Homeಮುಖಪುಟಮೋದಿ ಭಾಷಣದಲ್ಲಿದ್ದ ಮೂರು ಮಹಾ ಸುಳ್ಳುಗಳು : ಶಿವಸುಂದರ್‌

ಮೋದಿ ಭಾಷಣದಲ್ಲಿದ್ದ ಮೂರು ಮಹಾ ಸುಳ್ಳುಗಳು : ಶಿವಸುಂದರ್‌

ಮೋದಿಯವರು ಲಾಕ್‌ಡೌನ್‌ ವಿಸ್ತರಿಸುವ ಕುರಿತು ಮಾಡಿದ ಭಾಷಣದಲ್ಲಿನ ತಪ್ಪುಗಳನ್ನು ಶಿವಸುಂದರ್‌ರವರು ಗುರುತಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಾನುಗೌರಿ ಓದುಗರಿಗಾಗಿ ಇಲ್ಲಿ ಮತ್ತೆ ಪ್ರಕಟಿಸಲಾಗಿದೆ.

- Advertisement -
- Advertisement -

ನಿನ್ನೆ ಮೋದಿಯವರು ಮಾಡಿದ ಭಾಷಣದಲ್ಲಿ ಅನಿವಾರ್ಯವಾಗಿದ್ದ ಲಾಕ್‌ಡೌನ್‌ ವಿಸ್ತರಣೆಯನ್ನು ಮಾತ್ರ ಘೋಷಿಸಿದ್ದಲ್ಲದೆ ತಮ್ಮ ಸರ್ಕಾರಕ್ಕಿಂತ ಉತ್ತಮವಾಗಿ ಕೋವಿಡ್ ಬಿಕ್ಕಟ್ಟನ್ನು ನಿರ್ವಹಣೆ ಮಾಡಲು ಸಾಧ್ಯವೇ ಇರಲಿಲ್ಲವೆಂದು ಕೊಚ್ಚಿಕೊಳ್ಳಲು ಕೂಡ ಬಳಸಿಕೊಂಡರು.

ಅದನ್ನು ಸಾಬೀತುಮಾಡಲು ಎಂದಿನಂತೆ ಅರ್ಧ ಸುಳ್ಳೂ ಹಾಗು ಅರ್ಧ ಸತ್ಯಗಳಿರುವ ಕಾಕ್ಟೈಲ್ ಮಾಹಿತಿಯನ್ನು ನೀಡಿದರು. ಈ ಟಿಪ್ಪಣಿಯಲ್ಲಿ ಮೋದಿಯವರ ಭಾಷಣದಲ್ಲಿದ್ದ ಮೂರೂ ಮಹಾಸುಳ್ಳುಗಳ ಬಗ್ಗೆ ಮಾತ್ರ ನಿಮ್ಮ ಗಮನ ಸೆಳೆಯಲು ಇಚ್ಚಿಸುತ್ತೇನೆ.

ಮೋದಿಯವರ ಪ್ರಕಾರ ಮಾರ್ಚ್ 24ರಂದು ಭಾರತವು ಲಾಕ್‌ಡೌನ್‌ ಘೋಷಿಸಿದಾಗ ತಮ್ಮ ದೇಶದಷ್ಟೇ ಕೋವಿಡ್ ಬಾಧಿತರನ್ನು ಹೊಂದಿದ್ದ ದೇಶಗಳು ಇದೀಗ ಅಳತೆಮೀರಿದಷ್ಟು ಆಪತ್ತನ್ನು ಎದುರಿಸುತ್ತಿದ್ದಾರೆ. ಆದರೆ ಭಾರತವು ಮಾರ್ಚ್ 24ರಂದು ಕೈಗೊಂಡ ಲಾಕ್‌ಡೌನ್‌ ಕ್ರಮದಿಂದಾಗಿಯೇ ಸಂದರ್ಭದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಿದೆ.

ಇದು ಅರ್ಧ ಸತ್ಯ. ಅರ್ಧ ಸುಳ್ಳು.

