Homeಮುಖಪುಟಶಾಶ್ವತವಾಗಿ ಕಾಡಲಿರುವ ಮತ್ತೊಂದು ವಿಭಜನೆಯ ಚಿತ್ರ

ಶಾಶ್ವತವಾಗಿ ಕಾಡಲಿರುವ ಮತ್ತೊಂದು ವಿಭಜನೆಯ ಚಿತ್ರ

- Advertisement -
- Advertisement -

ಕೊರೊನ ನಿಯಂತ್ರಣ ಮಾಡಲು ಸರಕಾರ ಕೈಗೊಳ್ಳುತ್ತಿರುವ ಮುನ್ನೆಚ್ಚರಿಕೆಯ ಕ್ರಮವಾಗಿ ನಿನ್ನೆ ಉತ್ತರ ಪ್ರದೇಶದಲ್ಲಿ ವಿಧೇಯರಾಗಿ ಮೈಮೇಲೆ ರಾಸಾಯನಿಕ ಸಿಂಪಡಿಸಿಕೊಳ್ಳುತ್ತಿದ್ದ ಆ ಮಂದಿ ಇದ್ದಾರಲ್ಲ, ಅವರಲ್ಲಿ ಒಬ್ಬರಾಗಿ ನಮ್ಮನ್ನು ಊಹಿಸಿಕೊಳ್ಳೋಣ. ಅವರಲ್ಲಿ ಒಬ್ಬರಾಗಿ ನಮ್ಮ ಗಂಡ, ಹೆಂಡತಿ, ಮಗ, ಮಗಳು, ಅಣ್ಣ ತಮ್ಮ, ತಂಗಿ, ಅಕ್ಕ, ಇನ್ನಿತರ ಸಮೀಪದ ಕುಟುಂಬಸ್ಥರು, ಸ್ನೇಹಿತರು ಮುಂತಾದವರ ಪೈಕಿ ಯಾರನ್ನಾದರೂ ಊಹಿಸಿಕೊಳ್ಳೋಣ. ನಮಗೆ ಏನನಿಸುತಿತ್ತು? ಇನ್ನೊಮ್ಮೆ ನಮ್ಮನ್ನು ನಾವೇ ಕೇಳಿಕೊಳ್ಳೋಣ, ಏನನಿಸುತಿತ್ತು? ಅದೇ ಅನಿಸಿಕೆ ನಮಗೆ ‘ನಮ್ಮವರು’ ಅಂತ ನಾವು ಭಾವಿಸದ, ನಮ್ಮ ಹಾಗಿರುವ ಬಟ್ಟೆ ತೊಟ್ಟುಕೊಳ್ಳದ, ನಮ್ಮ ಹಾಗೆ ಅಧಿಕಾರಸ್ಥರ ಜತೆ ಮಾತನಾಡಲಾಗದ ಆ ಜನ ಅಕ್ಷರಶ ಪ್ರಾಣಿಗಳಂತೆ ಸರಕಾರದ ಮಂದಿಯ ಕೈಯ್ಯಲ್ಲಿ ಶಾರೀರಿಕ ಹಿಂಸೆಯನ್ನೂ, ಮಾನಸಿಕ ಅವಮಾನವನ್ನೂ ಅನುಭವಿಸುವಾಗ ಬಂತೇ? ಘಟನೆಯ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ ಅಲ್ಲಿನ ಜಿಲ್ಲಾಧಿಕಾರಿ ಹೇಳಿದ್ದಿಷ್ಟು: ‘ಆ ಜನರನ್ನು ಹೊತ್ತು ತಂದಿದ್ದ ವಾಹನದ ಮೇಲೆ ರಾಸಾಯನಿಕ ಸಿಂಪಡಿಸಿ ಅಂತ ನಿರ್ದೇಶನವಿತ್ತು. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕೆಳ ಹಂತದಲ್ಲಿ ಕೆಲಸಮಾಡುವ ಸಿಬ್ಬಂದಿ ಅತ್ಯುತ್ಸಾಹ (over enthusiasm) ತೋರಿದ ಕಾರಣ ಈ ಘಟನೆ ನಡೆದಿದೆ. ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’.

