Homeಮುಖಪುಟಪ್ರತಿಕ್ರಿಯೆ; ಕೊಲ್ವ ಮುನ್ನ ಸೊಲ್ಲಡಗಿಸುವ ಹುನ್ನಾರ

ಪ್ರತಿಕ್ರಿಯೆ; ಕೊಲ್ವ ಮುನ್ನ ಸೊಲ್ಲಡಗಿಸುವ ಹುನ್ನಾರ

- Advertisement -
- Advertisement -

‘ಕೊಲ್ವ ಮುನ್ನ ಸೊಲ್ಲಡಗಿಸು’ ಇದೊಂದು ಕನ್ನಡದ ನಾಣ್ಣುಡಿ. ಕೊಬ್ಬಿದ ಹಂದಿಯನ್ನು ಹಬ್ಬಕ್ಕೆ ಕೊಯ್ಯುವಾಗ ಅದು ಕುಯ್ಯೊ ಎಂದು ಊರು ಕೇರಿ ಹಾರಿಹೋಗುವಂತೆ ಕಿರುಚುತ್ತದೆ. ಅದರ ದಪ್ಪ ಕತ್ತು ಕತ್ತರಿಸುವುದು ತಡವಾಗುತ್ತದೆಂದು ಚೂರಿಯಿಂದ ಕುತ್ತಿಗೆ ಇರಿದು ನೆತ್ತರು ಹರಿಸಿ ಸೊಲ್ಲಡಗಿಸಿ, ಅನಂತರ ನಿಧಾನವಾಗಿ ಕೊಯ್ಯುತ್ತಿದ್ದರು-ನಮ್ಮ ಹಳ್ಳಿಯಲ್ಲಿ. ’ಕೊಲ್ವ ಮುನ್ನ ಸೊಲ್ಲಡಗಿಸುವುದು’ ಎಂದರೆ ಇದು. ಒಂದು ನುಡಿಯನ್ನಾಡುವ ಒಂದು ಜನಾಂಗವನ್ನು ಕೊಲ್ಲುವ ಮುನ್ನ ಅವರ ಸೊಲ್ಲ (Mother Tongue) ಅಡಗಿಸಬೇಕು. ಒಂದು ಭಾಷೆ-ಸೊಲ್ಲು-ನುಡಿ ಜೀವಂತ ಇದೆ ಎಂದರೆ ಅದನ್ನಾಡುವ ಸಮೂಹ ಜೀವಂತ ಇದೆ ಎಂದರ್ಥ. ಇದು ಜೀವಾತ್ಮ ಸಂಬಂಧ. ಆದ್ದರಿಂದ ಒಂದು ಜನಾಂಗವನ್ನು ನಾಶಮಾಡುವುದೆಂದರೆ ಮೊದಲು ಅವರಾಡುವ ’ಮಾತನ್ನು ಮನ್ನ’ ಮಾಡಬೇಕು-ನಾಶಗೊಳಿಸಬೇಕು. ’ಮಾತು’ ಮರೆತ ಜನಾಂಗ ಬದುಕಿದ್ದರೂ ಸತ್ತಂತೆ ತಾನೆ? ಭಾಷೆ ಎಂದರೆ ನಮ್ಮ ಸಂಸ್ಕೃತಿಯ ಅಭಿವ್ಯಕ್ತಿ. ಅದನ್ನು ಮರೆತೆವೆಂದರೆ ನಮ್ಮ ’ಅಸ್ಮಿತೆ’ಯನ್ನೇ (Identity) ಮರೆತಂತೆ. ಒಮ್ಮೆ ಮಾತು ’ವಿಸ್ಮೃತಿ’ಗೆ ಹೋಯಿತೆಂದರೆ ಅದನ್ನಾಡುವ ಜನ ಗೆದ್ದವರ ಗುಲಾಮರು. ಗುಲಾಮರಾಗುವ ಜನ ಅನುಗಾಲ ಬದುಕಿದರೇನು ಬಂತು? ಸರಪಣಿಯಲ್ಲಿ ಕಟ್ಟಿಸಿಕೊಂಡ ನಾಯಿಗೆ ಸ್ವಾತಂತ್ರ್ಯ ಉಂಟೆ?

ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು,
ದೇವನುಡಿಯೆಂದೊಂದು ಹತ್ತಿ ಜಗ್ಗಿ

ಎಂದು ರಾಷ್ಟ್ರಕವಿ ಕುವೆಂಪು 1935ರಲ್ಲೇ ಎಚ್ಚರಿಸಿದರು. ಆದರೆ ಇವತ್ತಿಗೂ ಕನ್ನಡಿಗರು ಎಚ್ಚರಗೊಳ್ಳಲಾಗಿಲ್ಲ. ಇಂಗ್ಲಿಷ್ ಹಿಂದಿ ಸಂಸ್ಕೃತದ ಹೊರೆ ಇಳಿಯಲಿಲ್ಲ. ’ಕರ್ನಾಟಕ ಎಂಬುದೇನು ಬರಿಯ ಹೆಸರೆ ಮಣ್ಣಿಗೆ?’ ಎಂದು ಕೇಳಲಾಗಿಲ್ಲ! ಸ್ವಾತಂತ್ರ್ಯವೂ ಬಂತು; ಸ್ವರಾಜ್ಯವೂ ಆಯಿತು; ಭಾಷಾವಾರು ಪ್ರಾಂತ್ಯಗಳೂ ಆದುವು.
ಒಂದೊಂದು ಭಾಷೆಯೂ ಒಂದೊಂದು ರಾಷ್ಟ್ರೀಯತೆ. ಆದರೆ ಕೂಡು ರಾಷ್ಟ್ರಗಳಿಗೆ ಸಲ್ಲಬೇಕಾದ ’ಸಮಬಾಳು ಸಮಪಾಲು’ ದಕ್ಕಲಿಲ್ಲ. ಉತ್ತರದವರದೇ ಪಾರುಪತ್ಯ. ’ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೆ ಹದ ಹಾಕಿ ತಿವಿದರದು ಹೂವೆ?’ ಎಂದು ಕವಿವರ ಕೇಳಿದರು. ಆದರೂ ನಮ್ಮವರೆ ಈಗ ಹದಹಾಕಿ ತಿವಿಯುತ್ತಲೇ ಇದ್ದಾರೆ- ಮತ್ತೆಮತ್ತೆ! ಕೇಳುವರಾರು?

ಕುವೆಂಪು

ಇಷ್ಟೆಲ್ಲಾ ಪ್ರಸ್ತಾಪಿಸಿದ ಕಾರಣ ಇಷ್ಟೆ. ಇದೇ ಮಾರ್ಚ್ 30, 2022ರ ನ್ಯಾಯಪಥ ವಾರಪತ್ರಿಕೆಯಲ್ಲಿ ಪ್ರಕಟವಾಗಿರುವ ಡಾ.ಎಂ.ರವಿಯವರ ’ಕರ್ನಾಟಕದಲ್ಲಿ ಕನ್ನಡಕ್ಕೆ ಭವಿಷ್ಯವಿದೆಯೇ?’ ಎಂಬ ಲೇಖನವನ್ನು ಓದಿದ್ದು. ಇವತ್ತು ಕನ್ನಡ ಕಲಿಕೆ, ಪ್ರಶ್ನೆ ಪತ್ರಿಕೆ ಮೊದಲುಗೊಂಡು ಯಾವ ಮಟ್ಟದಲ್ಲಿದೆ? ಕಲಿತರೂ ಉದ್ಯೋಗ ಸಿಗುತ್ತದೆಯೆ? ಯಾಕಿಂತ ದುರ್ಗತಿ ಬಂದಿದೆ? ಇದಕ್ಕೆಲ್ಲಾ ಕಾರಣರು ಯಾರು? ಇಂದಿನ ವ್ಯವಸ್ಥೆಗೆ ಕನ್ನಡದ ಬಗ್ಗೆ ಯಾಕೀ ಅಸಡ್ಡೆ? ಇವುಗಳೆಲ್ಲ ಕನ್ನಡ ಅಸ್ಮಿತೆಯ, ಅಸ್ತಿತ್ವದ, ಅನ್ನದ ಪ್ರಶ್ನೆಗಳಲ್ಲವೆ? ಎಂದು ರವಿ ಮೊನಚು ಭಾಷೆಯಲ್ಲಿ ತಿವಿದು ಕೇಳುತ್ತಿದ್ದಾರೆ-ಘೇಂಡಾಮೃಗದ ದಪ್ಪ ಚರ್ಮಕ್ಕೂ ಚುರುಕು ಮುಟ್ಟುವಂತೆ. ಆದರೆ ಈ ಕನ್ನಡದ ಕಂದನ ದನಿ ವಿಧಾನಸೌಧ, ಪಾರ್ಲಿಮೆಂಟ್ ಭವನಕ್ಕೆ ಮುಟ್ಟೀತೆ? ಖಾಸಗಿ ಶಾಲಾ ಕಾಲೇಜು ಸಂಘಸಂಸ್ಥೆಗಳಿಗೆ ಕೇಳುವುದೇ? ಪೋಷಕರಿಗೆ ಮುಟ್ಟುವುದೇ? ಇಲ್ಲ.

