Homeಮುಖಪುಟ’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗೆ - ರಾಜಾರಾಂ ತಲ್ಲೂರು

’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗೆ – ರಾಜಾರಾಂ ತಲ್ಲೂರು

ಒಂದು ಕ್ಷಣ ಕುಳಿತು ತಣ್ಣಗೆ ಯೋಚಿಸಿದರೆ ಸುಳ್ಳೆಂದು, ವಿಷವೆಂದು ಗೊತ್ತಾಗಿಬಿಡುವ ಸಂಗತಿಯನ್ನೂ ಕೂಡ ಅಡೆತಡೆಯಿಲ್ಲದೆ ನಿರಂತರವಾಗಿ ಹರಿಸುತ್ತಾ ಹೋದಾಗ, ಓದುಗನಿಗೆ ಆ ಒಂದು ಕ್ಷಣ ತಣ್ಣಗೆ ಕುಳಿತು ಯೋಚಿಸುವ ಸಮಯ ಉಳಿದಿರುವುದಿಲ್ಲ.

- Advertisement -
- Advertisement -

ಸಾಂಪ್ರದಾಯಿಕವಾಗಿ ಮೇಲು ಜಾತಿಗಳದೇ ಬಿಗಿಮುಷ್ಟಿಯಲ್ಲಿ ಬಹುತೇಕ ‘ಗುರುಶಿಷ್ಯ ಪರಂಪರೆ’ ಆಗಿಯೇ ಉಳಿದಿದ್ದ ಸುದ್ದಿಕೋಣೆಗಳಲ್ಲಿ ಸುದ್ದಿಗಾರರ ಸಂಚಲನದ ಮ್ಯಾಪಿಂಗ್ ಬಹಳ ಕುತೂಹಲಕರ ಸಂಗತಿಗಳನ್ನು ಹೊರಹಾಕಬಹುದು. ಇಲ್ಲಿ ನಾನು ಮಾಡಿರುವುದು ಕಣ್ಣಳತೆಯ ಮ್ಯಾಪಿಂಗೇ ಹೊರತು ಫೀಲ್ಡಿಗಿಳಿದು ಅಂಕಿಸಂಖ್ಯೆಗಳ ಆಧಾರದಲ್ಲಿ ಮಾಡಿದ್ದಲ್ಲ. ಆದರೆ ಮಾಧ್ಯಮ ಪರಿಣತರಿಗೆ ಇಲ್ಲೊಂದು ಚೆಂದದ ಸಂಶೋಧನಾವಕಾಶ ಇದೆ ಎಂದು ಧಾರಾಳವಾಗಿ ಹೇಳಬಲ್ಲೆ.

ಅಂದಾಜು 2000-2010 ಕನ್ನಡದ ಮುದ್ರಣ ಮಾಧ್ಯಮಗಳಲ್ಲಿ ಸ್ಥಿತ್ಯಂತರದ ಕಾಲ. ಈ ಅವಧಿಯಲ್ಲೇ (2000) ನಾನು ಉದ್ದೇಶಪೂರ್ವಕವಾಗಿ ನನ್ನ ಅನುಭವ ಇದ್ದ ಮುದ್ರಣ ಮಾಧ್ಯಮದ ಬದಲು ವೆಬ್ ಮಾಧ್ಯಮದ ಕಡೆ ಹೊರಳಿಕೊಂಡಿದ್ದರಿಂದ ನನಗೆ ಆದ ಲಾಭವೆಂದರೆ, ಒಳಗಿನವನಾಗಿದ್ದೂ ಹೊರಗಿನಿಂದ ಮುದ್ರಣ ಮಾಧ್ಯಮದ ಸುದ್ದಿಮನೆಗಳನ್ನು ನೋಡುವ ಅವಕಾಶ ಸಿಕ್ಕಿದ್ದು. ಈ ಅವಧಿಯಲ್ಲೇ ಕನ್ನಡ ಮುದ್ರಣ ಮಾಧ್ಯಮಗಳು ಮಾಲಕೀಯ ನಿಗಾದಿಂದ ‘ಕಾರ್ಪೋರೇಟ್ ನಿಗಾ ವ್ಯವಸ್ಥೆ’ಗೆ ಹೊರಳಿಕೊಂಡದ್ದು. ಅರ್ಥಾತ್ ಪತ್ರಿಕೆಯೊಂದರ ‘ಹೃದಯ’ದ ಜವಾಬ್ದಾರಿಯನ್ನು ‘ಕಿಡ್ನಿ’ ವಹಿಸಿಕೊಂಡದ್ದು. ಪುನರರ್ಥಾತ್, ಸುದ್ದಿಮನೆಗೆ ಸುದ್ದಿಗಾರರ ನೇಮಕ ಮಾಡುವ ಸುದ್ದಿಮನೆಯ ಹಿರಿಯರ ಜವಾಬ್ದಾರಿಯನ್ನು ಸಂಸ್ಥೆಯ ‘ಮಾನವ ಸಂಪನ್ಮೂಲ’ ವಿಭಾಗಗಳು ವಹಿಸಿಕೊಂಡದ್ದು!

