Homeಮುಖಪುಟಮಂದಿರ ಭವ್ಯವಾಗಬಹುದು; ಪವಿತ್ರವಾಗಿರುವುದಿಲ್ಲ: ಜಿ ರಾಜಶೇಖರ್

ಮಂದಿರ ಭವ್ಯವಾಗಬಹುದು; ಪವಿತ್ರವಾಗಿರುವುದಿಲ್ಲ: ಜಿ ರಾಜಶೇಖರ್

- Advertisement -
- Advertisement -

2020ರ ಆಗಸ್ಟ್ 5 ರಂದು ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲು ಆಳುವ ಬಿಜೆಪಿಯ ವರಿಷ್ಠರು ನಿರ್ಧರಿಸಿದ್ದಾರೆ. ಆ ಜಾಗದಲ್ಲಿ ಭವ್ಯವಾದ ರಾಮಮಂದಿರವನ್ನು ನಿರ್ಮಿಸುವುದು ಅವರ ಉದ್ದೇಶವೆಂದು ತಿಳಿಸಲಾಗಿದೆ. ಆ ಮಂದಿರ ಭವ್ಯವಾಗಿ ಇರಬಹುದು; ಆದರೆ ಖಂಡಿತ ಪವಿತ್ರವಾಗಿರುವುದಿಲ್ಲ. ಅದಕ್ಕೊಂದು ಕಾರಣವಿದೆ. ಈ ಪ್ರಸ್ತಾಪಿತ ರಾಮಮಂದಿರವನ್ನು ಅಕ್ಷರಶಃ ಮನುಷ್ಯರ ಹೆಣಗಳ ಮೇಲೆ ನಿರ್ಮಿಸಲಾಗುತ್ತಿದೆ.

ನಾವು ಒಮ್ಮೆ 1992ರ ಡಿಸೆಂಬರ್ 6ರ ದಿನಗಳನ್ನು ಮನಸ್ಸಿನೊಳಗೆ ತಂದುಕೊಳ್ಳಬೇಕು. ಆ ದಿನ ದೇಶದ ಎಲ್ಲೆಡೆಯಿಂದ ಫೈಜಾಬಾದ್ ಸಮೀಪದ ಅಯೋಧ್ಯೆಗೆ ಲಕ್ಷಾಂತರ ಜನ ಕರಸೇವಕರು ಬಂದಿದ್ದರು. ಅವರು ಬಿಜೆಪಿ ಕಾರ್ಯಕರ್ತರು; ಹೆಚ್ಚಿನವರು ಆರ್ ಎಸ್‍ ಎಸ್ ಸ್ವಯಂಸೇವಕರು. ಕರಸೇವಕರಲ್ಲಿ ಕೆಲವರು ಹಾರೆ ಪಿಕಾಸಿಗಳ ಸಮೇತ ಅಲ್ಲಿ ಜಮಾಯಿಸಿದ್ದರು. ಅಂದು ಲಕ್ಷಾಂತರ ಜನರ ಸಮ್ಮುಖದಲ್ಲಿ, ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು. ಅದರ ಬೆನ್ನಿಗೆ ಮುಂಬೈ ಶಹರದಲ್ಲಿ, ಮತೀಯ ಹಿಂಸಾ ಕೃತ್ಯಗಳು ಪ್ರಾರಂಭವಾಗಿ, ಮುಂದೆ ಮೂರು ನಾಲ್ಕು ತಿಂಗಳುಗಳ ಕಾಲ ಆ ಶಹರದಲ್ಲಿ ಮಾರಣಹೋಮ ಅವ್ಯಾಹತವಾಗಿ ನಡೆಯಿತು.

ಈ ಗಲಭೆಗಳಲ್ಲಿ, ಬಿಜೆಪಿ ಶಿವಸೇನಾ ಮಾತ್ರವಲ್ಲ, ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಸಹ ಭಾಗಿಯಾಗಿ ಹಿಂಸಾಚಾರವೆಸಗಿದ್ದರು. ಈ ಕುರಿತು ಸರಕಾರ ನೇಮಿಸಿದ, ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಆಯೋಗ ಹಿಂಸಾಚಾರದ ಕುರಿತು ಸಾಕ್ಷ್ಯಾಧಾರ ಸಹಿತ ವಿವರವಾದ ವರದಿ ಸಲ್ಲಿಸಿದೆ. ನನಗೆ ಗೊತ್ತಿರುವ ಮಟ್ಟಿಗೆ ಈ ವರದಿಯನ್ನು ಯಾವ ಸರಕಾರವೂ ಅಧಿಕೃತವಾಗಿ ಇದುವರೆಗೆ ಸ್ವೀಕರಿಸಿಲ್ಲ.

