Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಾಲೂರು: ಮೂರು ಪಕ್ಷಗಳ ಸಮಬಲದ ಸ್ಪರ್ಧೆ ಸಾಧ್ಯತೆ; ಬಿಜೆಪಿಯಲ್ಲಿ ಟಿಕೆಟ್‌ಗಾಗಿ...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಾಲೂರು: ಮೂರು ಪಕ್ಷಗಳ ಸಮಬಲದ ಸ್ಪರ್ಧೆ ಸಾಧ್ಯತೆ; ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ

- Advertisement -
- Advertisement -

ಬೆಂಗಳೂರಿನ ಪಕ್ಕದಲ್ಲಿರುವ ಕೋಲಾರ ಜಿಲ್ಲೆಗೆ ಸೇರಿರುವ ಮಾಲೂರು ವಿಧಾನಸಭಾ ಕ್ಷೇತ್ರ ಶಿಲ್ಪಕಲಾ ಕೆತ್ತನೆಗೆ ಹೆಸರುವಾಸಿ. ಯಾವುದೇ ದೇವಸ್ಥಾನಕ್ಕೆ ಬೇಕಾದ ದೇವರ ವಿಗ್ರಹ ಸೇರಿದಂತೆ ಇತರ ಕೆತ್ತನೆಗಳಿಗೆ ಮಾಲೂರಿನ ಶಿವಾರಪಟ್ಟಣದ ಮೊರೆಹೋಗಲಾಗುತ್ತದೆ. ಆದರೆ ಈಗ ತಾಲ್ಲೂಕಿನಲ್ಲಿ ಆ ಕೆಲಸಕ್ಕಿಂತಲೂ ರಿಯಲ್ ಎಸ್ಟೇಟ್ ಮತ್ತು ಕೈಗಾರಿಕೆಗಳ ಸದ್ದು ಜೋರಾಗಿ ಕೇಳಿಬರುತ್ತಿದೆ. ಬ್ರಿಕ್ಸ್, ಇಟ್ಟಿಗೆ ಫ್ಯಾಕ್ಟರಿಗಳು ಸಾಕಷ್ಟು ತಲೆಯೆತ್ತಿವೆ. ಅದರೊಟ್ಟಿಗೆ ಎಲ್ಲೆಂದರಲ್ಲಿ ಜಲ್ಲಿ ಕ್ರಷರ್‌ಗಳು ಕೊರೆಯುತ್ತಿದ್ದು ಅಕ್ರಮ ಗಣಿಗಾರಿಕೆಯ ಆರೋಪಗಳು ಕೇಳಿಬರುತ್ತಿವೆ. ಇಂತಹ ಮಾಲೂರಿನಲ್ಲಿ 2023ರ ವಿಧಾನಸಭಾ ಚುನಾವಣೆಗೆ ಮೂರು ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ.

ರಾಜಕೀಯ ಇತಿಹಾಸ

ಮಾಲೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿತ್ತು ಅಂತಲೇ ಹೇಳಬಹುದು. 14 ವಿಧಾನಸಭಾ ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್ ಜಯಗಳಿಸಿದೆ. ಜನತಾಪಕ್ಷ, ಜನತಾದಳ, ಜೆಡಿಎಸ್ ತಲಾ ಒಂದೊಂದು ಬಾರಿ ಗೆಲುವು ಸಾಧಿಸಿದರೆ ಬಿಜೆಪಿ ಎರಡು ಬಾರಿ ಜಯಭೇರಿ ಬಾರಿಸಿದೆ. ಒಮ್ಮೆ ಸ್ವತಂತ್ರ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ವಿಶೇಷ ಎಂದರೆ ಆರು ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ರನ್ನರ್ ಅಪ್ ಆಗಿದ್ದಾರೆ.

