Homeಚಳವಳಿಸತ್ಯಶೋಧಕ ಸಮಾಜ - ಬ್ರಾಹ್ಮಣೇತರ ಚಳವಳಿಗೆ 150 ವರ್ಷ

ಸತ್ಯಶೋಧಕ ಸಮಾಜ – ಬ್ರಾಹ್ಮಣೇತರ ಚಳವಳಿಗೆ 150 ವರ್ಷ

- Advertisement -
- Advertisement -

ಅಂಬೇಡ್ಕರ್ ಅವರು ’ಬುದ್ಧ, ಕಬೀರ, ಜೋತಿರಾವ್ ಫುಲೆ ನನ್ನ ಗುರುಗಳು’ ಎನ್ನುತ್ತಾರೆ. ಭಕ್ತಿ ಪಂಥವನ್ನು ನಾಲ್ಕು ಗೋಡೆಗಳಿಂದ ಬಿಡುಗಡೆಗೊಳಿಸಿ ಸಂತೆಯಲ್ಲಿ ಜನರ ನಡುವೆ ತಂದು ಅದಕ್ಕೆ ಆಧ್ಯಾತ್ಮದ ಸ್ಪರ್ಶ ಕೊಟ್ಟ ಕಬೀರ ಸಂತನಾಗಿದ್ದ. ಮನುಷ್ಯರ ಬದುಕನ್ನೇ ಪೊರೆದ ಬುದ್ಧನ ’ನಿನಗೆ ನೀನು ಬೆಳಕಾಗು’ ಬೋಧನೆಯ ನಿಷ್ಠಾವಂತ ವಿದ್ಯಾರ್ಥಿಯಂತಿದ್ದ ಕಬೀರ ’ನನ್ನನ್ನು ನಾನು ಸಂಪೂರ್ಣ ಬಿಚ್ಚಿಕೊಂಡಾಗ ನನಗಿಂತ ನೀಚರಿಲ್ಲ ಎಂಬುದು ಅರಿವಾಯಿತು’ ಅಂತ ಹೇಳಿ ನಮ್ಮನ್ನು ಆತ್ಮವಿಮರ್ಶೆಯ ಒರೆಗೆ ಹಚ್ಚಿದ. ಕಬೀರನ ಸ್ವವಿಮರ್ಶೆಯ ಚುಂಗು ಹಿಡಿದು ಆ ಆಧ್ಯಾತ್ಮಿಕತೆಯನ್ನು ಲೌಕಿಕತೆಗೆ ವಿಸ್ತರಿಸಿದ ಜೋತಿರಾವ್ ಫುಲೆ ನೇರವಾಗಿ ಇಲ್ಲಿನ ರೋಗಗ್ರಸ್ತ ಜಾತಿ ಮನಸ್ಸಿಗೆ ಲಗ್ಗೆ ಹಾಕಿದರು. ಯಥಾಸ್ಥಿತಿ ಕಾಪಾಡಿಕೊಳ್ಳುತ್ತಲೇ ಮೌಢ್ಯಾಚರಣೆಗಳ ವಿರುದ್ಧ ಹೋರಾಡಿದ 19ನೇ ಶತಮಾನದ ಸುಧಾರಣಾವಾದಿಗಳ ಮಿತಿಯನ್ನು ಚೆನ್ನಾಗಿ ಗ್ರಹಿಸಿದ್ದ ಮಹಾತ್ಮ ಫುಲೆ ಇಲ್ಲಿನ ಬ್ರಾಹ್ಮಣೀಕರಣದ ಪ್ರಭಾವದಲ್ಲಿರುವ ಜಾತಿವ್ಯವಸ್ಥೆಯ ವಿರುದ್ಧ ಬಂಡಾಯ ಸಾರಿದರು. ರಾಜಾರಾಮ್ ಮೋಹನ್ ರಾಯ್ ನೇತೃತ್ವದ ಬ್ರಹ್ಮ ಸಮಾಜ, ದಯಾನಂದ ಸರಸ್ವತಿಯ ಆರ್ಯ ಸಮಾಜ ಮತ್ತು ಫುಲೆಯವರ ಸತ್ಯ ಶೋಧಕ ಸಮಾಜ ಮೂರನ್ನೂ ತೌಲನಿಕವಾಗಿ ಅಧ್ಯಯನ ಮಾಡಿದರೆ ಫುಲೆಯವರ ಮಹತ್ವ ಅರಿವಾಗುತ್ತದೆ.

