Homeನ್ಯಾಯ ಪಥಮೋದಿ ಯಾಕೆ ಸಂಘಪರಿವಾರಕ್ಕೆ ಬೇಡವಾದರು?: ಮೋದಿ ಜಾಗಕ್ಕೆ ಗಡ್ಕರಿ!

ಮೋದಿ ಯಾಕೆ ಸಂಘಪರಿವಾರಕ್ಕೆ ಬೇಡವಾದರು?: ಮೋದಿ ಜಾಗಕ್ಕೆ ಗಡ್ಕರಿ!

- Advertisement -
- Advertisement -

ರಾಜಶೇಖರ ಅಕ್ಕಿ |

ನಮ್ಮ ಅಂಕಣಕಾರರಾದ ಎಚ್.ಎಸ್.ದೊರೆಸ್ವಾಮಿಯವರು ತಮ್ಮ `ನೂರರ ನೋಟ’ ಅಂಕಣದಲ್ಲಿ ಇಲ್ಲಿಗೆ ನಾಲ್ಕು ಸಂಚಿಕೆಗಳ ಹಿಂದೆ, ಅಂದರೆ ಈ ವರ್ಷದ ಮೊದಲ ಸಂಚಿಕೆಯಲ್ಲಿ (೦೨ ಜನವರಿ ೨೦೧೯) ಮುಖ್ಯವಾದ ಸಂಗತಿಯೊಂದನ್ನು ಪ್ರಸ್ತಾಪಿಸಿದ್ದರು. `ಮುಳುಗು ದೋಣಿ ಮೋದಿಯೂ, ನಾಜೂಕು ನಾವಿಕ ಸಂಘವೂ’ ಎಂಬ ಆ ಲೇಖನದಲ್ಲಿ ಮುಂದಿನ ಸಲ ಮೋದಿಯನ್ನು ಸಂಘ ಪರಿವಾರವೇ ಪ್ರಧಾನಿ ಅಭ್ಯರ್ಥಿಯಾಗಿ ಮಾಡುವುದಿಲ್ಲ ಎಂಬ ಸುಳಿವು ನೀಡಿದ್ದರು. ದೇಶದಲ್ಲಿ ನಡೆಯುತ್ತಿರುವ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಅದನ್ನು ದಟ್ಟವಾಗಿಯೇ ಖಾತ್ರಿಪಡಿಸುತ್ತಿವೆ.

ಮೋದಿ ಮತ್ತು ಗಡ್ಕರಿ

ಬಿಜೆಪಿ ಪಕ್ಷದೊಳಗೇ ಇದ್ದುಕೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ, ಅಮಿತ್ ಶಾರನ್ನು ಟೀಕಿಸುತ್ತಿರೋದು, ಕಾಂಗ್ರೆಸ್ಸಿನ ಇಂದಿರಾಗಾಂಧಿಯನ್ನು ಹೊಗಳುತ್ತಿರೋದು, ಸರ್ಕಾರದ ನೀತಿಗಳನ್ನು ಕಟುವಾಗಿ ವಿಮರ್ಶಿಸುತ್ತಿರುವುದೆಲ್ಲ ಕೇವಲ ಕಾಕತಾಳೀಯವಲ್ಲ. ಅದರ ಹಿಂದೆ ಆರೆಸ್ಸೆಸ್‌ನ ಪಕ್ಕಾ ಲೆಕ್ಕಾಚಾರವಿದೆ. ಬಿಜೆಪಿ ಅಂದ್ರೆ ಮೋ-ಶಾ ಜೋಡಿ ಮಾತ್ರ ಎನ್ನುವಂತಿದ್ದ ಪಕ್ಷದೊಳಗೆ ಈಗ ಎಲ್ಲವೂ ಮೊದಲಿನಂತಿಲ್ಲ. ಸಂಘ ಪರಿವಾರ ಮೋದಿಗೆ ಎದುರಾಗಿ ನಿತಿನ್ ಗಡ್ಕರಿಯನ್ನು ಹೊಸ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುತ್ತಿರೋದು ರಹಸ್ಯವಾಗೇನೂ ಉಳಿದಿಲ್ಲ. ಲಾಭ ಮತ್ತು ನಿರ್ದಿಷ್ಟ ಲೆಕ್ಕಾಚಾರಗಳನ್ನಿಟ್ಟುಕೊಂಡೇ ಪರಿವಾರ ಈ ತೀರ್ಮಾನಕ್ಕೆ ಬಂದಿರೋದನ್ನು ಆಂತರಿಕ ಮೂಲಗಳೇ ಖಾತ್ರಿಪಡಿಸುತ್ತಿವೆ. ಅಂದಹಾಗೆ, ಈ ಪ್ರಯತ್ನ ಕಳೆದ ಎರಡು ವರ್ಷಗಳಿಂದಲೇ ಸೈಲೆಂಟಾಗಿ ಚಾಲನೆ ಪಡೆದುಕೊಂಡಿತ್ತಂತೆ. ಅದಕ್ಕೆ ಸಾಕಷ್ಟು ನಿದರ್ಶನಗಳಿವೆ.