ಐ.ಪಿ.ಎಸ್; ಕೆ.ಎ.ಎಸ್ ಪರೀಕ್ಷೆಗಳಲ್ಲಿ ಕನ್ನಡವನ್ನು ಕೈಬಿಡಲಾಗಿದೆ. ಕೇಂದ್ರ ರೈಲ್ವೆ, ಅಂಚೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಮಾತಾಡುವವರು ಕಣ್ಮರೆಯಾಗುತ್ತಿದ್ದಾರೆ. ಎಲ್ಲವೂ ಹಿಂದಿಯದೇ ಮೇಲುಗೈ! ಒಂದು ಜನಾಂಗ, ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಭಾಷೆ. ಒಂದು ಜಿ.ಎಸ್.ಟಿ ಮುಂತಾಗಿ ಹೇಳುತ್ತಾ ಉಳಿದಂತೆ ಎಲ್ಲವನ್ನು ಮೂಲೆಗೆ ತಳ್ಳಲಾಗುತ್ತಿದೆ. ಹಿಂದೆಯೇತರ ಪ್ರಾದೇಶಿಕ ಭಾಷೆಗಳು ನೂಕಿದಾಕಡೆ ಬಿದ್ದು ಸೊರಗಬೇಕಾಗಿದೆ. ಶಾಸಕರು, ಸಂಸದರು ಪಕ್ಷಸಿದ್ಧಾಂತ, ಸ್ವಧರ್ಮ, ಸ್ವಜಾತಿ, ಕಡೆಗೆ ಕಾಂಚನವೆಂಬ ಮೃಗದ ಬೆನ್ನು ಹತ್ತಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗುತ್ತಿದ್ದಾರೆ. ಇತ್ತ ಮತದಾರ ಪ್ರಭುಗಳು ಚುನಾವಣೆ ಬರುತ್ತವೆ ಹೋಗುತ್ತವೆ, ಯಾವ ಪಕ್ಷ ಆಳಿದರೇನು? ನಾವು ಗೈಯ್ಯುವುದು ತಪ್ಪೀತೆ? ಎಂಬ ಕರ್ಮ ಸಿದ್ಧಾಂತ ನಂಬಿ ದುಡಿಯುತ್ತಿದ್ದಾರೆ. ಆದರೂ ನಮ್ಮ ಮಕ್ಕಳು ಇಂಗ್ಲಿಷ್ ಕಲಿತರೆ ಸಾಕು ಉದ್ಧಾರ ಆಗುವರೆಂಬ ಭ್ರಮೆಯಿಂದ ಕೂಲಿನಾಲಿ ಮಾಡಿ ಹೊಟ್ಟೆಬಟ್ಟೆ ಕಟ್ಟಿ ಹಣ ಕೂಡಿಸಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ ಮಕ್ಕಳು ಇಂಗ್ಲಿಷ್ ಹಿಂದಿ ವ್ಯಾಕರಣ ನಿಯಮಗಳನ್ನು ಕಲಿಯುವುದರಲ್ಲಿಯೇ ಅವರ ಶಾಲಾ ಜೀವನ ಮುಗಿಯುತ್ತದೆ. ಅಷ್ಟರಲ್ಲಿ ಅವರ ಸೃಜನಶೀಲ ಪ್ರತಿಭೆ ಮುರುಟಿ ಹೋಗುತ್ತದೆ. ಮಾತೃಭಾಷೆ ಮರೆತು ಹೋಗುತ್ತದೆ; ತಾಯಿನುಡಿ ತೊದಲುತ್ತದೆ!

