Homeಕರ್ನಾಟಕಜನಕ್ಕೆ ಬದುಕಿನ ಚಿಂತೆಯಾದರೆ ಬಿಜೆಪಿಗೆ ಸಿದ್ದರಾಮಯ್ಯನವರದ್ದೇ ಚಿಂತೆ

ಜನಕ್ಕೆ ಬದುಕಿನ ಚಿಂತೆಯಾದರೆ ಬಿಜೆಪಿಗೆ ಸಿದ್ದರಾಮಯ್ಯನವರದ್ದೇ ಚಿಂತೆ

- Advertisement -
- Advertisement -

’ನಿಂತ್ರೆ ಕುಂತ್ರೆ ನಿಂದೆ ಧ್ಯಾನ, ಜೀವಕ್ಕಿಲ್ಲ ಸಮಾಧಾನ’ ಎಂಬ ಸಿನಿಮಾ ಹಾಡಿನಂತೆ ರಾಜ್ಯದ ಬಿಜೆಪಿ ಮುಖಂಡರಿಗೆ ಮೂರು ಹೊತ್ತೂ ವಿಪಕ್ಷ ನಾಯಕ ಸಿದ್ದರಾಮಯ್ಯನವರದೇ ಧ್ಯಾನ; ಇಲ್ಲದಿದ್ದರೆ ಅವರ ಜೀವಕ್ಕೆ ಸಮಾಧಾನ ಎಂಬುದೇ ಇಲ್ಲವಾಗಿದೆ. ಸಿದ್ದರಾಮಯ್ಯನವರು ಏನು ತಿನ್ನುತ್ತಾರೆ, ಸಿದ್ದರಾಮಯ್ಯನವರ ರ್‍ಯಾಲಿಗೆ ಎಷ್ಟು ಜನ ಸೇರುತ್ತಾರೆ? ಸಿದ್ದರಾಮಯ್ಯನವರು ಎಲ್ಲಿ ಚುನಾವಣೆಗೆ ನಿಲ್ಲುತ್ತಾರೆ, ಸಿದ್ದರಾಮಯ್ಯನವರ ನಿಜ ಕನಸುಗಳೇನು? ಹೀಗೆ ಪದೇಪದೇ ಅವರ ಸುತ್ತಲೇ ಚರ್ಚೆ ನಡೆಸುತ್ತಾ ಜನರನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಬೆನ್ನುತಿರುಗಿಸುತ್ತಿದ್ದಾರೆ.

ಆಡಳಿತ ಪಕ್ಷವಾದ ಬಿಜೆಪಿಯು ಈ ಮೂರೂವರೆ ವರ್ಷದಲ್ಲಿ ತಾನು ಮಾಡಿದ ಅಭಿವೃದ್ದಿ ಕೆಲಸಗಳು, ಸಾಧನೆಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆಯನ್ನು ಎದುರಿಸಬೇಕಾದ್ದು ನ್ಯಾಯಯುತ ಮಾರ್ಗ. ಆದರೆ ಅದನ್ನು ಬಿಟ್ಟು ಸಿದ್ದರಾಮಯ್ಯರವರ ಹಿಂದೆ ಬಿದ್ದಿರುವುದನ್ನು ನೋಡಿದರೆ ಒಂದೋ ಅವರು ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲದಿರುವುದೇ ಅವರ ಸಾಧನೆ ಎಂದರ್ಥ! ಇಲ್ಲವೇ ಸಿದ್ದರಾಮಯ್ಯನವರು ರಾಜ್ಯದ ಪ್ರಭಾವಿ ಮಾಸ್ ಲೀಡರ್ ಆಗಿದ್ದು, ಮುಂದಿನ ಚುನಾವಣೆಯಲ್ಲಿ ತಾವು ಗೆಲ್ಲುವುದಲ್ಲದೆ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಅಧಿಕಾರಕ್ಕೆ ತರುತ್ತಾರೆ ಎಂಬ ಭಯ ಕಾಡುತ್ತಿರುವ ಸಾಧ್ಯತೆಯೂ ಇದೆ. ಇವೆರೆಡೂ ಅಲ್ಲದಿದ್ದರೆ ದಿನವಿಡೀ ಸಿದ್ದರಾಮಯ್ಯನವರ ಭಜನೆ ಮಾಡುವುದಾದರೂ ಏತಕ್ಕೆ?

