Homeನ್ಯಾಯ ಪಥಪ್ರಾತಿನಿಧ್ಯ ಸಮಸ್ಯೆಗಳಿಂದ ಕಾವೇರಿದ ಹಾವೇರಿ ಸಾಹಿತ್ಯ ಸಮ್ಮೇಳನ

ಪ್ರಾತಿನಿಧ್ಯ ಸಮಸ್ಯೆಗಳಿಂದ ಕಾವೇರಿದ ಹಾವೇರಿ ಸಾಹಿತ್ಯ ಸಮ್ಮೇಳನ

- Advertisement -
- Advertisement -

ಹಾವೇರಿಯಲ್ಲಿ ಜನವರಿ 6-7-8 ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿವಾದದ ಸುಳಿಯಲ್ಲಿದೆ. ಹಿಂದೆ ಹಲವು ಬಾರಿ ಸಾಹಿತ್ಯ ಸಮ್ಮೇಳನಗಳು ವಿವಿಧ ಕಾರಣಗಳಿಗೆ ಪ್ರತಿರೋಧಗಳನ್ನು ಎದುರಿಸಿದ್ದವು. ಇನ್ನೂ ಕೆಲವು ಬಾರಿ ಸಮ್ಮೇಳನಗಳಿಗೆ ಪರ್ಯಾಯ ಸಮಾವೇಶಗಳೂ ನಡೆದಿದ್ದಿದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಲಿಂದಲೂ, ಕರ್ನಾಟಕದ ಏಕೀಕರಣ, ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡ ಶಿಕ್ಷಣದ ಕೂಗು ಹೀಗೆ ಕೆಲವು ಸಂಗತಿಗಳಲ್ಲಿ ಜನಸಾಮಾನ್ಯರ ಅಭಿಪ್ರಾಯ ರೂಪಿಸಲು ಅದು ತನ್ನ ಛಾಪು ಮೂಡಿಸಿತು. ಆದರೆ, ಈ ದೇಶದ ಮೂಲಭೂತ ಸಮಸ್ಯೆಗಳು ಎನ್ನಬಹುದಾದ ಮತ್ತು ವಿವಿಧ ಕಾಲಘಟ್ಟಗಳಲ್ಲಿ ಈ ದೇಶದ ಆತ್ಮವನ್ನು ಕಿತ್ತುತಿಂದ ಜಾತೀಯತೆ, ಕೋಮು ವಿಷಮತೆ, ಆರ್ಥಿಕ ಅಸಮಾನತೆ ಮುಂತಾದ ವಿಷಯಗಳ ಬಗ್ಗೆ ಸಾಹಿತ್ಯ ಪರಿಷತ್ತು ಚರ್ಚೆಗಳನ್ನು ಎತ್ತಿಕೊಂಡದ್ದು ಅಥವಾ ಆ ವಿಷಯಗಳಲ್ಲಿ ಜನರ ತಿಳಿವಳಿಕೆಯನ್ನು ರೂಪಿಸುವತ್ತ ಕೆಲಸ ಮಾಡಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸಾಹಿತ್ಯ ಪರಿಷತ್ತಿನ ಆರಂಭಿಕ ಕಾರ್ಯ ಚಟುವಟಿಕೆಗಳ ಸಾರ್ವಜನಿಕ ದಾಖಲೆಗಳಾದ ’ಕನ್ನಡ ನುಡಿ’ ಅಥವಾ ’ಸಾಹಿತ್ಯ ಪರಿಷತ್ ಪತ್ರಿಕೆ’ಯ ಹಳೆಯ ಸಂಚಿಕೆಗಳನ್ನು ಗಮನಿಸಿದರೆ ಇದು ನಮಗೆ ಸುಲಭಕ್ಕೆ ಮನದಟ್ಟಾಗುತ್ತದೆ. ಇದು ಬರಬರುತ್ತಾ ’ವಿಐಪಿ’ ಸಂಸ್ಕೃತಿಯನ್ನು ಬೆಳೆಸಿಕೊಂಡು, ಬೃಹತ್ ಮಟ್ಟದ ಸಮಾವೇಶವನ್ನು ಆಯೋಜಿಸಿ ಮುಗಿಸುವ ವಾರ್ಷಿಕ ಸಂಪ್ರದಾಯವನ್ನು ತನ್ನದಾಗಿಸಿಕೊಂಡಿತೇ ಹೊರತು ನಾಡಿನ ನೈಜ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕನ್ನಡಿಗರ ಸಂಸ್ಥೆಯಾಗಿ ಬೆಳೆಯದೇ ಇದ್ದುದಕ್ಕೆ ಆರಂಭಿಕ ದಿನಗಳ ’ಶುದ್ಧ ಸಾಹಿತ್ಯ ನಿಷ್ಠೆ’ಯ ಕಾಳಜಿಯೂ ಕಾರಣವಾಗುತ್ತದೆ. ಕನಿಷ್ಠ ಹಿಂದೆ ಸಾರ್ವಜನಿಕ ಹಣವನ್ನು ಹದ್ದುಬಸ್ತಿನಿಂದ ಖರ್ಚು ಮಾಡುತ್ತಿದ್ದ ಸಂಸ್ಥೆ ಇಂದು ದುಂದುವೆಚ್ಚಕ್ಕೆ ಮುಂದಾಗಿರುವುದು ಮಾತ್ರ ದೊಡ್ಡ ಸಾಧನೆಯಾಗಿದೆ!

