Homeಮುಖಪುಟಜನಪ್ರಿಯ ಸಿನಿಮಾಗಳ ಗುಣಮಟ್ಟದ ಜೊತೆಗೇ ಪಾತಾಳಕ್ಕೆ ಕುಸಿದ ಸಿನಿಮಾ ಬರೆಹಗಳು

ಜನಪ್ರಿಯ ಸಿನಿಮಾಗಳ ಗುಣಮಟ್ಟದ ಜೊತೆಗೇ ಪಾತಾಳಕ್ಕೆ ಕುಸಿದ ಸಿನಿಮಾ ಬರೆಹಗಳು

- Advertisement -
- Advertisement -

ಅತಿ ಜನಪ್ರಿಯ ವ್ಯಕ್ತಿಗಳ ಬಗೆಗಾಗಲೀ, ಅತಿ ಜನಪ್ರಿಯ ಸಿನಿಮಾಗಳ ಬಗೆಗಾಗಲೀ ಮಾಡುವ ವಿಮರ್ಶೆ ’ಅಪ್ರಿಯ’ವಾಗಿ ಕಾಣುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆ ಅಪ್ರಿಯತೆ ಅಸಹನೆಗೆ ದಾರಿಮಾಡಿಕೊಡುವ ಕಾಲವೂ ಇದು. ನಾಯಕನೊಬ್ಬನನ್ನು ಪ್ರಶ್ನಾತೀತ ಎಂದು ಒಪ್ಪಿಕೊಂಡ ಸಮಾಜದ ಒಂದು ವರ್ಗ, ಆತನ ಬಗ್ಗೆ ಎತ್ತುವ ಪ್ರತಿ ಪ್ರಶ್ನೆಯನ್ನೂ ಡಿಸ್ಮಿಸ್ ಮಾಡಲು, ಪ್ರಶ್ನೆ ಎತ್ತುವವರ ಜಾಯಮಾನವನ್ನು ಜಾಲಾಡಲು ಕಾದಿರತ್ತೆ. ಇದು ಸಿನಿಮಾಗಳಿಗೆ ವಿಸ್ತರಿಸುತ್ತಿರುವುದು ದುಃಖಕರ ಸಂಗತಿ. ವಿಮರ್ಶೆಯನ್ನು ತಿರಸ್ಕರಿಸುವ, ತಿರಸ್ಕರಿಸುವುದಕ್ಕೂ ಒಂದು ಕೈ ಮುಂದೆ ಹೋಗಿ, ವಿಮರ್ಶಿಸಿ ಪ್ರಶ್ನೆಗಳನು ಎತ್ತಿದವರ ಚಾರಿತ್ರ್ಯಹರಣಕ್ಕೆ ಮುಂದಾಗುವ ವಿದ್ಯಮಾನದ ಹಿಂದೆ ಕೆಲಸ ಮಾಡುವ  ’ಪ್ರೈಡ್’ ಮನಸ್ಥಿತಿ ಎರಡೂ ಬಗೆಯ ಸಂಗತಿಗಳಲ್ಲಿ ಒಂದೇ ತೆರನಾದದ್ದು.

