ಇಂದು ಬಾಬರಿ ಮಸೀದಿ ಒಡೆದ ಸ್ಥಳದಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದೆ. ”500 ವರ್ಷಗಳಿಂದ ಕಾದು ಕುಳಿತಿದ್ದ ರಾಮಲಲ್ಲಾಗೆ ಇಂದು ಮುಕ್ತಿ ಸಿಕ್ಕಿದೆ, ರಾಮಲಲ್ಲಾ ತನ್ನ ಸ್ವತ್ತನ್ನು ಮರಳಿ ಪಡೆದುಕೊಂಡಿದ್ದಾನೆ” ಎಂದೆಲ್ಲಾ ಹೇಳುತ್ತ ದೇಶ್ಯಾದ್ಯಂತ ಅಬ್ಬರದ ಮೆರಗು ಹುಟ್ಟಿಸಲಾಗುತ್ತಿದೆ.
ಆದೆರೆ ರಾಮಲಲ್ಲಾ ಎಲ್ಲರಿಗೂ ಪರಿಚಿತನಾದದ್ದೇ 1992ರಲ್ಲಿ ಸಂಘ ಪರಿವಾರ ಬಾಬರಿ ಮಸೀದಿಯನ್ನು ದ್ವಂಸ ಮಾಡಿದ ನಂತರ, ಅದರ ವ್ಯಾಜ್ಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ. ಇದೆಲ್ಲದರ ನಡುವೆ, ಕಣ್ಣೆದುರೇ ಇರುವ ಮಸೀದಿಯನ್ನು ಪರಿಗಣಿಸದೆ ನ್ಯಾಯಾಂಗ 500 ವರ್ಷಗಳ ನಂಬಿಕೆಗೆ ಮಾರುಹೋಗಿ ತೀರ್ಪು ನೀಡಿದೆ.
ವಿವಾದಿತ ಜಾಗದಲ್ಲಿ ಮಸೀದಿಯ ಬದುಲು ಮಂದಿರ ಏಳುತ್ತಿದೆ. ಈ ಕುರಿತು, ‘ಇಂದು ಈ ದೇಶ ಮತ್ತೊಮ್ಮೆ ವಿಭಜನೆಯಾಗಿದೆ’ ಎಂದು ಚಿಂತಕ ಶಿವಸುಂದರ್ ಅವರು ಕವಿತೆ ಬರೆದಿದ್ದಾರೆ.
ಇಂದು ಈ ದೇಶ ಮತ್ತೊಮ್ಮೆ ವಿಭಜನೆಯಾಗಿದೆ
ದಫನಾದ ಸತ್ಯ – ವೈಭವದ ಮಿಥ್ಯಗಳ ನಡುವೆ
ರೋಗಿಷ್ಟ ಧರ್ಮ – ಬಲಿಷ್ಠ ಆಧರ್ಮಗಳ ನಡುವೆ
ಕಮರಿದ ವಿಶ್ವಾಸ – ಕುಲೀನ ಅನುಮಾನಗಳ ನಡುವೆ
ಇಂದು ಈ ದೇಶ
ಮತ್ತೊಮ್ಮೆ ವಿಭಜನೆಯಾಗಿದೆ.
ಇಲ್ಲಿ ಧರ್ಮವೂ ಅಧರ್ಮದ ಬೆನ್ನೇರಿದೆ..
ನ್ಯಾಯದ ದೋಣಿಯಲ್ಲಿ ಅನ್ಯಾಯದ ಪಯಣ
ನಿರಾತಂಕವಾಗಿ ಸಾಗಿದೆ…
ಕಾಗದಪತ್ರವಿಲ್ಲದಿದ್ದರೂ
ಕದ್ದವರ ಒಡೆತನ ಸಾಬೀತಾಗಿದೆ..
ಸಾಕ್ಷಿ ಪುರಾವೆಗಳೆಂಬ
ಪರದೇಸಿ ಪ್ರಮಾಣಗಳು ರದ್ದಾಗಿ….
ನ್ಯಾಯದ ರಕ್ಷಣೆಗೆ
ಸನಾತನ ಪಹರೆ ವಿಧಿಸಲಾಗಿದೆ..
ಬಲವಿದ್ದವರ “ಭಕ್ತಿ”ಗೆ ದೈವವೂ ನಡುಗಿದೆ…
ಇನ್ನೂ ನಂಬಿಕೆಯೇ ಸಂವಿಧಾನ,
ರಣ ಘೋಷಗಳೇ ವೇದವಾಕ್ಯ
ನಂಬಿಕೆಯಂತೆ ನಡೆದರೆ ಮೋಕ್ಷ,
ಇಲ್ಲವೇ ನಿಜ ನಿರ್ವಾಣ..
ಪುರಾಣ ಮಂತ್ರ ತಂತ್ರ ಕವಡೆ
ಜನಸಂಖ್ಯೆಗೆ ಅನುಗುಣವಾಗಿ ನ್ಯಾಯದ ಬಟವಾಡೆ….
ರಾಮರಾಜ್ಯ ಸ್ವಾಮಿ…
ಶಂಬೂಕರಾದರೆ ನರಕ
ಸಹಿಸಿಕೊಂಡು ಬಾಳಿದರೆ … ಸ್ವರ್ಗಸುಖ!
– ಶಿವಸುಂದರ್
ಓದಿ: ಮೋದಿ ಭಾಷಣದಲ್ಲಿದ್ದ ಮೂರು ಮಹಾ ಸುಳ್ಳುಗಳು : ಶಿವಸುಂದರ್