೨೦೧೪ರಲ್ಲಿ ಗೆದ್ದು ಗದ್ದುಗೆ ಏರಿದ ತರುವಾಯ ಮೋದಿ ಮತ್ತು ಶಾ ಜೋಡಿ ಯಾವ ಪರಿ ಬಿಜೆಪಿಯನ್ನು ಆಕ್ರಮಿಸಿಕೊಂಡಿತೆಂದರೆ ಆ ಪಕ್ಷದ ವೃದ್ಧ ರಾಜಕಾರಣಿ ಕಂ ರಥಯಾತ್ರಿ ಅಡ್ವಾಣಿಯವರನ್ನೇ ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಯ್ತು. ವಯಸ್ಸಿನ ನೆಪ ಕೊಟ್ಟು ಮಾರ್ಗದರ್ಶಕ ಮಂಡಳಿ ಅನ್ನೇ ಬೋರ್ಡು ತಗುಲುಹಾಕಿ, ಮೋದಿ ಮುಂದೆ ಕೈಮುಗಿದು ನಿಲ್ಲುವ ದೈನೇಸಿ ಸ್ಥಿತಿಗೆ ಅವರನ್ನು ತರಲಾಯ್ತು. ಇದು ಕಟ್ಟರ್ ಬಿಜೆಪಿಗಳಿಗೇ, ಆರೆಸ್ಸಿಸಿಗರಿಗೇ ಇಷ್ಟವಿಲ್ಲದಿದ್ದರೂ ಮೋದಿ ಜನಪ್ರಿಯತೆ ಮುಂದೆ ಸುಮ್ಮನಿರುವಂತೆ ಮಾಡಿತ್ತು. ಕೊನೆಗೆ ರಾಷ್ಟ್ರಪತಿ ಆಯ್ಕೆ ಸಂದರ್ಭದಲ್ಲಿ ಅಡ್ವಾಣಿ ಹೆಸರು ಬಂದಾಗಲೂ ಅಯೋಧ್ಯೆ ವಿವಾದಕ್ಕೆ ಮರುಜೀವ ನೀಡಿ ಶಾಶ್ವತವಾಗಿ ಅವರ ರಾಜಕಾರಣಕ್ಕೆ ಮಂಗಳ ಹಾಡಿದ್ದು ಖಂಡಿತವಾಗಲೂ ಕಾಕತಾಳೀಯ ಅಲ್ಲ.

