ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ ‘ಎಸ್ಐಆರ್’ (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10 ಕೋಟಿಗೂ ಹೆಚ್ಚು) ಜೀವಂತ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಆಯೋಗ ಸಂಚು ರೂಪಿಸಿದೆ ಎಂದು ‘ಎಸ್ಐಆರ್ ವಿರೋಧಿ ಕರ್ನಾಟಕ’ ಒಕ್ಕೂಟ ಗಂಭೀರ ಆರೋಪ ಮಾಡಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ಒಕ್ಕೂಟದ ಮುಖಂಡರು, ಚುನಾವಣಾ ಆಯೋಗ ಹಂಚಿಕೊಂಡಿರುವ SIR ಮಾಹಿತಿ ಪ್ರತಿಗಳನ್ನು ಹರಿದು ಆಯೋಗದ ಸರ್ವಾಧಿಕಾರಿ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಭಾರಿ ಪ್ರಮಾಣದ ಡಿಲೀಷನ್: ಆಯೋಗಕ್ಕೆ 3 ಪ್ರಮುಖ ಪ್ರಶ್ನೆಗಳು
ರಾಜ್ಯದಲ್ಲಿ ಪ್ರತಿ ಐವರು ಮತದಾರರಲ್ಲಿ ಒಬ್ಬರು ಹಕ್ಕು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಬೆಂಗಳೂರಿನಲ್ಲೇ ಶೇ. 40 ರಷ್ಟು ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಒಕ್ಕೂಟ ಮೂರು ಪ್ರಮುಖ ಪ್ರಶ್ನೆಗಳನ್ನು ಕೇಳಿದೆ.
ಡಿಲೀಟ್ ಮಾಡಲು ಗುರುತಿಸಲಾಗಿರುವ ಮತದಾರರಲ್ಲಿ ಶೇ. 15 ರಷ್ಟು ಜನ ಕೇವಲ ವಲಸೆ ಹೋದವರು (Shifted) ಅಥವಾ ಬಿಎಲ್ಒ (BLO) ಭೇಟಿ ನೀಡಿದಾಗ ಸಿಗದವರಾಗಿದ್ದಾರೆ (Absent). ಇವರು ಸತ್ತವರೂ ಅಲ್ಲ, ನಕಲಿ ಮತದಾರರೂ ಅಲ್ಲ. ಹೀಗಿರುವಾಗ ರಾಜ್ಯದ ಒಂದು ಕೋಟಿಗೂ ಹೆಚ್ಚು ಜೀವಂತ ನಾಗರಿಕರನ್ನು ಪಟ್ಟಿಯಿಂದ ತೆಗೆದುಹಾಕುವುದು ಎಷ್ಟು ಸರಿ?
ಇನ್ಯುಮುರೇಷನ್ ಫಾರಂ 100% ವಿತರಣೆಯಾಗಿದೆ ಮತ್ತು ಡಿಜಿಟಲೀಕರಣ ಮುಕ್ತಾಯಗೊಂಡಿದೆ ಎಂದು ಆಯೋಗ ಪ್ರಕಟಿಸಿದೆ. ಆದರೆ ಇಂದಿಗೂ ಖಾಲಿ ಫಾರಂ ಹಿಡಿದು ಪರದಾಡುತ್ತಿರುವ ನೂರಾರು ಜೀವಂತ ಉದಾಹರಣೆಗಳನ್ನು ನಾವು ನೀಡಬಲ್ಲೆವು. ಇದಕ್ಕೆ ಆಯೋಗದ ಉತ್ತರವೇನು?
ಬಿಎಲ್ಒ ಆಪ್ನಲ್ಲಿರುವ ‘ಲಾಜಿಕಲ್ ಡಿಸ್ಕ್ರಿಪೆನ್ಸಿ ಸಾಫ್ಟ್ವೇರ್’ ಬಗ್ಗೆ ಬಿಎಲ್ಎ (BLA) ಗಳಿಗೆ ತರಬೇತಿ ನೀಡಿಲ್ಲವೇಕೆ? ಪ್ರಧಾನಿ ಹಾಗೂ ಗೃಹ ಸಚಿವರು ಈ ಪ್ರಕ್ರಿಯೆ ಒಳನುಸುಳುಕೋರರನ್ನು ಪತ್ತೆಹಚ್ಚಲು ನಡೆಯುತ್ತಿದೆ ಎಂದಿದ್ದಾರೆ. ಹಾಗಾದರೆ ಈ ಪ್ರಕ್ರಿಯೆಯ ಮೂಲಕ ಆಯೋಗ ಪತ್ತೆ ಹಚ್ಚಿದ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರ ಸಂಖ್ಯೆ ಎಷ್ಟು?
