Homeಕರ್ನಾಟಕಎದ್ದೇಳು ಕರ್ನಾಟಕ: ಒಂದು ಅಸಾಧಾರಣ ಚುನಾವಣೆಯಲ್ಲಿ ಒಂದು ವಿಶಿಷ್ಟ ಪ್ರಯೋಗ

ಎದ್ದೇಳು ಕರ್ನಾಟಕ: ಒಂದು ಅಸಾಧಾರಣ ಚುನಾವಣೆಯಲ್ಲಿ ಒಂದು ವಿಶಿಷ್ಟ ಪ್ರಯೋಗ

- Advertisement -
- Advertisement -

ಕರ್ನಾಟಕದ ಚುನಾವಣೆಯಲ್ಲಿ ಒಂದು ವಿಶಿಷ್ಟ ಪ್ರಯೋಗ ನಡೆಯುತ್ತಿದೆ. ’ಎದ್ದೇಳು ಕರ್ನಾಟಕ’ದ ಹೆಸರಿನಲ್ಲಿ ಪ್ರಾದೇಶಿಕ ಮತ್ತು ದೇಶದ ಅನೇಕ ಸಾಮಾಜಿಕ ಸಂಘಟನೆಗಳು ಮತ್ತು ಆಂದೋಲನಗಳ ಸಮೂಹವು ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ’ಮಧ್ಯಪ್ರವೇಶ’ ಮಾಡುತ್ತಿವೆ. ಅವಶ್ಯಕತೆಯೇ ಅವಿಷ್ಕಾರದ ತಾಯಿ ಎನ್ನುತ್ತಾರೆ. ಹಾಗಾಗಿ ಈ ದೇಶದ ಇತಿಹಾಸದಲ್ಲಿ, ಈ ಅಸಾಧಾರಣ ಕಾಲದಲ್ಲಿ ಆಗುತ್ತಿರುವ, ಈ ಅಸಾಧಾರಣ ಚುನಾವಣೆ ಈ ಒಂದು ಅಸಾಮಾನ್ಯ ಕ್ರಮಕ್ಕೆ ಜನ್ಮ ನೀಡಿದೆ.

2023 ಮೇ, 10ರಂದು ನಡೆಯಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆ, ಕೇವಲ ಪ್ರಜಾಪ್ರಭುತ್ವವಲ್ಲ ನಮ್ಮ ಗಣತಂತ್ರದ ಅಸ್ತಿತ್ವವೇ ಅಪಾಯದಲ್ಲಿರುವಂತಹ ಕಷ್ಟಕರ ತಿರುವುನಲ್ಲಿ ದೇಶವಿರುವಾಗ ನಡೆಯುತ್ತಿರುವ ಚುನಾವಣೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದ ಸ್ವಧರ್ಮದ ಮೂರು ಸ್ತಂಭಗಳ (ಕರುಣೆ, ಮೈತ್ರಿ ಮತ್ತು ನಮ್ರತೆ) ಮೇಲೆ ಮಾರಣಾಂತಿಕ ದಾಳಿಯಾಗುತ್ತಿದೆ. ಪ್ರಜಾಸತ್ತಾತ್ಮಕ ಸಂಸ್ಥೆಗಳು ಆಳುವ ಶಕ್ತಿಗಳ ಮುಂದೆ ನರಳುತ್ತಿವೆ ಅಥವಾ ಸಂಪೂರ್ಣ ಶರಣಾಗತಿ ತೋರಿವೆ. ಇಂತಹ ಸನ್ನಿವೇಶದಲ್ಲಿ ಭಾರತ್ ಜೋಡೋ ಯಾತ್ರೆಯು ದೇಶಕ್ಕೆ ಒಂದು ಭರವಸೆಯ ಕಿರಣವಾಗಿ ಮೂಡಿಬಂದಿತ್ತು. ಆದರೆ ದೇಶದ ಜನಸಾಮಾನ್ಯರ ಮೇಲೆ ಅದು ಬೀರಿದ ಪರಿಣಾಮದ ಪರೀಕ್ಷೆ ಆಗುವುದಿನ್ನೂ ಬಾಕಿ ಇದೆ. ಬಿಜೆಪಿ ಮತ್ತದರ ಸಹಯೋಗಿಗಳು ಹೇಳುವುದೇನೆಂದರೆ, ಇದು ಕೇವಲ ಒಂದು ಅಲಂಕಾರಿಕ ಹೂವಾಗಿತ್ತು, ಜನರ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದು. ಹೇಗೂ, ಕಳೆದ ಹಲವಾರು ವರ್ಷಗಳಿಂದ ಆಡಳಿತ ಪಕ್ಷವು ಸಾಂವಿಧಾನಿಕ ಮೌಲ್ಯಗಳು ಮತ್ತು ನೈತಿಕತೆಯ ಎಲ್ಲ ಪ್ರಶ್ನೆಗಳಿಗೆ ಚುನಾವಣೆಗಳಲ್ಲಿ ಕಂಡ ತಮ್ಮ ವಿಜಯಗಳನ್ನು ತೋರಿಸಿ ತಿರಸ್ಕಾರದ ಉತ್ತರವನ್ನಿತ್ತಿವೆ. ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ಒಂದೇ ಮರುಸವಾಲು ಹಾಕಲಾಗುತ್ತದೆ; ಒಂದು ವೇಳೆ ನೀವೇ ಸರಿ ಇದ್ದರೆ, ಚುನಾವಣೆ ಗೆದ್ದು ತೋರಿಸಿ. ಹಾಗಾಗಿ ಕರ್ನಾಟಕದ ಚುನಾವಣೆ ಆಡಳಿತದಲ್ಲಿರುವ ಶಕ್ತಿಗಳಿಗೆ ಮತ್ತು ಸವಾಲು ಹಾಕುವವರಿಗೆ ಒಂದು ಅಗ್ನಿಪರೀಕ್ಷೆಯಾಗಿ ಎದುರಾಗಿದೆ.

ಕಳೆದ ಎರಡು ತಿಂಗಳಲ್ಲಿ ವಿರೋಧಪಕ್ಷಗಳು ದೇಶದಲ್ಲಿ ಎರಡು ದೊಡ್ಡ ಪ್ರಶ್ನೆಗಳನ್ನು ಎತ್ತಿವೆ. ಮೊದಲ ಪ್ರಶ್ನೆ, ರಾಜಕೀಯ ಶಕ್ತಿ ಮತ್ತು ಕಾರ್ಪೊರೆಟ್‌ಗಳ ಹಣದ ಚೀಲದ ನಿಕಟ ಸಂಬಂಧದ ಬಗ್ಗೆ; ರಾಹುಲ್ ಗಾಂಧಿಯವರು ಗೌತಮ್ ಅದಾನಿಯ ಹೆಸರನ್ನು ಉಲ್ಲೇಖಿಸಿ ತುಂಬಾ ಶ್ರದ್ಧೆಯಿಂದ ಈ ಪ್ರಶ್ನೆ ಎತ್ತಿದ್ದಾರೆ. ಅದಕ್ಕೆ ಉತ್ತರವಾಗಿ ಆಡಳಿತ ಪಕ್ಷವು ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿತು, ನಂತರ ಸಂಸತ್ತಿನ ನಡಾವಳಿಗಳಿಂದ ಅವರ ಮಾತುಗಳನ್ನೇ ಕಿತ್ತುಹಾಕಿದರು, ತದನಂತರ ಸಂಸತ್ತನಲ್ಲಿ ಚರ್ಚೆಯನ್ನೇ ನಿಲ್ಲಿಸಿದರು ಹಾಗೂ ಕೊನೆಯಲ್ಲಿ ಹೇಗೋ ಮಾಡಿ ರಾಹುಲ್ ಗಾಂಧಿಯನ್ನು ಸಂಸತ್ತಿನಿಂದ ಹೊರಹಾಕಿದರು. ಕಳೆದ ಕೆಲವು ವಾರಗಳಿಂದ ರಾಹುಲ್ ಗಾಂಧಿ ಪ್ರತಿಯೊಂದು ವೇದಿಕೆಯಿಂದ ಒಂದು ಪ್ರಶ್ನೆ ಕೇಳುತ್ತಿದ್ದಾರೆ; ಗೌತಮ್ ಅದಾನಿಯ ಕಂಪನಿಗಳಲ್ಲಿ ಮಾರಿಷಸ್‌ನಿಂದ ಬಂದ 20,000 ಕೋಟಿ ರೂಪಾಯಿಗಳನ್ನು ಒಂದು ಬೇನಾಮಿ ಕಂಪನಿ ಹೂಡಿಕೆ ಮಾಡಿದೆ, ಆ ದುಡ್ಡು ಯಾರದ್ದು? ಕರ್ನಾಟಕದ ಚುನಾವಣೆಗಳಲ್ಲಿಯೂ ರಾಹುಲ್ ಗಾಂಧಿ ಈ ಪ್ರಶ್ನೆ ಎತ್ತುತ್ತಿದ್ದಾರೆ.

ಕರ್ನಾಟಕದ ಚುನಾವಣೆಗಳಲ್ಲಿ ಎರಡನೆಯ ದೊಡ್ಡ ರಾಷ್ಟ್ರೀಯ ಪ್ರಶ್ನೆಯೂ ಏಳುತ್ತಿದೆ, ಅದು ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ಸಂಬಂಧಿಸಿದೆ. ಒಬಿಸಿ ಸಮುದಾಯಗಳನ್ನು ಅಪಮಾನ ಮಾಡಿದರೆಂದು ಬಿಜೆಪಿ ಯಾವಾಗ ರಾಹುಲ್ ಗಾಂಧಿ ಮೇಲೆ ಆರೋಪಿಸಿತೋ, ಅದಕ್ಕೆ ಉತ್ತರವಾಗಿ ರಾಹುಲ್ ಗಾಂಧಿಯು ನರೇಂದ್ರ ಮೋದಿಯನ್ನು ಉದ್ದೇಶಿಸಿ, ’ಒಂದು ವೇಳೆ ನಿಮಗೆ ಒಬಿಸಿ ಸಮುದಾಯದ ಬಗ್ಗೆ ಇಷ್ಟೇ ಪ್ರೀತಿಯಿದ್ದರೆ ನೀವು ಜಾತಿವಾರು ಜನಗಣತಿಯ ಅಂಕಿ ಅಂಶಗಳನ್ನು ಸಾರ್ವಜನಿಕರಿಗೆ ಏಕೆ ಬಹಿರಂಗಗೊಳಿಸುತ್ತಿಲ್ಲ’ ಎಂದು ಕೇಳಿದರು. ನಿಮ್ಮ ಸರಕಾರದ ಪ್ರಮುಖ ಅಧಿಕಾರಿಗಳಲ್ಲಿ ದಲಿತ, ಆದಿವಾಸಿ ಅಥವಾ ಹಿಂದುಳಿದ ವರ್ಗಗಳ ಅಧಿಕಾರಿಗಳ ಸಂಖ್ಯೆ ಏಕೆ ನಗಣ್ಯ ಎಂದು ಕೇಳಿದರು. ಒಟ್ಟಾರೆ, ರಾಹುಲ್ ಗಾಂಧಿ ಮಂಡಲ್ ಹೋರಾಟದ ಮೂರನೆಯ ಹಂತವನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ: ಈ ಡಬಲ್‌ ಇಂಜಿನ್‌ ಸಂಘಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಬೇಕಾಗಿದೆ: ದೇವನೂರ ಮಹಾದೇವ

