ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೆನಿಸಿಕೊಂಡ ‘ವಾದಿರಾಜ್’ ಎಂಬುವವರು “ಕಾಳಾರಾಮನಿಂದ ಅಯೋಧ್ಯಾರಾಮನವರೆಗೆ” ಎಂಬ ಶೀರ್ಷಿಕೆಯಡಿಯಲ್ಲಿ ಬರೆದಿರುವ ಅಂಕಣ ದಿನಾಂಕ 6-8-2020 ರ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.! ಆ ಲೇಖನಕ್ಕೆ ಟಿ.ಶಶಿಧರರವರು ಬರೆದ ಪ್ರತಿಕ್ರಿಯೆ ಇಲ್ಲಿದೆ.
ಈ ಲೇಖನದಲ್ಲಿ ಡಾ.ಅಂಬೇಡ್ಕರ್ ಅವರು ಕಾಳಾರಾಂ ಮಂದಿರ ಪ್ರವೇಶಕ್ಕಾಗಿ ಮಾಡಿದ ಚಳುವಳಿಯ ಕಾರಣವನ್ನು, ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ. ಶಂಕರ್ ರಾವ್ ಕಾರತ್ ಅವರ ಹೆಗಲ ಮೇಲೆ ಬಂದೂಕು ಇಟ್ಟು ಸಂಘಪರಿವಾರದ ಗುಂಡು ಹೊಡೆಯುವ ಸಂಚು ವಾದಿರಾಜ್ ಅವರು ಅತ್ಯಂತ ನಯ ನಾಜೂಕಾಗಿ ನಿರ್ವಹಿಸಿರುವ ಕಾರಣ, ಡಾ.ಅಂಬೇಡ್ಕರ್ ಹೆಸರಿನಲ್ಲಿ ಅಂತಹ ಹುಸಿ ಗುಂಡು ಹಾರಿಸುವ ಸಂಘಪರಿವಾರದ ಷಡ್ಯಂತ್ರ ಬಯಲು ಮಾಡುವ ಕಾರಣದಿಂದ ನನ್ನ ಅನಿಸಿಕೆಗಳನ್ನು ದಾಖಲಿಸುತ್ತಾ ಹೋಗುತ್ತೇನೆ.
ಕಾಳಾರಾಮ ಮಂದಿರವನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದೀರಿ? ಎಂಬ ಡಾ.ಶಂಕರರಾವ್ ಕಾರತ್ ಅವರ ಪ್ರಶ್ನೆಗೆ, ಕಾಳಾರಾಮ ತನ್ನ ನಡವಳಿಕೆಯಿಂದ ದೊಡ್ಡವನಾದವನು. ಆದಿವಾಸಿ ಮಹಿಳೆ ‘ಶಬರಿ’ ಕೊಟ್ಟ ಎಂಜಲು ಹಣ್ಣನ್ನು ಪ್ರಸಾದವೆಂದು ಸ್ವೀಕರಿಸಿದವನು. ಅಸ್ಪೃಶ್ಯತೆ ಆಚರಿಸುವ ಸವರ್ಣಿಯರು ರಾಮನನ್ನು ಆರಾಧಿಸುವುದರಿಂದ, ಅವರನ್ನು ಮಾನಸಿಕವಾಗಿ ಪರಿವರ್ತಿಸುವ ಕಾರಣ, ನಾನು ಕಾಳರಾಮ ದೇವಸ್ಥಾನ ಪ್ರವೇಶಕ್ಕಾಗಿ ಚಳುವಳಿ ಹಮ್ಮಿಕೊಂಡಿದ್ದಾಗಿ ಡಾ.ಅಂಬೇಡ್ಕರ್ ಅವರ ಉತ್ತರವಾಗಿತ್ತು ಎಂದು ಸಂಘಪರಿವಾರದ ವಾದಿರಾಜ್ ಅವರು ಲೇಖನದಲ್ಲಿ ಹೇಳಿದ್ದಾರೆ. ಅವರು ಹೇಳಲು ಹೊರಟಿರುವ ಅಪ್ಪಟ ಸುಳ್ಳನ್ನು ಸತ್ಯವೆಂದು ಸಾಧಿಸುವ ಹುಂಬತನಕ್ಕೆ ಕೈ ಹಾಕಿರುವ ಇವರ ಸಂಚನ್ನು ಅತ್ಯಂತ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಿದೆ.
