Homeಕಥೆಕಪಿಲ ಪಿ ಹುಮನಾಬಾದೆಯವರ ಕಥೆ ’ಬಿದಿರು’

ಕಪಿಲ ಪಿ ಹುಮನಾಬಾದೆಯವರ ಕಥೆ ’ಬಿದಿರು’

- Advertisement -
- Advertisement -

ಪೋರ್ಟಿಕೊದ ಆರಾಮ ಚೇರಲ್ಲಿ ಬೆನ್ನು ಒತ್ತಿ ಕೂತ ಗಂಗಾಧರನ ಕೈಯಿಂದ ಪುಸ್ತಕವೊಂದು ಟಪ್ ಎಂದು ನೆಲದ ಮೇಲೆ ಬಿದ್ದಾಗಲೇ ಎಚ್ಚರವಾಯ್ತು. ಪುಸ್ತಕದ ರಟ್ಟಿನ ತುದಿ ಛಿದ್ರವಾಗಿದ್ದಕ್ಕೆ ಬೇಸರದಿಂದಲೆ ಅದನ್ನೆತ್ತಿ ತೊಡೆಮೇಲೆ ಇಟ್ಟುಕೊಂಡು, ಮನೆ ಮುಂದಿನ ಗಾರ್ಡನಿನಲ್ಲಿ ಬೆಳೆದು ನಿಂತ ದಟ್ಟ ಬಿದಿರು ನೋಡುತ್ತ ಕೂತ. ಅವ ದಿಟ್ಟಿಸುತ್ತ ಹೋದಂತೆ ಅವನ ಕಣ್ಣೆದುರೆ ರಭಸವಾಗಿ ಬಿದಿರು ಬೆಳೆಯುತ್ತಿದ್ದವು. ಇಲ್ಲಿ ಮನೆ ಕಟ್ಟಿ ಐದಾರು ವರ್ಷವಾಗಿರಬಹುದು. ಆವಾಗಿನಿಂದ ಇವು ಬೆಳೆಯುವುದು ನಿಲ್ಲಿಸಿಲ್ಲ. ಅವುಗಳ ಗುಂಪು ಎಂದಿಗಿಂತ ಇವತ್ತು ಅವನನ್ನು ತುಸು ಜೋರಾಗಿಯೇ ಸೆಳೆಯುತ್ತಿತ್ತು. ಉದ್ದವಾದ ಬೊಂಬುಗಳಂತೆ ಎದ್ದುನಿಂತಿರುವ ಹಸಿರು ಬಿದುರಿನ ಗಿಡಗಳು ಕೈಬೀಸಿ ಕರೆಯುತ್ತಿದ್ದವು. ಅವುಗಳ ಮೇಲೆ ಕುಂತು ಚಿಂವ್ ಚಿಂವ್ ಮಾಡುತ್ತಿರುವ ಪುಟ್ಟ ಗುಬ್ಬಿಗಳು, ಗಾಢಹಸಿರಿನ ಗಿಳಿಗಳು ಕಣ್ಣು ಅತ್ತಿತ್ತ ತಿರುಗಿಸುತ್ತ ಏನೋ ಹುಡುಕುತಿದ್ದವು.

ಗಂಗಾಧರನ ಹತ್ತು ವರ್ಷದ ಮಗಳು ಜೀವನ್ಮುಖಿ ‘ಯೇ ಅಪ್ಪ ನೀ ಇಲ್ಲಿ ಕುಂತಿದಿಯಾ?! ನಿನಗೆ ಮನೆ ತುಂಬಾ ಹುಡುಕಿದೆ, ಚಹಾ ತಗೋ’ ಎಂದು ಹೇಳಿದಾಗಲೆ ಅವನು ಬಿದುರು ಗಿಡಗಳಿಂದ ಹೊರಬಂದ.