ಈ ಸ್ಥಿತ್ಯಂತರದ ಮೊದಲ ಪರಿಣಾಮ -ಸುದ್ದಿಮನೆಯಲ್ಲಿರುವ ‘ಹಿರಿತಲೆ’ಗಳ ತಲೆದಂಡ. ಅದಕ್ಕೆ ಕೊಡಲಾದ ಕಾರ್ಪೋರೇಟ್ ಕಾರಣ ‘ಕನ್ನಡದ ಸುದ್ದಿಮನೆಯ ಸರಾಸರಿ ಪ್ರಾಯ 50+ ಇದೆ. ಉದಾರೀಕರಣದ-ನವಮಾರುಕಟ್ಟೆಗಳ ಪರ ಇದ್ದು ಆದಾಯ ಗಳಿಸಬೇಕಾಗಿರುವ ಪತ್ರಿಕೆಗಳು ಈ ನವ ಮಾರುಕಟ್ಟೆಯ ನಾಡಿಮಿಡಿತ ಅರಿಯಬೇಕಾದರೆ, ಸುದ್ದಿಮನೆಗಳ ಸರಾಸರಿ ಪ್ರಾಯ 30-35ರ ಆಸುಪಾಸು ಇರಬೇಕು ಎಂಬ ಕಾರ್ಪೋರೇಟ್ ತುಡಿತ. ಹೊಸದಾಗಿ ಬಂದಿದ್ದ ಈ ಕಾರ್ಪೋರೇಟೀಕರಣದ ವೃತ್ತಿಪರತೆಯ ವರಸೆಗಳು ಎಷ್ಟು ಬಲವಾಗಿದ್ದವೆಂದರೆ, ಅವರ ಅಂಕಿ-ಸಂಖ್ಯೆಗಳು, ಚಾರ್ಟುಗಳು, ಪಿಪಿಟಿ ಪ್ರೆಸಂಟೇಷನ್‍ಗಳು, ಉಳಿದವರನ್ನು ಬಿಡಿ – ಮಾಲಕ ವರ್ಗದ ಬಾಯಿಯನ್ನೇ ಕಟ್ಟಿಸಿಬಿಡುತ್ತಿದ್ದವು/ತ್ತಿವೆ.