ಕರ್ನಾಟಕದ ಚುನಾವಣೆಗಳು ಕೇವಲ ಈ ಎರಡೇ ವಿಷಯಗಳ ಮೇಲೆ ನಡೆಯದೇ ಇದ್ದರೂ, ಈ ಚುನಾವಣೆಗಳ ಪರಿಣಾಮವನ್ನು ಈ ಎರಡು ದೊಡ್ಡ ರಾಷ್ಟ್ರೀಯ ಅಭಿಯಾನದ ಅಗ್ನಿ ಪರೀಕ್ಷೆ ಎಂತಲೇ ನೋಡಲಾಗುವುದು. ಒಂದು ವೇಳೆ ಬಿಜೆಪಿ ಕರ್ನಾಟಕದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿ ಸಂಪೂರ್ಣ ಬಹುಮತ ಪಡೆಯಲು ಸಫಲವಾದಲ್ಲಿ, ಸ್ವಾಭಾವಿಕವಾಗಿಯೇ ಇದನ್ನು ಕೇವಲ ರಾಹುಲ್ ಗಾಂಧಿ, ಕಾಂಗ್ರೆಸ್ ಪಾರ್ಟಿ ಹಾಗೂ ಭಾರತ್ ಜೋಡೊ ಯಾತ್ರೆಯದ್ದಷ್ಟೇ ಅಲ್ಲದೇ ಆರ್ಥಿಕ ಕ್ಷಮತೆ ಮತ್ತು ಸಾಮಾಜಿಕ ನ್ಯಾಯದ ರಾಜಕಾರಣದ ಸೋಲು ಎಂಬಂತೆ ತಮ್ಮ ಗೆಲುವನ್ನು ಮುಂದಿಡಲಾಗುವುದು. ಇನ್ನೊಂದೆಡೆ, ಬಿಜೆಪಿ ಸೋಲು ಅನುಭವಿಸಿದಲ್ಲಿ, ಆಗ ಆ ಪಕ್ಷ ಆ ಸೋಲಿನಿಂದ 2024ರ ಲೋಕಸಭಾ ಚುನಾವಣೆಗಳನ್ನು ಸಂಪೂರ್ಣವಾಗಿ ಬೇರ್ಪಡಿಸುತ್ತದೆ ಹಾಗೂ ಆರ್ಥಿಕ ಮತ್ತು ಸಾಮಾಜಿಕ ರಂಗದಲ್ಲಿ ಆಗುವ ರಾಜಕೀಯ ಯುದ್ಧವು ಅತ್ಯಂತ ತೀಕ್ಷ್ಣವಾಗಿರಲಿದೆ.

ಈ ಧರ್ಮಯುದ್ಧಕ್ಕಾಗಿ ಕರ್ನಾಟಕ ತುಂಬಾ ಉಪಯುಕ್ತವಾದ ಕುರುಕ್ಷೇತ್ರವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿಯ ಪ್ರವೇಶ ದ್ವಾರ ಎಂದೇ ಬಿಂಬಿಸಲಾದ ಈ ರಾಜ್ಯವು ಸಾಂಸ್ಕೃತಿಕ ಮತ್ತು ರಾಜಕೀಯ ರೂಪದಲ್ಲಿ ಅತ್ಯಂತ ಸಮೃದ್ಧವಾದ ಪ್ರದೇಶವಾಗಿದೆ. ಇಂದು ಕರ್ನಾಟಕದಿಂದ ಹಿಜಾಬ್ ಮತ್ತು ಆಜಾನ್‌ನ ವಿಷಯಗಳಲ್ಲಿ ನಡೆಯುತ್ತಿರುವ ವಿವಾದಗಳ ಸುದ್ದಿಗಳು ಬರುತ್ತಿರಬಹುದು ಆದರೆ ಈ ರಾಜ್ಯ ಬಸವಣ್ಣನಂತಹ ಚಳವಳಿಕಾರನ ರಾಜ್ಯವಾಗಿದೆ, ಇದು