Homeಮುಖಪುಟಕೊರೊನಾ ವಿರುದ್ಧದ ಹೋರಾಟ ಯುದ್ಧವಲ್ಲ, ಅದಕ್ಕಿಂತಲೂ ಹೆಚ್ಚಿನದ್ದು: ನೋಬೆಲ್ ಪುರಸ್ಕೃತ ಅಮರ್ತ್ಯ ಸೇನ್

ಕೊರೊನಾ ವಿರುದ್ಧದ ಹೋರಾಟ ಯುದ್ಧವಲ್ಲ, ಅದಕ್ಕಿಂತಲೂ ಹೆಚ್ಚಿನದ್ದು: ನೋಬೆಲ್ ಪುರಸ್ಕೃತ ಅಮರ್ತ್ಯ ಸೇನ್

ಒಂದು ಸಾಮಾಜಿಕ ವಿಪತ್ತನ್ನು ನಿಭಾಯಿಸುವುದು ಒಂದು ಯುದ್ಧದಲ್ಲಿ ಹೋರಾಡಿದಂತಲ್ಲ. ಒಬ್ಬ ನಾಯಕ ಉನ್ನತ ಅಧಿಕಾರ ಹೊಂದಿದ್ದು, ಯಾರ ಜೊತೆಗೂ ಸಮಾಲೋಚನೆ ನಡೆಸುವ ಅಗತ್ಯವೇ ಇಲ್ಲದೆ, ಪ್ರತಿಯೊಬ್ಬರಿಗೂ ಆಜ್ಞೆ ಮಾಡುವ ಅಧಿಕಾರ ಹೊಂದಿದ್ದಾಗ, ಯುದ್ಧವು ಚೆನ್ನಾಗಿ ನಡೆಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಒಂದು ಸಾಮಾಜಿಕ ವಿಪತ್ತನ್ನು ನಿಭಾಯಿಸುವಾಗ ಬೇಕಾಗಿರುವುದೇನೆಂದರೆ, ಭಾಗವಹಿಸುವಿಕೆಯ ಮೂಲಕ ಆಡಳಿತ ಮತ್ತು ಎಚ್ಚರವುಳ್ಳ ಸಾರ್ವಜನಿಕ ಚರ್ಚೆ ಎಂದು ನೋಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳುತ್ತಾರೆ

- Advertisement -
- Advertisement -

ಅನುವಾದ: ನಿಖಿಲ್ ಕೋಲ್ಪೆ

ಭಾರತವು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಶೀಲ ಜಗತ್ತಿನಲ್ಲಿ ಅತ್ಯಂತ ಹಳೆಯದು ಎಂಬ ವಿಷಯದ ಕುರಿತು ಹೆಮ್ಮೆಪಡಲು ನಮಗೆ ಸಕಾರಣಗಳಿವೆ. ಎಲ್ಲರಿಗೂ ಒಂದು ಧ್ವನಿಯನ್ನು ನೀಡುವುದರ ಜೊತೆಗೆ, ಪ್ರಜಾಪ್ರಭುತ್ವವು ನಮಗೆ ಹಲವಾರು ವ್ಯಾವಹಾರಿಕ ಅನುಕೂಲತೆಗಳನ್ನೂ ಒದಗಿಸುತ್ತದೆ. ಆದರೆ ನಮ್ಮ ದೇಶವು ಬೃಹತ್ತಾದ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಮತ್ತು ತೀರಾ ಅಗತ್ಯ ಎನಿಸಿರುವ ಈಗಿನ ಸಂದರ್ಭದಲ್ಲಿ ನಾವು ಈ ಅನುಕೂಲತೆಗಳನ್ನು ಚೆನ್ನಾಗಿ ಬಳಸುತ್ತಿದ್ದೇವೆಯೇ ಎಂಬ ಪ್ರಶ್ನೆ ಕೇಳಬಹುದು.