ಈ ಸ್ಥಿತ್ಯಂತರದ ಆರಂಭದ ಹೊತ್ತಿಗೆ ಸುದ್ದಿಮನೆಗಳ ಪರಿಸ್ಥಿತಿ ಹೇಗಿತ್ತೆಂದರೆ ಬಹುತೇಕ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಅನುಭವೀ, ಇಗೊ ಧಿಮಾಕಿನ ಮುದುಕರೇ ತುಂಬಿದ್ದರು. ಸುದ್ದಿಮನೆಗಳಿಗೆ ಜಂಪಿಂಗ್ ಬೋರ್ಡ್‍ಗಳೆಂದೇ ಪ್ರಸಿದ್ಧವಾಗಿದ್ದ ಎರಡು ಪತ್ರಿಕೆಗಳು – ‘ಸಂಯುಕ್ತ ಕರ್ನಾಟಕ’ ಹಾಗೂ ‘ಹೊಸದಿಗಂತ’ ಬೇರೆ ಪತ್ರಿಕೆಗಳಿಗೆ ಹೋಲಿಸಿದರೆ ಸುದ್ದಿಮನೆಯ ಸರಾಸರಿ ಪ್ರಾಯದಲ್ಲಿ ಬಹಳ ತಗ್ಗಿನಲ್ಲಿದ್ದವು. ಅಂದರೆ, ಬೇರೆ ಸುದ್ದಿಮನೆಗಳಿಗೆ ಹೋಲಿಸಿದರೆ ಅಲ್ಲಿ ಎಳೆಯರ ಸಂಖ್ಯೆ ಜಾಸ್ತಿ ಇತ್ತು.

ಈಗ ನಾನು ಲೇಖನದ ಆರಂಭದಲ್ಲಿ ಹೇಳಿದ ಸುದ್ದಿಮನೆಯಲ್ಲಿ ಸಂಚಲನದ ಮ್ಯಾಪಿಂಗ್ ಮಾಡಿದರೆ, ನಿಮಗೆ ಕಾಣಬಹುದಾದ ಎರಡು ಹಾಟ್‍ಸ್ಪಾಟ್‍ಗಳೆಂದರೆ ‘ಸಂಯುಕ್ತ ಕರ್ನಾಟಕ’ ಹಾಗೂ ‘ಹೊಸದಿಗಂತ’. ಬಹುತೇಕ ಎಲ್ಲ ಸುದ್ದಿಮನೆಗಳಿಗೂ ಈ ಎರಡು ಪತ್ರಿಕೆಗಳಿಂದ ಅನುಭವೀ ಎಳೆಯರು ಹರಡಿ ಹೋದರು. ಈ ಹರಡುವಿಕೆ 1999ರಲ್ಲಿ ‘ವಿಜಯ ಕರ್ನಾಟಕ’ದ ಆರಂಭದೊಂದಿಗೆ ಟ್ರಿಗರ್ ಆಯಿತು. ಸುದ್ದಿಮನೆಯ ಮಂದಿ ಪತ್ರಿಕೆಯಿಂದ ಪತ್ರಿಕೆಗೆ ಹಿಂಡು ಕಟ್ಟಿಕೊಂಡು ತಿರುಗುವ ಸಂಪ್ರದಾಯಕ್ಕೂ ಇಲ್ಲೇ ನಾಂದಿ ಆಯಿತು. ಎಲ್ಲಕ್ಕಿಂತ ಮುಖ್ಯವಾಗಿ ಇವತ್ತಿನ ಕನ್ನಡ ಮುದ್ರಣ ಮಾಧ್ಯಮದ ಪರಿಸ್ಥಿತಿಗೆ ಈ ಬೆಳವಣಿಗೆ ಬೀಜ ಬಿತ್ತಿತು.

