ಗ್ರಾಮ ಪಂಚಾಯ್ತಿಗಳಲ್ಲಿ ದಲಿತರಿಗಾಗಿ ಮೀಸಲಾದ ಶೇ.25ರ SCSP TSP ಅನುದಾನದಲ್ಲಿ ಕರ್ನಾಟಕ ಸರ್ಕಾರವು ಹಲವಾರು ಶಾಲೆಗಳಲ್ಲಿನ 5 ರಿಂದ 8ನೇ ತರಗತಿವರೆಗಿನ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ವೇದಗಣಿತ ಕಲಿಸುವುದಕ್ಕೆ ದಲಿತ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ದಲಿತರಿಗಾಗಿ ಮೀಸಲಾದ ಹಣದ ದುರ್ಬಳಕೆ ಮಾಡುವ ಈ ಅವೈಜ್ಞಾನಿಕ ಕ್ರಮವನ್ನು ಕೂಡಲೇ ತಡೆಹಿಡಿಯಬೇಕು ಎಂದು ಒತ್ತಾಯಿಸಿ ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಸಮಾಜಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಿಗೆ ಹಾಗು ಪಂಚಾಯತ್ ರಾಜ್ ಇಲಾಖೆಯ ಅಪರ ಕಾರ್ಯದರ್ಶಿಗಳಿಗೆ ಹಕ್ಕೊತ್ತಾಯ ಸಲ್ಲಿಸಲಾಗಿದೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಹೋರಾಟಗಾರರು ಮತ್ತು ವಕೀಲರಾದ ಹ.ರಾ ಮಹೇಶ್ರವರು, “ಈ ಯೋಜನೆ ನಮ್ಮ ಗಮನಕ್ಕೆ ಬಾರದೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅದನ್ನು ನಂಬಲು ನಾವು ಸಿದ್ದರಿಲ್ಲ. ಆದರೂ ಸರ್ಕಾರ ಈ ಕೂಡಲೇ ಮತ್ತೊಂದು ಆದೇಶ ಹೊರಡಿಸಿ ಈ ಯೋಜನೆಯನ್ನು ಹಿಂಪಡೆಯಬೇಕು. ಈ ತಪ್ಪು ಎಸಗಿದ ಅಧಿಕಾರಿಗಳ ಮೇಲೆ ಯಾವ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಬೇಕು. ದಲಿತರಿಗಾಗಿ ಮೀಸಲಾದ ಹಣದಲ್ಲಿ ಎಲ್ಲಾ ವರ್ಗದ ಮಕ್ಕಳಿಗೆ ಸಂವಿಧಾನ ಜಾಗೃತಿ ಮೂಡಿಸಲು ಬಳಸಬೇಕು ಎಂದು ಒತ್ತಾಯಿಸಿದ್ದೇವೆ” ಎಂದರು.
SCSP TSP ಹಣವನ್ನು ದಲಿತೇತರ ಸಂಸ್ಥೆಗಳಿಗೆ ನೀಡುವುದು ಕಾಯ್ದೆ ಪ್ರಕಾರ ಅಪರಾಧವಾಗಿದೆ ಎಂಬುದನ್ನು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಕಾರ್ಯದರ್ಶಿಗಳಾದ ಎಲ್.ಕೆ ಅತೀಕ್ರವರು ಆಗಿರುವ ಪ್ರಮಾದವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಮತ್ತೊಂದು ತಿದ್ದೋಲೆಯನ್ನು ಕಳಿಸುತ್ತೇವೆ. ತಪ್ಪಿತಸ್ಥರಿಗೆ ಕ್ರಮವನ್ನೂ ಕೈಗೊಳ್ಳುತ್ತೇವೆ ಎಂದು ತಿಳಿಸಿದರು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ಮಣಿವಣ್ಣನ್ರವರ ಜೊತೆ ದೂರವಾಣಿ ಮೂಲಕ ಮಾತನಾಡಿ ನಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದ್ದೇವೆ. ಅವರು ಸೋಮವಾರ ಸಂಜೆ ಈ ಕುರಿತು ಸಭೆ ಕರೆದಿದ್ದಾರೆ. ಒಟ್ಟಿನಲ್ಲಿ ದಲಿತರ ಹಣ ದುರ್ಬಳಕೆಯಾಗುತ್ತಿರುವುದು ಮತ್ತು ದಲಿತ ಮಕ್ಕಳಿಗೆ ಅವೈಜ್ಞಾನಿಕ ವೇದ ಗಣಿತ ಕಲಿಸಿ ದಿಕ್ಕುತಪ್ಪಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಈ ಕುರಿತು ಹೋರಾಟ ಮುಂದುವರೆಯುತ್ತದೆ ಎಂದು ಹ.ರಾ ಮಹೇಶ್ ಹೇಳಿದರು.
