Homeಮುಖಪುಟಶಾಶ್ವತವಾಗಿ ಕಾಡಲಿರುವ ಮತ್ತೊಂದು ವಿಭಜನೆಯ ಚಿತ್ರ

ಶಾಶ್ವತವಾಗಿ ಕಾಡಲಿರುವ ಮತ್ತೊಂದು ವಿಭಜನೆಯ ಚಿತ್ರ

- Advertisement -
- Advertisement -

ಕೊರೊನ ನಿಯಂತ್ರಣ ಮಾಡಲು ಸರಕಾರ ಕೈಗೊಳ್ಳುತ್ತಿರುವ ಮುನ್ನೆಚ್ಚರಿಕೆಯ ಕ್ರಮವಾಗಿ ನಿನ್ನೆ ಉತ್ತರ ಪ್ರದೇಶದಲ್ಲಿ ವಿಧೇಯರಾಗಿ ಮೈಮೇಲೆ ರಾಸಾಯನಿಕ ಸಿಂಪಡಿಸಿಕೊಳ್ಳುತ್ತಿದ್ದ ಆ ಮಂದಿ ಇದ್ದಾರಲ್ಲ, ಅವರಲ್ಲಿ ಒಬ್ಬರಾಗಿ ನಮ್ಮನ್ನು ಊಹಿಸಿಕೊಳ್ಳೋಣ. ಅವರಲ್ಲಿ ಒಬ್ಬರಾಗಿ ನಮ್ಮ ಗಂಡ, ಹೆಂಡತಿ, ಮಗ, ಮಗಳು, ಅಣ್ಣ ತಮ್ಮ, ತಂಗಿ, ಅಕ್ಕ, ಇನ್ನಿತರ ಸಮೀಪದ ಕುಟುಂಬಸ್ಥರು, ಸ್ನೇಹಿತರು ಮುಂತಾದವರ ಪೈಕಿ ಯಾರನ್ನಾದರೂ ಊಹಿಸಿಕೊಳ್ಳೋಣ. ನಮಗೆ ಏನನಿಸುತಿತ್ತು? ಇನ್ನೊಮ್ಮೆ ನಮ್ಮನ್ನು ನಾವೇ ಕೇಳಿಕೊಳ್ಳೋಣ, ಏನನಿಸುತಿತ್ತು? ಅದೇ ಅನಿಸಿಕೆ ನಮಗೆ ‘ನಮ್ಮವರು’ ಅಂತ ನಾವು ಭಾವಿಸದ, ನಮ್ಮ ಹಾಗಿರುವ ಬಟ್ಟೆ ತೊಟ್ಟುಕೊಳ್ಳದ, ನಮ್ಮ ಹಾಗೆ ಅಧಿಕಾರಸ್ಥರ ಜತೆ ಮಾತನಾಡಲಾಗದ ಆ ಜನ ಅಕ್ಷರಶ ಪ್ರಾಣಿಗಳಂತೆ ಸರಕಾರದ ಮಂದಿಯ ಕೈಯ್ಯಲ್ಲಿ ಶಾರೀರಿಕ ಹಿಂಸೆಯನ್ನೂ, ಮಾನಸಿಕ ಅವಮಾನವನ್ನೂ ಅನುಭವಿಸುವಾಗ ಬಂತೇ? ಘಟನೆಯ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ ಅಲ್ಲಿನ ಜಿಲ್ಲಾಧಿಕಾರಿ ಹೇಳಿದ್ದಿಷ್ಟು: ‘ಆ ಜನರನ್ನು ಹೊತ್ತು ತಂದಿದ್ದ ವಾಹನದ ಮೇಲೆ ರಾಸಾಯನಿಕ ಸಿಂಪಡಿಸಿ ಅಂತ ನಿರ್ದೇಶನವಿತ್ತು. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕೆಳ ಹಂತದಲ್ಲಿ ಕೆಲಸಮಾಡುವ ಸಿಬ್ಬಂದಿ ಅತ್ಯುತ್ಸಾಹ (over enthusiasm) ತೋರಿದ ಕಾರಣ ಈ ಘಟನೆ ನಡೆದಿದೆ. ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’.

