Homeಮುಖಪುಟಮಳೆನೀರು ಕೊಯ್ಲು, ಕೆರೆ ಪುನರುಜ್ಜೀವನ ಮುಂತಾದುವು ಯಾರಿಗೂ ಬೇಕಿಲ್ಲ ಯಾಕೆ?

ಮಳೆನೀರು ಕೊಯ್ಲು, ಕೆರೆ ಪುನರುಜ್ಜೀವನ ಮುಂತಾದುವು ಯಾರಿಗೂ ಬೇಕಿಲ್ಲ ಯಾಕೆ?

- Advertisement -
- Advertisement -

| ಹೇಮಲತಾ ಶೆಣೈ, ಬೆಂಗಳೂರು |

ಕರ್ನಾಟಕದ ನಗರಗಳ ನೀರಿನ ಬವಣೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಗೆಲ್ಲುವ ಲಕ್ಷಣ ಕಾಣುತ್ತಿಲ್ಲ. ಯಾಕೆಂದರೆ ಅಳಿದುಳಿದ ಕೆರೆಗಳನ್ನು ಅಭಿವೃದ್ಧಿಪಡಿಸುವುದು, ಮಳೆನೀರು ಕೊಯ್ಲಿನ ಮೂಲಕ ನೀರು ಸಂಗ್ರಹ ಇತ್ಯಾದಿ ನಮಗೆ ಎಟಕುವಂತಹದನ್ನು ಮಾಡಬೇಕೆನ್ನುವ ತಜ್ಞರ ಮಾತು ಅಧಿಕಾರಸ್ಥರ ಕಿವಿಯೊಳಗೆ ಹೋಗುವುದೇ ಇಲ್ಲ. ನದಿ ತಿರುವು, ನದಿ ಜೋಡಣೆ, ಮೋಡ ಬಿತ್ತನೆಯಂತಹ ದೊಡ್ಡ ಖರ್ಚಿನ ಬಾಬತ್ತುಗಳು ಮಾತ್ರ ಅವರಿಗೆ ಆಕರ್ಷಕವಾಗಿ ಕಾಣುತ್ತವೆ. ನೇತ್ರಾವತಿಯಲ್ಲಿ ನೀರು ಕಡಿಮೆಯಾಗಿ ಒಣಗಲು ಶುರುವಾಗಿದ್ದರೂ – ಈ ಬೇಸಿಗೆಯಲ್ಲಿ ನೀರಿನ ತೀವ್ರ ಕೊರತೆಯ ಕಾರಣ ಧರ್ಮಸ್ಥಳದ ಯಾತ್ರಾರ್ಥಿಗಳಿಗೆ ತಮ್ಮ ಪ್ರವಾಸವನ್ನು ಕೆಲ ದಿನ ಮುಂದೂಡಲು ದೇವಸ್ಥಾನದ ಆಡಳಿತಾಧಿಕಾರಿಗಳೇ ಮನವಿ ಮಾಡಿದ್ದನ್ನು ಸ್ಮರಿಸಬಹುದು – ಅಧಿಕಾರಸ್ಥರು ಈಗಲೂ ‘ನೇತ್ರಾವತಿ ತಿರುವು ಯೋಜನೆ’ಯ ಮಾತನ್ನೇ ಆಡುತ್ತಿದ್ದಾರೆ.

ಬೆಂಗಳೂರಿನ ಜನಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಹೊಟ್ಟೆಪಾಡಿಗಾಗಿ ಮತ್ತು ನೀರಿನ ಕೊರತೆಯಿಂದಾಗಿ ಹಳ್ಳಿಗಾಡಿನಿಂದ, ನಮ್ಮದೇ ರಾಜ್ಯದ ಬೇರೆಬೇರೆ ಭಾಗಗಳಿಂದ ಮಾತ್ರವಲ್ಲದೆ ನಾನಾ ರಾಜ್ಯಗಳಿಂದಲೂ ಅಸಂಖ್ಯಾತ ಜನರು ಬೆಂಗಳೂರನ್ನು ಆಶ್ರಯಿಸಿ ಬರುತ್ತಲೇ ಇದ್ದಾರೆ.