ಮೂಲದಲ್ಲೇ ಕಲುಷಿತ

‘ಸುದ್ದಿ ಸಂಸ್ಕರಣೆ’ ಎಂಬುದು ಕನ್ನಡದ ಮಟ್ಟಿಗೆ ‘ಗುರುಶಿಷ್ಯ’ ಪರಂಪರೆಯದೇ ಕೊಡುಗೆ. ಹಠಾತ್ ಆಗಿ ಹಿರಿಯ ತಲೆಮಾರಿನ ಪತ್ರಕರ್ತರ ಒಂದು ದೊಡ್ಡ ಬಳಗ ಕನ್ನಡ ಪತ್ರಿಕೆಗಳ ಸುದ್ದಿಮನೆಯಿಂದ ಹತ್ತು ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ, ವಿವಿಧ ಕಾರಣಗಳ ಹೆಳೆಯಲ್ಲಿ ‘ಒಂದೇ ಉದ್ದೇಶ ಸಾಧನೆಗಾಗಿ (ಮಾರುಕಟ್ಟೆಯಲ್ಲಿ ಗೆಲ್ಲುವ ಉದ್ದೇಶ ಅದು!)’ ಹೊರದಬ್ಬಿಸಿಕೊಂಡಾಗ, ಸುದ್ದಿಮನೆಯಲ್ಲಿ ಏಕಾಏಕಿ ಸುದ್ದಿ ಸಂಸ್ಕರಣೆ ಕೌಶಲದ ಕೊರತೆ ಉಂಟಾಗತೊಡಗಿತು. ಅದರ ಫಲವಾಗಿ ನಿಧಾನಕ್ಕೆ ಸುದ್ದಿಗಳು ತಮ್ಮ ಸೂಕ್ಷ್ಮಜ್ಞತೆಯನ್ನು ಕಳೆದುಕೊಳ್ಳತೊಡಗಿದವು. ಭಾಷೆ, ವ್ಯಾಕರಣದಂತಹ ಒಣ ಪಾಂಡಿತ್ಯದಿಂದ ಆರಂಭಿಸಿ ಸುದ್ದಿ ವಿಶ್ಲೇಷಣೆ, ಸುದ್ದಿಯ ದರ್ಜೆ ನಿರ್ಧಾರಣೆಯಂತಹ ಎಲ್ಲ ಸುದ್ದಿ ಕೌಶಲಗಳೂ ಏಕಾಏಕಿ ಮೊಂಡಾಗಿ, ಮಾರ್ಕೇಟು ಮಂಗಾಟಗಳು ಮುನ್ನೆಲೆಗೆ ಬರತೊಡಗಿದವು. ಓದುಗರ ಕಜ್ಜಿ ಕೆರೆಯುವ ಮತ್ತು ಆ ಕೆರೆತದ ಆನಂದಕ್ಕೆ ಉಪ್ಪು ಸವರಿ ಮತ್ತಷ್ಟು ಹಾರ ಕೊಡುವ ಕೆಲಸಗಳು ಆರಂಭಗೊಂಡವು.

2010ರ ಹೊತ್ತಿಗೆ, ದೇಶದಾದ್ಯಂತ ಹೆಚ್ಚಿನಂಶ ಇಂತಹದೊಂದು ಟ್ರೆಂಡ್ ವಿವಿಧ ಸ್ಥಳೀಯ ಕಾರಣಗಳಿಗಾಗಿ ಹುಟ್ಟಿಕೊಂಡಿರಬೇಕು. ಅಂತೂ ಎಲ್ಲೆಡೆ ಇದೇಸ್ಥಿತಿ ಇರುವಾಗ ‘ಸುದ್ದಿಮೂಲ ಸಂಸ್ಥೆ’ಗಳು ಹಿಂದುಳಿಯಲಾದೀತೇ? ANI, PTI, UNI ಮತ್ತಿತರ ಸುದ್ದಿಮೂಲ ಸಂಸ್ಥೆಗಳೂ ಇಂತಹದೇ ಸ್ಥಿತ್ಯಂತರಕ್ಕೆ ಒಳಪಟ್ಟು ತಮ್ಮ ತಮ್ಮ ಮೂಗಿನ ನೇರಕ್ಕೆ ಸುದ್ದಿಗಳನ್ನು ಹಂಚಲಾರಂಭಿಸಿದವು. ಈ ರೀತಿ ಮೂಲದಿಂದ ಬಂದ ಸುದ್ದಿಗಳ ‘ಸಂಸ್ಕರಣೆ’ ಕೌಶಲ ಇಲ್ಲದ ಸುದ್ದಿಮನೆಗಳು (ಕನಿಷ್ಟ ಕನ್ನಡದ ಮಟ್ಟಿಗೆ) ಇದೇ ಸುದ್ದಿಗಳನ್ನು ತಮ್ಮ ಓದುಗರಿಗೆ ಬಡಿಸತೊಡಗಿದವು.