ಮೊದಲಿಗೆ, ಇತ್ತೀಚೆಗೆ ಒಟಿಟಿ ವೇದಿಕೆಯಲ್ಲಿ ನೋಡಿದ ಆರು ಕಂತುಗಳ ಧಾರಾವಾಹಿ ’ಅನಾಟಮಿ ಆಫ್ ಎ ಸ್ಕ್ಯಾಂಡಲ್’ ಬಗ್ಗೆ ಕೆಲವು ಮಾತುಗಳು; ಜೇಮ್ಸ್ ವೈಟ್‌ಹೌಸ್ ಎಂಬ ಬ್ರಿಟಿಷ್ ಸಂಸದ-ಮಂತ್ರಿಯ ವಿರುದ್ಧ ಅತ್ಯಾಚಾರದ ಆರೋಪ ಬಂದಾಗ ನಡೆಯುವ ಕೋರ್ಟ್ ವಿಚಾರಣೆ ಮತ್ತು ಆತನ ವೈವಾಹಿಕ ಜೀವನದಲ್ಲಾಗುವ ಏರುಪೇರಿನ ಕಥಾಹಂದರ ಹೊಂದಿರುವ ಮಿನಿ ಸೀರೀಸ್ ಇದು. ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತೆ ಆಲಿವಿಯಾ ಲಿಟ್ಟನ್ ವೈಟ್‌ಹೌಸ್‌ನ ಕೈಕೆಳಗೆ ಕೆಲಸ ಮಾಡುವ ಯುವತಿ. ಕಥೆ ಎಲ್ಲಿ ಸಂಕೀರ್ಣಗೊಳ್ಳುತ್ತದೆ ಎಂದರೆ, ಈ ಇಬ್ಬರೂ ಕೆಲಕಾಲ ಪರಸ್ಪರ ಸಮ್ಮತಿಯಿಂದ ಅಫೇರ್ ಇಟ್ಟುಕೊಂಡಿದ್ದವರು. ನಂತರ ಒಂದು ದಿನ ಅದು ಕೊನೆಯಾಗಿರುತ್ತದೆ. ಅದಾದನಂತರ ಲಿಟ್ಟನ್ ಸಮ್ಮತಿಸದೆ ಇದ್ದರೂ ವೈಟ್‌ಹೌಸ್ ಬಲವಂತಿಸಿ ಅತ್ಯಾಚಾರ ಮಾಡಿರುತ್ತಾನೆ. ಪ್ರಿವಿಲೆಜ್ ಮತ್ತು ಅಧಿಕಾರ ಮಹಿಳೆಯರ ವಿರುದ್ಧ ಎಷ್ಟು ಬಲಶಾಲಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಈ ಧಾರಾವಾಹಿ, ಜನಪ್ರಿಯ ದೃಷ್ಟಿಕೋನದಿಂದ, ಇಬ್ಬರ ನಡುವಿನ ಸೆಕ್ಸ್‌ಗೆ ಪೂರ್ವಷರತ್ತಾದ ಸಮ್ಮತಿ-ಅಸಮ್ಮತಿಯ ತೆಳುಗೆರೆಯನ್ನು ಪುರುಷಾಹಂಕಾರ ಬ್ಲರ್ ಮಾಡುವ, ಕಡೆಗಣಿಸುವ, ನಂತರ ತಪ್ಪನ್ನು ಒಪ್ಪಿಕೊಳ್ಳದಿರುವ ಬಗ್ಗೆ ಬೋಲ್ಡ್ ಆದ ಸ್ಟೇಟ್ಮೆಂಟ್ ಮಾಡತ್ತೆ. ಪ್ರಿವಿಲೆಜ್ ಮತ್ತು ಅಧಿಕಾರದ ಮದದಲ್ಲಿ ಮೈಮರೆತು ತಮ್ಮ ಗೆಳತಿಯರು, ಸಹೋದ್ಯೋಗಿ ಮತ್ತು ಕೈಕೆಳಗೆ ಕೆಲಸ ಮಾಡುವ ಮಹಿಳೆಯರನ್ನು ಲಘುವಾಗಿ ಪರಿಗಣಿಸದೆ, ಪರಸ್ಪರ ಘನತೆಯನ್ನು ಮತ್ತು ದೇಹವನ್ನು ಗೌರವಿಸುವ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.