1957ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ ಲಿಂಗಾರೆಡ್ಡಿಯವರು ಗೆಲುವು ಸಾಧಿಸಿದ್ದರು. ಆದರೆ 1962ರಲ್ಲಿ ಅವರು ಸ್ವತಂತ್ರ ಅಭ್ಯರ್ಥಿ ಎಸ್.ವಿ ರಾಮೇಗೌಡರವರ ಎದುರು ಮಣಿದರು. 1967ರ ಚುನಾವಣೆ ವೇಳೆಗೆ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ ಲಿಂಗಾರೆಡ್ಡಿಯವರು ಸ್ವತಂತ್ರ ಅಭ್ಯರ್ಥಿ ಎಂ.ಆರ್ ರಾಮಣ್ಣನವರ ಎದುರು ಆಯ್ಕೆಯಾಗಿ ಎರಡನೇ ಬಾರಿಗೆ ಶಾಸಕರಾಗಿದ್ದರು. 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎ.ವಿ ಮುನಿಸ್ವಾಮಿಯವರಿಗೆ ಟಿಕೆಟ್ ನೀಡಿತು. ಇದರಿಂದ ಅಸಮಾಧಾನಗೊಂಡ ಹೆಚ್.ಸಿ ಲಿಂಗಾರೆಡ್ಡಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಎ.ವಿ ಮುನಿಸ್ವಾಮಿಯವರನ್ನು ಸೋಲಿಸಲು ಸಾಧ್ಯವಾಗಲಿಲ್ಲ.

1978ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದ ಪಿ.ಎನ್ ರೆಡ್ಡಿಯವರು ಜನತಾಪಕ್ಷದ ಲಕ್ಷ್ಮಿದೇವಿ ರಾಮಣ್ಣನವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಆನಂತರದ 5 ಚುನಾವಣೆಗಳು ಎ.ನಾಗರಾಜು ಮತ್ತು ದ್ಯಾವರಪ್ಪನವರ ನಡುವಿನ ಹಣಾಹಣಿಗೆ ಸಾಕ್ಷಿಯಾಯಿತು. ಒಮ್ಮೆ ಅವರು, ಒಮ್ಮೆ ಇವರು ಎಂಬಂತೆ ಶಾಸಕರಾಗಿ ಆಯ್ಕೆಯಾಗಿದ್ದರು. 1983ರಲ್ಲಿ ಕಾಂಗ್ರೆಸ್ ಪಕ್ಷದ ಎ.ನಾಗರಾಜುರವರು ಸ್ವತಂತ್ರ ಅಭ್ಯರ್ಥಿ ದ್ಯಾವರಪ್ಪರನ್ನು ಮಣಿಸಿ ಗೆಲುವು ಸಾಧಿಸಿದರು. ಆದರೆ ಎರಡು ವರ್ಷಗಳಲ್ಲಿ ನಡೆದ 1985ರ ಚುನಾವಣೆಯಲ್ಲಿ ದ್ಯಾವರಪ್ಪನವರು ಜನತಾದಳ ಪಕ್ಷದಿಂದ ಕಣಕ್ಕಿಳಿದು ಕಾಂಗ್ರೆಸ್‌ನ ಎ.ನಾಗರಾಜು ಎದುರು ಜಯಕಂಡರು. 1989ರಲ್ಲಿ ಎ.ನಾಗರಾಜು ಗೆಲುವು ಕಂಡರೆ 1994ರಲ್ಲಿ ದ್ಯಾವರಪ್ಪನವರು ಜಯ ಸಾಧಿಸಿದರು. 1999ರಲ್ಲಿ ಮತ್ತೆ ಎ.ನಾಗರಾಜು ಗೆಲುವು ಸಾಧಿಸಿ ಮೂರನೇ ಬಾರಿಗೆ ಶಾಸಕರೆನಿಸಿಕೊಂಡರು.

