Homeಮುಖಪುಟಮಣಿಪುರದಲ್ಲಿ ಹೊಸ ಸರ್ಕಾರ ರಚಿಸಲು 44 ಶಾಸಕರು ಸಿದ್ಧರಿದ್ದಾರೆ: ರಾಜ್ಯಪಾಲರ ಭೇಟಿ ಬಳಿಕ ಬಿಜೆಪಿ ನಾಯಕ...

ಮಣಿಪುರದಲ್ಲಿ ಹೊಸ ಸರ್ಕಾರ ರಚಿಸಲು 44 ಶಾಸಕರು ಸಿದ್ಧರಿದ್ದಾರೆ: ರಾಜ್ಯಪಾಲರ ಭೇಟಿ ಬಳಿಕ ಬಿಜೆಪಿ ನಾಯಕ ಹೇಳಿಕೆ

- Advertisement -
- Advertisement -

ಮಣಿಪುರದಲ್ಲಿ ಹೊಸ ಸರ್ಕಾರ ರಚಿಸಲು ನಲವತ್ತ ನಾಲ್ಕು ಶಾಸಕರು ಸಿದ್ಧರಿದ್ದಾರೆ ಎಂದು ಬಿಜೆಪಿ ಶಾಸಕ ಥೋಕ್ಚೋಮ್ ರಾಧೇಶ್ಯಾಮ್ ಸಿಂಗ್ ಬುಧವಾರ (ಮೇ.28) ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿಯಾದ ನಂತರ ಹೇಳಿದ್ದಾರೆ.

ರಾಧೇಶ್ಯಾಮ್ ಸಿಂಗ್, ಇತರ ಒಂಬತ್ತು ಶಾಸಕರೊಂದಿಗೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

“ಜನರ ಆಶಯದಂತೆ 44 ಶಾಸಕರು ಸರ್ಕಾರ ರಚಿಸಲು ಸಿದ್ಧರಿದ್ದಾರೆ. ನಾವು ಇದನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ. ಈ ಸಮಸ್ಯೆಗೆ ಯಾವ ಪರಿಹಾರಗಳಿವೆ ಎಂಬುದರ ಕುರಿತು ನಾವು ಚರ್ಚಿಸಿದ್ದೇವೆ” ಎಂದು ಸಿಂಗ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

“ನಾವು ಹೇಳಿದ್ದನ್ನು ರಾಜ್ಯಪಾಲರು ಕೇಳಿಸಿಕೊಂಡಿದ್ದಾರೆ. ಜನರ ಹಿತಾಸಕ್ತಿಗಾಗಿ ಅವರು ಕ್ರಮ ಕೈಗೊಳ್ಳುತ್ತಾರೆ” ಎಂದು ಸಿಂಗ್ ತಿಳಿಸಿದ್ದಾರೆ.

“ಸರ್ಕಾರ ರಚಿಸಲು ಹಕ್ಕು ಮಂಡಿಸುತ್ತೀರಾ?” ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಂಗ್, “ಬಿಜೆಪಿಯ ಕೇಂದ್ರ ನಾಯಕತ್ವವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದಿದ್ದಾರೆ.

“ಆದಾಗ್ಯೂ, ನಾವು ಸಿದ್ಧರಿದ್ದೇವೆ ಎಂದು ತಿಳಿಸುವುದು ಸರ್ಕಾರ ರಚಿಸಲು ಹಕ್ಕು ಮಂಡಿಸುವುದಕ್ಕೆ ಸಮಾನವಾಗಿದೆ. ಸ್ಪೀಕರ್ ಟಿ. ಸತ್ಯಬ್ರತ ಅವರು 44 ಶಾಸಕರನ್ನು ಪ್ರತ್ಯೇಕವಾಗಿ ಮತ್ತು ಜಂಟಿಯಾಗಿ ಭೇಟಿ ಮಾಡಿದ್ದಾರೆ. ಹೊಸ ಸರ್ಕಾರ ರಚನೆಯನ್ನು ವಿರೋಧಿಸುವವರು ಯಾರೂ ಇಲ್ಲ” ಎಂದು ಸಿಂಗ್ ಹೇಳಿದ್ದಾರೆ.

“ಜನರು ತುಂಬಾ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹಿಂದಿನ ಅವಧಿಯಲ್ಲಿ, ಕೋವಿಡ್‌ನಿಂದಾಗಿ ಎರಡು ವರ್ಷಗಳು ಕಳೆದುಹೋಗಿದ್ದವು. ಈ ಅವಧಿಯಲ್ಲಿ, ಸಂಘರ್ಷದಿಂದಾಗಿ ಇನ್ನೂ ಎರಡು ವರ್ಷಗಳು ಕಳೆದುಹೋಗಿವೆ” ಎಂದು ರಾಧೇಶ್ಯಾಮ್ ಸಿಂಗ್ ಹೇಳಿಕೆ ನೀಡದ್ದಾರೆ.

ಮೇ 2023ರಲ್ಲಿ ಭುಗಿಲೆದ್ದ ಮೈತೇಯಿ ಮತ್ತು ಕುಕಿ-ಝೋ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷವನ್ನು ಸರ್ಕಾರ ನಿಭಾಯಿಸಿದ ರೀತಿ ಬಗ್ಗೆ ಟೀಕೆಗಳ ನಡುವೆ, ಬಿಜೆಪಿ ನಾಯಕ ಎನ್. ಬಿರೇನ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ, ಕಳೆದ ಫೆಬ್ರವರಿಯಿಂದ ಮಣಿಪುರ ರಾಷ್ಟ್ರಪತಿ ಆಳ್ವಿಕೆಯಲ್ಲಿದೆ.

