ಕೊರೋನಾ ಸೋಂಕು ಪ್ರಸರಣ ಮತ್ತು ಅದರ ನಿಯಂತ್ರಣ ವಿಷಯಕ್ಕಿಂತ ಸದ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲಾಕ್ ಡೌನ್ ನಿರ್ವಹಣೆಯ ಪೊಲೀಸರ ವರಸೆಯೇ ಹೆಚ್ಚು ಚರ್ಚೆಯಾಗತೊಡಗಿದೆ.
ಒಂದು ಕಡೆ; ಹಾಲು, ತರಕಾರಿ, ಔಷಧ ಮತ್ತಿತರ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿರುವ ಸರ್ಕಾರ, ಕನಿಷ್ಠ ಅಂತರ ಮತ್ತು ಸುರಕ್ಷಾ ಮಂಜಾಗ್ರತೆಯೊಂದಿಗೆ ಜನರು ತೀರಾ ಅನಿವಾರ್ಯ ಸಂದರ್ಭದಲ್ಲಿ ರಸ್ತೆಗಿಳಿಯಬಹುದು ಎಂದು ಹೇಳಿದೆ. ಆದರೆ, ಅದೇ ಹೊತ್ತಿಗೆ, ಪೊಲೀಸರು ಔಷಧಿ, ಕುಡಿಯುವ ನೀರು, ತರಕಾರಿ, ಹಾಲು ಮುಂತಾದ ವಸ್ತುಗಳ ತರಲು ಹೋದವರಿಗಷ್ಟೇ ಅಲ್ಲದೆ, ಸರ್ಕಾರದ ಆರೋಗ್ಯಸೇವೆಯಲ್ಲಿ ಕರ್ತವ್ಯನಿರತರಾದ ಸಿಬ್ಬಂದಿಯ ಮೇಲೂ ಲಾಠಿ ಬೀಸುತ್ತಿರುವ ಪ್ರಕರಣಗಳು ಎಲ್ಲೆಡೆಯಿಂದ ವರದಿಯಾಗುತ್ತಿವೆ. ಒಂದು ಕಡೆ ಸರ್ಕಾರದ ವಿನಾಯ್ತಿಯನ್ನೇ ಬಳಸಿಕೊಂಡು ತರಕಾರಿ- ದಿನಸಿ ಖರೀದಿಗೆ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಮುಗಿಬೀಳುವ ನಾಗರಿಕರು, ಮತ್ತೊಂದು ಕಡೆ ಲಾಕ್ ಡೌನ್ ಮತ್ತು ಕರ್ಫ್ಯೂಗೆ ವ್ಯತ್ಯಾಸವಿಲ್ಲದಂತೆ ಕಂಡಕಂಡವರ ಮೇಲೆ ಯಾವುದೇ ಪೂರ್ವಾಪರ ವಿಚಾರಿಸದೇ ಪೈಶಾಚಿಕ ದಾಳಿ ನಡೆಸುತ್ತಿರುವ ಪೊಲೀಸರು!
ಪೊಲೀಸರ ಇಂತಹ ವರಸೆಗೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದಲ್ಲೇ ರೈತನೊಬ್ಬ ಜೀವ ಬಿಟ್ಟಿರುವ ಘಟನೆ ವರದಿಯಾಗಿದೆ. ಪೊಲೀಸರು ಆತನ ಸಾವಿಗೆ ತಾವು ಕಾರಣವಲ್ಲ; ಆತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದರೂ, ವಾಸ್ತವವಾಗಿ ಶನಿವಾರ ರಾತ್ರಿ 10.30ರ ಸುಮಾರಿಗೆ ಜಮೀನಿಗೆ ನೀರು