ಧಾರ್ಮಿಕ ಸಹಿಷ್ಣುತೆ ಮತ್ತು ಸಾಹಿತ್ಯದ ನೆಲವಾಗಿದೆ. ಕರ್ನಾಟಕವು ದೇಶದ ರೈತ ಆಂದೋಲನ ಮತ್ತು ದಲಿತ ಚಳವಳಿಗಳಿಗೆ ಒಂದು ತೀರ್ಥಯಾತ್ರೆಯಾಗಿದೆ. ದೇಶದ ಇತರ ಭಾಗದವರಿಗೆ ಕೇವಲ ಬೆಂಗಳೂರಿನ ಐಟಿ ಉದ್ಯೋಗಗಳಷ್ಟೇ ಕಾಣಿಸುತ್ತಿರಬಹುದು ಆದರೆ ಕರ್ನಾಟಕದ ಅರ್ಥವ್ಯವಸ್ಥೆಯಲ್ಲಿ ಇಂದಿಗೂ ಕೃಷಿ, ಪಶುಪಾಲನೆ ಹಾಗೂ ಕರಕುಶಲ ಕೈಗಾರಿಕೆಗಳ ಸ್ಥಾನ ತುಂಬಾ ದೊಡ್ಡದಿದೆ.

ಈ ಚುನಾವಣೆಗಳ ಮಹತ್ವ ಮತ್ತು ಕರ್ನಾಟಕದ ಅಸಾಧಾರಣ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೇಶದ ಮತ್ತು ರಾಜ್ಯದ ಸಾಮಾಜಿಕ ಸಂಘಟನೆಗಳು ಮತ್ತು ಜನರ ಆಂದೋಲನಗಳು ಈ ಚುನಾವಣೆಗಳಲ್ಲಿ ಒಂದು ಹೊಸ ರೀತಿಯಲ್ಲಿ ಮಧ್ಯಪ್ರವೇಶಿಸಲು ತೀರ್ಮಾನಿಸಿವೆ. ಸಾಮಾನ್ಯವಾಗಿ, ಸಾಮಾಜಿಕ ಸಂಘಟನೆಗಳು ಮತ್ತು ಜನಪರ ಆಂದೋಲನಗಳು ಚುನಾವಣಾ ರಾಜಕೀಯದಿಂದ ಅಂತರ ಕಾಯ್ದುಕೊಳ್ಳುತ್ತವೆ ಅಥವಾ ಅದರಲ್ಲಿ ಒಂದಿಷ್ಟು ಸಾಂಕೇತಿಕವಾದ ಪಾತ್ರವನ್ನು ಮಾತ್ರ ನಿರ್ವಹಿಸಿ ಸಂತುಷ್ಟವಾಗುತ್ತವೆ. ಕೆಲವೊಮ್ಮೆ ಜನಪರ ಆಂದೋಲನಗಳಲ್ಲಿ ತೊಡಗಿಕೊಂಡಂತಹ ವ್ಯಕ್ತಿಗಳು ಸಂಪೂರ್ಣವಾಗಿ ಚುನಾವಣಾ ರಾಜಕೀಯದಲ್ಲಿ ಧುಮುಕುತ್ತಾರೆ; ಆದರೆ ಇಂತಹ ಪ್ರಯೋಗಗಳ ಪರಿಣಾಮ ಫಲಪ್ರದವಾಗಿದ್ದು ಕಂಡುಬಂದಿಲ್ಲ. ಕರ್ನಾಟಕದ ಚುನಾವಣೆಗಳಲ್ಲಿ ಜನಪರ ಆಂದೋಲನಗಳು ತೀರ್ಮಾನಿಸಿದ್ದೇನೆಂದರೆ, ತಾವು ಖುದ್ದಾಗಿ ಚುನಾವಣಾ ರಾಜಕೀಯದಲ್ಲಿ ಒಂದು ಪಕ್ಷವಾಗಿ ಅಥವಾ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ, ಆದರೆ ದೇಶದ ಇತಿಹಾಸದ ಈ ಕಷ್ಟಕರ ಮತ್ತು ನಿರ್ಣಾಯಕ ಘಟ್ಟದಲ್ಲಿ ಚುನಾವಣೆಗಳನ್ನು ಕೇವಲ ಪ್ರೇಕ್ಷಕರಾಗಿ ನೋಡುವುದಿಲ್ಲ ಎಂದು. ಹಿಂದಿನಂತೆ, ಚುನಾವಣೆಗಳಲ್ಲಿ ಯಾವುದೋ ಒಂದು ರಾಜಕೀಯ ಶಕ್ತಿಯನ್ನು ಸೋಲಿಸಬೇಕು ಎಂದು ಮನವಿ ಮಾಡಿಯೂ ಸಂತುಷ್ಟರಾಗುವಂತಿಲ್ಲ. ಹಾಗಾಗಿ ಈ ಬಾರಿ ಈ ಸಂಘಟನೆಗಳು ಮತ್ತು ಜನಪರ ಆಂದೋಲನಗಳು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವೊಂದಕ್ಕೆ ಒಲವು ತೋರಿಸುವುದರ ಬದಲು, ನೇರವಾಗಿ ನೆಲಮಟ್ಟದಲ್ಲಿ ಮಧ್ಯಪ್ರವೇಶ ಮಾಡುವ ತೀರ್ಮಾನ ಕೈಗೊಂಡಿವೆ.

ಇದುವೆ “ಎದ್ದೇಳು ಕರ್ನಾಟಕ”. ಇದು ಸಹಬಾಳ್ವೆ ಎಂಬ ಹೆಸರಿನಲ್ಲಿ ಆರಂಭವಾಗಿ, ರಾಜ್ಯದಲ್ಲಿ ನಡೆಯುತ್ತಿರುವ ದ್ವೇಷದ ರಾಜಕೀಯದ ವಿರುದ್ಧ ಎಲ್ಲಾ ಸಮುದಾಯಗಳಲ್ಲಿ ಸದ್ಭಾವನೆಯ ಕಲ್ಪನೆಯನ್ನು ಬೀದಿಬೀದಿಗಳಲ್ಲಿ ಬಿತ್ತುವ ಕೆಲಸ ಮಾಡಿದರು. ಈ ಅಭಿಯಾನದೊಂದಿಗೆ ಹಲವಾರು ರೀತಿಯ ಸಂಘಟನೆಗಳು ಸೇರತೊಡಗಿದವು. ಕರ್ನಾಟಕದಲ್ಲಿ ರಾಜ್ಯ ರೈತ ಸಂಘ ಎಂಬ ಹೆಸರಿನಲ್ಲಿರುವ ಹಲವು ರೈತರ ಸಂಘಟನೆಗಳು, ದಲಿತ ಸಂಘರ್ಷ ಸಮಿತಿಯ ಅನೇಕ ಬಣಗಳು, ಅಲ್ಪಸಂಖ್ಯಾತರ ರಕ್ಷಣೆಗಾಗಿ ಸಂಘರ್ಷ ನಡೆಸುತ್ತಿರುವ ಸಂಘಟನೆಗಳು ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಜನರ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಅನೇಕ ಸಂಘಟನೆಗಳು ಮತ್ತು ನಾಗರಿಕರೂ ಈ ಸಂಕಲ್ಪದ ಜೊತೆಗೂಡಿದರು. ಭಾರತ ಜೋಡೊ ಯಾತ್ರೆಯ ನಂತರ ಶುರುವಾದ ಭಾರತ್ ಜೋಡೊ ಅಭಿಯಾನವೂ ಈ ಅಭಿಯಾನದ ಭಾಗವಾಯಿತು ಹಾಗೂ ಎಲ್ಲರೂ ಸೇರಿ ಎದ್ದೇಳು ಕರ್ನಾಟಕ ಎಂಬ ಹೆಸರಿನ ಆಂದೋಲನವನ್ನು ಸ್ಥಾಪಿಸಿದರು.