ಮೊದಲು ಅರ್ಧ ಸತ್ಯದ ಭಾಗವನ್ನೇ ನೋಡೋಣ. ಮಾರ್ಚ್ 24ಕ್ಕೆ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 536.. ಆಗ ಅಮೇರಿಕಾದಲ್ಲಿ 55,222 ಸೋಂಕಿತರು ಪತ್ತೆಯಾಗಿದ್ದರೆ ಇವತ್ತು ಅಮೇರಿಕಾದಲ್ಲಿ ಕೋವಿಡ್ ಸೋಂಕಿತರಿಗೆ ಒಳಗಾದವರ ಸಂಖ್ಯೆ 7 ಲಕ್ಷವನ್ನು ದಾಟಿದೆ.

ಮಾರ್ಚ್ 24ಕ್ಕೆ ಬ್ರಿಟನಿನಲ್ಲಿ 8022 ಸೋಂಕಿತರು ಪತ್ತೆಯಾಗಿದ್ದರೆ ಇಂದು ಆ ಸಂಖ್ಯೆ 93,873ನ್ನು ಮುಟ್ಟಿದೆ. ಜರ್ಮನಿಯಲ್ಲಿ 30,000 ಇದ್ದದ್ದು ಇವತ್ತು1,30,000ವನ್ನು ಮುಟ್ಟಿದೆ.

ಇದು ಒಂದು ಬಗೆಯ ಸೆಲೆಕ್ಟಿವ್ ಸತ್ಯ.

ಏಕೆಂದರೆ ಭಾರತದ ಹಲವಾರು ನೆರೆಹೊರೆ ದೇಶಗಳು ಮಾರ್ಚ್ 24ರ ವೇಳೆಗೆ ನಮಗಿಂತ ಹೆಚ್ಚಿನ ಸೋಂಕಿತರನ್ನು ಹೊಂದಿದ್ದರು ಸಹ ಕೋವಿಡ್ ಸಾಂಕ್ರಾಮಿಕವನ್ನು ನಮಗಿಂತ ಪರಿಣಾಮಕಾರಿಯಾಗಿ ನಿಷೇಧಿಸಿದ್ದಾರೆ. ಉದಾಹರಣೆಗೆ:

ಮಾರ್ಚ್ 24ಕ್ಕೆ ಭಾರತವು ಲಾಕ್‌ಡೌನ್‌ ಮಾಡಿದಾಗ ಭಾರತದಲ್ಲಿ ಸೋಂಕಿತರ ಸಂಖ್ಯೆ 536. ಇಂದು (ಏಪ್ರಿಲ್ -15ಕ್ಕೆ )ಅದು 11,487ನ್ನು ಮುಟ್ಟಿದೆ.

ಮಲೇಷಿಯಾದಲ್ಲಿ ಮಾರ್ಚ್ 24ಕ್ಕೆ ಸೋಂಕಿತರ ಸಂಖ್ಯೆ ಭಾರತದ ಮೂರೂ ಪಟ್ಟು ಅಂದರೆ 1624ರಷ್ಟಿತ್ತು. ಆದರೆ ಇಂದು -ಏಪ್ರಿಲ್ 15ಕ್ಕೆ ಅದು ಕೇವಲ 4957ರಷ್ಟು ಮಾತ್ರ. ಅಂದರೆ ಭಾರತದ ಇಂದಿನ ಸಂಖ್ಯೆಯ ಅರ್ಧಕ್ಕಿಂತ ಕಡಿಮೆ..

ಇಂಡೋನೇಷಿಯಾದಲ್ಲಿ ಮಾರ್ಚ್ 24ಕ್ಕೆ ಸೋಂಕಿತರ ಸಂಖ್ಯೆ 686. ಭಾರತಕ್ಕಿಂತ ಜಾಸ್ತಿ.
ಆದರೆ ಇಂದು ಅಲ್ಲಿ ಸೋಂಕಿತರ ಸಂಖ್ಯೆ 4838ನ್ನು ದಾಟಿಲ್ಲ. ಅಂದರೆ ಭಾರತದ ಸೋಂಕಿತರ ಶೇ.40 ಭಾಗ ಮಾತ್ರ.

ಥೈಲೆಂಡಿನಲ್ಲಿ ಸೋಂಕಿತರ ಸಂಖ್ಯೆ ಮಾರ್ಚ್ 24ಕ್ಕೆ ಭಾರತಕ್ಕಿಂತ ಜಾಸ್ತಿ ಅಂದರೆ 837 ಇತ್ತು. ಇಂದು ಅಲ್ಲಿ ಸೋಂಕಿತರ ಸಂಖ್ಯೆ ಕೇವಲ 2643.. ಅಂದರೆ ಭಾರತದ ಕಾಲು ಭಾಗವು ಇಲ್ಲ.

