Homeಚಳವಳಿಈ ದೇಶದ ಬಹುಜನರಿಗೆ ನ್ಯಾಯ ದೊರಕುತ್ತಿಲ್ಲ: ಮೇ ಸಾಹಿತ್ಯ ಮೇಳದಲ್ಲಿ ಜಸ್ಟೀಸ್ ಕೆ.ಚಂದ್ರು ಅಭಿಮತ

ಈ ದೇಶದ ಬಹುಜನರಿಗೆ ನ್ಯಾಯ ದೊರಕುತ್ತಿಲ್ಲ: ಮೇ ಸಾಹಿತ್ಯ ಮೇಳದಲ್ಲಿ ಜಸ್ಟೀಸ್ ಕೆ.ಚಂದ್ರು ಅಭಿಮತ

ದಾವಣಗೆರೆಯಲ್ಲಿ ಆರಂಭಗೊಂಡ 8ನೇ ಮೇ ಸಾಹಿತ್ಯ ಮೇಳದ ದಿಕ್ಸೂಚಿ ಭಾಷಣ ಮಾಡಿದ ಜಸ್ಟೀಸ್ ಕೆ ಚಂದ್ರುರವರ ಮಾತುಗಳು

- Advertisement -
- Advertisement -

ಕಳೆದ 10 ವರ್ಷಗಳಲ್ಲಿ ಧಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಸೇರಿದಂತೆ ಅನೇಕ ಗಣ್ಯ ಚಿಂತಕರು, ಮೊದಲಾದವರು ಹತ್ಯೆಯಾಗಿದ್ದಾರೆ. ಅವರು ತಮ್ಮ ಚಿಂತನೆಗಳಿಗಾಗಿ ಖ್ಯಾತರಾಗಿದ್ದವರ. ಆದರೆ ಈ ದೇಶದ ನ್ಯಾಯ ವ್ಯವಸ್ಥೆ ಕೊಲೆಗಾರರನ್ನು ಕಟಕಟೆಗೆ ತಂದಿಲ್ಲ, ಅವರಿಗೆ ಇನ್ನೂ ನ್ಯಾಯ ದೊರಕಿಸಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ಅಭಿಪ್ರಾಯಪಟ್ಟರು.

ದಾವಣಗೆರೆಯಲ್ಲಿ ಆರಂಭಗೊಂಡ 8ನೇ ಮೇ ಸಾಹಿತ್ಯ ಮೇಳದಲ್ಲಿ ಮಾತನಾಡಿದ ಅವರು, “ಇಂದು ನೀವು ನಿಮ್ಮ ಚಿಂತನೆಗಳನ್ನು ಅಭಿವ್ಯಕ್ತಿಸಿದರೆ ನಾಳೆ ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂಬ ಧೈರ್ಯ ಏಕಿದೆ ಅವರಿಗೆ? ಏಕೆ ಈ ಸಾವುಗಳು ಭಾರತದಲ್ಲಿ ನಡೆಯುತ್ತಿವೆ? ಎಂದು ಅವರು ಪ್ರಶ್ನಿಸಿದರು.

ನಮ್ಮ ದೇಶದಲ್ಲಿ ದೇಶದ್ರೋಹದ ಕಾನೂನು ದುರುಪಯೋಗ ಆಗಿದೆ. ಆದರೆ ನಾವು ಮಧ್ಯಂತರ ಆದೇಶದ ಬಗ್ಗೆ ಮಾತಾಡುವಾಗ, ಈಗ ದೊರೆತಿರುವುದು ಒಂದು ಉಸಿರಾಡುವ ಸಣ್ಣ ಅವಕಾಶ ಅನಿಸುತ್ತದೆ ಎಂದರು.

