Homeಕರ್ನಾಟಕಘೋಷಿತ ಗ್ಯಾರಂಟಿಗಳು ಮತ್ತು ಉದ್ದೇಶಿತ ಹೊಸ ಆರ್ಥಿಕ ಮಾದರಿಯ ನಡುವೆ..

ಘೋಷಿತ ಗ್ಯಾರಂಟಿಗಳು ಮತ್ತು ಉದ್ದೇಶಿತ ಹೊಸ ಆರ್ಥಿಕ ಮಾದರಿಯ ನಡುವೆ..

- Advertisement -
- Advertisement -

ಹೊಸ ಸರಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಈ ಬಜೆಟ್ ಬಗ್ಗೆ ದೇಶದಾದ್ಯಂತ ಅದಮ್ಯ ಕುತೂಹಲವಿತ್ತು. ರಾಜ್ಯವೊಂದರ ಬಜೆಟ್ ಕುರಿತಾಗಿ ಈ ರೀತಿ ವ್ಯಾಪಕ ಕುತೂಹಲ ಕಂಡದ್ದು ದೇಶದ ಚರಿತ್ರೆಯಲ್ಲೇ ಇದುವೇ ಮೊದಲಿರಬೇಕು. ಅಷ್ಟೇ ಅಲ್ಲ. ಅಭೂತಪೂರ್ವ ಎನ್ನುವಂತೆ ಬಜೆಟ್ ಮಂಡಿಸಲಿರುವ ದಿನ ರಾಜ್ಯ ಸರಕಾರ ದಿನಪತ್ರಿಕೆಗಳಲ್ಲಿ ಬಜೆಟ್ ಬಗ್ಗೆ ಮುಖಪುಟ ಜಾಹೀರಾತೊಂದನ್ನು ಪ್ರಕಟಿಸಿತು. ಅದರಲ್ಲಿ ಈ ಬಜೆಟ್‌ನ ಮೂಲಕ ರಾಜ್ಯದಲ್ಲಿ ಹೊಸದೊಂದು ಅಭಿವೃದ್ಧಿಯ ಮಾದರಿಯನ್ನು ಹುಟ್ಟುಹಾಕುವುದಾಗಿ ಹೇಳಿಕೊಂಡಿತು.

ಬಜೆಟ್ ಕುರಿತಾಗಿ ಎದ್ದ ಕುತೂಹಲಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಪ್ರಕಟಿಸಿದ ಐದು ಗ್ಯಾರಂಟಿ ಯೋಜನೆಗಳು. ಕಾಂಗ್ರೆಸ್ ಭಾರೀ ಗೆಲುವು ಸಾಧಿಸಿದ್ದರಲ್ಲಿ ಈ ಭರವಸೆಗಳು ಎಷ್ಟು ಕೆಲಸ ಮಾಡಿದವು ಎನ್ನುವುದನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಆದರೆ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಕಾಂಗ್ರೆಸ್ ಸರಕಾರವನ್ನು ಕಾಡಿದ ಪ್ರಶ್ನೆ ಎಂದರೆ ಈ ಯೋಜನೆಗಳ ಅನುಷ್ಠಾನಕ್ಕೆ ಹಣ ಹೊಂದಿಸುವುದು ಹೇಗೆ ಎನ್ನುವುದು. ಬಜೆಟ್‌ನಲ್ಲಿ ಇದಕ್ಕೊಂದು ಉತ್ತರ ಸಿಗಲೇಬೇಕಿತ್ತು. ನಾಡಿನ ಕುತೂಹಲ ಇದ್ದದ್ದು ಈ ಉತ್ತರದ ಬಗ್ಗೆಯೇ ಹೊರತು ಇನ್ನೇನಲ್ಲ.

