ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 14ನೆ ಬಾರಿಗೆ ಕರ್ನಾಟಕ ಬಜೆಟ್ ಮಂಡಿಸಿದ್ದಾರೆ. ಅವರು ಮಂಡಿಸಿದ 2023-24ರ ಬಜೆಟ್ ವೆಚ್ಚ 3,27,747 ಕೋಟಿ ಮತ್ತು ಜಮೆ 3,24,478 ಕೋಟಿ ಎಂದು ಅಂದಾಜಿಸಲಾಗಿದೆ. ಒಟ್ಟು ವೆಚ್ಚವು 2,50,933 ಕೋಟಿ; ರೆವಿನ್ಯೂ ವೆಚ್ಚ 54,374 ಕೋಟಿ; ಬಂಡವಾಳ ವೆಚ್ಚ ಮತ್ತು ಸಾಲದ ಮರು ಪಾವತಿ 22,441 ಕೋಟಿಯನ್ನು ಒಳಗೊಂಡಿದೆ. ಜಮೆಯಲ್ಲಿ ರೆವಿನ್ಯೂ ಜಮೆ 2,38,410 ಕೋಟಿ (ಜಿಎಸ್ಟಿ ಒಳಗೊಂಡಂತೆ ತೆರಿಗೆ ರೂಪದಲ್ಲಿ 1,75,653 ಕೋಟಿ, ತೆರಿಗೆಯೇತರ ರೆವಿನ್ಯೂಗಳಿಂದ 12,500 ಕೋಟಿ, ಕೇಂದ್ರ ತೆರಿಗೆ ಪಾಲಿನ ರೂಪದಲ್ಲಿ 37,252 ಕೋಟಿ, ಕೇಂದ್ರ ಸಹಾಯಾನುಧಾನ ರೂಪದಲ್ಲಿ 13,005 ಕೋಟಿ), ಸಾಲದ ರೂಪದಲ್ಲಿ 85,818 ಕೋಟಿ, ಋಣೇತರ ಸ್ವೀಕೃತಿ ಮತ್ತು ಸಾಲ ವಸೂಲಿ 228 ಕೋಟಿಯನ್ನು ಒಳಗೊಂಡಿದೆ. ಈ ಬಾರಿ ಪ್ರತಿ ಹಂತದಲ್ಲಿ ಮುಖ್ಯಮಂತ್ರಿಗಳು 2018ರಿಂದ 2023ರ ಅವಧಿಯಲ್ಲಿ, ಹಿಂದಿನ ತಮ್ಮದೇ ಮೈತ್ರಿ ಮತ್ತು ನಂತರದ ಬಿಜೆಪಿ ಸರಕಾರ ಹೇಗೆ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿದ್ದರು ಎಂದು ವಿವರಿಸುತ್ತಿದ್ದರು. ಹಿಂದಿನ ಸರಕಾರವು ಬಜೆಟ್ನಲ್ಲಿ ಘೋಷಿಸಿ ಆದರೆ ಕಾಮಗಾರಿ ಪೂರ್ಣಗೊಳಿಸದ ಮೊತ್ತ 2,55,102 ಕೋಟಿಯಷ್ಟಿದೆ ಎಂದು ಹೇಳಿದರು ಮತ್ತು ಇಂತಹ ಯೋಜನೆಗಳು ಅವಾಸ್ತವ ಎನ್ನುವ ಅಭಿಪ್ರಾಯವನ್ನೂ ಸಹ ವ್ಯಕ್ತಪಡಿಸಿದರು. ಈ ಬಾರಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಯೋಜನೆಗಳಿಗೆ 800 ಕೋಟಿ ಹಂಚಿಕೆ ಮಾಡಿದ್ದಾರೆ.