ಮೂರು ಸಮಾಜಗಳ ಉದ್ದೇಶ ಮೌಢ್ಯಾಚರಣೆಯನ್ನು ನಿರಾಕರಿಸುವುದು ಮತ್ತು ಶಿಕ್ಷಣವಾಗಿದ್ದರೂ, ಸಹ ಬ್ರಹ್ಮ ಮತ್ತು ಆರ್ಯ ಸಮಾಜಗಳು ಹಿಂದೂ ಧರ್ಮದೊಳಗಿದ್ದುಕೊಂಡು, ಅಲ್ಲಿನ ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡು ಸುಧಾರಣೆಗಳನ್ನು ಬಯಸಿದ್ದರೆ ಈ ಸಾಂಪ್ರದಾಯಿಕತೆಗೆ ಸಾಮಾಜಿಕ ಪ್ರತಿರೋಧವಾಗಿ ಶೂದ್ರ, ಅತಿ ಶೂದ್ರರ ಸಬಲೀಕರಣ, ವಿಮೋಚನೆಯನ್ನು ತಮ್ಮ ಬದುಕಿನ ಆದ್ಯತೆಯನ್ನಾಗಿಸಿಕೊಂಡ ಫುಲೆ ದಂಪತಿಗಳು ಇಲ್ಲಿನ ಜಾತಿವ್ಯವಸ್ಥೆಯ ಬುಡಕ್ಕೆ ಪೆಟ್ಟುನೀಡಿದರು. ಶೋಷಿತರಿಗೆ ಅಗತ್ಯವಿರುವುದು ಸುಧಾರಣೆಯಲ್ಲ, ಬದಲಿಗೆ ಸಂಕೋಲೆಗಳಿಂದ ಬಿಡುಗಡೆ. ಅಂತಿಮವಾಗಿ ಶೋಷಿತರ ವಿಮೋಚನೆ ನಮ್ಮ ಗುರಿ ಎಂದ ಫುಲೆ ಇದರ ಅನುಷ್ಠಾನಕ್ಕಾಗಿ ಜಾತಿ ವಿರೋಧಿ ಚಳವಳಿಯನ್ನು ಕಟ್ಟಿದರು. ’ನಾವು ದೇವರ ಸಂದೇಶವಾಹಕರು’ ಎಂದು ವಂಚಿಸುತ್ತಿದ್ದ ಬ್ರಾಹ್ಮಣ ಸಮಾಜಕ್ಕೆ ಸತ್ಯಶೋಧಕ ಸಮಾಜದ ಮೂಲಕ ಸವಾಲು ಹಾಕಿದರು. ಪಥ ಶೋದಕರಾಗಿದ್ದ ಫುಲೆ ದಂಪತಿಗಳು ಬ್ರಾಹ್ಮಣರ ವೇದಕ್ಕೆ ಒರೆಯ ಕಟ್ಟಿದರು, ಶಾಸ್ತ್ರಕ್ಕೆ ನಿಗಳವನ್ನಿಕ್ಕಿದರು. ವ್ಯವಸ್ಥೆಯೊಳಗಿನ ಮೌಢ್ಯದ ವಿರುದ್ಧ, ಬ್ರಾಹ್ಮಣಶಾಹಿಯ ಶೋಷಣೆಯ ವಿರುದ್ಧ ರಚನಾತ್ಮಕವಾಗಿ ಸಂಘಟಿತರಾಗುವುದು ಫುಲೆ ದಂಪತಿಗಳಿಗೆ ಜೀವನ್ಮರಣದ ಪ್ರಶ್ನೆಯಾಗಿತ್ತು.

ಅಂಬೇಡ್ಕರ್

1971ರಲ್ಲಿ ಇಪಿಡಬ್ಲ್ಯೂ ಪತ್ರಿಕೆಗೆ ಬರೆದ ’ಜೋತಿರಾವ್ ಫುಲೆ ಮತ್ತು ಭಾರತದಲ್ಲಿ ಸಾಮಾಜಿಕ ಕ್ರಾಂತಿಯ ಸಿದ್ಧಾಂತ’ ಲೇಖನದಲ್ಲಿ ಗೇಲ್ ಒಮ್ವೆಟ್ ’19ನೇ ಶತಮಾನದ ಬ್ರಾಹ್ಮಣ ವಿದ್ವಾಂಸರು ಆಧ್ಯಾತ್ಮ ಮತ್ತು ನೈತಿಕತೆಯ ಕೇಂದ್ರವಾಗಿ ಹಿಂದೂ ಪರಂಪರೆ ಎನ್ನುವ ಸಿದ್ಧಾಂತ ರೂಪಿಸಿದರು. ಇದಕ್ಕೆ ’ಪೂರ್ವದ ನೈತಿಕತೆ ಮತ್ತು ಪಶ್ಚಿಮದ ವಿಜ್ಞಾನ’ವನ್ನು ಕಸಿ ಮಾಡಿದರು. ಆರ್ಯರ ಜನಾಂಗೀಯ ಸಿದ್ಧಾಂತವನ್ನು ಒಪ್ಪಿಕೊಂಡರು…. ವರ್ಣ ಮತ್ತು ಜನಾಂಗಕ್ಕೆ ಸಂಬಂಧ ಕಲ್ಪಿಸಿ ಜಾತಿ ಶ್ರೇಣೀಕರಣಕ್ಕೆ ವೈಜ್ಞಾನಿಕ ಸಮರ್ಥನೆ ಕೊಟ್ಟುಕೊಂಡರು’ ಎಂದು ಬರೆಯುತ್ತಾರೆ. 19ನೆ ಶತಮಾನದ ಆರಂಭದಲ್ಲಿ ಮಹಾರಾಷ್ಟ್ರದ ’ಸಾಮಾಜಿಕ ಸುಧಾರಣೆ’ ಚಳವಳಿಯ ಮುಂಚೂಣಿಯಲ್ಲಿದ್ದವರು ಗೋವಿಂದ ರಾನಡೆ, ಕಾಶೀನಾಥ ತ್ರಿಂಬಕ್, ಗೋಪಾಲ ಭಂಡಾರ್ಕರ್‌ರಂತಹ ಬ್ರಾಹ್ಮಣರು. ಪ್ರೊ. ಸುಬೆ ಸಿಂಗ್ ಅವರು ’ರಾನಡೆಯವರು ಸಮಾಜದ ವಿರುದ್ಧ ಬಂಡಾಯವೇಳುವುದನ್ನು ವಿರೋಧಿಸುತ್ತಿದ್ದರು. ಇದು ಸುಧಾರಣೆಗೆ ಒಳಿತಿಗಿಂತ ಕೆಡಕನ್ನುಂಟು ಮಾಡುತ್ತದೆಂದು ನಂಬಿದ್ದರು. ಮೇಲ್ಜಾತಿಗಳ ಹೆಣ್ಣುಮಕ್ಕಳಿಗೆ ಶಿಕ್ಷಣ, ವಿಧವಾ ವಿವಾಹ ಮುಂತಾದವುಗಳು ಇವರ ಆದ್ಯತೆಗಳಾಗಿದ್ದವು’ ಎಂದು ಬರೆಯುತ್ತಾರೆ. ಆದರೆ ಜಾತಿ ಶ್ರೇಣೀಕರಣವನ್ನು ಪ್ರಶ್ನಿಸಿದ ಫುಲೆಯವರು ತಳ ಸಮುದಾಯಗಳು, ವಂಚಿತರ ಪರವಾಗಿ ಬ್ರಾಹ್ಮಣೇತರ ಚಳವಳಿಯನ್ನು ರೂಪಿಸಿದರು. ತಮ್ಮ ’ಗುಲಾಮಗಿರಿ’ ಪುಸ್ತಕ ಪ್ರಕಟಗೊಂಡ ನಾಲ್ಕು ತಿಂಗಳ ನಂತರ 24, ಸೆಪ್ಟೆಂಬರ್ 1873ರಂದು ’ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು.