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸರಕಾರಕ್ಕೆ 52,000 ಕೋಟಿ ರೂಪಾಯಿಗಳು ಬೇಕು ಎಂದು ಅಧಿಕೃತವಾಗಿ ಬಜೆಟ್ ಹೇಳಿತು. ಈ ಆರ್ಥಿಕ ವರ್ಷದಲ್ಲಿ ಇನ್ನು ಉಳಿದಿರುವುದು ಎಂಟು ತಿಂಗಳುಗಳು. ಈ ಎಂಟೂವರೆ ತಿಂಗಳುಗಳ ಅವಧಿಯಲ್ಲಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಬೇಕಾದ ಮೊತ್ತ ಸುಮಾರು ಮೂವತ್ತರಿಂದ ಮೂವತ್ತೈದು ಕೋಟಿ ರೂಪಾಯಿಗಳು. ಕೆಲ ಹೊಸ ತೆರಿಗೆಗಳನ್ನು ಹೇರುವ ಮೂಲಕ, ಕೆಲ ಇಲಾಖೆಗಳಿಗೆ ಒಂದಷ್ಟು ಅನುದಾನ ಕಡಿತಗೊಳಿಸುವ ಮೂಲಕ, ಇನ್ನಷ್ಟೇ ವಿವರಿಸಬೇಕಿರುವ ಇನ್ನೊಂದಷ್ಟು ಮಿತವ್ಯಯ ಕ್ರಮಗಳ ಮೂಲಕ ಈ ವರ್ಷದ ಮಟ್ಟಿಗೆ ಹೊಸ ಯೋಜನೆಗಳ ಅನುಷ್ಠಾನಕ್ಕೆ ಬೇಕಾದಷ್ಟು ಹಣ ಹೊಂದಿಸಲಾಗುವುದು ಎಂದು ಬಜೆಟ್ ಹೇಳಿದೆ. ಹಾಗಂತ ವಿರೋಧ ಪಕ್ಷಗಳು ಮತ್ತು ಮೇಲ್ಜಾತಿ-ಮಧ್ಯಮ ವರ್ಗದ ಮಂದಿ ಆಕಾಶ ತಲೆಮೇಲೆ ಬಿದ್ದುಹೋಗಲಿದೆ ಎಂದು ಆಡುತ್ತಿದ್ದಂತೆ ಏನೂ ಆಗಿಲ್ಲ; ರಾಜ್ಯವೂ ದಿವಾಳಿಯಾಗುವ ಹಂತಕ್ಕೆ ಬಂದು ನಿಂತ ಹಾಗೆ ಕಾಣಿಸುತ್ತಿಲ್ಲ; ಜನರ ಮೇಲೆ ಬಹುದೊಡ್ಡ ತೆರಿಗೆಯ ಹೊರೆ ಬೀಳಲಿಲ್ಲ; ’ಅಭಿವೃದ್ಧಿ’ಗೆ ನೀಡಬೇಕಾಗಿದ್ದ ಹಣವನ್ನೆಲ್ಲ ಕಡಿತಗೊಳಿಸಿ ಬಡವರನ್ನೇ ಕೇಂದ್ರೀಕರಿಸಿಕೊಂಡಿರುವ ಈ ಯೋಜನೆಗಳಿಗೆ ವರ್ಗಾಯಿಸಿದ ಹಾಗೆಯೂ ಕಾಣಿಸುವುದಿಲ್ಲ.

