Homeಪುಸ್ತಕ ವಿಮರ್ಶೆಮೋಟಮ್ಮನವರ ಆತ್ಮಕಥನ ’ಬಿದಿರು ನೀನ್ಯಾರಿಗಲ್ಲದವಳು’ವಿನಿಂದ ಆಯ್ದ ಭಾಗ; ಇಂದಿರಾಜಿಗೆ ಮರುಹುಟ್ಟು

ಮೋಟಮ್ಮನವರ ಆತ್ಮಕಥನ ’ಬಿದಿರು ನೀನ್ಯಾರಿಗಲ್ಲದವಳು’ವಿನಿಂದ ಆಯ್ದ ಭಾಗ; ಇಂದಿರಾಜಿಗೆ ಮರುಹುಟ್ಟು

- Advertisement -
- Advertisement -

1978ರ ಫೆಬ್ರವರಿಯಲ್ಲಿ ವಿಧಾನಸಭೆಗೆ ಚುನಾವಣೆ ನಡೆದು, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಕಾಂಗ್ರೆಸ್ (ಐ) ಪಕ್ಷವು ಜಯಭೇರಿ ಬಾರಿಸಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕರ್ನಾಟಕದ ಜನತೆ ಮತ್ತೊಮ್ಮೆ ಇಂದಿರಾ ಕಾಂಗ್ರೆಸ್‌ಗೆ ಭಾರಿ ಬಹುಮತ ನೀಡಿ ಮತ್ತೆ ಅಧಿಕಾರಕ್ಕೆ ತಂದರು.

ನಾನು ವಿಧಾನಸಭೆಗೆ ಆಯ್ಕೆಯಾದಾಗ ಒಬ್ಬ ಕಾಲೇಜು ಹುಡುಗಿಯಂತೆ ಇದ್ದೆ. ಅಂದರೆ ಆಗ ನನಗೆ ಕೇವಲ 26 ವರ್ಷ ವಯಸ್ಸು. ಇಷ್ಟು ಸಣ್ಣ ವಯಸ್ಸಿಗೇ ವಿಧಾನಸಭೆಯ ಸದಸ್ಯೆಯಾದುದು ನನ್ನ ಸುದೈವವೇ ಎನ್ನಬೇಕು. ಚುನಾವಣೆ ಮುಗಿದು, ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಿಯಾಯಿತು. ಮರುದಿನವೇ ದೇವರಾಜ್ ಅರಸು ಅವರು ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕಾರ ಮಾಡಿದರು. ನನಗೆ ಶಾಸಕರ ಭವನದಲ್ಲಿ ಕೊಠಡಿಯನ್ನು ಅಲಾಟ್ ಮಾಡಿದರು. ಕೂಡಲೇ ಬೆಂಗಳೂರಿನಲ್ಲಿ ಎಲ್ಲಿ ಇರುವುದು ಎಂಬ ನನ್ನ ಸಮಸ್ಯೆ ಬಗೆಹರಿಯಿತು. ಆದರೆ, ನಾನು ಒಬ್ಬಳೇ ಅಲ್ಲಿ ಇರಲು ಮನಸ್ಸಾಗಲಿಲ್ಲ. ಯಾಕೆಂದರೆ, ನಾನು ಆಗ ಅವಿವಾಹಿತೆಯಾಗಿದ್ದೆ ಮತ್ತು ರಾಜಕಾರಣದ ತೊಟ್ಟಿಲಲ್ಲಿ ಆಗತಾನೆ ಕಣ್ಣು ಬಿಟ್ಟಿದ್ದೆ. ಹೀಗಾಗಿ ಏನೂ ಗೊತ್ತಿರಲಿಲ್ಲ. ಆದ್ದರಿಂದ ಸ್ವಲ್ಪ ಚಿಂತೆಯಾಯಿತು.

ಹೀಗೆ ಯೋಚಿಸುತ್ತಿರಬೇಕಾದರೆ, ಸಾಗರದ ಕೆ. ಅನ್ನಪೂರ್ಣ ಎಂಬ ಹೆಸರಿನ ನನ್ನ ಸ್ನೇಹಿತೆಯೊಬ್ಬಳ ಹೆಸರು ನೆನಪಾಯಿತು. ಅವಳು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಳು. ನಾನು ಮತ್ತು ಅನ್ನಪೂರ್ಣ ಎಂ.ಎ. ಓದುವಾಗ ಸಹಪಾಠಿಗಳಾಗಿದ್ದೆವು. ಓದಿದ ಮೇಲೆ ಆಕೆ ಬೆಂಗಳೂರಿನಲ್ಲಿಯೇ ಕೆಲಸಕ್ಕೆ ಸೇರಿಕೊಂಡಿದ್ದಳು. ಅವಳು ಗಾಂಧಿಬಜಾರಿನ ಶಾರದಾ ಹಾಸ್ಟೆಲ್‌ನಲ್ಲಿ ಪೇಯಿಂಗ್ ಗೆಸ್ಟಾಗಿ ಇದ್ದಳು. ಅವಳಿಗೆ ಕರೆದು, ನನ್ನ ಜೊತೆ ಶಾಸಕರ ಭವನದಲ್ಲಿ ಬಂದು ಇರುವಂತೆ ನಾನು ಮನವಿ ಮಾಡಿದೆ. ಆಕೆ ಒಪ್ಪಿಕೊಂಡು ನನ್ನ ಜೊತೆಗಿದ್ದಳು. ಅವಳಿಂದಾಗಿ ನನಗೆ ಎಷ್ಟೋ ಸಹಾಯವಾಯಿತು. ಆಕೆ ಬಂದಿರದೇ ಇದ್ದಿದ್ದರೆ ನಾನು ಶಾಸಕರ ಭವನದಲ್ಲಿ ಇರುತ್ತಲೇ ಇರಲಿಲ್ಲ. ನಾನು ಸ್ನೇಹಿತೆಯ ಮನೆಗೋಗಿ ಇದ್ದುಬಿಡೋಣ ಅಂತ ಯೋಚನೆ ಮಾಡಿದ್ದೆ. ಆದರೆ, ಪುಣ್ಯಕ್ಕೆ ಅನ್ನಪೂರ್ಣ ಬಂದುದರಿಂದ ನಿರಾಳವಾಯಿತು.