ಮಾಧ್ಯಮ ಸಂವಿಧಾನದ ನಾಲ್ಕನೆ ಅಂಗ. ಅವರು ತಮ್ಮನ್ನು ತಾವು ಮಾನವ ಹಕ್ಕುಗಳ ಚಾಂಪಿಯನ್‌ಗಳೆಂದು ಬಿಂಬಿಸಿಕೊಳ್ಳುತ್ತಾರೆ. ಈ ದೇಶದ ಅತಿಮುಖ್ಯ ಸಮಸ್ಯೆಗಳನ್ನು ಹೊರತರುತ್ತಿದ್ದಾರೆಯೇ ಎಂದು ಅವರನ್ನು ಕೇಳಬೇಕಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಜೈಲಿನಲ್ಲಿ ಕೊಳೆಯುತ್ತಿರುವ ಹೋರಾಟಗಾರರಿಗೆ ಕಳೆದ 3-4 ವರ್ಷಗಳಲ್ಲಿ ಜಾಮೀನು ಕೂಡಾ ಸಿಕ್ಕಿಲ್ಲ. ಇವರೆಲ್ಲ ಬೇರೆ ಬೇರೆ ಚಿಂತನೆಗಳ ಹಿನ್ನೆಲೆಯವರು. ಆದರೆ ಈಗ ಎಲ್ಲರೂ ಒಂದೇ ಜೈಲಿನಲ್ಲಿದ್ದಾರೆ. ರಾಷ್ಟ್ರೀಯ ತನಿಖಾ ದಳ ದೇಶದ ಅತ್ಯುನ್ನತ ತನಿಖಾ ಸಂಸ್ಥೆ, ಅವರಿಗೆ ಈ ಹೋರಾಟಗಾರರ ಮೇಲಿರುವ ಆರೋಪಗಳೇನು ಎಂಬುದನ್ನೂ ಸಿದ್ಧಪಡಿಸಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯುಎಪಿಎಯನ್ನು ಕಾಂಗ್ರೆಸ್ ಸರ್ಕಾರ ತಂದದ್ದು, ಕಾನೂನು ಬಾಹಿರ ಎಂದರೇನು ಎಂಬುದಕ್ಕೆ ಸರಿಯಾದ ವ್ಯಾಖ್ಯಾನವೂ ಇಲ್ಲ ಅದರಲ್ಲಿ. ಮೂರು ವರ್ಷಗಳ ಕಾಲ ಜಾಮೀನು ಕೊಡುವುದಿಲ್ಲ ಎಂದರೆ ಯಾವ ಕಾರಣಕ್ಕೆ ಎಂಬುದನ್ನು ಈಗಿನ ಸರ್ಕಾರ ಮಂಡಿಸುವುದಿಲ್ಲ. ನೀವು ಫಾದರ್ ಸ್ಟ್ಯಾನ್ ಸ್ವಾಮಿಯವರ ಬಗ್ಗೆ ಕೇಳಿರುತ್ತೀರಿ. ಕ್ಯಾಥಲಿಕ್ ಫಾದರ್ ಅಗಿದ್ದ ಅವರು ಬಡವರ ಬಗ್ಗೆ ಕಾಳಜಿ ಹೊಂದಿದ್ದರು. ಜಾರ್ಖಂಡ್ ನಲ್ಲಿ ಆದಿವಾಸಿಗಳಿಗಾಗಿ ಶ್ರಮಿಸಿದರು. ಆ 84 ವರ್ಷದ ವ್ಯಕ್ತಿಗೆ ಅನಾರೋಗ್ಯದ ಕಾರಣಕ್ಕೂ ಜಾಮೀನು ಸಿಗಲಿಲ್ಲ. ಪಾರ್ಕಿನ್‌ಸನ್ ಖಾಯಿಲೆಯಿದ್ದ ಅವರಿಗೆ ಒಂದು ಲೋಟವನ್ನೂ ಸಹ ಹಿಡಿಯಲಾಗುತ್ತಿರಲಿಲ್ಲ. ಹಾಗಾಗಿ ನೀರು ಕುಡಿಯಲು ಒಂದು ಸ್ಟ್ರಾ ಕೊಡಿ ಎಂದು ಮನವಿ ಮಾಡಿದರು. ಅದೊಂದನ್ನೂ ಸಹ ಅಧಿಕಾರಿಗಳು ಕೊಡಲಿಲ್ಲ. ಮುಂಬೈ ಹೈ ಕೋರ್ಟ್ ನ್ಯಾಯಾಧೀಶರು ಯಾಕೆ ನೀವು ಸ್ಟ್ರಾ ಕೊಡುವುದಿಲ್ಲ ಎಂದು ಕೇಳಿದರೆ ಅಧಿಕಾರಿಗಳು ಅದು ನಿಯಮದಲ್ಲಿಲ್ಲ ಎಂದರು. ಅದಕ್ಕೆ ತಕ್ಷಣ ಆದೇಶ ಹೊರಡಿಸುವ ಬದಲು ನ್ಯಾಯಾಧೀಶರು ಸರ್ಕಾರದಿಂದ ಉತ್ತರ ಕೇಳಿದರು. ನಿಮಗೆ ನ್ಯಾಯ ಕೊಡಲು ಇಷ್ಟವಿಲ್ಲದಾಗ ಹೀಗೆ ಉತ್ತರ ಕೇಳುತ್ತೀರಿ. ಅವರ ಸ್ಥಿತಿ ಬಿಗಡಾಯಿಸಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಮರಣ ಹೊಂದಿದರು ಎಂದು ಜಸ್ಟೀಸ್ ನೋವು ವ್ಯಕ್ತಪಡಿಸಿದರು.

