Homeಮುಖಪುಟಶಾಶ್ವತವಾಗಿ ಕಾಡಲಿರುವ ಮತ್ತೊಂದು ವಿಭಜನೆಯ ಚಿತ್ರ

ಶಾಶ್ವತವಾಗಿ ಕಾಡಲಿರುವ ಮತ್ತೊಂದು ವಿಭಜನೆಯ ಚಿತ್ರ

- Advertisement -
- Advertisement -

ಕೊರೊನ ನಿಯಂತ್ರಣ ಮಾಡಲು ಸರಕಾರ ಕೈಗೊಳ್ಳುತ್ತಿರುವ ಮುನ್ನೆಚ್ಚರಿಕೆಯ ಕ್ರಮವಾಗಿ ನಿನ್ನೆ ಉತ್ತರ ಪ್ರದೇಶದಲ್ಲಿ ವಿಧೇಯರಾಗಿ ಮೈಮೇಲೆ ರಾಸಾಯನಿಕ ಸಿಂಪಡಿಸಿಕೊಳ್ಳುತ್ತಿದ್ದ ಆ ಮಂದಿ ಇದ್ದಾರಲ್ಲ, ಅವರಲ್ಲಿ ಒಬ್ಬರಾಗಿ ನಮ್ಮನ್ನು ಊಹಿಸಿಕೊಳ್ಳೋಣ. ಅವರಲ್ಲಿ ಒಬ್ಬರಾಗಿ ನಮ್ಮ ಗಂಡ, ಹೆಂಡತಿ, ಮಗ, ಮಗಳು, ಅಣ್ಣ ತಮ್ಮ, ತಂಗಿ, ಅಕ್ಕ, ಇನ್ನಿತರ ಸಮೀಪದ ಕುಟುಂಬಸ್ಥರು, ಸ್ನೇಹಿತರು ಮುಂತಾದವರ ಪೈಕಿ ಯಾರನ್ನಾದರೂ ಊಹಿಸಿಕೊಳ್ಳೋಣ. ನಮಗೆ ಏನನಿಸುತಿತ್ತು? ಇನ್ನೊಮ್ಮೆ ನಮ್ಮನ್ನು ನಾವೇ ಕೇಳಿಕೊಳ್ಳೋಣ, ಏನನಿಸುತಿತ್ತು? ಅದೇ ಅನಿಸಿಕೆ ನಮಗೆ ‘ನಮ್ಮವರು’ ಅಂತ ನಾವು ಭಾವಿಸದ, ನಮ್ಮ ಹಾಗಿರುವ ಬಟ್ಟೆ ತೊಟ್ಟುಕೊಳ್ಳದ, ನಮ್ಮ ಹಾಗೆ ಅಧಿಕಾರಸ್ಥರ ಜತೆ ಮಾತನಾಡಲಾಗದ ಆ ಜನ ಅಕ್ಷರಶ ಪ್ರಾಣಿಗಳಂತೆ ಸರಕಾರದ ಮಂದಿಯ ಕೈಯ್ಯಲ್ಲಿ ಶಾರೀರಿಕ ಹಿಂಸೆಯನ್ನೂ, ಮಾನಸಿಕ ಅವಮಾನವನ್ನೂ ಅನುಭವಿಸುವಾಗ ಬಂತೇ? ಘಟನೆಯ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ ಅಲ್ಲಿನ ಜಿಲ್ಲಾಧಿಕಾರಿ ಹೇಳಿದ್ದಿಷ್ಟು: ‘ಆ ಜನರನ್ನು ಹೊತ್ತು ತಂದಿದ್ದ ವಾಹನದ ಮೇಲೆ ರಾಸಾಯನಿಕ ಸಿಂಪಡಿಸಿ ಅಂತ ನಿರ್ದೇಶನವಿತ್ತು. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕೆಳ ಹಂತದಲ್ಲಿ ಕೆಲಸಮಾಡುವ ಸಿಬ್ಬಂದಿ ಅತ್ಯುತ್ಸಾಹ (over enthusiasm) ತೋರಿದ ಕಾರಣ ಈ ಘಟನೆ ನಡೆದಿದೆ. ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’.