ಕೆಲವು ದಿನಗಳಲ್ಲೇ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರ ಪರಿಚಯವಾಯಿತು. ಎಚ್.ಡಿ. ಕೋಟೆಯ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದ ಶ್ರೀಮತಿ ಸುಶೀಲಾ ಚೆಲುವರಾಜ್ ಎಂಬುವರದ್ದೂ ಪರಿಚಯವಾಯಿತು. ಶ್ರೀಮತಿ ನಾಗಮ್ಮ ಕೇಶವಮೂರ್ತಿ ಮತ್ತು ಶ್ರೀಮತಿ ಸುಶೀಲಾ ಚೆಲುವರಾಜ್ ಅವರೊಂದಿಗೆ ನಾನು ವಿಧಾನಸೌಧಕ್ಕೆ ಹೋಗುತ್ತಿದ್ದೆ. ಜೊತೆಗೆ ಶಾಸಕರ ಭವನದಲ್ಲಿ ಅನ್ನಪೂರ್ಣ ಇದ್ದಳು. ಅದಲ್ಲದೇ ಒಬ್ಬಳು ಸರ್ವೆಂಟ್ ಕೂಡ ಇದ್ದುದರಿಂದ ನಮಗೆ ಊಟ-ತಿಂಡಿಗೇನೂ ತೊಂದರೆಯಾಗುತ್ತಿರಲಿಲ್ಲ. ನಮಗೆ ಸಹಾಯಕಿಯಾಗಿದ್ದವಳು ನಮಗೆ ಬೇಕಾದಂಥ ಆಹಾರ ಸಿದ್ಧಪಡಿಸಿ ಕೊಡುತ್ತಿದ್ದುದರಿಂದ ಯಾವ ತೊಂದರೆಯೂ ಇರುತ್ತಿರಲಿಲ್ಲ.

*****

1977ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ದೇಶದಾದ್ಯಂತ ಕಾಂಗ್ರೆಸ್ ಸೋತು ಹೋಗಿತ್ತು
(ಆದರೆ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ 26 ಸ್ಥಾನಗಳನ್ನು ಗೆದ್ದಿತ್ತು). ಲೋಕಸಭೆಯಲ್ಲಿ ಕಾಂಗ್ರೆಸ್‌ನ ಸಂಖ್ಯಾಬಲ 200ಕ್ಕಿಂತಲೂ ಕಡಿಮೆಯಾಗಿತ್ತು. ತುರ್ತು ಪರಿಸ್ಥಿತಿ ಹೇರಿದ್ದರಿಂದ ಕಾಂಗ್ರೆಸ್‌ಗೆ 200ಕ್ಕಿಂತಲೂ ಕಡಿಮೆ ಲೋಕಸಭಾ ಸ್ಥಾನಗಳು ಸಿಕ್ಕಿದ್ದರಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು. ರಾಯ್‌ಬರೇಲಿಯಲ್ಲಿ ಚುನಾವಣೆಗೆ ನಿಂತಿದ್ದ ಇಂದಿರಾ ಗಾಂಧಿಯವರು ಜನತಾ ಪಕ್ಷದ ರಾಜ್ ನಾರಾಯಣ್ ಅವರಿಗೆ 1977ರಲ್ಲಿ ಸೋತುಹೋದರು. ಅಮೇಥಿಯಿಂದ ಚುನಾವಣಾ ಕಣಕ್ಕಿಳಿದಿದ್ದ ಸಂಜಯ್ ಗಾಂಧಿ ಕೂಡ ಸೋತುಹೋದರು. ತಾಯಿ ಮಗ ಇಬ್ಬರೂ ಲೋಕಸಭೆಯಿಂದ ಹೊರಗುಳಿಯಬೇಕಾಯಿತು.