ನಾವು ಈ ದೇಶದಲ್ಲಿ ತನ್ನ ಅಭಿಪ್ರಾಯಗಳನ್ನು ಸ್ವತಂತ್ರವಾಗಿ ಅಭಿವ್ಯಕ್ತಿಸುವ ಪ್ರತಿ ವ್ಯಕ್ತಿಗೂ ಜೈಲಾಗುವ ಸಾಧ್ಯತೆಯ ಬಗ್ಗೆ ಚರ್ಚಿಸಬೇಕಿದೆ. ಈ ಸಾಹಿತ್ಯ ಮೇಳದಲ್ಲಿ ನಾವು ಸ್ಟಾನ್ ಸ್ವಾಮಿಯವರ ಸಾವು ಮತ್ತು ಅನೇಕ ಹೋರಾಟಗಾರರ ಜೈಲಿನ ಬಗ್ಗೆ ಮಾತಾಡಬೇಕು ಎಂದರು.

ಅವರ ಅಜೆಂಡಾ ಇಡೀ ದೇಶವನ್ನು ಕೇಸರೀಕರಣ ಮಾಡುವುದು. ಒಂದೇ ಸಿದ್ಧಾಂತವನ್ನು ಹೇರುವುದು.
ಮೊದಲಿಗೆ ಅವರು ಹೊಸ ಶಿಕ್ಷಣ ನೀತಿಯನ್ನು ತಂದರು. ಅದಕ್ಕೆ ತೀವ್ರವಾದ ಟೀಕೆ ವ್ಯಕ್ತವಾಯಿತು. ಇದರಲ್ಲಿ ಕಲಿಕೆಗೆ ಬೇಕಿದ್ದದ್ದು ಏನೂ ಇರಲಿಲ್ಲ, ಬ್ರೈನ್ ವಾಶ್ ಮಾಡುವಂಥದ್ದು ಮಾತ್ರ ಇತ್ತು. ಈ ನೀತಿಯ ಉದ್ದೇಶ ಶಿಕ್ಷಣವನ್ನು ನಿಯಂತ್ರಿಸುವುದು. ನಾಗಪುರದಿಂದ ಆಮದು ಮಾಡಿಕೊಂಡ ಜನರು ಎಲ್ಲ ಕಡೆ ಕೂತಿದ್ದಾರೆ. ಅದರ ಪರಿಣಾಮವನ್ನು ನೋಡುತ್ತಿದ್ದೇವೆ, ಭಗತ್ ಸಿಂಗ್, ಪೆರಿಯಾರ್ ಅವರನ್ನೆಲ್ಲ ಕಲಿಕೆಯಿಂದ ಹೊರಗೆ ಹಾಕಲಾಗಿದೆ ಈಗ ಎಂದು ಬೇಸರ ವ್ಯಕ್ತಪಡಿಸಿದರು.

