Homeಅಂಕಣಗಳುಆ ವಾರದ ಕಣ್ಣೋಟ | ಗೌರಿ ಲಂಕೇಶ್ಮಂಡೂರಿನಲ್ಲಿ ಒಂದು ಸಂಭ್ರಮ: ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ

ಮಂಡೂರಿನಲ್ಲಿ ಒಂದು ಸಂಭ್ರಮ: ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ

ಮಂಡೂರಿನ ಜನ ತಮ್ಮ ಸಂಘಟಿತ ಹೋರಾಟದಿಂದಲೇ ತಮ್ಮ ಊರಿಗೆ ಹಿಡಿದ ಶಾಪವನ್ನು ಹೊಗಲಾಡಿಸಿದ್ದಾರೆ. ಅವತ್ತು ಮಂಡೂರಿನ ಜನರ ಸಂಭ್ರಮದಲ್ಲಿ 'ಜನಶಕ್ತಿ’ ಎಂತಹದ್ದು ಎಂಬುದು ಎದ್ದು ಕಾಣಿಸುತ್ತಿತ್ತು...

- Advertisement -
- Advertisement -

ಕಳೆದ ಭಾನುವಾರ ಮಂಡೂರಿನಲ್ಲಿ ಹಬ್ಬದ ವಾತಾವರಣ. ಮಂಡೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಮಹಿಳೆಯರು ಬೆಳಗ್ಗೆಯೇ ತಮ್ಮ ಮನೆಕೆಲಸಗಳನ್ನು ಮುಗಿಸಿ, ನೀಟಾದ ಸೀರೆ ತೊಟ್ಟು, ಕೂದಲಲ್ಲಿ ಹೂಮುಡಿದು ಹಾಜರಾಗಿದ್ದರು. ಯುವಕರು ಉತ್ಸಾಹದಿಂದ ಓಡಾಡುತ್ತಿದ್ದರು. ಮಕ್ಕಳು ಅಲ್ಲಲ್ಲಿ ಆಟದಲ್ಲಿ ಮುಳುಗಿದ್ದರು. ಹತ್ತಾರು ವೃದ್ಧರೂ ಕಾರ್ಯಕ್ರಮ ಶುರುವಾಗಲು ಕಾಯುತ್ತಿದ್ದರು.

ಕಾರಣ: ಕಳೆದ ವರ್ಷ ಅವರೆಲ್ಲ ಜೊತೆಗೂಡಿ ನಡೆಸಿದ ಹೋರಾಟ ಯಶಸ್ವಿಯಾಗಿತ್ತು. ಅವರೆಲ್ಲರಿಗೆ ನೈತಿಕ ಬೆಂಬಲ ನೀಡಿದ್ದಲ್ಲದೆ ಅವರ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರವಿಕೃಷ್ಣ ರೆಡ್ಡಿ ಅವರಿಗೆ ಸನ್ಮಾನಿಸಿ ಧನ್ಯವಾದಗಳನ್ನು ವ್ಯಕ್ತಪಡಿಸಲು ಮಂಡೂರಿನ ಜನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಎಲ್ಲರಿಗೂ ಗೊತ್ತಿರುವಂತೆ ಮಂಡೂರು ಹೋದ ವರ್ಷ ದೊಡ್ಡ ಸುದ್ದಿಯಾಗಿತ್ತು. ಕಳೆದ ಏಳು ವರ್ಷಗಳಿಂದ ಬೆಂಗಳೂರಿನ ಜನ ಪ್ರತಿದಿನ `ಉತ್ಪಾದಿಸುವ’ 4,500 ಟನ್ ಕಸವನ್ನು ನಗರಪಾಲಿಕೆಯ ಗುತ್ತಿಗೆದಾರರು ಮಂಡೂರಿಗೆ ಸಾಗಿಸಿ ಅಲ್ಲಿ ಬಿಸಾಡುತ್ತಿದ್ದರು. ನೋಡುನೋಡುತ್ತಿದ್ದಂತೆ ಅಲ್ಲಿನ 150 ಎಕರೆಗಳಲ್ಲಿ ಕಸದ ಬೆಟ್ಟಗಳೇ ನಿರ್ಮಾಣವಾದವು. 2013ರ ಹೊತ್ತಿಗೆ ಅಲ್ಲಿ ಒಟ್ಟು ಬಿಸಾಡಿದ್ದ ಕಸದ ರಾಶಿ 40 ಲಕ್ಷ ಟನ್‍ನಷ್ಟಾಯಿತು.