ನಮ್ಮೆಲ್ಲರವು ಅಲ್ಪಾಯುಷಿ ನೆನಪುಗಳಾದ್ದರಿಂದ ಇತ್ತೀಚಿನ ಸಾಹಿತ್ಯ ಸಮ್ಮೇಳನಗಳ ವಿವಾದಗಳಲ್ಲಿ ಕೆಲವನ್ನು ಇಲ್ಲಿ ನೆನಪಿಸಿಕೊಳ್ಳಬಹುದು; 2019ರಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ನಡೆಯಿತು. ಅಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದವರು ಚಂದ್ರಶೇಖರ ಕಂಬಾರರು. ಆ ಸಮ್ಮೇಳನದಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ನಡೆಯುವ ಊಳಿಗಮಾನ್ಯ ಮೆರವಣಿಗೆಯನ್ನು ನಡೆಸಬಾರದೆಂದು ಹಲವು ಪ್ರಾಜ್ಞರು ಕರೆನೀಡಿದರು. ಆದರೆ, ಕಂಬಾರರು ಅದರ ಬಗ್ಗೆ ತುಟಿಕ್‌ಪಿಟಿಕ್ ಅನ್ನಲಿಲ್ಲ. ಅಂದಿನ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಏನೇನೋ ಸಬೂಬು ನೀಡಿ ಈ ಪ್ರತಿಗಾಮಿ ಮೆರವಣಿಗೆಯನ್ನು ಸಮರ್ಥಿಸಿಕೊಂಡರು. ಕೊನೆಗೆ ಅದು ನಡೆದೇ ತೀರಿತು. ಈ ಬಾರಿಯ ಸಮ್ಮೇಳನದಲ್ಲಿ ಕೂಡ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲಿ ಮಹಿಳಾ ಸಾಹಿತಿಗಳಿಗೆ ಪ್ರಾತಿನಿಧ್ಯ ನೀಡಿಲ್ಲವೆಂದು ’ಕರ್ನಾಟಕ ಲೇಖಕಿಯರ ಸಂಘ’ದ ಎಚ್ ಎಲ್ ಪುಷ್ಪಾ ಕಿಡಿಕಾರಿದ್ದಾರೆ. ಆದರೆ ಅದನ್ನು ಸರಿಪಡಿಸಿಕೊಳ್ಳಬಹುದಾದ ಸೌಜನ್ಯವನ್ನು ತೋರಿಸಲು ಕ್ಯಾಬಿನೆಟ್ ದರ್ಜೆಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿಯವರಿಗೆ ಪುರುಸೊತ್ತಿಲ್ಲ!