ಈ ವೇಳೆಗೆ, ದೇಶದ ರಾಜಕೀಯ ಸ್ಥಿತ್ಯಂತರಗಳು (1996 – 2004) ಮೊದಲ ಬಾರಿಗೆ ಕಾಂಗ್ರೆಸ್ಸೇತರ ಆಡಳಿತಕ್ಕೆ ಹಾದಿಮಾಡಿಕೊಡುವ ಹೊತ್ತಿಗೇ, ತನ್ನ ಯೋಜಿತ ಬದಲಾವಣೆಗಳನ್ನು ಮಾಧ್ಯಮ ರಂಗದಲ್ಲೂ ತಂದವು. ನಾನು ಗಮನಿಸಿದಂತೆ, ಸುದ್ದಿಮೂಲ ಸಂಸ್ಥೆಗಳು ಕಲುಷಿತಗೊಳ್ಳಲು ಆರಂಭವಾದದ್ದು ಈ ಹಂತದಲ್ಲಿ. ಇದರರ್ಥ, ಅದಕ್ಕಿಂತ ಮೊದಲು ಸುದ್ದಿಮೂಲ ಸಂಸ್ಥೆಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿರಲಿಲ್ಲ ಎಂದಲ್ಲ. ಅಲ್ಲಿಯ ತನಕ ಇದ್ದಂತಹ ಏಕಸ್ವಾಮ್ಯದ ಕಾಲ ಮುಗಿಯಿತು, ಅಷ್ಟೇ. ಆದರೆ, 2010ರ ಹೊತ್ತಿಗೆ ಸುದ್ದಿಮೂಲ ಸಂಸ್ಥೆಗಳ ಕಲುಷಿತಗೊಳ್ಳುವಿಕೆ ಎಷ್ಟು ತೀವ್ರಗೊಂಡಿತೆಂದರೆ ಸುದ್ದಿಗಳು ಸುದ್ದಿಮೂಲದಲ್ಲೇ ‘ಸೂಕ್ತ ಸಂಸ್ಕರಣೆಗೆ ಒಳಪಟ್ಟು’ ಸುದ್ದಿಮನೆಗಳಿಗೆ ತಲುಪತೊಡಗಿದವು.

2014 ಮತ್ತು 2019ರ ಮಹಾಚುನಾವಣೆಗಳಲ್ಲಿ ಮೈನ್ ಸ್ಟ್ರೀಮ್ ಮಾಧ್ಯಮಗಳಲ್ಲೇ ಯಾವ ಪ್ರಮಾಣದಲ್ಲಿ ಪರೋಕ್ಷ ಪ್ರಚಾರದ, ಸತ್ಯದ ಅಂಚಿನಲ್ಲಿರುವ ಅಥವಾ ಸುಳ್ಳು ಸುದ್ದಿಗಳು ಹೇಗೆ ಕೆಲಸ ಮಾಡಿದವು ಎಂಬುದು ಈಗ ಇತಿಹಾಸ. ಇದರಲ್ಲಿ ಎಲ್ಲ ತಪ್ಪೂ ಸುದ್ದಿಮನೆಗಳದಲ್ಲ. ಸುದ್ದಿಮನೆ ಪ್ರಕಟಿಸುವ ನೂರಕ್ಕೆ 60 ಸುದ್ದಿಗಳು (ಅಂದರೆ ಸ್ಥಳೀಯ ಸುದ್ದಿ ಹೊರತುಪಡಿಸಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮತ್ತು ರಾಜ್ಯ ಸುದ್ದಿಗಳು) ಸುದ್ದಿಮೂಲ ಸಂಸ್ಥೆಗಳನ್ನು ಆಧರಿಸಿದ ಸುದ್ದಿಗಳು. ಹಾಗಾಗಿ, ಮೂಲದಲ್ಲೇ ಅಂದರೆ ಸುದ್ದಿಮೂಲ ಸಂಸ್ಥೆಗಳಲ್ಲಿ ಸುದ್ದಿಯನ್ನು ತಮ್ಮ ಅನುಕೂಲಕ್ಕೆ ತಿರುಚಿಕೊಳ್ಳುವುದು ಸಾಧ್ಯವಾದರೆ, ಉಳಿದೆಡೆ ಅದು ತನ್ನಿಂತಾನೆ ಹರಿದುಬರುತ್ತದೆ ಎಂಬ ರಾಜಕೀಯ ಅರಿವು ಮೂಡಿದ್ದು ಈ ಹಂತದಲ್ಲಿ.