ಹೌದು. ಅಚಾತುರ್ಯಗಳು ನಡೆಯುತ್ತವೆ. ಇದು ಸಂಕಷ್ಟದ ಕಾಲ. ಕೈಮೀರುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸುವುದು ಸರಕಾರಕ್ಕಾದರೂ ಕಷ್ಟವೇ. ಈಗ ಸಿಕ್ಕ ಸಿಕ್ಕಲ್ಲೆಲ್ಲಾ ಹುಳುಕು ಹುಡುಕುವುದು ಸರಿಯಲ್ಲ. ಈ ಘಟನೆ ಕೂಡಾ ಅಚಾತುರ್ಯದಿಂದಲೇ ನಡೆಯಿತು ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಕೆಲ ಪ್ರಶ್ನೆಗಳನ್ನು ಕೇಳದೆ ಹೋದರೆ ಚರಿತ್ರೆ ನಮ್ಮನ್ನು ಕ್ಷಮಿಸಲಾರದು.

ಮೊದಲನೆಯದಾಗಿ, ಕೆಳಹಂತದಲ್ಲಿ ಕೆಲಸ ಮಾಡುವ ಅಲ್ಲಿನ ಸರಕಾರೀ ಸಿಬ್ಬಂದಿಗೆ ತಮ್ಮಂತೆ ಇರುವ ಮನುಷ್ಯರನ್ನು ಹೀಗೆ ನಡೆಸಿಕೊಳ್ಳಬಹುದೆಂದು ಅನ್ನಿಸುತ್ತದೆ ಎನ್ನುವುದಿದೆಯಲ್ಲ, ಅದು ಕೊರೊನಕ್ಕಿಂತಲೂ ಅಪಾಯಕಾರಿಯಾದದ್ದಲ್ಲವೇ? ಅವರ ಮನಸ್ಸು ಎಂತಹದ್ದು? ಅವರ ಸಂವೇದನೆ ಎಂತಹದ್ದು? ಅವರ ಯೋಚನೆಯ ಮಟ್ಟ ಎಂತಹದ್ದು? ಕೊರೊನ ಹೇಗೋ ಇನ್ನೊಂದಷ್ಟು ಸಮಯದಲ್ಲಿ ನಾಶವಾಗುತ್ತದೆ ಅಥವಾ ರೂಪಾಂತರ ಹೊಂದುತ್ತದೆ. ಆದರೆ ಇಂತಹದ್ದೊಂದು ಅಮಾನುಷ ವ್ಯವಸ್ಥೆ ಇದು ನಮಗೆ ಶಾಶ್ವತ ಎನ್ನುವ ಸತ್ಯ ನಮ್ಮನ್ನು ಕಾಡದೆ ಹೋದರೆ ಹೇಗೆ?


ಇದನ್ನು ಓದಿ: ಮೂರನೇ ಒಂದು ಭಾಗದಷ್ಟು ವಲಸೆ ಕಾರ್ಮಿಕರು ಕೊರೊನಾ ಸೋಂಕಿಗೆ ಒಳಗಾಗಬಹುದು: ಸುಪ್ರೀಂಗೆ ಕೇಂದ್ರದ ಉತ್ತರ