ತಾಯಿನುಡಿಯ ಬಗ್ಗೆ ನ್ಯಾಯದ ತಕ್ಕಡಿಯಂತೂ ಮ್ಯಾನೇಜ್ ಮೆಂಟ್ ಶಾಲೆಗಳ ಕಡೆಗೆ ವಾಲುತ್ತದೆ. ಸರ್ಕಾರಿ ಶಾಲೆಗಳ ಕಲಿಕಾಮಟ್ಟ, ಮೂಲಸೌಕರ್ಯ ಖಾಸಗೀ ಶಾಲೆಗಳ ಮಟ್ಟದಲ್ಲಿದ್ದೂ ಯಾಕೆ ನೀವು ಮಕ್ಕಳನ್ನು ಗೋಳಾಡಿಸುತ್ತೀರಿ ಎಂದು ಬಿಡಿಸಿ ಹೇಳುವುದಿಲ್ಲ. ಮತ್ತು ನ್ಯಾಯಾಲಯಗಳಲ್ಲೂ ಕನ್ನಡ ಮಾಧ್ಯಮ ಜಾರಿಗೆ ಬಂದಿಲ್ಲ. ಯಥಾ ರಾಜ ತಥಾ ಪ್ರಜೆ. ಅಷ್ಟೇ ಅಲ್ಲ ನ್ಯಾಯಾಲಯಗಳೂ ಸಹ-ಕನ್ನಡದಲ್ಲಿ ತೀರ್ಪು ನೀಡುತ್ತಿಲ್ಲ. ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿರುವ ’ವಿಶ್ವಗುರು’ ಎಂದು ತನ್ನ ಬೆನ್ನನ್ನು ತಾನೆ ತಟ್ಟಿಕೊಳ್ಳುತ್ತಿರುವ ಭಾರತವು ’ಇದು ಬಹುಭಾಷಾ ಸಂಸ್ಕೃತಿಗಳ ಕೂಟ ರಾಷ್ಟ್ರ ವ್ಯವಸ್ಥೆ’ ಎಂಬ ಸಂವಿಧಾನದ ಮಾತನ್ನೇ ಮರೆತು ವರ್ತಿಸುತ್ತಿದೆ. ನಮ್ಮ ಕವಿ ಸರ್ವಜ್ಞ ’ಮಾತನೆ ಉಣಕೊಟ್ಟು, ಮಾತನೆ ಉಡಕೊಟ್ಟು, ಮಾತಿನ ಮುತ್ತ ಸುರಿಸಿ ಹೋದಾತನೇ ಜಾಣ’ ಎಂದ ಮಾತು ನಿಜವಾಗುತ್ತಿದೆ.

ಹಿಂದೆ ವಸಾಹತು ಸಾಮ್ರಾಜ್ಯಶಾಹಿ ವಿಸ್ತರಣವಾದಿಗಳು ಆಫ್ರಿಕಾ, ಇಂಡಿಯಾ ಮುಂತಾದ ತಮ್ಮ ವಸಾಹತು ರಾಷ್ಟ್ರಗಳನ್ನು ವಶಪಡಿಸಿಕೊಳ್ಳುವ ಕಾಲಕ್ಕೆ, ಇಲ್ಲಿಯ ನೈಸರ್ಗಿಕ ಸಂಪತ್ತನ್ನೂ ಮಾನವ ಬಲವನ್ನೂ ಕೊಳ್ಳೆ ಹೊಡೆಯುವುದಕ್ಕಾಗಿ ಎರಡು ಬಗೆಯ ಕಾರ್ಯಾಚರಣೆಯನ್ನು ಕೈಗೊಂಡರು; ಒಂದು ತಮ್ಮ ಮತಧರ್ಮವೇ ಸರ್ವಶ್ರೇಷ್ಠ ಎಂಬ ಪ್ರಚಾರ; ಇನ್ನೊಂದು ತಮಗೆ ಬೇಕಾದ ಯೋಧರನ್ನು ಹಾಗೂ ಗುಮಾಸ್ತರನ್ನು ತಯಾರು ಮಾಡಿಕೊಳ್ಳುವುದಾಗಿ ದೇಶೀಯರಿಗೆ ಇಂಗ್ಲಿಷ್ ಕಲಿಸುವಿಕೆ. ಇದರ ಪರಿಣಾಮ ಏನಾಯಿತು? ಸ್ಥಳೀಯ ಭಾಷೆಗಳು ನೇಪಥ್ಯಕ್ಕೆ ಹೋದವು. ನಮ್ಮ ಶೂದ್ರ, ರೈತ, ದಲಿತರ ಮಕ್ಕಳು ಬಂದೂಕು ಹಿಡಿದು ಸ್ವದೇಶಿ ಚಳವಳಿಯ ನೇತಾರರತ್ತಲೇ ಗುರಿಯಿಟ್ಟರು. ಇಂಗ್ಲಿಷ್ ಕಲಿತ ಬಿಳಿಕಾಲರ್ ಗುಮಾಸ್ತರು ದುಭಾಷಿಗಳೂ ದಲ್ಲಾಳಿಗಳೂ ಆಗಿ ಸಂಪತ್ತುಗಳಿಸಿ ನಮ್ಮವರ ಶೋಷಣೆಗೇ ನೆರವಾದರು.