ಎಸ್.ಎನ್.ಕೃಷ್ಣಯ್ಯ ಶೆಟ್ಟಿ

2004 ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಿತು. ಎಸ್.ಎನ್.ಕೃಷ್ಣಯ್ಯ ಶೆಟ್ಟಿಯವರು ಕಾಂಗ್ರೆಸ್ ಪಕ್ಷದ ಎ.ನಾಗರಾಜುರವರನ್ನು 26,856 ಮತಗಳ ಅಂತರದಿಂದ ಮಣಿಸಿ ಶಾಸಕರಾದರು. ಅಲ್ಲದೆ 2008ರ ಚುನಾವಣೆಯಲ್ಲಿಯೂ ಜೆಡಿಎಸ್ ಪಕ್ಷದ ಆರ್ ಪ್ರಭಾಕರ್ ಎದುರು 52,401 ಮತಗಳ ಭಾರೀ ಅಂತರದಿಂದ ವಿಜಯಪತಾಕೆ ಹಾರಿಸಿ ಮಾಲೂರು ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಅವರು ಶಾಸಕರಾದರು. ಮುಜರಾಯಿ ಇಲಾಖೆ ಸಚಿವರೂ ಆಗಿದ್ದ ಅವರು ಕೆ.ಆರ್ ಪುರಂ ಬಳಿಯ ರಾಚೇನಹಳ್ಳಿಯಲ್ಲಿ ಬಿಡಿಎ ವಶಪಡಿಸಿಕೊಂಡ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪದ ಮೇಲೆ ಯಡಿಯೂರಪ್ಪನವರೊಂದಿಗೆ ಜೈಲು ವಾಸ ಅನುಭವಿಸಿದ್ದರು. ಅಲ್ಲದೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಸಾಲ ಪಡೆದ ಆರೋಪವನ್ನು ಸಹ ಎದುರಿಸಿದ್ದರು.

ಜೈಲಿನಿಂದ ಹೊರಬಂದಾಗ ಕೃಷ್ಣಯ್ಯ ಶೆಟ್ಟಿಯವರಿಗೆ 2013ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಲು ಸತಾಯಿಸಿತ್ತು. ಅಂತಿಮ ಕ್ಷಣದಲ್ಲಿ ಬಿ ಫಾರಂ ನೀಡಿದರೂ ಅದನ್ನು ಹರಿದು ಬಿಸಾಕಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ಎಲ್ಲಾ ಎಡವಟ್ಟಿನಿಂದಾಗಿ ಅವರಿಗೆ ಹ್ಯಾಟ್ರಿಕ್ ಗೆಲುವು ಸಾಧ್ಯವಾಗಲಿಲ್ಲ. ಆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕೆ.ಎಸ್ ಮಂಜುನಾಥ್ ಗೌಡ ಜಯಕಂಡರು. ಇತ್ತೀಚಿನ 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕೆ.ಎಸ್ ಮಂಜುನಾಥ್‌ಗೌಡರರಿಗೆ ಟಿಕೆಟ್ ನೀಡಿತು. ಕೃಷ್ಣಯ್ಯಶೆಟ್ಟಿಯವರು ಕಾಂಗ್ರೆಸ್ ಪಡಸಾಲೆಗೆ ಹೋಗಿ, ನಂತರ ಬಿಜೆಪಿಗೆ ವಾಪಸಾಗಿ ಟಿಕೆಟ್ ಗಿಟ್ಟಿಸಿಕೊಂಡರು. ಕಾಂಗ್ರೆಸ್ ಪಕ್ಷವು ಕೆ.ವೈ ನಂಜೇಗೌಡರಿಗೆ ಟಿಕೆಟ್ ನೀಡಿತು. ಮೂರು ಪಕ್ಷಗಳ ನಡುವಿನ ಹಣಾಹಣಿಯಲ್ಲಿ ಕಾಂಗ್ರೆಸ್‌ನ ಕೆ.ವೈ ನಂಜೇಗೌಡರವರು ಸುಲಭ ಜಯ ಸಾಧಿಸಿದರು.

ಜಾತಿವಾರು ಅಂದಾಜು ಮತಗಳು

ಮಾಲೂರು ಕ್ಷೇತ್ರದಲ್ಲಿ ಎಸ್‌ಸಿ-ಎಸ್‌ಟಿ ಮತಗಳು ಅಧಿಕವಾಗಿದ್ದು 65,000ದಷ್ಟಿವೆ. ಒಕ್ಕಲಿಗ ಸಮುದಾಯದ್ದು ಕೂಡ 60,000ದಷ್ಟಿವೆ. ಇತರೆ ಹಿಂದುಳಿದ ವರ್ಗದವರ 50,000 ಮತಗಳಿದ್ದರೆ, ಮುಸ್ಲಿಮರು 15,000ಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.