ಮಗಳ ಅಕ್ಕಿಯಂತಹ ಹಲ್ಲುಗಳು, ಎಳಿ ಕೈಕಾಲುಗಳು, ಅವಳು ಉಟ್ಟಿದ್ದ ಪುಟ್ಟ ಲಂಗ, ಅವಳ ಕೂದಲಿಗೆ ಕಚ್ಚಿಕೊಂಡ ಪಿನ್ನು, ಹಣೆ ಮೇಲೆ ಜಾರಿ ಬೀಳುತಿದೆಯೇನೋ ಅನ್ನುವಂತಹ ನೀರಿನ ಸಣ್ಣ ಚುಕ್ಕಿಯಂತಹ ಸ್ಟಿಕರ್ ಹಚ್ಚಿಕೊಂಡು ಚಹಾ ಕೈಯಲ್ಲಿ ಹಿಡಿದುಕೊಂಡು ನಿಂತಿದ್ದಳು.

‘ಅಪ್ಪ ಕೈಸುಡತದ ಫಸ್ಟ್ ಚಹಾ ತೊಗೊರೋ’ ಎಂದಾಗಲೇ ಅವಳನ್ನು ದಿಟ್ಟಿಸುವುದು ಬಿಟ್ಟ. ಮನೆಯಲ್ಲಿ ಈಗ ಒಂದು ವಾರವೇ ಆಯ್ತು ಇವನು ಬದಲಾಗಿ. ನಡುರಾತ್ರಿವರೆಗೂ ಸಿಗರೇಟ್ ಸುಡುತ್ತ ಕಣ್ಣು ತೆರೆದು ರಾತ್ರಿ ನೋಡುತ್ತಿದ್ದ. ಹಗಲು ಅವನಿಗೆ ನುಂಗುತಿರುವಂತೆ ಅನಿಸುತ್ತಿತ್ತು. ಹೆಂಡತಿ ಪಕ್ಕದಲ್ಲಿ ಮಲಗುವುದನ್ನು ಬಿಟ್ಟಿದ್ದ. ಅವಳು ಎಷ್ಟೇ ಬೈದರೂ, ಏನೇ ಕೇಳಿದರು ನನಗೆ ಏನು ಸಂಬಂಧವೇ ಇಲ್ಲವೆಂಬಂತೆ ಇರುತ್ತಿದ್ದ. ತಾನಾಯ್ತು ತನ್ನ ಪುಸ್ತಕಗಳಾಯ್ತು ಇಷ್ಟೇ ಅವನ ಬದುಕು ಆಗಿತ್ತು.

ಮನೆಗೆ ಬಂದವರೆದುರು ಗಂಗಾಧರನ ಹೆಂಡತಿ ಹೇಳುವುದು ಒಂದೇ ಮಾತು ‘ನಿನ್ನೆ ಮೊನ್ನೆವರೆಗೂ ಎಲ್ಲಾ ಆರಾಮ ಇದ್ರು, ಯಾವಾಗ ಅವರ ಊರಿಗಿ ಹೋಗಿ ಬಂದ್ರೊ ಆವಾಗಿನಿಂದ ಹಿಂಗ ಆಗ್ಯಾರ’ ಅಂತ ಹೇಳುತ್ತಿದ್ದಳು.

ಡಿಗ್ರಿ ಕಾಲೇಜೊಂದರಲ್ಲಿ ಲೈಬ್ರರಿಯನ್ ಆಗಿರುವ ಗಂಗಾಧರನಿಗೆ, ಪುರುಸೊತ್ತು ಎಂಬುವ ಪದದ ಅರ್ಥವೇ ಗೊತ್ತಿಲ್ಲದಂತಿರುವ ಮನುಷ್ಯ. ಒಮ್ಮಿಂದೊಮ್ಮೆಲೆ ಹೀಗೆ ಮುದುಡಿಹೋಗಿರುವ ಅವನ ಬಗ್ಗೆ ಹೆಂಡತಿಗಂತೂ ಹೇಳಲಾಗದ ಏನೇನೋ ಯೋಚನೆಗಳು ಕುಕ್ಕುತಿದ್ದವು.

