ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ ಎಂದು ಆಂದೋಲನದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ತಮ್ಮ ತವರೂರಾದ ಛತ್ರಪತಿ ಸಂಭಾಜಿನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿನ ರಾಜಕೀಯ ವ್ಯವಸ್ಥೆಯ ಕುಸಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಇಡಿ (ED) ಮತ್ತು ಸಿಬಿಐ (CBI) ನಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ಪಕ್ಷಗಳನ್ನು ಹೇಗೆ ಒಡೆಯಲಾಗುತ್ತಿದೆ ಎಂಬುದನ್ನು ದೇಶ ನೋಡುತ್ತಿದೆ. ಚುನಾವಣೆಗಳಲ್ಲಿ ಮತಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗುತ್ತಿದೆ. ಜನರು ಇಡೀ ರಾಜಕಾರಣದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುವ ಈ ಹಂತದಲ್ಲಿ, ಮತ್ತೊಂದು ರಾಜಕೀಯ ಪಕ್ಷವನ್ನು ಕಟ್ಟಿ ನಾವೇನು ಮಾಡಲು ಸಾಧ್ಯ? ಎಂದು ದೀಪ್ಕೆ ಪ್ರಶ್ನಿಸಿದ್ದಾರೆ.
ದೇಶದ ನ್ಯಾಯಾಂಗ, ಚುನಾವಣಾ ವ್ಯವಸ್ಥೆ ಹಾಗೂ ಮಾಧ್ಯಮಗಳ ಮೇಲೂ ಸಾರ್ವಜನಿಕರು ವಿಶ್ವಾಸ ಕಳೆದುಕೊಳ್ಳುತ್ತಿರುವ ಇಂದಿನ ಆತಂಕಕಾರಿ ಪರಿಸ್ಥಿತಿಯಲ್ಲಿ, ದೇಶಕ್ಕೆ ನೈಜ ಮತ್ತು ಬಲವಾದ ಜನಾಂದೋಲನದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಅಮೆರಿಕದಲ್ಲಿ ವ್ಯಾಸಂಗ ಮಾಡಲು ತಮಗೆ ಹಣ ಎಲ್ಲಿಂದ ಬಂತು ಎಂಬ ವಿರೋಧಿಗಳ ದೂರಿನ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಭಿಜೀತ್ ದೀಪ್ಕೆ, ನನ್ನ ವಿದ್ಯಾರ್ಥಿವೇತನ (ಸ್ಕಾಲರ್ಶಿಪ್) ಮತ್ತು ಶೈಕ್ಷಣಿಕ ಸಾಲದ (Education Loan) ಪತ್ರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ನಾನು ಸದಾ ಸಿದ್ಧನಿದ್ದೇನೆ. ಆದರೆ ‘ಚಕ್ರವರ್ತಿ’ಯಂತಿರುವ ದೇಶದ ನಾಯಕರು ತಮ್ಮ ಪದವಿ ಪ್ರಮಾಣಪತ್ರವನ್ನು ದೇಶಕ್ಕೆ ತೋರಿಸಲು ಸಿದ್ಧರಿದ್ದಾರೆಯೇ? ಎಂದು ಪರೋಕ್ಷವಾಗಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಯುವ ಆಂದೋಲನದ ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚಿಸಲು ಸಿಜೆಪಿ ಸಂಸ್ಥಾಪಕರು, ವಕ್ತಾರರು ಮತ್ತು ಸಾಂಸ್ಥಿಕ ನಾಯಕರು ಪಾಲ್ಗೊಳ್ಳುವ ಎರಡು ದಿನಗಳ ಕಾರ್ಯತಂತ್ರ ಸಭೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯುದ್ದಕ್ಕೂ ಶ್ರಮಿಸಿದ 50 ಪ್ರಮುಖ ಸ್ವಯಂಸೇವಕರು ಸೇರಿದಂತೆ ಹಲವು ಪಾಲುದಾರರೊಂದಿಗೆ ಸಿಜೆಪಿ ತಂಡದ ಸದಸ್ಯರು ಸಮಾಲೋಚನೆ ನಡೆಸುತ್ತಿದ್ದಾರೆ.
ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾದ ಯಶಸ್ವಿ ಪ್ರತಿಭಟನೆಯ ನಂತರ, ಯುವಜನರಲ್ಲಿ ದೇಶದ ಭವಿಷ್ಯದ ಬಗ್ಗೆ ಹೊಸ ಆಶಾವಾದ ಮೂಡಿದೆ. ಈ ಹಿನ್ನೆಲೆಯಲ್ಲಿ, ಕಾರ್ಯತಂತ್ರ ಸಭೆಯ ಬಳಿಕ ದೇಶಾದ್ಯಂತ ಇರುವ ತನ್ನ ಸ್ವಯಂಸೇವಕರನ್ನು ತಲುಪಲು ಸಿಜೆಪಿ ಯೋಜಿಸಿದ್ದು, ಯುವಜನರ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಅರಿಯಲು ‘ಅಖಿಲ ಭಾರತ ಆಲಿಸುವಿಕೆ ಪ್ರವಾಸ’ (Nationwide Listening Tour) ಆಯೋಜಿಸಲು ನಿರ್ಧರಿಸಿದೆ.
ಈ ಕುರಿತು ಮಾತನಾಡಿದ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ಯುವಕರು ಒಗ್ಗೂಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಈ ಅಹಂಕಾರಿ ಸರ್ಕಾರದ ಸೋಲು ಸಾಬೀತುಪಡಿಸಿದೆ. ಯುವಜನರ ನಿರೀಕ್ಷೆಗಳನ್ನು ಅರ್ಥಪೂರ್ಣ ಕಾರ್ಯಗಳಾಗಿ ಪರಿವರ್ತಿಸಲು ನಮ್ಮ ತಂಡವು ಅತ್ಯುತ್ತಮ ಮಾರ್ಗವನ್ನು ರೂಪಿಸುತ್ತಿದೆ ಎಂದು ತಿಳಿಸಿದ್ದಾರೆ.