ಫುಲೆ ದಂಪತಿಗಳ ಸತ್ಯ ಶೋಧನೆಯು ಆರ್ಯ, ವೇದ ಸಂಸ್ಕೃತಿಯನ್ನು ತಿರಸ್ಕರಿಸಿತು. ಶೂದ್ರ, ಅತಿ ಶೂದ್ರರ ಮೇಲಿನ ಬ್ರಾಹ್ಮಣರ ಶೋಷಣೆಯನ್ನು ಕೊನೆಗೊಳಿಸುವುದು ಈ ಸಮಾಜದ ಮುಖ್ಯ ಉದ್ದೇಶವಾಗಿತ್ತು. ಈ ಪರಿವರ್ತನೆಗೆ ತಳ ಸಮುದಾಯಗಳನ್ನು ಸಜ್ಜುಗೊಳಿಸಲು ಪ್ರಾಥಮಿಕ ಅಗತ್ಯವಾದ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವುದು ಇವರ ಮುಖ್ಯ ಗುರಿಯಾಗಿತ್ತು. ಬ್ರಾಹ್ಮಣೀಕರಣವನ್ನು ಕೊನೆಗೊಳಿಸಬೇಕೆಂದರೆ ಅದರ ಎಲ್ಲಾ ಬಗೆಯ ಮೌಢ್ಯ ಆಚರಣೆಗಳಿಗೆ ಸೆಡ್ಡುಹೊಡೆದು ಎಲ್ಲರನ್ನೂ ಒಳಗೊಳ್ಳುವ ಪರ್ಯಾಯ ಮಾದರಿಗಳನ್ನು ಕಟ್ಟುವುದು ಸಹ ಸತ್ಯಶೋಧನ ಸಮಾಜದ ಮುಖ್ಯ ಪ್ರಣಾಳಿಕೆಯಾಗಿತ್ತು. ಗೃಹ ಕೈಗಾರಿಕೆಗೆ ಉತ್ತೇಜನ ನೀಡುವುದರ ಮೂಲಕ ವಂಚಿತ ಸಮುದಾಯಗಳ ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಈ ಸಮಾಜದ ಆಶಯವಾಗಿತ್ತು. ಈ ಸತ್ಯಶೋಧಕ ಸದಸ್ಯರಿಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರವಿತ್ತು. ಸಮಾಜದ ಬಗ್ಗೆ ಪತ್ರಕರ್ತ ಅನಿಲ್ ವರ್ಗೀಸ್ ’ಬ್ರಾಹ್ಮಣ ವಿರೋಧಿ ಚಳವಳಿಯನ್ನು ಎಷ್ಟು ಹಂತದವರೆಗೆ ಮುಂದುವರಿಸಬೇಕು? ಬ್ರಿಟಿಷರ ಆಡಳಿತದ ವಿರುದ್ಧ ಟೀಕೆಯು ಶರತ್ತುಬದ್ಧವಾಗಿರಬೇಕೆ? ಮುಂತಾದ ವಿಚಾರಗಳ ಕುರಿತು ಭಿನ್ನಾಭಿಪ್ರಾಯಗಳಿದ್ದವು. ಆದರೆ ಎಲ್ಲವೂ ಚರ್ಚೆಯಾಗುತ್ತಿದ್ದವು…. ಹಳ್ಳಿಗಳಲ್ಲಿ ಬ್ರಾಹ್ಮಣ ಪುರೋಹಿತರಿಗೆ ಬಹಿಷ್ಕಾರ, ಶೂದ್ರ ವಿದ್ಯಾರ್ಥಿಗಳಿಗೆ ಸ್ಕಾಲರ್ಶ್ಶ್‌ಪ್ ಯೋಜನೆ ಮುಂತಾದ ಚಳವಳಿಗಳ ಮೂಲಕ ಗ್ರಾಮೀಣ ಭಾಗದಲ್ಲಿ ಸತ್ಯಶೋಧಕ ಚಳವಳಿ ಪರಿಣಾಮಕಾರಿಯಾಗಿತ್ತು’ ಎಂದು ಬರೆಯುತ್ತಾರೆ.

ಸ್ನೇಹಶೀಶ್ ದಾಸ್ ಅವರು ’ಸತ್ಯಶೋಧಕರು ತಲೆಯ ಮೇಲೆ ಪೇಟ, ಧೋತಿ, ಭುಜದ ಮೇಲೆ ಶಲ್ಯ ಧರಿಸುತ್ತಿದ್ದರು. ಕೈಯಲ್ಲಿ ಡೋಲು ಹಿಡಿದಿರುತ್ತಿದ್ದರು. ಆ ಕಾಲದ ಮೇಲ್ಜಾತಿಗಳು ಮಾತ್ರ ತೊಡುತ್ತಿದ್ದ ಈ ಧಿರಿಸನ್ನು ಕಾರ್ಯಕರ್ತರು ಧರಿಸುವುದರ ಮೂಲಕ ಸಾರ್ವತ್ರೀಕರಣಗೊಳಿಸುತ್ತಿದ್ದರು’ ಎಂದು ಬರೆಯುತ್ತಾರೆ.

ಬುದ್ಧ

ಜೋತಿರಾವ್ ಫುಲೆಯವರು ಸತ್ಯಶೋಧಕ ಸಮಾಜದ ಮೊದಲ ಅಧ್ಯಕ್ಷ ಮತ್ತು ಖಜಾಂಚಿಯಾಗಿ ಮತ್ತು ನಾರಾಯಣ ರಾವ್ ಗೋವಿಂದರಾವ್ ಕಡಾಲಕ್ ಮೊದಲ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸಾವಿತ್ರಿಬಾಯಿ ಫುಲೆ, ಕೃಷ್ಣರಾವ್ ಬಾಲೇಕರ್, ನಾರಾಯಣ ಮೇಘಾಜಿ ಲೋಖಂಡೆ, ಬಾವು ಕೊಂಡಜ್ಜಿ ಪಾಟೀಲ, ಜಯ ಕರಾಡಿ ಲಿಂಗು, ಜ್ಞಾನಬಾ ಕೃಷ್ಣಾಜಿ ಸಾಸನೆ, ರಾಜು ಬಾಬಾಜಿ ಮುಂತಾದವರು ಸ್ಥಾಪಕ ಸದಸ್ಯರಾಗಿದ್ದರು. ಮಹರ್, ಮಾಂಗ್, ಮುಸ್ಲಿಂ, ಜ್ಯೂ ಒಳಗೊಂಡಂತೆ ಎಲ್ಲಾ ಬ್ರಾಹ್ಮಣೇತರರು ಇದರ ಸದಸ್ಯರಾಗಿದ್ದರು. 1876ರ ವೇಳೆಗೆ ಸತ್ಯಶೋಧಕ ಸಮಾಜದಲ್ಲಿ 316 ಸದಸ್ಯರಿದ್ದರು. ಸತ್ಯಶೋಧಕ ಸಮಾಜದ ದನಿಯಾಗಿ ’ದೀನಬಂಧು’ ಪತ್ರಿಕೆ ಆರಂಭಿಸಲಾಯಿತು. ಭಾಲೇಕರ್ ಇದರ ಸ್ಥಾಪಕ ಸಂಪಾದಕರಾಗಿದ್ದರು. ನಂತರ ಲೋಖಂಡೆ ಇದರ ಸಂಪಾದಕರಾದರು. ಸತ್ಯಶೋಧಕ ಸಮಾಜದ ಸಂಘಟನೆಗೆ ಆ ಕಾಲದ ಕುಣುಬಿ, ಮಾಲಿ, ಕೋಲಿ ಮುಂತಾದ ಮರಾಠ ರೈತ ಸಮುದಾಯಗಳ ಬೆಂಬಲ ದೊರಕಿತು.

