ಬಲಪಂಥೀಯ ಟ್ರೋಲರ್ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ನಡೆಸಿದ ಪಠ್ಯ ಮರುಪರಿಷ್ಕರಣಾ ವಿಚಾರವಾಗಿ ಜುಲೈ 5ರೊಳಗೆ ಸರ್ಕಾರ ಸರಿಯಾದ ನಿರ್ಧಾರಕ್ಕೆ ಬಾರದೆ ಹೋದರೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.
ಸುದ್ದಿಪೋರ್ಟಾಲ್ ಈದಿನ.ಕಾಂ ಜೊತೆಗೆ ಮಾತನಾಡಿದ ಅವರು, “ಈಗಾಗಲೇ ರಾಜ್ಯಾದ್ಯಂತ ಹಲವು ಪ್ರತಿಭಟನೆ ನಡೆದಿದೆ. ಅನೇಕ ಸಾಹಿತಿಗಳು, ವಿಮರ್ಶಕರು ಪಠ್ಯಪರಿಷ್ಕರಣೆ ಬಗ್ಗೆ ಕಿಡಿಕಾರಿದ್ದಾರೆ. ಅನೇಕರು ತಮ್ಮ ಪಠ್ಯವನ್ನು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇಷ್ಟಾದರೂ ಸರ್ಕಾರ ತನ್ನ ನಿಲುವು ಮುಂದುವರಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಬಸವಣ್ಣನ ಚರಿತ್ರೆ ಬಗ್ಗೆ ತಪ್ಪಾಗಿರುವುದನ್ನು ಸರಿ ಮಾಡುವುದಾಗಿ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಸುಮಾರು 30 ಸ್ವಾಮೀಜಿಗಳ ಸಮ್ಮುಖದಲ್ಲಿ ಹೇಳಿದ್ದಾರೆ. ಶಿಕ್ಷಣ ಮಂತ್ರಿಗಳು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಇದರ ನಡುವೆ ಇನ್ನೊಬ್ಬ ಸಚಿವ ಈ ರೀತಿ ಹೇಳಿಕೆ ನೀಡಲು ಹೇಗೆ ಸಾಧ್ಯ? ಜನರಲ್ಲಿ ಗೊಂದಲ ಉಂಟು ಮಾಡಲು ದ್ವಂದ್ವ ಹೇಳಿಕೆ ನೀಡಲಾಗುತ್ತಿದೆ” ಎಂದು ಗುರುವಾರ ಕಂದಾಯ ಸಚಿವ ಆರ್ ಅಶೋಕ್ ಅವರು ನೀಡಿದ ಹೇಳಿಕೆಯನ್ನು ಬಸವಲಿಂಗ ಪಟ್ಟದ್ದೇವರು ಖಂಡಿಸಿದ್ದಾರೆ.
“ಸರ್ಕಾರದ ಸಚಿವರೊಬ್ಬರು ಈ ರೀತಿ ಮಾತನಾಡಿದರೆ ಪಠ್ಯ ಬದಲಾಯಿಸುವುದಾದರೂ ಹೇಗೆ? ಆದ್ದರಿಂದ ಇನ್ನೊಮ್ಮೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ಇಂದು ಮಠಾಧೀಶರುಗಳು ಬೀದರ್ನಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ಇದೇ ಜುಲೈ 5ರೊಳಗೆ ಸರ್ಕಾರ ಪಠ್ಯದ ವಿಷಯವಾಗಿ ಸರಿಯಾದ ನಿರ್ಧಾರಕ್ಕೆ ಬಾರದೆ ಹೋದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ನಿರ್ಧರಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಪಠ್ಯಪರಿಷ್ಕರಣೆ ಸಮಿತಿಯ ವಿವಾದಾತ್ಮಕ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ‘ಸನ್ಮಾನ ಕಾರ್ಯಕ್ರಮ’ ರದ್ದು
ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ ಮಾತನಾಡಿ,“ಪಠ್ಯ ಪುಸ್ತಕ ಪರಿಷ್ಕರಣೆ ಸರ್ಕಾರಕ್ಕೆ ಪ್ರತಿಷ್ಠೆಯ ವಿಷಯವಾಗಿದ್ದರಿಂದ ಬದಲಾವಣೆ ಮಾಡಲು ಹಿಂಜರಿಯುತ್ತಿದ್ದಾರೆ. ಬದಲಾವಣೆ ಮಾಡದಿದ್ದರೆ ಎಲ್ಲಿ ಗಲಾಟೆ ನಡೆಯುತ್ತದೆಯೋ ಎಂಬ ಆತಂಕದಲ್ಲಿ ಮುಖ್ಯಮಂತ್ರಿಗಳು ಪರಿಶೀಲನೆ ಮಾಡಿ ವರದಿ ಮಾಡುವುದಾಗಿ ತಿಳಿಸುತ್ತಾರೆ. ಮುಖ್ಯಮಂತ್ರಿಗಳು ಒಂದು ರೀತಿಯಲ್ಲಿ ಮಾತನಾಡಿದರೆ, ಕಂದಾಯ ಸಚಿವರು ಇನ್ನೊಂದು ರೀತಿ ಮಾತನಾಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಪಠ್ಯದಲ್ಲಿ ತಪ್ಪಾಗಿ ಮಾಹಿತಿ ನೀಡಿದ್ದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಸ್ವಲ್ಪ ಸಮಯಾವಕಾಶ ಕೊಡುವಂತೆ ಮನವಿ ಮಾಡಿದ್ದಾರೆ. ಅಲ್ಲಿಯವರೆಗೂ ಯಾವುದೇ ಪತ್ರಿಕಾ ಹೇಳಿಕೆ ನೀಡದಂತೆ ಕೋರಿದ್ದಾರೆ. ಮಾತಿನಂತೆ ನಡೆದುಕೊಳ್ಳದಿದ್ದರೆ ಮುಂದಿನ ಹೋರಾಟ ರೂಪಿಸಿಲಾಗುವುದು” ಎಂದು ಸ್ವಾಮೀಜಿ ಈದಿನ.ಕಾಂ ಜೊತೆಗೆ ಹೇಳಿದ್ದಾರೆ.