ಈ ಅಭಿಯಾನದ ಅಡಿಯಲ್ಲಿ ಎರಡು ಹಂತಗಳಲ್ಲಿ ಕೆಲಸಗಳು ನಡೆಯುತ್ತಿವೆ. ಮೊದಲನೆಯದು ಸಂವಾದ ಮತ್ತು ಪ್ರಚಾರದ ಕೆಲಸ; ಅದರಲ್ಲಿ ಎದ್ದೇಳು ಕರ್ನಾಟಕದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳು ಹಾಗೂ ಕರಪತ್ರ ಇತ್ಯಾದಿಗಳ ಮೂಲಕ ಸುಳ್ಳು ಮತ್ತು ದ್ವೇಷ ರಾಜಕಾರಣದ ಅಸಲಿ ಬಣ್ಣವನ್ನು ಬಯಲಿಗೆಳೆಯುತ್ತಿದ್ದಾರೆ. ಆದರೆ ಇದರ ಜೊತೆಜೊತೆಗೇ ರಾಜ್ಯದ ಸುಮಾರು ಆಯ್ದ 100 ಸ್ಥಳಗಳಲ್ಲಿ ತಂಡಗಳನ್ನು ರಚಿಸಲಾಗಿದೆ; ಆ ತಂಡಗಳು ಅಧಿಕಾರ ಬದಲಾವಣೆಗಾಗಿ ಅಲ್ಲಿನ ಅತ್ಯಂತ ಸೂಕ್ತ ಅಭ್ಯರ್ಥಿಯ ಬೆಂಬಲದಲ್ಲಿ ಪ್ರಚಾರ-ಪ್ರಸಾರದ ಕೆಲಸ ಮಾಡುತ್ತಿವೆ. ಇಲ್ಲಿಯ ತನಕ ಬಿಜೆಪಿಯ ಅಭ್ಯರ್ಥಿಗಳ ಬೆಂಬಲದಲ್ಲಿ ಸಂಘ ಪರಿವಾರದ ಎಲ್ಲಾ ಸಂಘಟನೆಗಳು ಈ ಪಾತ್ರ ನಿರ್ವಹಿಸುತ್ತಿದ್ದವು, ಆದರೆ ಅದನ್ನು ವಿರೋಧಿಸುವ ಪಕ್ಷಗಳ ಬಳಿ ಇಂತಹ ಯಾವುದೇ ಸಾಮಾಜಿಕ ಸಂಘಟನೆಯ ಬೆಂಬಲ ಇರಲಿಲ್ಲ. ಎದ್ದೇಳು ಕರ್ನಾಟಕ ಈ ಕೊರತೆಯನ್ನು ನೀಗಿಸುವ ಒಂದು ವಿಶಿಷ್ಟ ಪ್ರಯೋಗವಾಗಿದೆ. ಈ ಪ್ರಯೋಗ ಸಫಲವಾದಲ್ಲಿ, ಈ ವರ್ಷ ರಾಜಸ್ಥಾನ, ಛತ್ತೀಸಗಢ, ಮಧ್ಯ ಪ್ರದೇಶ ಹಾಗೂ ತೆಲಂಗಾಣದಲ್ಲಿ ಆಗಲಿರುವ ವಿಧಾನಸಭಾ ಚುನಾವಣೆಗಳು ಮತ್ತು ಮುಂದಿನ ವರ್ಷದ ಲೋಕಸಭಾ ಚುನಾವಣೆಗಳಿಗೆ ಒಂದು ಹೊಸ ಮಾದರಿಯಾಗಿ ಸಾಬೀತಾಗಬಹುದು.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...