ಹೌದು. ಅಚಾತುರ್ಯಗಳು ನಡೆಯುತ್ತವೆ. ಇದು ಸಂಕಷ್ಟದ ಕಾಲ. ಕೈಮೀರುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸುವುದು ಸರಕಾರಕ್ಕಾದರೂ ಕಷ್ಟವೇ. ಈಗ ಸಿಕ್ಕ ಸಿಕ್ಕಲ್ಲೆಲ್ಲಾ ಹುಳುಕು ಹುಡುಕುವುದು ಸರಿಯಲ್ಲ. ಈ ಘಟನೆ ಕೂಡಾ ಅಚಾತುರ್ಯದಿಂದಲೇ ನಡೆಯಿತು ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಕೆಲ ಪ್ರಶ್ನೆಗಳನ್ನು ಕೇಳದೆ ಹೋದರೆ ಚರಿತ್ರೆ ನಮ್ಮನ್ನು ಕ್ಷಮಿಸಲಾರದು.

ಮೊದಲನೆಯದಾಗಿ, ಕೆಳಹಂತದಲ್ಲಿ ಕೆಲಸ ಮಾಡುವ ಅಲ್ಲಿನ ಸರಕಾರೀ ಸಿಬ್ಬಂದಿಗೆ ತಮ್ಮಂತೆ ಇರುವ ಮನುಷ್ಯರನ್ನು ಹೀಗೆ ನಡೆಸಿಕೊಳ್ಳಬಹುದೆಂದು ಅನ್ನಿಸುತ್ತದೆ ಎನ್ನುವುದಿದೆಯಲ್ಲ, ಅದು ಕೊರೊನಕ್ಕಿಂತಲೂ ಅಪಾಯಕಾರಿಯಾದದ್ದಲ್ಲವೇ? ಅವರ ಮನಸ್ಸು ಎಂತಹದ್ದು? ಅವರ ಸಂವೇದನೆ ಎಂತಹದ್ದು? ಅವರ ಯೋಚನೆಯ ಮಟ್ಟ ಎಂತಹದ್ದು? ಕೊರೊನ ಹೇಗೋ ಇನ್ನೊಂದಷ್ಟು ಸಮಯದಲ್ಲಿ ನಾಶವಾಗುತ್ತದೆ ಅಥವಾ ರೂಪಾಂತರ ಹೊಂದುತ್ತದೆ. ಆದರೆ ಇಂತಹದ್ದೊಂದು ಅಮಾನುಷ ವ್ಯವಸ್ಥೆ ಇದು ನಮಗೆ ಶಾಶ್ವತ ಎನ್ನುವ ಸತ್ಯ ನಮ್ಮನ್ನು ಕಾಡದೆ ಹೋದರೆ ಹೇಗೆ?


ಇದನ್ನು ಓದಿ: ಮೂರನೇ ಒಂದು ಭಾಗದಷ್ಟು ವಲಸೆ ಕಾರ್ಮಿಕರು ಕೊರೊನಾ ಸೋಂಕಿಗೆ ಒಳಗಾಗಬಹುದು: ಸುಪ್ರೀಂಗೆ ಕೇಂದ್ರದ ಉತ್ತರ


