ಪ್ರತಿ ವರ್ಷ ರಾಜ್ಯ ಸರ್ಕಾರ ದೇವರಾಜ ಅರಸು ಹೆಸರಿನಲ್ಲಿ ಕೊಡುತ್ತಿದ್ದ ಪ್ರಶಸ್ತಿಯನ್ನು ಈ ಬಾರಿ ವರ್ಷ ಮುಗಿದರೂ ಈ ಸರ್ಕಾರ ನೆನಪಿಸಿಕೊಂಡಂತಿಲ್ಲ. ಇದಕ್ಕಾಗಿ ಅದು ಕೊಡುತ್ತಿರುವ ಕಾರಣ, ರಾಜ್ಯದಲ್ಲಿ ನೆರೆಹಾವಳಿಯಿಂದಾಗಿ ಪ್ರಶಸ್ತಿ ಕೊಡಲು ಸರ್ಕಾರದ ಬಳಿ ಸಮಯ ಮತ್ತು ಹಣವಿಲ್ಲವಂತೆ. ಅದು ಎಷ್ಟು ಎಂದರೆ ಕೇವಲ ಐದು ಲಕ್ಷ…!
ಪ್ರತಿ ವರ್ಷ ದೇವರಾಜು ಅರಸುರವರ ಜನ್ಮದಿನವಾದ ಆಗಸ್ಟ್ 20ರಂದು ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತಿತ್ತು. ಕಳೆದ ಬಾರಿ ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಸಮಿತಿ ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗುಣಿಕಾರರಿನ್ನು ಆರಿಸಿತ್ತು. ಅಟಲ್ ಬಿಹಾರಿ ವಾಜಪೇಯಿಯವರು ನಿಧನದ ಕಾರಣದಿಂದ ಡಿಸೆಂಬರ್ನಲ್ಲಿ ಪ್ರಶಸ್ತಿ ನೀಡಲಾಗಿತ್ತು. ಈ ಮೊದಲು ಬಿ.ಎ ಮೋಹಿದ್ದೀನ್, ದಿನೇಶ್ ಅಮೀನ್ ಮಟ್ಟು, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮಹತ್ವದ ಸಾಧಕರಿಗೆ ಈ ಪ್ರಶಸ್ತಿ ಒಲಿದಿದೆ.
ಈ ಬಾರಿ ಆಗಸ್ಟ್ ಕಳೆದು ನವೆಂಬರ್ ಮುಗಿಯುತ್ತಾ ಬಂದಿದೆ. ಇನ್ನೊಂದು ತಿಂಗಳಲ್ಲಿ ಈ ವರ್ಷವೆ ಮುಗಿದುಬಿಡಲಿದೆ. ಆದರೂ ಸರ್ಕಾರ ಪ್ರಶಸ್ತಿ ನೀಡುವುದನ್ನು ಮರೆತಿದೆಯೋ ಅಥವಾ ಬೇಕಂತಲೇ ವಿಳಂಬ ಮಾಡುತ್ತಿದೆಯೋ?

ಈ ವರ್ಷ ಜುಲೈ 26 ರಂದೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತಲ್ಲದೇ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದರು. ಆಗಸ್ಟ್ ಅಂತ್ಯದೊಳಗೆ ಸಚಿವ ಸಂಪುಟವನ್ನು ರಚಿಸಿದರು. ಸೆಪ್ಟಂಬರ್, ಅಕ್ಟೋಬರ್, ನವೆಂಬರ್ ಮೂರು ತಿಂಗಳು ಕಳೆದರೂ ಅವರ್ಯಾರು ಈ ಪ್ರಶಸ್ತಿಯ ಬಗ್ಗೆ ಸೊಲೆತ್ತಿಲ್ಲ.
ಈ ಕುರಿತು ಮಾಹಿತಿ ಪಡೆಯಲು ಹಿಂದುಳಿದ ವರ್ಗಗಳ ಇಲಾಖೆಯ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಿಸನ್ರವರನ್ನು ಸಂಪರ್ಕಿಸಿಲಾಯಿತು. ಆಗ ಅವರು “ಕುವೆಂಪು ವಿ.ವಿಯ ನಿವೃತ್ತ ಕುಲಪತಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು ಸಮಿತಿಯು ಹೆಸರನ್ನು ಅಂತಿಮಗೊಳಿಸಿದೆ. ಆದರೆ ಫೈಲ್ ಅನುಮೋದನೆಗಾಗಿ ನಮ್ಮ ಬಳಿ ಇನ್ನೂ ಬಂದಿಲ್ಲ” ಎನ್ನುತ್ತಾರೆ.
ಸರ್ಕಾರದ ಈ ಧೋರಣೆಯು ಭೂಸುಧಾರಣೆಯ ಶಿಲ್ಪಿ, ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ನೇತಾರ ಎಂದೇ ಪ್ರಖ್ಯಾತರಾದ ದೇವರಾಜು ಅರಸುರವರ ಬಗ್ಗೆ ಗೌರವವಿಲ್ಲವೆಂಬುದನ್ನು ತೋರಿಸುತ್ತದೆ.
ಈ ಕುರಿತು ನಾನುಗೌರಿ.ಕಾಂ ವತಿಯಿಂದ ಸಂಬಂಧಪಟ್ಟ ಹೋರಾಟಗಾರನ್ನು ಮಾತನಾಡಿಸಿತು. ಅವರು ಏನು ಹೇಳಿದ್ದಾರೆ ಇಲ್ಲಿದೆ ನೋಡಿ.
ಡಾ. ಸಿ.ಎಸ್ ದ್ವಾರಕನಾಥ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು.