ಏನಿದು ವಿವಾದ?
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಜನವರಿ 06, 2022ರಂದು ಪತ್ರ ಬರೆದಿದ್ದರು. ಅದರಲ್ಲಿ “ಗ್ರಾಮ ಪಂಚಾಯ್ತಿಗಳಲ್ಲಿ ದಲಿತರಿಗಾಗಿ ಮೀಸಲಾದ ಶೇ.25ರ SCSP TSP ಅನುದಾನವನ್ನು 5 ರಿಂದ 8ನೇ ತರಗತಿವರೆಗಿನ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ವೇದಗಣಿತ ಕಲಿಸುವ ಯೋಜನೆಗಾಗಿ ಬಳಸಿಕೊಳ್ಳಬಹುದು” ಎಂದು ಸೂಚಿಸಲಾಗಿತ್ತು. ಅದರಂತೆ ಈ ತರಬೇತಿ ನೀಡುವ ಟೆಂಡರ್ ಅನ್ನು ಹಿರಿಯೂರಿನ ಎವಿಎಂ ಎಂಬ ಸಂಸ್ಥೆಗೆ ನೀಡಲಾಗಿದೆ. ಅದಕ್ಕಾಗಿ ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿಗಳು ಒಂದು ಲಕ್ಷ ರೂಗಳನ್ನು ಈ ಸಂಸ್ಥೆಗೆ ಚೆಕ್ ಮೂಲಕ ನೀಡಬೇಕು ಸೂಚಿಸಲಾಗಿದೆ.
ಈ ಎವಿಎಂ ಸಂಸ್ಥೆಯು ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ಈ ತರಬೇತಿಯನ್ನು ಜಾರಿಗೊಳಿಸಲು ಮಧ್ಯವರ್ತಿಗಳಿಗೆ ಸಬ್ ಟೆಂಡರ್ ನೀಡುತ್ತಿದೆ. ಈ ಮಧ್ಯವರ್ತಿಗಳು ಪ್ರತಿ ತಾಲ್ಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿಗಳ ಜೊತೆ ಸಮನ್ವಯ ಸಾಧಿಸಿ ಈ ತರಬೇತಿ ಯೋಜನೆ ಜಾರಿಯಾಗುವಂತೆ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ. ಅಂದರೆ ಪ್ರತಿ ಗ್ರಾಮ ಪಂಚಾಯ್ತಿಗಳು ಎವಿಎಂ ಹೆಸರಿಗೆ ಒಂದು ಲಕ್ಷ ರೂಗಳ ಚೆಕ್ ಹಾಕುವಂತೆ ಆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳ ಪಿಡಿಓಗಳನ್ನು ಮನವೊಲಿಸುವುದು, ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವುದು, ತರಬೇತಿಯ ವರದಿಗಳನ್ನು ಸಲ್ಲಿಸುವ ಕೆಲಸ ಅವರದಾಗಿದೆ. ಅದಕ್ಕೆ ಪ್ರತಿಯಾಗಿ ಮಧ್ಯವರ್ತಿಗಳು ಎವಿಎಂ ಅಕಾಡೆಮಿಯಿಂದ ಇಂತಿಷ್ಟು ಹಣ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ವೇದಗಣಿತ ಎಂಬುದೇ ಇಲ್ಲ: ಈ ಕುರಿತು ತಜ್ಞರು ಹೇಳುವುದೇನು?