ಇಂಥ ಸಂದರ್ಭದಲ್ಲಿ ಇಂದಿರಾ ಗಾಂಧಿಯವರಿಗೆ ಮತ್ತೊಮ್ಮೆ ಲೋಕಸಭೆ ಪ್ರವೇಶ ಮಾಡುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಅವರು ಯಾವುದಾದರೂ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಗೆದ್ದು ಲೋಕಸಭೆ ಪ್ರವೇಶ ಮಾಡಬೇಕಾಗಿತ್ತು. ಆಗ ದೇವರಾಜ್ ಅರಸು ಅವರು ಇಂದಿರಾ ಗಾಂಧಿಯವರನ್ನು ಕರ್ನಾಟಕಕ್ಕೆ ಬನ್ನಿ, ನಿಮ್ಮನ್ನು ಗೆಲ್ಲಿಸಿ, ಲೋಕಸಭೆಗೆ ಕಳುಹಿಸುತ್ತೇವೆ ಎಂದು ಆಹ್ವಾನ ನೀಡಿದರು. ಜೊತೆಗೆ ಅವರನ್ನು ಕೋಲಾರ ಜಿಲ್ಲೆಯಿಂದ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡಿ, ಗೆಲ್ಲಿಸಿ ಕಳುಹಿಸಬೇಕು ಎಂದು ಯೋಜಿಸಲಾಗಿತ್ತು. ಆಗ ಕೋಲಾರದಿಂದ ಜಿ.ವೈ. ಕೃಷ್ಣನ್ ಗೆದ್ದಿದ್ದರು. ಆಮೇಲೆ ಬೆಂಗಳೂರು ಉತ್ತರ ಕ್ಷೇತ್ರದಿಂದ ನಿಂತ್ಕೋತ್ತಾರೆ ಅಂತಲೂ ಸುದ್ದಿ ಆಯಿತು. ಆದರೆ, ಅದು ಸೇಫ್ ಅಲ್ಲ ಅಂತಂದು, ಕೊನೆಗೆ ಚಿಕ್ಕಮಗಳೂರಿಗೆ ಬಂದು ಚುನಾವಣೆಗೆ ಸ್ಪರ್ಧಿಸುವಂತೆ ದೇವರಾಜ್ ಅರಸು ಅವರು ಒತ್ತಾಯಿಸಿದರು. ಅವರ ಒತ್ತಾಯದ ಮೇರೆಗೆ ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿದರು. ಯಾಕೆಂದರೆ, ಚಿಕ್ಕಮಗಳೂರು ಕಾಂಗ್ರೆಸ್‌ಗೆ ತುಂಬ ಪ್ರಶಸ್ತವಾದ ಜಾಗ. 1978ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದಿದ್ದರು. ಹೀಗಾಗಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮರುಚುನಾವಣೆ ನಡೆದರೆ, ಅಲ್ಲಿ ಇಂದಿರಾ ಗಾಂಧಿಯವರು ಆಯ್ಕೆಯಾಗುವುದು ಖಚಿತವಾಗಿತ್ತು. ಈ ಕಾರಣದಿಂದ ಅವರಿಗೆ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸಲಾಗಿತ್ತು.

1977ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಡಿ.ಬಿ. ಚಂದ್ರೇಗೌಡರು ಎರಡನೇ ಬಾರಿಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ದೇವರಾಜ್ ಅರಸು ಅವರ ಸಲಹೆಯ ಮೇರೆಗೆ ಹಾಗೂ ಇಂದಿರಾ ಅವರ ಮೇಲಿಟ್ಟಿದ್ದ ನಂಬಿಕೆ ಮತ್ತು ವಿಶ್ವಾಸದ ಕಾರಣ ಚಂದ್ರೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಇಂದಿರಾ ಗಾಂಧಿಯವರಿಗೆ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಟ್ಟರು. ಹೀಗೆ ಚಂದ್ರೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಇಂದಿರಾ ಅವರಿಗೆ ಮರು ಆಯ್ಕೆಯಾಗಲು ಅವಕಾಶ ಮಾಡಿಕೊಟ್ಟದ್ದು ಭಾರತದ ರಾಜಕೀಯ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ.