ಸೋನಾಲಿ ಕಾಳೆಯವರು “ಸತ್ಯಶೋಧಕ ತತ್ವದಲ್ಲಿ ವರ್ಗ ಸಂಘರ್ಷದ ಕುರಿತಾಗಿ ಮಾಹಿತಿಯ ಕೊರತೆಯಿದ್ದರೂ ಸಹ ಆರ್ಥಿಕ ಶೋಷಣೆ ಕುರಿತು ಅರಿವಿತ್ತು. ಕೂಲಿ ಕಾರ್ಮಿಕರ ಬವಣೆಗಳ ಕುರಿತು ಸೂಕ್ಷ್ಮ ಸಂವೇದನೆ ಹೊಂದಿದ್ದರು. ಈ ಸಮಾಜದ ಕಾರ್ಯಕರ್ತರು ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರ ಜೊತೆ ಕೆಲಸ ಮಾಡಿದರು. 1885ರಲ್ಲಿ ಜುನ್ನಾರ್ ಭಾಗದಲ್ಲಿ ಸತ್ಯಶೋಧಕ ಕಾರ್ಯಕರ್ತರು ಸಾವಿರ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರ, ಕುಶಲಕರ್ಮಿಗಳ ಪ್ರತಿಭಟನೆ ಆಯೋಜಿಸಿದ್ದರು. ಇವರು ಬ್ರಾಹ್ಮಣರು, ಮೇಲ್ಜಾತಿಗಳ ಜಮೀನುಗಳಲ್ಲಿ ಕೆಲಸ ಮಾಡಲು ನಿರಾಕರಿಸಿದರು, ಕುಶಲಕರ್ಮಿಗಳು ಬ್ರಾಹ್ಮಣರಿಗೆ ಸೇವೆ ಒದಗಿಸಲು ನಿರಾಕರಿಸಿದರು, ನಂತರ ಇದು ಕೊಂಕಣ ಮತ್ತು ಘಟ್ಟ ಪ್ರದೇಶಗಳಿಗೂ ಹಬ್ಬಿಕೊಂಡಿತು. ಮೂರು ವರ್ಷಗಳ ಕಾಲ ಪ್ರತಿಭಟನೆ ಮುಂದುವರಿಯಿತು. ತಮ್ಮ ನೆನಪಿನ ಅಂಗಳದಿಂದ ಮಾತನಾಡುತ್ತಾ ಗೋವಿಂದ ಬಾವು ಪಾಟೀಲ್ ಅವರು ’ಬ್ರಾಹ್ಮಣ ಪುರೋಹಿತರು ತಮ್ಮ ಶುಲ್ಕವನ್ನು ಎಂಟು ಆಣೆಗೆ ಇಳಿಸಿದರು, ಜಮೀನ್ದಾರರು 20ರಷ್ಟು ಕಡಿಮೆ ಪ್ರಮಾಣದಲ್ಲಿ ತಮ್ಮ ಭೂಮಿಯನ್ನು ಬಾಡಿಗೆಗೆ ಕೊಟ್ಟರೆಂದು’ ಹೇಳುತ್ತಾರೆ. 1880ರಲ್ಲಿ ಬಾಂಬೆಯಲ್ಲಿ ಲೋಖಂಡೆಯವರು ಕೈಮಗ್ಗ ನೇಕಾರರ ಸಂಘವನ್ನು ಸ್ಥಾಪಿಸಿದರು. ಕರಪತ್ರ, ಭಾಷಣಗಳ ಮೂಲಕ ಸತ್ಯಶೋಧಕ ಕಾರ್ಯಕರ್ತರು ವಂಚಿತ ಸಮುದಾಯಗಳನ್ನು ಸಂಘಟಿಸಿದರು. ಇದರ ಪರಿಣಾಮವಾಗಿ ಭಾನುವಾರದ ರಜಾ ದಿನ, ಅರ್ಧ ಗಂಟೆ ಊಟದ ವಿರಾಮ, ಸಮಯಕ್ಕೆ ಸರಿಯಾಗಿ ವೇತನ ನೀಡುವುದು ಇತ್ಯಾದಿ ಬದಲಾವಣೆಗಳು ಜಾರಿಗೆ ಬಂದಿತು” ಎಂದು ಬರೆಯುತ್ತಾರೆ. ಧನಂಜಯ ಕೀರ್ ಹೇಳಿದಂತೆ ಇಪ್ಪತ್ತನೇ ಶತಮಾನದ ಆರಂಭದಲ್ಲಿನ ಕಾರ್ಮಿಕ ಚಳವಳಿಗೆ ಸತ್ಯಶೋಧಕ ಸಮಾಜವು ಚಿಮ್ಮು ಹಲಗೆಯಾಗಿತ್ತು.

ಜೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆಯವರ ನಿಧನದ ನಂತರವೂ ’ಸತ್ಯಶೋಧಕ ಸಮಾಜ’ದ ಕಾರ್ಯ ಚಟುವಟಿಕೆ ಮುಂದುವರಿಯಿತು. ಶಾಹು ಮಹಾರಾಜ್, ನಂತರ ಬಾಬುರಾವ್ ಪಾಟೀಲ್, ಕೇಶವರಾವ್ ಜೆಢೆ ಮುಂತಾದವರು ಇದನ್ನು ಮುಂದುವರಿಸಿದರು. 1911ರಲ್ಲಿ ರಾಮಯ್ಯ ಅಯ್ಯವರು ಅವರ ಅಧ್ಯಕ್ಷತೆಯಲ್ಲಿ ಸತ್ಯಶೋಧಕ ಸಮಾವೇಶ ಹಮ್ಮಿಕೊಳ್ಳಲಾಯಿತು. ಭಾಸ್ಕರರಾವ್ ಜಾಧವ್, ಮುಕುಂದರಾವ್ ಪಾಟೀಲ್, ದಿನಕರ್‌ರಾವ್ ಜಾವಲ್ಕರ್ ಈ ಸಮಾಜದ ಎರಡನೇ ತಲೆಮಾರಿನ ಮುಖಂಡರಾಗಿದ್ದರು.

