ಅಸ್ಸಾಂನಲ್ಲಿ ಜಾರಿ ಮಾಡಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಯನ್ನು ದೇಶದಾದ್ಯಂತ ಜಾರಿಗೆ ತರಲಾಗುವುದು. ಯಾವುದೇ ಧರ್ಮದವರು ಆತಂಕ ಪಡುವ ಅಗತ್ಯವಿಲ್ಲ. ಇದು ಧರ್ಮಕ್ಕೆ ಸಂಬಂಧಪಟ್ಟಿದ್ದಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿದರು.
ಚಳಿಗಾಲದ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಎನ್ಆರ್ಸಿ, ಒಂದು ದೇಶದಲ್ಲಿರುವ ಪೌರರನ್ನು ಪಟ್ಟಿ ಮಾಡುವ ಪ್ರಕ್ರಿಯೆ ಅಷ್ಟೇ ಆಗಿದೆ. ದೇಶದಾದ್ಯಂತ ಎನ್ಆರ್ಸಿ ಜಾರಿಗೆ ತರಲಾಗುವುದು. ಭಾರತೀಯ ನಾಗರಿಕರ ಪಟ್ಟಿಯ ಅಡಿಯಲ್ಲಿ ಎಲ್ಲರ ಮಾಹಿತಿ ಪಡೆಯುವುದು ಮತ್ತು ಒಗ್ಗೂಡಿಸಲಾಗುವುದು. ಅಸ್ಸಾಂನಲ್ಲಿ ಮತ್ತೊಮ್ಮೆ ಎನ್ಆರ್ಸಿ ಪಟ್ಟಿ ಸಿದ್ಧಪಡಿಸಲಾಗುವುದು. ಯಾವುದೇ ಧರ್ಮದ ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಇನ್ನು ದೇಶದಾದ್ಯಂತ ಎನ್ಆರ್ಸಿ ಜಾರಿ ಮಾಡುವ ಕೇಂದ್ರದ ನಿರ್ಧಾರಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ಕೋಲ್ಕತ್ತಾದಿಂದ 200 ಕಿ.ಮೀ ದೂರವಿರುವ ಸಗರದಿಘಿಯ ರ್ಯಾಲಿಯಲ್ಲಿ ಮಾತನಾಡಿದ ಅವರು, ನಾಲ್ಕೈದು ಮಂದಿ ಎನ್ಆರ್ಸಿ ಹೆಸರಲ್ಲಿ ರಾಜ್ಯದ ಜನತೆಗೆ ತೊಂದರೆ ಕೊಡುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಭಾರತ್ ಪೆಟ್ರೋಲಿಯಂ ಖಾಸಗೀಕರಣ: ಕೇಂದ್ರದ ನಿರ್ಧಾರದ ವಿರುದ್ಧ ನೌಕರರಿಂದ ಬೃಹತ್ ಮುಷ್ಕರಕ್ಕೆ ಸಿದ್ದತೆ
ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದ ಎಲ್ಲಾ ಭಾಗಗಳನ್ನು ಅಸ್ಸಾಂನಂತೆ ಎಂದು ತಿಳಿದುಕೊಂಡಿದ್ದಾರೆ. ಎಲ್ಲಾ ಪ್ರದೇಶಗಳ್ನೂ ಅಸ್ಸಾಂಗೆ ಹೋಲಿಸುತ್ತಿದ್ದಾರೆ. ಎನ್ಆರ್ಸಿ ಹೆಸರಿನಲ್ಲಿ ಬೇರೆ ಧರ್ಮೀಯರನ್ನು ದೇಶದಿಂದ ಹೊರಗೆ ಹಾಕುವ ಹುನ್ನಾರ ನಡೆಯುತ್ತಿದೆ. ನನ್ನ ರಾಜ್ಯದಲ್ಲಿ ಎನ್ಆರ್ಸಿ ಜಾರಿಗೆ ಬಿಡುವುದಿಲ್ಲ. ಧರ್ಮದ ಹೆಸರಲ್ಲಿ ರಾಜ್ಯವನ್ನು ಒಡೆಯಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಆಗಸ್ಟ್ನಲ್ಲಿ ಅಸ್ಸಾಂ ಎನ್ಆರ್ಸಿ ಎರಡನೇ ಪಟ್ಟಿ ಪ್ರಕಟವಾಗಿತ್ತು ಈ ವೇಳೆ ಸುಮಾರು ೧೯ ಲಕ್ಷ ಮಂದಿಯ ಹೆಸರು ಪಟ್ಟಿಯಿಂದ ಹೊರಗುಳಿದಿದೆ. ಅಲ್ಲದೇ ಇಲ್ಲಿಯವರೆಗೆ ಯಾರೂ ಭಾರತೀಯ ಪೌರರು ಎಂದು ಸಾಬೀತುಪಡಿಸುವ ಯಾವುದೇ ದಾಖಲೆಯನ್ನೂ ಸಲ್ಲಿಸಿಲ್ಲ. ಇವರೆಲ್ಲರನ್ನೂ ಅಕ್ರಮ ವಲಸಿಗರೆಂದು ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.