ಸದ್ಯದ ಪರಿಸ್ಥಿತಿ

ಕಾಂಗ್ರೆಸ್: ಕೆ.ವೈ ನಂಜೇಗೌಡರು ಜನರ ಕೈಗೆ ಸಿಗುತ್ತಾರೆ ಎಂಬ ಮಾತಿದೆ. ಮಾಲೂರು ಟೌನ್ ಅಭಿವೃದ್ಧಿಗೆ ಅನುದಾನ ತಂದಿದ್ದಾರೆ. ಕೋಲಾರ-ಮಾಲೂರು ರಾಜ್ಯ ಹೆದ್ದಾರಿ ಡಾಂಬರೀಕರಣ ಮತ್ತು ತಮಿಳುನಾಡಿನ ಹೊಸೂರಿಗೆ 4 ಪಥಗಳ ರಸ್ತೆ ರಿಪೇರಿ ಮಾಡಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆ ಜಾರಿಯಾಗುತ್ತಿದೆ, ಕೆ.ಸಿ ವ್ಯಾಲಿ ನೀರು ತಂದಿದ್ದರಿಂದ ಒಳ್ಳೆಯ ಅಭಿಪ್ರಾಯವಿದೆ.

ಹಾಲಿ ಶಾಸಕ ಕೆ.ವೈ ನಂಜೇಗೌಡ

ಆದರೆ ಅಂಬೇಡ್ಕರ್ ಭವನ ಉದ್ಘಾಟನೆಯಾಗಿಲ್ಲ, ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಸಾಧ್ಯವಾಗಿಲ್ಲ, ಹಳ್ಳಿಗಳ ರಸ್ತೆಗಳು ಸಮರ್ಪಕವಾಗಿಲ್ಲ, ನಿರೀಕ್ಷಿಸಿದ ಅಭಿವೃದ್ದಿ ಕಂಡಿಲ್ಲ ಎಂಬ ಟೀಕೆಗಳ ಸಹ ಅವರ ಮೇಲಿದೆ.

ಇದೆಲ್ಲದರ ಹೊರತಾಗಿಯೂ ಶಾಸಕರು ಎಲ್ಲಾ ಕಡೆ ಓಡಾಡುತ್ತಿದ್ದಾರೆ, ದಲಿತರು ಮತ್ತು ಮುಸ್ಲಿಮರೊಟ್ಟಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂಬಿತ್ಯಾದಿ ಕಾರಣಗಳಿಂದ ಮತ್ತೊಂದು ಅವಧಿಗೆ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡುವ ಯೋಚನೆಯಲ್ಲಿದೆ.

ಜೆಡಿಎಸ್: ಮಾಜಿ ಶಾಸಕ ಮಂಜುನಾಥ್ ಗೌಡರವರು 2019ರಿಂದಲೇ ಜೆಡಿಎಸ್ ಪಕ್ಷದೊಂದಿಗೆ ಮುನಿಸು ಹೊಂದಿದ್ದರು. ಆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿಯವರ ಪರ ಕೆಲಸ ಮಾಡಿದರು. ಕೊನೆಗೆ ಯಾವಾಗ ಪಕ್ಷ ತೊರೆದು ಬಿಜೆಪಿ ಸೇರಿದರೋ ಆಗ ಜೆಡಿಎಸ್ ಪಕ್ಷವು ಜಿ.ಇ ರಾಮೇಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರಿಗೆ ಟಿಕೆಟ್ ಘೋಷಿಸಿದೆ. ಸ್ಥಳೀಯರಾದ ರಾಮೇಗೌಡರು ಈ ಮುಂಚೆ ಬಿಜೆಪಿಯಲ್ಲಿದ್ದರು. ಮಾಸ್ತಿಯ ಜಿ.ಪಂ ಸದಸ್ಯರಾಗಿದ್ದರು. 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆನಂತರ ಕಾಂಗ್ರೆಸ್ ಸೇರಿದ್ದ ಅವರು ಸದ್ಯ ಜೆಡಿಎಸ್‌ನಲ್ಲಿದ್ದಾರೆ. ಅವರೆ ಅಭ್ಯರ್ಥಿ ಎಂದು ಹೆಚ್.ಡಿ ಕುಮಾರಸ್ವಾಮಿಯವರು ಈಗಾಗಲೇ ಘೋಷಿಸಿದ್ದಾರೆ. ರಾಮೇಗೌಡರು ಸಮಾಜಸೇವೆ, ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆಯಂತಹ ಕೆಲಸಗಳನ್ನು ಮಾಡುತ್ತಾ ಯುವಜನರನ್ನು ಸೆಳೆಯುವತ್ತ ಗಮನ ಹರಿಸಿದ್ದಾರೆ.

