ಶತಮಾನಗಳಷ್ಟು ಹಳೆಯದಾದ ಮಸೀದಿಗಳನ್ನು ದೇವಾಲಯ ಎಂದು ಪ್ರತಿಪಾದಿಸುವ ಮೂಲಕ ಕೆಳ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಲಾಗುತ್ತಿರುವ ಮತ್ತು ಅದನ್ನು ಪರಿಗಣಿಸುತ್ತಿರುವ ಬಗ್ಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಎಂ) ಪಾಲಿಟ್ ಬ್ಯೂರೋ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1991 ಅನ್ನು ಎತ್ತಿಹಿಡಿಯುವ ಮೂಲಕ ಅಂತಹ ದಾವೆಗಳನ್ನು ನಿಲ್ಲಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸದಿರುವುದು ದುರದೃಷ್ಟಕರ ಎಂದು ಪಕ್ಷವೂ ಹೇಳಿದೆ. ಮಸೀದಿಗಳ ವಿರುದ್ಧ
ಈ ಬಗ್ಗೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಪಕ್ಷದ ಪಾಲಿಟ್ ಬ್ಯೂರೊ, 2019ರ ಬಾಬರಿ ಮಸೀದಿ ಒಡೆದ ವಿವಾದದ ಕುರಿತು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ನ ಐವರು ಸದಸ್ಯರ ಪೀಠವು ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ-1991 ರ ಸಿಂಧುತ್ವವನ್ನು ಮತ್ತು ಅದರ ಜಾರಿಯನ್ನು ಸ್ಪಷ್ಟವಾಗಿ ಎತ್ತಿಹಿಡಿದಿದೆ. ಈ ನಿರ್ದೇಶನದ ಪ್ರಕಾರ, ಕಾಯಿದೆಯನ್ನು ಉಲ್ಲಂಘಿಸುವ ಕಾನೂನು ಪ್ರಕ್ರಿಯೆಗಳಿಗೆ ತಡೆ ಹಾಕಲು ಮಧ್ಯಪ್ರವೇಶಿಸುವುದು ಸುಪ್ರೀಂ ಕೋರ್ಟ್ನ ಜವಾಬ್ದಾರಿಯಾಗಿದೆ ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಾರಣಾಸಿ ಮತ್ತು ಮಥುರಾ ನಂತರ, ಸಂಭಾಲ್ನಲ್ಲಿ, ಕೆಳ ನ್ಯಾಯಾಲಯವು 16 ನೇ ಶತಮಾನದ ಮಸೀದಿಯ ಸಮೀಕ್ಷೆಗೆ ಆದೇಶ ನೀಡಿತು. ಅದು ಹಿಂಸಾಚಾರಕ್ಕೆ ಕಾರಣವಾಗಿದ್ದು, ನಾಲ್ವರು ಮುಸ್ಲಿಂ ಯುವಕರನ್ನು ಕೊಲ್ಲಲಾಯಿತು ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ. ಅಜ್ಮೀರ್ ಷರೀಫ್ ದರ್ಗಾಕ್ಕೆ ಸಂಬಂಧಿಸಿದಂತೆ ಅಜ್ಮೀರ್ನ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಇದೇ ರೀತಿಯ ಅರ್ಜಿಯನ್ನು ಪಕ್ಷವು ಉಲ್ಲೇಖಿಸಿದೆ.