ಈ ಸೀರೀಸ್ ನೆಟ್‌ಫ್ಲಿಕ್ಸ್ ವೇದಿಕೆಯಲ್ಲಿ ಏಪ್ರಿಲ್ ಮಧ್ಯಭಾಗದಲ್ಲಿ ಬಿಡುಗಡೆಯಾದಾಗಲಿಂದಲೂ ಅತಿ ಹೆಚ್ಚು ವೀಕ್ಷಕರನ್ನು ಸೆಳೆದು ನಂಬರ್ 1 ಸ್ಥಾನದಲ್ಲಿದೆ. ತಾಂತ್ರಿಕವಾಗಿ ಉತ್ತಮವಾಗಿರುವ ಮತ್ತು ಜನಪ್ರಿಯವಾಗಿ ಸಮಾಜಕ್ಕೆ ಉಪಯುಕ್ತವಾಗಿರುವಂತಹ ಕಥೆಯನ್ನೇ ಹೇಳಿರುವ ಈ ಧಾರಾವಾಹಿ, ಹಲವು ಮಾರ್ಕೆಟಿಂಗ್ ತಂತ್ರಗಾರಿಕೆಯಿಂದ ಜಾಗತಿಕವಾಗಿ ಅಪಾರ ಮನ್ನಣೆ ಪಡೆದಿದೆ ಎಂಬ ಕಾರಣಕ್ಕೆ ಇದರ ಬಗ್ಗೆ ಅಪಸ್ವರ ಎತ್ತಬಾರದು ಅನ್ನಲಾದೀತೇ? ಈ ಧಾರಾವಾಹಿಯ ಕುಂದುಕೊರತೆಗಳ ಬಗ್ಗೆ ಜೆನಿಯನ್ ಆದ ವಿಮರ್ಶೆ ಮಾಡುವವರನ್ನು ಲೇವಡಿ ಮಾಡಿ ಅವರ ಮಾತುಗಳನ್ನು ಕಟ್ ಮಾಡಬೇಕೇ?

ಖಂಡಿತಾ ಇಲ್ಲ; ಈ ಧಾರಾವಾಹಿಯಲ್ಲಿ ರೇಪ್ ಕಥೆಯೊಂದನ್ನು ಹೇಳುವಾಗ, ರೇಪ್ ದೃಶ್ಯಗಳನ್ನು ಡೀಟೇಲ್ ಆಗಿ ಚಿತ್ರಿಸಿ, ಅದನ್ನು ಸ್ಲೋ ಮೋಷನ್‌ನಲ್ಲಿ ರಿಪೀಟೆಡ್ ಆಗಿ ಕಟ್ಟಿಕೊಡುವ ಸೆನ್ಸೇಷನಲಿಸಂ ಬಗ್ಗೆ ಹಲವು ವಿಮರ್ಶಕರು ಅಪಸ್ವರ ಎತ್ತಿದ್ದಾರೆ. ರೇಪ್ ಹಿನ್ನೆಲೆಯಿಂದಲೇ ಕಥೆ ಮುಂದುವರೆಯಬೇಕಿದ್ದರೂ, ಆ ದೃಶ್ಯಗಳನ್ನು ವೈಭವೀಕರಿಸುವ ಅಗತ್ಯತೆ ಇಲ್ಲ. ಅಂತಹ ದೃಶ್ಯಗಳು ವೀಕ್ಷಕರ ಮೇಲೆ, ಧಾರಾವಾಹಿ ಒಟ್ಟಾರೆಯಾಗಿ ವ್ಯಕ್ತಪಡಿಸುತ್ತಿರುವ ಆಶಯಕ್ಕೆ ವ್ಯತಿರಿಕ್ತವಾದದ ಭಾವನೆಗಳನ್ನು ಮೂಡಿಸುತ್ತಿರುತ್ತವೆ ಎಂಬ ಚರ್ಚೆಗಳಾಗಿದೆ. ಈ ಧಾರಾವಾಹಿಗೆ ಪ್ರತಿಯಾಗಿ, ಅದೇ ವೇದಿಕೆಯಲ್ಲಿ ಸಿಕ್ಕುವ ’ಅನ್‌ಬಿಲೀವೆಬಲ್’ ಸೀರೀಸ್‌ಅನ್ನು ಗಮನಿಸಬಹುದು. ಅದು ಕೂಡ ರೇಪ್ ಸಂತ್ರಸ್ತೆಯರ ಕಥಾಹಂದರ ಹೊಂದಿರುವ ಡಿಟೆಕ್ಟಿವ್ ಕಥೆ. ಅಲ್ಲಿ ಎಲ್ಲಿಯೂ ರೇಪ್ ದೃಶ್ಯಗಳನ್ನು ವೈಭವೀಕರಿಸಲಾಗಿಲ್ಲ. ಬದಲಾಗಿ, ರೇಪ್ ಸಂತ್ರಸ್ತೆಯನ್ನು ಪುರುಷ ತನಿಖಾಧಿಕಾರಿಗಳು ನಡೆಸಿಕೊಳ್ಳುವ ದುರುಳತನಕ್ಕೆ ಎದುರಾಗಿ ಮಹಿಳಾ ತನಿಖಾಧಿಕಾರಿಗಳು ನಡೆಸಿಕೊಳ್ಳುವ ರೀತಿಯಲ್ಲಿನ ವ್ಯತ್ಯಾಸವನ್ನು ಅತ್ಯುತ್ತಮವಾಗಿ ಕಟ್ಟಿಕೊಡಲಾಗಿದೆ. ಅಲ್ಲದೆ, ’ಅನಾಟಮಿ ಆಫ್ ಎ ಸ್ಕ್ಯಾಂಡಲ್’ನಲ್ಲಿ ಕಥೆ ಬಹುತೇಕ ತೆರೆದುಕೊಳ್ಳುವುದು ಅತ್ಯಾಚಾರ ಮಾಡಿದ ವೈಟ್‌ಹೌಸ್ ಮತ್ತು ಆತನ ಹೆಂಡತಿ ಸೋಫಿಯ ದೃಷ್ಟಿಕೋನದಲ್ಲಿ. ಕೋರ್ಟ್‌ನಲ್ಲಿ ಸಾಕ್ಷಿ ಹೇಳುವ ಸಂತ್ರಸ್ತೆ ನೆಪಮಾತ್ರಕ್ಕೆ ಎಂಬಂತೆ ಕಟ್ಟಿಕೊಡಲಾಗಿದೆ. ವೈಟ್‌ಹೌಸ್ ವಿರುದ್ಧ ಕ್ರೌನ್ ಅಥವಾ ಸರ್ಕಾರದ ಪರವಾಗಿ ವಾದ ಮಾಡುತ್ತಿರುವ ವುಡ್‌ಕ್ರಾಫ್ಟ್ ಕೂಡ ಆತನಿಂದ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತೆಯೇ. ಆ ಕಥೆಯನ್ನು ಹೇಳುವಾಗಲೂ ಕೂಡ ಪಿಓವಿ (ಪಾಯಿಂಟ್ ಆಫ್ ವ್ಯೂ) ವೈಟ್‌ಹೌಸ್ ಪತ್ನಿಯದ್ದೇ ಮುಂದಾಗುತ್ತದೆ.

ಇಂತಹ ಚರ್ಚೆಗಳು ಯಾವುದೇ ಸಾಹಿತ್ಯ-ಸಿನಿಮಾ ಅಥವಾ ಕಲಾಕೃತಿಯನ್ನು ಅರ್ಥ ಮಾಡಿಕೊಳ್ಳಲು, ಅವುಗಳು ಸಮಾಜದಲ್ಲಿ, ಜನರ ಮೇಲೆ ಬೀರುವ ಪ್ರಭಾವವನ್ನು ಅರ್ಥ ಮಾಡಿಕೊಳ್ಳಲು ಟೂಲ್ಸ್ ಆಗಬಲ್ಲವು. ಇಂತಹ ವಿಮರ್ಶಾ ದೃಷ್ಟಿಕೋನ ಇನ್ನಷ್ಟು ಆರೋಗ್ಯಕರ ಕಲಾಕೃತಿಗಳಿಗೆ, ಇನ್ನಷ್ಟು ಆರೋಗ್ಯಕರ ಸಮಾಜಕ್ಕೆ ದಾರಿ ತೋರಬಹುದು. ಅಂತಹ ಸಿನಿಮಾ ಬರಹಗಳು ಕನ್ನಡದ ಮಟ್ಟಿದೆ ದುರ್ದೈವ ಅನ್ನುವಂತಾಗಿದೆಯಲ್ಲವೇ?