ಸುದ್ದಿಯು ಮೂಲದಲ್ಲೇ ಕಲುಷಿತಗೊಂಡಮೇಲೆ, ಸುದ್ದಿಮನೆಗಳಲ್ಲಿ ಅದು ರೋಗಿ ಬಯಸಿದ್ದೂ ಹಾಲು, ವೈದ್ಯ ಹೇಳಿದ್ದೂ ಹಾಲು ಎಂಬಂತಾಯಿತು. ತಿರುಚಲಾದ, ರಾಜಕೀಯ ಪ್ರೇರಿತವಾದ ಸುದ್ದಿಗಳು ಪೂರಕ ಸಂಸ್ಕರಣೆಯ ಜೊತೆ ಆಡಂಬರ, ಅಲಂಕಾರಗಳೊಂದಿಗೆ ಪ್ರಕಟಗೊಳ್ಳುವುದು ಈಗ ಎಗ್ಗಿಲ್ಲದೇ ನಡೆದಿದೆ. ಕನ್ನಡದ ಮಟ್ಟಿಗೆ ಯಾವುದೇ ದಿನದ ಯಾವುದೇ ಪತ್ರಿಕೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ಕನಿಷ್ಠ ಒಂದು ಸುದ್ದಿಯನ್ನು ಗುರುತಿಸಲು ಇಂದು ಸಾಧ್ಯವಿದೆ.

ಸೋಷಿಯಲ್ ಮೀಡಿಯಾ ಟಾಪ್‍ಅಪ್

ಮೀಡಿಯಾ ಬಂದ ಆರಂಭದಲ್ಲಿ ಅದನ್ನು ಸಮಾನಾವಕಾಶಗಳನ್ನು ಒದಗಿಸುವ ಟೂಲ್ ಎಂದು ಪರಿಗಣಿಸಲಾಗಿತ್ತು. ಆದರೆ, ಅದು ಮೈಕ್ರೊಬ್ಲಾಗಿಂಗ್ ಬದಲು ಮ್ಯಾಕ್ರೊಫ್ಲಾಗಿಂಗ್ ಆರಂಭಿಸಿತು. ನವ ರಾಜಕಾರಣದ ತಂತ್ರಗಾರಿಕೆಯು ಕುತಂತ್ರಗಾರಿಕೆ ಆಗಿ ಬದಲಾಗುವಲ್ಲಿ ಸೋಷಿಯಲ್ ಮೀಡಿಯಾಗಳ ಕೊಡುಗೆ ಅಪಾರ.