ಹೌದು. ಅಚಾತುರ್ಯಗಳು ನಡೆಯುತ್ತವೆ. ಇದು ಸಂಕಷ್ಟದ ಕಾಲ. ಕೈಮೀರುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸುವುದು ಸರಕಾರಕ್ಕಾದರೂ ಕಷ್ಟವೇ. ಈಗ ಸಿಕ್ಕ ಸಿಕ್ಕಲ್ಲೆಲ್ಲಾ ಹುಳುಕು ಹುಡುಕುವುದು ಸರಿಯಲ್ಲ. ಈ ಘಟನೆ ಕೂಡಾ ಅಚಾತುರ್ಯದಿಂದಲೇ ನಡೆಯಿತು ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಕೆಲ ಪ್ರಶ್ನೆಗಳನ್ನು ಕೇಳದೆ ಹೋದರೆ ಚರಿತ್ರೆ ನಮ್ಮನ್ನು ಕ್ಷಮಿಸಲಾರದು.

ಮೊದಲನೆಯದಾಗಿ, ಕೆಳಹಂತದಲ್ಲಿ ಕೆಲಸ ಮಾಡುವ ಅಲ್ಲಿನ ಸರಕಾರೀ ಸಿಬ್ಬಂದಿಗೆ ತಮ್ಮಂತೆ ಇರುವ ಮನುಷ್ಯರನ್ನು ಹೀಗೆ ನಡೆಸಿಕೊಳ್ಳಬಹುದೆಂದು ಅನ್ನಿಸುತ್ತದೆ ಎನ್ನುವುದಿದೆಯಲ್ಲ, ಅದು ಕೊರೊನಕ್ಕಿಂತಲೂ ಅಪಾಯಕಾರಿಯಾದದ್ದಲ್ಲವೇ? ಅವರ ಮನಸ್ಸು ಎಂತಹದ್ದು? ಅವರ ಸಂವೇದನೆ ಎಂತಹದ್ದು? ಅವರ ಯೋಚನೆಯ ಮಟ್ಟ ಎಂತಹದ್ದು? ಕೊರೊನ ಹೇಗೋ ಇನ್ನೊಂದಷ್ಟು ಸಮಯದಲ್ಲಿ ನಾಶವಾಗುತ್ತದೆ ಅಥವಾ ರೂಪಾಂತರ ಹೊಂದುತ್ತದೆ. ಆದರೆ ಇಂತಹದ್ದೊಂದು ಅಮಾನುಷ ವ್ಯವಸ್ಥೆ ಇದು ನಮಗೆ ಶಾಶ್ವತ ಎನ್ನುವ ಸತ್ಯ ನಮ್ಮನ್ನು ಕಾಡದೆ ಹೋದರೆ ಹೇಗೆ?


ಇದನ್ನು ಓದಿ: ಮೂರನೇ ಒಂದು ಭಾಗದಷ್ಟು ವಲಸೆ ಕಾರ್ಮಿಕರು ಕೊರೊನಾ ಸೋಂಕಿಗೆ ಒಳಗಾಗಬಹುದು: ಸುಪ್ರೀಂಗೆ ಕೇಂದ್ರದ ಉತ್ತರ


