ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾಯಿ ರಾಮ್ ಕ್ಯಾಂಪ್, ಮಸೀದಿ ಕ್ಯಾಂಪ್ ಮತ್ತು ಡಿಐಡಿ ಕ್ಯಾಂಪ್ ನಿವಾಸಿಗಳಿಗೆ ಗುರುವಾರ (ಫೆ.19) ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂಒಹೆಚ್ಯುಎ) ಭೂ ಮತ್ತು ಅಭಿವೃದ್ಧಿ ಕಚೇರಿ (ಎಲ್&ಡಿಒ) ಮೂಲಕ ಪುನರ್ವಸತಿ ನೋಟಿಸ್ಗಳನ್ನು ನೀಡಿದೆ. ಈ ಕೊಳಗೇರಿ ಗುಂಪುಗಳು (ಕ್ಲಸ್ಟರ್ಗಳು) ಎಲ್ & ಡಿಒ ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿಯಲ್ಲಿವೆ ಎಂದು ವರದಿ ಹೇಳಿದೆ.
ನೋಟಿಸ್ ಪ್ರಕಾರ, ಕೇಂದ್ರ ದೆಹಲಿಯಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಸಾವ್ಡಾ ಘೇವ್ರಾದ ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿ (ಡಿಯುಎಸ್ಐಬಿ) ಕಾಲೋನಿಯಲ್ಲಿ ಸ್ಥಳಾಂತರಗೊಳ್ಳುವ ಕೊಳಗೇರಿ ನಿವಾಸಿಗಳಿಗೆ ಫ್ಲಾಟ್ಗಳನ್ನು ನೀಡಲಾಗಿದೆ. ಮಂಡಳಿಯ ಪುನರ್ವಸತಿ ನೀತಿಯಡಿಯಲ್ಲಿ ಎಲ್&ಡಿಒ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಜನವರಿ 2024ರಲ್ಲಿ ನಡೆಸಿದ ಜಂಟಿ ಸಮೀಕ್ಷೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಅದಾಗ್ಯೂ, ಸರ್ಕಾರದ ನೋಟಿಸ್ ಜನರ ವಿರೋಧಕ್ಕೆ ಕಾರಣವಾಗಿದೆ. ವಿಶೇಷವಾಗಿ ಶಾಲಾ ಬೋರ್ಡ್ ಪರೀಕ್ಷೆಗಳು ನಡೆಯುತ್ತಿರುವಾಗ ನೋಟಿಸ್ ನೀಡಿರುವುದು ಜನರಲ್ಲಿ ಆತಂಕ, ಗೊಂದಲ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ ಎಂದು ವರದಿ ಉಲ್ಲೇಖಿಸಿದೆ.
“15 ದಿನಗಳಲ್ಲಿ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದರೆ ನಾವು ಏನು ಮಾಡುವುದು?, ನಾವಿಲ್ಲಿ ದಶಕಗಳಿಂದ ವಾಸುತ್ತಿದ್ದೇವೆ” ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಕೆಲವರು “ನಾವಿಲ್ಲಿ ಮನೆಗಳನ್ನು ನಿರ್ಮಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಈಗ ಆ ಮನೆಗಳನ್ನು ಬಿಟ್ಟು ಹೋದರೆ ನಮಗೆ ನಷ್ಟ ಉಂಟಾಗಲಿದೆ. ಅಲ್ಲದೆ, ಸ್ಥಳಾಂತಗೊಳ್ಳಲು ನಮ್ಮಲ್ಲಿ ಹಣವೂ ಇಲ್ಲ” ಎಂದು ಅಳಲು ತೋಡಿಕೊಂಡಿರುವುದಾಗಿ ವರದಿಗಳು ಹೇಳಿವೆ.
ಪ್ರಧಾನಿ ನಿವಾಸವು ಈ ಕೊಳಗೇರಿಗಳಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ. ಇದು ಈ ಪ್ರದೇಶವನ್ನು ರಾಜಧಾನಿಯ ಅತ್ಯಂತ ಹೈ-ಪ್ರೊಫೈಲ್ ಜುಗ್ಗಿ ಜೋಪ್ಡಿ (ಜೆಜೆ) ಕಾಲೋನಿಗಳಲ್ಲಿ ಒಂದನ್ನಾಗಿ ಮಾಡಿದೆ. ಅರ್ಹ ನಿವಾಸಿಗಳನ್ನು ನಿಯಮಾನುಸಾರ ಪುನರ್ವಸತಿಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಪ್ರತಿಪಾದಿಸುತ್ತಿದ್ದರೂ, ಹಠಾತ್ ಗಡುವು ಮತ್ತು ಸ್ಥಳಾಂತರದ ದೂರವು ತಮ್ಮ ಜೀವನೋಪಾಯ, ಮಕ್ಕಳ ಶಿಕ್ಷಣ ಮತ್ತು ಸಾಮಾಜಿಕ ಬಾಂಧವ್ಯಗಳಿಗೆ ಸಂಚಕಾರ ತಂದೊಡ್ಡಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಈ ವಿಷಯ ದೆಹಲಿ ಹೈಕೋರ್ಟ್ನಲ್ಲಿಯೂ ಬಾಕಿ ಇರುವುದರಿಂದ ಮತ್ತು ತೆರವು ವಿರುದ್ಧ ಮಧ್ಯಂತರ ರಕ್ಷಣೆ ಇನ್ನೂ ಜಾರಿಯಲ್ಲಿರುವುದರಿಂದ, ಭಾಯಿ ರಾಮ್ ಕ್ಯಾಂಪ್, ಮಸೀದಿ ಕ್ಯಾಂಪ್ ಮತ್ತು ಡಿಐಡಿ ಕ್ಯಾಂಪ್ನಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ ಎಂದು ವರದಿಗಳು ಹೇಳಿವೆ.