ಕಬೀರ

ಬ್ರಾಹ್ಮಣರ ಸನಾತನ ಪದ್ಧತಿ ಪ್ರಧಾನವಾಗಿರುವ ಸಾಂಪ್ರದಾಯಿಕ ಮದುವೆಯನ್ನು ತಿರಸ್ಕರಿಸಿ ಪುರೋಹಿತರಿಲ್ಲದ, ಮಂತ್ರಘೋಷಣೆಗಳಿಲ್ಲದ, ವರದಕ್ಷಿಣೆಯಿಲ್ಲದ ’ಸತ್ಯಶೋಧಕ ಮದುವೆ’ ಅತ್ಯಂತ ವಿಶಿಷ್ಟವಾಗಿತ್ತು. 25, ಡಿಸೆಂಬರ್ 1873ರಂದು ಮೊದಲ ’ಸತ್ಯಶೋಧಕ ಮದುವೆ’ ಆಯೋಜಿಸಲಾಗಿತ್ತು ಫ್ರೊ. ಹರಿ ನರ್ಕೆಯವರು “ಸಾವಿತ್ರಿಬಾಯಿ ಫುಲೆಯವರ ಸ್ನೇಹಿತೆ ಬಜುಬಾಯಿ ಜ್ಞಾನೋಬ ನಿಂಬಾರ್ಕರ್ ಅವರ ಮಗಳು ರಾಧ ಮತ್ತು ಸಾಮಾಜಿಕ ಕಾರ್ಯಕರ್ತ ಸೀತಾರಾಂ ಜಬಾಜಿ ಅಲ್ಹತ್ ಅವರ ಮದುವೆ ಮೊದಲ ಸತ್ಯಶೋಧಕ ಮದುವೆ. ಈ ಚಾರಿತ್ರಿಕ ಮದುವೆಯ ಖರ್ಚುವೆಚ್ಚವನ್ನು ಸಾವಿತ್ರಿಬಾಯಿ ವಹಿಸಿಕೊಂಡಿದ್ದರು.. ಬ್ರಾಹ್ಮಣರು, ಪುರೋಹಿತರು ಈ ಮದುವೆಗಳನ್ನು ವಿರೋಧಿಸಿದರು, ಕೋರ್ಟಗೆ ಸಹ ಹೋದರು.. ಫುಲೆ ದಂಪತಿಗಳು 4 ಫೆಬ್ರವರಿ 1889ರಂದು ತಮ್ಮ ದತ್ತು ಮಗನ ಮದುವೆಯನ್ನು ಸಹ ಇದೇ ಮಾದರಿಯಲ್ಲಿ ನೆರೆವೇರಿಸಿದರು” ಎಂದು ಬರೆಯುತ್ತಾರೆ.

’ಸತ್ಯಶೋಧಕ ಮದುವೆ’ಗಾಗಿ ಫುಲೆ ದಂಪತಿಗಳು ರಚಿಸಿದ “ಮದುವೆಯ ಹಾಡು” (ಮಂಗಲಾಷ್ಟಕ) ವಿವರಗಳು ಹೀಗಿವೆ

ಮದುಮಗ: ದೇವರ ಕಾನೂನಿನಂತೆ ನಿಮ್ಮ ಮನೆಯ ವಿಧಿವಿಧಾನಗಳನ್ನು ಅನುಸರಿಸು.

ಸತ್ಯ ಎಲ್ಲದಕ್ಕಿಂತಲೂ ದೊಡ್ಡದು. ಅದನ್ನು ಗೌರವಿಸು

ಅನಕ್ಷರಸ್ತರಿಗೆ ಪಾಠ ಕಲಿಸು. ಬೋಧಿಸು. ಅವರಿಗೆ ಜ್ಞಾನವನ್ನು ಕೊಡು

ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಾನು ವಚನ ನೀಡುತ್ತೇನೆ

ಮದುಮಗಳು: ನಿನ್ನ ಮಾತುಗಳು ಚೆನ್ನಾಗಿವೆ, ನಿಮ್ಮ ವರ್ತನೆ ನಮಗೆ ಹಿಡಿಸಿದೆ. ಮಹಿಳೆಯರಾದ ನಾವೆಲ್ಲಾ ಶೋಷಿತರು. ನನ್ನನ್ನು ಹೇಗೆ ಜೊತೆಯಾಗಿ ಕರೆದೊಯ್ಯುವೆ?

ನಮಗೆ ಸ್ವಾತಂತ್ರ್ಯದ ಅನುಭವ ದೊರಕಿದೆ. ನಾವು ಆತ್ಮಗೌರವದಿಂದ ಬದುಕಲು ಇಚ್ಛಿಸುತ್ತೇವೆ

ಇದಕ್ಕಾಗಿ ಮಹಿಳೆಯರಿಗೆ ನೀವು ಹಕ್ಕನ್ನು ನೀಡುತ್ತೀರ? ವಚನ ಕೊಡಿ.

ಮದುಮಗ: ನಾನು ಮಹಿಳೆಯರ ಹಕ್ಕಿಗಾಗಿ ಹೋರಾಡುತ್ತೇನೆ.

ಯಾವುದೇ ಬೆಲೆ ತೆತ್ತಾದರೂ ಸರಿಯೇ;

ಎಲ್ಲಾ ಮಹಿಳೆಯರನ್ನು ಗೌರವಿಸುತ್ತೇನೆ.