ಪೋರ್ಟಿಕೊದಲ್ಲಿ ಒಂದೊಂದು ಸಲ ಕಾಲೇಜಿಗೆ ಹೋಗದೆ ಪುಸ್ತಕ ಓದುತ್ತ ಕುಂತುಬಿಡುತ್ತಿದ್ದ. ಅವ ಒಂದು ತಿಂಗಳಿಂದ ಒಂದೇ ಪುಸ್ತಕ ತಿರುಗಿ ತಿರುಗಿ ಓದುತ್ತಿದ್ದ. ಆ ಪುಸ್ತಕ ಯಾಕೆ ಅವ ಅಷ್ಟು ಸಾರಿ ಓದುತ್ತಿದ್ದಾನೋ ಯಾರಿಗೂ ಗೊತ್ತಾಗಲಿಲ್ಲ. ಮನೆಮುಂದಿನ ಬಿದಿರುಗಳ ಬುಡದಲ್ಲಿ ಹೋಗಿ ನಿಂತು ಒಂದು ಫುಲ್ ಪ್ಯಾಕ್ ಸಿಗರೇಟ್ ಸೇದಿ ಬರುತ್ತಿದ್ದ.

ಕೂತಲ್ಲಿಂದ ಎದ್ದವನೆ ಎಂದಿನಂತೆ ಬಿದಿರುಗಳ ಗುಂಪಿನತ್ತ ನಡೆದ. ಅಲ್ಲೊಂದು ಹಸಿರು ಬಟ್ಟೆಯ ಚಿಂದಿ ಅವುಗಳಿಗೆ ಜೋತು ಬಿದ್ದಿತ್ತು. ಅದನ್ನು ಎಷ್ಟು ನಾಜೂಕಾಗಿ ಎಳೆದರು ಪರ್ ಅಂತ ಹರಿದೆಹೊಯ್ತು. ಅದರ ಕೆಳಗೆ ಕುಂತವನೆ ಗಳಗಳನೆ ಅತ್ತ. ಯಾರೂ ನೋಡಿಲ್ಲವೆಂದು ತುಸು ಖಾತ್ರಿ ಪಡಿಸಿಕೊಂಡು ಎದ್ದು ನಿಂತ. ಅವನ ಅಳುವಿಗೆ ಯಾವ ಕಾರಣವಿರಬಹುದೆಂದು ಅವನೊಬ್ಬನಿಗೆ ಮಾತ್ರ ಗೊತ್ತಿತ್ತು.