ಹಾಯಿಸಲು ಹೋಗಿ ವಾಪಸು ಬರುವಾಗ ಮನೆಯ ಸಮೀಪದ ಚೆಕ್ ಪೋಸ್ಟಿನಲ್ಲಿ ಪೊಲೀಸರು ತಮ್ಮ ತಂದೆಯನ್ನು ತಡೆದು ಒಂಟಿಯಾಗಿದ್ದ ಅವರ ಮೇಲೆ ದಾಳಿ ನಡೆಸಿದರು. ಲಾಠಿ ಏಟಿನಿಂದ ಅವರು ಸಾವು ಕಂಡಿದ್ದಾರೆ. ಎದೆಯ ಭಾಗದಲ್ಲಿ ಲಾಠಿ ಗುರುತುಗಳಿರುವುದೇ ಇದಕ್ಕೆ ನಿದರ್ಶನ ಎಂದು ಮೃತ ಲಕ್ಷ್ಮಣ ನಾಯ್ಕ(55)ನ ಪುತ್ರ ರಾಮಚಂದ್ರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಣ್ಣದಕೊಪ್ಪದ ಲಕ್ಷ್ಮಣ ನಾಯ್ಕ ಅವರ ಶವದ ವೀಡಿಯೋ ದೃಶ್ಯಾವಳಿಗಳಲ್ಲಿ ಕೂಡ ಪೆಟ್ಟಿನ ಗುರುತುಗಳು ಕಾಣುತ್ತಿವೆ ಎಂಬುದು ಕೂಡ ಗಮನಾರ್ಹ. ಸ್ವತಃ ಲಕ್ಷ್ಮಣ ನಾಯ್ಕನ ಮನೆಮಂದಿ ಮತ್ತು ಗ್ರಾಮಸ್ಥರು ಕೂಡ ಇದು ಪೊಲೀಸರ ಲಾಠಿ ಏಟಿನಿಂದಲೇ ಆಗಿರುವ ಸಾವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಸ್ಪಷ್ಟನೆ ನೀಡಿ, ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದು, ರಾಮಚಂದ್ರ ತನ್ನ ಲಜೇಜು ವಾಹನದಲ್ಲಿ ಎರಡು ಮೂರು ಬಾರಿ ಓಡಾಡಿದ್ದರಿಂದ ಪೊಲೀಸರು ತಡೆದು ಬುದ್ದಿವಾದ ಹೇಳಿದ್ದರು. ಅಷ್ಟರಲ್ಲಿ ಸಮೀಪದ ಮನೆಯಲ್ಲಿದ್ದ ಲಕ್ಷ್ಮಣ ಕೂಡ ಚೆಕ್ ಪೋಸ್ಟ್ ಬಳಿ ಬಂದಿದ್ದರು. ಬಳಿಕ ಪೊಲೀಸರು ಅಪ್ಪ- ಮಗ ಇಬ್ಬರನ್ನೂ ಮನೆಗೆ ಕಳಿಸಿದ್ದರು. ಆಗ ನಡೆದುಕೊಂಡು ಮನೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಕುಸಿದುಬಿದ್ದು ಲಕ್ಷ್ಮಣ ಸಾವು ಕಂಡಿದ್ದಾರೆ ಎಂದು ತಮ್ಮ ಸಿಬ್ಬಂದಿ ತಿಳಿಸಿದ್ದಾರೆ ಎಂದಿದ್ದಾರೆ. ಆದರೆ, ರಾಮಚಂದ್ರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಲಾಗುವುದು. ಶವಪರೀಕ್ಷೆಯ ವರದಿ ಬಂದ ಬಳಿಕ ತನಿಖೆ ಆರಂಭವಾಗುವುದು ಎಂದಿದ್ದಾರೆ.