ಇನ್ನೊಂದು ವಿಚಾರ. ಈ ಘಟನೆಗೆ ಅಲ್ಲಿನ ಅಧಿಕಾರಸ್ಥರು ಪ್ರತಿಕ್ರಿಯಿಸಿದ ರೀತಿ ನೋಡಿ. ಅಲ್ಲಿನ ಜಿಲ್ಲಾಧಿಕಾರಿ ನೀಡಿದ ಮೇಲಿನ ಪ್ರತಿಕ್ರಿಯೆ ಗಮನಿಸಿ. ಅದು ಯಾಂತ್ರಿಕ, ತಾಂತ್ರಿಕ ಪ್ರತಿಕ್ರಿಯೆ. ಅದರಲ್ಲಿ, ಒಂದಷ್ಟು ಮಾನವೀಯ ಸಂವೇದನೆಯ ಸೆಲೆ ಕಾಣಿಸುತ್ತದೆಯೇ? ವಾಸ್ತವದಲ್ಲಿ, ಆತನ ಪ್ರತಿಕ್ರಿಯೆ ಆತ ಆ ಕಷ್ಟಜೀವಿಗಳ ಕ್ಷಮೆ ಕೇಳುವುದರೊಂದಿಗೆ ಪ್ರಾರಂಭವಾಗಬೇಕಿತ್ತು. ಬಿಡಿ, ಆತ ಎಷ್ಟಾದರೂ ಅಧಿಕಾರಶಾಹಿಯ ಭಾಗ. ಅಲ್ಲಿನ ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖೆಯ ಮಂತ್ರಿ, ಅಲ್ಲಿನ ಶಾಸಕ, ಆ ಪ್ರದೇಶದ ಸಂಸದ ಯಾರ ಬಾಯಿಯಿಂದಾದರೂ ಒಂದು ಸಣ್ಣ ಪಶ್ಚಾತಾಪದ, ಮರುಕದ ಪ್ರತ್ರಿಕ್ರಿಯೆ ಬರಲಿಲ್ಲ.

ಇನ್ನೂ ಒಂದು ಗಮನಿಸಬೇಕಾದ ವಿಚಾರ ಅಂತ ಅಂದರೆ ಅಲ್ಲಿನ (ಬರೇಲಿ ಕ್ಷೇತ್ರ) ಸಂಸದ ಸಂತೋಷ್ ಗಂಗ್ವಾರ್ ಕೇಂದ್ರ ಸಚಿವ ಸಂಪುಟದಲ್ಲಿ ಕಾರ್ಮಿಕ ಖಾತೆಯ ಸಚಿವ. ಹಿಂಸೆ ಅನುಭವಿಸಿದ್ದು ಕಾರ್ಮಿಕರು ಎಂಬ ಕಾರಣಕ್ಕೋಸ್ಕರವಾದರೂ ಆ ವ್ಯಕ್ತಿಯ ಬಾಯಿಂದ ಒಂದು ಸಾಂತ್ವನದ ಮಾತು ಬರಬೇಕಿತ್ತಲ್ಲಾ. ಇಲ್ಲ, ಈ ತನಕ ಬಂದಿಲ್ಲ. ಅಂದರೆ ಈ ಘಟನೆ ನಮಗೆ ಎತ್ತಿ ತೋರಿಸಿದ್ದು ಎಲ್ಲಾ ಕಡೆ, ಎಲ್ಲಾ ಸಮಯದಲ್ಲೂ, ಎಲ್ಲಾ ಸ್ತರದ ಮಂದಿಯಿಂದಲೂ ಸಂಭವಿಸಬಹುದಾದ ಒಂದು ಅಚಾತುರ್ಯವನ್ನು ಮಾತ್ರವಲ್ಲ. ಅದು ಎತ್ತಿ ತೋರಿಸಿದ್ದು ಈ ದೇಶದಲ್ಲಿ ಉಳ್ಳವರಿಗೆ, ಪ್ರಬಲರಿಗೆ, ಅಧಿಕಾರಸ್ಥರಿಗೆ ಸಾಮಾನ್ಯ ಜನರ ಬಗ್ಗೆ ಇರುವ ಉಪೇಕ್ಷೆಯನ್ನು. ಇಂತಹದ್ದೊಂದು ಘಟನೆ ಯಾರದ್ದಾದರೂ ಅಚಾತುರ್ಯದಿಂದಲೇ ಆದರೂ ಈ ದೇಶದ ಯಾವುದಾದರೂ ಒಂದು ವಿಮಾನ ನಿಲ್ದಾಣದಲ್ಲಿ ನಡೆದಿದ್ದರೆ ಏನಾಗುತ್ತಿತ್ತು. ಇಷ್ಟೊತ್ತಿಗೆ ಅಲ್ಲಿನ ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿತ್ತೇ? ಅಂದ ಹಾಗೆ ಈ ಕರೋನ ಎಂಬ ದುರಂತವನ್ನು ಹೊತ್ತು ತಂದದ್ದು ವಿಮಾನಗಳಲ್ಲಿ ಬಂದಿಳಿದವರು. ಈಗ ಅದರ ನಿರ್ನಾಮಕ್ಕಾಗಿ ರಾಸಾಯನಿಕದಲ್ಲಿ ಮುಳುಗೇಳುತ್ತಿರುವುದು ರಸ್ತೆಗಳಲ್ಲಿ ನಡೆದುಕೊಂಡು ಹೋಗಲೂ ಅವಕಾಶವಿಲ್ಲದ ಬಡವರು.