2013ರಲ್ಲಿ ಸಿದ್ದರಾಮಯ್ಯನವರು ಸರ್ಕಾರ ರಚಿಸಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅವರ ಕಾರಿನ ಮೇಲೆ ಕಾಗೆ ಕೂತಿದೆ, ಅದುದರಿಂದ ಅಧಿಕಾರ ಕಳೆದುಕೊಳ್ಳುತ್ತಾರೆ, ನಿದ್ದೆರಾಮಯ್ಯ ಇತ್ಯಾದಿಯಾಗಿ ಅವರನ್ನು ಇಲ್ಲಸಲ್ಲದ ರೀತಿಯಲ್ಲಿ ಮಾಧ್ಯಮಗಳ ಮೂಲಕ ಟೀಕಿಸಲಾಯಿತು. ಆಗ ಆರಂಭವಾದ ಅವರ ಮೇಲಿನ ಚರ್ಚೆ, ಟೀಕೆ, ಆರೋಪ, ನಿಂದನೆ 2018ರಲ್ಲಿ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೂ ನಿಂತಿಲ್ಲ. ಅವರು ಸಿಎಂ ಆಗಿ ಪೂರ್ಣಾವಧಿ ಅಧಿಕಾರ ಪೂರೈಸಿದ ನಂತರ ಮೂವರು ವ್ಯಕ್ತಿಗಳು ರಾಜ್ಯಕ್ಕೆ ಸಿಎಂ ಆಗಿದ್ದಾರೆ. ಆದರೂ ಇಂದಿಗೆ ಅತಿ ಹೆಚ್ಚು ಚರ್ಚೆಯಲ್ಲಿರುವುದು, ಮಾಧ್ಯಮಗಳ ಮತ್ತು ಬಿಜೆಪಿಯವರ ಬಾಯಿಗೆ ಆಹಾರವಾಗುತ್ತಿರುವುದು ಮಾತ್ರ ಸಿದ್ದರಾಮಯ್ಯನವರು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗಿಂತಲೂ ಹೆಚ್ಚಾಗಿ ಮಾಧ್ಯಮಗಳು ಸಿದ್ದರಾಮಯ್ಯನವರ ಕುರಿತೇ ಮಾತನಾಡುತ್ತಿವೆ. ಇದು ಅರೋಗ್ಯಕರ ಮತ್ತು ಸಮಾಜಮುಖಿ ಟೀಕೆಯಾಗಿದ್ದರೆ ಒಳ್ಳೆಯದಾಗಿತ್ತು. ಆದರೆ ಅದು ಬಹುತೇಕ ನಿಂದನೆಯ ಮತ್ತು ಸುಳ್ಳು ಆರೋಪಗಳ ದನಿಯನ್ನೇ ಹೊಂದಿರುವುದು ಪದೇಪದೇ ಸಾಬೀತಾಗಿದೆ.

2017ರಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿದ್ದಾರೆ ಎಂದು ವಿವಾದ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯನವರು, ’ಬರೀ ಮೀನಲ್ಲ, ಕೋಳಿ ಸಹ ತಿಂದು ಹೋಗಿದ್ದೆ ಏನಿವಾಗ’ ಎಂದು ದಿಟ್ಟವಾಗಿ ಉತ್ತರಿಸಿದ್ದರು. ಅಲ್ಲಿಂದ ಆರಂಭವಾಗಿ ತೀರಾ ಇತ್ತೀಚಿನವರೆಗೂ ಅವರು ಏನು ತಿನ್ನುತ್ತಾರೆ ಎಂಬುದು ಚರ್ಚೆ ಆಗುತ್ತಲೇ ಇದೆ. ಇತ್ತೀಚೆಗೆ ಪತ್ರಕರ್ತನೊಬ್ಬ, ’ಸರ್ ಕೊಡಗಿನಲ್ಲಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದರೆಂದು ಬಿಜೆಪಿಯವರು ಆರೋಪಿಸುತ್ತಾರೆ’ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದರು. ’ತಿನ್ನುವುದು ನನ್ನಿಷ್ಟ, ನೀನ್ಯಾವನಯ್ಯ ಕೇಳಕ್ಕೆ’ ಎಂದು ಗುಡುಗಿದ್ದರು. ’ನೀನ್ಯಾವನಯ್ಯ ಕೇಳಕ್ಕೆ’ ಎಂಬ ಮಾತು ಸ್ವಲ್ಪ ಕಾಲ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿತ್ತು.