ಪ್ರಸ್ತುತ ರಾಜಕಾರಣಿಗಳು ಇದೇ ಮಾರ್ಗ ಹಿಡಿದು, ಸ್ವಧರ್ಮ, ಸ್ವಜಾತೀಯ ದೇವರು ಧರ್ಮಕ್ಕೆ ಸಂಬಂಧಿಸಿದ ಮೂಢನಂಬಿಕೆಗಳಿಗೆ ಒತ್ತುಕೊಟ್ಟು ಬಿತ್ತಿಬೆಳೆದು ಓಟು ಗಿಟ್ಟಿಸಿ ಗೆಲ್ಲುತ್ತಾರೆ. ಆಮೇಲೆ ಗೆದ್ದ ಏಣಿಯನ್ನು ಒದ್ದು ಮೇಲೇರುತ್ತಾರೆ. ಹಿಂದೆ ನೋಡಿದರೆ ಸಾವು ನೋವಿನ ಬದುಕು ಹಾಗೇ ಬಿದ್ದಿದೆ! ಈಗ ಇದನ್ನೆಲ್ಲ ರಿಪೀಟ್ ಮಾಡಿ ಪ್ರಯೋಜನ ಇಲ್ಲ. ಸತ್ತಂತಿಹರನು ಬಡಿದೆಚ್ಚರಿಸುವ ಡಿಂಡಿಮ ಎಲ್ಲಿ ಹೋಯಿತು? ಒಡಕು ದನಿ ಬರುತ್ತಿದೆಯಲ್ಲ ಏನು ಮಾಡಬೇಕು? ಕನ್ನಡಿಗರೂ ಉಳಿಯಬೇಕು; ಕನ್ನಡವೂ ಉಳಿಯಬೇಕು.