ಹೇಗೆ? ಏಕೆ?

ಅದೇ ರೀತಿ ಸಿಂಗಾಪುರದಲ್ಲಿ ಮಾರ್ಚ್ 24ರಂದು ಕೋವಿಡ್ ಸೋಂಕಿತರ ಸಂಖ್ಯೆ 558. ಆದರೆ ಇಂದು ಕೇವಲ 3252…

ಈ ಸತ್ಯಗಳನ್ನೇಕೆ ಮೋದಿಯವರು ಹೇಳಲಿಲ್ಲ. ಹೇಳುವುದಿಲ್ಲ?

ವಿಯೆತ್ನಾಮ್- ಮಾರ್ಚ್ 24ಕ್ಕೆ 134. ಆದರೆ ಈಗ ಕೇವಲ 267… ಭಾರತಡ ಕೇವಲ ಶೇ. 1 ಭಾಗ ಮಾತ್ರ…

ಇನ್ನು ದಕ್ಷಿಣ ಕೊರಿಯಾದ ಕಥೆಯಂತೂ ರೋಚಕ.

ಮಾರ್ಚ 24 ಅಲ್ಲಿ ಸೋಂಕಿತರ ಸಂಖ್ಯೆ ಭಾರತಕ್ಕಿಂತ 20 ಪಟ್ಟು ಜಾಸ್ತಿ ಇತ್ತು. ಅಂದರೆ 9,037.. ಅದು ಒಂದು ಹಂತದಲ್ಲಿ 11,000 ವನ್ನು ದಾಟಿತ್ತು. ಆದರೆ ಇವತ್ತು ಅಲ್ಲಿ ಸೋಂಕಿತರ ಸಂಖ್ಯೆ ಭಾರತಕ್ಕಿಂತ ಕಡಿಮೆ … 10,591 ಮತ್ತು ಅಲಿ ಹೊಸ ರೋಗಿಗಳ ಹಾಗು ಸಾವಿನ ಪ್ರಮಾಣ ಭಾರತಕ್ಕಿಂತ ಬಹುಪಾಲು ಕಡಿಮೆಯಾಗಿಬಿಟ್ಟಿದೆ..

ಹಾಗೆ ನೋಡಿದರೆ ಕೊರಿಯಾದಲ್ಲಿ ಲಾಕ್‌ಡೌನ್‌ ಕೂಡ ಮಾಡಿಲ್ಲ. ಬದಲಿಗೆ ಅವರು ಚುನಾವಣೆಗೆ ತಯಾರಾಗುತ್ತಿದ್ದಾರೆ.

ನಮಗಿಂತ ಬಡವಾಗಿರುವ ಈ ಪೂರ್ವದ ದೇಶಗಳು ಅದರಲ್ಲೂ ವಿಶೇಷವಾಗಿ ಕೊರಿಯಾ ಮಾಡಿದ್ದೇನು ಮತ್ತು ನಾವು ಮಾಡದೆ ಇರುವುದೇನು?

ಈ ಪ್ರಶ್ನೆಯನ್ನು ಹಾಕಿಕೊಂಡರೆ ಇಂದು ನಮ್ಮ ದೇಶಕ್ಕೆ ಬೇಕಿರುವ ಉತ್ತರವೂ ಸಿಗುತ್ತದೆ. ಅದರ ಬದಲಾಗಿ ನಮ್ಮ ಸುಳ್ಳುಗಳಿಗೆ ನಾವೇ ಬಲಿಯಾಗುತ್ತಾ ಹೋದರೆ ಯಾರು ನಮ್ಮನ್ನು ಕಾಪಾಡಲಾರರು.

