ಹಲವು ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ನೇಮಕಾತಿ ಹಗರಣದಲ್ಲಿ ಭಾಗಿಯಾಗಿ ಕಪ್ಪು ಪಟ್ಟಿಗೆ ಸೇರ್ಪಡೆಗೊಂಡಿರುವ ಗುಜರಾತ್ನ ಅಹಮದಾಬಾದ್ ಮೂಲದ ಎಜುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯೊಂದಕ್ಕೆ ಬಿಜೆಪಿ ಸರ್ಕಾರಗಳು ಹಲವು ಗುತ್ತಿಗೆಗಳನ್ನು ನೀಡುತ್ತಿರುವುದನ್ನು ಮುಂದುವರಿಸುತ್ತಿವೆ. ದಿ ವೈರ್ ಈ ಕುರಿತು ತನಿಖಾ ವರದಿ ಪ್ರಕಟಿಸಿದೆ.
ಎಜುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕ-ನಿರ್ದೇಶಕ, ಸುರೇಶ್ಚಂದ್ರ ಆರ್ಯ ‘ಸರ್ವದೇಶಿಕ್ ಆರ್ಯ ಪ್ರತಿನಿಧಿ ಸಭಾ’ ಎಂಬ ಪ್ರಮುಖ ಹಿಂದೂ ಸಂಘಟನೆಯ ಅಧ್ಯಕ್ಷನಾಗಿದ್ದಾನೆ. ಈ ಸಂಸ್ಥೆ ಆಯೋಜಿಸುವ ಹಲವು ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಪಾಲ್ಗೊಂಡಿದ್ದಾರೆ.
ಹಲವು ರಾಜ್ಯ ಸರ್ಕಾರಗಳು ಈಗಾಗಲೇ ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿವೆ. ಮುಖ್ಯವಾಗಿ, ಸುರೇಶ್ಚಂದ್ರ ಅವರ ಪುತ್ರ, ಎಜುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಆರ್ಯ 2017ರಲ್ಲಿ ಬಿಹಾರದ ನೇಮಕಾತಿ ಅಕ್ರಮ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಇಷ್ಟಾದರೂ, ಪ್ರಧಾನಿ ನೇತೃತ್ವದ ಕೇಂದ್ರ ಸರ್ಕಾರದ ಸಂಸ್ಥೆಗಳು ಮತ್ತು ಹಲವು ರಾಜ್ಯಗಳ ಬಿಜೆಪಿ ಸರ್ಕಾರಗಳು ಈ ಕಂಪನಿಗೆ ಪರೀಕ್ಷೆಗಳನ್ನು ನಡೆಸಲು ಗುತ್ತಿಗೆ ನೀಡುವುದನ್ನು ಮುಂದುವರಿಸಿವೆ.
ಉತ್ತರ ಪ್ರದೇಶ ಸರ್ಕಾರದಿಂದ ಕಪ್ಪು ಪಟ್ಟಿಗೆ
ಕಳೆದ ವಾರ ಉತ್ತರ ಪ್ರದೇಶ ಸರ್ಕಾರ ಯುಪಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆ, ಎಜುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಕಪ್ಪುಪಟ್ಟಿಗೆ ಸೇರಿಸಿದೆ.
ಜೂನ್ 20 ರಂದು, ಉತ್ತರ ಪ್ರದೇಶ ಸರ್ಕಾರವು ಎಜುಟೆಸ್ಟ್ ಅನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಫೆಬ್ರವರಿ 17 ಮತ್ತು 18 ರಂದು 63,244 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ಈ ಕಂಪನಿಗೆ ನೀಡಲಾಗಿತ್ತು. 43 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆದಿತ್ಯನಾಥ್ ಸರ್ಕಾರವು ಅಂತಿಮವಾಗಿ ಪರೀಕ್ಷೆಯನ್ನು ರದ್ದುಗೊಳಿಸಿದೆ.
ಗುಜರಾತ್ ಮೂಲದ ಈ ಕಂಪನಿ ವಿವಾದಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಹಲವು ಅಕ್ರಮಗಳಿಂದಾಗಿ ಈ ಹಿಂದೆಯೂ ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಆದರೂ, ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸುವ ಮತ್ತು ಪರೀಕ್ಷೆಗಳನ್ನು ನಡೆಸುವ ಒಪ್ಪಂದಗಳನ್ನು ಪಡೆಯುತ್ತಲೇ ಇದೆ.
ನಿಷೇಧಕ್ಕೆ ಒಂದು ದಿನ ಮುಂಚಿತವಾಗಿ, ಅಂದರೆ ಅಕ್ಟೋಬರ್ 19 2023 ರಂದು, ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿನ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಸೆಕ್ಷನ್ ಆಫೀಸರ್ ಹುದ್ದೆಗಳಿಗೆ(ಎಎಸ್ಒ) ನೇಮಕಾತಿ ಪರೀಕ್ಷೆಯನ್ನು ನಡೆಸಲು ಎಜುಟೆಸ್ಟ್ 8 ಕೋಟಿ ರೂಗಳ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಸಿಎಸ್ಐಆರ್ ಈ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಇನ್ನೊಂದು ಪ್ರಮುಖ ವಿಷಯವೆಂದರೆ ಸಿಎಸ್ಐಆರ್ನ ಅಧ್ಯಕ್ಷರು ಸ್ವತಃ ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ.