ಈ ಕಸದ ರಾಶಿಯಿಂದಾಗಿ ಎಲ್ಲೆಡೆ ಗಬ್ಬುನಾತ. ವಾಯು ಮಾಲಿನ್ಯದ ಜೊತೆಗೆ ಕುಡಿಯುವ ನೀರು ವಿಷಕಾರಿ ಆಯಿತು. ನಾಯಿ ಮತ್ತು ಸೊಳ್ಳೆಗಳ ಕಾಟ ನಿರಂತರವಾಯಿತು. ಸೊಳ್ಳೆಗಳು ಕಾಯಿಲೆಗಳನ್ನು ಹಬ್ಬಿಸುವುದರಿಂದ ಸುತ್ತಮುತ್ತ ಹಳ್ಳಿಗಳ ಮಕ್ಕಳು ಅನಾರೋಗ್ಯಪೀಡಿತರಾದರು. ಹಿರಿಯರು ಶ್ವಾಸಕೋಶ ಸಮಸ್ಯೆಗಳಿಗೆ ಬಲಿಯಾಗಲಾರಂಭಿಸಿದರು. ಆದರೆ ಕಸ ವಿಲೇವಾರಿ ಮಾಡುತ್ತಿದ್ದ ಗುತ್ತಿಗೆದಾರರೊಂದಿಗೆ ರಾಜಕಾರಣಿಗಳು ಕೈಜೋಡಿಸಿದ್ದರಿಂದ ಮಂಡೂರಿನ ಜನತೆಯ ಗೋಳನ್ನು ಕೇಳುವವರೇ ಇಲ್ಲದಂತಾಗಿತ್ತು.

ದಿನನಿತ್ಯ ಅಲ್ಲಿನ ಜನರು ಅನುಭವಿಸುತ್ತಿದ್ದ ಕಷ್ಟಗಳು ಅಸಹನೀಯವಾದಾಗ ಅವರು ಅಧಿಕಾರಸ್ಥರನ್ನು ಎಡತಾಕಲಾರಂಭಿಸಿದರು. ಆಗ ಶಾಸಕರಾಗಿದ್ದ ಬಿಜೆಪಿಯ ನಿಂಬಾವಳಿ “ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ’’ ಎಂದರೆ ಹೊರತು ಆ ನಿಟ್ಟಿನಲ್ಲಿ ಏನನ್ನೂ ಮಾಡಲಿಲ್ಲ. ಇನ್ನು ನಗರಪಾಲಿಕೆಯ ಅಧಿಕಾರಿಗಳು “ಪರ್ಯಾಯ ವ್ಯವಸ್ಥೆಯನ್ನು ಮಾಡುವವರೆಗೂ ಸಹಕರಿಸಿ, ಸಮಯ ಕೊಡಿ’’ ಎನ್ನುತ್ತಿದ್ದರೇ ಹೊರತು ಅಲ್ಲಿ ಕಸದ ರಾಶಿಯನ್ನು ಹಾಕುವುದನ್ನು ಮಾತ್ರ ನಿಲ್ಲಿಸಲಿಲ್ಲ, ಪರ್ಯಾಯವನ್ನೂ ಹುಡುಕಲಿಲ್ಲ.

ಕೊನೆಗೂ ಮಂಡೂರಿನ ಜನರ ತಾಳ್ಮೆಯ ಕಟ್ಟಲೆ ಒಡೆಯಿತು. ಯಾವ ರಾಜಕಾರಣಿಯನ್ನಾಗಲಿ, ನಗರಪಾಲಿಕೆಯ ಅಧಿಕಾರಿಯನ್ನಾಗಲಿ ನಂಬದೆ ಹೋರಾಟ ಮಾಡಲು ನಿರ್ಧರಿಸಿದರು. “ಇನ್ನು ಮುಂದೆ ಯಾವ ಕಾರಣಕ್ಕೂ ನಮ್ಮೂರಲ್ಲಿ ಕಸ ಹಾಕಲು ಬಿಡುವುದಿಲ್ಲ’’ ಎಂದು ಎದ್ದು ನಿಂತರು. ಆಗ ಅವರ ನೆರವಿಗೆ ಧಾವಿಸಿದ್ದು ದೊರೆಸ್ವಾಮಿಯವರು. ಕಸದ ಲಾರಿಗಳು ತಮ್ಮೂರನ್ನು ಪ್ರವೇಶಿಸದಂತೆ ಊರಿನ ಅಂಚಿನಲ್ಲೇ ಅಡ್ಡಗಟ್ಟಿ ನಿಂತರು. ಆಗ ಪೊಲೀಸರು ನಿಷೇಧಾಜ್ಞೆಯನ್ನು ಘೋಷಿಸಿ ಲಾರಿಗಳು ಮುಂದೆ ಸಾಗುವಂತೆ ನೋಡಿಕೊಂಡರು. ಲಾರಿಗಳು ಊರಿನ ಹತ್ತಿರ ಬಂದರೆ ತಾನೆ ಮುಂದೆ ಸಾಗುವುದು ಎಂದು ತರ್ಕಿಸಿದ ಗ್ರಾಮಸ್ಥರು ಅವುಗಳನ್ನು ಹೈವೇಯಲ್ಲೇ ತಡೆಗಟ್ಟಲಾರಂಭಿಸಿದರು. ಅಲ್ಲಿಗೂ ಪೊಲೀಸರು ಬಂದಾಗ ತಮ್ಮ ಹೋರಾಟವನ್ನು ಕೆ.ಆರ್. ಪುರಂವರೆಗೂ ತೆಗೆದುಕೊಂಡು ಹೋದರು.