ಇವರ ಮೊದಲ ಅಜೆಂಡಾ ಶಿಕ್ಷಣದ ಮೇಲೆ ನಿಯಂತ್ರಣ ಸಾಧಿಸುವುದು. 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ದೊರೆಯಬೇಕಿದೆ. ಸಂವಿಧಾನದ ಆದೇಶ ಅದು. ಆದರೆ ಇಂದು ಕರ್ನಾಟಕದ ಸನ್ನಿವೇಶ ಏನು? ಹಲಾಲ್ ಹಿಜಾಬ್ ಇತ್ಯಾದಿ ಯಾವುದು ಸಮಸ್ಯೆ ಅಲ್ಲವೋ ಅಂತಹ ಸಮಸ್ಯೆಗಳನ್ನು ಮುಂದೆ ತರುತ್ತಿದ್ದಾರೆ. ಸಮವಸ್ತ್ರದ ಹೆಸರಿನಲ್ಲಿ ಮಕ್ಕಳ ಶಿಕ್ಷಣದ ವಿಚಾರ ಸಮಸ್ಯೆಯಾಗಿದೆ. ನಾನು ಶಾಲೆಗೆ ಹೋಗುವಾಗ ಬಟ್ಟೆ ಇಲ್ಲದ ಮಕ್ಕಳು ಸಾಕಷ್ಟಿದ್ದರು. ಶಿಕ್ಷಕರು ಮನೆಮನೆಗೆ ಹೋದ ಮೇಲೆ ಪೋಷಕರು ಮಕ್ಕಳನ್ನು ಕಳಿಸುತ್ತಿದ್ದರು, ಪೋಷಕರಿಗೆ ಮಕ್ಕಳು ಕೃಷಿ ಕೆಲಸಕ್ಕೆ ನೆರವಿಗೆ ಬೇಕಿತ್ತು. ಆಗ ಸಮವಸ್ತ್ರ ವಿಷಯವಾಗಿರಲಿಲ್ಲ, ಶಿಕ್ಷಣ ವಿಷಯವಾಗಿತ್ತು. ಹೊರಗಿಡುವುದಲ್ಲ, ಒಳಗೊಳ್ಳುವುದು ವಿಷಯವಾಗಿತ್ತು. ಆದರೆ ಈಗ ಈ ಸಮಸ್ಯೆಯಿಂದ 20,000 ಮಕ್ಕಳು 10ನೇ ತರಗತಿ ಪರೀಕ್ಷೆ ಬರೆಯಲಾಗಲಿಲ್ಲ. ಹೈಕೋರ್ಟ್ ಏನು ಮಾಡುತ್ತಿದೆ?
ನ್ಯಾಯಾಂಗವು ನಮ್ಮ ಕೊನೆಯ ಆಸೆಯಾಗಿತ್ತು (ಲಾಸ್ಟ್). ಈಗ ಅದು ಕಳೆದು ಹೋಗಿದೆ (ಲೋಸ್ಟ್) ಎಂದರು.