ಬಿಹಾರದಿಂದ ಕಪ್ಪು ಪಟ್ಟಿಗೆ ಸೇರ್ಪಡೆ
ಅಕ್ಟೋಬರ್ 20, 2023 ರಂದು, ಬಿಹಾರದ ಶಾಲಾ ಪರೀಕ್ಷಾ ಮಂಡಳಿಯ (ಪಾಟ್ನಾ) ಪರೀಕ್ಷಾ ನಿಯಂತ್ರಕರು ಎಜುಟೆಸ್ಟ್ ಸೊಲ್ಯೂಷನ್ಸ್ಗೆ ಪತ್ರ ಬರೆದ್ದರು. ಕಂಪನಿಯ ಯೋಜನಾ ವ್ಯವಸ್ಥಾಪಕನ “ತೀವ್ರ ನಿರ್ಲಕ್ಷ್ಯ ಧೋರಣೆ” ಮತ್ತು “ವೃತ್ತಿಪರವಲ್ಲದ ನಡವಳಿಕೆ” ಯ ಕಾರಣ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ ಸಮಿತಿಯು ನಿಮ್ಮ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸುತ್ತಿದೆ ಎಂದು ತಿಳಿಸಿದ್ದರು.
ಬಿಹಾರದ ಮಾಧ್ಯಮಿಕ ಶಿಕ್ಷಕರ ಅರ್ಹತಾ ಪರೀಕ್ಷೆ ಸೇರಿದಂತೆ ಹಲವು ಪ್ರವೇಶ ಪರೀಕ್ಷೆಯಲ್ಲಿ ಎಜುಟೆಸ್ಟ್ ಸೊಲ್ಯೂಷನ್ಸ್ ಅಕ್ರಮವೆಸಗಿತ್ತು. ಕಡಿಮೆ ಅಂಕ ಗಳಿಸಿದ್ದರೂ ಉತ್ತೀರ್ಣ ಎಂದು ಘೋಷಿಸಲಾಗಿತ್ತು. ಈ ಕಾರಣದಿಂದ ಎಜುಟೆಸ್ಟ್ ಅನ್ನು ಮೂರು ವರ್ಷಗಳ ಕಾಲ ನಿಷೇಧಿಸಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಒಪ್ಪಂದ
ಬಿಹಾರ ಕಪ್ಪು ಪಟ್ಟಿಗೆ ಸೇರಿಸುವ ಒಂದು ದಿನ ಮುಂಚಿತವಾಗಿ, ಅಂದರೆ ಅಕ್ಟೋಬರ್ 19, 2023 ರಂದು, ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿನ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಸೆಕ್ಷನ್ ಆಫೀಸರ್ ಹುದ್ದೆಗಳಿಗೆ (ಎಎಸ್ಒ) ನೇಮಕಾತಿ ಪರೀಕ್ಷೆಯನ್ನು ನಡೆಸಲು ಎಜುಟೆಸ್ಟ್ 8 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿತ್ತು. ಸಿಎಸ್ಐಆರ್ ಈ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಇನ್ನೊಂದು ಪ್ರಮುಖ ವಿಷಯವೆಂದರೆ ಸಿಎಸ್ಐಆರ್ನ ಅಧ್ಯಕ್ಷರು ಸ್ವತಃ ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ.
ಈ ಪರೀಕ್ಷೆಯಲ್ಲಿಯೂ ಅಕ್ರಮ ನಡೆದ ಹಿನ್ನೆಲೆ, ಉತ್ತರಾಖಂಡದ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಪರೀಕ್ಷೆಯಲ್ಲಿ ಹಲವು ಅಕ್ರಮಗಳು ನಡೆದರೂ, ಸಿಎಸ್ಐಆರ್ ಆರೋಪಗಳನ್ನು ನಿರಾಕರಿಸಿದೆ.
ಅಕ್ರಮಗಳ ಹಿನ್ನೆಲೆ ಹೆಸರು ಬದಲಿಸಿರುವ ಕಂಪನಿ
ಎಜುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ತಾನು 1981 ರಿಂದ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ಹೇಳಿಕೊಂಡಿದೆ. ಕಂಪನಿಯ ವೆಬ್ಸೈಟ್ ಪ್ರಕಾರ, ಇದು ಕಳೆದ 40 ವರ್ಷಗಳಲ್ಲಿ ಸಾವಿರಾರು ಪರೀಕ್ಷೆಗಳನ್ನು ನಡೆಸಿದೆ ಮತ್ತು ಇವೆಲ್ಲವೂ ದೋಷ ರಹಿತವಾಗಿವೆ.
