ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಖಾಸಗಿ ನಿವಾಸಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಲು ಯತ್ನಿಸಿದ್ದಾರೆ.
ನಾಗ್ಪುರದ ಚಿಟ್ನೀವಿಸ್ ಪಾರ್ಕ್ ಚೌಕ್ನಿಂದ ಆರಂಭವಾದ ಬೃಹತ್ ಮೋರ್ಚಾವನ್ನು ತಡೆಯಲು ಪೊಲೀಸರು ಕಟ್ಟುನಿಟ್ಟಿನ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರು. ಸರ್ಕಾರದ ಇ20 ನೀತಿ ಹಾಗೂ ನಿತಿನ್ ಗಡ್ಕರಿ ವಿರುದ್ಧ ತೀವ್ರ ಘೋಷಣೆ ಕೂಗುತ್ತಾ ಮುನ್ನುಗ್ಗಿದ ಹಲವು ಯುವ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಗರಣದ ಅನುಮಾನ: ಸಚಿವ ಗಡ್ಕರಿ ರಾಜೀನಾಮೆಗೆ ಆಗ್ರಹ
ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್, ಇ20 ಇಂಧನ ಜಾರಿಯ ಹಿಂದೆ ಭಾರಿ ಅಕ್ರಮ ಮತ್ತು ಮಧ್ಯವರ್ತಿಗಳ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಾಮಾನ್ಯ ಗ್ರಾಹಕರಿಂದ ಪೆಟ್ರೋಲ್ನ ಪೂರ್ಣ ಹಣ ಪಡೆದು, ಕಲಬೆರಕೆ ಮಾದರಿಯ ಎಥೆನಾಲ್ ಮಿಶ್ರಿತ ಇಂಧನ ನೀಡುವ ಮೂಲಕ ದೇಶದ ಜನರಿಗೆ ವಂಚಿಸಲಾಗಿದೆ. ವಾಹನ ಮಾಲೀಕರಿಂದ ಸತತ ದೂರುಗಳು ಬಂದರೂ ನಾಗ್ಪುರ ಸಂಸದ ಗಡ್ಕರಿ ಅವರು ಎಥೆನಾಲ್ ಬಳಕೆಯನ್ನು ಆಕ್ರಮಣಕಾರಿಯಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಸಪ್ಕಲ್ ದೂರಿದ್ದಾರೆ.
ಈ ಕಳಪೆ ಇಂಧನ ನೀತಿಯ ಅಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ನಿತಿನ್ ಗಡ್ಕರಿ ಮತ್ತು ದೇವೇಂದ್ರ ಫಡ್ನವಿಸ್ ನೇರ ಹೊಣೆಗಾರರು. ಪ್ರಧಾನಿಯವರು ದೇಶದ ಜನರ ಕ್ಷಮೆಯಾಚಿಸಬೇಕು ಹಾಗೂ ಗಡ್ಕರಿ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಂಸತ್ತಿನಲ್ಲಿ ಕೊಟ್ಟ ಉತ್ತರ ತೃಪ್ತಿಕರವಲ್ಲ: ಜೈರಾಮ್ ರಮೇಶ್
ಇದೇ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಜುಲೈ 29 ರಂದು ಇ20 ಇಂಧನದ ರಾಷ್ಟ್ರವ್ಯಾಪಿ ಬಿಡುಗಡೆ ಕುರಿತು ಸಂಸತ್ತಿನಲ್ಲಿ ಗಡ್ಕರಿ ನೀಡಿದ ಉತ್ತರವು ಅನುಮಾನಗಳನ್ನು ಪರಿಹರಿಸುವ ಬದಲು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವರ್ಷಗಳ ವೈಜ್ಞಾನಿಕ ಪರೀಕ್ಷೆಯ ನಂತರವೇ ಇ20 ತರಲಾಗಿದೆ ಮತ್ತು ವಾಹನಗಳಿಗೆ ಹಾನಿಯಾಗುವ ಯಾವುದೇ ಸಾಕ್ಷ್ಯಗಳಿಲ್ಲ ಎಂಬ ಸರ್ಕಾರದ ಸಮರ್ಥನೆ ವಾಸ್ತವಕ್ಕೆ ದೂರವಾಗಿದೆ ಎಂದು ಟೀಕಿಸಿದ್ದಾರೆ.