ಇದನ್ನು ಓದಿ: ಕೊರೋನಾ ಭೀತಿ: ರಾಜ್ಯ ಲಾಕ್ಡೌನ್ ಆದ್ರೆ ನಮ್ ಜೀವನ ಹೆಂಗೆ? ಆಟೋ ಚಾಲಕರ ಪ್ರಶ್ನೆ
ಆದರೆ, ಪೊಲೀಸರ ಹೇಳಿಕೆ ಪ್ರಕಾರವೇ ರಾಮಚಂದ್ರ ಒಂಟಿಯಾಗಿ ತನ್ನ ಲಗೇಜ್ ಆಟೋದಲ್ಲಿ ತನ್ನ ಹೊಲಕ್ಕೆ ಎರಡು ಮೂರು ಬಾರಿ ಓಡಾಡಿದ್ದರಲ್ಲಿ ಲಾಕ್ ಡೌನ್ ಉಲ್ಲಂಘನೆಯ ಪ್ರಶ್ನೆ ಎಲ್ಲಿದೆ? ಒಬ್ಬ ರೈತ ಬೇಸಿಗೆಯಲ್ಲಿ ಬೆಳೆಗೆ ನೀರು ಹಾಯಿಸಲು ವಿದ್ಯುತ್ ಅಭಾವದ ನಡುವೆ ಹತ್ತಾರು ಬಾರಿ ಹೊಲಕ್ಕೆ ಓಡಾಡಬೇಕಾಗುತ್ತದೆ. ಅದೂ ಆತ ಒಂಟಿಯಾಗಿ ಓಡಾಡುವುದರಿಂದ ಮತ್ತೊಬ್ಬರಿಗೆ ಸೋಂಕು ಹರಡಿಸುವ ಅಥವಾ ಸೋಂಕಿಗೆ ಸ್ವತಃ ಒಳಗಾಗುವ ಪ್ರಮೇಯ ಕೂಡ ಇರದು. ಹಾಗಿದ್ದರೂ ಪೊಲೀಸರು ಯಾಕೆ ಆತನನ್ನು ಚೆಕ್ ಪೋಸ್ಟ್ ನಲ್ಲಿ ತಡೆದು, ಮನೆಯಲ್ಲಿದ್ದ ಆತನ ತಂದೆ ರಸ್ತೆಗೆ ಬರುವಂತೆ ಮಾಡಿದರು ? ಎಂಬುದು ತನಿಖೆಯಾಗಬೇಕಾದ ಸಂಗತಿ. ಪೊಲೀಸರು ಹೊಡೆದಿಲ್ಲವೆಂಬ ಮಾತನ್ನು ಒಪ್ಪಿಕೊಂಡರೂ, ಅವರು ಆತನನ್ನು ತಡೆದಿದ್ದು ಯಾವ ಕಾರಣಕ್ಕೆ ಎಂಬುದು ಕೂಡ ಅನುಮಾಸ್ಪದವಾಗಿದೆ. ಲಾಕ್ ಡೌನ್ ಇರುವಾಗ ರೈತರು ಏಕಾಂಗಿಯಾಗಿ ತನ್ನ ಹೊಲಕ್ಕೆ ಹೋಗಬಾರದು ಎಂಬ ಕಾನೂನು ಇದೆಯೇ ಎಂಬ ಪ್ರಶ್ನೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ.
ಈ ನಡುವೆ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ. ಅಲ್ಲಿನ ಆರೋಗ್ಯ ಇಲಾಖೆಯ ನೌಕರರೊಬ್ಬರು ಕರೋನಾ ಕಾರ್ಯಾಚರಣೆಯ ಮೇಲೆ ಕರ್ತವ್ಯದಲ್ಲಿದ್ದವರನ್ನೇ ಪೊಲೀಸರು ಮನಸೋಇಚ್ಛೆ ಥಳಿಸಿ ಕೈಕಾಲು ಮುರಿದು ಆಸ್ಪತ್ರೆಗೆ ಸೇರುವಂತೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅವರ ವೀಡಿಯೋದಲ್ಲಿ, ‘ತಾವು ಜಿಲ್ಲಾಧಿಕಾರಿಗಳು ಕರೆದಿರುವ ವಿಶೇಷ ಸಭೆಗೆ ತೆರಳುತ್ತಿದ್ದೇನೆ. ಕರ್ತವ್ಯದ ಮೇಲೆ ಇರುವ ಆರೋಗ್ಯ ಇಲಾಖೆ ನೌಕರ ಎಂದು ಕಡತ ತೋರಿಸಿದರೂ ಪೊಲೀಸರು ಅಟ್ಟಾಡಿಸಿ ಹೊಡೆದರು. ತಮ್ಮ ಐಡಿ ಕಾರ್ಡು, ಕಡತ ಯಾವುದನ್ನು ತೋರಿಸಿದರೂ ಅದನ್ನು ಕೇಳುವ ವ್ಯವಧಾನವೇ ಇರಲಿಲ್ಲ. 25-30 ಬಾರಿ ಪೊಲೀಸರು ಗುಂಪಾಗಿ ಹೊಡೆದ ಪರಿಣಾಮ ಒಂದು ಕೈ ಮುರಿದಿದೆ. ಕಾಲು ಮತ್ತು ಬೆನ್ನಿಗೆ ತೀವ್ರ ಪೆಟ್ಟಾಗಿದೆ” ಎಂದು ಹೇಳಿದ್ದಾರೆ. ಆಸ್ಪತ್ರೆಯ ಹಾಸಿಗೆಯ ಮೇಲೆ ಕೈಗೆ ಬ್ಯಾಂಡೇಜು ಹಾಕಿಸಿಕೊಂಡು ಅವರು ನೀಡಿರುವ ಹೇಳಿಕೆಯ ವೀಡಿಯೋ ಈಗ ವೈರಲ್ ಆಗಿದೆ.