ಇನ್ನು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವಿನ ಸಂಬಂಧ ಚೆನ್ನಾಗಿಲ್ಲ; ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಎಂಬ ನಿರೂಪಣೆಯನ್ನು ಬಿಜೆಪಿ ಮತ್ತು ಮಾಧ್ಯಮಗಳು ಮತ್ತೆಮತ್ತೆ ತೇಲಿಬಿಡುತ್ತಿರುತ್ತವೆ. ತಿಂಗಳುಗಟ್ಟಲೆ ಆ ವಿಚಾರ ಚರ್ಚಿಸುತ್ತಿದ್ದವು. ಕಾಂಗ್ರೆಸ್ ಪಕ್ಷದ ಉಸಾಬರಿ ಬಿಜೆಪಿಗ್ಯಾಕೆ? ಅವರ ಪಕ್ಷದಲ್ಲಿ ಹುಳುಕುಗಳಿಲ್ಲವೇ? ಬಸನಗೌಡ ಯತ್ನಾಳ್ ಪ್ರತಿದಿನ ಬಿಜೆಪಿಗೆ ಬೈಯ್ಯುವುದು ಯಾಕೆ? ಎಂದು ಹಲವರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದು ಉಂಟು.

ಇದನ್ನೂ ಓದಿ: ಕೋಲಾರ ಕ್ಷೇತ್ರವೆ ಏಕೆ?: ಕಾರಣ ವಿವರಿಸಿದ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ, ಹಾಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ ಎಂದು ಬಿಜೆಪಿ ಪ್ರಚಾರ ನಡೆಸಿತು. ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲಿ ಕಡಿಮೆ ಅಂತರದಲ್ಲಿ ಸಿದ್ದರಾಮಯ್ಯನವರು ಗೆದ್ದಿದ್ದು, ಅಲ್ಲಿ ಈ ಬಾರಿ ಅವರನ್ನು ಜನ ಸೋಲಿಸುತ್ತಾರೆ; ಸಿದ್ದರಾಮಯ್ಯ ಎಲ್ಲೇ ನಿಂತರೂ ಸೋಲಿಸುತ್ತಾರೆ ಎಂಬ ಕಥನ ಕಟ್ಟಿತು. ಆಡಳಿತರೂಢ ಬಿಜೆಪಿಗೆ ಸಿದ್ದರಾಮಯ್ಯನವರ ಗೆಲುವು ಕಟ್ಟಿಕೊಂಡು ಏನಾಗಬೇಕು ಅಲ್ಲವೇ? ಕೊನೆಗೆ ಸಿದ್ದರಾಮಯ್ಯನವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯನವರಿಗೆ ನಿಲ್ಲಲೊಂದು ಕ್ಷೇತ್ರವಿಲ್ಲ, ಕ್ಷೇತ್ರಕ್ಕಾಗಿ ಅಲೆದಾಟ ಎಂಬ ಬಿಜೆಪಿ ಮೂದಲಿಕೆಗೆ ಬ್ರೇಕ್ ಬಿದ್ದಿದೆ. ಹಾಗೆ ನೋಡಿದರೆ ಸದರಿ ಮುಖ್ಯಮಂತ್ರಿ ಬೊಮ್ಮಾಯಿಯವರೂ ಸೇರಿದಂತೆ ಹಲವು ಬಿಜೆಪಿ ಶಾಸಕರು ತಮ್ಮ ಮೂಲವಲ್ಲದ ವಲಸೆ ಕ್ಷೇತ್ರಗಳಿಂದ ಗೆದ್ದುಬರುತ್ತಿದ್ದಾರೆ! ಹಲವರು ಸೋಲುವ ಭೀತಿಯಲ್ಲಿಯೂ ಇದ್ದಾರೆ. ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುವ ಅವಕಾಶ ಇದ್ದಾಗ ಅದನ್ನು ಗೇಲಿ ಮಾಡುವ, ಸೋಲುಗಳನ್ನು ಆಡಿಕೊಳ್ಳುವ ಪರಿಪಾಠ ಯಾವ ಪಕ್ಷಕ್ಕೂ ಶೋಭೆ ತರುವುದಿಲ್ಲ!