ಇನ್ನೊಂದು ವಿಚಾರ. ಈ ಘಟನೆಗೆ ಅಲ್ಲಿನ ಅಧಿಕಾರಸ್ಥರು ಪ್ರತಿಕ್ರಿಯಿಸಿದ ರೀತಿ ನೋಡಿ. ಅಲ್ಲಿನ ಜಿಲ್ಲಾಧಿಕಾರಿ ನೀಡಿದ ಮೇಲಿನ ಪ್ರತಿಕ್ರಿಯೆ ಗಮನಿಸಿ. ಅದು ಯಾಂತ್ರಿಕ, ತಾಂತ್ರಿಕ ಪ್ರತಿಕ್ರಿಯೆ. ಅದರಲ್ಲಿ, ಒಂದಷ್ಟು ಮಾನವೀಯ ಸಂವೇದನೆಯ ಸೆಲೆ ಕಾಣಿಸುತ್ತದೆಯೇ? ವಾಸ್ತವದಲ್ಲಿ, ಆತನ ಪ್ರತಿಕ್ರಿಯೆ ಆತ ಆ ಕಷ್ಟಜೀವಿಗಳ ಕ್ಷಮೆ ಕೇಳುವುದರೊಂದಿಗೆ ಪ್ರಾರಂಭವಾಗಬೇಕಿತ್ತು. ಬಿಡಿ, ಆತ ಎಷ್ಟಾದರೂ ಅಧಿಕಾರಶಾಹಿಯ ಭಾಗ. ಅಲ್ಲಿನ ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖೆಯ ಮಂತ್ರಿ, ಅಲ್ಲಿನ ಶಾಸಕ, ಆ ಪ್ರದೇಶದ ಸಂಸದ ಯಾರ ಬಾಯಿಯಿಂದಾದರೂ ಒಂದು ಸಣ್ಣ ಪಶ್ಚಾತಾಪದ, ಮರುಕದ ಪ್ರತ್ರಿಕ್ರಿಯೆ ಬರಲಿಲ್ಲ.

ಇನ್ನೂ ಒಂದು ಗಮನಿಸಬೇಕಾದ ವಿಚಾರ ಅಂತ ಅಂದರೆ ಅಲ್ಲಿನ (ಬರೇಲಿ ಕ್ಷೇತ್ರ) ಸಂಸದ ಸಂತೋಷ್ ಗಂಗ್ವಾರ್ ಕೇಂದ್ರ ಸಚಿವ ಸಂಪುಟದಲ್ಲಿ ಕಾರ್ಮಿಕ ಖಾತೆಯ ಸಚಿವ. ಹಿಂಸೆ ಅನುಭವಿಸಿದ್ದು ಕಾರ್ಮಿಕರು ಎಂಬ ಕಾರಣಕ್ಕೋಸ್ಕರವಾದರೂ ಆ ವ್ಯಕ್ತಿಯ ಬಾಯಿಂದ ಒಂದು ಸಾಂತ್ವನದ ಮಾತು ಬರಬೇಕಿತ್ತಲ್ಲಾ. ಇಲ್ಲ, ಈ ತನಕ ಬಂದಿಲ್ಲ. ಅಂದರೆ ಈ ಘಟನೆ ನಮಗೆ ಎತ್ತಿ ತೋರಿಸಿದ್ದು ಎಲ್ಲಾ ಕಡೆ, ಎಲ್ಲಾ ಸಮಯದಲ್ಲೂ, ಎಲ್ಲಾ ಸ್ತರದ ಮಂದಿಯಿಂದಲೂ ಸಂಭವಿಸಬಹುದಾದ ಒಂದು ಅಚಾತುರ್ಯವನ್ನು ಮಾತ್ರವಲ್ಲ. ಅದು ಎತ್ತಿ ತೋರಿಸಿದ್ದು ಈ ದೇಶದಲ್ಲಿ ಉಳ್ಳವರಿಗೆ, ಪ್ರಬಲರಿಗೆ, ಅಧಿಕಾರಸ್ಥರಿಗೆ ಸಾಮಾನ್ಯ ಜನರ ಬಗ್ಗೆ ಇರುವ ಉಪೇಕ್ಷೆಯನ್ನು. ಇಂತಹದ್ದೊಂದು ಘಟನೆ ಯಾರದ್ದಾದರೂ ಅಚಾತುರ್ಯದಿಂದಲೇ ಆದರೂ ಈ ದೇಶದ ಯಾವುದಾದರೂ ಒಂದು ವಿಮಾನ ನಿಲ್ದಾಣದಲ್ಲಿ ನಡೆದಿದ್ದರೆ ಏನಾಗುತ್ತಿತ್ತು. ಇಷ್ಟೊತ್ತಿಗೆ ಅಲ್ಲಿನ ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿತ್ತೇ? ಅಂದ ಹಾಗೆ ಈ ಕರೋನ ಎಂಬ ದುರಂತವನ್ನು ಹೊತ್ತು ತಂದದ್ದು ವಿಮಾನಗಳಲ್ಲಿ ಬಂದಿಳಿದವರು. ಈಗ ಅದರ ನಿರ್ನಾಮಕ್ಕಾಗಿ ರಾಸಾಯನಿಕದಲ್ಲಿ ಮುಳುಗೇಳುತ್ತಿರುವುದು ರಸ್ತೆಗಳಲ್ಲಿ ನಡೆದುಕೊಂಡು ಹೋಗಲೂ ಅವಕಾಶವಿಲ್ಲದ ಬಡವರು.