ಇನ್ನೊಂದು ವಿಚಾರ. ಈ ಘಟನೆಗೆ ಅಲ್ಲಿನ ಅಧಿಕಾರಸ್ಥರು ಪ್ರತಿಕ್ರಿಯಿಸಿದ ರೀತಿ ನೋಡಿ. ಅಲ್ಲಿನ ಜಿಲ್ಲಾಧಿಕಾರಿ ನೀಡಿದ ಮೇಲಿನ ಪ್ರತಿಕ್ರಿಯೆ ಗಮನಿಸಿ. ಅದು ಯಾಂತ್ರಿಕ, ತಾಂತ್ರಿಕ ಪ್ರತಿಕ್ರಿಯೆ. ಅದರಲ್ಲಿ, ಒಂದಷ್ಟು ಮಾನವೀಯ ಸಂವೇದನೆಯ ಸೆಲೆ ಕಾಣಿಸುತ್ತದೆಯೇ? ವಾಸ್ತವದಲ್ಲಿ, ಆತನ ಪ್ರತಿಕ್ರಿಯೆ ಆತ ಆ ಕಷ್ಟಜೀವಿಗಳ ಕ್ಷಮೆ ಕೇಳುವುದರೊಂದಿಗೆ ಪ್ರಾರಂಭವಾಗಬೇಕಿತ್ತು. ಬಿಡಿ, ಆತ ಎಷ್ಟಾದರೂ ಅಧಿಕಾರಶಾಹಿಯ ಭಾಗ. ಅಲ್ಲಿನ ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖೆಯ ಮಂತ್ರಿ, ಅಲ್ಲಿನ ಶಾಸಕ, ಆ ಪ್ರದೇಶದ ಸಂಸದ ಯಾರ ಬಾಯಿಯಿಂದಾದರೂ ಒಂದು ಸಣ್ಣ ಪಶ್ಚಾತಾಪದ, ಮರುಕದ ಪ್ರತ್ರಿಕ್ರಿಯೆ ಬರಲಿಲ್ಲ.

ಇನ್ನೂ ಒಂದು ಗಮನಿಸಬೇಕಾದ ವಿಚಾರ ಅಂತ ಅಂದರೆ ಅಲ್ಲಿನ (ಬರೇಲಿ ಕ್ಷೇತ್ರ) ಸಂಸದ ಸಂತೋಷ್ ಗಂಗ್ವಾರ್ ಕೇಂದ್ರ ಸಚಿವ ಸಂಪುಟದಲ್ಲಿ ಕಾರ್ಮಿಕ ಖಾತೆಯ ಸಚಿವ. ಹಿಂಸೆ ಅನುಭವಿಸಿದ್ದು ಕಾರ್ಮಿಕರು ಎಂಬ ಕಾರಣಕ್ಕೋಸ್ಕರವಾದರೂ ಆ ವ್ಯಕ್ತಿಯ ಬಾಯಿಂದ ಒಂದು ಸಾಂತ್ವನದ ಮಾತು ಬರಬೇಕಿತ್ತಲ್ಲಾ. ಇಲ್ಲ, ಈ ತನಕ ಬಂದಿಲ್ಲ. ಅಂದರೆ ಈ ಘಟನೆ ನಮಗೆ ಎತ್ತಿ ತೋರಿಸಿದ್ದು ಎಲ್ಲಾ ಕಡೆ, ಎಲ್ಲಾ ಸಮಯದಲ್ಲೂ, ಎಲ್ಲಾ ಸ್ತರದ ಮಂದಿಯಿಂದಲೂ ಸಂಭವಿಸಬಹುದಾದ ಒಂದು ಅಚಾತುರ್ಯವನ್ನು ಮಾತ್ರವಲ್ಲ. ಅದು ಎತ್ತಿ ತೋರಿಸಿದ್ದು ಈ ದೇಶದಲ್ಲಿ ಉಳ್ಳವರಿಗೆ, ಪ್ರಬಲರಿಗೆ, ಅಧಿಕಾರಸ್ಥರಿಗೆ ಸಾಮಾನ್ಯ ಜನರ ಬಗ್ಗೆ ಇರುವ ಉಪೇಕ್ಷೆಯನ್ನು. ಇಂತಹದ್ದೊಂದು ಘಟನೆ ಯಾರದ್ದಾದರೂ ಅಚಾತುರ್ಯದಿಂದಲೇ ಆದರೂ ಈ ದೇಶದ ಯಾವುದಾದರೂ ಒಂದು ವಿಮಾನ ನಿಲ್ದಾಣದಲ್ಲಿ ನಡೆದಿದ್ದರೆ ಏನಾಗುತ್ತಿತ್ತು. ಇಷ್ಟೊತ್ತಿಗೆ ಅಲ್ಲಿನ ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿತ್ತೇ? ಅಂದ ಹಾಗೆ ಈ ಕರೋನ ಎಂಬ ದುರಂತವನ್ನು ಹೊತ್ತು ತಂದದ್ದು ವಿಮಾನಗಳಲ್ಲಿ ಬಂದಿಳಿದವರು. ಈಗ ಅದರ ನಿರ್ನಾಮಕ್ಕಾಗಿ ರಾಸಾಯನಿಕದಲ್ಲಿ ಮುಳುಗೇಳುತ್ತಿರುವುದು ರಸ್ತೆಗಳಲ್ಲಿ ನಡೆದುಕೊಂಡು ಹೋಗಲೂ ಅವಕಾಶವಿಲ್ಲದ ಬಡವರು.