ಬರೇಲಿ ಕ್ಷೇತ್ರದ ಸಂಸದ ಸಂತೋಷ್ ಗಂಗ್ವಾರ್

ಕರೋನ ಲಾಕೌಟ್ ಜಾರಿಗೆ ಬಂದ ಕ್ಷಣದಿಂದ ನರಕ ಸದೃಶ ಬದುಕನ್ನು ಅನುಭವಿಸುತ್ತಿರುವವರು ಈ ದೇಶದ ವಲಸೆ ಕಾರ್ಮಿಕರು. ಅವರೇ ಈ ದೇಶವನ್ನು ನಿಜ ಅರ್ಥದಲ್ಲಿ ಕಟ್ಟುತ್ತಿರುವವರು. ಭಾರತದ ಬೆಳವಣಿಗೆಯ ಸಾಕಾರ ಸ್ವರೂಪವಾಗಿ ನಗರಗಳಲ್ಲಿ ಏಳುತ್ತಿರುವ ಬಹುಅಂತಸ್ತಿನ ಕಟ್ಟಡಗಳನ್ನು, ಅಗಲಗಲದ ಹೆದ್ದಾರಿಗಳನ್ನೂ, ಎತ್ತರೆತ್ತರದ ಮೇಲ್ಸೇತುವೆಗಳನ್ನು ಕೊರೆವ ಚಳಿಯಲ್ಲಿ, ಸುಡುವ ಬಿಸಿಲಲ್ಲಿ ನಿಂತು ಹಗಲಿರುಳು ಕಟ್ಟುತ್ತಿರುವುದು ಈ ಶ್ರಮಿಕ ವರ್ಗ. ನಗರಗಳಲ್ಲೇ ನಮ್ಮ ನಡುವೆ ನೆಲೆಸಿದ್ದರೂ ನಮ್ಮ ಕಣ್ಣುಗಳು ಅವರೆಡೆಗೆ ಎಷ್ಟು ಕುರುಡಾಗಿದೆ ಎಂದು ನಮಗೆ ಅರ್ಥ ಮಾಡಿಸಿದ್ದು ಕೊರೊನಾ ಎನ್ನುವ ಅದೃಶ್ಯ ಸೂಕ್ಷ್ಮ ಜೀವಿ. ಈ ಮಂದಿ ಸಾಲು ಸಾಲಾಗಿ ಬೀದಿಗಿಳಿದು ನಮ್ಮನ್ನು ನಮ್ಮ ನಮ್ಮ ಊರುಗಳಿಗೆ ಮರಳಿ ಹೋಗಲು ಬಿಡಿ ಎಂದು ಗೋಗರೆಯತೊಡಗಿದಾಗ ಇಷ್ಟೊಂದು ಸಂಖ್ಯೆಯಲ್ಲಿ ನಮ್ಮ ಥಳುಕಿನ ಬದುಕಿನ ನಡುವೆ ಇವರೆಲ್ಲಾ ಇದ್ದಾರೆ ಎನ್ನುವ ಸತ್ಯ ನಮಗೆ ಗೋಚರವಾದದ್ದು. ಲಕ್ಷ ಲಕ್ಷ ಸಂಖ್ಯೆಯಲ್ಲಿ ತಮ್ಮ ಇದ್ದ ಬದ್ದ ಸರಕುಗಳನ್ನೆಲ್ಲಾ ತಲೆಯಲ್ಲಿ, ಹೆಗಲಲ್ಲಿ ಹೊತ್ತುಕೊಂಡು, ಹಸಿದು ಅಳುವ ಕಂದಮ್ಮಗಳನ್ನು ಕಂಕುಳಲ್ಲಿ ತಗಲಿಸಿಕೊಂಡು ಸಾಲು ಸಾಲಾಗಿ ನಗರಗಳ ಬೀದಿಗಳಲ್ಲಿ ಇವರು ನಡೆದೇ ಸಾಗುತಿದ್ದ ದೃಶ್ಯ ಈ ದೇಶದ ಆತ್ಮಸಾಕ್ಷಿಯನ್ನು ಬಹುಕಾಲ ಕಾಡಲಿದೆ. ಆತ್ಮಸಾಕ್ಷಿ ಎನ್ನುವುದು ಇನ್ನೂ ಎಲ್ಲಾದರೂ ಉಳಿದಿದ್ದರೆ.