ಬರೇಲಿ ಕ್ಷೇತ್ರದ ಸಂಸದ ಸಂತೋಷ್ ಗಂಗ್ವಾರ್

ಕರೋನ ಲಾಕೌಟ್ ಜಾರಿಗೆ ಬಂದ ಕ್ಷಣದಿಂದ ನರಕ ಸದೃಶ ಬದುಕನ್ನು ಅನುಭವಿಸುತ್ತಿರುವವರು ಈ ದೇಶದ ವಲಸೆ ಕಾರ್ಮಿಕರು. ಅವರೇ ಈ ದೇಶವನ್ನು ನಿಜ ಅರ್ಥದಲ್ಲಿ ಕಟ್ಟುತ್ತಿರುವವರು. ಭಾರತದ ಬೆಳವಣಿಗೆಯ ಸಾಕಾರ ಸ್ವರೂಪವಾಗಿ ನಗರಗಳಲ್ಲಿ ಏಳುತ್ತಿರುವ ಬಹುಅಂತಸ್ತಿನ ಕಟ್ಟಡಗಳನ್ನು, ಅಗಲಗಲದ ಹೆದ್ದಾರಿಗಳನ್ನೂ, ಎತ್ತರೆತ್ತರದ ಮೇಲ್ಸೇತುವೆಗಳನ್ನು ಕೊರೆವ ಚಳಿಯಲ್ಲಿ, ಸುಡುವ ಬಿಸಿಲಲ್ಲಿ ನಿಂತು ಹಗಲಿರುಳು ಕಟ್ಟುತ್ತಿರುವುದು ಈ ಶ್ರಮಿಕ ವರ್ಗ. ನಗರಗಳಲ್ಲೇ ನಮ್ಮ ನಡುವೆ ನೆಲೆಸಿದ್ದರೂ ನಮ್ಮ ಕಣ್ಣುಗಳು ಅವರೆಡೆಗೆ ಎಷ್ಟು ಕುರುಡಾಗಿದೆ ಎಂದು ನಮಗೆ ಅರ್ಥ ಮಾಡಿಸಿದ್ದು ಕೊರೊನಾ ಎನ್ನುವ ಅದೃಶ್ಯ ಸೂಕ್ಷ್ಮ ಜೀವಿ. ಈ ಮಂದಿ ಸಾಲು ಸಾಲಾಗಿ ಬೀದಿಗಿಳಿದು ನಮ್ಮನ್ನು ನಮ್ಮ ನಮ್ಮ ಊರುಗಳಿಗೆ ಮರಳಿ ಹೋಗಲು ಬಿಡಿ ಎಂದು ಗೋಗರೆಯತೊಡಗಿದಾಗ ಇಷ್ಟೊಂದು ಸಂಖ್ಯೆಯಲ್ಲಿ ನಮ್ಮ ಥಳುಕಿನ ಬದುಕಿನ ನಡುವೆ ಇವರೆಲ್ಲಾ ಇದ್ದಾರೆ ಎನ್ನುವ ಸತ್ಯ ನಮಗೆ ಗೋಚರವಾದದ್ದು. ಲಕ್ಷ ಲಕ್ಷ ಸಂಖ್ಯೆಯಲ್ಲಿ ತಮ್ಮ ಇದ್ದ ಬದ್ದ ಸರಕುಗಳನ್ನೆಲ್ಲಾ ತಲೆಯಲ್ಲಿ, ಹೆಗಲಲ್ಲಿ ಹೊತ್ತುಕೊಂಡು, ಹಸಿದು ಅಳುವ ಕಂದಮ್ಮಗಳನ್ನು ಕಂಕುಳಲ್ಲಿ ತಗಲಿಸಿಕೊಂಡು ಸಾಲು ಸಾಲಾಗಿ ನಗರಗಳ ಬೀದಿಗಳಲ್ಲಿ ಇವರು ನಡೆದೇ ಸಾಗುತಿದ್ದ ದೃಶ್ಯ ಈ ದೇಶದ ಆತ್ಮಸಾಕ್ಷಿಯನ್ನು ಬಹುಕಾಲ ಕಾಡಲಿದೆ. ಆತ್ಮಸಾಕ್ಷಿ ಎನ್ನುವುದು ಇನ್ನೂ ಎಲ್ಲಾದರೂ ಉಳಿದಿದ್ದರೆ.


