ಕೊಲ್ಕೊತ್ತಾದ ಪೊಲೀಸ್ ಕಮೀಷನರ್ ರಾಜೀವ ಕುಮಾರ್ ಅವರ ಕಚೇರಿಯ ಮೇಲೆ ದಾಳಿ ಮಾಡಲು ಹೋದ ಸಿಬಿಐಗೆ ಮುಖಭಂಗವಾಗಿದೆ. ಈಗ ಸುಪ್ರಿಂಕೋರ್ಟ್ ರಾಜೀವ ಕುಮಾರ್ ಅವರನ್ನು ಬಂಧಿಸದೇ ವಿಚಾರಣೆ ನಡೆಸಲು ಸೂಚಿಸಿದೆ.
ಸಿಬಿಐ ಅನ್ನು ಕೇಂದ್ರ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದಕ್ಕೆ ಈ ಶಾರದಾ ಚಿಟ್ಫಂಡ್ ಹಗರಣದ ತನಿಖೆಯೇ ಸಾಕ್ಷಿಯಾಗಿದೆ. ಈ ಹಗರಣದಲ್ಲಿ ಆರೋಪಿಗಳೆಂದು ಪರಿಗಣಿತರಾದವರು ಬಿಜೆಪಿ ಸೇರಿದ ಮೇಲೆ ಅವರ ಮೇಲಿನ ತನಿಖೆಯನ್ನು ಮೃದುಗೊಳಿಸಲಾಗಿದೆ ಅಥವಾ ನಿಲ್ಲಿಸಿಯೇ ಬಿಡಲಾಗಿದೆ.
2015ರಲ್ಲಿ ಮಾಜಿ ರೈಲ್ವೆ ಸಚಿವ, ಅಂದಿನ ಟಿಎಂಸಿ ನಾಯಕ ಮುಕುಲ್ ರಾಯ್ ವಿರುದ್ಧ ಸಿಬಿಐ ತನಿಖೆ ಶುರು ಮಾಡಿತು. ಆದರೆ ಮುಕುಲ್ರಾಯ್ ಬಿಜೆಪಿ ಸೇರಿದ ನಂತರ ತನಿಖೆಗೆ ಮಂಕು ಬಡಿದಿದೆ. ಹಾಗೆಯೇ ಅಸ್ಸಾಂನ ಸಚಿವ ಹಿಮಂತ ಬಿಸ್ವಾಸ್ ಶರ್ಮಾ ಮನೆ ಮೇಲೂ ಸಿಬಿಐ ದಾಳಿ ಮಾಡಿತ್ತು. ಶರ್ಮಾ ಬಿಜೆಪಿ ಸೇರಿದ ನಂತರ ಯಾವ ಚಾರ್ಜ್ಶೀಟಿನಲ್ಲೂ ಅವರ ಹೆಸರನ್ನು ಸೇರಿಸಲೇ ಇಲ್ಲ.
ಸುಪ್ರಿಂಕೋಟ್ ಆದೇಶದಂತೆ ಸಿಬಿಐ ಶಾರದಾ ಹಗರಣದ ತನಿಖೆಯನ್ನು 2014ರಲ್ಲಿ ಆರಂಭಿಸಿತು. 2015ರ ಜನೆವರಿ 30ರಂದು ಸಿಬಿಐ ಮುಕುಲ್ ರಾಯ್ ಅವರ ವಿಚಾರಣೆ ನಡೆಸಿತ್ತು. ಶಾರದಾ ಸಂಸ್ಥೆಯ ನ್ಯೂಸ್ ಆಪರೇಷನ್ಸ್ ಮತ್ತು ಸಂಸ್ಥೆಯ ಮುಖ್ಯಸ್ಥ ಸುದೀಪ್ತ್ ಸೇನ್ ಜೊತೆಗಿನ ಆತ್ಮೀಯ ಸಂಬಂಧಗಳ ಕುರಿತಂತೆ ರಾಯ್ ಅವರ ವಿರುದ್ಧ ತನಿಖೆ ಆರಂಭಿಸಲಾಗಿತ್ತು. ಸುದೀಪ್ತ್ ಸೇನ್ ಅವರ ಕಾರು ಚಾಲಕನ ಹೇಳಿಕೆಯಲ್ಲಿ ಮುಕುಲ್ ರಾಯ್ ಹೆಸರು ಪ್ರಸ್ತಾಪವಾಗಿತ್ತು. ಬಂಧನ ಭೀತಿಯಲ್ಲಿದ್ದ ಸುದೀಪ್ತ್ ಸೇನ್ ಅವರನ್ನು ಕೊಲ್ಕೊತ್ತಾದಿಂದ ಹೊರಗೆ ಪಾರಾಗಿ ಹೋಗಲು ರಾಯ್ ಹೇಗೆ ನೆರವು ನೀಡಿದ್ದರು ಎಂಬುದನ್ನು ಚಾಲಕ ವಿವರಿಸಿದ್ದ.