ಮಕ್ಕಳಿಗೆ ವೇದ ಗಣಿತ ಹೇಳಿಕೊಡಲು ಸರ್ಕಾರಿ ಶಾಲೆಗಳ ಗಣಿತ ಶಿಕ್ಷಕರನ್ನೇ ಬಳಸಿಕೊಳ್ಳಲಾಗುತ್ತಿದೆ. ತಾಲ್ಲೂಕು ಮಟ್ಟದಲ್ಲಿ ಗಣಿತ ಶಿಕ್ಷಕರನ್ನು ಸೇರಿಸಿ ಅವರಿಗೆ ವೇದ ಗಣಿತದ ತರಬೇತಿ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ಆ ಶಿಕ್ಷಕರು ಪ್ರತಿ ಶನಿವಾರ ಮತ್ತು ಭಾನುವಾರ ಶಾಲೆ ಮುಗಿದ ನಂತರ ಎರಡು ಗಂಟೆಗಳ ಕಾಲ 16 ವಾರ ದಲಿತ ಮಕ್ಕಳಿಗೆ ವೇದಗಣಿತ ಪಾಠ ಮಾಡುತ್ತಾರೆ. ತರಬೇತಿಗೆ ಒಳಪಡುವ ಪ್ರತಿ ವಿದ್ಯಾರ್ಥಿಗೂ ಒಂದು ಟೀಶರ್ಟ್, ಕಲಿಕಾ ನೋಟ್ಸ್ಗಳನ್ನು ಒದಗಿಸಲಾಗುತ್ತದೆ. ಆ ಶಿಕ್ಷಕರಿಗೆ ಸರ್ಕಾರಿ ಸಂಬಳದ ಜೊತೆಗೆ ತಲಾ 5,000 ರೂಗಳ ಟಿಎ ಮತ್ತು ಡಿಎ ನೀಡಲಾಗುತ್ತಿದೆ.
ರಾಜ್ಯದಲ್ಲಿ ಒಟ್ಟು 6,068 ಗ್ರಾಮ ಪಂಚಾಯ್ತಿಗಳಿದ್ದು ಸುಮಾರು 60 ಕೋಟಿ ರೂಗಳಷ್ಟು ದಲಿತರಿಗಾಗಿ ಮೀಸಲಿಟ್ಟಿದ್ದ SCSP TSP ಅನುದಾನವನ್ನು ಈ ವೇದಗಣಿತ ಕಲಿಕೆಗೆ ಬಳಸಿಕೊಳ್ಳುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಗ್ರಾಮೀಣಾಭಿವೃದ್ದಿ ಇಲಾಖೆಯು ಶಿಕ್ಷಣ ಇಲಾಖೆಯಲ್ಲಿ ತಲೆ ಹಾಕುತ್ತಿರುವುದೇಕೆ ಎಂಬ ಪ್ರಶ್ನೆ ಎದ್ದಿದೆ. ಒಂದಷ್ಟು ಪುಸ್ತಕ, ಒಂದು ಟೀ ಶರ್ಟ್ ನೀಡುವುದಕ್ಕೆ 60 ಕೋಟಿ ರೂ ಹಣ ಖರ್ಚಾಗುವುದಿಲ್ಲ. ಹಣ ಲೂಟಿ ಹೊಡೆಯಲೆಂದೇ ಈ ಯೋಜನೆ ಸೃಷ್ಟಿಸಲಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಇನ್ನೊಂದೆಡೆ ಈಗಾಗಲೇ ಶಾಲೆಗಳಲ್ಲಿ ಗಣಿತ ಕಲಿಸುತ್ತಿರುವಾಗ ವೈಜ್ಞಾನಿಕವಲ್ಲದ, ಗೊಂದಲ ಮೂಡಿಸುವ ಈ ವೇದ ಗಣಿತ ತರಬೇತಿ ಬೇಡ ಎಂದು ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲೆಗಳ ಮಕ್ಕಳ ಮೇಲೆ ಪ್ರಯೋಗ ಸಲ್ಲದು -ಡಾ.ವಿ.ಪಿ ನಿರಂಜನಾರಾಧ್ಯ
ನಮ್ಮ ಮಕ್ಕಳು ಒಂದು ವಿಧಾನದಲ್ಲಿ ಗಣಿತ ಕಲಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಮೇಲೆ ಮಾಟ, ಮಂತ್ರ, ಮ್ಯಾಜಿಕ್ನಂತಹ ಪಾಠಗಳನ್ನು ಹೇರುವುದು ಏಕೆ? ಇದರಿಂದ ಮಕ್ಕಳಿಗೆ ಬಹಳ ಗೊಂದಲವಾಗುತ್ತದೆ. ಆ ಗಣಿತ ಕಲಿಯಬೇಕಾ, ಈ ಗಣಿತ ಕಲಿಯಬೇಕಾ ಎಂದು ತಳಮಳಗೊಳ್ಳುತ್ತಾರೆ. ಈ ವೇದಗಣಿತ ಕಲಿಸುವ ಪ್ರಯೋಗಕ್ಕೆ ನಮ್ಮ ಸರ್ಕಾರಿ ಶಾಲಾ ಮಕ್ಕಳನ್ನೆ ಏಕೆ ಬಲಿಪಶು ಮಾಡಲಾಗುತ್ತಿದೆ? ಈ ವೇದಗಣಿತದಿಂದ ಯಾವುದೇ ಪ್ರಯೋಜನವಾಗುವುದಿಲ್ಲವೆಂದು ಈ ಹಿಂದೆಯೇ ಹಲವಾರು ಗಣಿತಜ್ಞರು ವಾದಿಸಿದ್ದಾರೆ. ಅದು ವೈಜ್ಞಾನಿಕವೂ ಅಲ್ಲ, ಆಧುನಿಕ ಶಿಕ್ಷಣಕ್ಕೆ ಹೊಂದಿಕೊಳ್ಳುವುದು ಇಲ್ಲ ಎಂದು ಶಿಕ್ಷಣ ತಜ್ಞ ಡಾ.ವಿ.ಪಿ ನಿರಂಜನಾರಾಧ್ಯರವರು ಅಭಿಪ್ರಾಯಪಟ್ಟಿದ್ದಾರೆ.