ಇನ್ನು, ಪ್ರತಿ ಸಮ್ಮೇಳನದಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಮೆರವಣಿಗೆ ಮೂಲಕ ಊರನ್ನು ಸುತ್ತಿಸಿ ಸಮ್ಮೇಳನದ ವೇದಿಕೆಗೆ ಕರೆದುಕೊಂಡು ಬರುವ ಸಂಪ್ರದಾಯ ಎಗ್ಗಿಲ್ಲದೇ ಮುಂದುವರೆದಿದೆ. ಈ ಮೆರವಣಿಗೆಯ ಉದ್ದೇಶವೇನು ಎಂಬುದು ಮಾತ್ರ ಇಂದಿಗೂ ನಿಗೂಢ! ಪ್ರಜಾಪ್ರಭುತ್ವದಲ್ಲಿ ’ವ್ಯಕ್ತಿ ವಿಶಿಷ್ಟತೆ’ಯನ್ನು ಮೆರೆಯುವ ಈ ಮೆರವಣಿಗೆ ಅನವಶ್ಯಕ ಎಂದು (ಜಿಎಸ್‌ಎಸ್ ಥರದ ಒಂದಿಬ್ಬರು ಸಾಹಿತಿಗಳನ್ನು ಹೊರತುಪಡಿಸಿ) ಇಲ್ಲಿಯವರೆಗೂ ಯಾಕೆ ಯಾವ ಸಮ್ಮೇಳನಾಧ್ಯಕ್ಷರಿಗೂ ಅನಿಸಿಲ್ಲ? ಯಾಕೆ ಮೆರವಣಿಗೆ ಬೇಡವೆಂದು ನಿರಾಕರಿಸಿಲ್ಲ? ಇದರ ಮುಂದುವರಿದ ಭಾಗವೆಂಬಂತೆ ವಿಐಪಿಗಳಿಗೆ ವಿಭಿನ್ನ ವಸತಿ, ವಿಭಿನ್ನ ಕೂರುವ ವ್ಯವಸ್ಥೆ, ವಿಭಿನ್ನ ಊಟ-ಉಪಚಾರವೆಸಗುವ ವ್ಯವಸ್ಥೆಯೆಲ್ಲವೂ ಪ್ರಜಾಪ್ರಭುತ್ವದ ಅಣಕವಲ್ಲದೆ ಇನ್ನೇನು? ಜನಸಾಮಾನ್ಯರ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಬೆಳೆಯಬೇಕಿದ್ದರೆ ಇಂತಹ ತಾರತಮ್ಯದ ನೀತಿಗಳಿಗೆ ಕೊನೆ ಹಾಡಬೇಕಲ್ಲವೇ?