ಜಿ.ಇ ರಾಮೇಗೌಡ

ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ

ಮಾಲೂರಿನಲ್ಲಿ ಟಿಕೆಟ್‌ಗಾಗಿ ಪ್ರಬಲ ಸ್ಪರ್ಧೆಯಿರುವ ಪಕ್ಷವೆಂದರೆ ಅದು ಬಿಜೆಪಿ. ಬಿಜೆಪಿಯಿಂದ ಎರಡು ಭಾರಿ ಶಾಸಕರಾಗಿದ್ದ ಕೃಷ್ಣಯ್ಯಶೆಟ್ಟಿಯವರು ಮಾಲೂರಿನಲ್ಲಿ ಸ್ಪರ್ಧಿಸುವ ಇಚ್ಛೆ ಕೈಬಿಟ್ಟು ಬೆಂಗಳೂರಿನ ಗಾಂಧಿನಗರ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಜೆಡಿಎಸ್‌ನಲ್ಲಿದ್ದ ಮಾಜಿ ಶಾಸಕರಾದ ಕೆ.ಎಸ್ ಮಂಜುನಾಥ್ ಗೌಡರು ಬಿಜೆಪಿ ಸೇರಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮ ಅಭಿಮಾನಿಗಳು, ಅನುಯಾಯಿಗಳನ್ನು ಕಟ್ಟಿಕೊಂಡು ಕಳೆದ ಒಂದು ವರ್ಷದಿಂದ ಬಿಜೆಪಿ ಸಂಘಟನೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಕೆ.ಎಸ್ ಮಂಜುನಾಥ್ ಗೌಡ

ಕೋಡಿಹಳ್ಳಿ ಮಂಜುನಾಥ್‌ಗೌಡರು ಬಿಜೆಪಿ ಸೇರುವುದಕ್ಕೆ ಬಿಜೆಪಿ ಮುಖಂಡರಾದ ಪ್ರಭಾಕರ್, ವೆಂಕಟೇಶ್ ಸೇರಿ ಒಂದಷ್ಟು ಮೂಲ ಬಿಜೆಪಿಗರು ವಿರೋಧ ಮಾಡಿದ್ದುಂಟು.

ಹೂಡಿ ವಿಜಯ್ ಕುಮಾರ್‌

ಬಿಜೆಪಿಯ ಯುವ ಮುಖಂಡರಾದ, ಮಾಜಿ ಬಿಬಿಎಂಪಿ ಸದಸ್ಯರಾದ ಹೂಡಿ ವಿಜಯ್ ಕುಮಾರ್‌ರವರು ಸಹ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪಕ್ಷ ಕಟ್ಟುತ್ತಿರುವ ಮೂಲ ಬಿಜೆಪಿಗರಾದ ತಮಗೆ ಟಿಕೆಟ್ ನೀಡಬೇಕೆಂಬುದು ಅವರ ಒತ್ತಾಯ. ಹಾಗಾಗಿ ಟಿಕೆಟ್‌ಗಾಗಿ ಮಂಜುನಾಥ್‌ಗೌಡ ಬಣ ಮತ್ತು ಹೂಡಿ ವಿಜಯ್ ಕುಮಾರ್ ಬಣದ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಮಂಜುನಾಥ್ ಗೌಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ವಿಜಯ್ ಕುಮಾರ್‌ರವರು, ಅಂದೇ ಆಯುಷ್ಮಾನ್ ಭಾರತ್ ಕಾರ್ಡುಗಳ ವಿತರಣೆ ಕಾರ್ಯಕ್ರಮ ಏರ್ಪಡಿಸಿ ಸಚಿವರುಗಳಾದ ಶೋಭಾ ಕರಂದ್ಲಾಜೆ, ಎಂಟಿಬಿ ನಾಗರಾಜ್, ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಕರೆಸಿದ್ದರು.