ಇದನ್ನು ಓದಿ: ಲಾಕ್‌ಡೌನ್‌ ಘೋಷಿದಂದಿನಿಂದ 22 ವಲಸೆ ಕಾರ್ಮಿಕರ ಸಾವು


ಕಾಣಿಸಿದಾಗಲೆಲ್ಲಾ ನಮ್ಮ ಆತ್ಮಸಾಕ್ಷಿಯನ್ನು ಇದುವರೆಗೆ ಕಲುಕುತಿದ್ದ ಚಿತ್ರ ಬೇರೊಂದಿತ್ತು. ಮಾಧ್ಯಮಗಳಲ್ಲಿ, ಪ್ರದರ್ಶನಾಲಯಗಳಲ್ಲಿ, ಪುಸ್ತಕಗಳಲ್ಲಿ, ಡಾಕ್ಯುಮೆಂಟರಿಗಳಲ್ಲಿ ನಾವು ನೋಡಿರಬಹುದಾದ ಆ ದೃಶ್ಯ 1947ರ ದೇಶ ವಿಭಜನೆಗೆ ಸಂಬಂದಿಸಿದ್ದು. ಅಂದಿನ ಜನ ಧರ್ಮದ್ವೇಷ ಎಂಬ ಇನ್ನೊಂದು ವೈರಸ್ಸಿನ ದಾಳಿಗೆ ತುತ್ತಾಗಿ ಭಾರತದಿಂದ ಪಾಕಿಸ್ತಾನದತ್ತ, ಪಾಕಿಸ್ತಾನದಿಂದ ಭಾರತದತ್ತ ಸಾಲುಸಾಲಾಗಿ ಸಾಗುತಿದ್ದ ಆ ಕಪ್ಪುಬಿಳುಪು ಚಿತ್ರ ಮನುಷ್ಯತ್ವ ಎನ್ನುವುದು ಲವಲೇಶವಾದರೂ ಉಳಿಸಿಕೊಂಡಿರುವ ಮನುಷ್ಯರನ್ನು ಬಹಳ ಹೊತ್ತು ಕಾಡುತ್ತದೆ.