ಎಲ್ಲರ ಕೇಂದ್ರಬಿಂದುವಾಗಿದ್ದ 1.3 ಕೋಟಿ ಕುಟುಂಬಗಳಿಗೆ ಸಹಾಯವಾಗಲಿರುವ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ಅಂದಾಜು ವೆಚ್ಚ 52,000 ಕೋಟಿ ತಗಲುತ್ತದೆ ಎಂದು ಪ್ರಕಟಿಸಿದರು. ಇದಕ್ಕಾಗಿ ತೆರಿಗೆ ಮೂಲಕ ಸಂಪನ್ಮೂಲವನ್ನು ಕ್ರೋಢೀಕರಿಸಲಾಗುವುದು ಎಂದು ಹೇಳಿದ್ದಾರೆ. ಅದರೆ ಪ್ರತಿ ವರ್ಷವೂ ಬಜೆಟ್ನ ಅಂದಾಜಿಗಿಂತಲೂ ಕಡಿಮೆ ಮೊತ್ತದ ತೆರಿಗೆ ಸಂಗ್ರಹವಾಗುತ್ತಿರುವುದು ಮಾತ್ರ ವಾಸ್ತವ. ಆದರೆ ಈ ಬಾರಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಬಲ್ಲರೇ ಎನ್ನುವ ಪ್ರಶ್ನೆಗೆ 2024-25ರ ’ಪರಿಷ್ಕೃತ ಅಂದಾಜಿನಲ್ಲಿ’ (RE) ಉತ್ತರ ಗೋಚರಿಸುತ್ತದೆ. ಅಲ್ಲಿಯವರೆಗೆ ಆಶಾಭಾವನೆಯಿಂದ ಕಾಯಬೇಕು. ಆದರೆ ಒಕ್ಕೂಟ ವ್ಯವಸ್ಥೆಯನ್ನೇ ಧಿಕ್ಕರಿಸುವ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ಬರಬೇಕಾದ ರಾಜ್ಯದ ಪಾಲಿನ ಜಿಎಸ್ಟಿ ಮೊತ್ತವನ್ನು ಹೇಗೆ ಪಡೆದುಕೊಳ್ಳಬಲ್ಲರು ಎನ್ನುವ ಪ್ರಶ್ನೆಗೆ ಬಹುಶಃ ಸಿದ್ದರಾಮಯ್ಯನವರ ಬಳಿಯೂ ಉತ್ತರವಿಲ್ಲ. ಉದಾಹರಣೆಗೆ 2020-21ರ ಬಜೆಟ್ನಲ್ಲಿ ಜಿಎಸ್ಟಿ ಪರಿಹಾರ 16,116 ಕೋಟಿ ಎಂದು ಅಂದಾಜಿಸಿದ್ದರು. ಆದರೆ ಕೇಂದ್ರ ನೀಡಿದ್ದು 13,798 ಕೋಟಿ. ಶೇ.14ರಷ್ಟು ಕಡಿತವಾಗಿತ್ತು. ಕೇಂದ್ರದ ಈ ಅನ್ಯಾಯದ ವಿರುದ್ಧ ಸಿದ್ದರಾಮಯ್ಯನವರು ಏಕಾಂಗಿಯಾಗಿ ಸೆಣೆಸಲು ಸಾಧ್ಯವಿಲ್ಲ. ಬಹುಶಃ ವಿರೋಧ ಪಕ್ಷಗಳ ಸರಕಾರಗಳು ಒಕ್ಕೂಟ ರಚಿಸಿಕೊಂಡು ಮೋದಿ ಸರಕಾರದ ಫ್ಯಾಸಿಸಂ ವಿರುದ್ಧ ಜಂಟಿಯಾಗಿ ಆಂದೋಲನ ನಡೆಸಬೇಕು. ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಾದ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಮೇಲಿನ ಈ ಅಂಶಗಳು ಪ್ರಮುಖ ಪಾತ್ರ ವಹಿಸಲಿವೆ.
ಫೆಬ್ರವರಿ 2023ರಲ್ಲಿ ಆಗಿನ ಬೊಮ್ಮಾಯಿ ಸರಕಾರ ಮಂಡಿಸಿದ್ದ ಚುನಾವಣಾ ಬಜೆಟ್ನಲ್ಲಿ 77,977 ಕೋಟಿ ಮೊತ್ತದ ಸಾಲದ ಜಮೆಯನ್ನು ಪ್ರಕಟಿಸಿದ್ದರೆ ಸಿದ್ದರಾಮಯ್ಯನವರು ಈ ಬಾರಿ 86,045 ಕೋಟಿ ಮೊತ್ತದ ಸಾಲದ ಜಮೆಯನ್ನು ಪ್ರಕಟಿಸಿದ್ದಾರೆ. ಈ ಬಾರಿಯ ಬಜೆಟ್ ಅನ್ವಯ ರಾಜ್ಯದ ಒಟ್ಟು ಸಾಲ 4,88,827 ಕೋಟಿ. ಇದು ಉತ್ತಮ ಬೆಳವಣಿಗೆಯಲ್ಲ. ಆದರೆ ಒಟ್ಟಾರೆ 13,000 ಕೋಟಿಯಷ್ಟು ಆದಾಯದ ಕೊರತೆಯ ಬಜೆಟ್ ಮಂಡಿಸಿದ್ದಾರೆ. ಇದು ಅಂತಹ ಆತಂಕದ ಸಂಗತಿಯಲ್ಲ.