ಮದ್ಯದ ಮೇಲೆ ತೆರಿಗೆ ಏರಿಸಲಾಗಿದೆ. ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ. ಬೆಲೆ ಏರಿದಾಗ ಬೇಡಿಕೆ ಇಳಿಯುತ್ತದೆ ಎನ್ನುವ ಅರ್ಥಶಾಸ್ತ್ರದ ನಿಯಮಕ್ಕೆ ವಿರುದ್ಧವಾಗಿರುವ ವಸ್ತುಗಳಲ್ಲಿ ಮದ್ಯವೂ ಒಂದು. ಮದ್ಯ ಕುಡಿಯುವವರು ಕುಡಿದೇ ಕುಡಿಯುತ್ತಾರೆ. ಬೆಂಗಳೂರಿನ ಆಕರ್ಷಕ ಪಬ್‌ಗಳಲ್ಲಿ ಸಂಜೆಯಾದರೆ ಕಿಕ್ಕಿರಿದು ಸೇರಿ ಬಿಯರ್ ಇತ್ಯಾದಿ ಸೇವಿಸುವ ಶ್ರೀಮಂತ ವರ್ಗಕ್ಕೆ ಈಗಾಗಲೇ ನೀಡುವ ಬಿಲ್‌ನಲ್ಲಿ ಒಂದೆರಡು ನೂರು ರೂಪಾಯಿ ಹೆಚ್ಚು ನೀಡುವುದು ಎಂದಾದರೆ ಅವರಿಗದು ದೊಡ್ಡದಲ್ಲ. ಹಾಗಂತ ಮದ್ಯ ಸೇವಿಸುವವರಲ್ಲಿ ಬಡ ಕಾರ್ಮಿಕ ವರ್ಗಕ್ಕೆ ಸೇರಿದವರೂ ಇದ್ದಾರೆ. ಅವರು ಮದ್ಯ ಸೇವಿಸಿ ಉಳಿದ ಹಣದಲ್ಲಿ ಮನೆಗೇನಾದರೂ ಒಯ್ಯುವವರು. ಇನ್ನು ಅವರು ಮನೆಗೊಯ್ಯುವ ಸರಕು ಮತ್ತಷ್ಟೂ ಕಡಿಮೆಯಾದೀತು ಎನ್ನುವ ವಾದವಿದೆ. ಐದು ಗ್ಯಾರಂಟಿಗಳು ಅಂತಹ ವರ್ಗದ ಜನರಿಗಾಗಿಯೇ ರೂಪುಗೊಂಡಿರುವುದರಿಂದ (ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಎಲ್ಲರೂ ಬಳಸಿಕೊಳ್ಳುತ್ತಿದ್ದಾರೆ) ಈ ಬಗ್ಗೆ ದೊಡ್ಡ ಮಟ್ಟಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅದೇ ರೀತಿ ಇನ್ನು ಮುಂದೆ ಭೂಮಿ ಖರೀದಿಸಿ ಅದನ್ನು ನೋಂದಣಿ ಮಾಡಿಕೊಳ್ಳುವಾಗ ಸರ್ಕಾರಕ್ಕೆ ನೀಡಬೇಕಾದ ಮೊತ್ತದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಎಷ್ಟು ಏನು ಅಂತ ಬಜೆಟ್‌ನಲ್ಲಿ ಹೇಳಿಲ್ಲ. ಇದು ಆದಾಗ ಭೂಮಿ ಕೊಳ್ಳುವವರಿಗೆ ಸ್ವಲ್ಪ ಹೆಚ್ಚುವರಿ ಖರ್ಚು ತಗುಲಬಹುದು. ಅದು ಬಡವರನ್ನು ಮತ್ತು ಕೆಳ ಮಧ್ಯಮ ವರ್ಗದವರನ್ನು ದೊಡ್ಡದಾಗಿ ಬಾಧಿಸಲಾರದು. ಹಾಗೆಯೇ ಮೋಟಾರು ವಾಹನ ತೆರಿಗೆಯಲ್ಲೂ ಸ್ವಲ್ಪ ಏರಿಕೆ ಆಗುವ ಸೂಚನೆಗಳಿವೆ. ಇವೆಲ್ಲವೂ ಗ್ಯಾರಂಟೀ ಯೋಜನೆಗಳು ಇಲ್ಲದ ಕಾಲದಲ್ಲೂ ಸಾಮಾನ್ಯವಾಗಿ ಸರಕಾರಗಳು ಏರಿಸುತ್ತಲೇ ಬಂದಿರುವ ಶುಲ್ಕಗಳು. ಎಲ್ಲಾ ಹೆಚ್ಚುವರಿ ಆದಾಯವನ್ನು ಲೆಕ್ಕ ಹಾಕಿದರೂ ಈ ವರ್ಷ ಗ್ಯಾರಂಟೀ ಅನುಷ್ಠಾನಕ್ಕೆ ಬೇಕಾದ ಒಟ್ಟು ಹಣಹೊಂದಿಕೆ ಆಗುವುದಿಲ್ಲ. ಮಿತವ್ಯಯ ಇತ್ಯಾದಿಗಳ ಮೂಲಕ ಬಾಕಿ ಹಣ ಹೊಂದಿಸಲಾಗುವುದು ಎಂದಿದೆ. ಅಷ್ಟರಮಟ್ಟಿಗೆ ಅಲ್ಲೊಂದು ಅಸ್ಪಷ್ಟತೆ ಇದೆ! ಏನೇ ಇರಲಿ ತೆರಿಗೆಯ ಹೊರೆ ಬಿದ್ದೀತು ಎನ್ನುವ ಆತಂಕ ಸೃಷ್ಟಿಸಿ ಕಾಯುತಿದ್ದವರಿಗೆ ನಿರಾಶೆ ಆಗಿದೆ. ಹೊರೆ ಆಗದಂತೆ ಮುಂದೆಯೂ ಕೂಡಾ ಈ ಯೋಜನೆಗಳಿಗೆ ಬೇಕಾದ ಹಣ ಹೊಂದಿಸಲಾಗುವುದು ಎಂದು ಬಜೆಟ್‌ನಲ್ಲಿ ಸರಕಾರ ಹೇಳಿದೆ.