ಇಷ್ಟೆ ಅಲ್ಲದೆ, ನೆರೆಯ ಬಾಂಗ್ಲಾದೇಶದ ಪರಿಸ್ಥಿತಿಯ ಕುರಿತು, ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪಕ್ಷವು ಪುನರುಚ್ಚರಿಸಿದೆ. ಈ ನಿಟ್ಟಿನಲ್ಲಿ ಅಲ್ಲಿನ ಆಡಳಿತವು ಇಸ್ಲಾಮಿ ಮೂಲಭೂತವಾದಿ ಶಕ್ತಿಗಳ ಚಟುವಟಿಕೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಸಿಪಿಎಂ ಹೇಳಿದೆ. ಮಸೀದಿಗಳ ವಿರುದ್ಧ
ಅದೇ ಸಮಯದಲ್ಲಿ, ಭಾರತದಲ್ಲಿ ಬಿಜೆಪಿ-ಆರ್ಎಸ್ಎಸ್ ಮತ್ತು ಹಿಂದುತ್ವ ಸಂಘಟನೆಗಳ ಪ್ರಯತ್ನಗಳನ್ನು ಪೊಲಿಟ್ ಬ್ಯೂರೋ ಖಂಡಿಸಿದ್ದು, “ಬಾಂಗ್ಲಾದೇಶದ ವಿಚಾರವನ್ನು ಎತ್ತಿಕೊಂಡು ಪ್ರಚೋದಿಸಲು ಅವರು ಪ್ರಯತ್ನಿಸುತ್ತಿದ್ದು, ಅಂತಹ ವಿಧಾನವು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗೆ ಸಹಾಯವಾಗುವುದಿಲ್ಲ” ಎಂದು ಪಕ್ಷವು ಹೇಳಿದೆ.
ಎರಡೂ ದೇಶಗಳಲ್ಲಿನ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಉಭಯ ದೇಶಗಳ ಜನರ ಹಿತಾಸಕ್ತಿಗಳಿಗೆ ಹಾನಿ ಮಾಡುವ ಎಲ್ಲಾ ರೀತಿಯ ಕೋಮುವಾದದ ವಿರುದ್ಧ ತೀವ್ರವಾಗಿ ಹೋರಾಟ ಮಾಡುವಂತೆ ಸಿಪಿಐಎಂ ಕರೆ ನೀಡಿದೆ.
ಅಷ್ಟೆ ಅಲ್ಲದೆ, ವಯನಾಡಿನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತ ದುರಂತದ ಸಂತ್ರಸ್ತರಿಗೆ ಕೇರಳಕ್ಕೆ ಸರಿಯಾದ ನೆರವನ್ನು ನಿರಾಕರಿಸುವಲ್ಲಿ ಸರ್ಕಾರದ ನಿರ್ದಯ ಉದಾಸೀನತೆಯನ್ನು ಅದು ಕಟುವಾಗಿ ಟೀಕಿಸಿದೆ. “ತಕ್ಷಣದ ಪರಿಹಾರಕ್ಕಾಗಿ 214.68 ಕೋಟಿ ರೂ. ಮತ್ತು ಸಮಗ್ರ ಚೇತರಿಕೆ ಮತ್ತು ಪುನರ್ನಿರ್ಮಾಣಕ್ಕಾಗಿ 2,319.1 ಕೋಟಿ ರೂ.ಗಾಗಿ ಕೇರಳ ತುರ್ತು ಮನವಿ ಮಾಡಿದ್ದರೂ, ಕೇಂದ್ರವು ನಾಲ್ಕು ತಿಂಗಳು ಕಳೆದರೂ ಅನುದಾನವನ್ನು ಅನುಮೋದಿಸಲು ವಿಫಲವಾಗಿದೆ” ಎಂದು ಪಕ್ಷವೂ ಹೇಳಿದೆ.