ಹೀಗಿರಬೇಕಾದರೆ, 1978ರಲ್ಲಿ ಯಾವುದೋ ಒಂದು ದಿನ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿಗೆ ಬಂದು ತಮ್ಮ ನಾಮಪತ್ರ ಸಲ್ಲಿಸಿದರು. ಆಗೆಲ್ಲ ನನಗೆ ಮುಖಂಡರ ಹಿಂದೆ ಹೋಗಬೇಕು, ನಾಮಪತ್ರ ಸಲ್ಲಿಸುವಾಗ ಅವರೊಂದಿಗೆ ಇರಬೇಕು, ಪಕ್ಷದ ನಾಯಕರೊಂದಿಗೆ ಓಡಾಡಬೇಕು, ಫೋಟೊ ತೆಗೆಸಿಕೊಳ್ಳಬೇಕು, ಪ್ರಚಾರ ಗಿಟ್ಟಿಸಿಕೊಳ್ಳಬೇಕು- ಎಂಬೆಲ್ಲ ತಿಳಿವಳಿಕೆ ಇರಲಿಲ್ಲ. ಹೀಗಾಗಿ ಅವರು ಯಾವಾಗ ನಾಮಪತ್ರ ಸಲ್ಲಿಸಿದರು, ನಾಮಪತ್ರ ಸಲ್ಲಿಸುವಾಗ ಯಾವೆಲ್ಲ ನಾಯಕರು ಜೊತೆಯಲ್ಲಿದ್ದರು, ಎಷ್ಟು ಜನ ಸೇರಿದ್ದರು ಎಂಬುದೆಲ್ಲ ನನಗೆ ಗೊತ್ತಿಲ್ಲ. ಆಗ ನಾಮಪತ್ರ ಸಲ್ಲಿಸೋದು ಅಂಥ ದೊಡ್ಡ ವಿಚಾರವಾಗಿರಲಿಲ್ಲ. ಈವಾಗ್ಲೇ, ನಾಮಪತ್ರ ಸಲ್ಲಿಸ್ತಾರೆ ಅಂತಂದ್ರೆ ದೊಡ್ಡ ಭಾಜಾ ಭಜಂತ್ರಿ ಜಾಸ್ತಿ. 1978ರಲ್ಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾವು ಹೋಗಿದ್ದು ಕೇವಲ ಐದು ಜನರು ಮಾತ್ರ. ಆದರೆ, ಈಗ ಮೆರವಣಿಗೆ ಮಾಡೋದೇನು? ಜನರನ್ನು ಸೇರಿಸೋದೇನು- ಭಾರಿ ಬದಲಾವಣೆ ಆಗಿದೆ. ಆದರೆ, ಚುನಾವಣೆ ಫಲಿತಾಂಶ ಬಂದಾಗ ಮಾತ್ರ ಎಲ್ಲವೂ ಉಲ್ಟಾ ಆಗಿರುತ್ತೆ. ನಾಮಿನೇಷನ್ ಫೈಲ್ ಮಾಡಲು ಹೋದಾಗ ಭಾರಿ ಸಂಖ್ಯೆಯಲ್ಲಿ ಜನರನ್ನು ಕರೆದುಕೊಂಡು ಹೋದವರು ಸೋತಿರುತ್ತಾರೆ. ಕೆಲವೇ ಜನರನ್ನು ಕರೆದುಕೊಂಡು ಹೋದವರು ಗೆದ್ದಿರುತ್ತಾರೆ. ಹೀಗೂ ಆಗಿರುವ ಬೇಕಾದಷ್ಟು ಪ್ರಸಂಗಗಳಿವೆ.

ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕಿಂತಲೂ ಮೊದಲು ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಒಂದು ಸಲ ಪ್ರವಾಸ ಬಂದರು. ಆಮೇಲೆ ಚುನಾವಣೆ ಘೋಷಣೆಯಾಯಿತು. ಕೇಂದ್ರದಲ್ಲಿ ಪ್ರಧಾನಿಯಾಗಿ ಚರಣ್ ಸಿಂಗ್ ಇದ್ದರು. ಇಂದಿರಾ ಅವರು ಪ್ರಚಾರಕ್ಕೋಸ್ಕರ ದೆಹಲಿಯಿಂದ ಮಂಗಳೂರುವರೆಗೂ ವಿಮಾನದಲ್ಲಿ ಬಂದು ಮಂಗಳೂರು ವಿಮಾನ ನಿಲ್ದಾಣದಲ್ಲಿಳಿದರು. ಅಲ್ಲಿಂದ ಕಾರ್ಕಳದ ಮೇಲೆ ಹಾಯ್ದು ಕುದುರೆಮುಖ ಮೂಲಕ ಮೂಡಿಗೆರೆ ತಾಲ್ಲೂಕಿನ ಕಳಸದ ಸಂಸೆ ಗ್ರಾಮಕ್ಕೆ ಬಂದರು. ಅವರು ಬಂದಾಗ ಮಧ್ಯರಾತ್ರಿಯಾಗಿತ್ತು. ನಾವೆಲ್ಲರೂ ಕೊರೆಯೊ ಚಳಿಯಲ್ಲಿ ಅವರಿಗಾಗಿ ಕಾಯುತ್ತ ಸಂಸೆಯಲ್ಲಿ ನಿಂತಿದ್ದೆವು. ಜೊತೆಗೆ ಸಣ್ಣದಾಗಿ ಮಳೆ ಬೇರೆ ಬರುತ್ತಿತ್ತು. ಆಗ ಇಂದಿರಾ ಗಾಂಧಿಯವರ ಜೀವಕ್ಕೆ ಅಪಾಯ ಇದೆ ಅಂತ ಒಂದು ಸುದ್ದಿಯಿತ್ತು. ಯಾಕೆಂದರೆ, ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅವರ ಮೇಲೆ ಅನೇಕರಿಗೆ ರೋಷವಿತ್ತು ಅಂತ ಹೇಳುತ್ತಿದ್ದರು. ಅವರ ಜೀವಕ್ಕೆ ಅಪಾಯ ಇದೆ ಎಂಬ ಕಾರಣದಿಂದಾಗಿ ಅವರಿಗೆ ಕೊಡುವ ಆಹಾರವನ್ನು ಕೂಡ ಪರೀಕ್ಷೆ ಮಾಡಿ ಕೊಡುತ್ತಿದ್ದರು.