ಎಜುಟೆಸ್ಟ್ ಕಂಪನಿಯು ಉತ್ತರ ಪ್ರದೇಶ ಅಧೀನ ಸೇವೆಗಳ ಆಯ್ಕೆ ಆಯೋಗ, ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಭಾರತ್ ಎಲೆಕ್ಟ್ರಾನಿಕ್ಸ್, ಛತ್ತೀಸ್ಗಢ ಸರ್ಕಾರ, ಹರಿಯಾಣ ಎಸ್ಎಸ್ಸಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ತಿರುಚಿರಾಪಳ್ಳಿ), ಪವರ್ ಸಿಸ್ಟಮ್ ಆಪರೇಷನ್, ರಾಜಸ್ಥಾನ ಕೇಂದ್ರ ವಿಶ್ವವಿದ್ಯಾಲಯ, ಆಯಿಲ್ ಇಂಡಿಯಾ ಲಿಮಿಟೆಡ್ನಂತಹ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ಕೆಲಸ ಮಾಡಿದೆ.
ಈ ಮೊದಲು ಎಜುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಕಾನ್ಫಿಸೆಕ್ ಪ್ರೈವೇಟ್ ಲಿಮಿಟೆಡ್ ಎಂದು ಎಂದು ಕರೆಯಲಾಗುತ್ತಿತ್ತು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ತೊಡಗಿಸಿಕೊಂಡ ನಂತರ, ಅದು ತನ್ನ ಹೆಸರನ್ನು ಬದಲಿಸಿಕೊಂಡಿದೆ.
2017ರಲ್ಲಿ ಕಂಪನಿಯ ನಿರ್ದೇಶಕನ ಬಂಧನ
2017ರಲ್ಲಿ ಬಿಹಾರ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಬಿಎಸ್ಎಸ್ಸಿ) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಬಿಹಾರ ಪೊಲೀಸರು ಬಿಎಸ್ಎಸ್ಸಿ ಅಧ್ಯಕ್ಷ ಮತ್ತು ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಜೊತೆಗೆ ಪ್ರಶ್ನೆ ಪತ್ರಿಕೆಯನ್ನು ಮುದ್ರಿಸಿದ ಹಳೆಯ ಮೂಲ ಹೆಸರಿನ ಕಂಪನಿ ಕಾನ್ಫಿಸೆಕ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ವಿನೀತ್ ಆರ್ಯನನ್ನು ಫೆಬ್ರವರಿ 2017 ರಲ್ಲಿ ಬಂಧಿಸಿದ್ದರು. ನಂತರ ಆತ ಸ್ವಲ್ಪ ಸಮಯದ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಈಗಲೂ ಹಲವು ಆರೋಗ್ಯದ ಸುಳ್ಳುಗಳನ್ನು ಹೇಳಿ ಜಾಮೀನಿನ ಮೇಲೆ ಇದ್ದಾನೆ.
ಬಿಎಸ್ಎಸ್ಸಿ ಪೇಪರ್ ಸೋರಿಕೆ ಹಗರಣವು ಕಾನ್ಫಿಸೆಕ್ ಪ್ರೈವೇಟ್ ಲಿಮಿಟೆಡ್ಗೆ ಬಹಳಷ್ಟು ಅಪಖ್ಯಾತಿ ತಂದಿತು. ವಿನೀತ್ ಪಾತ್ರದ ಬಗ್ಗೆ ದೇಶದ ಪ್ರಮುಖ ನಗರಗಳಲ್ಲಿ ಹಲವು ಸುದ್ದಿಗಳು ಪ್ರಕಟವಾಗಿದ್ದವು. ಇದಾದ ನಂತರದಲ್ಲಿ ಆಗಸ್ಟ್ 23,2018 ರಂದು ನೀಡಲಾದ ಜಿಎಸ್ಟಿ ದಾಖಲೆಯಲ್ಲಿ, ಕಂಪನಿಯ ಹೆಸರನ್ನು ಎಜುಟೆಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಬದಲಾಯಿಸಲಾಗಿದೆ.
ಎಜುಟೆಸ್ಟ್ ಸೊಲ್ಯೂಷನ್ಸ್ ಕಂಪನಿಯ ಸಂಸ್ಥಾಪಕರು ಹಮ್ಮಿಕೊಳ್ಳುತ್ತಿರುವ ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಕಿಶನ್ ರೆಡ್ಡಿ, ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳುತ್ತಿರುವುದು ಅಕ್ರಮಗಳಲ್ಲಿ ಬಿಜೆಪಿ ಸರ್ಕಾರಗಳ ಪರೋಕ್ಷ ಸಹಕಾರವಿದೆ ಎಂದು ಹೇಳಲಾಗುತ್ತಿದೆ.
ಕೃಪೆ : ದಿ ವೈರ್
ಇದನ್ನೂ ಓದಿ : ಕೋಟಾದಲ್ಲಿ ಮತ್ತೋರ್ವ ನೀಟ್ ಆಕಾಂಕ್ಷಿ ಆತ್ಮಹತ್ಯೆಗೆ ಶರಣು; ಜನವರಿ ನಂತರ 12ನೇ ಪ್ರಕರಣ