ಮೋದಿ ಎದುರು ಅಡ್ವಾಣಿಯ ದೈನೇಸಿ ಸ್ಥಿತಿ

ಒಂದಾದ ಮೇಲೊಂದು ವಿಧಾನಸಭಾ ಚುನಾವಣೆಗಳನ್ನು ಗೆಲ್ಲುತ್ತಾ ಬಂದ ಮೋದಿ ಅಹಮ್ಮಿಕೆ ಯಾವ ಮಟ್ಟ ತಲುಪಿತೆಂದರೆ ಬಿಜೆಪಿಯ ಮಾತು ಒತ್ತಟ್ಟಿಗಿರಲಿ ಮಾತೃಸಂಸ್ಥೆ ಆರೆಸ್ಸೆಸ್ಸನ್ನೇ ನಿಯಂತ್ರಿಸುವ ಸಾಹಸಕ್ಕೂ ಕೈಹಾಕಿಬಿಟ್ಟರು. ಆರೆಸ್ಸೆಸ್ ಕಳವಳಗೊಂಡದ್ದೇ ಆಗ. ಬಿಜೆಪಿಗೆ ಬ್ರಾಹ್ಮಣ್ಯವಾದವೇ ಮೂಲ ಅಜೆಂಡಾವಾದರು ಅದೊಂದು ಪೊಲಿಟಿಕಲ್ ಪಾರ್ಟಿ. ಏನಿಲ್ಲವೆಂದರು ಕಡೇಪಕ್ಷ Political gain ಕಾರಣಕ್ಕಾದರು ಅಲ್ಲಿಗೆ ಬ್ರಾಹ್ಮಣೇತರರಿಗೆ ಮಣೆ ಹಾಕಲೇಬೇಕು, ಅದು ಅನಿವಾರ್ಯ ಕೂಡಾ. ಆದರೆ ಆರೆಸ್ಸೆಸ್ ಹಾಗಲ್ಲ. ಅಲ್ಲಿ ಪಕ್ಕಾ ಬ್ರಾಹ್ಮಣರ ಪಾಳೆಗಾರಿಕೆ. ಬ್ರಾಹ್ಮಣೇತರರು ಆರೆಸೆಸ್‌ನ ಉನ್ನತ ಹುದ್ದೆಗೇರಿದ ನಿದರ್ಶನವೇ ಅಲ್ಲಿಲ್ಲ. ಶೂದ್ರರು ಏನಿದ್ದರು ಬಳಕೆಯ ಮಟ್ಟಕ್ಕಷ್ಟೆ ಸೀಮಿತ. ನಿಯಂತ್ರಕರೇನಿದ್ದರು ಬ್ರಾಹ್ಮಣರೆ. ಅಂತದ್ದರಲ್ಲಿ ಬ್ರಾಹ್ಮಣನಲ್ಲದ ಶೂದ್ರ ಸಮುದಾಯದ ಮೋದಿ ಆರೆಸೆಸ್ಸನ್ನೇ ನಿಯಂತ್ರಿಸುವಷ್ಟರ ಮಟ್ಟಿಗೆ ಬೆಳೆಯುತ್ತಿರೋದನ್ನು ಅದು ಹೇಗೆ ತಾನೆ ನೋಡಿಕೊಂಡು ಸುಮ್ಮನೆ ಕೂತೀತು. ಮೋದಿ ಕೇವಲ ತನ್ನ ಪ್ರಭಾವದ ಮೂಲಕ ಮಾತ್ರವಲ್ಲ ತಾಂತ್ರಿಕವಾಗಿಯೂ ಆರೆಸ್ಸೆಸ್ ಅನ್ನು ತನ್ನ ಕಬ್ಜಾ ಮಾಡಿಕೊಳ್ಳಲು ಮುಂದಾದದ್ದು, ಆರೆಸೆಸ್ ಸರಸಂಘಚಾಲಕ ಆಯ್ಕೆಯ ಮೂಲಕ. ಕಳೆದ ವರ್ಷ ಮಾರ್ಚಿಯಲ್ಲಿ ಆರೆಸೆಸ್‌ನ ಸರಸಂಘಚಾಲಕರಾದ ಭೈಯ್ಯಾಜಿ ಜೋಷಿ ಅವರ ಕಾರ್ಯಾವಧಿ ಮುಗಿಯಲಿತ್ತು. ದತ್ತಾಜಿ ಹೊಸಬಾಳೆ ಎನ್ನುವವರನ್ನು ಸರಸಂಘಚಾಲಕರಾಗಿ ನೇಮಕ ಮಾಡಲು ಸ್ವತಃ ಮೋದಿಯೇ ಮುತುವರ್ಜಿವಹಿಸಿ ಕಾರ್ಯಾಚರಣೆಗಿಳಿದಿದ್ದರು. ಯಾಕೆಂದರೆ ಹೊಸಬಾಳೆ ಮೋದಿ ಬಳಗದ ಅತ್ಯಾಪ್ತ ವ್ಯಕ್ತಿಯಾಗಿದ್ದರು. ಹೆಚ್ಚೂಕಮ್ಮಿ ಅವರ ಆಯ್ಕೆ ಫೈನಲ್ ಆಗಿಹೋಗಿತ್ತು. ಹಾಗೇನಾದರು ಆದರೆ, ಈಗ ಬಿಜೆಪಿ ಪಕ್ಷವನ್ನು ತಮ್ಮ ಸುಪರ್ದಿಗೆ ಪಡೆದಿರುವಂತೆ ನಾಳೆ ಇಡೀ ಆರೆಸೆಸ್ ಪಾಳೆಯಪಟ್ಟನ್ನೇ ಮೋದಿ ತನ್ನ ಮುಷ್ಠಿಯಲ್ಲಿ ಇಟ್ಟುಕೊಳ್ಳುತ್ತಾರೆ ಎಂಬ ತರ್ಕಕ್ಕೆ ಬಿದ್ದ ಸಂಘ ಕೊನೇ ಘಳಿಗೆಯಲ್ಲಿ ಭೈಯ್ಯಾಜಿ ಜೋಷಿ ಅವರ ಕಾರ್ಯಾವಧಿಯನ್ನು ಇನ್ನೊಂದು ಟರ್ಮಿಗೆ ವಿಸ್ತರಿಸಿತು. ಅಷ್ಟಲ್ಲದೆ, ಮೋದಿಯವರ ಆತ್ಮೀಯ ದತ್ತಾಜಿ ಹೊಸಬಳೆ ಅವರನ್ನು ಅರೆಸೆಸ್‌ನಲ್ಲಿ ಮೂಲೆಗುಂಪಾಗಿಸಲಾಗಿದೆ. ಅರೆಸೆಸ್‌ನಲ್ಲಿ ಹಸ್ತಕ್ಷೇಪ ಮಾಡಿ, ಹೊಸಬಾಳೆಯವರನ್ನು ಮುಖ್ಯಸ್ಥನನ್ನಾಗಿಸಿ ಆರೆಸೆಸ್ ಅನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆನ್ನುವ ಮೋದಿಯ ಹುನ್ನಾರಕ್ಕೆ ಕೊಟ್ಟ ಉತ್ತರ ಇದು. ಆದಾಗ್ಯೂ ಚಿನ್ನದ ಮೊಟ್ಟೆಯಿಡುವ ಕೋಳಿಯಂತಿದ್ದ ಮೋದಿಯನ್ನು ಅದು ಸಹಿಸಿಕೊಂಡೇ ಬಂತು, ಒಳ್ಳೆಯ ಸಮಯಕ್ಕಾಗಿ ಕಾಯುತ್ತಾ!