ಏನು ಮಾಡಬೇಕು ಎಂಬುದನ್ನು ಕುವೆಂಪು 1965ರಲ್ಲಿ ’ರಾಷ್ಟ್ರಕವಿ ಪ್ರಶಸ್ತಿ’ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ: “ಮಹನೀಯರೆ, ಕೊನೆಯದಾಗಿ ಅಧಿಕೃತ ಶಾಸನಕರ್ತರಾದ ನಿಮ್ಮಲ್ಲಿ ಅನಧಿಕೃತ ಶಾಸನಕರ್ತನಾದ ನನ್ನ ಒಂದು ಅಹವಾಲು; ಅದು ಇಂಗ್ಲಿಷ್ ಭಾಷೆಗೂ ಶಿಕ್ಷಣ ಮಾಧ್ಯಮಕ್ಕೂ ಸಂಬಂಧಪಟ್ಟಿದ್ದು. ವಿವರಕ್ಕಾಗಲಿ ವಾದಕ್ಕಾಗಲಿ ಜಿಜ್ಞಾಸೆಗಾಗಲಿ ನಾನೀಗ ಕೈ ಹಾಕುವುದಿಲ್ಲ. ಅದು ತತ್ಸಮಯ ಸಾಧ್ಯವೂ ಅಲ್ಲ; ಅದಕ್ಕಿಲ್ಲಿ ಕಾಲಾವಕಾಶವೂ ಇಲ್ಲ. ತಮ್ಮ ಗಮನವನ್ನು ಅತ್ತಕಡೆ ಎಳೆದು, ಅದು ತಮ್ಮ ಶೀಘ್ರ ಪರಿಶೀಲನೆಗೂ ಇತ್ಯರ್ಥಕ್ಕೂ ಒಳಗಾಗುವಂತೆ ಮಾಡುವುದೆ ನನ್ನ ಸದ್ಯಃಪ್ರಯತ್ನದ ಮುಖ್ಯ ಉದ್ದೇಶ. ಆ ವಿಚಾರವಾಗಿ ನಮ್ಮ ರಾಷ್ಟ್ರಪಿತನಾದಿಯಾಗಿ ಸಾವಿರಾರು ದೇಶಭಕ್ತರೂ ನೂರಾರು ಸ್ವದೇಶೀಯ ಮತ್ತು ವಿದೇಶೀಯ ವಿದ್ಯಾತಜ್ಞರೂ ಹೇಳಿದ್ದಾರೆ, ಮಾತನಾಡಿದ್ದಾರೆ, ಬರೆದಿದ್ದಾರೆ. ಹೊತ್ತಗೆಗಳನ್ನೆ ಪ್ರಕಟಿಸಿಯೂ ಇದ್ದಾರೆ. ಆದರೆ ನಮ್ಮ ದೇಶದ ಪ್ರಚ್ಛನ್ನ ಶತ್ರುಗಳಾದ ಸ್ವಾರ್ಥಸಾಧಕ ಪಟ್ಟಭದ್ರ ಹಿತಾಸಕ್ತ ಪ್ರತಿಗಾಮಿ ಶಕ್ತಿಗಳು, ಮಕ್ಕಳಿಗೆ ಹಾಲುಣಿಸುವ ನೆವದಿಂದ ಅವರನ್ನು ಕೊಲ್ಲುತ್ತಿದ್ದ ಭಾಗವತ ಪುರಾಣದ ಪೂತನಿಯಂತೆ, ಬಲಾತ್ಕಾರದ ಇಂಗ್ಲಿಷ್ ಭಾಷೆಯಿಂದಲೂ ಇಂಗ್ಲಿಷ್ ಮಾಧ್ಯಮದಿಂದಲೂ ವರ್ಷ ವರ್ಷವೂ ಪರೀಕ್ಷೆಯ ಜಿಲೊಟಿನ್ನಿಗೆ ಕೋಟ್ಯಾಂತರ ಬಾಲಕರ ಮತ್ತು ತರುಣರ ತಲೆಗಳನ್ನು ಬಲಿ ಕೊಡುತ್ತಿದ್ದಾರೆ. ಆ ನಷ್ಟದ ಪರಿಮಾಣವನ್ನು ಊಹಿಸಲೂ ಸಾಧ್ಯವಿಲ್ಲ. ಬಹುಶಃ ಸರಿಯಾಗಿ ಲೆಕ್ಕ ಹಾಕಿದರೆ, ನಾಲ್ಕಾರು ಪಂಚವಾರ್ಷಿಕ ಯೋಜನೆಗಳ ಮೊತ್ತವೆ ಆದರೂ ಆಗಬಹುದೇನೊ!

ಇಂಗ್ಲಿಷ್ ಭಾಷೆ ಬಲಾತ್ಕಾರದ ಸ್ಥಾನದಿಂದ ಐಚ್ಚಿಕ ಸ್ಥಾನಕ್ಕೆ ನಿಯಂತ್ರಣಗೊಳ್ಳದಿದ್ದರೆ, ಇಂಗ್ಲಿಷ್ ಶಿಕ್ಷಣ ಮಾಧ್ಯಮ ತೊಲಗಿ ಪ್ರಾದೇಶಿಕ ಭಾಷೆಗೆ ಆ ಸ್ಥಾನ ಲಭಿಸದಿದ್ದರೆ, ನಮ್ಮ ದೇಶ ಹತ್ತೇ ವರ್ಷಗಳಲ್ಲಿ ಸಾಧಿಸಬೇಕಾದುದನ್ನು ಇನ್ನೊಂದು ನೂರು ವರ್ಷಗಳಲ್ಲಿಯೂ ಸಾಧಿಸಲಾರದೆ ನಿತ್ಯರೋಗಿಯಂತಿರಬೇಕಾಗುತ್ತದೆ.”