ಶಬರಿ ಮತ್ತು ರಾಮನ ಸಂಬಂಧದ ಬಗ್ಗೆಯಾಗಲಿ, ಶಬರಿಯ ಮುಗ್ದತೆಯನ್ನು ರಾಮ ಹೇಗೆ ದುರುಪಯೋಗ ಮಾಡಿಕೊಂಡಿದ್ದನೆಂಬುವುದರ ಬಗ್ಗೆಯಾಗಲಿ, ಶಬರಿ ಪಟ್ಟ ಮಾನಸಿಕ ಯಾತನೆಯ ಬಗ್ಗೆಯಾಗಲಿ ನಾನು ಚರ್ಚಿಸಲು ಹೋಗುವದಿಲ್ಲ. ಯಾಕೆಂದರೆ ಸ್ವತಃ ವಾಲ್ಮೀಕಿ ಹೇಳಿರುವಂತೆ, ಸೀತೆಯೊಂದಿಗಿನ ರಾಮನ ವರ್ತನೆಯೇ ಸಾಕ್ಷಿಯಾಗಿರುವಾಗ ಶಬರಿಯ ಯಶೋಗಾಥೆಯ ಬಗೆಗಿನ ಚರ್ಚೆ ಅಪ್ರಸ್ತುತವಾಗಬಹುದು.
ಆದ್ದರಿಂದ ನಾನು ಮುಖ್ಯವಾದ ವಿಷಯಕ್ಕೆ ಬರುತ್ತೇನೆ.
ಪಾಪ ವಾಲ್ಮೀಕಿ ಬರೆದಿರುವ ರಾಮಾಯಣದ ಅಧ್ಯಯನ ಕೊರತೆಯಿಂದ ತಮ್ಮ ಮೂಗಿನ ನೇರಕ್ಕೆ ಎಷ್ಟು ಬೇಕೋ ಅಷ್ಟನ್ನು ಆಯ್ದುಕೊಂಡು ಓದುಗರ ಮನಸ್ಸು ಕದಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆಂಬುದು ಅವರ ಬರಹದಿಂದ ಅರ್ಥೈಸಿಕೊಳ್ಳಬಹುದು.
ಸ್ವತಃ ಡಾ.ಅಂಬೇಡ್ಕರ್ ಅವರೇ ಬರೆದಿರುವ “ಹಿಂದೂ ಧರ್ಮದ ಒಗಟುಗಳು” ಎಂಬ ಗ್ರಂಥದಲ್ಲಿ ರಾಮ ಕೃಷ್ಣರ ಬಗೆಗಿನ ನಿಲುವುಗಳನ್ನು ತಿಳಿದುಕೊಳ್ಳದೇ ನೇರವಾಗಿ ಕಾರತ್ ಅವರ ಪುಸ್ತಕದಲ್ಲಿ ದಾಖಲಾದ ಅಂಶಗಳನ್ನು ಎತ್ತಿ ತೋರಿಸಲು ಹೊರಟಿರುವ ವಾದಿರಾಜರ ಬೌದ್ಧಿಕ ಸಾಮರ್ಥ್ಯವನ್ನು ಯಾವ ಮಾಪಕದಿಂದ ಅಳೆಯಬೇಕು? ಎಂಬುದೇ ಅರ್ಥವಾಗುತ್ತಿಲ್ಲ.

ಕಾಳಾರಾಮ ಮಂದಿರ ಪ್ರವೇಶದ ಉದ್ದೇಶ ಡಾ.ಶಂಕರರಾವ್ ಕಾರತ್ ಅವರ ಮುಂದೆ ಹೇಳಿದ್ದು ನಿಜವಾಗಿದ್ದರೆ, ಅಂದು ಬಾಬಾ ಸಾಹೇಬರು ಮಾಡಿದ ಭಾಷಣದ ಸಂಪೂರ್ಣ ವಿವರ ಆ ಪುಸ್ತಕದಲ್ಲಿ ದಾಖಲಿಸಿದ್ದಾರೆಯೇ? ಎಂಬುದನ್ನು ವಾದಿರಾಜ್ ಬಹಿರಂಗ ಪಡಿಸಬೇಕಿದೆ.