ಇನ್ನು ಸಾಹಿತ್ಯ ಸಮ್ಮೇಳನವನ್ನು ಅಷ್ಟೇನು ತೂಕವಲ್ಲದ ಕಾರಣಗಳಿಗೂ ವಿರೋಧಿಸಿ ಪರ್ಯಾಯ ಸಮಾವೇಶ ನಡೆಸಿದ ಇತಿಹಾಸವೂ ಬಹಳಷ್ಟು ಚರ್ಚೆಯಾಗಿದೆ. 1990ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ 59ನೇ ಸಾಹಿತ್ಯ ಸಮ್ಮೇಳದಲ್ಲಿ ’ಶ್ರೇಷ್ಠತೆ’ಯ ಪ್ರಶ್ನೆಯನ್ನು ಮುನ್ನೆಲೆಗೆ ತಂದು, ಸಮ್ಮೇಳನದ ಅಧ್ಯಕ್ಷತೆಗೆ ಆರ್ ಸಿ ಹಿರೇಮಠ್ ಅವರ ಆಯ್ಕೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ’ಜಾಗೃತ ಸಾಹಿತ್ಯ ಸಮಾವೇಶ’ವನ್ನು ಆಯೋಜಿಸಲಾಗಿತ್ತು. ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಯಶವಂತ ಚಿತ್ತಾಲ, ಪಿ ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ರಾಮಚಂದ್ರ ಶರ್ಮ, ಶಾಂತಿನಾಥ ದೇಸಾಯಿ, ಚಂದ್ರಶೇಖರ ಕಂಬಾರ ಮುಂತಾದ ಸಾಹಿತಿಗಳು ಜಾಗೃತ ಸಮಾವೇಶದಲ್ಲಿ ಭಾಗವಹಿಸಿದ್ದು ಹೆಚ್ಚಿನ ಜನ ಅಲ್ಲಿಗೆ ಬರುವುದಕ್ಕೆ ಕಾರಣವಾಯಿತು ಎನ್ನಲಾಗುತ್ತದೆ. “ಯಾವುದು ಉತ್ತಮ ಸಾಹಿತ್ಯ, ಯಾವುದು ಅಷ್ಟು ಉತ್ತಮವಲ್ಲ ಎಂಬುದು ನನಗಂತೂ ಜೀವನ್ಮರಣದ ಪ್ರಶ್ನೆ” ಎಂದಿದ್ದರಂತೆ ಅಂದು ಆ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಅಡಿಗರು. ಅಂದು ಅಲ್ಲಿ ನೆರೆದಿದ್ದವರು ರಚಿಸಿದ ಸಾಹಿತ್ಯವನ್ನು ಶ್ರೇಷ್ಠ ಎಂದು ಬಗೆಯುವುದು ಹೇಗೆ? ಇಷ್ಟು ದಿನ “ಶ್ರೇಷ್ಠ” ಎಂದು ಬಿಂಬಿಸಲಾಗಿದ್ದ ಅಡಿಗರಂತಹವರ ಪದ್ಯಗಳ ಬಗ್ಗೆಯೇ ಹಲವು ಪ್ರಶ್ನೆಗಳಿವೆ. ಬ್ರಾಹ್ಮಣ್ಯದ ತಾರತಮ್ಯವನ್ನು ಮೆರೆಯುವ ಅವರ ಹಲವು ಕವನಗಳು ಹೇಗೆ ಶ್ರೇಷ್ಠವಾದವು? ಅಂದು ಅಲ್ಲಿ ಶ್ರೇಷ್ಠತೆಯ ನೆಪದಲ್ಲಿ ನೆರೆದಿದ್ದ ಎಷ್ಟೋ ಸಾಹಿತಿಗಳು ಇಂದು ಸಾರ್ವಜನಿಕ ನೆನಪಿನಿಂದಲೇ ಮರೆಯಾಗಿದ್ದಾರೆ. ಅದೇ ಸಮಾವೇಶದಲ್ಲಿ ಈ ’ಶ್ರೇಷ್ಠತೆಯ ವ್ಯಸನ’ವನ್ನು ಪ್ರಶ್ನಿಸಿ ಕೆ ವಿ ಸುಬ್ಬಣ್ಣ ಮಾಡಿದ ಭಾಷಣವೂ ಬಹಳ ಚರ್ಚೆಗೆ ಒಳಪಟ್ಟಿತ್ತು. ಅವರೂ ಕೂಡ ಶ್ರೇಷ್ಠತೆಯ ಮಾನದಂಡವನ್ನು ಒಪ್ಪಿಯೇ, ಅದು ವ್ಯಸನವಾಗಬಾರದು ಎಂಬ ರೀತಿಯಲ್ಲಿ ಚರ್ಚೆಯನ್ನು ಬೆಳೆಸಿದ್ದರು ಅಷ್ಟೇ. ಆದರೆ ಈ ಶ್ರೇಷ್ಠತೆಯ ಕಲ್ಪನೆ ಕಾಲ-ದೇಶಬದ್ಧವಾಗಿದ್ದು, ಸಾಪೇಕ್ಷವಾದದ್ದು. ಮತ್ತು ಈ ಕಲ್ಪನೆ ಸಮಾನತೆಗೆ ವಿರುದ್ಧವಾದ ಚಿಂತನೆಯಿಂದ ಕೂಡಿದ್ದು ಕೂಡ. ಇಂತಹ ಶ್ರೇಷ್ಠತೆಯ ಮಾನದಂಡಕ್ಕೂ ಸಾಹಿತ್ಯ ಸಮ್ಮೇಳನ ಗುರಿಯಾಗಿತ್ತು. ಆದರೆ ನಿಜವಾಗಿ ಯಾವುದೇ ಸಮ್ಮೇಳನಗಳಲ್ಲಿ ಎತ್ತಬೇಕಾದ ಪ್ರಶ್ನೆ ’ಪ್ರಾತಿನಿಧ್ಯ’ದ್ದಾಗಿರಬೇಕು.

