ಕಥೆಯಾಗುವ ಮತ್ತು ಕಥೆಯಾಗಿಸುವ ಎರಡೂ ಪ್ರಕ್ರಿಯೆಗಳು ಬಹಳ ಸುಲಭದಂತೆ ಕಂಡರೂ ಅವು ಸಂಕೀರ್ಣವಾದವು ಮತ್ತು ಬೌದ್ಧಿಕವಾಗಿ ತೊಡಗಿಸಿಕೊಳ್ಳುವ ಕೆಲಸದಿಂದ ಕೂಡಿದ್ದಾಗಿರುತ್ತದೆ ಎಂಬುದು ಸಾಹಿತ್ಯದ ಅಭ್ಯಾಸಿಗಳಿಗೆ ಗೋಚರಿಸುವ ಸಂಗತಿಯಾಗಿವೆ. ಕಣ್ಣಾರೆ ಕಂಡದ್ದೋ, ಅಥವಾ ಕಿವಿಯಾರೆ ಕೇಳಿದ ವಿಷಯಗಳು ಕಥೆಗಾರನ ಕಲ್ಪನಾ ಮೂಸೆಯಲ್ಲಿ ರೂಪಾಂತರವಾಗುವುದು ಒಂದು ವಿಶೇಷ ಕ್ರಿಯೆ. ಅದರೊಂದಿಗೆ ಅನುಭವಕ್ಕೆ ದಕ್ಕಿದ ಮತ್ತು ದಕ್ಕದೇ ಉಳಿದ ಎಷ್ಟೋ ವಿಷಯ-ವಸ್ತುಗಳು ಕೂಡ ಕಥೆಯಾಗುವ ಪ್ರಕ್ರಿಯೆಯಲ್ಲಿ ಮುಖ್ಯವೆನಿಸುತ್ತವೆ. ಇಂಥ ಪ್ರಕ್ರಿಯೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿರುವ ಕಾರಣಗಳಿಂದಲೇ ’ನೀಲಕುರಿಂಜಿ’ ಬಹುಮುಖ್ಯವಾದ ಕಥಾಸಂಕಲನ ಎಂದೆನಿಸುತ್ತದೆ.
ಯುವ ಬರಹಗಾರ ದಾದಾಪೀರ್ ಜೈಮನ್ ಅವರಿಗಿರುವ ವಿಶಾಲ ದೃಷ್ಟಿಕೋನ, ನಿರೂಪಣಾ ಶೈಲಿ ಮತ್ತು ಕಥೆ ಹೆಣೆಯುವ ತಂತ್ರ ಹೊಸ ಕಥಾಮೀಮಾಂಸೆಯನ್ನು ಕಟ್ಟುವ ಪ್ರಯತ್ನ ಮಾಡಿದೆ ಎಂದರೂ ಅತಿಶಯೋಕ್ತಿಯಾಗಲಾರದು!
ದಾದಾಪೀರ್ ಜೈಮನ್ ಅವರ ಚೊಚ್ಚಲ ಕಥಾಸಂಕಲನ ’ನೀಲಕುರಿಂಜಿ’. ಇದರಲ್ಲಿನ ಕಥೆಗಳು ಹೊಸ ಅಸ್ಮಿತೆಗಳ ಆತ್ಮನಿವೇದನೆಯಂತೆಯೇ ಕಾಣುತ್ತವೆ. ಇಲ್ಲಿನ ಸಾಕಷ್ಟು ಕಥೆಗಳು ಎತ್ತುವ ಪ್ರಶ್ನೆಗಳಿಗೆ ಹೃದಯಶೂನ್ಯ ಸ್ಥಿತಿಯಲ್ಲಿರುವ ಸಮಾಜ ಉತ್ತರವಿಲ್ಲದೆ ತತ್ತರಿಸಿ ಹೋಗಬಹುದೇ ಎಂದೆನಿಸುತ್ತದೆ. ಒಂಟಿತನದ ಒದ್ದಾಟದಿಂದ ಹಿಡಿದು ಸಾವಿಗಾಗಿ ಕಾಯುವವರೆಗೂ ಇರಬಹುದಾದ ಬದುಕಿನ ಎಲ್ಲ ಸ್ತರಗಳ ಚಿತ್ರಗಳು ’ನೀಲಕುರಿಂಜಿ’ಯ ಕ್ಯಾನ್ವಾಸಿನ ಮೇಲೆ ಮೂಡಿವೆ.