“ನೆರೆಯ ಕಾರಣ ಹೇಳಿ ಪ್ರಶಸ್ತಿ ನೀಡುವುದನ್ನು ತಪ್ಪಿಸುವುದಾದರೆ ತಪ್ಪಿಸಲಿ. ಅದರೆ ಬಹಳಷ್ಟು ಪ್ರಶಸ್ತಿಗಳನ್ನು ಈಗಾಗಲೇ ಪ್ರಕಟ ಮಾಡಿ, ದೇವರಾಜ್ ಅರಸ್ ಅವರ ಪ್ರಶಸ್ತಿಯನ್ನು ಮಾತ್ರ ತಪ್ಪಿಸುತ್ತಾರೆ ಅಂದರೆ ಏನರ್ಥ..? ಮೊನ್ನೆಯಷ್ಟೇ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿದರು. ಆದರೆ ದೇವರಾಜ್ ಅರಸ್ ಅವರ ಪ್ರಶಸ್ತಿ ಮಾತ್ರ ತಪ್ಪಿಸಿರುವುದರ ಹಿಂದಿನ ಹುನ್ನಾರವಾದರೂ ಏನು..? ಎಲ್ಲಾ ಪ್ರಶಸ್ತಿಗಳನ್ನು ನೀಡಿ, ಕೇವಲ ಅರಸ್ ಅವರ ಪ್ರಶಸ್ತಿ ಮಾತ್ರ ನೀಡದಿರುವುದು ಆಶ್ಚರ್ಯಕರ ಸಂಗತಿಯಾಗಿದೆ.
==========
ಕೆ.ಎಸ್ ಶಿವರಾಂ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ, ಮೈಸೂರು.

“ದೇವರಾಜ್ ಅರಸ್ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ತಳ ಸಮುದಾಯದವರಿಗೆ ಅನೇಕ ಸವಲತ್ತುಗಳನ್ನು ನೀಡಿ, ಮುಖ್ಯವಾಹಿನಿಗೆ ತಂದಂತವರು ಅರಸ್. ಆದರೆ ಬಿಜೆಪಿಗೆ ಸಮಾನತೆ, ಮತ್ತು ಸಾಮಾಜಿಕ ನ್ಯಾಯ ಬೇಕಾಗಿಲ್ಲ. ಬಿಜೆಪಿ ಸರ್ಕಾರ ಹಿಂದುತ್ವ, ಕೋಮುಶಕ್ತಿಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದಿದೆ. ಹಾಗಾಗಿಯೇ ಹಿಂದುಳಿದ ವರ್ಗದ ಹಿತಾಸಕ್ತಿಗೆ ದುಡಿದವರ ಬಗ್ಗೆ ಬಿಜೆಪಿ ತಾತ್ಸಾರ ಮಾಡುತ್ತಿದೆ. ಸಾವರ್ಕರ್ ಅಂತವರನ್ನು ವಿಜೃಂಭಿಸಿ, ಸಾಮಾಜಿಕ ನ್ಯಾಯದ ಪರ ದುಡಿದ ಅಂಬೇಡ್ಕರ್ ಮತ್ತು ಅರಸ್ರಂತವರನ್ನು ಜನಮಾನಸದಿಂದ ತೆಗೆದು ಹಾಕಲು ಬಿಜೆಪಿ ಸರ್ಕಾರ ಹೀಗೆ ಮಾಡುತ್ತಿದೆ. ಆರ್ಎಸ್ಎಸ್ನ್ನು ವಿಜೃಂಭಿಸಲು ಹೀಗೆಲ್ಲಾ ಮಾಡ್ತಿದ್ದಾರೆ. ಇದೆಲ್ಲಾ ಬಿಜೆಪಿ ರಚಿಸಿರುವ ಹುನ್ನಾರ. ಈ ಕೂಡಲೇ ದೇವರಾಜ್ ಅರಸ್ ಪ್ರಶಸ್ತಿ ಪ್ರಕಟ ಮಾಡಬೇಕು, ಇಲ್ಲದಿದ್ದರೆ ಹೋರಾಟ ಅನಿವಾರ್ಯ.
================
ರಮೇಶ್ ಅಭಿಮನ್ಯು, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರು ಮತ್ತು ಪತ್ರಕರ್ತರು
“ದೇವರಾಜ್ ಅರಸ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೋದ ಸಿಎಂ ಯಡಿಯೂರಪ್ಪನವರು ಪ್ರಶಸ್ತಿ ಬಗ್ಗೆ ಮಾತನಾಡಲೇ ಇಲ್ಲ. ಹಿಂದುಳಿದ ಹಾಗೂ ತಳ ಸಮುದಾಯದ ನಾಯಕನನ್ನು ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಇದನ್ನು ನಾವು ಖಂಡತುಂಡವಾಗಿ ಖಂಡಿಸುತ್ತೇವೆ. ಬಿಜೆಪಿ ಸರ್ಕಾರ ಕೇವಲ ಅಧಿಕಾರ, ಆಪರೇಷನ್ ಕಮಲ ಮಾಡುವುದರಲ್ಲಿ ಬ್ಯುಸಿಯಾಗಿದೆ. ಹಿಂದುಳಿದ ಸಮುದಾಯಗಳನ್ನು ಮರೆತಿದ್ದಾರೆ. ದೇವರಾಜ್ ಅರಸ್ ಅವರಂತಹ ಮಹಾನ್ ನಾಯಕನನ್ನು ಆದರ್ಶವಾಗಿಟ್ಟುಕೊಂಡು ಬಿಜೆಪಿ ಅಧಿಕಾರ ನಡೆಸಬೇಕಿತ್ತು. ಆದರೆ ಅಂತಹ ನಾಯಕನಿಗೆ ಬಿಜೆಪಿ ಅವಮಾನ ಮಾಡಿದೆ”.