60 ಸದಸ್ಯ ಬಲದ ವಿಧಾನಸಭೆಯಲ್ಲಿ ಪ್ರಸ್ತುತ 59 ಶಾಸಕರಿದ್ದು, ಒಬ್ಬರು ಶಾಸಕರ ಮರಣದಿಂದಾಗಿ ಒಂದು ಸ್ಥಾನ ಖಾಲಿ ಇದೆ.

ಬಿಜೆಪಿ ನೇತೃತ್ವದ ಒಕ್ಕೂಟದಲ್ಲಿ 32 ಮೈತೇಯಿ ಶಾಸಕರು, ಮೂವರು ಮಣಿಪುರಿ ಮುಸ್ಲಿಂ ಶಾಸಕರು ಮತ್ತು ಒಂಬತ್ತು ನಾಗಾ ಶಾಸಕರು ಸೇರಿ ಒಟ್ಟು 44 ಜನರಿದ್ದಾರೆ.

ಕಾಂಗ್ರೆಸ್‌ನ ಐವರು ಶಾಸಕರಿದ್ದು, ಅವರೆಲ್ಲರೂ ಮೈತೇಯಿ ಸಮುದಾಯಕ್ಕೆ ಸೇರಿದವರು.

ಉಳಿದ 10 ಶಾಸಕರು ಕುಕಿಗಳು. ಅವರಲ್ಲಿ ಏಳು ಮಂದಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದವರು. ಇಬ್ಬರು ಕುಕಿ ಪೀಪಲ್ಸ್ ಅಲೈಯನ್ಸ್‌ಗೆ ಸೇರಿದವರು ಮತ್ತು ಒಬ್ಬರು ಸ್ವತಂತ್ರರು.

ಸರ್ಕಾರಿ ಬಸ್ಸಿನ ವಿಂಡ್ ಶೀಲ್ಡ್ ಮೇಲೆ ಬರೆದಿದ್ದ ಮಣಿಪುರ ರಾಜ್ಯದ ಹೆಸರನ್ನು ಭದ್ರತಾ ಪಡೆಗಳು ಮರೆಮಾಡಿದ್ದಕ್ಕೆ ಮೈತೇಯಿ ಜನವಸತಿ ಪ್ರದೇಶವಾದ ಇಂಫಾಲ್ ಕಣಿವೆಯಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ಮಧ್ಯೆ ಸರ್ಕಾರ ರಚನೆಯೆ ಬೆಳವಣಿಗೆ ನಡೆದಿದೆ.

ಮೇ 20ರಂದು ಗ್ವಾಲ್ತಾಬಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಕ್ಷಮೆಯಾಚಿಸಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಭದ್ರತಾ ಸಲಹೆಗಾರ ​​ರಾಜೀನಾಮೆ ನೀಡಬೇಕು ಎಂದು ಮೈತೇಯಿ ಗುಂಪುಗಳು ಒತ್ತಾಯಿಸಿವೆ.

ಮೇ 2023ರಲ್ಲಿ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಜನಾಂಗೀಯ ಕಲಹ ಪ್ರಾರಂಭವಾದಾಗಿನಿಂದ, ಮೈತೇಯಿ ಗುಂಪುಗಳು ಯಾವುದೇ ಶಾಂತಿ ಪ್ರಕ್ರಿಯೆಯಲ್ಲಿ ರಾಜ್ಯದ ಪ್ರಾದೇಶಿಕ ಸಮಗ್ರತೆಯ ಬಗ್ಗೆ ಮಾತುಕತೆಗೆ ಅವಕಾಶವಿಲ್ಲ ಎಂದು ವಾದಿಸುತ್ತಿವೆ. ಆದರೆ, ಕುಕಿ-ಝೋ ಸಂಘಟನೆಗಳು ಬಿಕ್ಕಟ್ಟನ್ನು ಪರಿಹರಿಸಲು ಏಕೈಕ ಪರಿಹಾರವೆಂದರೆ ತಮ್ಮ ಸಮುದಾಯ ವಾಸಿಸುವ ಬೆಟ್ಟದ ಜಿಲ್ಲೆಗಳಿಗೆ ಪ್ರತ್ಯೇಕ ಆಡಳಿತವನ್ನು ರಚಿಸುವುದು ಎಂದು ಪ್ರತಿಪಾದಿಸುತ್ತಿವೆ.

ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕೈಗೊಂಡಿರುವ ಹಲವಾರು ಕ್ರಮಗಳಿಂದಾಗಿ ಇತ್ತೀಚಿನ ತಿಂಗಳುಗಳಲ್ಲಿ ರಾಜ್ಯದಲ್ಲಿ ಹಿಂಸಚಾರ ಕಡಿಮೆಯಾಗುತ್ತಿದ್ದ ಎನ್ನಲಾಗುತ್ತಿತ್ತು. ಈ ನಡುವೆ ಗ್ವಾಲ್ತಾಬಿ ಘಟನೆಯಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ ಎಂದು ವರದಿಗಳು ಹೇಳಿವೆ.

ಮಣಿಪುರದಲ್ಲಿ ಶಾಂತಿ ಕಾಪಾಡುವಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಫಲ: ಕಾಂಗ್ರೆಸ್ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -