ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 25 ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆಯ ನಡುವೆ ಮೃತಪಟ್ಟ ರೈತರಿಗೆ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಉತ್ತರ ಪ್ರದೇಶದ ಗಾಜಿಯಾಬಾದ್ನಿಂದ ದೆಹಲಿಗೆ ಸಂಪರ್ಕಿಸುವ ಹೆದ್ದಾರಿಯನ್ನು ನಿರ್ಬಂಧಿಸಲಾಗುವುದು ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ರೈತರು ಒತ್ತಾಯಿಸುತ್ತಿದ್ದು, ಆದರೆ ಸರ್ಕಾರ ಈ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಲೆ ಇದೆ. ಹಾಗಾಗಿ ರೈತರು ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನಾ ನಿರತ ರೈತರು ವಿರೋಧ ಪಕ್ಷಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನುತ್ತಿರುವ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ AIKSCC, “ಡಿಸೆಂಬರ್ 22 ರಂದು ಮುಂಬೈನ ಅಂಬಾನಿ ಮತ್ತು ಅದಾನಿ ಗುಂಪುಗಳ ಕಚೇರಿಗಳ ಬಳಿ ರ್ಯಾಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರೈತರ ಸಮಸ್ಯೆಗಳನ್ನು ಪರಿಹರಿಸುವ ಬದಲು ‘ಬಿಜೆಪಿ ಮತ್ತು ವಿರೋಧ ಪಕ್ಷ’ ಎಂದು ರಾಜಕೀಯದ ಆಟ ಆಡುತ್ತಿದ್ದಾರೆ” ಎಂದು ಆರೋಪಿಸಿದೆ.
ಇದನ್ನೂ ಓದಿ: ಅಯೋಧ್ಯೆ: ಬಾಬರಿಗಿಂತ 4 ಪಟ್ಟು ದೊಡ್ಡ ಮಸೀದಿ – ಮಸೀದಿಗಿಂತ 6 ಪಟ್ಟು ದೊಡ್ಡ…
“ದೊಡ್ಡ ಉದ್ಯಮಗಳಿಗೆ ಅನುಕೂಲಕರವಾದ ಈ ಕಾನೂನಗಳನ್ನು ರದ್ದುಗೊಳಿಸುವ ಬದಲು ಅವರಿಗೇ ಸಹಕಾರಿಯಾಗಿರುವ ನರೇಂದ್ರ ಮೋದಿ ತಮ್ಮ ಪಾತ್ರವನ್ನು ದುರ್ಬಲಗೊಳಿಸಿಕೊಳ್ಳುತ್ತಿದ್ದಾರೆ. ರೈತರಿಗೆ ಸಹಕಾರಿಯಾಗಲು ಹಣವಿಲ್ಲ ಎನ್ನುತ್ತಿರುವ ಮೋದಿ ಸರ್ಕಾರ, ಕಾರ್ಪೊರೇಟ್ಗಳು ಕೃಷಿ ವಲಯದಲ್ಲಿ ಹೂಡಿಕೆ ಮಾಡಲು ಒಂದು ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ನಿಜಕ್ಕೂ ಖಂಡನೀಯ”
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ AIKSCC, “ರೈತರು ತಮ್ಮ ಭೂಮಿಯನ್ನು ಕಳೆದುಕೊಳ್ಳುವುದಿಲ್ಲ ಎಂದು ಕಾಲ್ಪನಿಕ ಹೇಳಿಕೆ ನೀಡಿದ್ದಾರೆ. ಆದರೆ ಈ ಕಾಯಿದೆಯು ರೈತರ ಭೂಮಿಯನ್ನು ಅಡಮಾನ ಇಡಲು ಪ್ರಚೋದಿಸುತ್ತದೆ” ಎಂದು ಹೇಳಿದೆ.
ಕೃಷಿ ಕಾನೂನಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಅವುಗಳೆಲ್ಲಾ ವಿಫಲವಾಗಿವೆ. ಇತ್ತೀಚೆಗೆ ಈ ವಿಷಯವನ್ನು ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್, ಈ ಕುರಿತು ಶೋಧನೆ ಮಾಡಲು ಒಂದು ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ಸಲಹೆ ನೀಡಿತ್ತು.
ಇದನ್ನೂ ಓದಿ: ಅಸ್ಸಾಂ: ಗುವಾಹಟಿಯಲ್ಲಿ 30 ಸಿಲಿಂಡರ್ ಸ್ಫೋಟ, 66 ಗುಡಿಸಲುಗಳು ಭಸ್ಮ
ಜೊತೆಗೆ ರೈತರು ತಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳಬೇಕಾಗಿಲ್ಲ. ಹೋರಾಟ ಮಾಡುವುದು ಅವರ ಹಕ್ಕು ಎಂದು ಸುಪ್ರೀಂ ನಿನ್ನೆ ಹೇಳಿತ್ತು. ಆದರೆ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ, ಶಾಂತಿಯುತವಾಗಿ ಪ್ರತಿಭಟಿಸುವಂತೆ ಹೇಳಿತ್ತು.
ಭಾರತೀಯ ಕಿಸಾನ್ ಒಕ್ಕೂಟದ (ಏಕ್ತಾ ಉಗ್ರಾಹನ್) ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರಾಹನ್, “ಯಾವುದೇ ಸಮಿತಿಯು ಸರ್ಕಾರದಿಂದ ಅಥವಾ ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ ರಚನೆಯಾದರೆ ಅದರಲ್ಲಿ ಎಲ್ಲಾ ರೈತ ಸಂಘಗಳ ಪ್ರತಿನಿಧಿಗಳೂ ಸದಸ್ಯರಾಗಿರಬೇಕು” ಎಂದು ಹೇಳಿದರು.
ಇದನ್ನೂ ಓದಿ: Big Breaking: ನೇಪಾಳ ಸಂಸತ್ತು ವಿಸರ್ಜನೆಗೆ ಪ್ರಧಾನಿ ಕೆ ಪಿ ಶರ್ಮಾ ಒಲಿ ನಿರ್ಧಾರ!
“ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಮಾತನಾಡಿದರೆ ಉಪಯೋಗವಿಲ್ಲ. ಏಕೆಂದರೆ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕೃಷಿ ಕಾನೂನುಗಳ ಬಗ್ಗೆ ಯಾವುದೇ ನಿರ್ಧಾರವನ್ನು ಪ್ರಧಾನ ಮಂತ್ರಿ ಮಟ್ಟದಲ್ಲಿ ತೆಗೆದುಕೊಳ್ಳುವುದರಿಂದ ಪ್ರಧಾನಿ ಅಥವಾ ಗೃಹ ಸಚಿವರು ಮಾತನಾಡಬೇಕು” ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯ ಬಿಜೆಪಿ ಸರ್ಕಾರ ಖಾಸಗಿ ಶಾಲೆಗಳ ಜೊತೆ ಷಾಮೀಲಾಗಿದೆ: ಸಿದ್ದರಾಮಯ್ಯ ಸರಣಿ ಟ್ವೀಟ್
ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಯನ್ನು ಪುನರುಚ್ಚರಿಸುತ್ತಾ, ಬಿಕೆಯು (ಕ್ಯಾಡಿಯನ್ ಗ್ರೂಪ್) ನ ಹರ್ಮೀತ್ ಸಿಂಗ್ ಕಡಿಯನ್, “ಸರ್ಕಾರದೊಂದಿಗಿನ ನಮ್ಮ ಮಾತುಕತೆಯಲ್ಲಿ, ನಾವು 18 ತಿದ್ದುಪಡಿಗಳನ್ನು ನೀಡಿದ್ದೇವೆ. ಸರ್ಕಾರವು ಈವರೆಗೆ ಎಂಟಕ್ಕೆ ಒಪ್ಪಿಗೆ ನೀಡಿದೆ. ಉಳಿದ 10 ತಿದ್ದುಪಡಿಗಳ ಕಥೆ ಏನು? ಕಾನೂನುಗಳನ್ನು ತಿದ್ದುಪಡಿ ಮಾಡುವ ಬದಲು ಅದನ್ನು ರದ್ದುಪಡಿಸುವುದು ಉತ್ತಮ ಪರಿಹಾರವಾಗಿದೆ” ಎಂದು ಹೇಳಿದರು.
ಡಿಸೆಂಬರ್ 25 ರಂದು ‘ದಿಲ್ಲಿ ಚಲೋ’ ಪ್ರತಿಭಟನೆಗೆ ಒಂದು ತಿಂಗಳು ಪೂರ್ಣಗೊಳ್ಳಲಿರುವುದರಿಂದ ದೆಹಲಿ ಗಡಿಯಲ್ಲಿ ನಡೆಯುವ ಹೋರಾಟಕ್ಕೆ ಹೆಚ್ಚಿನ ರೈತರು ಸೇರಲಿದ್ದಾರೆ. ಡಿಸೆಂಬರ್ 26 ರಂದು 15,000 ಪ್ರತಿಭಟನಾಕಾರರು ಖಾನೌರಿ ಗಡಿಯಿಂದ ಮೆರವಣಿಗೆ ನಡೆಸಲಿದ್ದು, ಡಿಸೆಂಬರ್ 27 ರಂದು 15,000 ಮಂದಿ ದಬ್ವಾಲಿಯಿಂದ ಮೆರವಣಿಗೆ ಆರಂಭಿಸಲಿದ್ದಾರೆ ಎಂದು ರೈತ ಸಂಘಟನೆಗಳು ತಿಳಿಸಿವೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರದ ಬಿರುಗಾಳಿ: ಬಿಜೆಪಿ ಸೇರಿದ 9 ಶಾಸಕರು!