Homeಮುಖಪುಟಕೋಲಾರ ಕ್ಷೇತ್ರವೆ ಏಕೆ?: ಕಾರಣ ವಿವರಿಸಿದ ಸಿದ್ದರಾಮಯ್ಯ

ಕೋಲಾರ ಕ್ಷೇತ್ರವೆ ಏಕೆ?: ಕಾರಣ ವಿವರಿಸಿದ ಸಿದ್ದರಾಮಯ್ಯ

1998ರಲ್ಲಿ ಕೋಲಾರದಲ್ಲಿ ನಡೆದ ಬೃಹತ್ ಅಹಿಂದ ಸಮಾವೇಶವನ್ನು ಸಿದ್ದರಾಮಯ್ಯನವರು ಉದ್ಘಾಟಿಸಿದ್ದರು.

- Advertisement -
- Advertisement -

ಮಾಜಿ ಮುಖ್ಯಮಂತ್ರಿ, ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಬಹು ಚರ್ಚಿತ ವಿಷಯಕ್ಕೆ ಕೊನೆಗೂ ತೆರೆಬಿದ್ದಿದೆ. ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ಬಾದಾಮಿ, ಸವದತ್ತಿ, ವರುಣಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಸ್ಪರ್ಧಿಸುತ್ತಾರೆ ಎಂದು ಊಹಾಪೋಹಗಳಿದ್ದವು. ಆ ಮೂರು ಕ್ಷೇತ್ರದ ಟಿಕೆಟ್‌ಗಾಗಿ ಅವರು ಅರ್ಜಿ ಸಹ ಸಲ್ಲಿಸಿದ್ದರು. ಆದರೆ ಅವರು ಕೋಲಾರವನ್ನೇ ಏಕೆ ಆಯ್ಕೆ ಮಾಡಿಕೊಂಡರು ಎಂಬುದನ್ನು ಸ್ವತಃ ಸಿದ್ದರಾಮಯ್ಯನವರೆ ವಿವರಿಸಿದ್ದಾರೆ.

“ಕೋಲಾರ ಕ್ಷೇತ್ರದಿಂದ ಆಯ್ಕೆಯಾದರೆ ಪ್ರತೀ ವಾರ ಕ್ಷೇತ್ರಕ್ಕೆ ಬರುತ್ತೇನೆ. ಜನ ಮಧ್ಯವರ್ತಿಗಳಿಲ್ಲದೆ ನನ್ನನ್ನು ಭೇಟಿ ಮಾಡಬಹುದು. ಸಾಮಾನ್ಯ ವ್ಯಕ್ತಿಯೂ ಬಂದು ನೇರವಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಇದು ನಾನು ನಡೆಸಿಕೊಂಡು ಬಂದಿರುವ ಸಂಪ್ರದಾಯ” ಎಂದು ಟ್ವೀಟ್ ಮಾಡುವ ಮೂಲಕ ಕೋಲಾರವೇ ಏಕೆ ಎಂಬುದಕ್ಕೆ ಅವರು ಉತ್ತರಿಸಿದ್ದಾರೆ.

ಕೋಲಾರದ ಜನರ ಪ್ರೀತಿ ಮತ್ತು ಅಭಿಮಾನದ ಒತ್ತಾಯಕ್ಕೆ ಮಣಿದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದಲೇ ಸ್ಪರ್ಧಿಸುವ ತೀರ್ಮಾನ ಮಾಡಿದ್ದೇನೆ. ಅಂತಿಮ ನಿರ್ಧಾರ ಪಕ್ಷದ ಹೈಕಮಾಂಡ್ ಗೆ ಸೇರಿದ್ದು. ಸಿದ್ದರಾಮಯ್ಯ ಎಂಬ ಕಾರಣಕ್ಕೆ ವಿಶೇಷ ಅವಕಾಶ, ರಿಯಾಯಿತಿ ಇಲ್ಲ ಎಂದು ಸಹ ಅವರು ಹೇಳಿದ್ದಾರೆ.

ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪವರು ಸೇರಿದಂತೆ ಕೋಲಾರ ಜಿಲ್ಲೆಯ ಪಕ್ಷದ ಎಲ್ಲ ನಾಯಕರು ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಲೇ ಇದ್ದರು.. ಎಲ್ಲ ಜಾತಿ, ಧರ್ಮಗಳ ಜನರು ಮತ್ತು ಧಾರ್ಮಿಕ ಗುರುಗಳ ಅಪೇಕ್ಷೆಯೂ ಇದೇ ಆಗಿದೆ. ಕಳೆದ ಬಾರಿ ಇಲ್ಲಿಗೆ ಭೇಟಿ ನೀಡಿದಾಗ ಅವರೆಲ್ಲರ ಜೊತೆ ಮಾತನಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೋಲಾರದಿಂದ ನಾನು ಸ್ಪರ್ಧಿಸಿದರೆ, ತಾನು ಸ್ಪರ್ಧಿಸದೆ ಬೆಂಬಲ ನೀಡುತ್ತೇನೆ ಎಂದು ಕ್ಷೇತ್ರದ ಹಾಲಿ ಶಾಸಕರಾದ ಶ್ರೀನಿವಾಸ ಗೌಡ ಅವರು ಹೇಳಿದ್ದಾರೆ. ಅವರ ಅಭಿಮಾನಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಕ್ಷೇತ್ರವೇ ಇಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ದೂರದ ಕಾರಣಕ್ಕೆ ಬಾದಾಮಿಯಿಂದ ಸ್ಪರ್ಧಿಸುವುದಿಲ್ಲವೆಂದು ತೀರ್ಮಾನಿಸಿದ್ದರೂ ಹೆಲಿಕಾಪ್ಟರ್ ಖರೀದಿ ಮಾಡಿ ಕೊಡುತ್ತೇವೆ, ನೀವು ವಾರಕ್ಕೊಂದು ಬಾರಿ ಬಂದು ಹೋಗಿ ಎಂದು ಆ ಕ್ಷೇತ್ರದ ಜನ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕೋಲಾರದಲ್ಲಿ ಬಿಜೆಪಿ ಪಕ್ಷವಿಲ್ಲ. ಆದರೂ ಬಿಜೆಪಿ ಬಗ್ಗೆ ಜನ ಎಚ್ಚರವಾಗಿರಬೇಕು. ಅವರು ಕೇವಲ ಅಲ್ಪಸಂಖ್ಯಾತರ ವಿರೋಧಿಗಳು ಮಾತ್ರ ಅಲ್ಲ, ರೈತರು, ಮಹಿಳೆಯರು, ಯುವ ಜನರ ವಿರೋಧಿಗಳು. ಜನವರಿ 23ರಂದು ಕೋಲಾರದಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ, ಅದಕ್ಕೆ ಇಡೀ ಜಿಲ್ಲೆಯ ಜನ ಬರಬೇಕು. ಆಗ ನಿಮ್ಮೊಂದಿಗೆ ಕೆಲವು ಮಹತ್ವದ ವಿಷಯಗಳನ್ನು ಹಂಚಿಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

ದಲಿತ ಚಳವಳಿಯ ಜಿಲ್ಲೆ

ರಾಜ್ಯದಲ್ಲಿ ಅತಿ ಹೆಚ್ಚು ದಲಿತ ಸಮುದಾಯವಿರುವ ಜಿಲ್ಲೆಗಳಲ್ಲಿ ಕೋಲಾರವೂ ಒಂದು. ಹಾಗಾಗಿಯೇ ಇಲ್ಲಿ ದಲಿತ ಚಳವಳಿ ಗರಿಗೆದರಿತ್ತು. ಹೋಬಳಿಗೊಂದು ವಸತಿ ಶಾಲೆ, ಹಾಸ್ಟೆಲ್ ಬೇಕು ಎಂಬ ಹಕ್ಕೊತ್ತಾಯದೊಂದಿಗೆ ಇಲ್ಲಿ ದೊಡ್ಡ ಹೋರಾಟವೇ ನಡೆದಿದೆ. ಅದರ ಪರಿಣಾಮವಾಗಿ ಜಿಲ್ಲೆಯಲ್ಲಿ ಹಲವಾರು ಶಾಲೆಗಳು- ಹಾಸ್ಟೆಲ್‌ಗಳು ಆರಂಭವಾಗಿವೆ. ’ಹೆಂಡ ಬೇಡ ಭೂಮಿ ಬೇಕು’ ಘೋಷಣೆಯಡಿ ನಾಗಸಂದ್ರದ 80ಕ್ಕೂ ಹೆಚ್ಚು ದಲಿತ ಕುಟುಂಬಗಳನ್ನು ಜೀತದಿಂದ ವಿಮುಕ್ತರಾಗಿಸಿ ಜಮೀನು ದೊರಕಿಸಿ ಚಾರಿತ್ರಿಕ ಸಾಧನೆ ಮಾಡಿದ ಹೋರಾಟ ನಾಗಸಂದ್ರ ಭೂ ಚಳವಳಿಯೆಂದೇ ಇತಿಹಾಸದಲ್ಲಿ ದಾಖಲಾಗಿದೆ.