ಇದುವರೆಗೆ ಪಠ್ಯ ಮರುಪರಿಷ್ಕರಣೆಯಲ್ಲಿ ಆಗಿರುವ ಸಾಲು ಸಾಲು ತಪ್ಪುಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇವೆ. ವಿದ್ವಾಂಸರು, ಶಿಕ್ಷಣ ತಜ್ಞರು ಅವನ್ನು ಎತ್ತಿ ತೋರಿಸುತ್ತಿರುವುದಲ್ಲದೇ, ನಿಯಮಾವಳಿಗಳನ್ನು ಪಾಲಿಸದೇ ಇರುವುದನ್ನೂ ಗುರುತಿಸಿದ್ದಾರೆ. ಪರಿಷ್ಕರಣಾ ಸಮಿತಿ ಸದಸ್ಯರ ಅಭಿಪ್ರಾಯಗಳನ್ನೂ ಗಾಳಿಗೆ ತೂರಿ ಏಕಪಕ್ಷೀಯವಾಗಿ ಪಠ್ಯಪುಸ್ತಕಗಳನ್ನು ತಿದ್ದುಪಡಿ ಮಾಡಿದ್ದಾರೆಂಬ ಎಂದು ಈಗಾಗಲೆ ಸುದ್ದಿಯಾಗಿದೆ.
ಇದನ್ನೂ ಓದಿ: ನಾರಾಯಣಗುರುಗಳ ಪಠ್ಯ ಕೈಬಿಟ್ಟಿದ್ದಕ್ಕೆ ಆಕ್ರೋಶ: ಹೆದ್ದಾರಿ ಬಂದ್ ನಡೆಸಲು ಬಿಲ್ಲವ ಸಮಾಜದ ತಯಾರಿ
ಬುಧವಾರದಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಹಿತ ಇಲಾಖೆಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದರು. ಮರುದಿನ ಪತ್ರಿಕಾಗೋಷ್ಠಿ ನಡೆಸಿದ್ದ ಕಂದಾಯ ಸಚಿವ ಆರ್. ಅಶೋಕ್, “ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ” ಎಂದು ಹೇಳಿದ್ದರು.
ಇತ್ತ ಮುಖ್ಯಮಂತ್ರಿ ತಜ್ಞರೊಂದಿಗೆ ಮಾತುಕತೆ ನಡೆಸಿ ಸರಿಪಡಿಸುವುದಾಗಿ, ತಾವು ಈ ವಿಚಾರದಲ್ಲಿ ಮುಕ್ತ ಮನಸ್ಸು ಹೊಂದಿರುವುದಾಗಿ ಭರವಸೆ ನೀಡಿದೆ. ಅದರೆ ಶಿಕ್ಷಣ ಇಲಾಖೆಗೆ ಸಂಬಂಧವೇ ಪಡದ ಸರ್ಕಾರದ ಇನ್ನೊಬ್ಬ ಸಚಿವರು ಬದಲಾವಣೆ ಮಾಡುವ ಮಾತೇ ಇಲ್ಲ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.



ಪಠ್ಯ ಪುಸ್ತಕ ಪರಿಷ್ಕರಣೆಯ ವಿಷಯದಲ್ಲಿ ಸರ್ಕಾರದ ಹಠಮಾರಿ ಧೋರಣೆ ನೇರವಾಗಿ ನಮ್ಮ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದರ ವಿರುದ್ಧದ ಧ್ವನಿ ಸಂಘಟಿತವಾಗಿರಬೇಕು, ಒಕ್ಕೊರಲಿನಿಂದ ಕೂಡಿರಬೇಕು. ನಾರಾಯಣ ಗುರುಗಳ ಪಾಠ ತೆಗೆದರು ಎಂದು ಪೂಜಾರರು, ಬಸವಣ್ಣನ ಪಾಠ ತೆಗೆದರೆಂದು ವೀರಶೈವರು, ಕುವೆಂಪುಗೆ ಅವಮಾನ ಮಾಡಿದರೆಂದು ವಕ್ಕಲಿಗರು ಪ್ರತ್ಯೇಕ ಪ್ರತ್ಯೇಕವಾಗಿ ಪ್ರತಿಭಟಿಸುವುದು ಹಳಿ ತಪ್ಪಿ ಆಂದೋಲನ ವಿಘಟನೆಯಾಗುತ್ತದೆ. ಇದು ಆತಂಕಕಾರಿ! ಆದ್ದರಿಂದ, ಜಾತಿ ಮತಗಳನ್ನು ಮೀರಿ, ಎಲ್ಲರೂ ಸೇರಿ, ಒಟ್ಟಾಗಿ, ಪರಿಷ್ಕರಣೆ ಹಿಂತೆಗೆಯಲು ಸರ್ಕಾರ ಮೇಲೆ ಒತ್ತಡ ತರಲು ಪ್ರತಿಭಟನೆ ಮಾಡಬೇಕು.