ಸಿದ್ದರಾಮಯ್ಯನವರು ಮುಸ್ಲಿಮರ ತುಷ್ಟೀಕರಣ ಮಾಡುತ್ತಾರೆ, ಟಿಪ್ಪು ಜಯಂತಿ ಆರಂಭಿಸಿದ್ದಾರೆ, ಸಿದ್ರಾಮುಲ್ಲಾಖಾನ್ ಎಂದೆಲ್ಲಾ ನೀಚಮಟ್ಟದ ಅಪಪ್ರಚಾರ ಮಾಡಲಾಯಿತು. ಅಷ್ಟಕ್ಕೆ ಸುಮ್ಮನಿರಲಾರದೆ ಈಗ ’ಸಿದ್ದು ನಿಜಕನಸುಗಳು’ ಎಂಬ ಪುಸ್ತಕ ಬರೆಯುವಲ್ಲಿಗೆ ಬಂದು ನಿಂತಿದೆ ಬಿಜೆಪಿ. ಆದರೆ ಈ ಹುಚ್ಚಾಟಕ್ಕೆ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯನವರ ವಿರುದ್ಧ ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುವುದು ಬಿಜೆಪಿಯ ಗುರಿಯಾಗಿದೆ. ಬಹುಪಾಲು ಮಾಧ್ಯಮಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಹಾಗಾದರೆ ಸಿದ್ದರಾಮಯ್ಯನವರನ್ನು ಬಿಜೆಪಿ ಈ ಪರಿ ಗುರಿ ಮಾಡುತ್ತಿರುವುದು ಯಾಕಾಗಿ?

“ಏಕೆಂದರೆ ಸಿದ್ದರಾಮಯ್ಯನವರು ಇಂದಿಗೂ ರಾಜ್ಯದ ಹಲವಾರು ಸಮಯದಾಯಗಳು ಹೊತ್ತು ಮೆರೆಸುವ ನಿಜವಾದ ಮಾಸ್ ಲೀಡರ್ ಆಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಮತ್ತು ಮಾಜಿ ಸಿಎಂ ಯಡಿಯೂರಪ್ಪ ಸಹ ಮಾಸ್ ಲೀಡರ್‌ಗಳೇ. ಆದರೆ ಅವರ ಬೆನ್ನಿಗೆ ಒಂದು ಪ್ರಬಲ ಜಾತಿಯಿತ್ತು. ಆದರೆ ಸಿದ್ದರಾಮಯ್ಯನವರು ಕುರುಬ ಸಮುದಾಯಕ್ಕೆ ಸೇರಿದವರಾದರೂ ಕೇವಲ ಕುರುಬರು ಮಾತ್ರವಲ್ಲದೆ, ದಲಿತರು, ಮುಸ್ಲಿಮರು ಮತ್ತು ಇತರೆ ಹಿಂದುಳಿದ ವರ್ಗದ ಸಮುದಾಯಗಳು ಅವರನ್ನು ತಮ್ಮ ನಾಯಕರೆಂದು ಒಪ್ಪಿಕೊಂಡಿದ್ದಾರೆ. 2018ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಲಾರದೆ ಹೋದರೂ ಹಿಂದಿನ ಚುನಾವಣೆಗಿಂತ 1.4% ಹೆಚ್ಚಿನ ಮತಗಳನ್ನು ಪಡೆದಿದ್ದು ಮತ್ತು ಸಿದ್ದರಾಮಯ್ಯನವರಿಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಸೇರಿದ್ದ ಲಕ್ಷಾಂತರ ಜನ ಅವರ ಜನಪ್ರಿಯತೆಗೆ ಸಾಕ್ಷಿ ನುಡಿಯುತ್ತವೆ. 2018ರ ಚುನಾವಣೆಯಲ್ಲಿ ಬಿಜೆಪಿ 36.35% ಮತಗಳನ್ನು ಪಡೆದರೆ ಕಾಂಗ್ರೆಸ್ 38.14% ಮತಗಳನ್ನು ಪಡೆದಿತ್ತು. ಸಿದ್ದರಾಮೋತ್ಸವದಲ್ಲಿ 8 ಲಕ್ಷದವರೆಗೂ ಜನ ಸೇರಿದ್ದರು ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಕರ್ನಾಟಕದ ಕೆಲವೇ ಪ್ರದೇಶಗಳಿಗೆ ಮಾತ್ರವಲ್ಲದೆ ಇಡೀ ರಾಜ್ಯದ ಜನರನ್ನು ಪ್ರಭಾವಿಸುವ ಶಕ್ತಿ ಹೊಂದಿದ್ದಾರೆ. ಹಾಗಾಗಿಯೇ ಸಿದ್ದರಾಮಯ್ಯನವರನ್ನು ಮಣಿಸದೆ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಮತ್ತು ಅಧಿಕಾರ ಪಡೆಯಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಿದ್ದು, ಅದಕ್ಕಾಗಿ ಇಷ್ಟೆಲ್ಲ ಕಸರತ್ತುಗಳನ್ನು ನಡೆಸುತ್ತಿದೆ.