ಬರೇಲಿ ಕ್ಷೇತ್ರದ ಸಂಸದ ಸಂತೋಷ್ ಗಂಗ್ವಾರ್

ಕರೋನ ಲಾಕೌಟ್ ಜಾರಿಗೆ ಬಂದ ಕ್ಷಣದಿಂದ ನರಕ ಸದೃಶ ಬದುಕನ್ನು ಅನುಭವಿಸುತ್ತಿರುವವರು ಈ ದೇಶದ ವಲಸೆ ಕಾರ್ಮಿಕರು. ಅವರೇ ಈ ದೇಶವನ್ನು ನಿಜ ಅರ್ಥದಲ್ಲಿ ಕಟ್ಟುತ್ತಿರುವವರು. ಭಾರತದ ಬೆಳವಣಿಗೆಯ ಸಾಕಾರ ಸ್ವರೂಪವಾಗಿ ನಗರಗಳಲ್ಲಿ ಏಳುತ್ತಿರುವ ಬಹುಅಂತಸ್ತಿನ ಕಟ್ಟಡಗಳನ್ನು, ಅಗಲಗಲದ ಹೆದ್ದಾರಿಗಳನ್ನೂ, ಎತ್ತರೆತ್ತರದ ಮೇಲ್ಸೇತುವೆಗಳನ್ನು ಕೊರೆವ ಚಳಿಯಲ್ಲಿ, ಸುಡುವ ಬಿಸಿಲಲ್ಲಿ ನಿಂತು ಹಗಲಿರುಳು ಕಟ್ಟುತ್ತಿರುವುದು ಈ ಶ್ರಮಿಕ ವರ್ಗ. ನಗರಗಳಲ್ಲೇ ನಮ್ಮ ನಡುವೆ ನೆಲೆಸಿದ್ದರೂ ನಮ್ಮ ಕಣ್ಣುಗಳು ಅವರೆಡೆಗೆ ಎಷ್ಟು ಕುರುಡಾಗಿದೆ ಎಂದು ನಮಗೆ ಅರ್ಥ ಮಾಡಿಸಿದ್ದು ಕೊರೊನಾ ಎನ್ನುವ ಅದೃಶ್ಯ ಸೂಕ್ಷ್ಮ ಜೀವಿ. ಈ ಮಂದಿ ಸಾಲು ಸಾಲಾಗಿ ಬೀದಿಗಿಳಿದು ನಮ್ಮನ್ನು ನಮ್ಮ ನಮ್ಮ ಊರುಗಳಿಗೆ ಮರಳಿ ಹೋಗಲು ಬಿಡಿ ಎಂದು ಗೋಗರೆಯತೊಡಗಿದಾಗ ಇಷ್ಟೊಂದು ಸಂಖ್ಯೆಯಲ್ಲಿ ನಮ್ಮ ಥಳುಕಿನ ಬದುಕಿನ ನಡುವೆ ಇವರೆಲ್ಲಾ ಇದ್ದಾರೆ ಎನ್ನುವ ಸತ್ಯ ನಮಗೆ ಗೋಚರವಾದದ್ದು. ಲಕ್ಷ ಲಕ್ಷ ಸಂಖ್ಯೆಯಲ್ಲಿ ತಮ್ಮ ಇದ್ದ ಬದ್ದ ಸರಕುಗಳನ್ನೆಲ್ಲಾ ತಲೆಯಲ್ಲಿ, ಹೆಗಲಲ್ಲಿ ಹೊತ್ತುಕೊಂಡು, ಹಸಿದು ಅಳುವ ಕಂದಮ್ಮಗಳನ್ನು ಕಂಕುಳಲ್ಲಿ ತಗಲಿಸಿಕೊಂಡು ಸಾಲು ಸಾಲಾಗಿ ನಗರಗಳ ಬೀದಿಗಳಲ್ಲಿ ಇವರು ನಡೆದೇ ಸಾಗುತಿದ್ದ ದೃಶ್ಯ ಈ ದೇಶದ ಆತ್ಮಸಾಕ್ಷಿಯನ್ನು ಬಹುಕಾಲ ಕಾಡಲಿದೆ. ಆತ್ಮಸಾಕ್ಷಿ ಎನ್ನುವುದು ಇನ್ನೂ ಎಲ್ಲಾದರೂ ಉಳಿದಿದ್ದರೆ.