ಮತಧರ್ಮಗಳಲ್ಲಿರುವ ಸಣ್ಣತನ ಮತ್ತು ಮನುಷ್ಯಪ್ರೀತಿಯ ಧರ್ಮದೊಳಗಿನ ದೊಡ್ಡತನಗಳ ನಡುವೆ ಇರುವ ಗೆರೆಯನ್ನು ಮುಗ್ಧ ಮಗುವಿನ ಹಾಗೆ ನೋಡುವಂತೆ ಮಾಡುವ ಇಮ್ರಾನ್ ಎಂಬ ಕೂಸು, ’ಪ್ರೀತಿಯಿಂದ ಗೆಲ್ಲಬಹುದು’ ಎಂಬುದನ್ನು ಕಲಿಸಿಕೊಡುವ ಗೆಳತಿಯ ಸ್ಟೇಟಸ್ನ ಪಾಠವು, ’ಬಾಯಾರಿಕೆ ಆದಾಗ ನೀರು ಕುಡಿಯೋದು ತಪ್ಪಾ?’ ಎಂದು ಮಹಿಳೆಯ ಲೈಂಗಿಕ ಸ್ವಾತಂತ್ರ್ಯದ ಹಕ್ಕಿನ ಪ್ರಶ್ನೆಗೆ ದನಿಯಾಗುವ ಅಜ್ಜಿಯೂ, ಸಂಬಂಧಗಳ ಸಂಕೋಲೆಯಲ್ಲಿ ಸತ್ತು ಬದುಕುವ ಮತ್ತು ಬದುಕಿಯೂ ಸಾಯುವ ’ಕೊನೆಯ ಮಳೆ’ಯ ಹನಿಯೂ, ಹೀಗೆ ಕಥೆಗಳ ಹೂರಣ ಮನುಷ್ಯನ ಒದ್ದಾಟಗಳ ಅನುಭವಗಳನ್ನು ಯಥಾವತ್ತಾಗಿ ಅನುವಾದ ಮಾಡಿದಹಾಗಿದೆ.
ಮೇಲ್ಸ್ತರದ ಅಂಶಗಳಷ್ಟೇ ಈ ಸಂಕಲನದ ಕಥೆಗಳಲ್ಲಿ ಅಭಿವ್ಯಕ್ತಗೊಂಡಿದ್ದರೆ ಇದು ಮತ್ತೊಂದು ಕಥಾಸಂಕಲವಾಗಿ ಉಳಿದುಹೋಗುತ್ತಿತ್ತು. ಆದರೆ ಈ ಸಂಕಲನದ ಕಥೆಗಳ ವಿಶೇಷವೆಂದರೆ ಹೊಸ ಅಸ್ಮಿತೆಗಳನ್ನು ಆಲಂಗಿಸುವ ಮನಸ್ಥಿತಿಗಳನ್ನು ರೂಪಿಸಿರುವುದಾಗಿದೆ. ಸಲಿಂಗ ಪ್ರೇಮದ ಸೆಳೆತಗಳು ಮತ್ತು ಅದರಿಂದಲೂ ಬಿಡಿಸಿಕೊಂಡು ಬದುಕಬೇಕು ಎನ್ನುವ ಹಪಾಹಪಿಯ ವಿಚಿತ್ರ ಬದುಕಿನ ರೀತಿಯನ್ನು ಕಥೆಗಾರ ಚಿತ್ರಿಸಿರುವುದು ಈ ಹೊಸ ಅಸ್ಮಿತೆಗಳ ಮಾತಿಗೆ ರುಜುವಾತಿನಂತಿದೆ. ಅನಂತು ಅನು ಆಗಿ ಬದಲಾವಣೆ ಆಗುವುದನ್ನು ಈ ಸಮಾಜ ನೋಡುವ ರೀತಿಯ ಮನೋವೈಶಿಷ್ಟತೆಯನ್ನು ’ಆವರಣ’ ಕಥೆಯಲ್ಲಿ ಕಾಣಬಹುದು. ಇನ್ನು ’ಆಳದಾಕಾಶದ ಪ್ರತಿಬಿಂಬ’ ಎನ್ನುವ ಇಡೀ ಕಥೆ ಒಂದು ರೂಪಕವಾಗಿ ಚಿತ್ರಿಸಿರುವುದು ನಿಜಕ್ಕೂ ಸೋಜಿಗವೆನ್ನಿಸುತ್ತದೆ.