ಕಟ್ ಟು ಕೆಜಿಎಫ್; ಅಥವಾ ಆರ್‌ಆರ್‌ಆರ್ ಆರ್ ಬಾಹುಬಲಿ ಆರ್ ಪುಷ್ಪ. ಪ್ಯಾನ್ ಇಂಡಿಯಾ
ಸಿನಿಮಾ, ಸಾವಿರಾರು ಸ್ಕ್ರೀನ್‌ಗಳಲ್ಲಿ ಏಕಕಾಲಕ್ಕೆ ಬಿಡುಗಡೆ, ನೂರಾರು ಕೋಟಿಗಳನ್ನು ಅತಿ ಕಡಿಮೆ ಸಮಯದಲ್ಲಿ ಬಾಚಿದಂತ ಸಿನಿಮಾ- ಹೀಗೆ ತರಹೇವಾರಿ ಹಣೆಪಟ್ಟಿಗಳ ಜೊತೆಗೆ ಕಾಣಿಸಿಕೊಳ್ಳುವ ಈ ಸಿನಿಮಾಗಳ ಕಂಟೆಂಟ್ ಜನಪ್ರಿಯ ಮಾನದಂಡದ ದೃಷ್ಟಿಯಲ್ಲಿ ನೋಡಿದರೂ, ಮೇಲೆ ಚರ್ಚಿಸಿದ ಧಾರಾವಾಹಿಯ ಕಾಳಜಿ-ಕಳಕಳಿ ಅವುಗಳಲ್ಲಿ ಕಾಣುವುದಿಲ್ಲ. ಆದರೆ ಅದರ ಸುತ್ತ ಪತ್ರಿಕೆಗಳಲ್ಲಿ, ಟಿವಿ ಶೋಗಳಲ್ಲಿ ಹೆಣೆಯಲಾಗುವ ವರದಿಗಳು, ಕಥಾನಕಗಳು ಭಯಂಕರ ಮೋಡಿ ಮಾಡುವಂತಹವು. ಚಿಂತನೆ ಅಥವಾ ತಿಳಿವಳಿಕೆಗೆ ಎಡೆಮಾಡಿಕೊಡುವಂತಹವಲ್ಲ.