ಇದನ್ನೂ ಓದಿ: FCI ನಿಂದ ಅಕ್ಕಿ ಕೊಳ್ಳುವವರಿಲ್ಲ: ಅಕ್ಕಿ ವ್ಯರ್ಥವಾದರೂ ಸರಿ ಜನರ ಹಸಿವು ನೀಗಿಸಬಾರದು ಎನ್ನುವ…

ತೆರಿಗೆ ಹೆಚ್ಚಿಸಿ ಜನರ ಮೇಲೆ ಬರೆ ಎಳೆಯುವ ಕೆಲಸವನ್ನು ಸರಕಾರ ಮಾಡಲಿಲ್ಲ ಎನ್ನುವುದು ನಿಜ ಇರಬಹುದು. ಹಾಗೆಯೇ ಹೊರೆ ಹೊತ್ತುಕೊಳ್ಳಲು ಶಕ್ತರಾಗಿದ್ದವರ ಮೇಲೆ ತೆರಿಗೆ ಹಾಕುವ ಅವಕಾಶವನ್ನು ಸರಕಾರ ಬಳಸಿಕೊಂಡಿಲ್ಲ ಎನ್ನುವ ವಾದವೂ ಇದೆ. ಅದೇನೇ ಇರಲಿ, ಅಭಿವೃದ್ಧಿಗಾಗಿ ತೊಡಗಿಸಬೇಕಾದ ಹಣವನ್ನು ರಾಜಕೀಯ ಲಾಭದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ನೀಡಲಾಯಿತು ಎನ್ನುವ ವಾದದಲ್ಲಿ ಕಿಂಚಿತ್ ಸತ್ಯ ಇದೆ. ಅದಕ್ಕೆ ಕಾರಣ ಹೀಗಿದೆ. ಸಾಮಾನ್ಯವಾಗಿ ಬಜೆಟ್‌ನಲ್ಲಿ ಎರಡು ರೀತಿಯ ವೆಚ್ಚಗಳನ್ನು ತೋರಿಸಲಾಗುತ್ತದೆ. ಒಂದು ರಾಜಸ್ವ ವೆಚ್ಚ. ಇನ್ನೊಂದು ಬಂಡವಾಳ ವೆಚ್ಚ. ರಾಜಸ್ವ ವೆಚ್ಚ ಎಂದರೆ ಸಂಬಳ ಸಾರಿಗೆ ನಿರ್ವಹಣಾ ವೆಚ್ಚ ಇತ್ಯಾದಿ. ಇದು ಅಭಿವೃದ್ಧಿ ವೆಚ್ಚವಲ್ಲ. ಎರಡನೆಯದ್ದು ಬಂಡವಾಳ ವೆಚ್ಚ. ಅರ್ಥಾತ್ ಹೂಡಿಕೆ. ಹೊಸ ಆಸ್ತಿಗಳ (ಅಸೆಟ್ಸ್) ಸೃಷ್ಟಿಗಾಗಿ ಮಾಡುವ ವೆಚ್ಚ. ಒಟ್ಟು ಬಜೆಟ್‌ನ ಗಾತ್ರದಲ್ಲಿ ಈ ವೆಚ್ಚದ ಪ್ರಮಾಣ ಹಿಂದಿಗಿಂತ ಸಣ್ಣ ಪ್ರಮಾಣದಲ್ಲಿ ಕಡಿತ ಆಗಿದೆ.