ಕ್ಷೇತ್ರದ ಸಮಸ್ಯೆಗಳು

ಸಮರ್ಪಕ ಕುಡಿಯುವ ನೀರು ದಕ್ಕಿಲ್ಲ. ರಸ್ತೆಗಳು ವ್ಯವಸ್ಥಿತವಾಗಿಲ್ಲ. ಸರ್ಕಾರಿ ಶಾಲಾ ಕಾಲೇಜುಗಳು ಅಭಿವೃದ್ದಿಯಾಗಿಲ್ಲ. ಬಹಳಷ್ಟು ಜನರಿಗೆ ಇನ್ನೂ ಹಕ್ಕುಪತ್ರಗಳು ಸಿಕ್ಕಿಲ್ಲ. ಜಲ್ಲಿ ಕ್ರಶರ್‌ಗಳು ನಿರಂತರ ತಲೆಯೆತ್ತುತ್ತಿದ್ದು ಅವುಗಳಿಂದ ಹೊಮ್ಮುವ ಭಾರಿ ಧೂಳು ಹಾನಿಕಾರಕವಾಗಿದೆ. ಮಾರ್ಕಂಡಯ್ಯ ಡ್ಯಾಮ್ ಸುತ್ತಮುತ್ತಲೇ ಕ್ರಶರ್‌ಗಳ ಕೆಲಸ ನಡೆಯುತ್ತಿದ್ದು ಡ್ಯಾಮ್‌ಗೆ ಅಪಾಯ ಕಾದಿದೆ ಎಂಬ ದೂರುಗಳಿವೆ.

2023ರ ಚುನಾವಣೆ

ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೆ.ವೈ ನಂಜೇಗೌಡರವರಿಗೆ ಟಿಕೆಟ್ ದೊರಕುವ ಸಾಧ್ಯತೆಗಳಿವೆ. ಜೆಡಿಎಸ್ ರಾಮೇಗೌಡರಿಗೆ ಟಿಕೆಟ್ ಘೋಷಿಸಿದೆ. ಇನ್ನು ಬಿಜೆಪಿಯಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕೆ.ಎಸ್ ಮಂಜುನಾಥ್ ಗೌಡರು ಟಿಕೆಟ್ ರೇಸ್‌ನಲ್ಲಿ ಮುಂದಿದ್ದಾರೆ. ಹೂಡಿ ವಿಜಯ್ ಕುಮಾರ್ ಜೊತೆಗಿದ್ದಾರೆ. ಎಲ್ಲರೂ ಒಕ್ಕಲಿಗ ಸಮುದಾಯದವರಾಗಿದ್ದಾರೆ. ಟಿಕೆಟ್ ತಪ್ಪಿದವರನ್ನು ಬಿಜೆಪಿ ಹೇಗೆ ಸಮಾಧಾನ ಮಾಡುತ್ತದೆ ಎಂಬುದನ್ನು ನೋಡಬೇಕಿದೆ.

ಎಲ್ಲಾ ಅಭ್ಯರ್ಥಿಗಳು ಒಕ್ಕಲಿಗರೇ ಆಗಿರುವುದರಿಂದ ಒಕ್ಕಲಿಗ ಮತಗಳು ಹಂಚಿಹೋಗುವ ಸಾಧ್ಯತೆಯಿದೆ. ಹಾಗಾಗಿ ದಲಿತರು, ಮುಸ್ಲಿಮರು ಮತ್ತು ಇತರ ಹಿಂದುಳಿದ ಮತಗಳು ಯಾರ ಕೈಹಿಡಿಯಲಿವೆಯೊ ಅವರಿಗೆ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆಜಿಎಫ್: ಪರ್ಯಾಯ ಪಕ್ಷಗಳ ನೆಲೆಯಲ್ಲೀಗ ಕಾಂಗ್ರೆಸ್ ಮುಂಚೂಣಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...