CAA, NRC ವಿರುದ್ಧ ದೆಹಲಿಯ ಶಾಹೀನ್ ಭಾಗ್ನಲ್ಲಿ ಲಕ್ಷಾಂತರ ಜನರು ತಿಂಗಳುಗಟ್ಟಲೇ ಹೋರಾಟ ನಡೆಸಿ ದಾಖಲೆ ಸೃಷ್ಟಿಸಿದ್ದ ಬೆನ್ನಲ್ಲೇ ಕರ್ನಾಟಕದ ಮಂಗಳೂರಿನಲ್ಲಿಯೂ ಮತ್ತೊಂದು ದಾಖಲೆ ಸೃಷ್ಟಿಯಾಗಿದೆ. ಅಡ್ಯಾರ್ ಕಣ್ಣೂರಿನಲ್ಲಿ ನಿನ್ನೆ ನಡೆದ ಭಾರೀ ಶಕ್ತಿ ಪ್ರದರ್ಶನವೂ ಸಿಎಎ, ಎನ್ಪಿಆರ್ ಮತ್ತು ಎನ್ಆರ್ಸಿ ಹಿಂತೆಗೆದುಕೊಳ್ಳಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸ್ಪಷ್ಟ ಸಂದೇಶ ರವಾನಿಸಿದೆ.
ಶಹೀದ್ ಅಬ್ದುಲ್ ಜಲೀಲ್ ಕಂದಕ್ ಮತ್ತು ಕುದ್ರೋಳಿ ವೇದಿಕೆ ಎಂದು ಹೆಸರಿಟ್ಟ ಸಮಾವೇಶಕ್ಕೆ ದ.ಕ ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಸೆಂಟ್ರಲ್ ಕಮಿಟಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ನೇತೃತ್ವ ವಹಿಸಿದ್ದವು.
ಮೂರು ಲಕ್ಷಕ್ಕೂ ಅಧಿಕ ಜನ ಭಾಗವಹಿಸಿದ ಈ ಸಮಾವೇಶದಲ್ಲಿ ಮುಖ್ಯವಾಗಿ ಡಿಸೆಂಬರ್ 19ರಂದು ನಡೆದ ಗೋಲಿಬಾರ್ ಅನ್ನು ಖಂಡತುಂಡವಾಗಿ ಖಂಡಿಸಲಾಯಿತ್ತಲ್ಲದೇ, ಘಟನೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ಜೊತೆಗೆ ಗೋಲಿಬಾರ್ನಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡದ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಲಾಯಿತು.
ನಿವೃತ್ತ ಐಎಎಸ್ ಅಧಿಕಾರಿ ಮತ್ತು ಮಾನವ ಹಕ್ಕು ಹೋರಾಟಗಾರ ಹರ್ಷಮಂದರ್ ಮಾತನಾಡಿ “ನಾವೆಲ್ಲರೂ ಹುಟ್ಟಿನಿಂದಲೇ ಈ ದೇಶದ ಪೌರತ್ವ ಪಡೆದಿದ್ದೇವೆ. ಆದರೆ ಮುಸ್ಲಿಮರನ್ನು, ದಲಿತ, ಆದಿವಾಸಿಗಳನ್ನು ಗುರಿಯಾಗಿಸಿ ಕೇಂದ್ರ ತರುತ್ತಿರುವ ಹೊಸ ಕಾಯ್ದೆಯನ್ನು ಖಂಡತುಂಡವಾಗಿ ಖಂಡಿಸುತ್ತೇನೆ. ನನ್ನ ಹೆಸರನ್ನು ಮುಸ್ಲಿಂ ಎಂದು ಬರೆಸುವುದಲ್ಲದೇ ಯಾವುದೇ ದಾಖಲೆ ತೋರಿಸುವುದಿಲ್ಲ. ಬಂಧನ ಕೇಂದ್ರಕ್ಕೂ ಹೋಗಲು ಸಿದ್ದನಿದ್ದೇನೆ ಎಂದು ಘೋಷಿಸಿದರು.
ಖ್ಯಾತ ಚಿಂತಕರಾದ ಶಿವಸುಂದರ್ ಮಾತನಾಡಿ, ಈ ದುಷ್ಟ, ಜನವಿರೋಧಿ ಕಾನೂನನ್ನು ತಡೆಯಲು ವಿರೋಧ ಪಕ್ಷಗಳು ಒಟ್ಟಾಗಬೇಕು. ಬರುವ ಅಧಿವೇಶನದಲ್ಲಿ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಎನ್ಪಿಆರ್ ಜಾರಿಗೊಳಿಸದಂತೆ ಪ್ರತಿಪಕ್ಷಗಳು ನಿರ್ಣಯ ಮಂಡಿಸಬೇಕು. ನಾಡಿನ ಎಲ್ಲಾ ಧರ್ಮದ ದೇಶಪ್ರೇಮಿ ಜನರು ಬೀದಿಯಲ್ಲಿ ನಿರಂತರ ಪ್ರತಿರೋಧ ತೋರಬೇಕು ಎಂದು ಕರೆ ನೀಡಿದರು.