ಅಂತಹ ಪ್ರಾತಿನಿಧ್ಯದ ಪ್ರಶ್ನೆ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಎದ್ದಿತ್ತು. ದಲಿತ ಗೋಷ್ಠಿ ಇರಬೇಕೆಂದ ವಾದಕ್ಕೆ ಅಂದಿನ ಸಾಹಿತ್ಯ ಪರಿಷತ್ ಅಧ್ಯಕ್ಷ ಹಂಪನಾ ಅವರು ನೀಡಿದ ಬೇಜವಾಬ್ದಾರಿ ಉತ್ತರ ಮುಂದೆ ಬಂಡಾಯ ಸಾಹಿತ್ಯ ಸಮ್ಮೇಳನ ಹುಟ್ಟಲು ಕಾರಣವಾಗಿತ್ತು. ಈಗ ಮುಸಲ್ಮಾನ ಬರಹಗಾರರಿಗೆ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಆರೋಪ ಸದರಿ ಹಾವೇರಿ ಸಾಹಿತ್ಯ ಸಮ್ಮೇಳನದ ಮೇಲಿದೆ. ಟೋಕನಿಸಂ ಎಂಬಂತೆ ಅಲ್ಲಲ್ಲಿ ಕೆಲವು ಮುಸ್ಲಿಂ ಸಮುದಾಯದ ಸಾಹಿತಿಗಳು-ಕವಿಗಳಿಗೆ ಅವಕಾಶ ನೀಡಿದ್ದರೂ ಅದು ಸಮರ್ಪಕ ಮಟ್ಟದಲ್ಲಿಲ್ಲ. ಇದನ್ನು ಸರಿಪಡಿಸಿಕೊಳ್ಳುವ ಎಲ್ಲ ಅವಕಾಶವೂ ಮಹೇಶ ಜೋಶಿಯವರ ಮುಂದೆ ಇತ್ತು. ಆದರೆ ಅವರು ಸಮ್ಮೇಳನದ ಪ್ರಾತಿನಿಧ್ಯದ ಪ್ರಶ್ನೆ ಎತ್ತಿದವರ ಮೇಲೆ ವೈಯಕ್ತಿಕ ಪ್ರತ್ಯಾರೋಪಕ್ಕೆ ನಿಂತರು. ಅವುಗಳಿಗೆ ಯಾವ ಸಾಕ್ಷ್ಯಾಧಾರಗಳನ್ನೂ ನೀಡುವ ಗೋಜಿಗೆ ಹೋಗಲಿಲ್ಲ. ಪ್ರಜಾಪ್ರಭುತ್ವದ ಲಕ್ಷಣಗಳು ಮತ್ತು ಸಂವಿಧಾನದ ಆಶಯಗಳ ಬಗ್ಗೆ ಸಾಹಿತ್ಯ ಪರಿಷತ್ತಿನ ಈ ಅಧ್ಯಕ್ಷರಿಗೆ ಗೌರವವಿದ್ದಿದ್ದರೆ ಈ ರೀತಿಯ ವರ್ತನೆಯ ಅಗತ್ಯವೇ ಬೀಳುತ್ತಿರಲಿಲ್ಲ. 2020ರಲ್ಲಿ ರೈತರ ಪ್ರತಿರೋಧಕ್ಕೆ ಮಣಿದು ಕೇಂದ್ರ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದಿತ್ತು. ಯಾವುದೇ ದೋಷಗಳನ್ನು ಸರಿಪಡಿಸಿಕೊಳ್ಳುವ ಅವಕಾಶವಿದ್ದಾಗ, ಸಾಹಿತ್ಯ ಪರಿಷತ್ ಸಂಸ್ಥೆಯ ಅಧ್ಯಕ್ಷರ ಮೊಂಡುತನಕ್ಕೆ ಯಾವ ಸಮರ್ಥನೆಯೂ ಇಲ್ಲ!