ಅಷ್ಟು ಹೊತ್ತಿಗೆ ರವಿಕೃಷ್ಣ ರೆಡ್ಡಿ ಕೂಡ ಮಂಡೂರು ಹೋರಾಟಗರರ ಜೊತೆ ಸೇರಿದ್ದರು. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ದೊರೆಸ್ವಾಮಿಯವರ ಮಾರ್ಗದರ್ಶನದಲ್ಲಿ ಜೂನ್ 1 ರಿಂದ ಸರಣಿ ಉಪವಾಸ ಪ್ರಾರಂಭಿಸಲು ನಿರ್ಧರಿಸಿದರು. ದೊರೆಸ್ವಾಮಿಯವರಿಗೆ 96 ವರ್ಷ ವಯಸ್ಸಾಗಿದ್ದರೂ ಪ್ರತಿದಿನ ತಮ್ಮ ಮನೆಯಿಂದ ಸುಮಾರು 40 ಕಿಲೋಮೀಟರ್ ದೂರವಿರುವ ಮಂಡೂರಿಗೆ ಹೋಗಿ ಅಲ್ಲಿನ ಜನರ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದರು. ಇಷ್ಟೆಲ್ಲ ಆಗುತ್ತಿದ್ದರೂ ಸರ್ಕಾರ “ಸಮಸ್ಯೆ ಬಗೆಹರಿಸುವುದಕ್ಕೆ ಆರು ತಿಂಗಳ ಸಮಯ ಕೊಡಿ’’ ಎನ್ನುತ್ತಿದ್ದರೆ ಹೊರತು ಅದಕ್ಕಿಂತ ಹೆಚ್ಚಿನದ್ದೇನನ್ನೂ ಮಾಡಲು ಮುಂದಾಗಲಿಲ್ಲ.

ಆಗ ದೊರೆಸ್ವಾಮಿಯವರು “ಬಂಧನಕ್ಕೆ ಒಳಗಾದರೂ ಪರವಾಗಿಲ್ಲ, ನೀವೆಷ್ಟು ಶಾಪಗ್ರಸ್ಥರು ಎಂಬುದು ಅಧಿಕಾರಿಗಳಿಗೆ ಅರ್ಥವಾಗಬೇಕು. ನಿಮ್ಮಲ್ಲಿ ಎಷ್ಟು ಜನ ಬಂಧನಕ್ಕೆ ಸಿದ್ಧರಿದ್ದೀರಿ? ಅವರೆಲ್ಲರ ಹೆಸರುಗಳನ್ನು ಪಟ್ಟಿ ಮಾಡಿ’’ ಎಂದು ಸೂಚಿಸಿದರು. ನೂರಕ್ಕು ಹೆಚ್ಚು ಜನರು ಸಿದ್ಧರಿದ್ದರು. ಆದರೆ ಅಚ್ಚರಿಯ ಸಂಗತಿ ಯಾವುದೆಂದರೆ ಮಂಡೂರಿನ ಮಹಿಳೆಯರೂ ಆ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದರು.

ಪರಿಸ್ಥಿತಿ ಬಿಗಡಾಯಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾದರು. ಅವರು ಕರೆದ ಸಭೆಗೆ ಮಂಡೂರಿನ ನೂರಾರು ಜನ ಹಾಜರಾದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದರಲ್ಲದೆ ತಮ್ಮ ಚಿಕ್ಕಪುಟ್ಟ ಮಕ್ಕಳನ್ನೂ ಕರೆತಂದಿದ್ದರು. ಆ ಸಭೆಯಲ್ಲಿ ಅಧಿಕಾರಿಗಳು ಮತ್ತದೆ ಅಸಹಾಯಕತೆ ವ್ಯಕ್ತಪಡಿಸಿದರಲ್ಲದೆ ಮತ್ತೆ ಕಾಲಾವಕಾಶವನ್ನು ಕೋರಿದರು.