ಅದನ್ನು ಊಹಿಸಿಕೊಂಡರೂ ಮನಸ್ಸಿನಲ್ಲಿ ತಳಮಳ ಉಂಟಾಗುತ್ತದೆ. ಅದು ಚಿತ್ರ. ಬಹಳ ಹಳೆಯ ಚಿತ್ರ. ಕಳೆದ ಒಂದು ವಾರದಿಂದ ನಾವು ಕಂಡದ್ದು ಈ ಚಿತ್ರವನ್ನೂ ಮೀರಿಸುವ ದುರಂತಮಯ ಜೀವಂತ ಚಿತ್ರಣವನ್ನು. ಇದಕ್ಕೆ ಸಂಬಂಧಿಸಿದ ಚಿತ್ರಗಳು, ವಿಡಿಯೋಗಳು ದೇಶ ವಿಭಜನೆಯ ಹಳೆಯ ದುರಂತಕ್ಕಿಂತಲೂ ಮಿಗಿಲಾದ ದುರಂತ ಒಂದನ್ನು ನಮ್ಮ ಮನದಲ್ಲಿ ಆಗಾಗ ಕುಣಿಸಲಿದೆ. ಇದೂ ಒಂದು ವಿಭಜನೆಯ ಕತೆಯೇ ಅಲ್ಲವೇ? ಅಂದಿನದ್ದು ಈ ದೇಶದ ಭೂಗೋಳ-ರಾಜಕೀಯ ವಿಭಜನೆಯ ಚಿತ್ರಣವಾದರೆ, ಇದು ಈ ದೇಶದ ಆರ್ಥಿಕ ಸಾಮಾಜಿಕ ವಿಭಜನೆಯ ಕತೆ.

ಲಾಕ್‌ಡೌನ್ ಅನಿವಾರ್ಯವಾಗಿರಬಹುದು. ಆದರೆ, ರಸ್ತೆಗಳಲ್ಲಿ ಯಾರೂ ಇಲ್ಲದ ಅಂದರೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಬದುಕುವ ದೇಶಗಳೂ ಕೂಡಾ ಒಂದೆರಡು ದಿವಸಗಳ ಅವಧಿ ನೀಡಿ ಲಾಕ್‌ಡೌನ್ ಘೋಷಿಸಿರುವಾಗ ಹೆಚ್ಚು ಕಡಿಮೆ ರಸ್ತೆಯಲ್ಲೇ ಬದುಕುವ ಇಷ್ಟೊಂದು ಮಂದಿ ನಮ್ಮ ನಡುವೆ ಇದ್ದಾರೆ ಎಂಬ ಸಣ್ಣ ಅರಿವಾದರು ಇದ್ದಿದ್ದರೆ ಇನ್ನೈದು ಘಂಟೆಗಳಲ್ಲಿ ಯಾರೂ ರಸ್ತೆಗಳಲ್ಲಿ ಕಾಣಿಸಿಕೊಳ್ಳಬಾರದು ಎನ್ನುವ ಆದೇಶ ಬರಲು ಸಾಧ್ಯವಿತ್ತೇ. ಏನು ಕೊರೊನ, ಏನು ಸಾಮಾಜಿಕ ಅಂತರ, ಏನು ಇಷ್ಟೆಲ್ಲಾ ಅವಾಂತರ ಎನ್ನುವ ಎನ್ನುವ ಯಾವ ಅರಿವು ಕೂಡಾ ಇಲ್ಲದೆ ದಿಗಿಲಿನಿಂದ, ಹಸಿವಿನಿಂದ, ಅವಮಾನದಿಂದ ಈ ಮಂದಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸೇರಿ ತಮ್ಮ ತಮ್ಮ ಊರುಗಳತ್ತ ನಡೆಯಲು ಪ್ರಾರಂಭಿಸಿದಾಗಲೇ ಏನೋ ಎಡವಟ್ಟಾಗಿದೆ ಅಂತ ನಮಗೆ ತಿಳಿದದ್ದು. ನಮಗೆ ಎಂದರೆ ನಮಗೆ. ಕೇವಲ ಆಳುವವರಿಗೆ ಮಾತ್ರವಲ್ಲ. ಆಳುವವರನ್ನು ಪೂಜಿಸುವ, ಟೀಕಿಸುವ ಎಲ್ಲರಿಗೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....