ಅಂತಹ ಸಮಯ ಇದೀಗ ಒದಗಿಬಂದಿರೋದು ಖಾತ್ರಿಯಾಗುತ್ತಿದ್ದಂತೆಯೇ ಮೋದಿಯ ಹುಳುಕುಗಳನ್ನಿಟ್ಟುಕೊಂಡೇ ತನ್ನ ಆಟ ಶುರು ಮಾಡಿದೆ. ನೋ ಡೌಟ್, ಬೇರಾವ ರಾಜಕಾರಣಿಗೆ ಹೋಲಿಸಿದರೂ ರಾಷ್ಟ್ರಮಟ್ಟದಲ್ಲಿ ಮೋದಿಯೇ ಜನಪ್ರಿಯ ರಾಜಕಾರಣಿ. ಆದರೆ ಆ ಜನಪ್ರಿಯತೆ ೨೦೧೪ರಲ್ಲಿ ಇದ್ದಷ್ಟು ಇಲ್ಲವೆನ್ನುವುದೂ ವಾಸ್ತವ. ೨೦೧೯ರ ಎಂಪಿ ಎಲೆಕ್ಷನ್‌ಗೆ ಮೈಲಿಗಲ್ಲು ಎಂದು ಹೇಳಲಾಗುವ ಪ್ರಮುಖ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರುವುದೇ ಇದಕ್ಕೆ ಸಾಕ್ಷಿ. ಜನರೀಗ ಮೋದಿಯಿಂದ ದೂರ ಸರಿಯುತ್ತಿದ್ದಾರೆ. ಅದಕ್ಕೆ ಕಾರಣವೂ ಮೋದಿಯೇ ಹೊರತು ಮತ್ತ್ಯಾರು ಅಲ್ಲ. ಅಧಿಕಾರಕ್ಕೇರುವ ಧಾವಂತದಲ್ಲಿ ಸಾಧ್ಯಾಸಾಧ್ಯತೆಯನ್ನು ಯೋಚಿಸದೆ ಬಾಯಿಗೆ ಬಂದಂತೆ ಹರಿಬಿಟ್ಟ ಯಾವ ಆಶ್ವಾಸನೆಯನ್ನೂ ಮೋದಿ ಈಡೇರಿಸಲಿಲ್ಲ. `ಅಚ್ಚೇ ದಿನ್’ ಅಪಹಾಸ್ಯಕ್ಕೀಡಾಗಿದ್ದರೆ, ೧೫ ಲಕ್ಷದ ಸುಳಿವೇ ಇಲ್ಲ. ಇನ್ನು ಭ್ರಷ್ಟಮುಕ್ತ ಆಡಳಿತ ಕೊಡುತ್ತೇನೆ ಎಂದಿದ್ದ ಮೋದಿಗೆ ರಾಫೇಲ್ ಹಗರಣ ದೊಡ್ಡ ಹಿನ್ನಡೆ ಉಂಟುಮಾಡಿದೆ. ಕೃಷಿ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆಗಳನ್ನು ಕಡಿಮೆ ಮಾಡುವ ಬದಲು ತಮ್ಮ ಅಳತೆಗಿಟ್ಟ ಆರ್ಥಿಕ ನೀತಿಗಳಿಂದ ದುಪ್ಪಟ್ಟು ಮಾಡಿಟ್ಟಿದ್ದಾರೆ. ಇನ್ನು ಅವರು ಜಾರಿಗೆ ತಂದ ಹೊಸ ಯೋಜನೆಗಳೂ ಫೇಲಾದವು. ೫೯ ನಿಮಿಷದಲ್ಲಿ ಸಿಗುವ ಸಾಲ, ಮೋದಿಕೇರ್, ಸ್ವಚ್ಛ ಭಾರತ, ಮೇಕ್‌ಇನ್ ಇಂಡಿಯಾ, ಸ್ಟಾರ್ಟಅಪ್ ಇಂಡಿಯಾ, ಇಂತಹ ಅನೇಕವು. ಎಲ್ಲವೂ ಠುಸ್ಸೆಂದವು. ನೋಟು ರದ್ದತಿ, ಅದರಿಂದ ಬರಬೇಕಾದ ಕಪ್ಪುಹಣ, ಬರಲಿಲ್ಲ. ಅವರ ನೀತಿಗಳು ಫ್ಲಾಪ್ ಆದವು.