ಕೆಜಿಎಫ್ ಉದಾಹರಣೆಯನ್ನೇ ತೆಗೆದುಕೊಳ್ಳಿ; ಅದು 100 ಕೋಟಿಯಿಂದ 1200 ಕೋಟಿಯೋ 1500 ಕೋಟಿಯೋ ಗಳಿಸುವ ಪ್ರತಿ ಹಂತದಲ್ಲಿ ಅದರ ಸುತ್ತ ಹತ್ತಾರು ವರದಿಗಳನ್ನು ಹೆಣೆದು ಕನ್ನಡದ ಪತ್ರಿಕೆಗಳು ಓದುಗರಿಗೆ ಉಣಬಡಿಸಿದವು. ಅತಿ ಹೆಚ್ಚು ಹಣಗಳಿಸಿದ್ದು ಮಾನದಂಡವಾಯಿತೇ ಹೊರತು ಸಿನಿಮಾವನ್ನು ಕ್ರಿಟಿಕಲ್ ಆಗಿ ನೋಡುವುದರ ಬಗ್ಗೆ ವೀಕ್ಷಕರ ಜೊತೆ ಚರ್ಚಿಸುವ ಅಗತ್ಯವೇ ಮಾಧ್ಯಮಗಳಿಗೆ ಬೀಳಲಿಲ್ಲ. ಕಿರಿಕಿರಿ ಎನ್ನುವಷ್ಟು ’ಹೈಯೆಸ್ಟ್ ಗ್ರಾಸ್’ ಪದ ಹರಿದಾಡಿತು. ಹಣದ ಮೌಲ್ಯ ಕಾಲದ ಹಲವು ಘಟ್ಟಗಳಲ್ಲಿ ಬದಲಾಗುವ ಬಗ್ಗೆಯಂತೂ ಇವರ್‍ಯಾರೂ ಪ್ರಶ್ನಿಸಿಕೊಳ್ಳಲೇ ಇಲ್ಲ. ಅಂದರೆ ಇಂದು 1000 ಕೋಟಿ ಗಳಿಸಿದ ಒಂದು ಫಿಲ್ಮ್ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂದು ಹೇಳುವುದಕ್ಕೆ ಮಾನದಂಡ ಸರಿಯಾದುದಲ್ಲ ಎಂಬುದನ್ನೂ ಪ್ರಶ್ನಿಸಿಕೊಳ್ಳಲಿಲ್ಲ. ಈ ಅಪಾರ ಗಳಿಕೆಗೆ ತಂತ್ರಜ್ಞಾನ ಬೆಳೆದಿರುವ ರೀತಿ, ಬಂಡವಾಳಶಾಹಿ ಜಗತ್ತಿನ ಮಾರ್ಕೆಟಿಂಗ್ ತಂತ್ರಗಳು ಕಾರಣವಾಗಿರುವುದನ್ನು, ಈ ಹಿಂದೆ ಹೆಚ್ಚು ಕಾಲದವರೆಗೆ ಜನ ವೀಕ್ಷಿಸಿದ ಸಿನಿಮಾಗಳಿಗೆ ತುಲನೆ ಮಾಡಿ ಚರ್ಚಿಸುವ ಪರಿಪಾಠವೂ ಬೆಳೆದೇ ಇಲ್ಲ. ಇನ್ನು ಕನ್ನಡದ ಒಂದು ಸಿನಿಮಾ ಹಲವು ಇಂಡಸ್ಟ್ರಿಗಳ ಸಿನಿಮಾಗಳನ್ನು ಮಕಾಡೆ ಮಲಗಿಸಿತು ಎಂಬ ’ಕಾಂಪಿಟಿಟಿವ್ ಪ್ರೆಸ್ಟೀಜ್’ನಲ್ಲಿಯೂ ಕಥಾನಕಗಳನ್ನು ಹೊಸೆಯಲಾಯಿತು. ಇದೇ ಕಾಂಪಿಟೆಟಿವ್ ಪ್ರೆಸ್ಟೀಜ್‌ನಲ್ಲಿ ಕಟ್ಟಲಾಗುತ್ತಿರುವ ನ್ಯಾಷನಲಿಸಂ ಇಂದು ಇಡೀ ದೇಶಕ್ಕೆ ಅಪಾಯವೊಡ್ಡಿದೆ ಮತ್ತು ಈ ಎರಡೂ ಸಂಗತಿಗಳ ’ಕಾಂಪಿಟಿಟಿವ್ ಪ್ರೆಸ್ಟೀಜ್’ ಭಾವನೆ ಒಂದೇ ಎಂಬುದನ್ನು ಇಲ್ಲಿ ಮರೆಯಬಾರದು.