“ಕರ್ನಾಟಕ ದಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಹೋರಾಟ ಎಂಬುದರ ಬದಲಿಗೆ, ಬಿಜೆಪಿ ವರ್ಸಸ್ ಸಿದ್ದರಾಮಯ್ಯ ಹೋರಾಟ ಎಂಬಂತಾಗಿಬಿಟ್ಟಿದೆ. ಏಕೆಂದರೆ ಸಿದ್ದರಾಮಯ್ಯನವರು ಇಲ್ಲ ಅಂದರೆ ಕಾಂಗ್ರೆಸ್ ಅನ್ನು ಸುಲಭವಾಗಿ ಎದುರಿಸಬಹುದು ಎಂಬುದು ಬಿಜೆಪಿಯವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಅವರೊಬ್ಬರನ್ನು ಸ್ವಲ್ಪವಾದರೂ ವೀಕ್ ಮಾಡಿದರೆ ಸಾಕು ಎಂದು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಆದರೆ ಅದರಲ್ಲಿ ಅವರು ಸಫಲವಾಗುತ್ತಿಲ್ಲ ಎನ್ನುತ್ತಾರೆ” ಅಜೀಂ ಪ್ರೇಮ್‌ಜಿ ವಿವಿ ಪ್ರಾಧ್ಯಾಫಕರು ಮತ್ತು ರಾಜಕೀಯ ವಿಶ್ಲೇಷಕರಾದ ಎ.ನಾರಾಯಣರವರು.

“ಸೈಕಲಾಜಿಕಲಿ ಸಿದ್ದರಾಮಯ್ಯನವರ ಸ್ಥಾನಮಾನ ಸ್ವಲ್ಪ ಕುಗ್ಗುವ ಹಾಗೆ ನೋಡಿಕೊಂಡರೆ ಮತ್ತು ಜನರಿಗೆ ಮಾನಸಿಕವಾಗಿ ಅವರ ವಿರುದ್ಧ ಒಂದು ಸಂದೇಶ ಹೋಗುವ ಹಾಗೆ ಮಾಡಿದರೆ ಅಷ್ಟರಮಟ್ಟಿಗೆ ಕಾಂಗ್ರೆಸ್‌ಅನ್ನು ಮಣಿಸುವುದು ಸುಲಭ ಎಂದು ಬಿಜೆಪಿ ನಂಬಿದೆ. ಈಗಷ್ಟೇ ಅಲ್ಲ, ಹಿಂದಿನಿಂದಲೂ ಅದನ್ನೇ ಅವರು ಮಾಡಿಕೊಂಡು ಬರುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿಯೂ ಇದೇ ಗೇಮ್ ನಡೆಸಲಾಯಿತು. ಎಲ್ಲಾ ಸಮುದಾಯಗಳನ್ನು ಸಿದ್ದರಾಮಯ್ಯನವರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದರು. ಅದನ್ನು ಈ ಬಾರಿಯೂ ಮಾಡಲು ಯತ್ನಿಸುತ್ತಿದ್ದಾರೆ” ಎಂದರು.

ಈ ಕುರಿತು ‘ನ್ಯಾಯಪಥ’ದೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರರಾದ ಲಕ್ಷ್ಮಣ್‌ರವರು, “ಸಿದ್ದರಾಮಯ್ಯನವರು ನಮ್ಮ ರಾಜ್ಯದ ಮಾಸ್ ಲೀಡರ್ ಆಗಿದ್ದಾರೆ. ಅವರ ವೈಯಕ್ತಿಕ ವರ್ಚಸ್ಸಿನ ಮೇಲೆ 224 ಕ್ಷೇತ್ರಗಳಲ್ಲಿಯೂ ಅಭಿಮಾನಿಗಳು, ಅನುಯಾಯಿಗಳಿದ್ದಾರೆ. ಪ್ರತಿ ಕ್ಷೇತ್ರದಲ್ಲಿಯೂ ಅವರು ಹೇಳಿದವರಿಗೆ ಮತ ಚಲಾಯಿಸುವ ಕನಿಷ್ಟ 15 ಸಾವಿರದಷ್ಟು ಮತದಾರರಿದ್ದಾರೆ. 2013-17ರವರೆಗೂ ಅವರು ಕೊಟ್ಟಂತ ಕಾರ್ಯಕ್ರಮಗಳ ಮಹತ್ವ 2018ರ ಚುನಾವಣೆಯಲ್ಲಿ ಜನರಿಗೆ ಅಷ್ಟಾಗಿ ಗೊತ್ತಾಗಲಿಲ್ಲ. ಆದರೆ ಇತ್ತೀಚಿಗಿನ ಬಿಜೆಪಿ ಸರ್ಕಾರದ ದುರಾಡಳಿತ ನೋಡಿದ ಜನರಿಗೆ ಸಿದ್ದರಾಮಯ್ಯನವರ ಜನಪರ ಆಡಳಿತ ಮನದಟ್ಟಾಗಿದೆ. ಹಾಗಾಗಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಬೇಕೆಂದು ಜನ ಬಯಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯನವರನ್ನು ತೇಜೋವಧೆ ಮಾಡಲು, ಖಳನಾಯಕನನ್ನಾಗಿ ಬಿಂಬಿಸಲು ಬಿಜೆಪಿ ಮುಂದಾಗಿದೆ” ಎಂದರು.