ಇದನ್ನು ಓದಿ: ಲಾಕ್‌ಡೌನ್‌ ಘೋಷಿದಂದಿನಿಂದ 22 ವಲಸೆ ಕಾರ್ಮಿಕರ ಸಾವು


ಕಾಣಿಸಿದಾಗಲೆಲ್ಲಾ ನಮ್ಮ ಆತ್ಮಸಾಕ್ಷಿಯನ್ನು ಇದುವರೆಗೆ ಕಲುಕುತಿದ್ದ ಚಿತ್ರ ಬೇರೊಂದಿತ್ತು. ಮಾಧ್ಯಮಗಳಲ್ಲಿ, ಪ್ರದರ್ಶನಾಲಯಗಳಲ್ಲಿ, ಪುಸ್ತಕಗಳಲ್ಲಿ, ಡಾಕ್ಯುಮೆಂಟರಿಗಳಲ್ಲಿ ನಾವು ನೋಡಿರಬಹುದಾದ ಆ ದೃಶ್ಯ 1947ರ ದೇಶ ವಿಭಜನೆಗೆ ಸಂಬಂದಿಸಿದ್ದು. ಅಂದಿನ ಜನ ಧರ್ಮದ್ವೇಷ ಎಂಬ ಇನ್ನೊಂದು ವೈರಸ್ಸಿನ ದಾಳಿಗೆ ತುತ್ತಾಗಿ ಭಾರತದಿಂದ ಪಾಕಿಸ್ತಾನದತ್ತ, ಪಾಕಿಸ್ತಾನದಿಂದ ಭಾರತದತ್ತ ಸಾಲುಸಾಲಾಗಿ ಸಾಗುತಿದ್ದ ಆ ಕಪ್ಪುಬಿಳುಪು ಚಿತ್ರ ಮನುಷ್ಯತ್ವ ಎನ್ನುವುದು ಲವಲೇಶವಾದರೂ ಉಳಿಸಿಕೊಂಡಿರುವ ಮನುಷ್ಯರನ್ನು ಬಹಳ ಹೊತ್ತು ಕಾಡುತ್ತದೆ.