ಆದರೆ, ಗ್ಯಾರಂಟಿ ಯೋಜನೆಗಳಿಗೇನು ವೆಚ್ಚ ಆಗಲಿದೆ ಆ ವೆಚ್ಚ ಕೂಡಾ ಒಂದು ರೀತಿಯ ಹೂಡಿಕೆಯ ಆಗಿದೆ ಎನ್ನುವ ವಾದದ ಆಧಾರದಲ್ಲಿ ಸರಕಾರ ಬಂಡವಾಳ ವೆಚ್ಚವನ್ನು ತಗ್ಗಿಸಿ ಜನಕಲ್ಯಾಣ ವೆಚ್ಚವನ್ನು ಹೆಚ್ಚಿಸಿರುವುದು. ಪ್ರತಿ ವರ್ಷ ವಿವಿಧ ರೂಪದಲ್ಲಿ ಬಡ ಜನರ ಕೈಸೇರಲಿರುವ ಹಣವನ್ನು ಅವರು ಖರ್ಚು ಮಾಡಲಿರುವ ಕಾರಣ ಅರ್ಥ ವ್ಯವಸ್ಥೆಯಲ್ಲಿ ಬೇಡಿಕೆ ಹೆಚ್ಚುತ್ತದೆ, ಬೇಡಿಕೆ ಹೆಚ್ಚಿದಾಗ ಉತ್ಪಾದನೆ ಹೆಚ್ಚುತ್ತದೆ, ಉತ್ಪಾದನೆ ಹೆಚ್ಚಿದಾಗ ಉದ್ಯೋಗ ಸೃಷ್ಟಿಯಾಗುತ್ತದೆ, ಈ ಮೂಲಕ ಸರಕಾರಕ್ಕೆ ಬರುವ ತೆರಿಗೆ ಆದಾಯವೂ ಹೆಚ್ಚುತ್ತದೆ ಎನ್ನುವುದು ಲೆಕ್ಕಾಚಾರ. ಇದನ್ನು ಕರ್ನಾಟಕ ಆವಿಷ್ಕರಿಸಿಕೊಂಡ ಹೊಸ ಆರ್ಥಿಕ ಮಾದರಿ ಅಂತ ಬಣ್ಣಿಸಿದೆ. ಈ ಕುರಿತು ಬಜೆಟ್‌ನಲ್ಲಿ ಹೀಗೆ ಹೇಳಲಾಗಿದೆ:

“ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಒಂದು ವರ್ಷದಲ್ಲಿ ಸುಮಾರು 52,000 ಕೋಟಿ ರೂಪಾಯಿಗಳನ್ನು ಸುಮಾರು 1.3 ಕೋಟಿ ಕುಟುಂಬಗಳಿಗೆ ತಲುಪಿಸುತ್ತಿರುವುದರಿಂದ ಪ್ರತಿ ಕುಟುಂಬಕ್ಕೆ ಮಾಸಿಕ 4000ದಿಂದ 5000 ರೂಗಳಷ್ಟು ಅಂದರೆ ವಾರ್ಷಿಕವಾಗಿ ಸರಾಸರಿ 48,000ದಿಂದ 60000 ರೂ ಗಳಷ್ಟು ಹೆಚ್ಚುವರಿ ಆರ್ಥಿಕ ನೆರವು ನೀಡಿದಂತಾಗುತ್ತದೆ. ಇದು ಸಾರ್ವತ್ರಿಕ ಮೂಲ ಆದಾಯ ಎನ್ನುವ (Universal Basic Income) ಪರಿಕಲ್ಪನೆಯನ್ನು ದೇಶದಲ್ಲೇ ಮೊದಲ ಬಾರಿಗೆ ಅನುಷ್ಠಾನಗೊಳಿಸಿ ಅಭಿವೃದ್ಧಿಯ ಹೊಸ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಿದೆ.” (ಪುಟ 10, ಪ್ಯಾರ 19)

ಆದರೆ ಕೆಲವೊಂದು ವಿಚಾರಗಳನ್ನು ನೆನಪಲ್ಲಿರಿಸಿಕೊಳ್ಳಬೇಕಾಗಿದೆ.