ಅವರು ಸಂಸೆಗೆ ಬಂದಾಗ ಅಲ್ಲೊಂದು ವಿಚಿತ್ರ ಘಟನೆ ನಡೆಯಿತು. ಮಧ್ಯರಾತ್ರಿಯ ಹೊತ್ತಿನಲ್ಲಿ ಒಬ್ಬ ಸ್ವಾಮೀಜಿ ಥರದ ವ್ಯಕ್ತಿ ಕೇಸರಿ ಬಟ್ಟೆ ಧರಿಸಿಕೊಂಡು, ಕೈಯಲ್ಲಿ ಕೇಸರಿ ಬಾವುಟ ಹಿಡಿದುಕೊಂಡು, ಹಣೆಗೆ, ಮೈ-ಕೈಗೆಲ್ಲ ಗಂಧ-ವಿಭೂತಿ-ತಿಲಕ ಬಳಿದುಕೊಂಡು ಓಡಾಡುತ್ತಿದ್ದ. ಎಲ್ಲರದ್ದೂ ಆತನ ಮೇಲೆಯೇ ಸಂಶಯ. ಯಾರೀತ? ಎಲ್ಲಿಂದ ಬಂದ? ಯಾಕೆ ಬಂದ? ಅಂತೆಲ್ಲ ಮಾತಾಡಿಕೊಂಡರು. ಸ್ವಲ್ಪ ಹೊತ್ತು ನೋಡಿದ ಪೊಲೀಸರು ಅವನನ್ನು ಎಲ್ಲಿಗೋ ಕರೆದುಕೊಂಡುಹೋದರು. ಎಲ್ಲಿಗೇಂತ ಗೊತ್ತಿಲ್ಲ. ಕುದುರೆಮುಖ ಗೆಸ್ಟ್‌ಹೌಸ್‌ನಲ್ಲಿ ಇಳಿದುಕೊಳ್ಳಲು ಅವಕಾಶ ಮಾಡಿಕೊಡಿ ಅಂತ ಕೇಳಿದ್ದರು. ಆದರೆ, ಕೇಂದ್ರ ಸರ್ಕಾರದ ಪರವಾನಗಿ ಸಿಗಲಿಲ್ಲ. ಹೀಗಾಗಿ ಆ ಸಂದರ್ಭದಲ್ಲಿ ಕೂಡಲೇ ಅವರನ್ನು ಎಲ್ಲಿ ವಾಸ್ತವ್ಯ ಮಾಡಿಸುವುದು ಅನ್ನೋ ಪ್ರಶ್ನೆ ಬಂದಿತು. ಆಗ ಸಂಸೆಯ ಅರಣ್ಯ ಇಲಾಖೆ ವಸತಿ ಗೃಹದಲ್ಲಿ ಉಳಿಸುವುದು ಅಂತ ತೀರ್ಮಾನಿಸಿದರು. ಅದೊಂದು ಅರಣ್ಯ ಇಲಾಖೆಯ ಸಾಮಾನ್ಯ ಗೆಸ್ಟ್‌ಹೌಸ್. ಅದನ್ನೇ ಸಿದ್ಧಮಾಡಬೇಕು ಅಂತ ತೀರ್ಮಾನ ಮಾಡಿದರು. ರಾತ್ರೋರಾತ್ರಿ ಕೆಲವು ಬೆಡ್‌ಶೀಟ್, ದಿಂಬು, ಸೋಫಾ ಸೆಟ್ಟು, ಟೇಬಲ್ ಇತ್ಯಾದಿ ತಂದುಹಾಕಿ ಸಿದ್ಧಪಡಿಸಿದರು. ಇಷ್ಟೊಂದು ಸಿದ್ಧತೆ ನಡೆದಿರುವ ವಿಚಾರ ನನಗೆ ಗೊತ್ತಿರಲಿಲ್ಲ. ನನಗೆ ಆಗ ಚಂದ್ರೇಗೌಡರು ಏನು ಹೇಳ್ತಾರೋ ಅದನ್ನು ಕೇಳುವುದಷ್ಟೇ ಗೊತ್ತಿತ್ತು. ನಾನೇ ನಾನಾಗಿ ತೀರ್ಮಾನ ತೆಗೆದುಕೊಳ್ಳುವುದಾಗಲೀ, ಮುನ್ನುಗ್ಗಿ ಕೆಲಸ ಮಾಡುವುದಾಗಲೀ ನನಗೆ ತಿಳಿಯದು. ಹೀಗಾಗಿ ಈ ಸಿದ್ಧತೆಗಳಾವವೂ ನನ್ನ ಗಮನಕ್ಕೆ ಬಂದಿರಲಿಲ್ಲ.