ಅಂದಿನ ಸಭೆಯಲ್ಲಿ ಡಾ.ಅಂಬೇಡ್ಕರ್ ಅವರು ಚಳುವಳಿಯನ್ನು ಉದ್ದೇಶಿಸಿ ಏನು ಮಾತನಾಡಿದ್ದರೆಂದು ಡಾ.ಶಂಕರರಾವ್ ಕಾರತ್ ಅವರು ತಮ್ಮ ಪುಸ್ತಕದಲ್ಲಿ ಸುಳ್ಳು ಘಟನೆ ದಾಖಲಿಸುವ ಮುಂಚೆ, ಭಾಷಣದ ಸಾರಾಂಶದ ಬಗ್ಗೆ ಕನಿಷ್ಠ ಅರಿವಾದರೂ ಇರಬೇಕಾಗಿತ್ತು.
ಕಾಳಾರಾಮ ಮಂದಿರ ಪ್ರವೇಶ ಮಾಡಿದ ಮಾತ್ರಕ್ಕೆ ನಾನಾಗಲೀ ನನ್ನ ಸಮುದಾಯವಾಗಲೀ ಶೈಕ್ಷಣಿಕವಾಗಿ, ಆರ್ಥಿಕವಾಗಿ ಉದ್ದಾರ ಆಗುತ್ತೇವೆ ಎಂಬ ಭ್ರಮೆ ಅಥವಾ ದೈವಿಕ ನಂಬಿಕೆ ನನಗಿಲ್ಲ. ಆದರೆ ಸಾಮಾಜಿಕ ಸಮಾನತೆ ಸಾಧಿಸುವುದೇ ಈ ಚಳುವಳಿಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ ಅಂಬೇಡ್ಕರ್ ಸಂದೇಶವನ್ನು ವಾದಿರಾಜ್’ಅಂತಹವರು ಮರೆಮಾಚುತ್ತಿರುವುದೇಕೆ?.
ಸಾರ್ವಜನಿಕವಾಗಿ ಘರ್ಜಿಸಿದ ಅಂಬೇಡ್ಕರ್ ಅವರು ಡಾ.ಶಂಕರರಾವ್ ಕಾರತ್ ಅವರೊಂದಿಗೆ ರಾಮ ಒಳ್ಳೆಯವನೆಂದು ಹೇಳಿದ್ದಾರೆಂದು ನಂಬುವುದಾದರೆ, ‘ಹಿಂದೂ ಧರ್ಮದ ಒಗಟುಗಳು’ ಗ್ರಂಥದ ಗತಿ ಏನಾಗಬೇಕು?.
ಹಾಗಿದ್ದರೆ ಮಹಾರಾಷ್ಟ್ರ ಸರಕಾರ 1987 ರಲ್ಲಿ ಪ್ರಕಟಿಸಿದ ಈ ಗ್ರಂಥದ ವಿರುದ್ಧ ಸಂಘಪರಿವಾರ ಮೈ ಪರಚಿಕೊಂಡದ್ದೇಕೆ? 1988 ರಲ್ಲಿ ಅಮರಾವತಿಯಲ್ಲಿ ಮರಾಠ ಮಂಡಲ ಸಭೆಯಲ್ಲಿ ಈ ಗ್ರಂಥದ ಪ್ರತಿ ಸುಟ್ಟು ಹಾಕಿದ್ದಾದರೂ ಏಕೆ?
ಶಿವಸೇನೆ ಮತ್ತಿತರ ಸಂಘಪರಿವಾರದ ತುಂಡು ತುಣುಕು ಸಂಘಟನೆಗಳು ಪುಸ್ತಕ ನಿಷೇಧಿಸುವಂತೆ ದೊಂಬಿ ಗಲಾಟೆ ಮಾಡಿದ್ದಾದರೂ ಏಕೆ? ಹಾಗಿದ್ದರೆ ಯಾವುದು ಸುಳ್ಳು? ಯಾವುದು ಸತ್ಯವೆಂಬುದರ ಬಗ್ಗೆ ತಿಳಿದುಕೊಳ್ಳುವ ವ್ಯವಧಾನ ಈ ಸಂಘಪರಿವಾರಕ್ಕೆ ಯಾಕಿಲ್ಲ?