ಇವೆಲ್ಲ ಆಡಳಿತಗಾರನಾಗಿ ಮೋದಿಯನ್ನು ವೈಫಲ್ಯದತ್ತ ತಳ್ಳಿದರೆ, ಇನ್ನು ಅವರ ಐಡಿಯಾಲಜಿಗಳು ಮೋದಿಯನ್ನು ಜನರಿಂದ ಮತ್ತಷ್ಟು ದೂರ ಸರಿಸಿದವು. ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯ ಓಲೈಕೆ ರಾಜಕಾರಣದಿಂದ ಬೇಸತ್ತಿದ್ದ ಜನ ಮೋದಿಯ ಬಲಪಂಥವನ್ನು ೨೦೧೪ರಲ್ಲಿ ಒಪ್ಪಿಕೊಂಡಿದ್ದರಾದರು ಅದು ಇಷ್ಟು ಭೀಕರ ರೂಪದಲ್ಲಿ ಜಾರಿಗೆ ಬಂದದ್ದನ್ನು ಸಹಿಸಿಕೊಳ್ಳುವ ಮನಸ್ಥಿತಿ ಭಾರತದ್ದಾಗಿರಲಿಲ್ಲ. ಯೋಗಿ ಆದಿತ್ಯನಾಥರಂತಹ ವ್ಯಕ್ತಿಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿಸಿದ್ದು, ನಗರಗಳ ಹೆಸರುಗಳನ್ನು ಬದಲಾಯಿಸಿದ್ದು, ಗೋಮಾತೆಯ ರಾಜಕೀಯ, ಗೋವಿನ ಹೆಸರಿನಲ್ಲಿ ಆದ ಕೊಲೆಗಳು, ಪ್ರಗತಿಪರರ ಹತ್ಯೆಗಳು, ಆ ವಿಚಾರದಲ್ಲಿ ಮೋದಿಯ ಮೌನದ ಹುನ್ನಾರಗಳೆಲ್ಲವು ಮೋದಿ ಒಬ್ಬ ಹಿಂಸಾವಾದಿಯೆಂಬಂತೆ ಬಿಂಬಿಸಿದವು. ಮೋದಿಯನ್ನು ಬೆಂಬಲಿಸಿದ ಅನೇಕರು ಈ ಎಲ್ಲ ಕಾರಣಗಳಿಂದ ದೂರ ಸರಿಯಲಾರಂಭಿಸಿದರು. ಮೋದಿ ತನ್ನ ಜನಪ್ರಿಯತೆಯನ್ನು ಇನ್ನಷ್ಟು ಕಳೆದುಕೊಂಡರು.