ಮೊದಲಿಗೆ ಈಗಾಗಲೇ ಸಾಬೀತಾಗಿರುವಂತೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಈಗಿರುವುದಕ್ಕಿಂತ ಎಷ್ಟೋ ಪಾಲು ಹೆಚ್ಚಿರುವ ಸಾಧ್ಯತೆ ಜಾಸ್ತಿ. ಏಕೆಂದರೆ ಪರೀಕ್ಷೆಗಳು ಹೆಚ್ಚಾಗಿ ನಡೆದರೆ ಸೋಂಕಿತರ ಸಂಖ್ಯೆಯು ಹೆಚ್ಚಗುತ್ತದೆ. ಇಡೀ ಜಗತ್ತಿನಲ್ಲೇ ಭಾರತದಲ್ಲಿ ಅತ್ಯಂತ ಕಡಿಮೆ ಪರೀಕ್ಷೆಗಳು ನಡೆಯುತ್ತವೆ.

ಉದಾಹರಣೆಗೆ ಅಮೇರಿಕಾದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ 8000 ಜನರಿಗೆ, ಇಟಲಿಯಲ್ಲಿ 17000 ಜನರಿಗೆ, ದ . ಕೊರಿಯಾದಲ್ಲಿ 6000 ಜನರಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದೆ ಪ್ರಮಾಣವು ಯೂರೋಪಿನ ಇತರ ದೇಶಗಳಲ್ಲೂ ನಡೆಯುತ್ತದೆ. ಆ ದೇಶಗಳಲ್ಲಿ ಸೋಂಕು ಪತ್ತೆ ಹೆಚ್ಚಗಿರುವುದಕ್ಕೂ ಇದೆ ಕಾರಣ .

ಆದರೆ ನಮ್ಮ ದೇಶದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ ಕೇವಲ 160 ಪರೀಕ್ಷೆಗಳುನಡೆಯುತ್ತವೆ. (ಅದು ಕೂಡ ವಿಶೇಷವಾಗಿ ತಬ್ಲಿಘಿ ಕೇಂದ್ರಿತ ಪ್ರದೇಶಗಳಲ್ಲಿ ಪರೀಕ್ಷೆ ನಡೆಸಲು ಇರುವ ಉತ್ಸಾಹ ಇತರೆಡೆ ನಡೆಸಲು ಇರುವುದಿಲ್ಲ). ಆದ್ದರಿಂದ ಭಾರತದಲ್ಲಿ ಸೋಂಕಿತರ ಸಂಖ್ಯೆ ಎಷ್ಟೋ ಪಾಲು ಹೆಚ್ಚಿರುವ ಸಾಧ್ಯತೆ ಇದೆ.

– ಎರಡನೆಯದಾಗಿ ಸಕಲ ಸಮಸ್ಯೆಗಳಿಗೂ ಲಾಕ್‌ಡೌನ್‌ ಉತ್ತರವಾಗಲಾರದು. ಲಾಕ್‌ಡೌನ್‌ ಸಂದರ್ಭವನ್ನು ಬಳಸಿಕೊಂಡು ಅತಿ ಹೆಚ್ಚು ಟೆಸ್ಟ್‌ಗಳನ್ನು ನಡೆಸಿ, ಸೋಂಕಿತರನ್ನ ಬೇರ್ಪಡಿಸಿ ಕ್ವಾರಂಟೈನ್ ಮಾಡಿ ಆರೈಕೆ ಮಾಡುವ ಸಿದ್ದತೆಯನ್ನು ಮಾಡಿಕೊಳ್ಳಬೇಕು. ಅದಕ್ಕೆ ಮುಂಚೆ ಸೋಂಕಿನ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ವೈದ್ಯಕೀಯ ಸಿದ್ಧತೆಗಳನ್ನು ಅಂದರೆ ಪರೀಕ್ಷಾ ಕಿಟ್, ಆಸ್ಪತ್ರೆ, ಪಿಪಿಇ ಗಳನ್ನು ಒಟ್ಟು ಮಾಡಿಕೊಳ್ಳಬೇಕು.

ಆದರೆ ಮೋದಿ ಸರ್ಕಾರ ಮಾಡಿದ್ದೆ ಬೇರೆ!

