ಹಿಂದೂ ದೇವಾಲಯಗಳನ್ನು ಮುಸ್ಲಿಮರು ಹಾಗೂ ಕ್ರೈಸ್ತರು ಕೂಡ ನಿಯಂತ್ರಿಸಬಹುದಾದ ಹೊಸ ಕಾನೂನನ್ನು ಕೇರಳ ಸರ್ಕಾರ ತಂದಿದೆ ಎಂಬ ಹೇಳಿಕೆಯೊಂದಿಗಿರುವ ಚಿತ್ರವೊಂದು ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೇರಳ ದೇವಸ್ವಂ ನೇಮಕಾತಿ ಮಂಡಳಿಯ ಅಧ್ಯಕ್ಷ ರಾಜಗೋಪಾಲನ್ ನಾಯರ್ ಇದನ್ನು ಅಲ್ಲಗೆಳೆದು, ದೇವಾಲಯದ ನಿರ್ವಹಣೆ ಸೇರಿದಂತೆ ಎಲ್ಲಾ ನೌಕರರು ಹಿಂದೂ ಧರ್ಮಕ್ಕೆ ಸೇರಿದವರಾಗಿರಬೇಕು ಎಂಬ ಕಾನೂನು ಇದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದೇನು?
“ಕೇರಳ ಸರ್ಕಾರವು ಹೊಸ ಕಾನೂನನ್ನು ತಂದಿದ್ದು, ಅದರಂತೆ ಹಿಂದೂ ದೇವಾಲಯಗಳನ್ನು ಮುಸ್ಲಿಮರು ಹಾಗೂ ಕ್ರಿಸ್ಚಿಯನ್ನರು ನಿಯಂತ್ರಿಸಬಹುದು, ಮಂದಿರದ ಮುಖ್ಯಸ್ಥರಾಗಿ ಮುಸ್ಲಿಮರು ಅಥವಾ ಕ್ರಿಸ್ಚಿಯನ್ನರು ಕೂಡಾ ಇರಬಹುದು” ಎಂಬ ಬರಹವಿರುವ ಚಿತ್ರಗಳು ಹರಿದಾಡುತ್ತಿದೆ.
ಫ್ಯಾಕ್ಟ್ ಚೆಕ್:
ಮೊದಲನೆಯದಾಗಿ ವೈರಲ್ ಸಂದೇಶದಲ್ಲಿ ಹರಿದಾಡುತ್ತಿರುವಂತೆ ಕೇರಳ ಸರ್ಕಾರ ಇತ್ತೀಚೆಗೆ ದೇವಾಲಯ ನಿರ್ವಹಣೆಗೆ ಸಂಬಂಧಿಸಿದ ಯಾವುದೇ ಆದೇಶಗಳನ್ನು ಮಾಡಿಲ್ಲ.
ವೈರಲ್ ಪೋಸ್ಟ್ ಬಗ್ಗೆ ಪ್ರತಿಕ್ರಿಸಿರುವ ದೇವಸ್ವಂ ನೇಮಕಾತಿ ಮಂಡಳಿಯ ಅಧ್ಯಕ್ಷ ರಾಜಗೋಪಾಲನ್ ನಾಯರ್ “ಕೇರಳದ ದೇವಾಲಯಗಳನ್ನು ನಿಯಂತ್ರಿಸುವ ಮೂರು ಕಾನೂನುಗಳಿವೆ. ಈ ಎಲ್ಲಾ ಕೆಲಸ/ಕಾರ್ಯಗಳಲ್ಲಿ ನೌಕರರು ಮತ್ತು ನಿರ್ವಹಣಾಕಾರರು ಹಿಂದೂ ಧರ್ಮದವರೇ ಇರಬೇಕು ಎಂಬ ನಿರ್ದಿಷ್ಟ ನಿಬಂಧನೆ ಇದೆ.” ತಿಳಿಸಿದ್ದಾರೆ.