ಇದೆಲ್ಲವೂ ಸಂಘ ಪರಿವಾರಕ್ಕೆ ಗೊತ್ತಿದ್ದರೂ ಅದು ಮೋದಿ ವಿರುದ್ಧ ಕಾರ್ಯಾಚರಣೆಗಿಳಿದಿರಲಿಲ್ಲ. ಏಕೆಂದರೆ ಜನರ ನಡುವೆ ಮೋದಿಯ ಜನಪ್ರಿಯತೆ ಕುಸಿಯುತ್ತಿದ್ದರೂ ಅದು ಪೊಲಿಟಿಕಲ್ ಇಂಪ್ಯಾಕ್ಟ್ ಆಗಿ ಬದಲಾಗಬಲ್ಲದೆ ಎಂಬುದಕ್ಕೆ ಒಂದು ಸರ್ಟಿಫಿಕೇಷನ್ ಬೇಕಾಗಿತ್ತು. ಪಂಚ ರಾಜ್ಯ ಚುನಾವಣೆಗಳು ಅದನ್ನು ಸಾಬೀತು ಮಾಡಿದವು. ಆಗಿನಿಂದ ತೆರೆಮರೆಯಲ್ಲಿ ನಡೆಸುತ್ತಿದ್ದ ಕಸರತ್ತುಗಳನ್ನು ಆರೆಸ್ಸೆಸ್ ಬಹಿರಂಗವಾಗೇ ಪ್ರಚಾರಕ್ಕೆ ತಂದಿತ್ತು. ಅದರ ಭಾಗವಾಗಿಯೇ ಗಡ್ಕರಿ ಮೋದಿ-ಶಾ ವಿರುದ್ಧವೇ ದನಿ ಬಿಚ್ಚಲು ಶುರು ಮಾಡಿದ್ದು.

ಬಿಜೆಪಿಯೊಳಗೆ ಈಗ ಸ್ಪಷ್ಟವಾಗಿ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ‘ಚುನಾವಣೆಗಳನ್ನು ಗೆದ್ದಾಗ ಎಲ್ಲಾ ಕ್ರಡಿಟ್ ತೆಗೆದುಕೊಳ್ಳುತ್ತಾರೆ, ಸೋತಾಗಲೂ ಅದರ ಹೊಣೆ ಹೊರಬೇಕಲ್ಲವೇ?’ ಎಂದು ನಿತಿನ್ ಗಡ್ಕರಿ ಐದು ರಾಜ್ಯಗಳಲ್ಲಿ ಬಿಜೆಪಿ ಸೋತಾಗ ಹೇಳಿದ್ದು ಮೋದಿ-ಶಾರನ್ನು ಉದ್ದೇಶಿಸಿಯೇ. ಇನ್ನು ಮೋದಿ ಟೀಮಿನ ಲೆಕ್ಕದಯ್ಯ ಅರುಣ್ ಜೇಟ್ಲಿ ‘ಬರೀ ಘೋಷಣೆಗಳು ಜನರ ಆಕಾಂಕ್ಷೆಗಳನ್ನು ತಣಿಸುವುದಿಲ್ಲ, ನೀತಿಗಳು ಆ ಕೆಲಸ ಮಾಡುತ್ತವೆ’ ಎಂದಿದ್ದು ಮೋದಿಯನ್ನು ತಿವಿಯುವುದಕ್ಕೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಅಚ್ಛೆ ದಿನ್ ಆಯೇಂಗೆ, ಮೇಕ್ ಇನ್ ಇಂಡಿಯಾ, ಅದು ಇದು ಹೇಳಿ ಜನರನ್ನು ಮರಳು ಮಾಡಲಾಗುವುದಿಲ್ಲ. ಪ್ರಾರಂಭದಲ್ಲಿ ಜನರಿಗೆ ಇಷ್ಟ ಆಗಬಹುದು, ಒಂದು ದಿನ, ಒಂದು ತಿಂಗಳು ಅಥವಾ ಒಂದು ವರ್ಷ ಜನರು ಘೋಷಣೆಗಳನ್ನು ಕೇಳಿ ಸಂತೋಷ ಪಡಬಹುದು (ಹೀಗೆ ಆಯಿತು ಕೂಡ), ಆಮೇಲೆ? ಏನಾಯಿತು ಎಂದು ಕೇಳುತ್ತಾರೆ. ಇದು ಅರುಣ್ ಜೇಟ್ಲಿ ಮಾತಿನ ತಿವಿತದ ವಿಶ್ಲೇಷಣೆ. ಇನ್ನು ಸುಷ್ಮಾ ಸ್ವರಾಜ್ ರಾಜಕೀಯದಿಂದ ಸುಮ್ಮನಾಗಿದ್ದಾದೂ ಅವರ ಒಲವು ಯಾವಕಡೆ ಇದೆ ಎಂದು ಎಲ್ಲರಿಗೂ ಗೊತ್ತು. ಇನ್ನೊಬ್ಬ ಪ್ರಮುಖ ವ್ಯಕ್ತಿಯಾದ ರಾಜನಾಥ ಸಿಂಗ್ ಮಾತನ್ನೇ ಆಡುತ್ತಿಲ್ಲ. ಅವರ ಮೌನ ಮಾತ್ರ ಬಹಳ ಮಾತನಾಡುತ್ತಿದೆ. ವಾಸ್ತವವೇನೆಂದರೆ, ನಿಧಾನವಾಗಿ ಇವರೆಲ್ಲರೂ ‘ನಾಯಕ’ನಿಂದ ದೂರಸರಿಯುತ್ತಿದ್ದಾರೆ. ಬಂಡಾಯದ ಬಾವುಟ ಹಾರಿಸಲು ಹೋಗಿ ಅಡ್ವಾಣಿಯಂತ ದೊಡ್ಡ ನಾಯಕರೇ ಮೂಲೆಗುಂಪಾಗಿರುವಾಗ ಇವರೆಲ್ಲ ಮೋದಿ-ಶಾ ವಿರುದ್ಧ ಮಾತಾಡುವ ಧೈರ್ಯ ತೋರುತ್ತಾರೆಂದರೆ ಅವರ ಬೆನ್ನಿಗೆ ಆರೆಸ್ಸೆಸ್ ಇದೆ ಅನ್ನೋದನ್ನು ಯಾರು ಬೇಕಾದರು ಅರ್ಥ ಮಾಡಿಕೊಳ್ಳಬಹುದು.