ಸಾಮಾನ್ಯವಾಗಿ ಈ ರೀತಿ ಒಟ್ಟು ಆದಾಯದ ದೊಡ್ಡ ಪಾಲೊಂದನ್ನು ಜನಕಲ್ಯಾಣದ ಬಾಬತ್ತಾಗಿ ಖರ್ಚು ಮಾಡುವುದು ಈಗಾಗಲೇ ಮುಂದುವರಿದಿರುವ ದೇಶಗಳು. ಅಲ್ಲಿ ಸರಕಾರಕ್ಕೆ ಹೂಡಿಕೆಯ ವಿಚಾರದಲ್ಲಿ ಹೊಸದೇನನ್ನೂ ಮಾಡಲು ಉಳಿದಿಲ್ಲ. ಅಂದರೆ ರಸ್ತೆ, ಸಾರಿಗೆ, ಚರಂಡಿ, ವಿದ್ಯುತ್ತು, ನೀರು ಸರಬರಾಜು, ಆಸ್ಪತ್ರೆಗಳು, ಶಾಲೆ, ವಿಶ್ವವಿದ್ಯಾನಿಲಯ ಹೀಗೆ ಒಂದು ಸಮಾಜದಲ್ಲಿ ಎಲ್ಲರಿಗೂ ಬೇಕಾಗಿರುವ ಏನೇನು ಅವಶ್ಯಕತೆಗಳಿವೆಯೋ ಅವೆಲ್ಲವನ್ನು ಈಗಾಗಲೇ ಬಹುತೇಕ ಪೂರೈಸಿ ಆಗಿರುವ ಹಿನ್ನೆಲೆಯಲ್ಲಿ, ಆ ದೇಶಗಳ ಸರಕಾರಗಳು ಆರ್ಥಿಕವಾಗಿ ಹಿಂದುಳಿದವರನ್ನು ಜತೆಗೆ ಕರೆದುಕೊಂಡು ಹೋಗುವ ದೃಷ್ಟಿಯಲ್ಲಿ ಜನಕಲ್ಯಾಣದ ಬಾಬತ್ತಿನಲ್ಲಿ ದೊಡ್ಡ ಪ್ರಮಾಣದ ವೆಚ್ಚ ಮಾಡುತ್ತಿದೆ. ಭಾರತದಲ್ಲಿ ಪರಿಸ್ಥಿತಿ ಹಾಗಿಲ್ಲ. ಇಲ್ಲಿ ಇನ್ನು ಕೂಡಾ ಸರಕಾರದ ಕಡೆಯಿಂದ ಆಗಲೇಬೇಕಿರುವ ಹಲವಾರು ಕೆಲಸಗಳು ಬಾಕಿ ಉಳಿದಿವೆ. ಈ ಕೆಲಸಗಳಿಗೆ ಇನ್ನೂ ಅಪಾರ ಪ್ರಮಾಣದ ಹಣ ಹೂಡಿಕೆಯ ಅಗತ್ಯವಿದೆ. ಹಾಗಾಗಿ ಈ ಹಂತದಲ್ಲೇ ಗ್ಯಾರಂಟಿಗಳಂತಹ ಯೋಜನೆಗಳಿಗೆ ಹಣ ನೀಡುವ ವಿಚಾರದಲ್ಲಿ ಒಂದು ಪ್ರಶ್ನಾರ್ಥಕ ಚಿಹ್ನೆ ಸದಾ ಇರಲಿದೆ. ಹಾಗೆಂದು, ಈ ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆಯನ್ನು ನೋಡಿದಾಗ ಸರಕಾರ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಿದ ನಂತರವೇ ಬಡವರ ಕುರಿತಾಗಿ ಯೋಚಿಸಬೇಕು ಎನ್ನುವ ವಾದವನ್ನೂ ಒಪ್ಪಿಕೊಳ್ಳಲಾಗುವುದಿಲ್ಲ. ಹಾಗಾಗಿ ಮದ್ಯದ ದಾರಿಯೊಂದು ಈ ದೇಶಕ್ಕೆ ಅವಶ್ಯಕವಾಗಿದೆ. ಆ ಮದ್ಯದ ದಾರಿಯನ್ನು ಕರ್ನಾಟಕ ಈಗ ಆಯ್ದುಕೊಂಡಿದೆ. ರಾಜಕೀಯ ಲೆಕ್ಕಾಚಾರದಿಂದ ಆಯ್ದುಕೊಂಡ ಮಾದರಿಯನ್ನು ನಿಜವಾದ ಅರ್ಥದಲ್ಲಿ ಹೊಸ ಕಲ್ಯಾಣ ಕೇಂದ್ರಿತ ಅಭಿವೃದ್ಧಿ ಮಾದರಿಯನ್ನಾಗಿ ಮಾಡುವ ಸವಾಲು ಈಗ ಹೊಸ ಸರಕಾರದ ಮುಂದಿದೆ.