ನನ್ನ ಕರ್ತವ್ಯದ ಭಾಗವಾಗಿ ಇದನ್ನು ಮಾಡುತ್ತೇನೆ.

ಮದುಮಗಳು: ನಿಮ್ಮ ಮಾತುಗಳ ಮೇಲೆ ಭರವಸೆಯನ್ನು ಇಟ್ಟು ನಾನು ನಿಮ್ಮನ್ನು ಪತಿಯೆಂದು ಸ್ವೀಕರಿಸುತ್ತೇನೆ.

ನಾವಿಬ್ಬರೂ ಒಟ್ಟಾಗಿ ಮಹಿಳೆಯರ ಹಕ್ಕಿಗಾಗಿ, ಸಬಲೀಕರಣಕ್ಕಾಗಿ ಹೋರಾಡೋಣ.

ಸುಲಗ್ನಾ ಸಾವಧಾನ..

ಉಪಸಂಹಾರ

1885ರ ತಮ್ಮ ಮೊದಲ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷವು ಬ್ರಾಹ್ಮಣರಿಗೆ, ಮೇಲ್ಜಾತಿಗಳಿಗೆ ಪ್ರಾಶಸ್ತ್ಯ ನೀಡಿತು. ಅಲ್ಲಿಯವರೆಗೂ ಶೂದ್ರರ ಮರಾಠಿ ಅಸ್ಮಿತೆಯ ಭಾಗವಾಗಿದ್ದ ಶಿವಾಜಿಯನ್ನು ಕಾಂಗ್ರೆಸ್‌ನ ಟಿಳಕರು ತಮ್ಮ ಬ್ರಾಹ್ಮಣೀಕರಣದಲ್ಲಿ ಜೀರ್ಣಿಸಿಕೊಂಡರು. ಆಗ ಲೋಖಂಡೆ ಸಂಪಾದಕತ್ವದ ದೀನಬಂಧು ಪತ್ರಿಕೆಯಲ್ಲಿ ಈ ಕುರಿತು ಸರಣಿ ಲೇಖನಗಳು, ಪತ್ರಗಳು ಪ್ರಕಟಗೊಂಡವು. ಸತ್ಯಶೋಧಕ ಕಾರ್ಯಕರ್ತನಾಗಿದ್ದ ಧೋಂಡಿರಾಂ ನಾಮದೇವ ಕುಂಬಾರ “ನಂಬಿಕೆಯಿಲ್ಲದ ಈ ಜನ ಶಿವಾಜಿಯನ್ನು ಹೇಗೆ ಸಂಭ್ರಮಿಸಲು ಸಾಧ್ಯ? ಇವರು ಬೇರೆಯವರಿಗೆ ಜ್ಞಾನವನ್ನು ವರ್ಗಾಯಿಸುವುದಿಲ್ಲ, ಯಾರಿಗೂ ಮಾಹಿತಿ ಕೊಡದೆ ಛತ್ರಪತಿಯನ್ನು ತಮ್ಮೊಳಗೆ ಬಚ್ಚಿಟ್ಟುಕೊಂಡರು.. ಶಿವಾಜಿ ವಂಶಸ್ಥರನ್ನು ನಾಶ ಮಾಡಿದರು.. ಆತನ ಘನತೆಯ ಮೇಲೆ ದಾಳಿ ಮಾಡಿದರು…” ಎನ್ನುವ ಸಾಲುಗಳನ್ನು ಬರೆಯುತ್ತಾರೆ. ತನ್ನ ಪತ್ರದ ಕೊನೆಗೆ “ನನ್ನ ಬ್ರಾಹ್ಮಣೇತರ ಸಹೋದರರೇ ಈ ರೋಚಕತೆಗೆ ಬಲಿಯಾಗಿ ದೇಶದ್ರೋಹಿಗಳಾಗಬೇಡಿ” ಎಂದು ಬರೆಯುತ್ತಾರೆ. (ರೊಸಲಿಂಡ್ ಒ ಹನ್ಲನ್‌ರ ’ಜಾತಿ, ಸಂಘರ್ಷ ಮತ್ತು ಸಿದ್ಧಾಂತ: ಮಹಾತ್ಮ ಜೋತಿರಾವ್ ಫುಲೆ ಮತ್ತು 19ನೆ ಶತಮಾನದಲ್ಲಿ ಕೆಳಜಾತಿಗಳ ಪ್ರತಿಭಟನೆ’ ಪುಸ್ತಕದ ಭಾಗ.)