ಈ ಬಾರಿ ಹೆಚ್ಚುವರಿಯಾಗಿ 52,000 ಕೋಟಿ ಗ್ಯಾರಂಟಿ ಯೋಜನೆಗಳ ವೆಚ್ಚವಿದ್ದೂ ಸಹ ಸಿದ್ದರಾಮಯ್ಯನವರ ಬಜೆಟ್ ವೆಚ್ಚ ಮತ್ತು ಫೆಬ್ರವರಿ 2023ರಲ್ಲಿ ಬೊಮ್ಮಾಯಿಯವರು ಮಂಡಿಸಿದ ಬಜೆಟ್ ವೆಚ್ಚದ ನಡುವೆ ಅಂದಾಜು 15 ಸಾವಿರ ಕೋಟಿಯ ಅಂತರವಿದೆಯಷ್ಟೆ. ಇದು ಕುತೂಹಲಕಾರಿಯಾಗಿದೆ. ಮತ್ತು ಅಂತಹ ಆತಂಕಗೊಳ್ಳುವ ಅಗತ್ಯವಿಲ್ಲ ಎಂದೂ ಸಹ ಇದು ಹೇಳುತ್ತಿರುವಂತಿದೆ.
ಇನ್ನು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 2023ರಲ್ಲಿ ಬೊಮ್ಮಾಯಿ ಸರಕಾರವು 37,960 ಕೋಟಿ ಹಂಚಿಕೆ ಮಾಡಿದ್ದರೆ ಸಿದ್ದರಾಮಯ್ಯನವರು 37,587 ಕೋಟಿ ಹಂಚಿಕೆ ಮಾಡಿದ್ದಾರೆ (ಬಜೆಟ್ ವೆಚ್ಚದ ಶೇ.11ರ ಪ್ರಮಾಣ). ಹಿಂದಿನ ಬಜೆಟ್ಗಳಿಗೆ ಹೋಲಿಸಿದರೆ ಈ ಬಾರಿ ಸುಮಾರು 11,000 ಕೋಟಿ ಹೆಚ್ಚಳವಾಗಿದೆ. ಬಜೆಟ್ ವೆಚ್ಚದ ಶೇ.26ರಷ್ಟಿರಬೇಕಾಗಿದ್ದರೂ ಸಹ ಇದು ತಕ್ಕಮಟ್ಟಿಗೆ ಸ್ವಾಗತಾರ್ಹ ಮೊತ್ತವಾಗಿದೆ. ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡುವ ಪ್ರಸ್ತಾಪವೂ ಶ್ಲಾಘನೀಯ ನಿರ್ಧಾರ ಎನ್ನಬಹುದಾದರೂ ಸಹ ಪೌಷ್ಟಿಕ ಆಹಾರ ತಜ್ಞರು ಪ್ರತಿ ದಿನ ಮೊಟ್ಟೆ ಕೊಡಬೇಕು ಎಂದು ಹೇಳುತ್ತಾರೆ. ಇದನ್ನು ಸಿದ್ದರಾಮಯ್ಯನವರ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಶೌಚಾಲಯ ನಿರ್ಮಾಣಕ್ಕೆ 200 ಕೋಟಿ ಮತ್ತು ಹೊಸ ತರಗತಿಗಳ ನಿರ್ಮಾಣಕ್ಕೆ 540 ಕೋಟಿ, ಶಿಥಿಲ ಶಾಲಾ ಕಟ್ಟಡಗಳ ದುರಸ್ಥಿಗೆ 100 ಹಂಚಿಕೆ ಮಾಡಿದ್ದಾರೆ. 47,272 ಸರಕಾರಿ ಶಾಲೆಗಳು 1231 ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಗೆ 153 ಕೋಟಿ ಅನುದಾನ ಕೊಡುವುದಾಗಿ ಹೇಳಿದ್ದಾರೆ. 80 ಕೋಟಿ ವೆಚ್ಚದ ಕಲಿಕಾ ಬಲವರ್ಧನೆ ಕಾರ್ಯಕ್ರಮ ಪ್ರಕಟಿಸಿದ್ದಾರೆ. ಇದೆಲ್ಲವೂ ಜಾರಿಗೊಳ್ಳುತ್ತವೆಯೇ ಎನ್ನುವ ಪ್ರಶ್ನೆಗೆ 2024-25ರ ’ಪರಿಷ್ಕೃತ ಅಂದಾಜಿನ (RE)’ವರೆಗೂ ಕಾಯಬೇಕು. ಅಲ್ಲಿಯವರೆಗೂ ಈ ಅಂಕಿಅಂಶಗಳು ಅಂದಾಜು ಪೂರ್ವ (BE) ಬಜೆಟ್ ಮಾತ್ರವಾಗಿರುತ್ತದೆ. ಪ್ರತಿ ಬಾರಿಯೂ ಸದ್ದು ಮಾಡುತ್ತಿದ್ದ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಗಳ ಕುರಿತು ಈ ಬಾರಿ ಪ್ರಸ್ತಾಪವಿಲ್ಲ. ಈಗಿರುವ 276 ಕೆಪಿಎಸ್ ಶಾಲೆಗಳ ಸ್ಥಿತಿಗತಿಯೇನು? ಅವುಗಳ ಭವಿಷ್ಯವೇನು? ಈ ಕುರಿತು ಈ ಬಜೆಟ್ನಲ್ಲಿ ಯಾವುದೇ ಪ್ರಕಟಣೆಯಿಲ್ಲ. ಶಾಲಾ ಶಿಕ್ಷಣದಲ್ಲಿ ಎನ್ಇಪಿ ಜಾರಿಗೊಳಿಸಲು ಹಿಂದಿನ ಬಿಜೆಪಿ ಸರಕಾರವು ಮದನ್ಗೋಪಾಲ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಎನ್ಇಪಿಯನ್ನು ರದ್ದುಗೊಳಿಸುತ್ತೇವೆ ಎಂದು ಬಜೆಟ್ನಲ್ಲಿ ಘೋಷಿಸಿರುವ ಮುಖ್ಯಮಂತ್ರಿಗಳು ಈ ಸಮಿತಿಯನ್ನು ಸಹ ರದ್ದುಗೊಳಿಸಬೇಕಾಗುತ್ತದೆ. ಆದರೆ ಇದರ ಕುರಿತು ಎಲ್ಲಿಯೂ ಪ್ರಸ್ತಾಪವಿಲ್ಲ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನಿಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಬೊಮ್ಮಾಯಿ ಸರಕಾರ ಸ್ಥಗಿತಗೊಳಿಸಿತ್ತು. ಆದರೆ ಈ ಬಾರಿ ಅದನ್ನು ಮುಂದುವರೆಸಲು 60 ಕೋಟಿ ಹಂಚಿಕೆ ಮಾಡಿದ್ದಾರೆ. ಇದು ಸಕಾರಾತ್ಮಕ ಕ್ರಮ.
ಇದನ್ನೂ ಓದಿ: ಗಿಗ್ ದುಡಿಮೆಗಾರರಿಗೆ ವಿಮೆ ಸ್ವಾಗತಾರ್ಹ; ಶೋಷಣೆ ತಡೆಗಟ್ಟುವ ಕ್ರಮಗಳು ಯಾವಾಗ?
ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಶೇಷ ಯೋಜನೆಗಳನ್ನು ಪ್ರಕಟಿಸಲಿಲ್ಲ. ಅಲ್ಪಸಂಖ್ಯಾತ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಪಡಿಯಲು ಸಹಾಯಕವಾಗುವಂತೆ 8 ಕೋಟಿ ಹಂಚಿಕೆ ಮಾಡಿದ್ದಾರೆ. ಇದು ಒಳ್ಳೆಯದೇ.
ಹಿಂದಿನ ಬಿಜೆಪಿ ಸರಕಾರ ಕೆಲಸದ ಅವಧಿಯನ್ನು 8ರಿಂದ 12 ಗಂಟೆಗೆ ಹೆಚ್ಚಿಸಿ ಕರಾಳ ಕಾರ್ಖಾನೆ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿತು. ಮತ್ತು ಅಲ್ಲಿ ಇತರ ಅನೇಕ ಕಾರ್ಮಿಕ ವಿರೋಧಿ ನೀತಿಗಳಿದ್ದವು. ಈ ಕಾಯ್ದೆಯನ್ನು ರದ್ದುಪಡಿಸುವುದರ ಕುರಿತು ಪ್ರಸ್ತಾಪವಿಲ್ಲದಿರುವುದು, ಕನಿಷ್ಠ ವೇತನದ ಕುರಿತಾಗಿ ದೃಢ ನಿರ್ಧಾರ ಪ್ರಕಟಿಸದಿರುವುದು ನಿರಾಸೆ ಮೂಡಿಸುತ್ತದೆ.