ಇತ್ತೀಚೆಗೆ, ಜಡ್ಜ್‌ಗಳು ಬೇಸಿಗೆ ರಜೆಗೆ ಹೋಗವ ಮೊದಲು ಯಾರೋ ಒಬ್ಬರು ಹೇಳಿದರು, ಕೋವಿಡ್ ಸಂದರ್ಭದಲ್ಲಿ ಎರಡು ವರ್ಷ ಯಾರೂ ಕೆಲಸ ಮಾಡಿಲ್ಲ ಪ್ರಕರಣಗಳು ಹೆಚ್ಚಿವೆ ಈ ಬಾರಿ ರಜೆ ರದ್ದು ಮಾಡಿ ಕೆಲಸ ಮಾಡಬಹುದು ಎಂದು. ಜಡ್ಜ್‌ಗಳು ಒಪ್ಪಲಿಲ್ಲ. ಮಾನವ ಹಕ್ಕುಗಳ ರಕ್ಷಣೆಗೆ ಬರಬೇಕಾದ ಕೋರ್ಟುಗಳು ಏನು ಮಾಡುತ್ತಿವೆ? ಜಮ್ಮು ಕಾಶ್ಮೀರದ ವಿಚಾರ ಇರಲಿ, ಕರ್ನಾಟಕದ ಹಿಜಾಬ್ ವಿಚಾರ ಇರಲಿ ಇದೇ ಕಾಣುತ್ತಿದೆ.
ಕೋರ್ಟುಗಳಿಗೆ ಜನರ ಪರವಾಗಿ ಮಧ್ಯಪ್ರವೇಶಿಸಲು ಸೆಕ್ಷನ್ 227, 334 ಮೊದಲಾದ ಅನೇಕ ಕಾಯ್ದೆಗಳಿವೆ ಆದರೆ ಇವರು ಅದನ್ನು ಬಳಸಲು ತಯಾರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕ ಉದ್ದಿಮೆಗಳು ಮಾರಾಟಗೊಳ್ಳುತ್ತಿವೆ. ಎಲ್‌ಐಸಿ, ಬಿಎಸ್ಸೆನ್ನೆಲ್ ಎಲ್ಲವೂ. ಒಂದು ಕಾಲದಲ್ಲಿ ನಾವು ಟಾಟಾ ಬಿರ್ಲಾ ಅನ್ನುತ್ತಿದ್ದೆವು. ಇಂದು ಅದಾನಿ ಅಂಬಾನಿ ಆಗಿದ್ದಾರೆ. ಅದಕ್ಕೆ ಜಾಗತೀಕರಣ, ಉದಾರೀಕರಣ ಇತ್ಯಾದಿ ಸುಂದರ ಪದಗಳಿವೆ. ‘ಖಾಸಗೀಕರಣದಿಂದ ಈ ದೇಶದಲ್ಲಿ ತುಂಬ ಸುಂದರ ಕೆಲಸಗಳಾಗಿವೆ’ ಎಂದು ಒಬ್ಬರು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಬರೆದರು. ನಾನು ಅವರನ್ನು ಏರ್‌ಪೋರ್ಟ್‌ಗಳ ಸುತ್ತಲಿನ ಪ್ರದೇಶ ಬಿಟ್ಟು ಆಚೆ ನೋಡಿ ಎಂದು ಕೇಳುತ್ತೇನೆ ಎಂದು ಕಿಡಿಕಾರಿದರು.

