಭಿನ್ನಮತ ದಿನದಿಂದ ದಿನಕ್ಕೆ ರಾಜ್ಯ ಬಿಜೆಪಿಯನ್ನು ಕಾದ ಕುಲುಮೆಯಾಗಿಸುತ್ತಿದೆ. ಇಂಥಾ ಬೇಗುದಿಯನ್ನು ಮುಚ್ಚಿಹಾಕಲೆಂದೇ `ಆಪರೇಷನ್ ಕಮಲ’, `ಮೈತ್ರಿ ಸರ್ಕಾರದ ಪತನ’ದಂತಹ ಹೇಳಿಕೆಗಳನ್ನು ಬಿಜೆಪಿ ನಾಯಕರು ಹರಿಬಿಡುತ್ತಿದ್ದಾರೆ. ಅವರಿಗೆ ನಿಷ್ಠರಾಗಿರುವ ಮೀಡಿಯಾಗಳು ಕೂಡಾ `ಇಷ್ಟೆಲ್ಲಾ ಕಚ್ಚಾಟಗಳಿರುವ ಬಿಜೆಪಿ, ಇರುವ ಸರ್ಕಾರವನ್ನು ಕೆಡವಿ ಒಂದು ಸ್ಥಿರ ಸರ್ಕಾರವನ್ನು ಕೊಡಬಲ್ಲದೇ?’ ಎಂಬ ಕಾಮನ್.ಸೆನ್ಸ್ ಪ್ರಶ್ನೆಯನ್ನೂ ಕೇಳದೆ ಅವರು ಹೇಳಿದ ದಿಕ್ಕಿನತ್ತ ಕ್ಯಾಮೆರಾ ತಿರುಗಿಸಿಕೊಂಡು ಕೂತಿವೆ……….

 

ರಿಲೇಟೆಡ್ ಸ್ಟೋರಿ: ಇದನ್ನೂ ಓದಿ…..

ಯಡ್ಯೂರಪ್ಪಗೆ ಅಡ್ಡಗಾಲು ಹಾಕುವ ಸಂತೋಷ್`ಜಿ’ ತಂತ್ರ ಅವರಿಗೇ ಮುಳುವಾಯಿತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....