ವಿಶ್ವ ಆರೋಗ್ಯ ಸಂಸ್ಥೆ ಜನವರಿ 30ಕ್ಕೆ ಅಂದರೆ ಭಾರತದಲ್ಲಿ ಮೊದಲ ಪ್ರಕರಣ ಪತ್ತೆಯಾದಾಗಲೇ ಕೋವಿಡ್ ಅನ್ನು “ಜಾಗತಿಕ ಆರೋಗ್ಯ ತುರ್ತು ಸ್ಥಿತಿ”ಯೆಂದು ಘೋಷಿಸಿತ್ತು. ಹಾಗು ಮಾರ್ಚ್ 13ಕ್ಕೆ “ಜಾಗತಿಕ ಸಾಂಕ್ರಾಮಿಕ” ಎಂದು ಅದನ್ನು ಅಪಡೇಟ್ ಮಾಡಿತು.

ಆದರೆ ಭಾರತವು ಮಾರ್ಚ್ 13ರ ವೇಳೆಗೂ, ಆ ವೇಳೆಗಾಗಲೇ 83 ಸೋಂಕಿತರು ಪತ್ತೆಯಾಗಿದ್ದರು ಆರೋಗ್ಯ ತುರ್ತಿಸ್ಥಿತಿಯಲ್ಲವೆಂದೇ ಪರಿಗಣಿಸಿತ್ತು. ಹೀಗಾಗಿ ತನಗೆ ಬೇಕಾಗುವ ವೈದ್ಯಕೀಯ ಅಗತ್ಯಗಳನ್ನು ಸಂಗ್ರಹಿಸಿಕೊಳ್ಳುವುದರಲ್ಲಿ ಅತ್ಯಂತ ಬೇಜವಾಬ್ದಾರಿ ಮಾಡಿತು.

ತನಗೆ ಬೇಕಿರುವ ಕಿಟ್ ಹಾಗು ಪಿಪಿಇ ಗಳಿಗಾಗಿ ಅದು ಮೊದಲ ಆರ್ಡರ್ ಮುಂದಿಟ್ಟಿದ್ದೆ ಮಾರ್ಚ್ 7ಕ್ಕೆ. ಮಾರ್ಚ್ 30ಕ್ಕೆ ಚೀನಾ ನಮಗೆ ಕೊಡುಗೆಯಾಗಿ ಕೊಟ್ಟ ಕಿಟ್, ಮಾಸ್ಕ್ ಮತ್ತು ಪಿಪಿಐಗಳನ್ನು ದೇಶಾದ್ಯಂತ ಹಂಚಬೇಕಾಯಿತು. ಮಾರ್ಚ್ 31ರಷ್ಟು ತಡವಾಗಿ ಅಗತ್ಯವಿರುವಷ್ಟು ಪಿಪಿಇ ಮತ್ತು ಕಿಟ್ ಗಳನ್ನು ಸರಬರಾಜು ಮಾಡಲು ಚೀನಾಗೆ ಕೇಳಿದ್ದೇವೆ. ಅದು ಭಾರತವನ್ನು ತಲುಪಲು ಇನ್ನು ಹತ್ತು ಹನ್ನೆರಡು ದಿನಗಳಾದರೂ ಬೇಕು.. ಒಮ್ಮೆ ಕಿಟ್‌ಗಳು ದೊರೆತು ಪರೀಕ್ಷೆಗಳು ಹೆಚ್ಚುತ್ತಿದ್ದಂತೆ ಸೋಂಕಿತರ ಸಂಖ್ಯೆಯೂ ತೀವ್ರವಾಗಿ ಹೆಚ್ಚುತ್ತದೆ.

ಇದು ಸರ್ಕಾರದ ಬೇಜವಾಬ್ದಾರಿತನವಲ್ಲದೆ ಬೇರೇನೂ ಅಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ದ . ಕೊರಿಯಾ ತಮ್ಮ ದೇಶದಲ್ಲಿ ಫೆಬ್ರವರಿಯ ಮೊದಲ ಭಾಗದಲ್ಲಿ 31ನೇ ಪ್ರಕರಣ ಪತ್ತೆಯಾದೊಡನೆಯೇ ವಿಶೇಷವಾದ ಪರೀಕ್ಷೆಗಳನ್ನೂ ನಡೆಸಿ, ತೀವ್ರವಾದ ಪರೀಕ್ಷೆ, ಪತ್ತೆ, ಬೇರ್ಪಡಿಕೆ, ಆರೈಕೆಗಳೆಂಬ ಕ್ರಮಗಳನ್ನು ಕೈಗೊಂಡಿತು. ಈವರೆಗೆ ಆ ದೇಶದಲ್ಲಿ ನಮ್ಮ ದೇಶದಲ್ಲಿ ನಡೆಯುತ್ತಿರುವ ಲಾಕ್‌ಡೌನ್‌ ಆಗಿಲ್ಲ.