ಕಲ್ಯಾಣ ಕೇಂದ್ರಿತ ಹೊಸ ಅಭಿವೃದ್ಧಿಯ ಮಾದರಿಗೆ ಈ ಐದು ಯೋಜನೆಗಳೇ ಅತ್ಯುತ್ತಮ ಅಥವಾ ಅಂತಿಮವೇನಲ್ಲ. ಘೋಷಿಸಿದ ಯೋಜನೆಗಳಿಗೆ ಯಾವುದೋ ರೀತಿಯ ಕಸರತ್ತು ಮಾಡಿ ಹಣ ಹೊಂದಿಸಿಕೊಂಡರೆ ಹೊಸ ಮಾದರಿ ರೂಪುಗೊಳ್ಳುವುದಿಲ್ಲ. ಈ ಯೋಜನೆಗಳನ್ನು ಪ್ರಯೋಗಾತ್ಮಕ ಎಂದು ತಿಳಿದುಕೊಂಡು, ಅಗತ್ಯವಿದ್ದರೆ ಅವುಗಳಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಳ್ಳುವುದು, ಅಥವಾ ಕೆಲವನ್ನು ಕೈಬಿಟ್ಟು ಹೊಸದನ್ನು ಸೇರಿಸಿಕೊಳ್ಳುವುದು ಅಗತ್ಯವಾಗಬಹುದು. ಕಡಿತವಾದ ಬಂಡವಾಳ ವೆಚ್ಚವನ್ನು ಸರಿದೂಗಿಸುವ ಮಾರ್ಗ ಅಗತ್ಯವಿರಬಹುದು. ಉದ್ಯೋಗಗಳನ್ನು ಸೃಷ್ಟಿಸುವ ಹೊಸ ಮಾರ್ಗಗಳು, ಉದ್ಯೋಗಗಳನ್ನು ನಿರ್ವಹಿಸಲು ಬೇಕಾದ ಮಾನವ ಸಂಪನ್ಮೂಲದ ತಯಾರಿ ಇತ್ಯಾದಿಗಳಲ್ಲಾ ನಡೆಯದೆ ಹೊಸ ಮಾದರಿ ರೂಪುಗೊಳ್ಳದು. ಏನನ್ನೇ ಆಗಲಿ ಹಂಚುವ ಮುನ್ನ ಅದನ್ನು ಸೃಷ್ಟಿಸಲೇ ಬೇಕೆನ್ನುವುದು ಅರ್ಥಶಾಸ್ತ್ರದ ನಿಯಮವೂ ಹೌದು, ಪ್ರಕೃತಿಯ ನಿಯಮವೂ ಹೌದು. ಸಂಪತ್ತನ್ನು ಹೊಸ ರೀತಿಯಲ್ಲಿ ಸೃಷ್ಟಿಸಿ, ಸೃಷ್ಟಿಸಿದ ಸಂಪತ್ತನ್ನು ಹೊಸ ರೀತಿಯಲ್ಲಿ ಹಂಚಿ, ಆ ಹಂಚಿಕೆ ಇನ್ನಷ್ಟೂ ಸಂಪತ್ತಿನ ಸೃಷ್ಟಿಗೆ ಕಾರಣವಾಗುವ ಮತ್ತು ಈ ಮೂರೂ ಹಂತಗಳು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಸುಸ್ಥಿರವಾಗಿ ನಡೆದಾಗ ಮಾತ್ರ ಹೊಸ ಆರ್ಥಿಕ ಮಾದರಿಯೊಂದು ಕರ್ನಾಟಕದಲ್ಲಿ ಹುಟ್ಟಿದೆ ಅಂತ ಹೇಳಬಹುದು. ಆ ಹಾದಿಯಲ್ಲಿ ಕ್ರಮಿಸಬೇಕಾದ ಹಾದಿ ಇನ್ನಷ್ಟೂ ದೊಡ್ಡದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...