ಒಂದು ವಾರದ ಹಿಂದೆ ಇವನ ಆತ್ಮೀಯ ಬಾಲ್ಯದ ಗೆಳೆಯ ದಿನೇಶ್ ಫೋನ್ ಮಾಡಿದ್ದ. ‘ಲೇ ಫ್ರೀ ಇದಿಯೇನೊ, ಒಂದ ಅರ್ಜಂಟ್ ಮಾತ ಹೇಳದದ. ನೀ ಗಾಭರಿ ಆಗಬ್ಯಾಡ, ಸಮಾಧಾನನಿಂತ ಕೇಳು ನಿಮ್ಮ ಮನಿ ಬಾಜುದ ಮೀನಾ ಸತ್ತಾಳ ಲೇ, ವಿಷ ತಗೊಂಡ’ ಎಂದ. ಆ ಕಡೆಯಿಂದ ಧ್ವನಿ ಬರುತ್ತಿದ್ದರೂ ಇವ ಏನನ್ನೂ ಮಾತಾಡದೆ ಫೋನ್ ಕೆಳಗಿಳಿಸಿ ಜೇಬಲ್ಲಿ ಇಟ್ಟುಕೊಂಡ. ಕಾರ್ ಸ್ಟಾರ್ಟ್ ಮಾಡಿ ಊರಿನ ದಾರಿ ಹಿಡಿದ. ಅಳು ಒಳಗಿನಿಂದ ಚೆಲ್ಲುತಿತ್ತು. ಹೇಗೊ ಸಂಭಾಳಿಸಿಕೊಂಡು ಕಾರು ಓಡಿಸುತ್ತಿದ್ದ. ಹೊರಗಡೆಗೆ ಕಾರಿನ ಗ್ಲಾಸಿನ ಮೇಲೆ ಬೀಳುತ್ತಿದ್ದ ಮಳೆ ನೀರು ರ್ಯಾಪರ್ ಒರೆಸುತ್ತಿತ್ತು. ಇವ ಬೆವರಿನಿಂದ ತೊಯ್ದು ಹೋಗಿದ್ದ. ದಿನೇಶ್ ಫೋನಿನಲ್ಲಿ ಹೇಳಿರುವ ಮೀನಾ ಇವನ ಆತ್ಮೀಯ ಹೈಸ್ಕೂಲ್ ಗೆಳತಿ. ಅವಳು ದೊಡ್ಡವಳಾದ ಮೇಲಿನಿಂದ ಇವನಿಗೆ ಅವಳ ಮೇಲೆ ವಿಶೇಷ ಆಸಕ್ತಿ. ಅವಳು ಮದುವೆ ಆಗಿ ಹೋಗುವವರೆಗೂ ಅವಳೊಂದಿಗೆ ಎಲ್ಲಾ ರೀತಿಯ ಸಂಪರ್ಕಗಳು ಹೊಂದಿದ್ದ. ಅವರಿಬ್ಬರೂ ಹೊಲದ ಬಣಮಿಗಳ ಮರೆಯಲ್ಲಿ ಎಷ್ಟೋ ಸಲ ಕೂಡಿದ್ದರು. ಅದೆಲ್ಲ ಗಂಗಾಧರನಿಗೆ ಮೊದಮೊದಲ ಪುಳಕಗಳು. ಇವ ಎಲ್ಲಾ ಹುಡುಗರಂತೆ ಸಿಟಿ ಸೇರಿಕೊಂಡು ಓದಿಗಿಳಿದ. ಅವಳು ಮದುವೆ ಆಗಿ ಹೋದಳು. ಇದಾದ ಮೇಲೆ ಅವರಿಬ್ಬರಿಗೂ ಸಂಪರ್ಕವೆ ಇಲ್ಲ. ಅವ ಆಗಾಗ ಹಳೆ ನೆನಪುಗಳಲ್ಲಿ ಮರುಗುತ್ತಿದ್ದನಾದರೂ ಬೆಳೆದಂತೆ ಬದಲಾಗುತ್ತ ನಡೆದ.

ಕುಡುಕ ಗಂಡನ ದೆಸೆಯಿಂದ ಮೀನಾ ವಿಷ ಕುಡಿದಿದ್ದಳು. ಹೆಣ ಗೋಡೆಗೊರಗಿಸಿ ಕೂಡಿಸಿದ್ದರು. ಇವ ಒಮ್ಮಿಂದೊಮ್ಮೆಲೆ ಹೀಗೆ ಪ್ರತ್ಯಕ್ಷವಾಗಿರುವುದಕ್ಕೆ ಊರಲ್ಲಿ ಯಾರು ಖುಷಿಪಡಲಿಲ್ಲ. ಅವರಿಬ್ಬರ ಮಧ್ಯೆ ಇದ್ದ ಹಳೆ ಸಂಬಂಧಗಳು ಸಹ ಅಲ್ಲಿ ಯಾರಿಗೂ ಗೊತ್ತಿರಲಿಲ್ಲ. ಅವನ ಗೆಳೆಯ ದಿನೇಶನಿಗೆ ಬಿಟ್ಟು.

‘ಇದೇನೆ ಯವ್ವಾ ಅಪೆಸಿ ಬಂದು ಅಂಗಳಾಗ ನಿಂತದ ಅಲಾ’ ಎಂದು ಜನ ಮಾತಾಡಿಕೊಂಡರು.