ಮೊದಲಿಗೆ ಸ್ವಲ್ಪ ಇತಿಹಾಸ. ಬ್ರಿಟಿಷ್ ರಾಜ್ ಕೊನೆಗೊಂಡು, ಹೊಸದಾಗಿ ಭಾರತದಲ್ಲಿ ಸ್ಥಾಪಿತವಾದ ಪ್ರಜಾಪ್ರಭುತ್ವವು ತಕ್ಷಣವೇ ವಾಸ್ತವವಾದ ಫಲಗಳನ್ನು ಪಡೆಯಲಾರಂಭಿಸಿತು. ಬ್ರಿಟಿಷರ ಸರ್ವಾಧಿಕಾರಿ ಆಡಳಿತದ ಇತಿಹಾಸದುದ್ದಕ್ಕೂ, ಬರಗಾಲ ಎಂಬ ಮತ್ತೆಮತ್ತೆ ಮರುಕಳಿಸುವ ವಿಕೋಪವು, ಪ್ರಜಾಪ್ರಭುತ್ವವಾದಿ ಭಾರತದ ಸ್ಥಾಪನೆಯೊಂದಿಗೆ ಏಕಾಏಕಿಯಾಗಿ ನಿಂತುಹೋಯಿತು.

1943ರ ಬಂಗಾಳದ ಮಹಾ ಬರಗಾಲದ ಹೃದಯವಿದ್ರಾವಕ ಚಿತ್ರ.

ಕೊನೆಯ ಬರಗಾಲವು- ಸ್ವಾತಂತ್ರ್ಯಕ್ಕೆ ಸ್ವಲ್ಪವೇ ಮೊದಲು ಆಗಿದ್ದು; ಬಾಲ್ಯದಲ್ಲಿ ನಾನು ಕಂಡಿದ್ದ 1943ರ ಬಂಗಾಳದ ಬರಗಾಲವೇ- ವಸಾಹತುಶಾಹಿ ಆಡಳಿತದ ಕೊನೆಯ ಗುರುತಾಯಿತು. ಆ ಬಳಿಕದಿಂದ ಭಾರತವು ಹೇಳಿಕೊಳ್ಳುವಂತಹ ಬರಗಾಲವನ್ನು ಕಂಡಿಲ್ಲ ಮತ್ತು ಸ್ವಾತಂತ್ರ್ಯದ ಬಳಿಕದ ಮೊದಲ ದಶಕಗಳಲ್ಲಿ ಬೆದರಿಕೆ ಒಡ್ಡಿದ್ದ ಬರಗಳನ್ನು ದೃಢವಾಗಿ ನಿಭಾಯಿಸಲಾಯಿತು.

ಇದು ಸಾಧ್ಯವಾದದ್ದು ಹೇಗೆ? ಪ್ರಜಾಪ್ರಭುತ್ವವು ಬರಗಳನ್ನು ತಡೆಯಲು ಕಠಿಣವಾಗಿ ಕೆಲಸಮಾಡಲು ಸರಕಾರಕ್ಕೆ ಬಲವಾದ ಪ್ರೋತ್ಸಾಹವನ್ನು ನೀಡುತ್ತದೆ. ಸಾರ್ವಜನಿಕ ಚರ್ಚೆ ಮತ್ತು ಚುನಾವಣೆಗಳ ಸಂಯೋಜನೆಯಿಂದಾಗಿ ಸರಕಾರವು ಜನರ ಆಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸಬೇಕಾಗುತ್ತದೆ.

ಹಾಗಿದ್ದರೂ, ಕೇವಲ ಚುನಾವಣೆಗಳಷ್ಟೇ ಅದನ್ನು ಮಾಡಲಾಗುವುದಿಲ್ಲ. ನಿಜವಾಗಿಯೂ, ಪ್ರಜಾಪ್ರಭುತ್ವವನ್ನು ಕಾಲಕಾಲಕ್ಕೆ ನಡೆಯುವ ಮತ್ತು ಒಂದು ಇನ್ನೊಂದರ ನಡುವೆ ಆಂತರವಿರುವ ಮತ್ತು ತಕ್ಷಣದ ರಾಜಕೀಯ ಪರಿಸ್ಥಿತಿಗಳು ಉಂಟುಮಾಡುವ ಉತ್ಸಾಹ, ಉನ್ಮಾದಗಳಿಂದ ಓಲಾಡಿಸಬಹುದಾದ ಮುಕ್ತ ಚುನಾವಣೆಗಳಿಂದಷ್ಟೇ ಅರ್ಥಮಾಡಿಕೊಳ್ಳಲಾಗದು.

ಉದಾಹರಣೆಗೆ, ಬ್ರಿಟಿಷ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ 1982ರ ಫಾಕ್ಲ್ಯಾಂಡ್ ಯುದ್ಧಕ್ಕೆ ಮೊದಲು ಚುನಾವಣಾ ಸಮೀಕ್ಷೆಗಳಲ್ಲಿ ತೀರಾ ಹಿಂದಿದ್ದರು. ಯುದ್ಧದ ಜಯದಿಂದಾಗಿ ದೊಡ್ಡ ನೆಗೆತ ಕಂಡು, 1983ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಆರಾಮವಾಗಿ ಜಯಿಸಿದರು.

ಆದಲ್ಲದೇ, ಸಂಸದೀಯ ವ್ಯವಸ್ಥೆಯಲ್ಲಿ ಸಾರ್ವತ್ರಿಕ ಚುನಾವಣೆಗಳು ಪ್ರಾಥಮಿಕವಾಗಿ- ಸಂಸತ್ತಿನ ಕೆಳಮನೆಯಲ್ಲಿ (ನಮ್ಮಲ್ಲಿ ಲೋಕಸಭೆ) ಬಹುಮತದ ಸ್ಥಾನಗಳನ್ನು ಪಡೆಯುವುದಾಗಿದೆ. ಮತದಾನದ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತ ಗುಂಪುಗಳ ಹಿತಾಸಕ್ತಿ ಮತ್ತು ಹಕ್ಕುಗಳ ಕುರಿತು ಅಧಿಕೃತ ನಿಯಮಗಳೇನೂ ಇಲ್ಲ. ಇದನ್ನು ಗಣಿಸಿದಲ್ಲಿ ಪ್ರತಿಯೊಬ್ಬರೂ ಅವರ ಸ್ವಂತ, ವೈಯಕ್ತಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಮತದಾನ ಮಾಡುವುದಿದ್ದರೆ, ಚುನಾವಣೆಯೊಂದು ಬರಗಾಲದ ಸಂತ್ರಸ್ತರ ದೊಡ್ಡ ರಕ್ಷಕನಾಗುವುದು ಸಾಧ್ಯವಿಲ್ಲ. ಏಕೆಂದರೆ, ವಾಸ್ತವವಾಗಿ ಜನರ ಚಿಕ್ಕ ಅಲ್ಪಸಂಖ್ಯಾತ ಗುಂಪುಗಳು ಮಾತ್ರವೇ ಎಲ್ಲಾ ಬರಗಾಲಗಳಲ್ಲಿ ಉಪವಾಸ ಬೀಳುತ್ತವೆ.

ಆದರೆ, ಮುಕ್ತವಾದ ಮಾಧ್ಯಮ ಮತ್ತು ಮುಕ್ತ ಸಾರ್ವಜನಿಕ ಚರ್ಚೆಗಳು, ಬಡವರು ಮತ್ತು ದುರ್ಬಲರು ಎದುರಿಸುತ್ತಿರುವ ಸಂಕಷ್ಟ ಮತ್ತು ಅಪಾಯಗಳನ್ನು ಸಾರ್ವಜನಿಕರು ವ್ಯಾಪಕವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುತ್ತವೆ ಮತ್ತು ಅಂತಹಾ ಒಂದು ವಿಪತ್ತು ಸಂಭವಿಸಲು ಅವಕಾಶ ಕೊಟ್ಟ ಸರಕಾರವನ್ನು ಅಸ್ಥಿರಗೊಳಿಸುತ್ತವೆ. ಖಂಡಿತವಾಗಿಯೂ, ಒಂದು ಸರಕಾರವನ್ನು- ಜನರ ಮೇಲೆ ಸಹಾನುಭೂತಿ ಮತ್ತು ತಿಳುವಳಿಕೆ ಹೊಂದಿರುವ ಸಾಮರ್ಥ್ಯವಿರುವ ಜನರು ಮತ್ತು ಪಕ್ಷಗಳು ಕೂಡಾ ನಡೆಸಬಹುದಾದುದರಿಂದ, ಅದೂ ಕೂಡಾ ಸಾರ್ವಜನಿಕ ಚರ್ಚೆಯಿಂದ ಮೂಡಿಬರುವ ಮಾಹಿತಿ ಹಾಗೂ ವಿಶ್ಲೇಷಣೆಯಿಂದ ನೇರವಾಗಿ ಪ್ರಭಾವಿತವಾಗಬಹುದು.