ಅಲ್ಲಿಂದ ಸಂಸೆ ಗೆಸ್ಟ್‌ಹೌಸಿಗೆ ಇಂದಿರಾ ಅವರನ್ನು ಕರೆದುಕೊಂಡು ಬಂದರು. ಅದು ರಸ್ತೆಯಿಂದ ಬಹಳ ಎತ್ತರದ ಜಾಗದಲ್ಲಿತ್ತು. ಅವರು ಕಾರಿನಲ್ಲಿ ಹೊರಟಿದ್ದರು. ಆದರೆ, ಅಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿತ್ತು. ರಸ್ತೆಯಲ್ಲ ಕೊಚ್ಚಿಹೋಗಿತ್ತು. ಕೆಲವೆಡೆ ರಸ್ತೆಯಲ್ಲೆಲ್ಲ ಕೆಸರು ತುಂಬಿಕೊಂಡಿತ್ತು. ಕೆಸರುಮಯವಾದ ಆ ಏರು ರಸ್ತೆಯಲ್ಲಿ ಕಾರು ಓಡುವುದು ಕಷ್ಟವಾಯಿತು. ಕೂಡಲೇ ಅರಣ್ಯ ಇಲಾಖೆಯ ಒಂದು ಜೀಪ್ ತರಿಸಿದರು. ಇಂದಿರಾ ಅವರು ಜೀಪ್ ಏರಿದರು. ಅವರ ಹಿಂದಿನ ಸೀಟಿನಲ್ಲಿ ಡಿ.ಬಿ. ಚಂದ್ರೇಗೌಡರು ಕುಳಿತರು. ನಾನು ಮತ್ತು ತಾರಾದೇವಿ ಜೀಪು ಹತ್ತಿದೆವು. ಜೀಪು ಗಡಗಡ ಸದ್ದು ಮಾಡುತ್ತಾ ಹೊರಟಿತು. ಆದರೆ, ಆ ಜೀಪು ಅರಣ್ಯದ ಏರು-ಇಳುವಿನ ರಸ್ತೆಯನ್ನು ಹತ್ತುತ್ತೋ ಇಲ್ಲವೋ ಎಂಬ ಅನುಮಾನ ಕಾಡತೊಡಗಿತು. ಯಾಕೆಂದರೆ ಕೆಲವು ಕಡೆಗಳಲ್ಲಿ ಜೀಪಿನ ಹಿಂಬದಿಯ ಟೈರುಗಳು ಕೆಸರಲ್ಲಿ ಸಿಕ್ಕಿಕೊಂಡು ಗರಗರ ತಿರುಗುತ್ತಿದ್ದುವೇ ಹೊರತು ಮುಂದೆ ಹೋಗುತ್ತಿರಲಿಲ್ಲ. ಇದೊಳ್ಳೆ ಫಜೀತಿಯಾಯ್ತಲ್ಲ ಅಂದುಕೊಳ್ಳುವಂತಾಯಿತು. ಆದರೆ, ಜೀಪು ಬಲು ಗಟ್ಟಿಯಾಗಿತ್ತು. ಅದಕ್ಕೆ ಫೋರ್ ವೀಲರ್ ಜೀಪ್ ಎಂದೇ ಕರೆಯುತ್ತಿದ್ದರು. ಜೊತೆಗೆ ಆ ಡ್ರೈವರ್ ಬಲು ಗಟ್ಟಿಗನಾಗಿದ್ದ. ಏನೇನೋ ಮಾಡಿ ಜೀಪನ್ನು ಸುರಕ್ಷಿತವಾಗಿ ಸಂಸೆಯ ಗೆಸ್ಟ್‌ಹೌಸಿಗೆ ತೆಗೆದುಕೊಂಡು ಹೋದ.

ಆದರೆ, ಇಂದಿರಾ ಗಾಂಧಿಯವರ ಮುಖದಲ್ಲಿ ಯಾವುದೇ ಆತಂಕ ಇರಲಿಲ್ಲ. ಅವರು ಅದನ್ನೊಂದು ಹೊಸ ಅನುಭವ ಎಂದೇ ಸ್ವೀಕರಿಸಿದರು. ನಾವು ಇಂದಿರಾ ಗಾಂಧಿಯವರನ್ನು ಸಂಸೆಯ ಗೆಸ್ಟ್‌ಹೌಸಿನಲ್ಲಿ ಬಿಟ್ಟು ಮರಳಿ ಕಳಸಕ್ಕೆ ಹೋಗಿ ಅಲ್ಲಿಯೇ ಉಳಿದುಕೊಂಡೆವು. ಮರುದಿನದಿಂದ ಚುನಾವಣಾ ಪ್ರಚಾರ ಪ್ರಾರಂಭವಾಯಿತು. ಮರುದಿನದಿಂದ ಎಲ್ಲಿಂದ ಅವರು ಚುನಾವಣಾ ಪ್ರಚಾರ ಶುರು ಮಾಡಿದರು ಎಂಬುದು ನನಗೆ ನೆನಪಿಲ್ಲ.

ಮೂಡಿಗೆರೆ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಚುನಾವಣಾ ಪ್ರಚಾರ ಮಾಡಲು ಬರುತ್ತಾರೆ ಎಂದು ನನಗೆ ಹೇಳಿದ್ದರು. ಅಂದರೆ, ಮೂರು ದಿನಗಳ ಕಾಲ ನನ್ನ ಕ್ಷೇತ್ರದಲ್ಲಿ ಇಂದಿರಾ ಗಾಂಧಿಯವರಿಂದ ಚುನಾವಣಾ ಪ್ರಚಾರ. ಈ ಮೂರು ದಿನಗಳ ಪ್ರವಾಸದಲ್ಲಿ ಎರಡು ದಿನಗಳ ಕಾಲ ಮಾಕೋನಹಳ್ಳಿಯಲ್ಲಿ ಡಿ.ಎಂ. ಪುಟ್ಟೇಗೌಡರ ಮನೆಯಲ್ಲಿ ವಾಸ್ತವ್ಯ ಹೂಡಿದರು. ಕಡೂರು ತರೀಕೆರೆಗಳಿಗೆ ಹೋಗಿ ಅಲ್ಲಿಯೂ ರಾತ್ರಿ 12ರವರೆಗೂ ಚುನಾವಣಾ ಪ್ರಚಾರ ಕೈಗೊಂಡು, ನಂತರ ಅಲ್ಲಿಂದ ಪುಟ್ಟೇಗೌಡರ ಮನೆಗೆ ಬಂದು ವಾಸ್ತವ್ಯ ಮಾಡುತ್ತಿದ್ದರು.