ಕಲುಷಿತ ಸುದ್ದಿಯ ‘ಮಡ್ಡಿ’ ರೂಪ ಪ್ರಕಟಗೊಳ್ಳುವುದು ಸೋಷಿಯಲ್ ಮೀಡಿಯಾಗಳಲ್ಲಿ. ವಾಟ್ಸಾಪ್‍ನಂತಹ ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕಬಲ್ಲ ‘ಎಂಡೆ-ಪ್ಯಾಂಡಮಿಕ್ (ಅರ್ಥಾತ್ ಎಂಡೆಮಿಕಲಿ ಪ್ಯಾಂಡಮಿಕ್)’ ಕ್ರಿಮಿನಲ್ ಮೀಡಿಯಾಗಳು ರಿಯಲ್‍ಟೈಮ್‍ನಲ್ಲೇ ಅದರ ಓದುಗರನ್ನು ತಲುಪಿ, ಅದಾಗಿ ಕೆಲವು ಗಂಟೆಗಳ ಬಳಿಕ ಟೆಲಿವಿಷನ್ ಚಾನೆಲ್ ಅಥವಾ ಮರುದಿನ ಪ್ರಿಂಟ್ ಮೀಡಿಯಾ ಮೂಲಕ ಅದೇ ಕಲುಷಿತ ಸುದ್ದಿ ತಲುಪಿದಾಗ, ಸಹಜವಾಗಿಯೇ ಓದುಗರು ಹಲವು ಮೂಲಗಳಿಂದ ದೊರೆತಿರುವ ಸುದ್ದಿ ನಿಜವಿರಬಹುದೆಂಬ ಅಭಿಪ್ರಾಯ ತಳೆಯುತ್ತಾರೆ. ಇದು ಇಂದು ಆಟದ ನಿಯಮವಾಗಿಬಿಟ್ಟಿದೆ. ಮೊದಲಿಗೇ ವಿಷಕಾರಿ ಸುಳ್ಳು (ಸೋಷಿಯಲ್ ಮೀಡಿಯಾ), ಬಳಿಕ ಅಬ್ಬರದ ಸುಳ್ಳು (ಟೆಲಿವಿಷನ್) ಮತ್ತು ಕೊನೆಗೆ ಸತ್ಯದಂಚಿನ ಸುಳ್ಳು (ಮುದ್ರಿತ ಮಾಧ್ಯಮ) ಸಿಗುವ ಕ್ರೊನಾಲಜಿ ಈವತ್ತು ಓದುಗರಿಗೆ ಸುದ್ದಿಯನ್ನು ಅರ್ಥೈಸಿಕೊಳ್ಳುವ ಕ್ರೊನಾಲಜಿಯೂ ಆಗಿಬಿಟ್ಟಿರುವುದು ನಮ್ಮ ಕಾಲದ ದುರಂತ.

ಒಂದು ಕ್ಷಣ ಕುಳಿತು ತಣ್ಣಗೆ ಯೋಚಿಸಿದರೆ ಸುಳ್ಳೆಂದು, ವಿಷವೆಂದು ಗೊತ್ತಾಗಿಬಿಡುವ ಸಂಗತಿಯನ್ನೂ ಕೂಡ ಅಡೆತಡೆಯಿಲ್ಲದೆ ನಿರಂತರವಾಗಿ ಹರಿಸುತ್ತಾ ಹೋದಾಗ, ಓದುಗನಿಗೆ ಆ ಒಂದು ಕ್ಷಣ ತಣ್ಣಗೆ ಕುಳಿತು ಯೋಚಿಸುವ ಸಮಯ ಉಳಿದಿರುವುದಿಲ್ಲ. ಈ ನಾನ್‍ಸ್ಟಾಪ್ ಕಾರ್ಪೆಟ್ ಬಾಂಬಿಂಗ್ ಇವತ್ತಿನ ವಿಷ ಸನ್ನಿವೇಶಕ್ಕೆ ಮೂಲ ಕಾರಣ. ಇದಕ್ಕೆ ವಿಷಹರ ಚಿಕಿತ್ಸೆ ಎಂದರೆ ಒಂದಿಷ್ಟು ಕಾಲ ಅವುಗಳಿಂದ ದೂರ ಉಳಿದುಬಿಡುವುದು. ನಿರಂತರ ಸುದ್ದಿಯನ್ನು ಕಳೆದುಕೊಂಡರೆ ಬದುಕಿನಲ್ಲಿ ಕಳೆದುಕೊಳ್ಳುವಂತಹದೇನೂ ಇಲ್ಲ ಎಂಬ ಸತ್ಯದ ಅರಿವು ಮೂಡಿಸಿಕೊಳ್ಳುವುದು.

(ಲೇಖಕರು ಮಾಜೀ ಪತ್ರಕರ್ತರು ಮತ್ತು ಹಾಲೀ ಭಾಷೋದ್ಯಮಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. Rajaram talureravarige shubharathri nimmaa mahiti nodi bahala anubhava ayitu hagu egina midiyagalu odugara mattu nodugarannu mosa hagu dikku tappisutive sarvajanikaru echhara vagabeku idu nanna manavi

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...