ಒಂದು ಅಲ್ಪಸಂಖ್ಯಾತ ಜನವರ್ಗವು ಮಾತ್ರ ವಾಸ್ತವಿಕವಾಗಿ ಅಭಾವವನ್ನು ಎದುರಿಸಬೇಕಾಗಿ ಬಂದರೂ, ಸಾರ್ವಜನಿಕ ಚರ್ಚೆ ಮತ್ತು ಮುಕ್ತ ಮಾಧ್ಯಮದಿಂದ ವಿಷಯ ಅರಿತುಕೊಂಡಿರುವ ಬಹುಸಂಖ್ಯಾತರ ಅಭಿಪ್ರಾಯಗಳನ್ನು ಮನ್ನಿಸುವುದರಿಂದ ಸರಕಾರವೊಂದು ಹೆಚ್ಚು ಸಂವೇದನಾಶೀಲವಾಗಬಹುದು. ಇದು- ಸಹಾನುಭೂತಿಯಿಂದ (ಸರಕಾರ ಕಾಳಜಿ ಹೊಂದಿದ್ದಾಗ) ಅಥವಾ ಅದರ ನಿಷ್ಕ್ರಿಯತೆಯು ಉಂಟುಮಾಡುವ ಅಸಮಾಧಾನದಿಂದ (ಸರಕಾರ ಕಾಳಜಿ ಹೊಂದಿಲ್ಲದಿದ್ದಾಗ) ಸಾಧ್ಯವಾಗಬಹುದು. ಜಾನ್ ಸ್ಟುವರ್ಟ್ ಮಿಲ್‌ನ ಪ್ರಜಾಪ್ರಭುತ್ವದ “ಚರ್ಚೆಯಿಂದ ಆಡಳಿತ” ಎಂಬ ವಿಶ್ಲೇಷಣೆಯು, ಬರಗಾಲದಿಂದ ಸಂತ್ರಸ್ತರನ್ನು ಪಾರು ಮಾಡುವವರನ್ನು, ಮತ್ತು ನಿರ್ದಿಷ್ಟವಾಗಿ ಮುಕ್ತ ಮಾಧ್ಯಮ ಮತ್ತು ಸ್ವತಂತ್ರವಾದ ಚರ್ಚೆಗಳನ್ನು ಗುರುತಿಸಲು ನೆರವಾಗುತ್ತದೆ.

ಒಂದು ಸಾಮಾಜಿಕ ವಿಪತ್ತನ್ನು ನಿಭಾಯಿಸುವುದೆಂದರೆ, ಒಂದು ಯುದ್ಧದಲ್ಲಿ ಹೋರಾಡಿದಂತಲ್ಲ. ಒಬ್ಬ ನಾಯಕ ಉನ್ನತ ಅಧಿಕಾರ ಹೊಂದಿದ್ದು, ಯಾರ ಜೊತೆಗೂ ಸಮಾಲೋಚನೆ ನಡೆಸುವ ಅಗತ್ಯವೇ ಇಲ್ಲದೆ, ಪ್ರತಿಯೊಬ್ಬರಿಗೂ ಆಜ್ಞೆ ಮಾಡುವ ಅಧಿಕಾರ ಹೊಂದಿದ್ದಾಗ, ಯುದ್ಧವು ಚೆನ್ನಾಗಿ ನಡೆಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಒಂದು ಸಾಮಾಜಿಕ ವಿಪತ್ತನ್ನು ನಿಬಾಯಿಸುವಾಗ ಬೇಕಾಗಿರುವುದೆಂದರೆ, ಭಾಗವಹಿಸುವಿಕೆಯ ಮೂಲಕ ಆಡಳಿತ ಮತ್ತು ಎಚ್ಚರವುಳ್ಳ ಸಾರ್ವಜನಿಕ ಚರ್ಚೆ.