ದುರುದ್ದೇಶಪೂರಿತ ಹಾಗೂ ಅವೈಜ್ಞಾನಿಕ ಪ್ರಕ್ರಿಯೆ
ಕೇಂದ್ರದ ಆಡಳಿತಾರೂಢ ಬಿಜೆಪಿಯ ರಾಜಕೀಯ ಅಜೆಂಡಾ ಈಡೇರಿಸಲು ಎಸ್ಐಆರ್ ಪ್ರಕ್ರಿಯೆಯನ್ನು ಜನರ ಮೇಲೆ ಹೇರಲಾಗಿದೆ. ಇದು ಮತದಾರರ ಪಟ್ಟಿ ಪರಿಷ್ಕರಣೆಯಲ್ಲ, ಬದಲಿಗೆ ಇಡೀ ರಾಜ್ಯದ ಮತದಾರರ ಹಕ್ಕನ್ನು ಕಸಿದುಕೊಂಡು ವಿಕೃತ ಪಟ್ಟಿ ತಯಾರಿಸುವ ಹುನ್ನಾರ. ಸರಿಯಾದ ತರಬೇತಿ ಇಲ್ಲದೆ, ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಬಿಎಲ್ಒ (BLO) ಗಳನ್ನು ಬಲಿಪಶು ಮಾಡಲಾಗುತ್ತಿದೆ.
ಉದ್ಯೋಗ ಅರಸಿ, ಜೀವನೋಪಾಯಕ್ಕಾಗಿ ಬೇರೆಡೆಗೆ ವಲಸೆ ಹೋದ ಬಡ ಮತ್ತು ಮಧ್ಯಮ ವರ್ಗದವರನ್ನು ‘ಸಿಗದವರು’ ಎಂಬ ಏಕೈಕ ಕಾರಣಕ್ಕೆ ಪಟ್ಟಿಯಿಂದ ತೆಗೆದುಹಾಕುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನಕ್ಕೆ ಎಸಗುವ ಅಪಚಾರವಾಗಿದೆ.
‘ಎಸ್ಐಆರ್ ವಿರೋಧಿ ಕರ್ನಾಟಕ’ದ ಪ್ರಮುಖ ಒತ್ತಾಯಗಳು:
- ಸಮಗ್ರ ಪರಿಶೀಲನೆ: ಇದುವರೆಗೆ ನಡೆದಿರುವ ಎಸ್ಐಆರ್ ಪ್ರಕ್ರಿಯೆಯ ಪುನರ್ ಪರಿಶೀಲನೆಯಾಗಬೇಕು ಮತ್ತು ಜನಪರ ಸಂಘಟನೆಗಳಿಗೂ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕು.
- ವಲಸೆ ಹೋದವರಿಗೆ ಪರ್ಯಾಯ ವ್ಯವಸ್ಥೆ: ಬೇರೆಡೆಗೆ ಸ್ಥಳಾಂತರಗೊಂಡವರನ್ನು ಪಟ್ಟಿಯಿಂದ ತೆಗೆಯದೆ, ಅವರು ಇರುವ ಸ್ಥಳದಲ್ಲೇ ‘ಫಾರಂ 8’ ನೀಡಿ ಮತದಾನದ ಹಕ್ಕನ್ನು ವರ್ಗಾಯಿಸಿಕೊಡಬೇಕು.
- ಸಮಯಾವಕಾಶ ವಿಸ್ತರಣೆ: ಈ ಗಂಭೀರ ದೋಷಗಳನ್ನು ಸರಿಪಡಿಸಲು ಪ್ರಕ್ರಿಯೆಯ ಅವಧಿಯನ್ನು ಕನಿಷ್ಠ ಒಂದು ತಿಂಗಳು ವಿಸ್ತರಿಸಬೇಕು.
- ಸಾರ್ವಜನಿಕ ಪರಿಶೀಲನಾ ಸಭೆ: ಕರಡು ಪಟ್ಟಿ ಪ್ರಕಟವಾದ ನಂತರ ಆಯೋಗದ ಮಾರ್ಗದರ್ಶನದಂತೆ ಪ್ರತಿಯೊಂದು ಪ್ರದೇಶದಲ್ಲೂ ಸಾರ್ವಜನಿಕ ಪರಿಶೀಲನಾ ಸಭೆ ನಡೆಸಿ, ಸಾಕ್ಷ್ಯಗಳ ಆಧಾರದ ಮೇಲೆ ಹೆಸರುಗಳನ್ನು ಉಳಿಸಿಕೊಳ್ಳಬೇಕು.
ಪ್ರಸ್ತುತ ರಾಜ್ಯದಾದ್ಯಂತ ‘ನಾಗರಿಕ ಮತ ಕಾವಲು ಸಮಿತಿ’ಗಳನ್ನು ರಚಿಸಲಾಗಿದ್ದು, ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ಸುರಕ್ಷಿತಗೊಳ್ಳುವವರೆಗೆ ಈ ಹೋರಾಟ ಮುಂದುವರಿಯಲಿದ್ದು, ರಾಜ್ಯದ ಜನರ ತಾಳ್ಮೆಯನ್ನು ಆಯೋಗ ಪರೀಕ್ಷಿಸಬಾರದು. ನಾಗರಿಕ ಸಮಾಜದ ಪ್ರಸ್ತಾಪಗಳನ್ನು ಪುರಸ್ಕರಿಸದೆ, ಅಕ್ರಮ ಡಿಲೀಷನ್ ಕೈಬಿಡದಿದ್ದರೆ ಹಾಗೂ ಪ್ರಕ್ರಿಯೆಯ ಅವಧಿ ವಿಸ್ತರಿಸದಿದ್ದರೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಸಾರ್ವಜನಿಕ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ ಚುನಾವಣಾ ಆಯೋಗವನ್ನು ಎಚ್ಚರಿಸಿದೆ.