ಮುಂಬೈ| ಬುರ್ಖಾ ಧರಿಸಿ ಲೋಕಲ್‌ ಟ್ರೈನ್‌ನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸಿದ ವ್ಯಕ್ತಿ ಬಂಧನ

ಮುಂಬೈನ ಉಪನಗರ ರೈಲಿನ ಮಹಿಳಾ ಬೋಗಿಯಲ್ಲಿ ಬುರ್ಖಾ ಧರಿಸಿ ಪ್ರಯಾಣಿಸುತ್ತಿದ್ದ ಆರೋಪದ ಮೇಲೆ ನಾಸಿಕ್‌ನ 57 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ಘಟನೆ ಫೆಬ್ರವರಿ 6 ರಂದು ಘಾಟ್ಕೋಪರ್...

ಎಪ್‌ಸ್ಟೀನ್‌ ಫೈಲ್ಸ್ ಜನಾಕ್ರೋಶ : ಎಐ ಶೃಂಗಸಭೆಯಿಂದ ದೂರ ಉಳಿದ ಬಿಲ್‌ ಗೇಟ್ಸ್‌

ಎಪ್‌ಸ್ಟೀನ್‌ ಫೈಲ್ಸ್‌ ಮುಂದಿಟ್ಟುಕೊಂಡು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯಿಂದ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ದೂರ ಉಳಿದಿದ್ದಾರೆ. ಈ ಕುರಿತು ಗೇಟ್ಸ್ ಫೌಂಡೇಶನ್ ಇಂಡಿಯಾ ಗುರುವಾರ...

ಬೆಂಗಳೂರಿನಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ

ಬೆಂಗಳೂರು: ಫ್ರೇಸರ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್ ಮಾಲೀಕರಿಗೆ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ರಂಜಾನ್ ಆಹಾರ ಮೇಳದಿಂದ ಸಂಚಾರ ದಟ್ಟಣೆ. ಅವ್ಯವಸ್ಥೆಯ ಜೊತೆಗೆ...

‘ದಿ ಕೇರಳ ಸ್ಟೋರಿ-2’ ಚಲನಚಿತ್ರ ಜಾತ್ಯತೀತತೆಗೆ ಬೆದರಿಕೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

'ದಿ ಕೇರಳ ಸ್ಟೋರಿ' ಚಿತ್ರದ ಎರಡನೇ ಭಾಗ ಬಿಡುಗಡೆಯಾಗುತ್ತಿರುವ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದು, ಇದರ ಮೊದಲ ಭಾಗವು "ರಾಜ್ಯದ ವಿರುದ್ಧ ದ್ವೇಷವನ್ನು ಹರಡುವ ಮತ್ತು ನಮ್ಮ ಜಾತ್ಯತೀತ...

ಬಿಜೆಪಿ ಸೇರಲು ಸಿದ್ದರಾದ ಭೂಪೇನ್ ಬೋರಾ : ಪ್ರಿಯಾಂಕಾ, ಡಿಕೆಶಿ ಸೇರಿದಂತೆ ‘ಕೈ ಟ್ರಬಲ್ ಶೂಟರ್‌ಗಳು’ ಅಸ್ಸಾಂಗೆ ದೌಡು

ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ. ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ...

ಸರ್ಕಾರದ ಭರವಸೆಗೆ ಮಣಿಯದ ಸಾರಿಗೆ ಸಿಬ್ಬಂದಿ : ಮುಷ್ಕರ ಮುಂದುವರಿಸಲು ನಿರ್ಧಾರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಬಿಎಂಟಿಸಿಯ ನೌಕರರು ಇಂದು (ಫೆ.19) ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ನೌಕರರ ಪ್ರತಿಭಟನೆ...