ಪೌರ ಕಾರ್ಮಿಕರು, ಸ್ವಚ್ಛ ಕಾರ್ಮಿಕರು, manual scavengers ಕುರಿತು ಯಾವುದೇ ಪ್ರಸ್ತಾಪವಿಲ್ಲದಿರುವುದು, ಇವರಿಗೆ ಪರ್ಯಾಯ ಉದ್ಯೋಗ ಸೃಷ್ಟಿಯ ಕುರಿತಾದ ಯಾವುದೇ ಯೋಜನೆಗಳನ್ನು ರೂಪಿಸದಿರುವುದು ನಿರಾಸೆ ಮೂಡಿಸುತ್ತದೆ. ಇದು ಸಣ್ಣಪುಟ್ಟ ಲೋಪವಂತೂ ಅಲ್ಲ.
ರಾಜ್ಯದಲ್ಲಿ ಖಾಲಿಯಿರುವ 2.4 ಲಕ್ಷ ಹುದ್ದೆಗಳ ನೇಮಕಾತಿ ಕುರಿತಂತೆ ಈ ಬಾರಿ ಯಾವುದೇ ವಿಶೇಷ ಪ್ರಸ್ತಾಪವಿಲ್ಲ. ಈ ಹುದ್ದೆಗಳಿಗೆ ಇಲಾಖಾವಾರು ಹಂತಹಂತವಾಗಿ ನೇಮಕಾತಿ ಮಾಡಿಕೊಳ್ಳುವರೇ? ಅದರ ನೀಲನಕ್ಷೆಯೇನು? ಇದಕ್ಕಾಗಿ ಬಜೆಟ್ನಲ್ಲಿ ಮೀಸಲಿಟ್ಟ ಮೊತ್ತವೇನು? ಇದೆಲ್ಲವೂ ಉತ್ತರವಿಲ್ಲದ ಪ್ರಶ್ನೆಗಳಾಗಿ ಉಳಿದುಕೊಂಡಿವೆ. ಯುವಕರ ಭವಿಷ್ಯದ ಕುರಿತು ಬಜೆಟ್ನಲ್ಲಿ ಪ್ರಸ್ತಾಪ ಮಾಡದಿರುವುದು ಉತ್ತಮ ಬೆಳವಣಿಗೆಯಲ್ಲ. ಈಗಾಗಲೇ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡು ಕೇವಲ ನೇಮಕಾತಿ ಆದೇಶ ಬಾಕಿಯಿರುವ 15000 ಶಾಲಾ ಶಿಕ್ಷಕರ ನೇಮಕಾತಿ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಅದೇ ರೀತಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆದೇಶದ ಕುರಿತು ಸಹ ಎಲ್ಲಿಯೂ ಪ್ರಸ್ತಾಪವಿಲ್ಲ. ಇದು ಜನಪರ ಕಾಳಜಿಯುಳ್ಳ ಎಂದು ಬಣ್ಣಿಸಲ್ಪಡುತ್ತಿರುವ ಈ ಬಜೆಟ್ನ ಮಿತಿಯಾಗಿದೆ.
ಎಸ್ಸಿಎಸ್ಪಿ/ಟಿಎಸ್ಪಿ ಅಡಿಯಲ್ಲಿ ಬರುವ ಆದರೆ ಅದರ ಆಶಯಕ್ಕೆ ಪ್ರತಿಕ್ರಾಂತಿಯಂತಿರುವ ಸೆಕ್ಷನ್ 7ಡಿಯನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿರುವುದು ಸ್ವಾಗತಾರ್ಹ. ಆದರೆ ಇದು ಕೂಡಲೆ ಜಾರಿಗೆ ಬರುವಂತೆ ಆದೇಶ ಹೊರಡಿಸಬೇಕು. ಮತ್ತು ಇದರಿಂದ ಉಳಿತಾಯವಾಗುವ ಹಣವನ್ನು ದಲಿತ ಸಮುದಾಯದ ಮಕ್ಕಳ ಶಿಕ್ಷಣ, ಪೌಷ್ಟಿಕಾಂಶಕ್ಕೆ ವಿನಿಯೋಗಿಸಬೇಕು.
ಒಟ್ಟಾರೆಯಾಗಿ ವಂಚಿತರ ಪರವಾದ ಕಾಳಜಿ ಈ ಬಜೆಟ್ನಲ್ಲಿ ವ್ಯಕ್ತವಾಗಿದೆ. ಸರ್ವರಿಗೂ ಸಮಬಾಳು ಎನ್ನುವ ನೀತಿಯ ಕುರಿತು ಬದ್ಧತೆಯೂ ಕಂಡು ಬರುತ್ತದೆ. ಆದರೆ ಮೇಲೆ ವಿವರಿಸಿದ ಮಿತಿಗಳು ಸಹ ಬಿಡದೆ ಕಾಡುತ್ತದೆ.

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.