ತಮ್ಮ ಬದುಕೇ ನರಕವಾಗಿದ್ದರೂ ಮುಖ್ಯಮಂತ್ರಿ ಕರೆದಿದ್ದ ಸಭೆಯಲ್ಲೂ ತಮಗೆ ಪರಿಹಾರ ಸಿಗದಿದ್ದಾಗ ಮಹಿಳೆಯರೆಲ್ಲ ಕಣ್ಣೀರಿಟ್ಟರು. ದೊರೆಸ್ವಾಮಿಯವರು ಹೇಳುವಂತೆ “ಆ ಕ್ಷಣ ಸಿದ್ದರಾಮಯ್ಯನವರಿಗೆ ಇಲ್ಲಿನ ಜನರ ಕಷ್ಟಗಳು ಅರ್ಥವಾಯಿತು. ಮಹಿಳೆಯರು ಕಣ್ಣೀರು ಹಾಕುವಂತೆ ಮಾಡಿರುವುದು ಸರಿಯಲ್ಲ, ಇದನ್ನು ಬಗೆಹರಿಸಬೇಕೆಂದು ಅವರು ನಿರ್ಧರಿಸಿದರು. 2014ರ ನವೆಂಬರ್ ತಿಂಗಳ ನಂತರ ಮಂಡೂರಿನಲ್ಲಿ ಕಸವನ್ನು ಹಾಕುವುದಿಲ್ಲ ಎಂದು ಅವತ್ತು ಸಿದ್ದರಾಮಯ್ಯ ಮಾತು ಕೊಟ್ಟರು. ಅದರಂತೆ ನಡೆದುಕೊಂಡಿದ್ದಾರೆ.’’

ಮಂಡೂರು ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಹಿಳೆಯರೇ ಕಾರ್ಯಕ್ರಮಕ್ಕೂ ದೊಡ್ಡ ಸಂಖ್ಯೆಯಲ್ಲಿ ಹಾಜರಾಗಿದ್ದರು. ಬೆಂಗಳೂರು ಎಂಬ ಬೃಹತ್ ನಗರದ ಪಾಪಿಷ್ಟ ನಿವಾಸಿಗಳು ತಮ್ಮ ಸೋಂಬೇರಿತನದಿಂದಾಗಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸದೆ ಇರುವುದರಿಂದ, ಪ್ಲಾಸ್ಟಿಕ್ ಬಳಕೆಯನ್ನು ಮುಂದುವರೆಸಿರುವುದರಿಂದ, ಭ್ರಷ್ಟ ರಾಜಕಾರಣಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವುದರಿಂದ, ಅಧಿಕಾರಿಗಳು ಜನರ ಸಂಕಷ್ಟಗಳಿಗೆ ಸ್ಪಂದಿಸದಿರುವುದರಿಂದ ಮಂಡೂರು ಎಂಬ ಒಂದು ಪುಟ್ಟ ಹಳ್ಳಿ ಯಾವ ತಪ್ಪು ಮಾಡದಿದ್ದರೂ ಶಾಪಗ್ರಸ್ತವಾಗಿತ್ತು.

ಆದರೆ ಮಂಡೂರಿನ ಜನ ತಮ್ಮ ಸಂಘಟಿತ ಹೋರಾಟದಿಂದಲೇ ತಮ್ಮ ಊರಿಗೆ ಹಿಡಿದ ಶಾಪವನ್ನು ಹೊಗಲಾಡಿಸಿದ್ದಾರೆ. ಅವತ್ತು ಮಂಡೂರಿನ ಜನರ ಸಂಭ್ರಮದಲ್ಲಿ ‘ಜನಶಕ್ತಿ’ ಎಂತಹದ್ದು ಎಂಬುದು ಎದ್ದು ಕಾಣಿಸುತ್ತಿತ್ತು…

ಫೆಬ್ರವರಿ 4, 2015


ಇದನ್ನು ಓದಿ: ಅಪ್ಪನ ಆ ಭಾಷಣ ಮತ್ತು ಜಾಗೃತ ಸಾಹಿತ್ಯ ಸಮಾವೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...