ಶೂದ್ರ ಶಂಭೂಕ ತಪಸ್ಸು ಮಾಡಿದರೆ ಬ್ರಾಹ್ಮಣನ ಮಗ ಸಾಯುತ್ತಾನೆ, ಅದೇ ರಾಮ ಶೂದ್ರನ ತಲೆ ಕತ್ತರಿಸಿದರೆ ಬ್ರಾಹ್ಮಣನ ಮಗ ಮರು ಜನ್ಮ ಪಡೆಯುತ್ತಾನೆಂಬ ಅವೈಜ್ಞಾನಿಕ ‘ವಾದವನ್ನು’ ಅಂಬೇಡ್ಕರ್ ಒಪ್ಪಿ, ರಾಮನಿಗೆ ಒಳ್ಳೆಯವನೆಂಬ ಪ್ರಮಾಣಪತ್ರ ನೀಡಿದರೆ? ಅಂಬೇಡ್ಕರ್ ಬಗ್ಗೆ ಸುಳ್ಳು ಹರಡುವ ಮುಂಚೆ ವೇದ ಮತ್ತು ಹಿಂದೂ ಧರ್ಮದ ಬಗ್ಗೆ ಅಂಬೇಡ್ಕರ್ ಅವರ ಸ್ಪಷ್ಟವಾದ ನಿಲುವು ಏನಿತ್ತು? ಎಂಬ ಸತ್ಯವನ್ನೂ ಅರಿತುಕೊಳ್ಳಬೇಕಲ್ಲವೆ?
ಅಸ್ಪೃಶ್ಯರ ಪಾಲಿಗೆ ವೇದಗಳು ಯೋಗ್ಯತೆ ಇಲ್ಲದ ಪುಸ್ತಕಗಳು. ಈ ಪುಸ್ತಕಗಳು ಪವಿತ್ರ ಗ್ರಂಥಗಳೆಂದಾಗಲೀ, ದೋಷ ರಹಿತವಾಗಿವೆ ಎಂದಾಗಲೀ ಯಾವ ದೃಷ್ಟಿಯಿಂದ ನಿರ್ಣಯಿಸಬೇಕು? ವೇದಗಳಲ್ಲಿ ಪುರುಷಸೂಕ್ತವನ್ನು ಸೇರಿಸಿದ ಕಾರಣ ಬ್ರಾಹ್ಮಣರನ್ನು ಪ್ರಭುಗಳನ್ನಾಗಿಸಿರುವದರಿಂದ ವೇದ ಪವಿತ್ರವೆಂದು ಹೇಳುತ್ತಾರೆ. ವೈರಿಯನ್ನು ನಾಶ ಮಾಡಬೇಕು, ಮತ್ತವನ ಸ್ವತ್ತನ್ನು ಕಿತ್ತುಕೊಂಡು ತನ್ನ ಸಹಚರರಿಗೆ ಹಂಚಬೇಕೆಂದು ಹೇಳುವ ವೇದಕ್ಕೆ ಮನುಷ್ಯತ್ವದ ಲೇಪನವಾಗಲಿ ಅಥವಾ ಮಾನವೀಯ ಮೌಲ್ಯದ ಪರಿಚಯವಾಗಲಿ ಇದೆ ಎಂದು ನಂಬುವುದಾದರೂ ಹೇಗೆ? ಎಂಬ ಅಂಬೇಡ್ಕರ್ ಪ್ರಶ್ನೆಗೆ ಇಲ್ಲಿಯವರೆಗಿನ ಯಾವ ಸಂಘಪರಿವಾರದ ಸರಸಂಚಾಲಕರಿಂದಲೂ ಉತ್ತರ ನೀಡಲಾಗಿಲ್ಲದಿರುವಾಗ, ಅಂಬೇಡ್ಕರ್ ಬಗೆಗಿನ ಸುಳ್ಳು ಹೇಳುವ ಯೋಗ್ಯತೆಯಾದರೂ ಬೇಕಲ್ಲವೆ?