ಬರಗಾಲದ ಸಂತ್ರಸ್ತರು, ತುಲನಾತ್ಮಕವಾಗಿ ಹೆಚ್ಚು ಅನುಕೂಲವಂತರಾಗಿರುವ ಜನತೆಯಿಂದ ಸಾಮಾಜಿಕವಾಗಿ ದೂರವಾಗಿರಬಹುದು; ಅದರಂತೆಯೇ, ಇತರ ಪ್ರಕೋಪಗಳಿಂದ ಬಾಧಿತರಾದ ಇತರ ಸಂತ್ರಸ್ತರು ಕೂಡಾ. ಆದರೆ, ಸಾರ್ವಜನಿಕ ಚರ್ಚೆಗೆ ಕಿವಿಗೊಡುವುದು- ನಿಜವಾಗಿಯೂ ಮಾಡಬೇಕಾಗಿರುವುದು ಏನು ಎಂಬುದನ್ನು ಯೊಜನಾ ನಿರೂಪಕರು ಅರ್ಥ ಮಾಡಿಕೊಳ್ಳುವಂತೆ ಮಾಡುತ್ತದೆ. ನೆಪೋಲಿಯನ್, ಆಲಿಸುವುದಕ್ಕಿಂತಲೂ ಹೆಚ್ಚಾಗಿ, ನೇತೃತ್ವವಹಿಸಿ ಆಜ್ಞೆ ಮಾಡುವುದರಲ್ಲಿ ಹೆಚ್ಚು ಸಕ್ಷಮನಾಗಿದ್ದಿರಬಹುದು. ಆದರೆ ಇದು, ಬಹುಶಃ ರಷ್ಯನ್ ದಂಡಯಾತ್ರೆಯನ್ನು ಹೊರತುಪಡಿಸಿ, ಆತನ ಬೇರೆ ದಂಡಯಾತ್ರೆಗಳಿಗೆ ತೊಡಕುಂಟುಮಾಡಲಿಲ್ಲ.

ಆದರೆ, ಒಂದು ಸಾಮಾಜಿಕ ಪಿಡುಗಿನಿಂದ ಹೊರಬರಲು, ಆಲಿಸುವುದು ಯಾವತ್ತೂ ಇರಬೇಕಾದ ಒಂದು ಅಗತ್ಯ. ಇದು ಒಂದು ಸಾಂಕ್ರಾಮಿಕ ರೋಗ ಉಂಟುಮಾಡುವ ಬಿಕ್ಕಟ್ಟಿಗೂ ಅನ್ವಯಿಸುತ್ತದೆ. ಇವುಗಳಲ್ಲಿ ಕೆಲವರು- ಅಂದರೆ, ಉಳ್ಳವರು- ಕೇವಲ ಆ ರೋಗ ಅಂಟಿಸಿಕೊಳ್ಳದೇ ಇರುವ ಬಗ್ಗೆ ಮಾತ್ರ ಚಿಂತೆ ಹೊಂದಿರಬಹುದು; ಆದರೆ, ಉಳಿದವರು ಜೀವಿಸಲು ಬೇಕಾದ ಹಣ ಸಂಪಾದನೆ ಮಾಡುವ ಕುರಿತೂ ಚಿಂತಿಸಬೇಕಾಗಿರುತ್ತದೆ. (ಅವರ ಜೀವನೋಪಾಯವು ರೋಗದಿಂದ ಆಥವಾ ರೋಗ ನಿಯಂತ್ರಣಕ್ಕಾಗಿ ಹೇರಲಾಗುವ ಲಾಕ್‌ಡೌನ್‌ನಂತಹ ಧೋರಣಾಕ್ರಮಗಳಿಂದ ಅಪಾಯಕ್ಕೀಡಾಗಿರಬಹುದು.) ತಮ್ಮ ಮನೆಗಳಿಂದ ದೂರ ಸಿಕ್ಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಮನೆಗೆ ಮರಳುವ ದಾರಿಯಾದರೂ ಯಾವುದು ಎಂಬ ಹೆಚ್ಚುವರಿ ಚಿಂತೆ ಇರುತ್ತದೆ.

ವಿವಿಧ ಗುಂಪುಗಳು ಅನುಭವಿಸುವ ವಿವಿಧ ರೀತಿಯ ಸಂಕಷ್ಟಗಳನ್ನು ಪರಿಹರಿಸಲು ಏಕಕಾಲದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದಕ್ಕೆ ಭಾಗವಹಿಸುವಿಕೆಯುಳ್ಳ ಪ್ರಜಾಪ್ರಭುತ್ವವು ನೆರವಾಗುತ್ತದೆ; ಅದೂ, ವಿಶೇಷವಾಗಿ ಮಾಧ್ಯಮವು ಮುಕ್ತವಾಗಿದ್ದಾಗ, ಸಾರ್ವಜನಿಕ ಚರ್ಚೆಗೆ ನಿಯಂತ್ರಣಗಳು ಇಲ್ಲದಿರುವಾಗ ಮತ್ತು ಸರಕಾರದ ಆದೇಶಗಳು- ಆಲಿಸುವಿಕೆ ಮತ್ತು  ವಿಚಾರವಿನಿಮಯಗಳ ಮೂಲಕ ತಿಳುವಳಿಕೆಯನ್ನು ಹೊಂದಿದಂತವುಗಳಾಗಿದ್ದಾಗ ಮಾತ್ರ.