ಬೆಂಗಳೂರಿನ ನೀರಿನ ಬವಣೆ ನಿವಾರಣೆಗೆ ತಜ್ಞರ ಸಲಹೆಯೆಂದರೆ ಮಳೆನೀರು ಸಂಗ್ರಹ – ಒಂದು, ಕೆರೆಗಳಲ್ಲಿ ಹೂಳೆತ್ತಿ ಅಭಿವೃದ್ಧಿಪಡಿಸಿ ನೀರು ಸಂಗ್ರಹ; ಎರಡು, ಕಟ್ಟಡಗಳಲ್ಲಿ ಮಳೆನೀರು ಕೊಯ್ಲು. ಇದರಿಂದ ಸಾಕಷ್ಟು ನೀರು ಭೂಮಿಯಲ್ಲಿ ಇಂಗಿ ಜಲಮಟ್ಟ ಮೇಲೇರಿ ಬಾವಿ-ಬೋರ್‍ವೆಲ್‍ಗಳಲ್ಲೂ ನೀರು ಬರುತ್ತದೆ. ಇದು ಅನಿವಾರ್ಯ. ಇಷ್ಟರಲ್ಲಾಗಲೇ ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಿ ಮಳೆನೀರು ಸಂಗ್ರಹಕ್ಕೆ ಸಿದ್ಧವಾಗಿರಬೇಕಿದ್ದ ಕೆರೆಗಳು ಹಾಗೇ ಇದ್ದಾವೆ.

ಜನಪ್ರತಿನಿಧಿಗಳಿಗೆ ತಮ್ಮ ಏರಿಯದ ಕೆರೆಗಳನ್ನು ನೀರಿನ ಸಂಗ್ರಹಕ್ಕೆ ಸಿದ್ಧ ಮಾಡುವ ತರಾತುರಿಯೇ ಇಲ್ಲ. ಕೋರ್ಟು ಎಷ್ಟು ಚಾಟಿ ಬೀಸಿದರೂ ಇವರ ದಪ್ಪ ಚರ್ಮಕ್ಕೆ ನಾಟುವುದೇ ಇಲ್ಲ. ಯಾಕಿದು ಹೀಗೆ? ಕೆರೆ ಜಾಗ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳು-ಬಲಾಢ್ಯರಿಂದ ಅದನ್ನು ಬಿಡಿಸಿಕೊಳ್ಳಬೇಕಾಗುತ್ತೆ, ಅದು ಇವರಿಗೆ ಬೇಡವಾಗಿದೆಯಾ?

ಹಲವೆಡೆ ಏರಿಯದ ಜನರು ಸೇರಿ ತಾವೇ ದುರಸ್ತಿ, ಹೂಳೆತ್ತುವುದು ಮಾಡಿಕೊಂಡಿದ್ದಾರೆ. ಯುವ ಸಾಫ್ಟ್‍ವೇರ್ ಇಂಜಿನಿಯರ್ ಒಬ್ಬರು ತಮ್ಮ ಖರ್ಚಿನಿಂದಲೇ ಕೆರೆಗಳನ್ನು ರಿಪೇರಿ ಮಾಡಿಸುತ್ತಿರುವುದು, ಜನಾನುರಾಗಿ ವ್ಯಕ್ತಿಯೊಬ್ಬರು ಎಷ್ಟೋ ಬಾವಿ ತೋಡಿಸುವ ಪಣ ತೊಟ್ಟು ತಮ್ಮಷ್ಟಕ್ಕೆ ಆ ಕೆಲಸ ಮಾಡುತ್ತಿರುವುದು ಇವೆಲ್ಲ ಪತ್ರಿಕೆಗಳಲ್ಲಿ ವರದಿಯಾಗುತ್ತಿರುತ್ತವೆ; ಇಷ್ಟು ದಿನ ಬಂದ ಮಳೆಗೆ ಅವೆಲ್ಲ ತುಂಬಿವೆ. ಆದರೆ ಜನಪ್ರತಿನಿಧಿಗಳು-ಅಧಿಕಾರಸ್ತರು ಇಂತಹ ಕೆಲಸ ಮಾಡಿಸಿದ್ದನ್ನು ಓದಿದ್ದು ನೆನಪಿಲ್ಲ! ಇನ್ನೂ ಕೆಲವು ಕೆರೆಗಳು ರಿಪೇರಿ ಆಗಿ ನೀರು ಸಂಗ್ರಹಿಸಲಿ ಎಂಬ ಕಾರಣಕ್ಕೋ ಎಂಬಂತೆ ನಮ್ಮ ಮುಂಗಾರು ನಾಕ್ನಾಕೇ ದಿನ ಹಿಂದೆ ಸರಿಯುತ್ತಿದೆ.