ಮನುವಾದಿಗಳು ಬಿತ್ತಿದ ಮೂರ್ಖ ವಿಚಾರದಿಂದ ಹಿಂದೂ ಸಮಾಜವನ್ನು ಹೊರತರುವಲ್ಲಿ ಮತ್ತು ಮನುವಾದಿಗಳ ಹಿಡಿತದಿಂದ ಪಾರಾಗದೇ ಭಾರತಕ್ಕೆ ಭವಿಷ್ಯ ಇಲ್ಲವೆಂದು ಸಾರಿ ಸಾರಿ ಹೇಳುವ ಮೂಲಕ, ಹಿಂದೂ ಧರ್ಮದಲ್ಲಿನ ಜಾತೀಯತೆ, ಅಸ್ಪೃಶ್ಯತೆ, ಅಜ್ಞಾನ, ಧಾರ್ಮಿಕ ಮೌಢ್ಯವನ್ನು ಹಿಂದೂ ಧರ್ಮದಿಂದ ಕಿತ್ತು ಬಿಸಾಕಿ, ಸ್ವಾತಂತ್ರ್ಯ ಸಮಾನತೆ ಸಹೋದರತೆಯ ಅಡಿಪಾಯದ ಮೇಲೆ ಭಾರತೀಯ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದ, ಚೌಡಾರ್ ಕೆರೆ ಚಳುವಳಿ, ಧುಲೆ ಚಳುವಳಿ, ಅಂಭಾದೇವಿ ಮಂದಿರ ಚಳುವಳಿ, ಪುಣೆ ಕೌನ್ಸಿಲ್ ಚಳುವಳಿ, ಪರ್ಬತಿ ಚಳುವಳಿ, ನಾಗಪುರ ಚಳುವಳಿ, ಕಾಳಾರಾಮ ಮಂದಿರ ಚಳುವಳಿಯಲ್ಲಿ ಅಂಬೇಡ್ಕರ್ ಅವರಿಗೆ ಸಂಘಪರಿವಾರ ಯಾವ ರೀತಿಯಲ್ಲಿ ಸಹಕಾರ ನೀಡಿದೆ ಎಂಬುದನ್ನೂ ಗಮನಿಸಬೇಕಲ್ಲವೆ?

ಮಹಮ್ಮದ್ ಘಜ್ನಿಯ ಸೋಮನಾಥ ದೇವಾಲಯದ ಮೇಲಿನ ದಾಳಿಯ ಬಗ್ಗೆ ಬರೆದಿದ್ದಾರೆಂದು ಹೇಳುವ ವಾದಿರಾಜ್ ಅವರೆ, ಮುಸ್ಲಿಮ್ ರಾಜರೆಲ್ಲ ಪದೇ ಪದೇ ಭಾರತದ ಮೇಲೆ ಯಾಕೆ ದಾಳಿ ಮಾಡಿದರೆಂಬ ಸತ್ಯವನ್ನು ಅದೇ ಅಂಬೇಡ್ಕರ್ ಅವರು ಬಿಚ್ಚಿಟ್ಟಿದ್ದಾರೆ ಕೇಳಿ ಸ್ವಲ್ಪ.
ಅದೇನೆಂದರೆ “ಈ ಭಾರತ ಬೇರೆಯವರಿಗೆ ಮಾರಲ್ಪಟ್ಟಿದ್ದರೆ ಅಥವಾ ಮುಸ್ಲಿಂ ರಾಜರ ಅಥವಾ ಬ್ರಿಟಿಷರ ಆಡಳಿತದ ಗುಲಾಮಗಿರಿಗೆ ಒಳಪಟ್ಟಿದ್ದರೆ ಅದಕ್ಕೆ ನಾನಾಗಲಿ ಅಥವಾ ಅಸ್ಪೃಶ್ಯ ಜಾತಿಯ ನನ್ನ ಜನರಾಗಲಿ ಕಾರಣವಲ್ಲ, ಬದಲಿಗೆ ಹಿಂದೂ ಧರ್ಮವೇ ಕಾರಣ” ಎಂದು ಹೇಳಿದ್ದನ್ನು ಯಾಕೆ ಒಪ್ಪುತ್ತಿಲ್ಲ?.