ವೇದಗಣಿತದಿಂದ ಮಕ್ಕಳು ನಿಜವಾದ ಗಣಿತ ಕಲಿಯದಿರುವ ಅಪಾಯವಿದೆ – ಎಸ್.ಬಾಲಚಂದ್ರ ರಾವ್
ಬೆಂಗಳೂರಿನ ಭಾರತೀಯ ವಿದ್ಯಾಭವನದ ಗಾಂಧಿ ಸೆಂಟರ್ ಅಫ್ ಸೈನ್ಸ್ ಅಂಡ್ ಹ್ಯೂಮನ್ ವ್ಯಾಲ್ಯೂಸ್ ವಿಭಾಗದ ಗೌರವ ನಿರ್ದೇಶಕರೂ ಹಾಗೂ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್.ಬಾಲಚಂದ್ರ ರಾವ್ ರವರು ಈ ವೇದಗಣಿತ ಕಲಿಕೆಯಿಂದ ಮಕ್ಕಳಿ ನಿಜವಾದ ಗಣಿತ ಕಲಿಯದಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. “ವೇದಗಣಿತ ಕಲಿಕೆಯಿಂದ ಏನೂ ಉಪಯೋಗವಿಲ್ಲ. ಅದರಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ವಿದ್ಯಾರ್ಥಿಗಳಿಗೆ ಶಾರ್ಟ್ಕಟ್ ವಿಧಾನದಲ್ಲಿ ಗುಣಾಕಾರ ಮತ್ತು ಭಾಗಕಾರವನ್ನು ಹೇಳಿಕೊಡಲಾಗುತ್ತದೆ. ಆದರೆ ಅದರಿಂದ ಗಣಿತಕ್ಕೆ ಬೇಕಾದ ತಾರ್ಕಿಕ ಚಿಂತನೆಗಳು ಅಭಿವೃದ್ಧಿಯಾಗುವುದಿಲ್ಲ. ಈ ವೇದಗಣಿತ ಕಲಿಕೆಯಿಂದ ಗಣಿತದ ಬಗ್ಗೆ ತಪ್ಪು ಅಭಿಪ್ರಾಯ ಬರುತ್ತದೆ. ಗಣಿತ ಎಂದರೆ ಕೇವಲ ಮ್ಯಾಜಿಕ್ ಎಂದು ವಿದ್ಯಾರ್ಥಿಗಳು ಭಾವಿಸುವ ಅಪಾಯವಿದೆ. ಅಲ್ಲದೆ ವೇದಗಣಿತದ ಬಗ್ಗೆ ಯಾವ ವೇದಗಳಲ್ಲಿಯೂ ಹೇಳಿಲ್ಲ. ಹಿಂದಿನ ಶತಮಾನದ ಕೆಲ ಸ್ವಾಮಿಗಳು ಮಾಡಿರುವ ಸೂತ್ರಗಳು ಇವು. ಅವು ವೇದಿಕ್ ಅಲ್ಲ ಮತ್ತು ಮ್ಯಾಥಮ್ಯಾಟಿಕ್ಸ್ ಕೂಡ ಅಲ್ಲ. ಅವುಗಳಿಗೆ ವೇದಿಕ್ ಎಂದು ಹೆಸರು ಕೊಟ್ಟು ಮಕ್ಕಳಿಗೆ ಅನ್ಯಾಯ ಮಾಡಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ವೇದಗಣಿತ ತರಬೇತಿಗೆ ತಲಾ ಒಂದು ಲಕ್ಷ ನೀಡುತ್ತಿರುವ ಗ್ರಾಮ ಪಂಚಾಯ್ತಿಗಳು: ದಲಿತರಿಗಾಗಿ ಮೀಸಲಾದ SCSP TSP ಹಣ ದುರ್ಬಳಕೆ