– ಇವೆಲ್ಲಕ್ಕಿಂತ ಹೆಚ್ಚಾಗಿ ಮೋದಿ ಸರ್ಕಾರ ಮಾಡಿದ ಮತ್ತೊಂದು ದೊಡ್ಡ ಬೇಜವಾಬ್ದಾರಿ ಒಂದಿದೆ.

ಭಾರತದಲ್ಲಿ ಮೊದಲ ಪ್ರಕರಣ ಪತ್ತೆಯಾದದ್ದು ಜನವರಿ 30ರಂದು. ಫೆಬ್ರವರಿ 14ರಂದು ಭಾರತವು ಚೀನಾ, ಥೈಲೆಂಡ್, ಹಾಂಕಾಂಗ್, ವಿಯೆತ್ನಾಮ್ , ನೇಪಾಳ ಮತ್ತು ಸಿಂಗಪುರ ದೇಶಗಳಿಂದ ಬಂದ ಪ್ರಯಾಣಿಕರನ್ನು ಮಾತ್ರ ಸ್ಕ್ರೀನಿಂಗ್ ಮಾಡಲು ಪ್ರಾರಂಭಿಸಿತು. ಆದರೆ ಆ ದೇಶಗಳಲ್ಲಿ ಆಗ ಸೋಂಕಿತರ ಸಂಖ್ಯೆ 50 ನ್ನು ದಾಟಿರಲಿಲ್ಲ.ನೇಪಾಳದಲ್ಲಂತೂ ಕೇವಲ ಒಬ್ಬರು ಪತ್ತೆಯಾಗಿದ್ದರು. ಈಗಲೂ ಅಲ್ಲಿ ಸೋಂಕಿತರ ಸಂಖ್ಯೆ 16ದಾಟಿಲ್ಲ. ಆದರೂ ಅಲ್ಲಿಂದ ಬರುವವರನ್ನು ಸ್ಕ್ರೀನಿಂಗ್ ಮಾಡಲಾಯಿತು. ಒಳ್ಳೆಯದೇ.

ಮಾರ್ಚ್ 7 ರಿಂದ ಈ ದೇಶಗಳ ಮತ್ತು ಇನ್ನು ಕೆಲವು ದೇಶಗಳಿಂದ ಬರುವ ಪ್ರಯಾಣಿಕರನ್ನು ಟೆಸ್ಟಿಂಗ್ ಮತ್ತು ಕ್ವಾರಂಟೈನ್‌ಗೆ ಗುರಿಪಡಿಸಿತು. ಅದರಲ್ಲೂ ತಪ್ಪಿಲ್ಲ. ಆದರೆ ಆ ಸಮಯದಲ್ಲೂ ಈ ವರ್ಗದ ದೇಶಗಳಲ್ಲಿ ಸೋಂಕಿತರ ಪ್ರಮಾಣ 500 ದಾಟಿರಲಿಲ್ಲ.

ಆದರೆ ಫೆ. 24ರಂದು ಅಮೇರಿಕದ ಟ್ರಾಂಪ್ ಭಾರತಕ್ಕೆ ಬಂದಾಗ ಅಲ್ಲಿ ಆ ವೇಳೆಗಾಗಲೇ 53 ಸೋಂಕಿತರು ಪತ್ತೆಯಾಗಿದ್ದರು. ಮಾರ್ಚ್ 7ರ ವೇಳೆಗೆ ಅಮೇರಿಕಾದಲ್ಲಿ ಸೋಂಕಿತರ ಸಂಖ್ಯೆ 500 ದಾಟಿತ್ತು. ಹಾಗು ಅಂತಿಮವಾಗಿ ಮಾರ್ಚ್ 19 ರಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನು ಭಾರತವು ಸಂಪೂರ್ಣ ಬಂದ್ ಮಾಡುವ ವೇಳೆಗೆ ಅಮೇರಿಕಾದಲ್ಲಿ ಸೋಂಕಿತರ ಸಂಖ್ಯೆ 55,000 ದಾಟಿಬಿಟ್ಟಿತ್ತು.