ಇದನ್ನು ಓದಿ: ಸರಕಾರದ ಬೇಜವಾಬ್ದಾರಿಯ ಸಾವುಗಳು ಕೊರೊನಾ ಸಾವುಗಳಿಗಿಂತಲೂ ಭೀಕರ: ಪಿ.ಸಾಯಿನಾಥ್
ಪೊಲೀಸರಿಗೆ ಮುಖ್ಯವಾಗಿ; ಕರ್ಫ್ಯೂ ಮತ್ತು ಲಾಕ್ ಡೌನ್ ನಡುವೆ ಇರುವ ವ್ಯತ್ಯಾಸದ ಬಗ್ಗೆ ಹಿರಿಯ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ ಇರುವುದೇ ಪೊಲೀಸರ ಈ ಅಟ್ಟಹಾಸಕ್ಕೆ ಕಾರಣ ಎನ್ನಲಾಗುತ್ತಿದೆ. ವೃದ್ಧರು, ಮಕ್ಕಳು ಮರಿ, ಮಹಿಳೆಯರೆನ್ನದೆ ಪೊಲೀಸರು ಎಲ್ಲರ ಮೇಲೆ ದಾಳಿ ನಡೆಸುತ್ತಿದ್ದಾರೆ. ಇಷ್ಟಾಗಿಯೂ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ತುಟಿಬಿಚ್ಚಿಲ್ಲ. ಕಾನೂನು ಸುವ್ಯವಸ್ಥೆ ಕಾಯುವ ಕರ್ಫ್ಯೂ ಸಂದರ್ಭಕ್ಕೂ ಒಂದು ಸಾಂಕ್ರಾಮಿಕದ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೇರುವ ಲಾಕ್ ಡೌನ್ ಸಂದರ್ಭಕ್ಕೂ ಇರುವ ವ್ಯತ್ಯಾಸ ಸ್ವತಃ ಗೃಹ ಸಚಿವರಿಗೆ ಸ್ಪಷ್ಟವಿದ್ದಂತಿಲ್ಲ. ಹಾಗಾಗಿಯೇ ಇಷ್ಟೊಂದು ಅವಘಡಗಳಿಗೆ ಈ ಲಾಕ್ ಡೌನ್ ಸಾಕ್ಷಿಯಾಗುತ್ತಿದೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ.
ಈ ನಡುವೆ, ಹಲವು ಸಾಮಾಜಿಕ ಸಂಘಟನೆಗಳು ಮತ್ತು ಹೋರಾಟಗಾರರು ಪೊಲೀಸರ ಕ್ರಮವನ್ನು ಖಂಡಿಸಿದ್ದು, “ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಮೊಂಡುತನದ ಜನರನ್ನು ಆ ಶಿಸ್ತಿಗೆ ಒಗ್ಗಿಸಲು ಪೊಲೀಸರು ಬೀದಿಗಿಳಿಯುವುದು ಕೂಡ ಅನಿವಾರ್ಯ. ಆದರೆ, ರಸ್ತೆಯಲ್ಲಿ ಸಂಚರಿಸುವ ವ್ಯಕ್ತಿ ಏಕೆ ಬಂದಿದ್ದಾನೆ ಎಂಬುದನ್ನು ತಿಳಿಯುವ ತಾಳ್ಮೆ ಪೊಲೀಸರಿಗೆ ಇರಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿಯೂ ಜನ ತೀರಾ ಅನಿವಾರ್ಯವಿಲ್ಲದೆ ತಮ್ಮ ಸುರಕ್ಷತೆಯನ್ನೂ ಪಣಕ್ಕಿಟ್ಟು ರಸ್ತೆಗೆ ಇಳಿಯಲಾರರು ಎಂಬುದು ಸಾಮಾನ್ಯ ಜ್ಞಾನ. ಪೊಲೀಸರು ಇದನ್ನು ಅರ್ಥಮಾಡಿಕೊಂಡು ಒಂದಿಷ್ಟು ಸಂಯಮದಿಂದ ವರ್ತಿಸದೇ ಹೋದರೆ, ಕರೋನಾ ಸಾವಿಗೆ ಮುನ್ನವೇ ಜನರ ಲಾಠಿ ಏಟಿಗೆ ಸಾಯುವ ಪರಿಸ್ಥಿತಿ ತಲೆದೋರಬಹುದು” ಎಂಬ ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ ವಕೀಲ ಕೆ ಪಿ ಶ್ರೀಪಾಲ್ ಆತಂಕ ವ್ಯಕ್ತಪಡಿಸಿದ್ದಾರೆ.
