ಬಿಹಾರದ ಮೂರು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 24 ತಿಂಗಳ ವಿಚಾರಣೆಯ ನಂತರ, ಅಪರಾಧಿಗೆ ಮರಣದಂಡನೆ ವಿಧಿಸಲಾಗಿದೆ.
ಬಿಹಾರದ ಸಮಸ್ತಿಪುರ ಜಿಲ್ಲೆಯ ವಿಶೇಷ ಪೋಕ್ಸೊ (Protection of Children From Sexual Offences Act) ನ್ಯಾಯಾಲಯ ಅಪರಾಧಿಗೆ ಮರಣದಂಡನೆ ವಿಧಿಸಿದೆ. ಪ್ರಕರಣದ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿ ತೀರ್ಪು ನೀಡಿದೆ.
2018 ರ ಜೂನ್ 2 ರಂದು ಸಮಸ್ತಿಪುರದ ದಲ್ಸಿಂಗ್ರಾಯ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿತ್ತು. ಅಪ್ರಾಪ್ತೆ ತನ್ನ ಏಳು ವರ್ಷದ ಸಹೋದರನೊಂದಿಗೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಳು. ತಡರಾತ್ರಿಯವರೆಗೆ ಬಾಲಕಿ ಮನೆಗೆ ಹಿಂತಿರುಗದಿದ್ದಾಗ, ಪೋಷಕರು ಹುಡುಕಾಟ ನಡೆಸಿದ್ದರು.
ಇದನ್ನು ಓದಿ: ಹತ್ರಾಸ್: ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೈದಿದ್ದಾರೆ ಎಂದು ಸಿಬಿಐ ಚಾರ್ಜ್ಶೀಟ್ – ವಕೀಲರ ಹೇಳಿಕೆ
ವಿಚಾರಣೆ ವೇಳೆ ಬಾಲಕಿಯ ಸಹೋದರ ಆಕೆಯನ್ನು ಕರೆದುಕೊಂಡು ಹೋದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದರು. ಜೊತೆಗೆ ನೆರೆಹೊರೆಯವರು ಕೂಡ ಬಾಲಕಿಯನ್ನು ರಾಮ್ಲಾಲ್ ಮಹ್ತೋ ಎಂಬ ವ್ಯಕ್ತಿಯ ಜೊತೆಗೆ ನೋಡಿದ್ದಾಗಿ ಮಾಹಿತಿ ನೀಡಿದ್ದರು.
ಮರುದಿನ ಬೆಳಗ್ಗೆ ಬಾಲಕಿಯ ಬೆತ್ತಲೆ ದೇಹವು ಹಳ್ಳಿಯ ಹೊರಗಿನ ಹೊಲದಲ್ಲಿ ದೊರಕಿತ್ತು. ಆಕೆಯ ಕುತ್ತಿಗೆ ಮೇಲೆ ಕತ್ತು ಹಿಸುಕಿದ್ದ ಗುರುತುಗಳಿದ್ದವು. ಜೊತೆಗೆ ಅಪ್ರಾಪ್ತೆಯ ದೇಹದ ಖಾಸಗಿ ಅಂಗಗಳು ಹಾನಿಗೊಳಗಾಗಿದ್ದವು.
ಸಂತ್ರಸ್ತೆಯ ತಾಯಿ ಸಲ್ಲಿಸಿದ ದೂರಿನ ಆಧಾರದ ಮೇಲೆ, ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ಗಳ ಅಡಿಯಲ್ಲಿ ಮತ್ತು ಪೋಕ್ಸೊ ಕಾಯ್ದೆಯಡಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು ಎಂದು ಮಸ್ತಿಪುರ ಎಸ್ಪಿ ಬಿಕಾಸ್ ಬರ್ಮನ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗ: BJP ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯನನ್ನು ಬಂಧಿಸಿ!
ಅಪರಾಧಿ ರಾಮ್ಲಾಲ್ ಮಹ್ತೋ ಎಂಬುವನು ಅಪ್ರಾಪ್ತೆಗೆ ಆಮಿಷವೊಡ್ಡಿಕೊಂಡು ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾನೆ, ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿದ್ದಾನೆ. ಪೊಲೀಸರು ಸತತ ನಾಲ್ಕು ದಿನಗಳ ಹುಡುಕಾಟದ ನಂತರ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ತೀರ್ಪು ನೀಡುವಾಗ, ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಮತ್ತು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು (ಎಡಿಜೆ -6) ಈ ಪ್ರಕರಣವನ್ನು ಅತೀ ಘೋರ ಎಂದು ಕರೆದಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತೀರ್ಪ ಪ್ರಕಟಿಸಿದ ನ್ಯಾಯಾಧೀಶರು ಅಪರಾಧಿಗೆ ಐಪಿಸಿಯ ಸೆಕ್ಷನ್ 302 ರ ಅಡಿಯಲ್ಲಿ ಮರಣದಂಡನೆ ಮತ್ತು ಪೋಕ್ಸೊ ಕಾಯ್ದೆಯಡಿ ನೈಸರ್ಗಿಕ ಮರಣದವರೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಇತ್ತ, ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದ, ಉತ್ತರ ಪ್ರದೇಶದ ಹತ್ರಾಸ್ನಲ್ಲಿನ ದಲಿತ ಬಾಲಕಿಯ ಮೇಲಿನ ಬರ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಆಕೆಯನ್ನು ಸಾಮೂಹಿಕ ಅತ್ಯಾಚಾರಗೈದು ಕೊಲೆಗೈದಿದ್ದಾರೆ ಎಂದು ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ.
ಇದನ್ನು ಓದಿ: ಬೆಂಗಳೂರು: ಅರ್ಚಕನಿಂದ ಬಾಲಕಿ ಮೇಲೆ ಅತ್ಯಾಚಾರ, ಟ್ವಿಟರ್ನಲ್ಲಿ ಭಾರಿ ಆಕ್ರೋಶ