ಮೀನಾಳ ಮುಖಕ್ಕೆ ಬಿಳಿ ಬಟ್ಟೆ ಸುತ್ತಿದ್ದರು. ಆಗತಾನೆ ಮೈತೊಳೆದು ಕೂಡಿಸಿರಬಹುದು. ಕೆಂಪು ಸೀರೆ ಉಡಿಸಿದ್ದರು. ಅವಳ ಮುಂದೆ ಅವಳವ್ವ ಜೋರಾಗಿ ಅತ್ತು ಅತ್ತು ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಅವಳ ಅಪ್ಪ ಅಂಗಳದಲ್ಲೆ ಬೀಡಿ ಸೇದುತ್ತ ಕಣ್ಣು ತುಂಬಾ ನೀರು ತುಂಬಿಕೊಂಡಿದ್ದ. ಅವಳ ಜೀವವಿಲ್ಲದ ಮುಖ ನೋಡಿದ ಗಂಗಾಧರನಿಗೆ ವಾಕರಿಗೆ ಬಂದ ಹಾಗಾಯ್ತು. ಈ ತುಟಿಗಳಲ್ಲವೆ ನಾ ದೀರ್ಘವಾಗಿ ಮುತ್ತಿಟ್ಟದ್ದು. ಕಪ್ಪು ಬಿದ್ದ ಈ ಕೆನ್ನೆಗಳ ಮೇಲೆ ಅಲ್ಲವೆ ನಾ ಮಲಗಿ ಮುದ್ದಾಡಿದು. ಅವಳ ಸೆಟದು ನಿಂತಿರುವ ಒಣ ಕಟ್ಟಿಗಿಯಂತಹ ಕೈಗಳೆ ಅಲ್ಲವೆ ನನ್ನ ಕೂದಲು ಸುರುಳಿ ಸುತ್ತಿ ಆಟವಾಡಿದ್ದು. ಗಂಗಾಧರ ಯೋಚಿಸುತ್ತ ಹೋದಂತೆ ಒಳಗೊಳಗೆ ಪುಡಿಪುಡಿಯಾಗುತ್ತ ಕುಸಿಯುತಿದ್ದ. ಅವಳ ಹೆಣ ಎತ್ತಲು ಮಾಡಿದ ಬಿದಿರು ಕುರ್ಚಿ ಅವನನ್ನು ಕರೆಯುತಿರುವಂತೆ ಭಾಸವಾಗುತ್ತಿತ್ತು. ಅದಕ್ಕೆ ನಯವಾಗಿ ಜೋಡಿಸಿದ ಸಣ್ಣ ಬಿದರಿನ ತುಂಡುಗಳ ಸಿಬಿರು ಅವನ ಮೈಯಲ್ಲ ಚುಚ್ಚುತ್ತಿದ್ದವು. ಅದರ ಸುತ್ತ ನಿಂತ ಯುವಕರು ಅದನ್ನು ಸಪ್ಪೆ ಮುಖ ಮಾಡಿಕೊಂಡು ನೋಡುತ್ತಿದ್ದರು. ಅವಳ ಹೆಣ ನೋಡಿದವನಿಗೆ ಇಷ್ಟು ದಿನ ಎಲ್ಲಿದ್ದವೋ ಏನೋ ಆ ಕಣ್ಣೀರುಗಳು, ಗಳಗಳನೆ ಅತ್ತ. ಊರ ಮಂದಿ ದಂಗು ಆಗಿ ಹೋದರು.