ಇನ್ನು, ಕಟ್ಟಡಗಳಲ್ಲಿ ಮಳೆನೀರು ಕೊಯ್ಲಿನ ವಿಚಾರಕ್ಕೆ ಬಂದರೆ, ಜನರು ಯಾಕೋ ಆ ಬಗ್ಗೆ ಕಾಳಜಿನೇ ವಹಿಸುತ್ತಿಲ್ಲ. ಹೊಸ ಕಟ್ಟಡಗಳಲ್ಲಿ ಮಳೆನೀರು ಕೊಯ್ಲಿನ ವ್ಯವಸ್ಥೆಯನ್ನು ಸರಕಾರ ಕಡ್ಡಾಯಗೊಳಿಸಿ ಕಾಯ್ದೆ ಮಾಡಿ ತನ್ನ ‘ಕರ್ತವ್ಯ ಪೂರೈಸಿ’ ಹಲವು ವರ್ಷಗಳೇ ಸಂದುವು. ಆದರೆ ಬೇಕಾದಷ್ಟು ಬಹುಮಹಡಿ ವಸತಿ ಸಮುಚ್ಚಯಗಳು, ಸರಕಾರಿ ಕಟ್ಟಡಗಳಲ್ಲೇ ಇದನ್ನು ಅಳವಡಿಸಿಲ್ಲ. ಅವರು ಅದಕ್ಕಾಗಿ ದಂಡ ಕಟ್ಟುತ್ತಾರೆ ಹೊರತು ಮಳೆನೀರು ಕೊಯ್ಲು ಮಾಡುತ್ತಿಲ್ಲ. ಯಾಕೆ?

ಮಿಕ್ಕ ರಾಜ್ಯಗಳಲ್ಲಿ ಇದೆಲ್ಲ ಹೇಗೆ ನಡೆಯುತ್ತಿದೆ? ನೆರೆ ರಾಜ್ಯ ತಮಿಳುನಾಡಿನಲ್ಲಿ ಜಯಲಲಿತಾ ಸಿಎಂ ಆಗಿದ್ದಾಗ ಎಷ್ಟು ಕಟ್ಟುನಿಟ್ಟಾಗಿ ಮತ್ತು ಕ್ರಮಬದ್ಧ ವೃತ್ತಿಪರತೆಯಿಂದ ಈ ಕೆಲಸ ಮಾಡಿಸುತ್ತಿದ್ದರೆಂದರೆ, ಮನೆ ಕಟ್ಟುವ ಪರವಾನಗಿ ಬೇಕಿರುವವರಿಂದ ಸರಕಾರ ಅಥವಾ ಸಂಬಂಧಿತ ಸ್ಥಳೀಯ ಆಡಳಿತಗಳೇ ಮಳೆನೀರು ಕೊಯ್ಲಿನ ವ್ಯವಸ್ಥೆಗೆ ನಿಗದಿತ ಹಣ ಕಟ್ಟಿಸಿಕೊಂಡು ಅದರ ವ್ಯವಸ್ಥೆ ಮಾಡುವಂತೆ ಕಡ್ಡಾಯ ಮಾಡಲಾಗಿತ್ತು. ಹಾಗೆಯೇ ಬ್ಯಾಂಕಿನಿಂದ ಕೃಷಿ ಸಾಲ ಬೇಕಿದ್ದಲ್ಲಿ ಕೃಷಿ ಹೊಂಡ ನಿರ್ಮಿಸಲೇ ಬೇಕಿತ್ತು. ನಮ್ಮಲ್ಲೇಕೆ ಇಂತಹ ಕ್ರಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸುವುದಿಲ್ಲ?

ಬಹುಮಹಡಿ ಕಟ್ಟಡಗಳ ಹಾಗೂ ದೊಡ್ಡದೊಡ್ಡ ಮನೆಗಳ ನಿವಾಸಿಗಳು ಎಂದಾದರೂ ನೀರಿಗಾಗಿ ಕೊಡ ಹಿಡಿದು ಕ್ಯೂ ನಿಲ್ಲುವುದು ಇದೆಯಾ? ಇಲ್ಲ. ಆ ಮನೆಗಳ ಸಂಪುಗಳೆಲ್ಲ ರಾತ್ರಿಯೇ ತುಂಬಿ ನೀರೆಲ್ಲ ಹರಿದುಹೋಗುತ್ತಿರುತ್ತದೆ. ಆದ್ದರಿಂದಲೇ ಅವರಿಗೆ ನೀರು ಕೊಯ್ಲಿನ ಜರೂರತ್ತು ಕಾಣುತ್ತಿಲ್ಲ. [ನಾವು ವಾಸ ಇರುವ ಕಟ್ಟಡದಲ್ಲಿ ಮಳೆನೀರು ಕೊಯ್ಲಿನಿಂದ ಬೋರ್‍ವೆಲ್‍ಗೆ ನೀರು ಮರುಪೂರಣ ವ್ಯವಸ್ಥೆಯಿದೆ. ಆದರೆ ನಮ್ಮ ಪಕ್ಕದ ಕಟ್ಟಡದಲ್ಲಿ ಆ ವ್ಯವಸ್ಥೆ ಮಾಡಿರಲಿಲ್ಲ. ಅವರ ಬೋರ್‍ವೆಲ್ ಬತ್ತಿಹೋಗಿ, ಟ್ಯಾಂಕರ್ ನೀರು ಸಹ ಸಾಕಾಗದೆ, ಮಾಲೀಕರು ನಿವಾಸಿಗಳಿಗೆ ನೀರಿನ ‘ರೇಶನ್’ ಅಳವಡಿಸಿದ್ದಾರೆ. ಹೀಗಾದ ನಂತರ ಈಗ ಮಳೆನೀರು ಕೊಯ್ಲಿನ ವ್ಯವಸ್ಥೆ ಮಾಡಿದ್ದಾರೆ; ಆದರೆ ಆ ನಂತರ ಮಳೆಯೇ ಬಂದಿಲ್ಲ ಇನ್ನೂ!]