ಇದನ್ನು ಓದಿ: ಲಾಕ್‌ಡೌನ್‌ ಘೋಷಿದಂದಿನಿಂದ 22 ವಲಸೆ ಕಾರ್ಮಿಕರ ಸಾವು


ಕಾಣಿಸಿದಾಗಲೆಲ್ಲಾ ನಮ್ಮ ಆತ್ಮಸಾಕ್ಷಿಯನ್ನು ಇದುವರೆಗೆ ಕಲುಕುತಿದ್ದ ಚಿತ್ರ ಬೇರೊಂದಿತ್ತು. ಮಾಧ್ಯಮಗಳಲ್ಲಿ, ಪ್ರದರ್ಶನಾಲಯಗಳಲ್ಲಿ, ಪುಸ್ತಕಗಳಲ್ಲಿ, ಡಾಕ್ಯುಮೆಂಟರಿಗಳಲ್ಲಿ ನಾವು ನೋಡಿರಬಹುದಾದ ಆ ದೃಶ್ಯ 1947ರ ದೇಶ ವಿಭಜನೆಗೆ ಸಂಬಂದಿಸಿದ್ದು. ಅಂದಿನ ಜನ ಧರ್ಮದ್ವೇಷ ಎಂಬ ಇನ್ನೊಂದು ವೈರಸ್ಸಿನ ದಾಳಿಗೆ ತುತ್ತಾಗಿ ಭಾರತದಿಂದ ಪಾಕಿಸ್ತಾನದತ್ತ, ಪಾಕಿಸ್ತಾನದಿಂದ ಭಾರತದತ್ತ ಸಾಲುಸಾಲಾಗಿ ಸಾಗುತಿದ್ದ ಆ ಕಪ್ಪುಬಿಳುಪು ಚಿತ್ರ ಮನುಷ್ಯತ್ವ ಎನ್ನುವುದು ಲವಲೇಶವಾದರೂ ಉಳಿಸಿಕೊಂಡಿರುವ ಮನುಷ್ಯರನ್ನು ಬಹಳ ಹೊತ್ತು ಕಾಡುತ್ತದೆ.