ಮೊದಲ ದಿನ ಪ್ರಚಾರ ಮುಗಿಸಿಕೊಂಡು ರಾತ್ರಿ 12ರ ಸುಮಾರಿಗೆ ಇಂದಿರಾ ಅವರು ಪುಟ್ಟೇಗೌಡರ ಮನೆಗೆ ಬಂದರು. ಆಗ ಅವರನ್ನು ಪುಟ್ಟೇಗೌಡರ ಮನೆಗೆ ಬಿಟ್ಟು ಬರಲಿಕ್ಕೇಂತ ನಾವೂ ಕೂಡ ಹೋದೆವು. ಇಂದಿರಾ ಅವರು ಕಾರಿಂದ ಇಳಿಯಬೇಕಾದರೆ ಅವರು ತಮ್ಮ ಕೈಯಲ್ಲೊಂದು ಟಾರ್ಚ್ ಹಿಡಿದುಕೊಂಡಿದ್ದರು. ಎಲ್ಲಾದರೂ ಬೆಳಕಿಲ್ಲದ ಜಾಗದಲ್ಲಿ ಓಡಾಡಲು ಅನುಕೂಲವಾಗಲಿ ಅಂತ ಅವರ ಕೈಗೊಂದು ದೊಡ್ಡ ಟಾರ್ಚ್ ಕೊಟ್ಟಿದ್ದರು. ಪುಟ್ಟೇಗೌಡರ ಮನೆಯ ಮುಂದೆ ದೊಡ್ಡದಾದ ಅಂಗಳವಿತ್ತು. ಅಂಗಳದ ತುಂಬೆಲ್ಲಾ ಜನರು ಇವರನ್ನು ನೋಡುವುದಕ್ಕಾಗಿ ಆ ರಾತ್ರಿ ಹೊತ್ತಿನಲ್ಲಿಯೂ ಕಾಯ್ದುಕೊಂಡು ನಿಂತಿದ್ದರು. ಸುತ್ತಮುತ್ತಲಿನ ಹಳ್ಳಿಗಳಿಂದಲೂ ಜನರು ಬಂದಿದ್ದರು. ಹೀಗೆ ಬಂದವರು ಸಾಲಾಗಿ ನಿಂತುಕೊಂಡಿದ್ದರು. ಎಲ್ಲರೂ ’ಇಂದಿರಾ ಗಾಂಧಿ ಅಲ್ಲಿ ಬಂದರು, ಇಲ್ಲಿ ಬಂದರು, ಆ ಕಡೆ ನೋಡು, ಈ ಕಡೆ ನೋಡು’ ಅಂತ ಕುತೂಹಲದಿಂದ ಕಿರುಚಾಡುತ್ತಿದ್ದರು.

ಹೀಗಿರಬೇಕಾದರೆ, ಕಾರಿನಿಂದ ಟಾರ್ಚ್ ಬೆಳಕು ಹಿಡಿದುಕೊಂಡೇ ಇಂದಿರಾ ಅವರು ಕೆಳಗಿಳಿದರು. ಅವರು ಇಳಿದು ಸ್ವಲ್ಪ ಈಚೆ ಬರುತ್ತಿದ್ದಂತೇ ಅಲ್ಲಿ ಸೇರಿದ್ದ ಸುಮಾರು 40-50 ಜನರು ಒಂದೇ ಸಲ ದಬಾದಬಾ ಅಂತ ಅವರ ಕಾಲಿಗೆ ಬಿದ್ದರು. ಅವರಿಗೆ ಒಂದುಕಡೆ ಖುಷಿ. ಮತ್ತೊಂದೆಡೆ ಆಶ್ಚರ್ಯ. ಈ ಜನರು ಎಷ್ಟೊಂದು ಮುಗ್ಧರಿದ್ದಾರೆ ಅಂತ ಅವರಿಗೆ ಅಚ್ಚರಿಯಾಯ್ತು. ಆಗ ಇಂದಿರಾ ಅವರು ಪ್ರಧಾನಿಯಾಗಿ ಅಧಿಕಾರದಿಂದ ಇಳಿಯುವ ಸಂದರ್ಭದಲ್ಲಿ 20 ಅಂಶದ ಕಾರ್ಯಕ್ರಮ ತಂದಿದ್ದರು. ಮನೆ ಇಲ್ಲದವರಿಗೆ ಮನೆ, ಹಿರಿಯ ನಾಗರಿಕರಿಗೆ ಮಾಸಾಶನ, ಗೇಣಿ ಪದ್ಧತಿ ನಿರ್ಮೂಲನೆ- ಮುಂತಾದ ಕಾರ್ಯಕ್ರಮ ತಂದಿದ್ದರಲ್ಲ- ಅದೆಲ್ಲವೂ ಜನರಿಗೆ ತುಂಬ ಸಹಾಯಕವಾಗಿತ್ತು. ಅದಕ್ಕಾಗಿ ಜನರು ಇಂದಿರಾ ಗಾಂಧಿಯವರಿಗೆ ಕೃತಜ್ಞರಾಗಿದ್ದರು. ಅಲ್ಲದೇ 1978ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೇ ಕಾಂಗ್ರೆಸ್‌ಗೆ ’ಹಸ್ತ’ದ ಗುರುತು ಸಿಕ್ಕಿತ್ತು. ಅದಾದ ಮೇಲೆ ಬಂದ ಈ ಉಪಚುನಾವಣೆಯಲ್ಲಿ ಎಲ್ಲಿ ಹೋದರೂ ಅಲ್ಲಿ ಇಂದಿರಾ ಗಾಂಧಿಯವರು ತಮ್ಮ ಕೈಯನ್ನು ಮೇಲಕ್ಕೆತ್ತಿ, ಕೈಗೆ ಮತ ಹಾಕುವಂತೆ ಹೇಳುತ್ತಿದ್ದರು. ನಾವೆಲ್ಲರೂ ಮತ ಕೇಳಲು ಹೋದಾಗ ಕೈ ಎತ್ತಿ ಮತ ಕೇಳುವಾಗ ನಮಗೆ ಖುಷಿಯಾಗುತ್ತಿತ್ತು.