“ಭೂಕುಸಿತವನ್ನು ‘ತೀವ್ರ ಸ್ವರೂಪದ ವಿಪತ್ತು’ ಎಂದು ವರ್ಗೀಕರಿಸಲು ನಿರಾಕರಣೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ಸಾಲವನ್ನು ಮನ್ನಾ ಮಾಡಲು ಇಷ್ಟವಿಲ್ಲದಿರುವುದು ಸಹ ತೀವ್ರವಾದ ಅನ್ಯಾಯವನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಇದು ಅಮಾನವೀಯ ವಿಧಾನವಾಗಿದ್ದು, ಬಿಕ್ಕಟ್ಟಿನ ಸಮಯದಲ್ಲಿ ಫೆಡರಲ್ ಬೆಂಬಲದ ತತ್ವಗಳನ್ನು ದುರ್ಬಲಗೊಳಿಸುತ್ತದೆ” ಎಂದು ಸಿಪಿಎಂ ಹೇಳಿದೆ. ರಾಜ್ಯ ಸರ್ಕಾರ ಹೇಳಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಪಾಲಿಟ್ ಬ್ಯೂರೋ ಕೇಂದ್ರಕ್ಕೆ ಮನವಿ ಮಾಡಿದೆ.
ಪಕ್ಷದ ಹೇಳಿಕೆಯಲ್ಲಿ, ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ರೈತರ ಮೇಲಿನ ಪೊಲೀಸರ ದಬ್ಬಾಳಿಕೆಯನ್ನು ಖಂಡಿಸಿದೆ. ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಮತ್ತು ಇತರ ಸಂಘಟನೆಗಳ ಸುಮಾರು 150 ಮುಖಂಡರು ಮತ್ತು ಕಾರ್ಯಕರ್ತರನ್ನು ಜೈಲಿಗೆ ಹಾಕಲಾಗಿದೆ ಎಂದು ಪಕ್ಷ ತಿಳಿಸಿದೆ. ಬಂಧಿತ ರೈತರು ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಹಲವು ಕಾರ್ಯಕರ್ತರ ಗೃಹಬಂಧನ ನಡೆಯುತ್ತಿದೆ. ಹೋರಾಟದ ಮುಂಚೂಣಿಯಲ್ಲಿದ್ದ ಮಹಿಳೆಯರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಆಘಾತಕಾರಿಯಾಗಿದೆ ಎಂದು ಪಕ್ಷವೂ ಹೇಳಿದೆ.
“…ಈ ಹೋರಾಟಕ್ಕೆ ಸಿಪಿಐ(ಎಂ) ಸಂಪೂರ್ಣ ಬೆಂಬಲ ನೀಡುತ್ತದೆ. ದಬ್ಬಾಳಿಕೆಯನ್ನು ಕೂಡಲೇ ನಿಲ್ಲಿಸಬೇಕು ಮತ್ತು ಸರಕಾರವು ನ್ಯಾಯಯುತ ಬೇಡಿಕೆಗಳನ್ನು ಒಪ್ಪಿಕೊಂಡು ಅವುಗಳನ್ನು ಜಾರಿಗೊಳಿಸಬೇಕು ಎಂದು” ಎಂದು ಪಕ್ಷ ಹೇಳಿದೆ. ನವದೆಹಲಿಯಲ್ಲಿ ನಡೆದ ಪಾಲಿಟ್ ಬ್ಯೂರೋ ಸಭೆಯ ನಂತರ ಈ ಹೇಳಿಕೆಯನ್ನು ನೀಡಲಾಗಿದೆ.
ಇದನ್ನೂ ಓದಿ: ‘ಪಾಶ್ ಕಾಯಿದೆ’ಯಡಿ ರಾಜಕೀಯ ಪಕ್ಷಗಳನ್ನು ಸೇರಿಸುವಂತೆ ಕೋರಿ ಅರ್ಜಿ; ಇಸಿಐ ಸಂಪರ್ಕಿಸುವಂತೆ ಸೂಚಿಸಿದ ಸುಪ್ರೀಂ
‘ಪಾಶ್ ಕಾಯಿದೆ’ಯಡಿ ರಾಜಕೀಯ ಪಕ್ಷಗಳನ್ನು ಸೇರಿಸುವಂತೆ ಕೋರಿ ಅರ್ಜಿ; ಇಸಿಐ ಸಂಪರ್ಕಿಸುವಂತೆ ಸೂಚಿಸಿದ ಸುಪ್ರೀಂ