ಒಬ್ಬ ನಾಯಕನಟನ ಹೀರೋಯಿಸಂಅನ್ನು ವೈಭವೀಕರಿಸಿ ಸಿನಿಮಾದಲ್ಲಿ ಕಟ್ಟಿಕೊಡುವಾಗ ಅದು ಯಾವ ಉದ್ದೇಶಕ್ಕಾಗಿ ಎಂಬುದು ಸ್ಪಷ್ಟವಾಗಿದೆಯೇ? ಅದು ಏಕವ್ಯಕ್ತಿಯ ಸರ್ವಾಧಿಕಾರಿ ಧೋರಣೆಯನ್ನು ಜನರ ಮನಸ್ಸಿನ ಆಳದಲ್ಲಿ (ಸರ್ವಾಧಿಕಾರಿ ವಿರುದ್ಧ ಎಂದು ಹೇಳಿಕೊಳ್ಳುತ್ತಲೇ) ಟೂಲ್ ಆಗಿ ಬಳಕೆಯಾಗಬಹುದೇ? ಮಹಿಳೆಯನ್ನು ರಸ್ತೆಯಲ್ಲಿ ಛೇಡಿಸುವುದನ್ನು, ಬೆದರಿಸುವುದನ್ನು ಅತಿಯಾದ ಸ್ಟೈಲಿಶ್ ದೃಶ್ಯಗಳ ಮೂಲಕ ಹೆಣೆಯುವುದರಿಂದ ಅದು ವೀಕ್ಷಕರ ಮೇಲೆ ಯಾವ ಪರಿಣಾಮ ಬೀರಬಹುದು; ಬಿಡಿ ದೃಶ್ಯಗಳನ್ನು ಹೊರತುಪಡಿಸಿದರೂ ಒಟ್ಟಾರೆಯಾಗಿ ಸಿನಿಮಾ ಧ್ವನಿಸುವ ಸಂಗತಿಗಳಲ್ಲಿ ಸಮಸ್ಯೆ ಇರಬಹುದೇ? – ಇಂತಹ ಚರ್ಚೆಗಳು ವಿರಳಾತಿವಿರಳ ಆಗಿಹೋದವು. ಆರ್‌ಆರ್‌ಆರ್, ಕೆಜಿಎಫ್, ಪುಷ್ಪಾ ಅಂತಹ ಸಿನಿಮಾಗಳು ಪ್ರತಿನಿಧಿಸುತ್ತಿರುವ ಅತಿಯಾದ ಹೀರೋಯಿಸಂ, ಮಹಿಳಾ ಪಾತ್ರಗಳನ್ನು ನಡೆಸಿಕೊಳ್ಳುವ ರೀತಿ, ಸೆಕ್ಸಿಸಂ, ಏಕವ್ಯಕ್ತಿ ’ಸರ್ವಶಕ್ತ’ನಾಗುವ ಸಂಕೇತಗಳು ಜಪ್ರಿಯ ಸಿನಿಮಾಗಳಲ್ಲಿ ಹೇರಳವಾಗುತ್ತಿರುವ ಸಮಯದಲ್ಲಿ ಅವುಗಳನ್ನು ವಿಮರ್ಶಿಸುವ ಬರಹಗಳು ಹೆಚ್ಚಿರಬೇಕಿತ್ತು. ಆದರೆ ಆ ಜಾಗದಲ್ಲಿ ಈಗ ಕೋಟಿ ಕ್ಲಬ್‌ಗಳ ಸಂಭ್ರಮಾಚರಣೆ ಮಾಡುವ ಮೂಲಕ ಪತ್ರಿಕಾ ಲೋಕ ಮೈಮರೆತಿದೆ.