ಇದನ್ನೂ ಓದಿ: ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಲು ಮನಸ್ಸು ಒಪ್ಪುತ್ತಿಲ್ಲ: ಕಸಾಪ ಎಡವಟ್ಟಿಗೆ ಕವಯತ್ರಿ ಸುಜಾತ ಪ್ರತಿರೋಧ

ಇನ್ನು ಗೋಷ್ಠಿಗಳ ಆಯೋಜನೆಯಲ್ಲಿಯೂ ಇಂದಿನ ಜ್ವಲಂತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಕೆಲಸ ಪರಿಣಾಮಕಾರಿಯಾಗಿಲ್ಲ. ಇಂದು ಇಡೀ ಜಗತ್ತನ್ನು ಕೃತಕ ಬುದ್ಧಿಮತ್ತೆ ಆವರಿಸಿಕೊಳ್ಳುತ್ತಿದೆ. ಇದರ ಬಗ್ಗೆ ನಾವು ಕನ್ನಡಿಗರು ಚರ್ಚಿಸುವ ಅಗತ್ಯ ಇತ್ತಲ್ಲವೇ? ’ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನದೊಂದಿಗೆ ಕನ್ನಡ’ ಎಂಬ ಗೋಷ್ಠಿಯಲ್ಲಿ ಅವೇ ಓಬಿರಾಯನ ಕಾಲದ ಚರ್ಚೆಗಳು! ಉತ್ತರ ಕರ್ನಾಟಕ ಹವಾಮಾನ ವೈಪರೀತ್ಯಕ್ಕೆ ಕಳೆದ ಕೆಲವು ವರ್ಷಗಳಿಂದ ಗುರಿಯಾಗುತ್ತಲೇ ಇದೆ. ಹಾವೇರಿಯಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಹವಾಮಾನ ವೈಪರೀತ್ಯದ ಬಗ್ಗೆ ಚರ್ಚೆ ಬೇಡವೇ? ಜಗತ್ತಿನಾದ್ಯಂತ ಹವಾಮಾನ ಬದಲಾವಣೆಯನ್ನು ಚರ್ಚಿಸುವ ನಿಟ್ಟಿನಲ್ಲಿ ಸಾಹಿತ್ಯ ಸಾಗಿದೆ. ’ಕನ್ನಡ ಚಳವಳಿ ಪರಿಣಾಮಗಳು’ ಎಂಬ ಗೋಷ್ಠಿಯಲ್ಲಿ ಭಾಷೆ ಮತ್ತು ಗಡಿಗೆ ಸಂಬಂಧಿಸಿದ ಕೆಲವು ವಿಷಯಗಳ ಮಂಡನೆ ಇದೆ. ಕರ್ನಾಟಕದಲ್ಲಿ ನಡೆದ ರೈತ, ದಲಿತ, ಕೋಮು ಸೌಹಾರ್ದ ಚಳವಳಿಗಳೆಲ್ಲವೂ ಕನ್ನಡ ಚಳವಳಿಗಳೇ ತಾನೇ? ಅವಕ್ಕೆ ಅಲ್ಲಿ ಸ್ಥಾನ ಬೇಡವೇ? ’ಕರ್ನಾಟಕ: ಭಾಷಾ ವೈವಿಧ್ಯ ಎಂಬ ಗೋಷ್ಠಿಯಲ್ಲಿ ಉರ್ದು ಮತ್ತು ಬ್ಯಾರಿ ಭಾಷೆಗಳಂತಹ ಕನ್ನಡ ನಾಡಿನ ಭಾಷೆಗಳ ಚರ್ಚೆಗೆ ಜಾಗವೇ ಇಲ್ಲ. ಈ ಪಟ್ಟಿಯನ್ನು ಮುಂದುವರಿಸುತ್ತಲೇ ಹೋಗಬಹುದು.