ಕೋವಿಡ್- 19 ವೈರಸ್‌ನ ಹರಡುವಿಕೆಯಿಂದ ಭಾರತದಲ್ಲಿ ಉಂಟಾಗಿರುವ ಹಠಾತ್ ಬಿಕ್ಕಟ್ಟಿನಲ್ಲಿ ರೋಗದ ಹರಡುವಿಕೆಯನ್ನು ತ್ವರಿತವಾಗಿ ನಿಲ್ಲಿಸುವ ಕುರಿತು ಸರಕಾರ ಆತಂಕಿತವಾಗಿರುವುದು ಸರಿ. ಪರಿಹಾರವಾಗಿ “ಸಾಮಾಜಿಕ ಅಂತರ” (ದೈಹಿಕ ಅಂತರ) ಕಾಯ್ದುಕೊಳ್ಳುವುದೂ ಮುಖ್ಯವಾಗಿದ್ದು, ಭಾರತದ ದೋರಣಾ ನಿರೂಪಣೆಯಲ್ಲಿ ಅದನ್ನು ಸರಿಯಾಗಿಯೇ ಅಳವಡಿಸಿಕೊಳ್ಳಲಾಗಿದೆ. ಆದರೆ, ಸಮಸ್ಯೆ ಉಂಟಾಗಿರುವುದು- ರೋಗದ ಹರಡುವಿಕೆಯನ್ನು ನಿಧಾನಗೊಳಿಸುವ ಏಕಗುರಿಯ ಸಾಧನೆಗಾಗಿ- ಇರಬಹುದಾದ ಬೇರೆಬೇರೆ ದಾರಿಗಳ ನಡುವಿನ ವ್ಯತ್ಯಾಸಗಳನ್ನು ಕಾಣದಿರುವುದರಲ್ಲಿ. ಇವುಗಳಲ್ಲಿ ಕೆಲವು ದಾರಿಗಳು ಕೋಟ್ಯಂತರ ಬಡಜನರ ಜೀವನದಲ್ಲಿ ದುರಂತ ಮತ್ತು ವ್ಯಾಪಕ ಹಾನಿಯನ್ನು ತರಬಹುದು. ಇನ್ನು ಕೆಲವು ದಾರಿಗಳು ಇಂತಹಾ ಸಂಕಷ್ಟಗಳ ನಿವಾರಣೆಯ ಕ್ರಮಗಳಲ್ಲಿ ತಮ್ಮ ಪಾಲು ಸಲ್ಲಿಸಬಹುದೆಂದು ಆಶಿಸಬಹುದು.

ಉದ್ಯೋಗ ಮತ್ತು ಆದಾಯಗಳು ಬಡವರ ಮೂಲಭೂತ ಆತಂಕಗಳಾಗಿವೆ. ಅವರು ಅಪಾಯಕ್ಕೆ ಒಳಗಾದಾಗಲೆಲ್ಲ ಅವರನ್ನು ರಕ್ಷಿಸುವುದು ಧೋರಣಾ ನಿರೂಪಣೆಯ ಅತೀ ಮುಖ್ಯ ಅಗತ್ಯ. ಉಪವಾಸ ಮತ್ತು ಅಭಾವಗಳು ಆದಾಯದ ಕೊರತೆ ಮತ್ತು ಆಹಾರವಸ್ತುಗಳನ್ನು ಕೊಳ್ಳಲು ಬಡಜನರ ಅಸಾಮರ್ಥ್ಯಗಳ ಜೊತೆ ಸಾಮಾನ್ಯವಾಗಿ ತಳಕುಹಾಕಿಕೊಂಡಿರುತ್ತವೆ ಎಂಬುದನ್ನು ಗಮನಿಸುವುದು ಈ ಸಂದರ್ಭದಲ್ಲಿ ಅತ್ಯಗತ್ಯ. (ಹಲವಾರು ಆಳವಾದ ಆರ್ಥಿಕ ಅಧ್ಯಯನಗಳು ಈ ಸಂಬಂಧವನ್ನು ಹೊರಗೆಳೆದಿವೆ.) ಹಠಾತ್ ಲಾಕ್‌ಡೌನ್- ಕೋಟ್ಯಂತರ ಜನರನ್ನು ತಮ್ಮ ಆದಾಯದಿಂದ ವಂಚಿತಗೊಳಿಸುತ್ತದೆ ಮತ್ತು ಒಂದು ಪ್ರಮಾಣದಲ್ಲಿ ಅವರು ಉಪವಾಸ ಬೀಳುವ ದಿನಗಳು ದೂರವಿಲ್ಲ.