ಸೆಕ್ಯುಲರಿಸಂ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. 1000 ಪುಟಗಳ ದೊಡ್ಡ ದೊಡ್ಡ ತೀರ್ಪುಗಳು ಬಾಕಿ ಇವೆ. ಆದರೆ ಯಾವುದೇ ಜಡ್ಜ್‌ಗಳು ಅದಕ್ಕೆ ಸಹಿ ಮಾಡುತ್ತಿಲ್ಲ. ಎಲ್ಲ ತೀರ್ಪುಗಳಿಗೂ ಒಬ್ಬರು ಪ್ರಮುಖ ಬರಹಗಾರ ನ್ಯಾಯಾಧೀಶ ಇರುತ್ತಾರೆ. ಉಳಿದವರು ಒಪ್ಪಿರುತ್ತಾರೆ ಅಥವಾ ಭಿನ್ನಮತ ಹೊಂದಿರುತ್ತಾರೆ. ಆದರೆ ಈಗ ನ್ಯಾಯಾಧೀಶರೂ ಹೆಸರು ಬರೆಯಲು ಸಿದ್ಧರಿಲ್ಲದ ಅನಾಮಿಕ ತೀರ್ಪುಗಳು ಬರುತ್ತಿವೆ. ಬಹುಸಂಖ್ಯಾತರ ಒತ್ತಡ ಎಂದರೇನು? ಬಹುಸಂಖ್ಯಾತರು ರಾಮ ಅಲ್ಲೇ ಹುಟ್ಟಿದ್ದ ಎಂದರೆ ಅದನ್ನೇ ಕೋರ್ಟು ಒಪ್ಪುತ್ತದೆ.
ಈ ಹಿಂದೆ ಇಂತಹ ಕೋಮುಸಂದಿಗ್ಧಗಳು ಬಂದಾಗ ಸಂವಿಧಾನದ ಆಶಯದಂತೆ ದೇಶದ ಶಾಂತಿ ಸಮಗ್ರತೆಗಾಗಿ  ನಾವು ಮರುಪರಿಶೀಲಿಸಲು ಒಪ್ಪುತ್ತಿರಲಿಲ್ಲ. ಈಗ ಅಂತಹ ಎಲ್ಲ ಪ್ರಕರಣಗಳನ್ನೂ ಮತ್ತೆ ಕೆದಕಲಾಗುತ್ತಿದೆ. ಅದಕ್ಕೊಬ್ಬ ಕಮೀಷನರ್ ನೇಮಕ, ಆತನಿಗೆ ಅಲ್ಲಿ ಬಹುಸಂಖ್ಯಾತರ ನಂಬಿಕೆಯಂತೆಯೇ ಸಾಕ್ಷಿಗಳು ಸಿಗುತ್ತಿವೆ ಎಂದರು.

ಜಮ್ಮು – ಕಾಶ್ಮೀರಕ್ಕೆ ಯಾರೂ ಹೋಗುತ್ತಿಲ್ಲ. ಅಲ್ಲಿ ಮಿಲಿಟರಿ ಆಡಳಿತ ನಡೆಯುತ್ತಿದೆ. ವಿರೋಧ ಪಕ್ಷದಲ್ಲಿದ್ದ ಸೀತಾರಾಂ ಯಚೂರಿ ಅಲ್ಲಿಗೆ ಭೇಟಿ ಕೊಡುತ್ತೇನೆ ಅಂದಾಗ ಹೋಗಿ, ಆದರೆ ಪತ್ರಿಕೆಗಳಿಗೆ ಹೇಳಿಕೆ ಕೊಡಬೇಡಿ ಎಂದು ಸುಪ್ರೀಂ ಕೋರ್ಟ್ ಹೇಳಿತು. ಇನ್ನೂ ಅನೇಕ ಪಿಟಿಷನ್ ಗಳು ಈಗಲೂ ಕಾಯುತ್ತಿವೆ, ಏಕೆ ನ್ಯಾಯ ಸಿಗುತ್ತಿಲ್ಲ ಎಂದರು.

ಜೈಭೀಮ್ ಸಿನಿಮಾದ ನಿಜ ಕಥೆ ಕೂಡಾ ಒಂದು ಹೇಬಿಯಸ್ ಕಾರ್ಪಸ್ ಅರ್ಜಿ. 28 ವರ್ಷಗಳ ಹಿಂದೆ ಅದನ್ನು ಮಾನವೀಯತೆಯ ಆಧಾರದಲ್ಲಿ ಕೇಳಿಸಿಕೊಳ್ಳಲು ತಯಾರಿದ್ದ ನ್ಯಾಯಾಧೀಶರ ಕಾರಣಕ್ಕೆ ಇವತ್ತು ಅದನ್ನು ನಾವು ಸಂಭ್ರಮಿಸುತ್ತಿದ್ದೇವೆ. ಇಂದು ಅದು ಆಗುತ್ತಿದೆಯೇ ಎಂದು ಪ್ರಶ್ನಿಸಿದರು.