ಕರ್ನಾಟಕದಲ್ಲಿ ಸಾಹಿತಿಗಳಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಾಶಸ್ತ್ಯವನ್ನು ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳು ನೀಡುತ್ತಿವೆ ಎಂಬ ಆರೋಪ ಮೊದಲಿನಿಂದಲೂ ಇದೆ. ತಮ್ಮ ಕ್ಷೇತ್ರವಲ್ಲದಿದ್ದರೂ ಅವುಗಳ ಬಗ್ಗೆ ಸಾಹಿತಿಗಳಿಂದ ಪ್ರತಿಕ್ರಿಯೆಗಳನ್ನು ಪಡೆಯುವ ಸಂಪ್ರದಾಯ ಈ ನಾಡಿನಲ್ಲಿ ಹೇಗೋ ಬೆಳೆದುಬಂದಿದೆ. ಕೆಲವೊಮ್ಮೆ ಅದು ಆರೋಗ್ಯಕರವಾಗಿ ಪರಿಣಮಿಸಿದ್ದರೂ, ಅಪಾಯಗಳನ್ನೂ ತಂದೊಡ್ಡಿದ್ದಿದೆ. ಉದಾಹರಣೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸಬೇಕು ಎಂದು ಮೇಲ್ಪದರಲ್ಲಿ ಆಗ್ರಹಿಸುತ್ತಾ ಬರುವ ಸಾಹಿತಿಗಳು, ಅದಕ್ಕಾಗಿ ನಡೆಸುವ ಅಧ್ಯಯನಗಳ ಬಗ್ಗೆ ಹೆಚ್ಚು ಆಸಕ್ತಿ ತಳೆಯುವುದಿಲ್ಲ. ಹೀಗೆ ಸಾಹಿತಿಗಳಿಗೆ ಸಿಕ್ಕ ಅನಗತ್ಯ ಪ್ರಾಶಸ್ತ್ಯದಿಂದ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಾಹಿತ್ಯ ಸಮ್ಮೇಳನಗಳಿಗೂ ’ಪ್ರತಿಷ್ಠೆ’ ಲಭ್ಯವಾಗಿದೆ. ಈ ಪ್ರತಿಷ್ಠೆಯನ್ನು ಸರಿ ದಾರಿಗೆ, ಜನಪರ ಮಾರ್ಗಕ್ಕೆ ತಿರುಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ’ಶ್ರೇಷ್ಠತೆ’ಯ ಪ್ರಶ್ನೆಯನ್ನು ಬಿಸಾಡಿ, ಕರ್ನಾಟಕದ ಎಲ್ಲ ಜನರ ಆಶೋತ್ತರಗಳಿಗೆ ಮತ್ತು ನಾಡಿನ ಬಹುತ್ವ ಪರಂಪರೆಗೆ ಮಿಡಿಯುವ ಸಂಸ್ಥೆಯಾಗಿ ಇದನ್ನು ರೂಪಾಂತರಗೊಳಿಸುವ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕಿದೆ. ಪ್ರತಿರೋಧ ಒಂದು ಮಾರ್ಗವಾದರೆ, ಸಂಸ್ಥೆಯ ಒಳಹೊಕ್ಕು ಸುಧಾರಣೆಗೆ ಮುಂದಾಗುವುದು ಮತ್ತೊಂದು. ಈ ನಿಟ್ಟಿನಲ್ಲಿ ಇವುಗಳ ನಡುವೆ ಸಮನ್ವಯವನ್ನು ಸಾಧಿಸುವತ್ತ ನಾವೆಲ್ಲರೂ ಚಿಂತಿಸಬೇಕಿದೆ.

ಗುರುಪ್ರಸಾದ್ ಡಿ ಎನ್

ಸಂಪಾದಕರು, ನ್ಯಾಯಪಥ

ಇದನ್ನೂ ಓದಿ; ಹಾವೇರಿಯ 86ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಂಭ್ರಮ ಮತ್ತು ಪ್ರತಿರೋಧಗಳ ನಡುವೆ ಜನಸಾಹಿತ್ಯ ಸಮ್ಮೇಳನದ ರೂವಾರಿಗಳು ಹೇಳುವುದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಮ್ಮ ಪುಸ್ತಕದ ಮಳಿಗೆಯೂ ಹಾವೇರಿಗೆ ಹೋದಂತಿದೆ!?
    ಗೌರಿಯವರಿದ್ದಿದ್ದರೆ ಹೀಗಾಗುತ್ತಿರಲಿಲ್ಲವೇನೋ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...