ಚಾತುರ್ವರ್ಣ ಧರ್ಮ ಭಾರತಕ್ಕೆ ನೀಡಿದ್ದಾದರೂ ಏನು?, ಕ್ಷತ್ರಿಯರಿಗೆ ಕತ್ತಿ ಹಿಡಿಯುವ ಹಕ್ಕು ನೀಡಿ; ಬ್ರಾಹ್ಮಣ, ವೈಶ್ಯ, ಶೂದ್ರ ಅಸ್ಪೃಶ್ಯರನ್ನು ಶಸ್ತ್ರ ರಹಿತರನ್ನಾಗಿ ಮಾಡಿರುವ ಕಾರಣ, ಈ ದೇಶವನ್ನು ಸಾವಿರಾರು ವರ್ಷಗಳಿಂದ ಪರಕೀಯರಿಗೆ ಕಳೆದುಕೊಳ್ಳುವಂತಹ ದುರಂತ ಸ್ಥೀತಿ ಬಂದಿದೆ. ಯಾಕೆಂದರೆ ಶೂದ್ರರು, ವೈಶ್ಯರು, ಬ್ರಾಹ್ಮಣರು, ಅಸ್ಪೃಶ್ಯರು ಹೀಗೆ ಎಲ್ಲರಿಗೂ ಸಶ್ತ್ರ ಹಿಡಿಯುವ ಹಕ್ಕು ನೀಡಿದ್ದೇ ಆದರೆ ಮತ್ತು ಎಲ್ಲರಿಗೂ ಸಮಾನವಾಗಿ ದೇಶವಾಳುವ ಹಕ್ಕು ನೀಡಿದ್ದೇ ಆಗಿದ್ದರೆ, ದೇಶದ ರಕ್ಷಣೆ ತನ್ನಿಂತಾನೇ ಆಗುತ್ತಿತ್ತು ಎಂಬ ಕನಿಷ್ಠ ಅರಿವು ಇಲ್ಲವೇ?
ಮಹಮ್ಮದ್ ಘೋರಿ ದಂಡೆತ್ತಿ ಬಂದಾಗ ಒಬ್ಬ ಪೃಥ್ವಿರಾಜ ಚೌಹಾಣ್ ಕತ್ತಿ ಹಿಡಿದು ಯುದ್ದ ಮಾಡಬೇಕಾಯಿತೆ ವಿನಃ ಯಾವ ಅಸ್ಪೃಶ್ಯನಿಗೆ, ಶೂದ್ರನಿಗೆ ಯುದ್ದ ಮಾಡುವ ಅವಕಾಶ ಈ ಹಿಂದೂ ಧರ್ಮ ನೀಡಿಲ್ಲವಾದ್ದರಿಂದ, ಚಾತುರ್ವರ್ಣದಲ್ಲಿ ಶೂದ್ರರು ಶೂದ್ರರಾಗಿಯೇ ಇರಬೇಕಾಯಿತು, ಬ್ರಾಹ್ಮಣರು ಮಂತ್ರ ಪಠಿಸುತ್ತ ಬ್ರಾಹ್ಮಣರಾಗಿಯೇ ಉಳಿಯಬೇಕಾಯಿತು, ವೈಶ್ಯರು ವ್ಯಾಪಾರ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುತ್ತಲೇ ಹೋದರು. ಹೀಗೇ ಆಯಾ ವರ್ಣಗಳವರು ಆಯಾ ವರ್ಣಗಳ ಉದ್ಯೋಗಳಲ್ಲೇ ಮುಳುಗಿದಾಗ ದೇಶ ಕಾಯುವವರು ಕೇವಲ ಕ್ಷತ್ರಿಯರಿಗೆ ಮಾತ್ರ ಮೀಸಲಾಯಿತು.