ಹೊಸ ಅಸ್ಮಿತೆಯಯನ್ನು ಕಟ್ಟಿಕೊಂಡು, ತನ್ನದಾಗಿಸಿಕೊಂಡು ಬದುಕ ಹೊರಟವರ ಸಂವೇದನೆಗಳು ಮತ್ತು ಒಡಲಾಳದ ಸಂಕಟಗಳು ಈ ಕತೆಗಳ ನೀತಿಸಂಹಿತೆಯಂತೆ ಇವೆ. ಲಿಂಗ ಅಲ್ಪಸಂಖ್ಯಾತರನ್ನು ನೋಡುವ ಕ್ರಮವನ್ನು ಬದಲಿಸಿಕೊಳ್ಳುವ ಮತ್ತು ತಿದ್ದಿಕೊಳ್ಳುವ, ಬದುಕಿನ ವ್ಯಾಕರಣವನ್ನು ಹೊಸದಾಗಿ ವ್ಯಾಖ್ಯಾನಿಸುವ ರೀತಿಯನ್ನು ಈ ನೀತಿಸಂಹಿತೆ ಒಳಗೊಂಡಿದ್ದು ಅನುಕರಣೀಯವಾಗಿದೆ.
ಇವುಗಳ ಜೊತೆಗೆ ಭಾಷೆಯನ್ನು ಅಗತ್ಯವಿದ್ದಲ್ಲಿ ಸೂಕ್ಷ್ಮವಾಗಿ ಮತ್ತು ಬೇಕಿದ್ದಲ್ಲಿ ತೀಕ್ಷ್ಣವಾಗಿ ಬಳಸುವ ನಿರೂಪಣಾ ತಂತ್ರ ಕಥೆಗಾರನಿಗೆ ಒಲಿದಿದೆ. ಕೆಲವು ಕಡೆಗೆ ಅನಗತ್ಯವೆನಿಸದರೂ ತನಗೇ ಅರಿವಿಲ್ಲದಂತೆ ಕಥೆಯನ್ನು ವಿವರಿಸುವ ಆಸ್ಥೆಯನ್ನು ಕತೆಗಾರ ತೋರಿದರೂ, ನಾಲ್ಕಾರು ಸಾಲುಗಳಲ್ಲಿ ಹೇಳಬಹುದಾದ ವಿಚಾರವನ್ನು ಒಂದೇ ರೂಪಕದ ಮೂಲಕವೂ ಹೇಳುವುದು ಕಥಾ ಕೌಶಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಒಟ್ಟಿನಲ್ಲಿ ’ನೀಲಕುರಿಂಜಿ’ ಕಥಾ ಸಂಕಲನ ವಿನೂತನ ಪ್ರಯೋಗಗಳ ವಿಶಿಷ್ಟವಾದ ಕೃತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಚಾಂದ್ ಪಾಷ ಎನ್ ಎಸ್
ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ. ಬೆಂಗಳೂರು ವಿ ವಿ