“ಪ್ರತಿ ವಿಧಾನಸಭಾ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ನೋಡಿದಾಗ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 60ಕ್ಕಿಂತ ಹೆಚ್ಚು ಸೀಟು ಗೆಲ್ಲುವುದು ಕಷ್ಟ ಎಂಬ ಅರಿವಾಗಿದೆ. ಕಾಂಗ್ರೆಸ್ ಬಹುಮತ ಪಡೆಯುವ ಅವಕಾಶ ಇರುವುದರಿಂದ ಅದು ಬಿಜೆಪಿಗೆ ತಲೆನೋವಾಗಿದೆ. ಸಿದ್ದರಾಮಯ್ಯನವರನ್ನು ಹಣದಿಂದ ಕೊಳ್ಳುವುದಕ್ಕಾಗಲಿ, ಐಟಿ, ಇಡಿ ಗುಮ್ಮ ತೋರಿಸಿ ಬೆದರಿಸುವುದಕ್ಕಾಗಲಿ ಬಿಜೆಪಿಗೆ ಸಾಧ್ಯವಿಲ್ಲವಾದ್ದರಿಂದ ಅವರ ಚಾರಿತ್ರ್ಯ ಹರಣಕ್ಕೆ ಮುಂದಾಗಿದೆ. ಆ ಮೂಲಕ, ಯಾರಿಗೆ ಮತ ಹಾಕಬೇಕೆಂದು ಇನ್ನೂ ನಿರ್ಧರಿಸದೆ ಬೇಲಿ ಮೇಲೆ ಕುಳಿತಿರುವ ಜನರನ್ನು ಒಲಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಆದರೆ ಅದು ಸಾಧ್ಯವಾಗುವುದಿಲ್ಲ. ಇದೇ ರೀತಿ ದೇಶಮಟ್ಟದಲ್ಲಿ ರಾಹುಲ್ ಗಾಂಧಿ ಮೇಲೆ ಅವಹೇಳನ ಮಾಡಲಾಗುತ್ತಿದೆ. ಈ ಮುಂಚೆ ಅವರಿಗೆ ಏನೂ ಗೊತ್ತಿಲ್ಲ, ಪಪ್ಪು ಎಂದು ಕರೆಯುತ್ತಿದ್ದರು. ಆದರೆ ಭಾರತ್ ಜೋಡೊ ಯಾತ್ರೆ ರಾಹುಲ್ ಗಾಂಧಿಯವರ ವರ್ಚಸ್ಸನ್ನು ಜನರೆದರು ಅನಾವರಣ ಮಾಡಿತು. ಜನರ ಭಾವನೆ ಸಂಪೂರ್ಣ ಬದಲಾಗಿದೆ” ಎಂದರು.

ಬಿಜೆಪಿ ಟಿಪ್ಪು ಸುಲ್ತಾನನ ಕುರಿತಾಗಿ ಇತಿಹಾಸ ತಿರುಚುವ ಕೆಲಸ ಮಾಡುತ್ತಿದೆ. ನೆಹರೂರವರ, ಗಾಂಧೀಜಿಯವರ ಚಾರಿತ್ರ್ಯ ಹರಣ ಮಾಡಲು ಯತ್ನಿಸುತ್ತಿದೆ. ಆ ಮೂಲಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಮಣಿಸಿ ಪಾರಮ್ಯ ಮೆರೆಯುವ ಕೆಲಸ ಮಾಡುತ್ತಿದೆ. ಇದರಲ್ಲಿ ತಕ್ಕಮಟ್ಟಿಗೆ ಯಶಸ್ಸು ಕೂಡ ಸಾಧಿಸಿದೆ ಎನ್ನಬಹುದು. ಆದರೆ ಅದಕ್ಕೆ ಅದೇ ಮಟ್ಟದ ವಿರೋಧವನ್ನೂ ಎದರಿಸುತ್ತಿದೆ. ಈಗ ಸಿದ್ದರಾಮಯ್ಯನವರನ್ನು ಅದೇ ಮಾದರಿಯಲ್ಲಿ ತೇಜೋವಧೆ ಮಾಡಲು ಮುಂದಾಗಿದೆ. ಆದರೆ ಸಿದ್ದರಾಮಯ್ಯನವರ ರಾಜಕೀಯ ಇನ್ನೂ ಜೀವಂತವಾಗಿದ್ದು ಗಟ್ಟಿದನಿಯಲ್ಲಿ ತಮ್ಮ ಟೀಕಾಕಾರನ್ನು ಎದರಿಸುತ್ತಿದ್ದಾರೆ. ಈ ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರು ಎಂದು ತಿಳಿದ ಕೋಟ್ಯಂತರ ಜನ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಬಿಜೆಪಿಗೆ ತಮ್ಮ ಅಪಪ್ರಚಾರದ ನರೆಟಿವ್‌ನಲ್ಲಿ ಇನ್ನೂ ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿಲ್ಲ. ಕರ್ನಾಟಕದ ಮಹತ್ವದ ಚುನಾವಣೆಗೆ ಇನ್ನು 3-4 ತಿಂಗಳು ಮಾತ್ರ ಉಳಿದಿರುವುದರಿಂದ ಈ ಪ್ರಹಸನ ಮತ್ತಷ್ಟು ಜೋರಾಗಲಿದೆ. ಇದರಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದನ್ನು ಕಾಲವೇ ನಿರ್ಣಯಿಸಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...