ಅತ್ಯುತ್ತಮ ಉದ್ಯಮಶೀಲ ಆರ್ಥಿಕತೆ ಎಂದು ಕರೆಯಲಾಗುವ (ಹಲವು ರೀತಿಗಳಲ್ಲಿ ಇದು ನಿಜವೂ ಹೌದು) ಯುಎಸ್‌ಎ ಕೂಡಾ, ನಿರುದ್ಯೋಗಿಗಳು ಮತ್ತು ಬಡವರಿಗೆ ಭಾರೀ ಪ್ರಮಾಣದ ಸರಕಾರಿ ವೆಚ್ಚದ ಮೂಲಕ ಆದಾಯ ಸಬ್ಸಿಡಿಯನ್ನು ಸ್ಥಾಪಿಸಿದೆ. ಯುಎಸ್‌ಎಯಲ್ಲಿ ಇಂತಹಾ ಸಾಮಾಜಿಕ ಸುರಕ್ಷಾ ಕ್ರಮಗಳು ಮೂಡಿಬಂದಿರುವುದು ಮತ್ತು ಅದನ್ನು ಸ್ವೀಕರಿಸುವುದರಲ್ಲಿ, ರಾಜಕೀಯ ವಿರೋಧ ಪಕ್ಷಗಳ ಅಭಿಯಾನ ಮತ್ತು ಸಾರ್ವಜನಿಕ ಚರ್ಚೆಗಳು ವಹಿಸಿದ ಪಾತ್ರಗಳು ನಿರ್ಣಾಯಕವಾಗಿವೆ.

ಭಾರತದಲ್ಲಿ ಬಡಜನರನ್ನು ಅಭಾವ ಮತ್ತು ದುರ್ಗತಿಯಿಂದ ದೂರ ಇಡುವ ಸಾಂಸ್ಥಿಕ ವ್ಯವಸ್ಥೆಯು ಅದರ ಸ್ವಂತ ಆರ್ಥಿಕ ಪರಿಸ್ಥಿತಿಗೆ ಹೊಂದಿಕೊಂಡಿರಬೇಕಾಗುತ್ತದೆ. ಆದರೆ, ಈಗ ಸಾಧ್ಯವಿರುವ ರಕ್ಷಣಾ ವ್ಯವಸ್ಥೆಗಳನ್ನು ಪರಿಗಣಿಸುವುದು ಕಷ್ಟವಲ್ಲ. ಇವುಗಳೆಂದರೆ, ಬಡವರಿಗೆ ನೆರವಾಗುವ ನಿಧಿಗಳನ್ನು ಹೆಚ್ಚಿಸುವುದು (ಈಗಿರುವಂತೆ, ಅದು ಕೇಂದ್ರ ಬಜೆಟ್‌ನಲ್ಲಿ ತುಲನಾತ್ಮಕವಾಗಿ ಸಣ್ಣ ಪ್ರಮಾಣದ ಅನುದಾನ ಪಡೆಯುತ್ತಿದೆ), ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರಿಗೆ ಊಟ ಒದಗಿಸುವ ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ಭಾರತೀಯ ಆಹಾರ ನಿಗಮ (ಎಫ್‌ಸಿಐ)ದಲ್ಲಿ ಬಳಸದೇ ಉಳಿದುಕೊಂಡಿರುವ ಆರು ಕೋಟಿ ಟನ್ ಆಕ್ಕಿ ಮತ್ತು ಗೋಧಿಯನ್ನು ಬಳಸುವುದು.

ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಬಡವರ ಹೊಟ್ಟೆ ಸೇರದೆ ಚರಂಡಿ ಸೇರುತ್ತಿರುವ ಧಾನ್ಯಗಳು
ಭಾರತೀಯ ಆಹಾರ ನಿಗಮದ ಗೋದಾಮಿನ ಇನ್ನೊಂದು ಚಿತ್ರ

ಸ್ಥಳಾಂತರಗೊಂಡಿರುವ ವಲಸೆ ಕಾರ್ಮಿರನ್ನು ಅವರ ಮನೆಗಳಿಗೆ ಸೇರಿಸುವ ದಾರಿಗಳು ಮತ್ತು ಉಪಾಯಗಳನ್ನು ಹುಡುಕುವುದು, ಅವರ ಪುನರ್ವಸತಿಗೆ ವ್ಯವಸ್ಥೆಗಳನ್ನು ರೂಪಿಸುವುದು, ಅವರ ರೋಗಗಳ ಸ್ಥಿತಿಗತಿ ಮತ್ತು ಆರೋಗ್ಯ ರಕ್ಷಣೆಯ ಕುರಿತು ಗಮನಹರಿಸುವುದು ಕೂಡಾ ಸವಾಲೊಡ್ಡುವ ವಿಷಯಗಳಾಗಿದ್ದು, ಇವುಗಳಿಗೆ, ಸರಿಯಾದ ವಿಚಾರ ವಿನಿಮಯ ಇಲ್ಲದ, ಬಗ್ಗಿಸಲಾಗದ ನಿರ್ಧಾರಗಳಿಗಿಂತಲೂ ಹೆಚ್ಚಾಗಿ, ಎಚ್ಚರಿಕೆಯಿಂದ ಕಿವಿಗೊಟ್ಟು ಕೇಳಿ ತೆಗೆದುಕೊಂಡ ನಿರ್ಧಾರಗಳ ಅಗತ್ಯವಿದೆ.

ಮಾಧ್ಯಮಗಳ ಬಾಯಿ ಮುಚ್ಚಿಸುವುದು, ಭಿನ್ನಮತೀಯರಿಗೆ ಶಿಕ್ಷೆಯ ಬೆದರಿಕೆ ಒಡ್ಡುವುದು (ಆ ಮೂಲಕ ರಾಜಕೀಯವಾಗಿ ಪ್ರಶ್ನಾತೀತರಾಗಿ ಉಳಿಯುವುದು) ಇವುಗಳ ಬದಲಾಗಿ- ಸಮಸ್ಯೆಗಳು ಯಾವುವು, ಅವು ಖಚಿತವಾಗಿ ಎಲ್ಲೆಲ್ಲಿ ಹೊಡೆತ ನೀಡಿವೆ, ಅವು ಸಂತ್ರಸ್ತರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಕೇಳುವುದು ಸೇರಿದಂತೆ- ಸಾಮಾಜಿಕ ದುರಂತವನ್ನು ತಪ್ಪಿಸುವ ಸರಕಾರದ ಕಾರ್ಯದಲ್ಲಿ ಆಲಿಸುವಿಕೆಯು ಪ್ರಮುಖ ಪಾತ್ರ ಹೊಂದಿದೆ. ಸಾರ್ವಜನಿಕ ಚರ್ಚೆಯಿಂದ ಆಡಳಿತಕ್ಕೆ ಬಹಳವಾಗಿ ನೆರವು ಸಿಗಬಹುದು. ಸಾಂಕ್ರಾಮಿಕ ರೋಗವೊಂದನ್ನು ಗೆಲ್ಲುವುದು ಒಂದು ಯುದ್ಧದಂತೆ ಕಾಣಬಹುದು. ಆದರೆ ನಿಜವಾದ ಅವಶ್ಯಕತೆ ಅದಕ್ಕಿಂತ ಬೇರೆಯೇ ಆಗಿದೆ.

(ಈ ಲೇಖನವು “ಆಡಳಿತವಾಗಿ ಆಲಿಸುವಿಕೆ” ಎಂಬ ಶೀರ್ಷಿಕೆಯಲ್ಲಿ ಮೊದಲ ಬಾರಿಗೆ ಪ್ರಕಟವಾಗಿತ್ತು. ನೋಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ವಿಜೇತರಾದ ಅಮರ್ತ್ಯ ಸೇನ್ ಅವರು, ಥಾಮಸ್ ಡಬ್ಲ್ಯೂ. ಲೆಮೋಂಟ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯಗಳಲ್ಲಿ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರಗಳ ಪ್ರಾಧ್ಯಾಪಕರಾಗಿದ್ದಾರೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...