ಟಿಎಂಸಿ ಸಂಸದ ಕುನಾಲ್ ಘೋಷ್ ಶಾರದಾ ಹಗರಣ ಕುರಿತಂತೆ ರಾಯ್ ವಿರುದ್ಧ ಅಪಾದನೆ ಮಾಡಿದ ನಂತರ ರಾಯ್ಗೆ ಸಿಬಿಐ ಸಮನ್ಸ್ ನೀಡಿತ್ತು. ಶಾರದಾ ಹಗರಣಕ್ಕೆ ಸಂಬಂಧಿಸಿ 2013ರಲ್ಲೇ ಮೋಸ, ಕ್ರಿಮಿನಲ್ ಸಂಚು ಆರೋಪದ ಮೇಲೆ ಘೋಷ್ ಅವರನ್ನು ಬಂಧಿಸಲಾಗಿತ್ತು. ಬಂಧನವಾದ ಒಂದು ತಾಸಿನಲ್ಲೇ ಘೋಷ್ 12 ಜನರ ಹೆಸರನ್ನು ಹೇಳಿದ್ದು, ಅದರಲ್ಲಿ ಮುಕುಲ್ ರಾಯ್ ಹೆಸರು ಕೂಡ ಸೇರಿತ್ತು.
2015ರಲ್ಲೇ ಮುಕುಲ್ ರಾಯ್ ಬಿಜೆಪಿಗೆ ಹತ್ತಿರವಾಗತೊಡಗಿದರು. 2017ರ ನವೆಂಬರ್ 3ರಂದು ರಾಯ್ ಬಿಜೆಪಿ ಸೇರಿದರು. ಬಿಜೆಪಿಗೆ ಹತ್ತಿರವಾದ ನಂತರ ರಾಯ್ ಪರ ಮೃದು ಧೋರಣೆ ತಳೆದಿದ್ದ ಸಿಬಿಐ ಬಿಜೆಪಿ ಸೇರಿದ ನಂತರ ಅವರನ್ನು ವಿಚಾರಣೆಗೆ ಕರೆಯುತ್ತಲೇ ಇಲ್ಲ.
ಅಸ್ಸಾಂನ ಹಿಮಂತ ಶರ್ಮಾರನ್ನು ನವೆಂಬರ್ 26, 2014ರಂದು ವಿಚಾರಣೆ ಮಾಡಲಾಗಿತ್ತು. ಅದಕ್ಕೂ ಎರಡು ತಿಂಗಳು ಮೊದಲು ಶರ್ಮಾ ಮನೆ ಮತ್ತು ಆತನ ಪತ್ನಿಯ ಟಿವಿ ಚಾನೆಲ್ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿತ್ತು. ಅಸ್ಸಾಂನಲ್ಲಿ ತಮ್ಮ ಸಂಸ್ಥೆಯ ಕಾರ್ಯಾಚರಣೆ ಸುಗಮವಾಗಿ ನಡೆಯಲು ಪ್ರತಿ ತಿಂಗಳು ತಮ್ಮಿಂದ 20 ಲಕ್ಷ ರೂ.ಗಳನ್ನು ಶರ್ಮಾ ಪಡೆಯುತ್ತಿದ್ದರು ಎಂದು ಶಾರದಾ ಸಂಸ್ಥೆಯ ಮುಖ್ಯಸ್ಥ ಸುದೀಪ್ತ್ ಸೇನ್ ಆರೋಪಿಸಿದ್ದರು.
2015ರ ಅಗಸ್ಟ್ನಲ್ಲಿ ಶರ್ಮಾ ಬಿಜೆಪಿ ಸೇರಿದರು. ಆ ನಂತರ ಅವರನ್ನು ವಿಚಾರಣೆಗೆ ಕರೆಯಲೇ ಇಲ್ಲ. ಯಾವ ಚಾರ್ಜ್ಶೀಟಿನಲ್ಲೂ ಅವರ ಹೆಸರನ್ನು ಉಲ್ಲೇಖಿಸಲಿಲ್ಲ.
ಅಂದರೆ, ಬಿಜೆಪಿ ಸಿಬಿಐ ಅನ್ನು ತನ್ನ ಅನುಕೂಲಕ್ಕೆ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬುದು ಪಕ್ಕಾ ಆಗಿತಲ್ಲವೇ?
(ಕೃಪೆ: ನ್ಯೂ ಇಂಡಿಯನ್ ಎಕ್ಸ್ಪ್ರೆಸ್)