ಗಂಗಾಧರ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಿದ್ದ. ಅವನನ್ನು ಎತ್ತಿ ಅಂಗಳದಲ್ಲಿ ಕೂಡಿಸಿ ಮೂಗಿನಲ್ಲಿ ಬೀಡಿಯ ಖಾಟ್ ನೀಡುತ್ತಿದ್ದರು. ಪಾದಗಳು ಜೋರಾಗಿ ಉಜ್ಜಿದರು. ಬೇಹೊಸ್ ಬಿದ್ದಿದ್ದ ಗಂಗಾಧರ ಮಿಸುಕಾಡುವಂತೆ ಕಾಣಲಿಲ್ಲ. ಅವನ ಸುತ್ತ ನೆರದಿದ್ದ ಮಂದಿಗೆಲ್ಲ ಸರಿಸಿ ಗಾಳಿಗೆ ಜಾಗ ಬಿಟ್ಟರು. ಗಂಗಾಧರ ಮೆಲ್ಲಗೆ ಎಚ್ಚರಗೊಂಡು ಮೂಲೆಯಲ್ಲಿ ಕೂತ. ಅಂಗಳದ ತುಂಬಾ ಕಣ್ಣಾಡಿಸಿದ ದಿನೇಶನ ಸುಳಿವೆ ಕಾಣಲಿಲ್ಲ. ಒಂದಿಬ್ಬರೂ ಮುದುಕಿಯರು ಹೆಣದ ಮುಂದೆ ಕುಂತು ಕಥೆ ಹೇಳಿ ಹಾಡಿ ಹಾಡಿ ಅಳುತ್ತಿದ್ದರು.

ಹೋದ ವರ್ಷವೆ ಇರಬಹುದು. ಗಂಗಾಧರನ ಅಪ್ಪ ಹಾರ್ಟ್ ಅಟ್ಯಾಕ್ ಆಗಿ ಸತ್ತಾಗ, ಊರಿಂದ ಬಂದಿದ್ದ ಗಂಗಾಧರ ಒಂದು ಹನಿ ಕಣ್ಣೀರು ಸಹ ಹಾಕಿರಲಿಲ್ಲ. ಇವನ ಅಕ್ಕ ಕೊಳ್ಳಿಗೆ ಬಿದ್ದು ಅಳುವಾಗ ಯಾವ ಪ್ರತಿಕ್ರಿಯೆ ತೋರಿಸದೆ ಅವಳಿಗೆ ತುಸು ಸಮಾಧಾನ ಮಾಡಿ, ಸುಮ್ಮನೆ ಕಲ್ಲು ಕಂಬದಂತೆ ನಿಂತಿದ್ದ.

ಅವನಪ್ಪನ ಹೆಣ ಎತ್ತಲು ತಂದ ಬಿದಿರು ಕುರ್ಚಿ ನೋಡಿ ಒಳಗೊಳಗೆ ಎಷ್ಟು ಚಂದ ಹೆಣೆದಿದ್ದಾರೆ ಎಂದುಕೊಂಡು ಅದು ತಂದವರಿಗೆ ಒಂದಿಷ್ಟು ಹೆಚ್ಚಿಗೆ ದುಡ್ಡು ಕೊಟ್ಟು ಕಳಿಸಿದ. ಅವನ ಜೊತೆ ಬಂದಿದ್ದ ಗೆಳೆಯರಿಗೆ ಅದರ ವಿಶೇಷತೆಗಳೆಲ್ಲ ವಿವರಿಸಿ ಹೇಳುತ್ತಿದ್ದ. ಇವನ ಜೊತೆ ಬಂದವರೆ ಇವನ ಮಾತುಗಳಿಂದ ತಪ್ಪಿಸಿಕೊಳ್ಳಲು ತಲೆತಗ್ಗಿಸಿ ನಿಂತಿದ್ದರು. ಬೀಡಿ ಸೇದುತ್ತ ನಿಂತ ಒಂದಿಬ್ಬರು ಮುದುಕರೂ, ಆ ಕುರ್ಚಿಯ ವಿಶೇಷತೆಗಳಲ್ಲಿ ಇಲ್ಲದ್ದು ಇದ್ದಿದ್ದು ಎಲ್ಲಾ ಸೇರಿಸಿ ಗಂಗಾಧರನೆದುರು ಕೊರೆಯುತ್ತಿದ್ದರು. ಇವ ಏನೋ ಅದ್ಭುತವಾದದ್ದು ಕೇಳಿಸಿಕೊಳ್ಳುತ್ತಿರುವಂತೆ, ಅವರನ್ನು ದೇವದೂತರಂತೆ ನೋಡುತ್ತಿದ್ದ.