ಒಂದು ದೃಷ್ಟಿಯಿಂದ 1992ರ ಮುಂಬೈ ಗಲಭೆಗಳು, 2002ರ ಗುಜರಾತ್‍ನ ಮುಸ್ಲಿಂ ನರಮೇಧಕ್ಕೂ ನಾಂದಿ ಹಾಡಿತು. 92ರಲ್ಲಿ ಅಡ್ವಾಣಿ ನೇತೃತ್ವದ ರಥಯಾತ್ರೆಗೆ ಆಯೋಜಕನಾಗಿ ಕೆಲಸ ಮಾಡಿದ್ದ ಒಬ್ಬ ಗುಜರಾತ್‍ನ ಕಾರ್ಯಕರ್ತ, ನರಮೇಧದ ಬಂಡವಾಳ ತರುವ ಲಾಭದ ಅರಿವು ಪಡೆದುಕೊಂಡ. ಈಗ ದೇಶದ ಪ್ರಧಾನಿಯಾಗಿರುವ ಮೋದಿ ಮಹಾಶಯರೇ 2002ರಲ್ಲಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಆ ಸಂದರ್ಭದಲ್ಲಿ ನಡೆದ ನರಮೇಧದಿಂದ ಈತನ ಜನಪ್ರಿಯತೆ ಕುಸಿಯುವ ಬದಲು ಇನ್ನಷ್ಟು ಹಿಗ್ಗಿತು. ಖ್ಯಾತ ಚಿಂತಕ ಶಿವ ವಿಶ್ವನಾಥನ್, ಮುಸ್ಲಿಮರ ನರಮೇಧ, ಮೋದಿಯವರ ಜನಪ್ರಿಯತೆಯನ್ನು ಕುಗ್ಗಿಸದೆ ಅವರು ಇನ್ನಷ್ಟು ಜನಪ್ರಿಯರಾದರು ಎಂದು ವಿಶ್ಲೇಷಿಸಿದ್ದರು. ಇದು ಸ್ವತಃ ಅಂದಿನ ಮುಖ್ಯಮಂತ್ರಿಯ ಸಂಚಾಲಕತ್ವದಲ್ಲಿ ನಡೆಯಿತೆಂಬ ಆರೋಪ ಕೇಳಿಬಂತಲ್ಲದೇ ವಿಚಾರಣೆಗಳೂ ನಡೆದವು. ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದವರಿಗೆ ಅದೇ ಕಾರಣಕ್ಕಾಗಿ ವಿಚಾರಣಾ ನ್ಯಾಯಾಲಯವು 28 ವರ್ಷಗಳ ಶಿಕ್ಷೆಯನ್ನೂ ವಿಧಿಸಿತ್ತು. ಗುಜರಾತ್‍ನಲ್ಲಿ ಆಗಿನಿಂದಲೂ ಅದೇ ಪಕ್ಷಕ್ಕೆ ಸೇರಿದ ಸರ್ಕಾರವಿದೆ ಎಂಬುದನ್ನು ಮರೆಯಲಾಗದು. ಆ ರಾಜ್ಯದಲ್ಲಿ ವಿಚಾರಣೆ ನಡೆದರೆ ನ್ಯಾಯಯುತವಾಗಿರಲಾರದೆಂಬ ಕಾರಣಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಗಳನ್ನು ಬೇರೆಡೆಗೆ ವರ್ಗಾಯಿಸಿತ್ತು. ಆ ರಾಜ್ಯದ ಗೃಹಮಂತ್ರಿಯನ್ನು ಬೇರೆಡೆಗೆ ಗಡಿಪಾರು ಮಾಡಲಾಗಿತ್ತು. ಅದೇ ಗೃಹಮಂತ್ರಿ ಇದೀಗ ದೇಶದ ಗೃಹಮಂತ್ರಿ ಮತ್ತು ಅಂತಹ ಘನಘೋರ ಹಿಂಸೆ ಮಾಡಿಸಿದ ಆರೋಪ ಹೊತ್ತಿದ್ದ ಮಹಾಶಯರೇ ಈಗ ನಮ್ಮ ಸಂವಿಧಾನದ ಮೌಲ್ಯಗಳ ವಿರುದ್ಧ ಮಂದಿರದ ಶಿಲಾನ್ಯಾಸ ಮಾಡಲಿದ್ದಾರೆ.

ಭಾರತದಲ್ಲಿ, ಇದುವರೆಗೆ ಹತ್ತಿರ ಹತ್ತಿರ 40,000 ಜನ ಕೋವಿಡ್ ಸೋಂಕಿನಿಂದ ಸತ್ತಿದ್ದಾರೆ. ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿ ಹಿಂದೆಂದೂ ಕಾಣದ ರೀತಿಯಲ್ಲಿ ಜರ್ಜರಿತವಾಗಿದೆ. ಇದು ಕೂಡ ಒಂದು ಪ್ರಭುತ್ವ ಆಯೋಜಿತ ಮಾರಣಹೋಮ. ಈ ಪರಿಸ್ಥಿತಿಯಲ್ಲಿ ಹಿಂದೂ ರಾಷ್ಟ್ರದ ಕಡೆಗೆ ಒಂದು ಮಹತ್ವದ ಹೆಜ್ಜೆ, ಈ ರಾಮ ಮಂದಿರವೆಂದು ಭಾವಿಸಲಾಗುತ್ತಿದೆ. ಇವೆಲ್ಲವುಗಳಿಗೆ ರಾಮಾಯಣದ ರೂಪಕ ಒಂದೇ; ಮಾನವೀಯತೆ, ನ್ಯಾಯ, ವಿವೇಕ ಮತ್ತು ನಮ್ಮ ಸಂವಿಧಾನದ ಮೌಲ್ಯಗಳನ್ನು ದೀರ್ಘ ವನವಾಸಕ್ಕೆ ಕಳುಹಿಸಲಾಗುತ್ತಿದೆ.

– ಜಿ ರಾಜಶೇಖರ್, ಉಡುಪಿ


ಇದನ್ನು ಓದಿ: ಕಮರಿದ ವಿಶ್ವಾಸ; ಕುಲೀನ ಅನುಮಾನಗಳ ನಡುವೆ, ಈ ದೇಶ ಮತ್ತೊಮ್ಮೆ ವಿಭಜನೆಯಾಗಿದೆ: ಶಿವಸುಂದರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ...

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...