ಅದನ್ನು ಊಹಿಸಿಕೊಂಡರೂ ಮನಸ್ಸಿನಲ್ಲಿ ತಳಮಳ ಉಂಟಾಗುತ್ತದೆ. ಅದು ಚಿತ್ರ. ಬಹಳ ಹಳೆಯ ಚಿತ್ರ. ಕಳೆದ ಒಂದು ವಾರದಿಂದ ನಾವು ಕಂಡದ್ದು ಈ ಚಿತ್ರವನ್ನೂ ಮೀರಿಸುವ ದುರಂತಮಯ ಜೀವಂತ ಚಿತ್ರಣವನ್ನು. ಇದಕ್ಕೆ ಸಂಬಂಧಿಸಿದ ಚಿತ್ರಗಳು, ವಿಡಿಯೋಗಳು ದೇಶ ವಿಭಜನೆಯ ಹಳೆಯ ದುರಂತಕ್ಕಿಂತಲೂ ಮಿಗಿಲಾದ ದುರಂತ ಒಂದನ್ನು ನಮ್ಮ ಮನದಲ್ಲಿ ಆಗಾಗ ಕುಣಿಸಲಿದೆ. ಇದೂ ಒಂದು ವಿಭಜನೆಯ ಕತೆಯೇ ಅಲ್ಲವೇ? ಅಂದಿನದ್ದು ಈ ದೇಶದ ಭೂಗೋಳ-ರಾಜಕೀಯ ವಿಭಜನೆಯ ಚಿತ್ರಣವಾದರೆ, ಇದು ಈ ದೇಶದ ಆರ್ಥಿಕ ಸಾಮಾಜಿಕ ವಿಭಜನೆಯ ಕತೆ.

ಲಾಕ್‌ಡೌನ್ ಅನಿವಾರ್ಯವಾಗಿರಬಹುದು. ಆದರೆ, ರಸ್ತೆಗಳಲ್ಲಿ ಯಾರೂ ಇಲ್ಲದ ಅಂದರೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಬದುಕುವ ದೇಶಗಳೂ ಕೂಡಾ ಒಂದೆರಡು ದಿವಸಗಳ ಅವಧಿ ನೀಡಿ ಲಾಕ್‌ಡೌನ್ ಘೋಷಿಸಿರುವಾಗ ಹೆಚ್ಚು ಕಡಿಮೆ ರಸ್ತೆಯಲ್ಲೇ ಬದುಕುವ ಇಷ್ಟೊಂದು ಮಂದಿ ನಮ್ಮ ನಡುವೆ ಇದ್ದಾರೆ ಎಂಬ ಸಣ್ಣ ಅರಿವಾದರು ಇದ್ದಿದ್ದರೆ ಇನ್ನೈದು ಘಂಟೆಗಳಲ್ಲಿ ಯಾರೂ ರಸ್ತೆಗಳಲ್ಲಿ ಕಾಣಿಸಿಕೊಳ್ಳಬಾರದು ಎನ್ನುವ ಆದೇಶ ಬರಲು ಸಾಧ್ಯವಿತ್ತೇ. ಏನು ಕೊರೊನ, ಏನು ಸಾಮಾಜಿಕ ಅಂತರ, ಏನು ಇಷ್ಟೆಲ್ಲಾ ಅವಾಂತರ ಎನ್ನುವ ಎನ್ನುವ ಯಾವ ಅರಿವು ಕೂಡಾ ಇಲ್ಲದೆ ದಿಗಿಲಿನಿಂದ, ಹಸಿವಿನಿಂದ, ಅವಮಾನದಿಂದ ಈ ಮಂದಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸೇರಿ ತಮ್ಮ ತಮ್ಮ ಊರುಗಳತ್ತ ನಡೆಯಲು ಪ್ರಾರಂಭಿಸಿದಾಗಲೇ ಏನೋ ಎಡವಟ್ಟಾಗಿದೆ ಅಂತ ನಮಗೆ ತಿಳಿದದ್ದು. ನಮಗೆ ಎಂದರೆ ನಮಗೆ. ಕೇವಲ ಆಳುವವರಿಗೆ ಮಾತ್ರವಲ್ಲ. ಆಳುವವರನ್ನು ಪೂಜಿಸುವ, ಟೀಕಿಸುವ ಎಲ್ಲರಿಗೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...