ಸೋಮವಾರ (ಆ.3) ತಂಜಾವೂರಿನಲ್ಲಿ ನಡೆದ ಕಾವೇರಿ ಪ್ರತಿಭಟನೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಉದಯನಿಧಿ ಬಂಧನಕ್ಕೂ ಮುನ್ನ ಮಂಗಳವಾರ (ಆ.4) ಬೆಳಿಗ್ಗೆ ಪೊಲೀಸರು ಚೆನ್ನೈನ ನೀಲಾಂಕರೈ ನಿವಾಸಕ್ಕೆ ಆಗಮಿಸಿದಾಗ ಭಾರೀ ಹೈಡ್ರಾಮ ನಡೆದಿದೆ ಎಂದು ವರದಿಗಳು ಹೇಳಿವೆ.
ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಸೋಮವಾರ ತಂಜಾವೂರಿನಲ್ಲಿ ರೈತರ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಜಯ್ ವಿರುದ್ಧ ಉದಯನಿಧಿ ಮಾತನಾಡುತ್ತಿದ್ದಾಗ, ಜನಸಮೂಹದಿಂದ ನಟಿ ‘ತ್ರಿಶಾ’ ಅವರ ಹೆಸರು ಕೇಳಿಬಂದಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಉದಯನಿಧಿ ನೀಡಿದ ದ್ವಂದ್ವಾರ್ಥದ ಹೇಳಿಕೆಯು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ತಂಜಾವೂರು ಪೊಲೀಸರು, ಚೆನ್ನೈನ ನೀಲಾಂಕರೈನಲ್ಲಿರುವ ಮನೆಗೆ ಆಗಮಿಸಿ ಉದಯನಿಧಿ ಅವರನ್ನು ಬಂಧಿಸಿದ್ದಾರೆ.
ಪೊಲೀಸರು ಬಂಧಿಸಲು ಆಗಮಿಸುತ್ತಿದ್ದಂತೆ, ಡಿಎಂಕೆ ಪಕ್ಷದ ವಕೀಲರು ಮದ್ರಾಸ್ ಹೈಕೋರ್ಟ್ಗೆ ತುರ್ತು ಅರ್ಜಿ ಸಲ್ಲಿಸಿ ಬಂಧನದಿಂದ ರಕ್ಷಣೆ ನೀಡುವಂತೆ ಕೋರಿದ್ದಾರೆ. ಉದಯನಿಧಿ ಅವರು ವಿಧಾನಸಭೆ ಕಲಾಪಗಳಲ್ಲಿ ಭಾಗವಹಿಸುವುದನ್ನು ತಡೆಯಲು ಈ ಬಂಧನ ಮಾಡಲಾಗಿದೆ ಎಂದು ಡಿಎಂಕೆ ಆರೋಪಿಸಿದೆ.
ಆಡಳಿತಾರೂಢ ಟಿವಿಕೆ ಪಕ್ಷವು ಉದಯನಿಧಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರೆ, ಬಿಜೆಪಿ ಕೂಡ ಬಂಧನಕ್ಕೆ ಒತ್ತಾಯಿಸಿತ್ತು. ಇತ್ತೀಚೆಗಷ್ಟೇ ಡಿಎಂಕೆ ಶಾಸಕ ಅನಿತಾ ರಾಧಾಕೃಷ್ಣನ್ ಅವರ ಬಂಧನದ ಬೆನ್ನಲ್ಲೇ ಉದಯನಿಧಿ ಅವರ ಬಂಧನವಾಗಿದೆ.