ಆವತ್ತು ಊರಿನ ಹಳೆ ಮುದುಕಿಯೊಂದು ಯಾರದೋ ಕಿವಿಯಲ್ಲಿ ಮೆಲ್ಲಗೆ ಊಸುರುತ್ತಿದ್ದಳು ‘ಇವ ನಮ್ಮ ಗಂಗ್ಯಾ ಮೊದಲಿಂದ ಹಿಂಗೆ ಅದ ಪಾರ, ತನ್ನ ಜೀವ ಛೋಲೋ ಇದ್ರ ಸಾಕ ಅಂತದ, ಅವರ ಮುತ್ಯಾ ಸತ್ತಾಗ ಒಂದು ಗೆಣ ಇತ್ತ ನೋಡ ಪಾರ, ಅವರ ಮುತ್ಯಾಂದ ಹೆಣ ಅಂಗಳಾಗ ಹೊರಸಿನ ಮ್ಯಾಲ ಮಲಗಿಸಿರು, ಈ ಗಂಗ್ಯಾ ಏನ ಜಿದ್ದಿಗಿ ಬಿತ್ತು ಅಂತಿ, ಆವತ್ತ ನನಗ ಅನ್ನ ಬೇಕಂದರ ಬೇಕು ಅಂತ ಅಂಗಳದಾಗ ನೆಲ ತಿಕ್ಕಾಡಿ ಅಳಲತಿತು ನೋಡ. ಆವತ್ತು ಅಲ್ಲಿ ಇದ್ದ ನಾನೇ ಹೇಳದೆ ‘ಇವತ್ತ ಕುಣ್ಯಾಗ ಒಯ್ದು ಇಡೋ ಹೆಣದ ಸಲ್ಯಾಕ ಎಳಿ ಪಾರಂದ ಹೊಟ್ಟಿ ಯಾಕ ಸುಡತರಿ ಅನ್ನ ಮಾಡ ಹಾಕರಿ’ ಅಂದೆ. ಈ ಪಾರ ಆಗ ಅವರ ಮುತ್ಯಾನ ಹೆಣದ ಕಾಲಬಲ್ಲೆ ಕುಂತ ಉಣ್ಣುತು ನೋಡ. ಊರ ಮಂದಿ ಎಲ್ಲಾ ‘ಆ ಪರಮಾತ್ಮ ಆಡಸದಂಗ’ ಅದ ಅಂತ ಹೇಳಿ ಸುಮ್ಮನಾದರು.

‘ಈಗ ಇಷ್ಟು ದೊಡ್ಡ ಕೋಣ ಆಗ್ಯಾದ ಸ್ವಂತ ಅಪ್ಪನ ಹೆಣದ ಮುಂದ ನಾಕ ಹನಿ ಅಳಬಾರದ’ ಅಂತ ಅಜ್ಜಿ ಮಾತಾಡಿಕೊಂಡಿತು.

ಅವರಪ್ಪನ ಮಣ್ಣು ಆದಮೇಲೆ ಮರುದಿನ ದಿನೇಶ್ ಕೇಳಿದ ‘ಯಾಕಲೇ ನಿನೌವನ ನಿಮ್ಮಪ್ಪನೆದುರು ನಾಲ್ಕ ಹನಿ ಅಳಲಿಲ್ಲ ಅಲ್ಲೊ?’
‘ಯಾಕೋ ಏನೋ ಅಳುನೆ ಬರಲಿಲ್ಲ’ ಎಂದ ಗಂಗಾಧರ.

