Homeಮುಖಪುಟಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು JDS-BJP ನಡುವೆ ಒಳಒಪ್ಪಂದ ಆಗಿತ್ತು- ಜೆಡಿಎಸ್ ಶಾಸಕ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು JDS-BJP ನಡುವೆ ಒಳಒಪ್ಪಂದ ಆಗಿತ್ತು- ಜೆಡಿಎಸ್ ಶಾಸಕ

ನಾನು ನೇರವಾಗಿ ಮಾತನಾಡುವ ಮನುಷ್ಯ. ಸಿದ್ದರಾಮಣ್ಣ ಅವರನ್ನು ಸೋಲಿಸಲು ಒಳ ಒಪ್ಪಂದ ಅಗಿದ್ದು ಸತ್ಯ. ಒಳಗೊಂದು ಹೊರಗೊಂದು ಮಾತನಾಡುವುದು ಬಿಟ್ಟು ನೇರವಾಗಿ ಹೇಳಬೇಕು. - ಎಸ್.ಆರ್.ಶ್ರೀನಿವಾಸ್

- Advertisement -
- Advertisement -

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದವು ಎಂದು ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಪುನರುಚ್ಚರಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ಅವರ ತುಮಕೂರಿನ ಕ್ಯಾತ್ಸಂದ್ರ ನಿವಾಸದಲ್ಲಿ ಕಾಣಿಸಿಕೊಂಡ ಶ್ರೀನಿವಾಸ್, ಗುಬ್ಬಿಯಲ್ಲಿ ಡಿಸೆಂಬರ್ 19ರಂದು ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದ ಹೇಳಿಕೆಗಳನ್ನು ಇಂದು ಪುನರುಚ್ಚರಿಸಿದರು. “ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳುತ್ತಿದ್ದೇನೆ. ಚಾಮುಂಡೇಶ್ವರಿ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ನಡುವೆ ಒಳ ಒಪ್ಪಂದ ಆಗಿತ್ತು” ಎಂದಿದ್ದಾರೆ.

ನಾನು ನೇರವಾಗಿ ಮಾತನಾಡುವ ಮನುಷ್ಯ. ಸಿದ್ದರಾಮಣ್ಣ ಅವರನ್ನು ಸೋಲಿಸಲು ಒಳ ಒಪ್ಪಂದ ಅಗಿದ್ದು ಸತ್ಯ. ಒಳಗೊಂದು ಹೊರಗೊಂದು ಮಾತನಾಡುವುದು ಬಿಟ್ಟು ನೇರವಾಗಿ ಹೇಳಬೇಕು. ಅದು ಆಗುತ್ತಿಲ್ಲ. ಪಕ್ಷದಲ್ಲಿ ಆಗುವುದೇ ಒಂದು, ಹೊರಗೆ ಹೇಳುವುದೇ ಒಂದು. ಇಂತಹ ದ್ವಂದ್ವವನ್ನು ಬಿಟ್ಟು ನೇರಾನೇರ ಹೇಳಿದರೆ ಒಳ್ಳೆಯದು. ಜೆಡಿಎಸ್ ಪಕ್ಷದಲ್ಲಿ ಗೋಪಾಲಯ್ಯ, ನಾನು ಮತ್ತು ರಾಜಣ್ಣ ಅವರನ್ನು ಬಿಟ್ಟರೆ ಬೇರೆ ಯಾರೂ ಕೂಡ ನೇರವಾಗಿ ಮಾತನಾಡುತ್ತಿರಲಿಲ್ಲ ಎಂಬುದನ್ನು ಸ್ಮರಿಸಿದರು.

ಕೃಷಿ ಸಂಬಂಧಿ ನೂತನ ಮೂರು ಕಾಯ್ದೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಸಂದರ್ಭ ದಲ್ಲಿ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಲು ಹೊರಟಿರುವ ಕಾಯ್ದೆಗಳಿಗೆ ವಿರೋಧ ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿ ಕೃಷಿ ಮಸೂದೆಯ ಪರವಾಗಿ ಜೆಡಿಎಸ್ ಮತ ಚಲಾಯಿಸಿದ್ದಕ್ಕೆ ಶಾಸಕ ಎಸ್.ಆರ್. ಶ್ರೀನಿವಾಸ್ ಬೇಸರಗೊಂಡಿದ್ದಾರೆ. ಅದೇ ಕಾರಣಕ್ಕೆ ಜೆಡಿಎಸ್ ತೆಗೆದುಕೊಳ್ಳುವ ತೀರ್ಮಾನಗಳಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ್ ಹೇಳಿದಂತೆ “ನಾನು ಮಾನಸಿಕವಾಗಿ ರಾಜಕೀಯ ಮಾಡುತ್ತಿಲ್ಲ. ದೈಹಿಕವಾಗಿ ಮಾತ್ರ ರಾಜಕಾರಣದಲ್ಲಿದ್ದೇನೆ” ಎಂದು ಹೇಳಿರುವುದು ಮೇಲಿನ ಮಾತುಗಳಿಗೆ ಪುಷ್ಠಿ ನೀಡುತ್ತಿದೆ.

ಸಿದ್ದರಾಮಯ್ಯ ಸೋಲಿನ ಒಳ ಒಪ್ಪಂದದ ಬಗ್ಗೆ ಮಾತ್ರ ಮಾತನಾಡುತ್ತಿದ್ದೀರಾ, ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲಿನ ಒಳ ಒಪ್ಪಂದದ ಕುರಿತು ಹೇಳಿ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಶ್ರೀನಿವಾಸ್, “ಎಚ್.ಡಿ.ದೇವೇಗೌಡರು ಯಾರೋ ಒಬ್ಬ ಮುಖಂಡರನ್ನು ನಂಬಿಕೊಂಡಿದ್ದರು. ಅತಿಯಾದ ನಂಬಿಕೆ ಮತ್ತು ಭರವಸೆ ಅವರ ಸೋಲಿಗೆ ಕಾರಣ. ನಮ್ಮ ಮಾತನ್ನು ಕೇಳಿದ್ದರೆ ದೇವೇಗೌಡರು ಗೆಲ್ಲುತ್ತಿದ್ದರು. ಆ ಮುಖಂಡರು ದೇವೇಗೌಡರು ಸೋಲಲು ಕಾರಣ. ಒಳಗೊಂದು, ಹೊರಗೊಂದು ಮಾತನಾಡುವುದು ಸರಿಯಲ್ಲ. ಕುಮಾರಸ್ವಾಮಿ ಏಕೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ನಮ್ಮ ಪಕ್ಷದ ಮುಖಂಡರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹಾಗಾಗಿ ಎರಡೂವರೆ ವರ್ಷ ಸರ್ಕಾರ ಬೀಳುವುದಿಲ್ಲ. ನಾನು ಬಿಜೆಪಿಗೆ ಬೆಂಬಲ ನೀಡುತ್ತಿಲ್ಲ. ನನಗೆ ಬಿಜೆಪಿ ಮೇಲೆ ಪ್ರೀತಿಯೂ ಇಲ್ಲ, ಒಲವೂ ಇಲ್ಲ. ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಬೇಕೆಂಬ ಇಚ್ಚೆ ನನಗೆ ಇಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ವರಿಷ್ಟರು ತೆಗೆದುಕೊಳ್ಳುತ್ತಿರುವ ತೀರ್ಮಾನಗಳಿಗೆ ತೀವ್ರ ಅಸಮಾಧಾನ ಹೊರಹಾಕಿದರು.

ಮುಂದಿನ ತೀರ್ಮಾನದ ಕುರಿತು ಈಗಲೇ ಏನೂ ಹೇಳಲಾಗುವುದಿಲ್ಲ. ಕಾರ್ಯಕರ್ತರನ್ನು ಕರೆದು ಚರ್ಚೆ ನಡೆಸಬೇಕು. ಪ್ರತಿಯೊಂದು ಪಕ್ಷದಲ್ಲೂ ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಪದ್ದತಿ ಇದೆ. ಅದನ್ನು ನಿವಾರಣೆ ಮಾಡಲು ಸಾಧ್ಯವಿಲ್ಲ ಎಂದರು.

ಕೆ.ಎನ್. ರಾಜಣ್ಣ ಮತ್ತು ನಾನು ಬೇರೆ ಬೇರೆ ಪಕ್ಷದಲ್ಲಿದ್ದೇವೆ. ಆದರೂ ನಾವು ಸ್ನೇಹಿತರು. ನನ್ನ ಗೆಲುವಿನಲ್ಲಿ ರಾಜಣ್ಣ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜಣ್ಣ ನನಗೆ ಗಾಡ್ ಫಾದರ್. ಮನೆಗೆ ಬರುವಂತೆ ಕರೆ ಮಾಡಿದರು. ಅವರ ಮಾತಿಗೆ ಬೆಲೆ ಕೊಟ್ಟು ಬಂದಿದ್ದೇನೆ. ಮುಂದಿನ ಹೆಜ್ಞೆಗಳ ಕುರಿತು ಯಾವುದೇ ತೀರ್ಮಾನ ತೆಗೆದು ಕೊಂಡಿಲ್ಲ.  ಗುಬ್ಬಿಯ ಕೆಲ ಜೆಡಿಎಸ್ ಮುಖಂಡರು ಪಕ್ಷದಲ್ಲಿದ್ದುಕೊಂಡೇ ನನ್ನ ವಿರುದ್ದವಾಗಿ ಕೆಲಸ ಮಾಡಿದರು. ನನ್ನನ್ನೂ ಸೋಲಿಸುವ ಯತ್ನ ನಡೆಯಿತು. ಆದರೂ ಮತದಾರರು ಗೆಲ್ಲಿಸಿದರು ಎಂದು ಹೇಳಿದರು.

ಮಾಜಿ ಶಾಸಕರ ಮನೆಯಲ್ಲಿ ಶ್ರೀನಿವಾಸ್ ಕಾಣಿಸಿಕೊಂಡಿರುವುದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಜೆಡಿಎಸ್ ನಾಯಕರ ನಡವಳಿಗಳ ಬಗ್ಗೆ ಶ್ರೀನಿವಾಸ್ ಅಸಮಾಧಾನ ಹೊರ ಹಾಕಿದ್ದು, ಅವರು ಕಾಂಗ್ರೆಸ್ ನತ್ತ ಮುಖ ಮಾಡಿರುವುದು ಸ್ಪಷ್ಟವಾಗಿದೆ. ಜೆಡಿಎಸ್ ತೀರ್ಮಾನಗಳಿಂದ ದೂರ ಉಳಿದಿದ್ದೇನೆ ಎಂದು ಹೇಳುವ ಮೂಲಕ ಪಕ್ಷದಿಂದ ಹೆಜ್ಜೆಯನ್ನು ಹೊರಗೆ ಇಟ್ಟಿರುವ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ರಾಜ್ಯ ಬಿಜೆಪಿ ಸರ್ಕಾರ ಖಾಸಗಿ ಶಾಲೆಗಳ ಜೊತೆ ‍‍ಷಾಮೀಲಾಗಿದೆ: ಸಿದ್ದರಾಮಯ್ಯ ಸರಣಿ ಟ್ವೀಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...