ಕೇರಳ ರಾಜ್ಯದ ದೇವಾಲಯಗಳನ್ನು ಯಾರು ನಿಯಂತ್ರಿಸುತ್ತಾರೆ ಎಂಬುದಕ್ಕೆ ನಿರ್ದಿಷ್ಟ ನಿಬಂಧನೆಗಳಿದ್ದು, ಅದು ಹೀಗಿದೆ:
‘ಕೇರಳದ ದೇವಸ್ವಂ ಮಂಡಳಿಗಳು ಮತ್ತು ದೇವಾಲಯಗಳ ಆಡಳಿತ’ ಎಂಬ ಶೀರ್ಷಿಕೆಯ ಶೋಧಗಂಗದಲ್ಲಿ ಪ್ರಕಟವಾದ ಅಧ್ಯಾಯದ ಪ್ರಕಾರ, ಎಲ್ಲಾ ದೇವಾಲಯಗಳನ್ನು ಸಾಮಾಜಿಕ-ಧಾರ್ಮಿಕ ಟ್ರಸ್ಟ್ಗಳಾದ ಸರ್ಕಾರಿ ನಿಯಂತ್ರಿತ ದೇವಸ್ವಂಗಳು ಅಥವಾ ಖಾಸಗಿ ಸಂಸ್ಥೆಗಳು / ಕುಟುಂಬಗಳು ನಿರ್ವಹಿಸುತ್ತವೆ. ಅವುಗಳ ಸದಸ್ಯರು ಹಿಂದೂಗಳೇ ಆಗಿರುತ್ತಾರೆ. ಕೇರಳದಲ್ಲಿ ಐದು ವಿಭಿನ್ನ ದೇವಸ್ವಂ ಮಂಡಳಿಗಳಿವೆ. ಎಲ್ಲಾ ಐದು ದೇವಸ್ವಂ ಮಂಡಳಿಗಳು ಹಿಂದೂ ಸದಸ್ಯರನ್ನು ಹೊಂದಿವೆ.
ದೇವಾಲಯ ನಿರ್ವಹಣಾ ಆದೇಶಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಇತ್ತೀಚೆಗೆ ಹೊರಡಿಸಿದ ಆದೇಶದ ಯಾವುದೇ ವರದಿಗಳು ದೊರೆಯದಿದ್ದರೂ, 2018ರಲ್ಲಿ ದಿ ಹಿಂದೂ ಪತ್ರಿಕೆ ವರದಿ ಮಾಡಿದ್ದ ಲೇಖನದಲ್ಲಿ ದೇವಸ್ವಂ ಮಂಡಳಿಯ ಮುಖ್ಯಸ್ಥರು ಹಿಂದೂಗಳೆ ಆಗಿರಬೇಕು ಎನ್ನುವುದು ಸ್ಪಷ್ಟವಾಗಿ ಹೇಳಿದೆ.
ದಿ ಹಿಂದೂ ಲೇಖನದ ಪ್ರಕಾರ, 1950 ರ ತಿರುವಾಂಕೂರು-ಕೊಚ್ಚಿನ್ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ XV (ಟಿಸಿಆರ್ಐ) ಯಡಿಯಲ್ಲಿ ರಚಿಸಲಾದ ಸ್ವಾಯತ್ತ ಸಂಸ್ಥೆಯಾದ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಕೊಚ್ಚಿನ್ ದೇವಸ್ವಂ ಮಂಡಳಿಗಳಿಗೆ ಆಯುಕ್ತರನ್ನಾಗಿ ಹಿಂದೂಗಳನ್ನು ಮಾತ್ರ ನೇಮಕ ಮಾಡಲಿದೆ ಎಂದು ಕೇರಳ ಸರ್ಕಾರ ಕೇರಳ ಹೈಕೋರ್ಟ್ಗೆ ತಿಳಿಸಿದೆ.
ತಿರುವಾಂಕೂರು-ಕೊಚ್ಚಿನ್ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ 1950 ಕ್ಕೆ ತಿದ್ದುಪಡಿ ಮೂಲಕ ಹಿಂದೂಯೇತರರನ್ನು ದೇವಸ್ವಂ ಆಯುಕ್ತರನ್ನಾಗಿ ನೇಮಕ ಮಾಡಲು ಕೇರಳ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಪಿ.ಎಸ್.ಶ್ರೀಧರನ್ ಪಿಳ್ಳೈ ಎಂಬವರು 2018ರಲ್ಲಿ ಸಲ್ಲಿಸಿದ ರಿಟ್ ಅನ್ನು ನ್ಯಾಯಾಲಯವು ಆಲಿಸಿತ್ತು, ಆಗ ಕೇರಳ ಸರ್ಕಾರ ಈ ಬಗ್ಗೆ ಉತ್ತರಿಸುತ್ತಾ ಮೇಲಿನಂತೆ ಹೇಳಿದೆ.