ದೆಹಲಿಯಲ್ಲಿ ಬಿಜೆಪಿ ಕಾರ್ಪೊರೇಶನ್ ಅಧಿಕಾರಕ್ಕೆ ಬಂದ ತಕ್ಷಣ ಬುಲ್ಡೋಜರ್‌ಗಳನ್ನು ಬಿಟ್ಟು ಬಡಜನರ ಮನೆಗಳನ್ನು ಉರುಳಿಸುತ್ತಿದ್ದಾರೆ. ವಿಶೇಷವಾಗಿ ಮುಸ್ಲಿಮರು ಮತ್ತು ಶೋಷಿತರ ಮನೆಗಳನ್ನೇ ಗುರಿಯಾಗಿಸುತ್ತಾರೆ. ಜಹಾಂಗಿರ್ ಪುರಿಯಲ್ಲಿ ಜನರು ನ್ಯಾಯಾಲಯಕ್ಕೆ ಹೋದರು. ಕೋರ್ಟ್ ಸ್ಟೇ ಕೊಟ್ಟರೂ ಬುಲ್ಡೋಜರ್‌ಗಳು ನಿಲ್ಲಲಿಲ್ಲ, ನನ್ನ ಪ್ರಾಣ ತೆಗೆದು ನಂತರ ಮನೆ ಒಡೆಯಿರಿ ಎಂದು ಆಕ್ರೋಶದಿಂದ ನಿಂತ ನಂತರ ಜನರ ಒತ್ತಡಕ್ಕೆ ಮಣಿದು ಸರ್ವೋಚ್ಛ ನ್ಯಾಯಾಲಯ ಇಡೀ ಪ್ರಕರಣವನ್ನು ತಡೆಹಿಡಿದಿದೆ. ಶಾಹೀನ್ ಭಾಗ್‌ನಲ್ಲೂ ಇದೇ ಮರುಕಳಿಸಿದೆ. ನ್ಯಾಯಾಂಗವು ನಮ್ಮ ಹಕ್ಕುಗಳನ್ನು ರಕ್ಷಿಸಲಿಕ್ಕೆಂದೇ ರೂಪಿತವಾಗಿರುವುದು. ಅದನ್ನು ನೆನಪಿಸಬೇಕಾಗಿರುವುದು ದುರಂತ ಎಂದರು.

ಇದನ್ನೂ ಓದಿ: ನೆಹರು ಒಬ್ಬ ನೈಜ ಭಾರತೀಯ ಜಾತ್ಯತೀತ ವ್ಯಕ್ತಿ: ಇಂದಿನ ಕೋಮುವಾದಕ್ಕೆ ಅವರನ್ನು ದೂರಬೇಡಿ

ಈ ದೇಶದಲ್ಲಿ ನಮಗೆ ಶಿಕ್ಷಣದ ಹಕ್ಕಿದೆ. 6-14 ವರ್ಷದೊಳಗಿನ ಎಲ್ಲರೂ ಶಿಕ್ಷಣ ಪಡಯಲೇಬೇಕು ಎಂದು 21ಎ ಸೆಕ್ಷನ್ ಹೇಳುತ್ತದೆ. ಆದರೆ, ಅದಕ್ಕೆ ಸರ್ಕಾರಗಳ ನೀತಿಗಳು ಅಡ್ಡಿಯಾದಾಗ ಸರ್ವೋಚ್ಚ ನ್ಯಾಯಾಲಯಕ್ಕೆ ಹೋದರೆ, ಇರಿ ಸ್ವಲ್ಪ ಸಮಯ ಬೇಕು ಎನ್ನುತ್ತದೆ. ಇದಕ್ಕೆ ಸರಿಯಾದ ವ್ಯವಸ್ಥೆ ಕೊಡುವುದು ಅಷ್ಟು ತಡವಾಗಬೇಕೆ ಎಂದರು.