ಅದನ್ನು ಊಹಿಸಿಕೊಂಡರೂ ಮನಸ್ಸಿನಲ್ಲಿ ತಳಮಳ ಉಂಟಾಗುತ್ತದೆ. ಅದು ಚಿತ್ರ. ಬಹಳ ಹಳೆಯ ಚಿತ್ರ. ಕಳೆದ ಒಂದು ವಾರದಿಂದ ನಾವು ಕಂಡದ್ದು ಈ ಚಿತ್ರವನ್ನೂ ಮೀರಿಸುವ ದುರಂತಮಯ ಜೀವಂತ ಚಿತ್ರಣವನ್ನು. ಇದಕ್ಕೆ ಸಂಬಂಧಿಸಿದ ಚಿತ್ರಗಳು, ವಿಡಿಯೋಗಳು ದೇಶ ವಿಭಜನೆಯ ಹಳೆಯ ದುರಂತಕ್ಕಿಂತಲೂ ಮಿಗಿಲಾದ ದುರಂತ ಒಂದನ್ನು ನಮ್ಮ ಮನದಲ್ಲಿ ಆಗಾಗ ಕುಣಿಸಲಿದೆ. ಇದೂ ಒಂದು ವಿಭಜನೆಯ ಕತೆಯೇ ಅಲ್ಲವೇ? ಅಂದಿನದ್ದು ಈ ದೇಶದ ಭೂಗೋಳ-ರಾಜಕೀಯ ವಿಭಜನೆಯ ಚಿತ್ರಣವಾದರೆ, ಇದು ಈ ದೇಶದ ಆರ್ಥಿಕ ಸಾಮಾಜಿಕ ವಿಭಜನೆಯ ಕತೆ.

ಲಾಕ್‌ಡೌನ್ ಅನಿವಾರ್ಯವಾಗಿರಬಹುದು. ಆದರೆ, ರಸ್ತೆಗಳಲ್ಲಿ ಯಾರೂ ಇಲ್ಲದ ಅಂದರೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಬದುಕುವ ದೇಶಗಳೂ ಕೂಡಾ ಒಂದೆರಡು ದಿವಸಗಳ ಅವಧಿ ನೀಡಿ ಲಾಕ್‌ಡೌನ್ ಘೋಷಿಸಿರುವಾಗ ಹೆಚ್ಚು ಕಡಿಮೆ ರಸ್ತೆಯಲ್ಲೇ ಬದುಕುವ ಇಷ್ಟೊಂದು ಮಂದಿ ನಮ್ಮ ನಡುವೆ ಇದ್ದಾರೆ ಎಂಬ ಸಣ್ಣ ಅರಿವಾದರು ಇದ್ದಿದ್ದರೆ ಇನ್ನೈದು ಘಂಟೆಗಳಲ್ಲಿ ಯಾರೂ ರಸ್ತೆಗಳಲ್ಲಿ ಕಾಣಿಸಿಕೊಳ್ಳಬಾರದು ಎನ್ನುವ ಆದೇಶ ಬರಲು ಸಾಧ್ಯವಿತ್ತೇ. ಏನು ಕೊರೊನ, ಏನು ಸಾಮಾಜಿಕ ಅಂತರ, ಏನು ಇಷ್ಟೆಲ್ಲಾ ಅವಾಂತರ ಎನ್ನುವ ಎನ್ನುವ ಯಾವ ಅರಿವು ಕೂಡಾ ಇಲ್ಲದೆ ದಿಗಿಲಿನಿಂದ, ಹಸಿವಿನಿಂದ, ಅವಮಾನದಿಂದ ಈ ಮಂದಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸೇರಿ ತಮ್ಮ ತಮ್ಮ ಊರುಗಳತ್ತ ನಡೆಯಲು ಪ್ರಾರಂಭಿಸಿದಾಗಲೇ ಏನೋ ಎಡವಟ್ಟಾಗಿದೆ ಅಂತ ನಮಗೆ ತಿಳಿದದ್ದು. ನಮಗೆ ಎಂದರೆ ನಮಗೆ. ಕೇವಲ ಆಳುವವರಿಗೆ ಮಾತ್ರವಲ್ಲ. ಆಳುವವರನ್ನು ಪೂಜಿಸುವ, ಟೀಕಿಸುವ ಎಲ್ಲರಿಗೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...