ದೇಶದಾದ್ಯಂತ ಭಾರಿ ಆಕ್ರೋಶ ಹುಟ್ಟುಹಾಕಿದ್ದ ಹತ್ರಾಸ್ನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯಾದ ದಲಿತ ಯುವತಿಯ ಗುರುತು ಬಹಿರಂಗಪಡಿಸಿದ್ದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಅವರನ್ನು 7 ದಿನದೊಳಗೆ ಬಂಧಿಸುವಂತೆ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಆಗ್ರಹಿಸಿದ್ದಾರೆ.
ಈ ಬಗ್ಗೆ ತನ್ನ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಸಾಕೇತ್ ಗೋಖಲೆ, “ಅಕ್ಟೋಬರ್ನಲ್ಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹತ್ರಾಸ್ ಸಂತ್ರಸ್ತೆಯ ಗುರುತು ಬಹಿರಂಗಪಡಿಸುವ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಈ ಬಗ್ಗೆ ನಾನು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (ಎನ್ಸಿಡಬ್ಲ್ಯು) ದೂರು ನೀಡಿದಾಗ, ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಮಿತ್ ಮಾಳವಿಯ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ, ’ಪ್ರಕರಣವು ಅತ್ಯಾಚಾರ ಪ್ರಕರಣ ಎಂದು ಸಾಬೀತಾದರೆ ಮಾತ್ರ ಇದು ಅಪರಾಧ’ ಎಂದು ಉತ್ತರಿಸಿದ್ದರು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹತ್ರಾಸ್: ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೈದಿದ್ದಾರೆ ಎಂದು ಸಿಬಿಐ ಚಾರ್ಜ್ಶೀಟ್
“ಈಗ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ. ಅದರಲ್ಲಿ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನಲೆಯಲ್ಲಿ ಅಮಿತ್ ಮಾಳವೀಯ ಮೇಲೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನಾನು ನೋಟಿಸು ಕಳುಹಿಸಿದ್ದೇನೆ” ಎಂದು ಸಾಕೇತ್ ತಿಳಿಸಿದ್ದಾರೆ.
Despite Hathras Police having initially registered an FIR of rape & murder, Rekha Sharma chose to peddle the BJP/UP Govt version denying it.
Now that the case is clear, Malviya must be prosecuted under the IPC in 7 days.
If not, I'll file a case in court next week.
(2/2)
— Saket Gokhale (@SaketGokhale) December 19, 2020
“ಅಲ್ಲದೆ ಹತ್ರಾಸ್ ಪೊಲೀಸರು ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿದ್ದರೂ ಕೂಡಾ, ರೇಖಾ ಶರ್ಮಾ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಬಿಜೆಪಿ ಮತ್ತು ಉತ್ತರಪ್ರದೇಶ ಸರಕಾರದ ಬೆಂಬಲಕ್ಕೆ ನಿಂತಂತೆ ವರ್ತಿಸಿದ್ದಾರೆ. ಇದೀಗ ಪ್ರಕರಣ ಸ್ಪಷ್ಟವಾಗಿದೆ, ಆದ್ದರಿಂದ ಭಾರತೀಯ ದಂಡ ಸಂಹಿತೆ ಪ್ರಕಾರ ಅಮಿತ್ ಮಾಳವಿಯ ಅವರನ್ನು 7 ದಿನಗಳ ಒಳಗಾಗಿ ಬಂಧಿಸಬೇಕು. ಒಂದು ವೇಳೆ ಬಂಧನ ಆಗದಿದ್ದರೆ, ಮುಂದಿನ ವಾರ ನ್ಯಾಯಾಲಯದಲ್ಲಿ ಕೇಸು ದಾಖಲಿಸುತ್ತೇನೆ” ಎಂದು ಎಚ್ಚರಿಸಿದ್ದಾರೆ.
ಹತ್ರಾಸ್ನ 19 ವರ್ಷದ ದಲಿತ ಯುವತಿ ಮೇಲೆ ಸೆ.14 ರಂದು ನಾಲ್ವರು ಮೇಲ್ಜಾತಿಯ ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸೆ.29 ರಂದು ಯುವತಿ ಸಾವನ್ನಪ್ಪಿದಳು. ಮೃತ ಯುವತಿಯ ದೇಹವನ್ನು ಕುಟುಂಬಕ್ಕೆ ಒಪ್ಪಿಸದೇ ಪೊಲೀಸರು ಸುಟ್ಟುಹಾಕಿದ್ದರು. ತಮ್ಮ ಒಪ್ಪಿಗೆಯಿಲ್ಲದೇ ಬಲವಂತವಾಗಿ ಶವಸಂಸ್ಕಾರ ಮಾಡಲಾಯಿತು ಎಂದು ಕುಟುಂಬವು ಆರೋಪಿಸಿತ್ತು. ಈ ಘಟನೆ ಖಂಡಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ದಾಖಲಾಗಿದ್ದವು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು.
ಇದನ್ನೂ ಓದಿ:ಭಯದಲ್ಲಿ ಬದುಕುತ್ತಿದೆ ಹತ್ರಾಸ್ ಸಂತ್ರಸ್ತೆ ಕುಟುಂಬ: PUCL ಸತ್ಯಶೋಧನಾ ವರದಿ