ಇಂದಿಗೂ ಪರಿಸ್ಥಿತಿ ಕುವೆಂಪು ಹೇಳಿದ ಹಾಗೇ ಇದೆ. ವಿದ್ಯಾರ್ಥಿಗಳ, ರೈತರ, ದಲಿತರ, ಮಹಿಳೆಯರ, ಮಕ್ಕಳ ದನಿ ಕೇಳುವರೇ ಇಲ್ಲ. ಧರೆಯೆದ್ದು ಉರಿದರೆ ಆರಿಸುವವರಾರು? 1812ರಲ್ಲಿ ಸಾಮ್ರಾಜ್ಯಶಾಹಿ ನೆಪೋಲಿಯನ್ ತನ್ನ ಹನ್ನೆರಡು ಲಕ್ಷದಷ್ಟು ಸೈನ್ಯ ಸಮೇತ ದಂಡೆತ್ತಿ ಬಂದು ಮಾಸ್ಕೋ ನಗರದ ಬಾಗಿಲಿಗೆ ನಿಲ್ಲಿಸುತ್ತಾನೆ. ಆಗ ಏನಾಯಿತು? ಅದುವರೆಗೆ ಫ್ರೆಂಚ್ ಭಾಷೆ, ಫ್ರೆಂಚ್ ಸಂಸ್ಕೃತಿಯನ್ನೇ ಅನುಕರಿಸುತ್ತಾ ಅದೇ ಭ್ರಮೆಯಲ್ಲಿ ತಮ್ಮ ಅಸ್ಮಿತೆಯನ್ನೇ ಮರೆತು ಅದೇ ನಾಗರಿಕತೆ ಎಂದು ಮೈಮರೆತು ಹೋಗಿದ್ದ ರಷ್ಯಾದ ಎಲೈಟ್ ಜನ ಒಮ್ಮೆಗೆ ಸಿಡಿಲು ಬಡಿದಂತಾಗಿ ಎಚ್ಚರಗೊಂಡರಂತೆ. ಆದಿಮ ರಷ್ಯಾದ ವೃದ್ಧ ಸಿಂಹ ಒಮ್ಮೆಗೆ ಎದ್ದು ಮೈಮುರಿದು ಬಾಯ್ದೆರೆದು ಆಕಳಿಸಿ ಘರ್ಜಿಸುತ್ತಾ ಫ್ರೆಂಚ್ ಯೋಧರನ್ನು ಬೆನ್ನಟ್ಟಿ ಹೋಗಿ ಹಿಮ್ಮೆಟಿಸಿ ತನ್ನ ದೇಶ-ಭಾಷೆ ಸಂಸ್ಕೃತಿಯನ್ನು ಜತನ ಮಾಡಿತು ಎಂದು ಮಹರ್ಷಿ ಟಾಲ್‌ಸ್ಟಾಯ್ ತಮ್ಮ ‘War and Peace’ ಎಂಬ ಬೃಹತ್
ಕಾದಂಬರಿಯಲ್ಲಿ ಕಾಣಿಸುತ್ತಾರೆ. ಪ್ರಸ್ತುತ ಕನ್ನಡದ ’ಸೊಲು’ ಕನ್ನಡಿಗರ ಅಸ್ಮಿತೆ ಉಳಿಯಬೇಕಾದರೆ ಸಂವಿಧಾನಾತ್ಮಕ ರೀತಿಯಲ್ಲೇ ಸಮಸ್ತ ಕನ್ನಡಿಗರು ಪ್ರತಿಭಟಿಸಿ ದಂಗೆಯೇಳಬೇಕು. ಯಾಕೆಂದರೆ ಆತ್ಮಾಭಿಮಾನ ಸವೋತ್ಕೃಷ್ಟ!

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡಕ್ಕೆ ಭವಿಷ್ಯವಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಶ್ರೀಯುತ ಪ್ರೊ.ಶಿವರಾಮಯ್ಯನವ ರ ಲೇಖನ ಸಂದರ್ಬೋಚಿತವಾಗಿದ್ದು, ನಾವೆಲ್ಲರೂ ಕೂಡ ಆತ್ಮ ವಿಮರ್ಶೇಯ ಜೊತೆಗೆ ಮುಂದಿನ ದಿನಗಳಲ್ಲಿ ಭಾಷಾ ಉಳಿವು ಮತ್ತು ಕನ್ನಡಜನ ಉಳಿವಿನ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.

  2. ಇದೊಂದು ಅತ್ಯುತ್ತಮ ಸಕಾಲಿಕ ಲೇಖನವಾಗಿದ್ದು, ಇದನ್ನು ಡಾಬಸ್ ಪೇಟೆ ವಾಯ್ಸ್ ಕನ್ನಡ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...