ಕಾಲಚಕ್ರವು ತಿರುಗುತ್ತಲೇ ಇರುತ್ತದೆ. ಆಗಿನ ಟಿಳಕ, ಮಾಳವೀಯರ ಮುಂದುವರಿಕೆಯಾಗಿ ಇಂದು ಆರ್‌ಎಸ್‌ಎಸ್ ಪೇಶ್ವೆಗಳ ಆಡಳಿತವನ್ನು ತನ್ನ ಆದರ್ಶವಾಗಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಚಿತ್ಪಾವನ್ ಬ್ರಾಹ್ಮಣರ ಪ್ರಭಾವದಲ್ಲಿರುವ ಈ ಹಿಂದುತ್ವ ಸಂಘಟನೆಯು ಪೇಶ್ವೆಗಳ ಶತ್ರು ಶಿವಾಜಿಯನ್ನು ಸಹ ತಮ್ಮೊಳಗೆ ಜೀರ್ಣಿಸಿಕೊಂಡಿದ್ದಾರೆ. ಸಂಘ ಪರಿವಾರದ ಅಂಗಳದಲ್ಲಿ ಬೆಳೆದ ದಲಿತ ಸಮುದಾಯದ ರಾಮನಾಥ ಕೋವಿಂದ, ಮುರ್ಮು ಬಿಜೆಪಿ ಪಕ್ಷದ ರಾಜಕೀಯ ದಾಳವಾಗಿ ಬಳಕೆಗೊಂಡು ರಾಷ್ಟ್ರಪತಿಗಳಾಗಿ ಆಯ್ಕೆಯಾಗುತ್ತಾರೆ. ಬಿಜೆಪಿ ಪಕ್ಷವು ಈ ಹಿಂದುತ್ವ-ದಲಿತರನ್ನು ಮುಂದಿಟ್ಟುಕೊಂಡು ಅಂಬೇಡ್ಕರವಾದಿ ದಲಿತ ಸಂಘಟನೆಗಳನ್ನು ಬಗ್ಗುಬಡಿಯಲು ಪ್ರಯತ್ನಿಸುತ್ತದೆ. ’ಬ್ರಾಹ್ಮಣ್ಯ-ಫ್ಯೂಡಲಿಸಂ’ನ ಯಜಮಾನ್ಯವು ’ಸಬಲ್ಟ್ರಾನ್ ವರ್ಗ’ಗಳನ್ನು ’ಗೆಲ್ಲುವುದರ’ ಮೂಲಕ ಅವರ ಮೇಲೆ ಸಮಾಜೋ-ಸಾಂಸ್ಕೃತಿಕ-ರಾಜಕೀಯ ಅಧಿಕಾರ ಸ್ಥಾಪಿಸುವುದು ಇಂದಿನ ಸಾಂಸ್ಕೃತಿಕ ರಾಜಕಾರಣ ಎಂದು ಕರೆಯಬಹುದು.

ಆದರೆ ಈ ಚಕ್ರವ್ಯೂಹದಿಂದ ಹೊರಬರಲು ಅಗತ್ಯವಾದ ಕಾರ್ಯ ಯೋಜನೆಗಳಿಗೆ ಮಾದರಿಯಾಗಿ ’ಸತ್ಯಶೋಧಕ ಸಮಾಜ’ದ ಲೆಗಸಿ ನಮ್ಮ ಮುಂದಿದೆ. ಅಂಚಿನಲ್ಲಿರುವ ತಳಸಮುದಾಯಗಳು ಕೇಂದ್ರ ಸ್ಥಾನಕ್ಕೆ ತರಲು ಪ್ರಯತ್ನಿಸಿದ ಈ ಸಮಾಜದ ಕಾರ್ಯ ಚಟುವಟಿಕೆಗಳನ್ನು ಪ್ರಸ್ತುತ ಸಂದರ್ಭಕ್ಕೆ ಒಳಗೊಳ್ಳಲು ಮತ್ತೆ ಮತ್ತೆ ಮರುಚಿಂತನೆ ಮಾಡಬೇಕಿದೆ. ಫುಲೆಯವರ ಸತ್ಯಶೋಧಕ ಸಮಾಜದ ಮಾದರಿಯನ್ನು ವರ್ತಮಾನಕ್ಕೆ ಸೂಕ್ತವಾಗಿ ಅಳವಡಿಸಿಕೊಂಡು ಸಾಮಾಜಿಕ-ಸಾಂಸ್ಕೃತಿಕ ಜೀವನದ ಹಕ್ಕಿನಿಂದ ವಂಚಿತರಾಗಿರುವ ತಳಸಮುದಾಯಗಳ ಬದುಕನ್ನು ಮರುರೂಪಿಸಬೇಕಾಗಿದೆ. ಸಸ್ಯಾಹಾರದ ಪಾವಿತ್ರ್ಯತೆ, ಉಪವಾಸ ಎನ್ನುವ ವ್ರತ, ಧಾರ್ಮಿಕರಣಗೊಂಡಿರುವ ಯೋಗ, ಬ್ರಹ್ಮಚರ್ಯ, ಶೋಭಾಯಾತ್ರೆ, ಖಾಕಿ ಚೆಡ್ಡಿ- ಕೇಸರಿ ಬಾವುಟ ಇತ್ಯಾದಿಗಳ ಈ ಬ್ರಾಹ್ಮಣ, ವೈದಿಕ ಚಹರೆಗಳನ್ನು, ಪುರೋಹಿತಶಾಹಿ ಆಚರಣೆಗಳನ್ನು ಸತ್ಯಶೋಧಕ ಸಮಾಜದ ಪ್ರಣಾಳಿಕೆಯ ಮೂಲಕ ಹಿಮ್ಮೆಟ್ಟಿಸುವುದೇ ಇಂದಿನ ಸಮಾಜೋ-ಸಾಂಸ್ಕೃತಿಕ ರಾಜಕಾರಣ.

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ವಿಪರೀತದ ಬೆಳಗು ಫುಲೆ ಮಾರ್ಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...