ಆದರೂ ಭಾರತವು ಇತರ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಅಮೆರಿಕಕ್ಕಿಂತ ಕಡಿಮೆ ಇದ್ದರು ಅಲ್ಲಿಂದ ಬಂದ ಪ್ರಯಾಣಿಕರನ್ನು ಟೆಸ್ಟಿಗೆ ಗುರಿ ಮಾಡಿದ ರೀತಿಯಲ್ಲಿ ಅಮೇರಿಕಾದ ಅಥವಾ ಯೂರೋಪಿನ ಇತರ ದೇಶಗಳ ಪ್ರಯಾಣಿಕರನ್ನು ಪ್ರಾರಂಭದಲ್ಲಿ ಟೆಸ್ಟಿಂಗ್‌ ಇರಲಿ, ಸ್ಕ್ರೀನಿಂಗಿಗೂ ಒಳಪಡಿಸಲಿಲ್ಲ.

ಇಂದು ಭಾರತ ಸರ್ಕಾರದ ಅಂಕಿಅಂಶದ ಪ್ರಕಾರ ಜನವರಿ ಮಧ್ಯದಿಂದ ಮಾರ್ಚ್ 24ರ ತನಕ ಭಾರತಕ್ಕೆ ವಿದೇಶದಿಂದ 15 ಲಕ್ಷ ಜನ ಪ್ರಯಾಣ ಮಾಡಿದ್ದಾರೆ. ಅಂತರರಾಷ್ಟ್ರೀಯ ವೈಮಾನಿಕ ಟ್ರಾಫಿಕ್ ಅಂಕಿಅಂಶಗಳ ಪ್ರಕಾರ ಅದರಲ್ಲಿ ಶೇ. 20ರಷ್ಟು ಜನ ಅಮೆರಿಕದಿಂದ ಭಾರತಕ್ಕೆ ಬಂದವರೆ ಆಗಿರುತ್ತಾರೆ..

ಅಂದರೆ ಕೊರೋನಾ ಅವಧಿಯಲ್ಲಿ ಅಮೆರಿಕದಿಂದ ಭಾರತಕ್ಕೆ ಬಂದ ಅಂದಾಜು 3 ಲಕ್ಷ ಜನರಿಗೆ ಭಾರತವು ಟೆಸ್ಟ್ ಮಾಡುವುದಿರಲಿ ಸ್ಕ್ರೀನಿಂಗ್ ಕೂಡ ಮಾಡದೆ ಒಳಬಿಟ್ಟುಕೊಂಡಿದೆ. ಅವರು ತಮ್ಮ ಇಚ್ಛಾನುಸಾರವಾಗಿ ನಗರ, ಪಟ್ಟಣಗಳಲ್ಲಿ ತಿರುಗಾಡಿಕೊಂಡಿದ್ದಾರೆ. ಇವರು ಹೆಚ್ಚಿಸಿರಬಹುದಾದ ಸೋಂಕು ತಬ್ಲಿಘಿನವರು ಹಚ್ಚಿಸಿರಬಹುದಾದ ಸೋಂಕಿಗಿಂತ ಎಷ್ಟೋ ಪಟ್ಟು ಹೆಚ್ಚಿರಲಿಕ್ಕೂ ಸಾಕು..

ಅದನ್ನು ಮುಚ್ಚಿ ಹಾಕಲೆಂದೇ ತಬ್ಲಿಘಿ ಬೇಜವಾಬ್ದಾರಿಯನ್ನು ಭೂತ ಮಾಡಿ ತೋರಿಸಲಾಗುತ್ತಿದೆ. ಮೋದಿಯವರ ಭಾಷಣದಲ್ಲೂ ಅದರ ಬಗ್ಗೆ ಒಂದು ಮಾತಿನ ಕ್ಷಮೆಯೂ ಇರುವುದಿಲ್ಲ.

ಮೋದಿ ಸರ್ಕಾರ ಮಾಡಿರುವ ಈ ಮೂರನೇ ಬೇಜವಾಬ್ದಾರಿ ಅತಿ ದೊಡ್ಡ ದೇಶದ್ರೋಹವು ಹೌದು.. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...