ಅಸ್ಪೃಶ್ಯರ ಕೈಗೆ ಕತ್ತಿ ಕೊಟ್ಟರೆ ಏನಾಗಬಹುದೆಂದು ‘ಭೀಮಾ ಕೋರೆಗಾಂವ್’ ಯುದ್ದವೇ ಸಾಕ್ಷಿಯಾಗಿದೆ. ಆದ್ದರಿಂದ ಮಧ್ಯ ಪ್ರಾಚ್ಯದವರು, ಪೋರ್ಚಗೀಸರು, ಡಚ್ಚರು, ಆಂಗ್ಲರು ಹೀಗೆ ಇತರ ಪರಕೀಯರು ಬಂದು ನಮ್ಮನ್ನು ಆಕ್ರಮಿಸಿದರು. “ಭಾರತ ಪರಕೀಯರ ಗುಲಾಮಗಿರಿಗೆ ಸಿಕ್ಕಿದ್ದೇ ಆದರೆ ಅದಕ್ಕೆಲ್ಲ ನನ್ನ ಅಸ್ಪೃಶ್ಯ ಜನರು ಕಾರಣವಲ್ಲ” ಎಂದು ಅಂಬೇಡ್ಕರ್ ಹೇಳಿರುವ ಮಾತಿನಿಂದ ವಾದಿರಾಜ್ಗೆ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ.

ರಾಮಮಂದಿರ ಕಟ್ಟುವ ಹುಮ್ಮಸ್ಸಿನಲ್ಲಿರುವ ನಿಮಗೆ ರಾಮರಾಜ್ಯದ ಹುಸಿ ಪರಿಕಲ್ಪನೆಗೆ ಭೀಮರಾವ್ ಅಂದೇ ತಮ್ಮ “ಹಿಂದೂ ಧರ್ಮದ ಒಗಟುಗಳು” ಗ್ರಂಥದಲ್ಲಿ ಉತ್ತರ ನೀಡಿಯಾಗಿದೆ. ಅಂಬೇಡ್ಕರ್ ಬಗ್ಗೆ ನೀವು ಏನೇ ಸುಳ್ಳು ಪ್ರಚಾರ ಮಾಡಿದರೂ ಇದು ಜನರ ಮನಸ್ಸಿನಲ್ಲಿ ನಾಟುವ ಕಾಲವಲ್ಲ. ಸುಳ್ಳುಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ತುಂಬಾ ದಿನಗಳ ಕಾಲ ನಡೆಯದು.
ದೇಶದ ಜನತೆಗೆ ನಿಮ್ಮ ಸುಳ್ಳುಗಳ ಬಗ್ಗೆ ಅರಿವಾದಾಗ ಮತ್ತು ಪ್ರತಿಯೊಬ್ಬರಿಗೂ ಅಂಬೇಡ್ಕರ್ ಅರ್ಥವಾದ ಕ್ಷಣದಲ್ಲಿ ಫ್ಯಾಸಿಸ್ಟರು ಅಧಿಕಾರದಲ್ಲಿ ಮುಂದುವರೆಯುವ ಅರ್ಹತೆ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಲೇಬೇಕು.
ಆಗ ಈ ದೇಶ ಭೀಮ ರಾಜ್ಯವಾಗಿರುತ್ತದೆಯೇ ಹೊರತು ನಿಮ್ಮ ರಾಮ ರಾಜ್ಯವಾಗಲು ಸಾಧ್ಯವಿಲ್ಲ. ಈ ದೇಶದ ಬಹುಜನ ಸಮುದಾಯ ಅಂಬೇಡ್ಕರ್ ಸಿದ್ಧಾಂತವನ್ನು ಒಪ್ಪಿ ಅಪ್ಪುವ ಕಾಲ ದೂರವಿಲ್ಲ. ಹೌದು ವಾಸ್ತವ ನೆಲೆಗಟ್ಟಿನ ಭೀಮರಾಜ್ಯದ ಮುಂದೆ ಕಾಲ್ಪನಿಕ ರಾಮರಾಜ್ಯ ಧೂಳಿಪಟವಾಗಲೇಬೇಕು. ಆಗಲಾದರೂ ವಾದಿರಾಜರಿಗೆ ಉತ್ತರ ಸಿಗಲಿದೆ ಭಾವಿಸಿದ್ದೇನೆ.
–ಟಿ.ಶಶಿಧರ
ಓದಿ: ಮಂದಿರ ಭವ್ಯವಾಗಬಹುದು; ಪವಿತ್ರವಾಗಿರುವುದಿಲ್ಲ: ಜಿ ರಾಜಶೇಖರ್



ಮನುವಾದಿಗಳ ಕುತಂತ್ರವನ್ನು ಬಯಲುಗೊಳಿಸಿದ ಟಿ.ಶಶಿದರ ಅವರಿಗೆ ಧನ್ಯವಾದಗಳು.