ಈಗ ಕರ್ಣಾಟಕವು ಒಂದು ಪ್ರಯೋಗಶಾಲೆಯಾಗಿದೆ. ಹಿಜಾಬ್ ಇಲ್ಲ, ಅಜಾನ್ ಇಲ್ಲ, ಹಲಾಲ್ ಇಲ್ಲ…..
ನಮಗೆ ನಮ್ಮ ಅನಿಸಿಕೆಗಳನ್ನು ಹೇಳುವ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಆದರೆ ಇಂದು ಅದನ್ನು ಅವರು ನಿರ್ಧರಿಸುತ್ತಾರೆ. ಇಂದು ಅನೇಕ ವಿಚಾರಗಳಿವೆ, ಆರ್ಥಿಕ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳೂ. ಜೈಭೀಮ್ ಸಿನೆಮಾದಲ್ಲಿ ನೀವು ನೋಡಿರುತ್ತೀರಿ. ಗಾಂಧಿಯವರು ಭಾರತವು ಅದರ ಹಳ್ಳಿಗಳಲ್ಲಿದೆ ಅಂದಾಗ, ಬಾಬಾಸಾಹೇಬರು ಕೇಳುತ್ತಾರೆ ಬಾಪೂಜಿ ನೀವು ಯಾವ ಹಳ್ಳಿಗಳ ಬಗ್ಗೆ ಮಾತಾಡುತ್ತಿದ್ದೀರಿ? ಇಲ್ಲಿ ಎರಡು ಹಳ್ಳಿಗಳಿವೆ. ಹಳ್ಳಿ ಮತ್ತು ಕಾಲನಿ. ಅಲ್ಲಿನ ಜನರಿಗೆ ಯಾವ ಸವಲತ್ತೂ ಇಲ್ಲ. ಶೋಷಿತರಿಗೆ ಕಾನೂನಿನ ನೆರವೂ ಕೂಡಾ ಸಿಗುವುದಿಲ್ಲ, ಏಕೆಂದರೆ, ಅವರಿಗೆ ಅದರ ಮೇಲೆ ಖರ್ಚು ಮಾಡಲು ಹಣ ಇಲ್ಲ, ವಕೀಲರಿಲ್ಲ ಎಂದು ವಾಸ್ತವವನ್ನು ತೆರೆದಿಟ್ಟಿದ್ದರು ಎಂದರು.

ಆದಿವಾಸಿ ಮಹಿಳೆಯಾಗಿ ನಟಿಸಿದ ನಟಿಗೆ ಸೆಂಗಿಣಿಯಾಗಿ ನಟಿಸಿದ್ದಕ್ಕೆ ಮಹಿಳಾ ಪತ್ರಿಕೆ ಪ್ರಶಸ್ತಿ ನೀಡಿತು. ಅದನ್ನು ಪ್ರದಾನ ಮಾಡಲು ನನಗೆ ಹೇಳಿದ್ದರು. ಲಿಜೋಮೋಲ್ ಅವರಾಗಿ ಬಂದರೆ ಅವರನ್ನು ಮುಂಬಾಗಿಲಿನಿಂದ ಕರೆದುಕೊಳ್ಳುತ್ತೇವೆ, ಸೆಂಗಿಣಿಗಾದರೆ ಹಿಂಬಾಗಿಲನ್ನು ತೆಗೆಯುತ್ತೇವೆ ಇದು ಇಂದಿಗೂ ವಾಸ್ತವ. ಇದನ್ನು ಬದಲಿಸುವುದು ಇಂದಿನ ನಮ್ಮ ಮೊದಲ ಕೆಲಸ ಆಗಬೇಕು ಎಂದರು.

ಬಲಪಂಥೀಯ ಸಂಘಟನೆ ಶ್ರೀರಾಮ ಸೇನೆಯ ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದ ಧಾರವಾಡದ ದೇವಸ್ಥಾನವೊಂದರಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ನಬೀಸಾಬ್ ಅವರು ‘ಸಾಹಿತ್ಯ ಮೇಳ’ವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಹೋರಾಟಗಾರ್ತಿ ಕವಿತಾ ಕೃಷ್ಣನ್, ವಾರ್ತಾಭಾರತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಲ್‌ಸ್ಸಲಾಂ ಪುತ್ತಿಗೆ, ಹಿರಿಯ ಪತ್ರಕರ್ತ ಪಿ. ಸಾಯಿನಾಥ್‌ ಮೊದಲಾದವರು ವೇದಿಕೆಯಲ್ಲಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...