2018 ರ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಿಕ್ರಿಯಿಸಿದ್ದ ರಾಜಗೋಪಾಲನ್, “ತಿದ್ದುಪಡಿಯಲ್ಲಿ ಒಂದು ಗೊಂದಲವಿದೆ. ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೆಲವರು ಉದ್ದೇಶಪೂರ್ವಕವಾಗಿ ಈ ಗೊಂದಲವನ್ನು ಸೃಷ್ಟಿಸಿದ್ದರು. ಆದರೆ, ಮಂಡಳಿಗೆ ನೇಮಕವಾಗುವ ಆಯುಕ್ತರು ಸೇರಿದಂತೆ ಎಲ್ಲಾ ಉದ್ಯೋಗಿಗಳು ಹಿಂದೂಗಳಾಗಿರಬೇಕು ಎಂದು ಆಯುಕ್ತರನ್ನು ನೇಮಕ ಮಾಡಲು ಮಾಡಿದ ನಿಬಂಧನೆಗಳಲ್ಲಿ ಮಂಡಳಿಯು ನಿರ್ದಿಷ್ಟವಾಗಿ ಹೇಳಿದೆ. ಆಯುಕ್ತರಷ್ಟೇ ಅಲ್ಲದೆ ಎಲ್ಲಾ ಉದ್ಯೋಗಿಗಳೂ ಹಿಂದೂಗಳೇ ಆಗಿರಲಿದ್ದಾರೆ” ಎಂದು ಅವರು ಹೇಳಿದ್ದರು.
ವೈರಲ್ ಆಗುತ್ತಿರುವ ಪೋಸ್ಟ್ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆ ಸುಳ್ಳಾಗಿದ್ದು, ಕೇರಳದ ಎಲ್ಲಾ ದೇವಾಲಯಗಳನ್ನು ಹಿಂದೂಗಳು ಮಾತ್ರ ನಿಯಂತ್ರಿಸುತ್ತಾರೆ. ಪ್ರಸ್ತುತ ಆಯುಕ್ತರು ಕೂಡ ಹಿಂದೂ ಎಂದು ದೇವಸ್ವಂ ಮಂಡಳಿಗೆ ಸಂಬಂಧಿಸಿದ ಮೂಲಗಳು ತಿಳಿಸಿವೆ.
ಕಾನೂನು ಏನು ಹೇಳುತ್ತದೆ?
ತಿರುವಾಂಕೂರು-ಕೊಚ್ಚಿನ್ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ 1950 ರ ಸೆಕ್ಷನ್ 29 (1), ದೇವಸ್ವಂ ಇಲಾಖೆಯು ಹಿಂದೂ ಅಧಿಕಾರಿಗಳನ್ನು ಒಳಗೊಂಡಿರಬೇಕು ಎಂದು ಹೇಳಿದೆ.
“1097 ರಲ್ಲಿ ರಚಿಸಲಾದ ದೇವಸ್ವಂ ಇಲಾಖೆಯು ಮುಂದುವರಿಯುತ್ತದೆ ಮತ್ತು ಕಾಲಕಾಲಕ್ಕೆ ಮಂಡಳಿಯು ನಿರ್ಧರಿಸುವಂತಹ ಹಿಂದೂ ಅಧಿಕಾರಿಗಳು ಮತ್ತು ಇತರ ಸೇವಕರನ್ನು ಒಳಗೊಂಡಿರುತ್ತದೆ” ಎಂದು ಅದು ಹೇಳಿದೆ.
ಇದಲ್ಲದೆ, ಮಂಡಳಿಯ ನಾಮನಿರ್ದೇಶನ ಅರ್ಹತೆಗೆ ಸಂಬಂಧಿಸಿದಂತೆ “ಒಬ್ಬ ವ್ಯಕ್ತಿಯು ತಿರುವಾಂಕೂರು-ಕೊಚ್ಚಿನ್ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಹಿಂದೂ ಧರ್ಮವನ್ನು ಪ್ರತಿಪಾದಿಸದ ಹೊರತು ಮಂಡಳಿಯ ಸದಸ್ಯನಾಗಿ ನಾಮನಿರ್ದೇಶನ ಅಥವಾ ಚುನಾವಣೆಗೆ ಅರ್ಹನಾಗಿರುವುದಿಲ್ಲ.” ಎಂದು ಕಾಯಿದೆಯ ಸೆಕ್ಷನ್ 6 ರಲ್ಲಿ ಹೇಳಲಾಗಿದೆ.
ಹಾಗಾಗಿ ಸ್ಪಷ್ಟವಾಗಿ ಹೇಳುವುದಾದರೆ, ಕೇರಳ ಸರ್ಕಾರವು ಹಿಂದೂ ಅಲ್ಲದವರಿಗೆ ರಾಜ್ಯದ ದೇವಾಲಯಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುವ ಹೊಸ ಕಾನೂನನ್ನು ಜಾರಿಗೆ ತಂದಿದೆ ಎಂಬುವುದು ಸುಳ್ಳಾಗಿದ್ದು, ಆ ರೀತಿಯ ಯಾವುದೇ ಕಾನೂನುಗಳನ್ನು ಕೇರಳ ಸರ್ಕಾರ ರೂಪಿಸಿಲ್ಲ.