ಆದ್ದರಿಂದ ಮಳೆನೀರು ಸಂಗ್ರಹ ಸುಗಮವಾಗಿ ಆಗಬೇಕೆಂದರೆ ಬರೀ ದಂಡ ಕಟ್ಟಿಸಿಕೊಳ್ಳುವುದಲ್ಲ. ದುಡ್ಡಿನಿಂದ ನೀರು ಉತ್ಪಾದನೆ ಆಗುವುದಿಲ್ಲ! ಮನೆ ನಿರ್ಮಾಣದ ಪರವಾನಗಿ ಕೊಡುವಾಗಲೇ ಮಳೆನೀರು ಕೊಯ್ಲಿಗೆ ದುಡ್ಡು ಕಟ್ಟಿಸಿಕೊಂಡು ಅಥಾರಿಟಿಗಳೇ ಅದನ್ನು ನಿರ್ಮಿಸುವ ವ್ಯವಸ್ಥೆಯಾಗಬೇಕು; ಅಥವಾ ಮಳೆನೀರು ಕೊಯ್ಲಿನ ವ್ಯವಸ್ಥೆ ಮಾಡದಿದ್ದರೆ ಅವರಿಗೆ ನೀರು ಪೂರೈಕೆಯನ್ನು ಬಂದ್ ಮಾಡುವ ನಿಬಂಧನೆಯೊಂದಿಗೇನೇ ಪರವಾನಗಿ ಕೊಡಬೇಕು ಮತ್ತು ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು.

ಈಗಾಗಲೇ ಬಹಳ ತಡವಾಗಿದೆ. ಈ ವರ್ಷದ ಬೇಸಿಗೆಯಲ್ಲಿ ಬೆಂಗಳೂರಿನ ಅದೆಷ್ಟೋ ಸಣ್ಣದೊಡ್ಡ ಬಹುಮಹಡಿ ಕಟ್ಟಡಗಳಲ್ಲಿನ ಬೋರ್‍ವೆಲ್‍ಗಳು ಒಣಗಿಹೋಗಿ ಟ್ಯಾಂಕರ್ ನೀರಿಗಾಗಿ ಪರದಾಡುವ ದೃಷ್ಯ ಕಾಮನ್ ಆಗಿತ್ತು. ಒಂದು ವೇಳೆ ಟ್ಯಾಂಕರುಗಳಿಗೇ ನೀರು ಸಿಗದೆ ಹೋದರೆ? ಧರ್ಮಸ್ಥಳ, ಉಡುಪಿ, ಸುಬ್ರಮಣ್ಯ, ಕೊಲ್ಲೂರು ಮುಂತಾದ ಪ್ರಖ್ಯಾತ ಯಾತ್ರಾಸ್ಥಳಗಳಲ್ಲೆಲ್ಲ ನೀರಿಗಾಗಿ ಹಾಹಾಕಾರದಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರಿಗೂ ಅಧಿಕಾರಸ್ತರಿಗೂ ಎಚ್ಚರಿಕೆಯ ಗಂಟೆಯಾಗಬೇಕಿದೆ. ಮಳೆನೀರು ಸಂಗ್ರಹವನ್ನು ಗರಿಷ್ಠ ಪ್ರಮಾಣಕ್ಕೆ ಮಾಡಿರೆಂಬ ನಮ್ಮ ಜಲತಜ್ಞರ ಸಲಹೆಯನ್ನು ಎಲ್ಲರೂ ಪಾಲಿಸಿದರೆ ಮಾತ್ರ ಉಳಿಗಾಲ ಎಂದು ಅನ್ನಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...