ಸರ್ಕಾರದ ದುರಾಡಳಿತವನ್ನು ಜನ ಒಂದು ಮಟ್ಟದವರೆಗೆ ಮಾತ್ರ ಸಹಿಸಿಕೊಳ್ಳಬಹುದು. ಅದು ವಿಪರೀತಕ್ಕೆ ಮಟ್ಟ ತಲುಪಿದಾಗಿ ತಿರುಗಿ ಬೀಳುವುದು ಮಾನವ ಸಹಜ ಸ್ವಭಾವ. ಅದೇ ರೀತಿಯಲ್ಲಿ ಡಿಮಾನಿಟೈಜೇಸನ್, ಜಿ.ಎಸ್.ಟಿ, ನಿರುದ್ಯೋಗ ಏರಿಕೆ ಸೇರಿದಂತೆ ಹಲವು ಜನವಿರೋಧಿ ಕ್ರಮಗಳನ್ನು ಜನತೆ ಸಹಿಸಿಕೊಂಡಿತ್ತು. ಆದರೆ ಯಾವಾಗ ಪೌರತ್ವಕ್ಕೆ ಕೈ ಹಾಕಿತೋ ಅಲ್ಲಿಗೆ ಮೋದಿ ಸರ್ಕಾರದ ಕಥೆ ಮುಗಿದಂತೆ ಆಗಿದೆ. ಜನತೆ ಈಗ ಸಿಡಿದೆದ್ದಿದ್ದಾರೆ. ಈ ಕಾಯ್ದೆಗಳು ವಾಪಸ್ ಆಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಘೋಷಿಸಿದ್ದಾರೆ.
ಚಿಂತಕ ಸುಧೀರ್ ಕುಮಾರ್ ಮುರೋಳಿ, ಎಸ್ಡಿಪಿಐ ನಾಯಕರು ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಗೋಲಿಬಾರ್ಗೆ ಕಾರಣವಾದ ಮಂಗಳೂರು ಕಮಿಷನರ್ ಹರ್ಷಾ ವಿರುದ್ಧ ಟೀಕೆಗಳ ಸುರಿಮಳೆಯಾಯಿತು.
ಎಲ್ಲರ ಕೈಯಲ್ಲಿಯೂ ತ್ರಿವರ್ಣ ಧ್ವಜಗಳು ಹಾರಾಡುತ್ತಿದ್ದವು. ಅದೇ ರೀತಿಯಲ್ಲಿ ದ್ರೋಣ್ ಕ್ಯಾಮರಾಗಳು ಎಲ್ಲಾ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದವು. ಅಡ್ಯಾರ್ ಭವನದ ಉದ್ದಗಲಕ್ಕೂ ಭಾರೀ ಜನಸ್ತೋಮ ನೆರೆದಿದ್ದಲ್ಲದೇ ಅಜಾದಿ ಘೋಷಣೆಗಳು ಮುಗಿಲು ಮುಟ್ಟಿದ್ದವು.
ದೇಶದ ಗಮನ ಸೆಳೆದಿರುವ ಅಡ್ಯಾರ್ ಸಮಾವೇಶವೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಎಲ್ಲೆಲ್ಲಿಯೂ ಜನಸಾಗರದ ಫೋಟೊ, ವಿಡಿಯೋಗಳು ತುಂಬಿಹೋಗಿವೆ.
A sea of people is protesting at Mangalore, Karnataka against the CAA, NRC, and NPR.
People of India are reclaiming the republic.#CAA_NRCProtests #CAA_NRC_Protests pic.twitter.com/iLyLtSSMuu
— We The People of India (@ThePeopleOfIN) January 15, 2020
ಪುಟ್ಟ ಮಕ್ಕಳು ಪೊಲೀಸರಿಗೆ ಗುಲಾಬಿ ಹೂ ನೀಡುವ ಮೂಲಕ ಗೋಲಿಬಾರ್ ಅನ್ನು ಸೂಚ್ಯವಾಗಿ ಟೀಕಿಸಲಾಯಿತು. ಸಾವಿರಾರು ಸ್ವಯಂ ಸೇವಕರು ಟ್ರಾಫಿಕ್ ಸೇರಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದರು. ಸಮಾವೇಶಕ್ಕೂ ಮುನ್ನ ಬೈಕ್ ರ್ಯಾಲಿ ಗಮನ ಸೆಳೆಯಿತು. ಒಟ್ಟಿನಲ್ಲಿ ಸಿಎಎ, ಎನ್ಆರ್ಸಿ ವಿರುದ್ಧದ ಭಾರೀ ಹೋರಾಟಕ್ಕೆ ಕರ್ನಾಟಕವೂ ಸಹ ಸಾಕ್ಷಿಯಾಯಿತು.
ಇಷ್ಟೆಲ್ಲಾ ಆದರೂ ಮುಖ್ಯ ಪತ್ರಿಕೆಗಳಾದ ಉದಯವಾಣಿ ಮತ್ತು ಇನ್ನಿತರ ಪತ್ರಿಕೆಗಳು ಇದನ್ನು ತನ್ನ ಪತ್ರಿಕೆಯಲ್ಲಿ ಪ್ರಕಟಿಸಲೇ ಇಲ್ಲ