ಅಪ್ಪನ ಮುಂದೆ ಅಳಲಾರದವ ಇವತ್ತು ಮೀನಾ ಹೆಣದ ಮುಂದ ಅತ್ತಾನ ಅಂದರ ಏನದ ಇದರ ಒಳಗಿಂದ ಮಾತು ಎಂದು ತಿಳಿದುಕೊಳ್ಳಬೇಕೆನ್ನುವ ಕೆಟ್ಟ ಕುತೂಹಲ ದಿನೇಶನಿಗೆ ಸೇರಿದಂತೆ ಊರಿನವರಿಗೂ ಇತ್ತು. ಮೀನಾ ಮಣ್ಣು ಮಾಡಿದ ಮರುದಿನವೇ ದಿನೇಶ ಹೆಗಲಿಗೊಂದು ಬ್ಯಾಗ್ ಏರಿಸಿಕೊಂಡು ಸಿಟಿಗೆ ಹೋಗಿ ಗಂಗಾಧರನ ಮನೆ ಹಾದಿ ಹಿಡಿದ. ಪೋರ್ಟಿಕೊದಲ್ಲಿ ಕಣ್ಣು ಮುಚ್ಚಿ ಕೂತಿದ್ದ ಗಂಗಾಧರ ಇವ ಬರುವುದು ಅವನಿಗೆ ಮೊದಲೆ ಗೊತ್ತಿದೆ ಏನೋ ಎಂಬಂತೆ ಪಕ್ಕದಲ್ಲಿ ಚೇರ್ ಕೊಟ್ಟು ‘ನೋಡೊ ದಿನೇಶ ನನ್ನಪ್ಪ ಸತ್ತಾಗ ಯಾಕ ಅಳಬೇಕು ಅನ್ನಸಲಿಲ್ಲವೋ ನನಗೆ ಈಗಲೂ ಗೊತ್ತಿಲ್ಲ. ಅವನ ಜೊತೆ ನೆನಪು ಭಾಳ ಇದಾವೆ. ಆದರೆ ಯಾವು ಕೂಡ ಕಣ್ಣೀರು ಬರಸಲಿಲ್ಲ. ನೀ ನಮ್ಮಪ್ಪನ ಹೆಣ ನೋಡಿದ್ದಿ? ಅವನೌನ ಹೆಂಗ ಮಲಗಿದ್ದ ಹುಲಿ, ಅದೆ ಖಡಕ್ ಮುಖ ಇತ್ತು. ಹೆಂಗ ಅಳಬೇಕೊ ಅದರ ಎದುರು?

‘ಮೀನಾ ಸುದ್ದಿ ತಗೋ, ನನ್ನ ಮೈಮೇಲಿನ ಪ್ರತಿ ಕೂದಲಿಗೂ ಅವಳ ವಾಸನೆ ಗೊತ್ತದ, ಅವಳ ಮುಖ ನೋಡಿದಿ ಹೆಂಗ ಕಪ್ಪು ಆಗಿತ್ತು. ಆ ಮುಖಕ್ಕೆ ಅಲ್ವಾ ನಾ ಮುತ್ತಿಟ್ಟದ್ದು’ ಎಂದು ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದ.

ಅವರಿಬ್ಬರೂ ಮಾತಾಡುತ್ತ ಕೂತವರು, ಬಿದಿರಿನ ಗುಂಪು ಗಿಡಗಳತ್ತ ನಡೆದರು. ತನ್ನ ಬದುಕಿನ ಅಂತ್ಯವೆಲ್ಲ ಅವುಗಳ ಬುಡದಲ್ಲಿಯೇ ಇರುವಂತೆ ದಿನೇಶನಿಗೆ ಗಂಗಾಧರ ಅದರ ಮೈಮಾಟಗಳೆಲ್ಲ ವರ್ಣಿಸುತ್ತಿದ್ದ. ಚೂಪಾದ ಬಿದಿರೊಂದು ಹೊಟ್ಟೆಯಲ್ಲಿ ಯಾರೋ ತಿವಿಯುತಿರುವಂತೆ ಆಗಿ ರಾತ್ರಿಯಲ್ಲ ಕಣ್ಣಿಗೆ ನಿದ್ದೆಯೇ ಇಲ್ಲವೆಂದು ದಿನೇಶನಿಗೆ ಹೇಳಿ, ಬಿಕ್ಕುತ್ತ ಮಗುವಂತೆ ಅತ್ತ…

(ಲೇಖಕರು ಯುವ ಬರಹಗಾರರು, ಪ್ರಕಾಶಕರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...