“ಮುಖ್ಯವಾಗಿ ಶಿಕಾರಿಪುರ ತಾಲ್ಲೂಕಿನ ರೈತನ ಸಾವಿನ ಕುರಿತು ಪ್ರತ್ಯೇಕವಾಗಿ ನ್ಯಾಯಾಂಗ ತನಿಖೆಯಾಗಬೇಕು. ಏಕೆಂದರೆ, ಸಾವಿನ ವಿಷಯದಲ್ಲಿ ಜನರು ಮತ್ತು ಕುಟುಂಬವರ್ಗದವರು ಹೇಳುವ ಸಂಗತಿಗಳಿಗೂ, ಪೊಲೀಸರ ಸ್ಪಷ್ಟನೆಗೆ ಸಾಕಷ್ಟು ಗೊಂದಲವಿದೆ. ಜೊತೆಗೆ ರೈತನೊಬ್ಬ ತನ್ನ ಹೊಲಕ್ಕೆ ನೀರು ಬಿಡಲು ಹೋಗುತ್ತಿದ್ದಾಗ ಆತನನ್ನು ತಡೆದು ಆತಂಕ ಮೂಡಿಸುವ ಪ್ರಮೇಯವೇ ಇಲ್ಲ. ಹಾಗಿದ್ದರೂ ಚೆಕ್ ಪೋಸ್ಟ್ ಪೊಲೀಸರು ಯಾಕೆ ಹಾಗೆ ಮಾಡಿದರು? ಎಂಬ ಪ್ರಶ್ನೆಯೂ ಇದೆ. ಹಾಗಾಗಿ ಘಟನೆ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಮತ್ತು ಒಂದು ವೇಳೆ ಪೊಲೀಸರ ತಪ್ಪಿದ್ದರೆ, ತಕ್ಕ ಶಿಕ್ಷೆಯಾಗಬೇಕು” ಎಂದೂ ಶ್ರೀಪಾಲ್ ಆಗ್ರಹಿಸಿದ್ದಾರೆ.
ಈ ನಡುವೆ, ಜನರು ಅಗತ್ಯ ವಸ್ತಗಳಿಗಾಗಿ ಹೊರಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ವಿವಿಧ ಜಿಲ್ಲಾಡಳಿತಗಳು ಪ್ರತಿ ಮನೆ ಬಾಗಿಲಿಗೆ ತರಕಾರಿ, ಹಾಲು, ಹಣ್ಣು ಮುಂತಾದ ವಸ್ತುಗಳನ್ನು ತಲುಪಿಸುವ ಕ್ರಮಕೈಗೊಳ್ಳುತ್ತಿವೆ. ಜೊತೆಗೆ ಔಷಧಿ, ಆಹಾರ ಪದಾರ್ಥ ಮುಂತಾದ ತುರ್ತು ಅಗತ್ಯಗಳನ್ನು ಕೂಡ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆಗಳು ಮತ್ತು ವೃತ್ತಿನಿರತರ ಸ್ವಯಂಸೇವಕರನ್ನು ಬಳಸಿಕೊಂಡು ಪರಿಣಾಮಕಾರಿ ವ್ಯವಸ್ಥೆ ಜಾರಿಗೊಳಿಸಿದ್ದಲ್ಲಿ ಸಾಮಾಜಿಕ ಅಂತರವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾಧ್ಯ. ಆ ದಿಸೆಯಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತಗಳು ಹೆಚ್ಚು ಗಮನ ಹರಿಸಬೇಕಾಗಿದೆ.