ಅಹಿಂದ ಚಳವಳಿ

ಅಹಿಂದ ಚಳವಳಿಗೆ ಬುನಾದಿಯಾಗಿದ್ದು ಕೋಲಾರ ಜಿಲ್ಲೆ. 1998ರಲ್ಲಿ ಕೋಲಾರದಲ್ಲಿ ನಡೆದ ಬೃಹತ್ ಅಹಿಂದ ಸಮಾವೇಶ ಅದಕ್ಕೆ ಸಾಕ್ಷಿ. ಈಡಿಗ ಸಮುದಾಯಕ್ಕೆ ಸೇರಿದ್ದ ಜಾಲಪ್ಪನವರು ಕೋಲಾರದಲ್ಲಿ ಹಿಂದುಳಿದ ವರ್ಗಗಳ ಟ್ರಸ್ಟ್ ಮುಖಾಂತರ ದೇವರಾಜ ಅರಸು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಿದ್ದರು. ಅದೇ ಕೋಲಾರದಲ್ಲಿ ಅಹಿಂದ ಸಮಾವೇಶ ಸಂಘಟಿತವಾದಾಗ ಅದರ ಪೂರ್ಣ ಹೊಣೆ ಹೊತ್ತು ಜಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯನವರು ಆ ಸಮಾವೇಶ ಉದ್ಘಾಟಿಸಿ ಚಳವಳಿಗೆ ಚಾಲನೆ ನೀಡಿದ್ದರು.

ಸದ್ಯದ ರಾಜಕೀಯ ಸ್ಥಿತಿಗತಿ

2018ರಲ್ಲಿ ಭಾರೀ ಅಂತರದಿಂದ ಗೆದ್ದು 4ನೇ ಬಾರಿ ಶಾಸಕನಾಗಿರುವ ಕೆ.ಶ್ರೀನಿವಾಸಗೌಡರು ಇತ್ತೀಚಿನ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದರು. ಏಕೆ ಹೀಗೆ ಮಾಡಿದಿರಿ ಎಂಬ ಪತ್ರಕರ್ತರ ಪ್ರಶ್ನೆಗೆ “ಬಿಕಾಸ್ ಐ ಲವ್ ಕಾಂಗ್ರೆಸ್” ಎಂಬ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಸದ್ಯ ಕಾಂಗ್ರೆಸ್ ಪಾಳಯದಲ್ಲಿರುವ ಅವರು ತಾನು ಕ್ಷೇತ್ರ ಬಿಟ್ಟುಕೊಡುತ್ತೇನೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಬರಬೇಕೆಂದು ಮನವಿ ಮಾಡಿದ್ದರು.

ಜಾತಿವಾರು ಜನಸಂಖ್ಯೆ

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮುದಾಯದ ಮತಗಳು ಮೊದಲನೇ ಸ್ಥಾನದಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿ 60,000ಕ್ಕೂ ಹೆಚ್ಚು ಮತಗಳಿವೆ ಎನ್ನಲಾಗುತ್ತಿದೆ. ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದು ಸುಮಾರು 40,000 ದಷ್ಟು ಮತಗಳಿವೆ. ಒಕ್ಕಲಿಗರು 30,000ದಷ್ಟು ಇದ್ದರೆ ಕುರುಬರು 20,000ಕ್ಕೂ ಹೆಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ. ಉಳಿದ ಇತರ ಸಮುದಾಯಗಳ ಸುಮಾರು 50,000 ದಷ್ಟು ಮತಗಳಿವೆ.

ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ: ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣ ಹೀಗಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...