ಚುನಾವಣೆಯೆಲ್ಲಾ ಮುಗಿದು, ಅವರು ದೆಹಲಿಗೆ ಹೋದ ಮೇಲೆ ಪುಟ್ಟೇಗೌಡರಿಗೆ ಒಂದು ಕಾಗದ ಬರೆದರು. ನೀವು ಮತ್ತು ನಿಮ್ಮ ಪತ್ನಿಯವರು ಅಪಾರ ಪ್ರೀತಿಯಿಂದ ನನಗೆ ಆತಿಥ್ಯ ಕೊಟ್ಟಿದ್ದೀರಿ. ನಾನು ಚುನಾವಣಾ ಪ್ರಚಾರ ಮುಗಿಸಿಕೊಂಡು ಮಧ್ಯರಾತ್ರಿ ನಿಮ್ಮ ಮನೆಗೆ ಬಂದಾಗ ನೀವಿಬ್ಬರೂ ದಂಪತಿ ನನ್ನನ್ನು ಅತ್ಯಂತ ಆದರದಿಂದ ಬರಮಾಡಿಕೊಂಡು, ಎಷ್ಟೊಂದು ಪ್ರೀತಿ ವಿಶ್ವಾಸ ತೋರಿಸಿದಿರಿ. ನಿಮಗೆ ಧನ್ಯವಾದಗಳು ಅಂತ ಪತ್ರದಲ್ಲಿ ಬರೆದಿದ್ದರು. ಅದೊಂದು ಅಮೋಘವಾದ ಸಂಗತಿ. ಇಂದಿರಾ ಗಾಂಧಿಯವರು ಸ್ವತಃ ತಾವೇ ತಮ್ಮ ಕೈಬರಹದಿಂದ ಈ ರೀತಿ ಪತ್ರ ಬರೆಯುವುದು ಅಂದರೆ ಒಂದು ರೀತಿಯ ಅಚ್ಚರಿ ಮತ್ತು ಸಂತಸದ ಸಂಗತಿಯೇ ಸರಿ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಜನತಾ ಪಕ್ಷದ ಹಿರಿಯಾಳುಗಳ ಎಲ್ಲ ಪ್ರಚಾರವೂ ನೆಲಕಚ್ಚಿ ಇಂದಿರಾ ಗಾಂಧಿಯವರು ಭರ್ಜರಿಯಾಗಿ ಆಯ್ಕೆಯಾಗಿ ಮತ್ತೆ ಲೋಕಸಭೆ ಹೋದರು. ಚಿಕ್ಕಮಗಳೂರು ಕ್ಷೇತ್ರವು ಇಂದಿರಾ ಗಾಂಧಿಯವರಿಗೆ ಮರುಹುಟ್ಟು ನೀಡಿದ್ದಲ್ಲದೇ, ಇಡೀ ದೇಶದಲ್ಲಿ ಮತ್ತೆ ಕಾಂಗ್ರೆಸ್(ಐ) ಪಕ್ಷವು ಮೈಕೊಡವಿ ಎದ್ದುನಿಲ್ಲುವಂತೆ ಮಾಡಿತು ಎಂಬುದು ಈಗ ಇತಿಹಾಸ. ಅಂಥ ಒಂದು ಸಂಕ್ರಮಣ ಕಾಲದಲ್ಲಿ ಇಂದಿರಾ ಗಾಂಧಿಯವರು, ದೇವರಾಜ್ ಅರಸು ಅವರೊಂದಿಗೆ ನಾನು ಜೊತೆಯಾಗಿ ಹೆಜ್ಜೆ ಹಾಕಿದೆನೆಂಬುದು ಇನ್ನೂ ಹೆಮ್ಮೆಯ ಸಂಗತಿ.

ಬಿದಿರು ನೀನ್ಯಾರಿಗಲ್ಲದವಳು
ಶ್ರೀಮತಿ ಮೋಟಮ್ಮನವರ ಆತ್ಮಕಥನ
ನಿರೂಪಣೆ: ವೀರಣ್ಣ ಕಮ್ಮಾರ
ಪ್ರಕಟಣೆ: ವಿಕಾಸ ಪ್ರಕಾಶನ
ಬೆಲೆ: 400 ರೂ


ಇದನ್ನೂ ಓದಿ: ನೂಪುರ್ ಮತ್ತು ನವೀನ್‌ರನ್ನು ಉಚ್ಚಾಟಿಸಿದ್ದು ಬಿಜೆಪಿಯ ನಿಜವಾದ ಮುಖವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...