ತೆಲಂಗಾಣದಲ್ಲಿ 2019ರಲ್ಲಿ ನಡೆದ ಒಂದು ಅತ್ಯಾಚಾರ ಮತ್ತು ಕೊಲೆಯ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಸುಪ್ರೀಂ ಕೋರ್ಟ್ ನೇಮಿಸಿದ್ದ ಆಯೋಗ, ಅದು ನಕಲಿ ಎನ್‌ಕೌಂಟರ್ ಎಂದು ಬಗೆದು ಪೊಲೀಸರ ವಿರುದ್ಧ ಕೊಲೆ ಪ್ರಕರಣಗಳನ್ನು ದಾಖಲಿಸಲು ಶಿಫಾರಸ್ಸು ಮಾಡಿದೆ. ಭಾರತೀಯ ಸಿನಿಮಾಗಳು ಪೊಲೀಸರನ್ನು, ಪೊಲೀಸ್ ನಡತೆಯನ್ನು ವಿಜೃಂಭಿಸಿ ಬಿಂಬಿಸಿದ್ದೇ ಹೆಚ್ಚು. ಹಾಗೆಯೇ ಮಹಿಳೆಯರ ಜೊತೆಗೆ ವರ್ತಿಸುವ ಅನುಚಿತತೆಯನ್ನು ನಾರ್ಮಲೈಸ್ ಮಾಡಿದ್ದು ಕೂಡ ಇದೇ ಮುಖ್ಯವಾಹಿನಿ ಜನಪ್ರಿಯ ಸಿನಿಮಾಗಳು. ಜನಪ್ರಿಯ ಸಿನಿಮಾಗಳ ಪ್ರಭಾವ ಸಮಾಜದ ಮೇಲೆ ಗಾಢವಾಗಿ ಬೀರಿರುವ ಬಗ್ಗೆ ಗಂಭೀರ ಅಧ್ಯಯನಗಳಾಗಬೇಕಿದ್ದರೂ, ಅಂತಹ ಸಿನಿಮಾಗಳನ್ನು ವಿಮರ್ಶಿಸಿ-ಪ್ರಶ್ನಿಸಿ ತಿಳಿವಳಿಕೆ ಮೂಡಿಸಬೇಕಿದ್ದ ವಿಮರ್ಶಾಲೋಕ ದನಿಯಿಲ್ಲದ ಗುಂಪಾಗಿ ಉಳಿದುಹೋಯಿತು. 2019ರ ನಕಲಿ ಎನ್‌ಕೌಂಟರ್ ಒಳಗೊಂಡಂತೆ ಅಂತಹ ಹಲವು ಎನ್‌ಕೌಂಟರ್‌ಗಳನ್ನು ವಿವೇಚನೆಯಿಲ್ಲದೆ ಜನಸಾಮಾನ್ಯರು ಸಂಭ್ರಮಿಸಿದ್ದಿದೆ. ಇಂತಹುದರ ವಿರುದ್ಧವಾಗಿ ವಿವೇಕ ಮೂಡಿಸಲು, ಸಾಹಿತ್ಯ-ಸಿನಿಮಾಗಳು ತಮ್ಮ ಮಾಧ್ಯಮದ ಮೂಲಕ ಮುಂದಾಗಬೇಕು. ಭಾರತದ ಜನಪ್ರಿಯ ಸಿನಿಮಾಗಳು ಸೆನ್ಸೇಶನಲೈಸ್ ಮಾಡುವುದರಲ್ಲಿ ಮುಳುಗಿರುವಾಗ, ಅವುಗಳ ಹೊಗಳುಭಟ್ಟರಾಗಿ ವಿಮರ್ಶಕರು ಬದಲಾಗಿದ್ದಾರೆ. ಜನಪ್ರಿಯ ಸಿನಿಮಾಗಳನ್ನು ಚಿಕಿತ್ಸಕ ದೃಷ್ಟಿಯಲ್ಲಿ ವಿಮರ್ಶಿಸುವ ಬರಹಗಳು ಹೆಚ್ಚಬೇಕಿದೆ ಎಂಬ ಕೂಗು ಇನ್ನಷ್ಟು ಗಟ್ಟಿಯಾಗಬೇಕಿದೆ.


ಇದನ್ನೂ ಓದಿ: Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...