ಬಿಜೆಪಿಯ ಪ್ರಧಾನಮಂತ್ರಿ ಮತ್ತು ಆರ್.ಎಸ್.ಎಸ್. ಮುಖ್ಯಸ್ಥರ ಮಧ್ಯೆ ಅಧಿಕಾರಕ್ಕಾಗಿ ಇಂತಹ ಗುದ್ದಾಟ ಎಂದೂ ನಡೆದಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಆಗಿನ ಸರಸಂಘಚಾಲಕರಾದ ಸುದರ್ಶನ್ ಅವರ ಮಾತುಗಳನ್ನು ಮೀರುತ್ತಿದ್ದಿಲ್ಲ. ಆದರೆ ಮೋದಿ ಹಾಗಲ್ಲ, ನಾನು ಪ್ರಧಾನಿ, ನಿಮ್ಮ ಹಿಡಿತದಲ್ಲಿ ನಾನೇಕಿರಬೇಕು ಎನ್ನುವುದು ಮೋದಿ ಅವರ ಧೋರಣೆ. ಇದು ಆರ್.ಎಸ್.ಎಸ್. ನವರಿಗೆ ಇಷ್ಟ ಆಗತ್ತಿಲ್ಲವಂತೆ. ಅನೇಕ ಜನರಿಗೆ ಅನಿಸಿದಂತೆ ಆರ್.ಎಸ್.ಎಸ್. ಗೂ ಮೋದಿ ನೇತೃತ್ವದಲ್ಲಿ ಬಿಜೆಪಿ ಉಗ್ರವಾದವನ್ನು ಪ್ರತಿಪಾದಿಸುತ್ತಿದೆ ಎಂದು ಸ್ವತಃ ಸಂಘವೇ ಪರೋಕ್ಷವಾಗಿ ವರಾತ ಶುರುಮಾಡಿಕೊಂಡಿದೆ. ಅದೇ ಕಾರಣಕ್ಕೆ ಸರಸಂಘಚಾಲಕ ಜೋಷಿಯವರೇ ಖುದ್ದಾಗಿ ಸಭೆಯೊಂದರಲ್ಲಿ ‘ಹಿಂದುತ್ವವೆಂದರೆ, ವಿವಿಧತೆಯಲ್ಲಿ ಏಕತೆ, ಮುಸ್ಲೀಮರು ಭಾರತದಲ್ಲಿ ಬೇಡ ಎಂದರೆ ಅದು ಹಿಂದುತ್ವವಲ್ಲ, ಬೌದ್ಧಮತ ಬೇಡವೆಂದರೆ ಅದು ಹಿಂದುತ್ವವಲ್ಲ’ ಎಂದು ಹೇಳಬೇಕಾಯಿತು.

ಮೋದಿಯನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಂಘ ನಡೆಸುತ್ತಿರುವ ಪ್ರಯತ್ನ ಇದೇ ಮೊದಲನೆಯದೇನಲ್ಲ. ಈ ಹಿಂದೆ ಮೋದಿಯ ತವರು ರಾಜ್ಯ ಗುಜರಾತಿನಲ್ಲಿ ಹಾರ್ದಿಕ್ ಪಟೇಲ್ ಮೀಸಲಾತಿ ಗದ್ದಲ ಎಬ್ಬಿಸಿದಾಗ ಆರ್.ಎಸ್.ಎಸ್. ನ ಅನೇಕರು ಹಾರ್ದಿಕ್ ಪಟೇಲ್‌ಗೆ ಬೆಂಬಲಿಸಿದ್ದರು. ಸರಳ ಪದಗಳಲ್ಲಿ ಹೇಳಬೇಕೆಂದರೆ, ಆರ್.ಎಸ್.ಎಸ್.ಗೆ ಮೋದಿ ಬೇಕಾಗಿಲ್ಲ. ಆರ್.ಎಸ್.ಎಸ್. ನೊಂದಿಗೆ, ಸರಸಂಘಚಾಲಕರೊಂದಿಗೆ, ಎಲ್ಲಾ ಪದಾಧಿಕಾರಿಗಳೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿರುವ ನಿತಿನ್ ಗಡ್ಕರಿ ಇವೆಲ್ಲ ಕಾರಣಗಳಿಂದಾಗಿ ಮೊದಲ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ.

ಆರೆಸೆಸ್ ಈಗ ಮೋದಿಯ ಬದಲಾಗಿ ನಿತಿನ್ ಗಡ್ಕರಿ ಅವರನ್ನು ಪ್ರಧಾನಿಯಾಗಿ ನೋಡಲು ಬಯಸುತ್ತಿದೆ. ಕಿಶೋರ್ ತಿವಾರಿ ಎನ್ನುವ ಆರೆಸೆಸ್‌ನ ರೈತನಾಯಕ, ಸಂಘದ ಹೆಡ್ಡಾಫೀಸಿಗೆ ಒಂದು ಪತ್ರ ಬರೆಯುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಧಾನಿಯಾಗಿ ನಿತಿನ್ ಗಡಕರಿ ಬರಬೇಕೆ ಹೊರತು ಮೋದಿ ಅವರಲ್ಲ ಎನ್ನುವುದು ಆ ಪತ್ರದ ಸಾರಾಂಶ. ಆ ಪತ್ರ ಬೇಕಂತಲೇ ಜನರ ನಡುವೆ ಹರಿದಾಡುವಂತೆ ಮಾಡಲಾಗುತ್ತೆ, ಮುಖ್ಯವಾಗಿ ತನ್ನ ಕಾರ್ಯಕರ್ತರ ನಡುವೆ. ತನ್ನನ್ನು ತಾನು ಒಂದು ಶಿಸ್ತಬದ್ಧ ಸಂಘಟನೆ ಎಂದು ಕರೆದುಕೊಳ್ಳುವ ಆರೆಸೆಸ್ ಇಂಥಾ ಅತಿಸೂಕ್ಷ್ಮ ಆಂತರಿಕ ಸಂಗತಿಯನ್ನು ಬಹಿರಂಗಪಡಿಸುತ್ತೆ ಅಂದರೆ ಅದಕ್ಕೆ ಅರ್ಥವೇನು? ಮೋದಿ ಈಗ ನಮ್ಮ ಆಯ್ಕೆಯಲ್ಲ ಎಂಬ ಸುದ್ದಿಗೆ ತನ್ನ ಜನರನ್ನು ನಿಧಾನಕ್ಕೆ ಅಣಿಗೊಳಿಸುವುದೇ ಆಗಿರುತ್ತೆ.

ಮೋದಿಗೆ ಹೋಲಿಸಿಕೊಂಡರೆ ನಿತಿನ್ ಗಡ್ಕರಿ ಸಂಘಕ್ಕೆ ನಿಷ್ಠ, ಮಿತ್ರಪಕ್ಷಗಳನ್ನು ಸೆಳೆಯುವ ಛಾಪೂ ಇದೆ, ಉಗ್ರ ಕೋಮುವಾದದ ಇಮೇಜು ಹೊಂದಿಲ್ಲ, ಅಹಮ್ಮು ಕಡಿಮೆ, ಪ್ರಶ್ನೆಗಳಿಗೆ ಬೆನ್ನು ತೋರಿ ಓಡುವ ಜಾಯಮಾನದವರಲ್ಲ. ದೇಶದಲ್ಲಿ ಕಾಂಗ್ರೆಸ್‌ನ ಜನಪ್ರಿಯತೆ ಹೆಚ್ಚುತ್ತಿದೆಯಾದರು ಸ್ಪಷ್ಟ ಬಹುಮತ ಪಡೆಯುವ ಲಕ್ಷಣಗಳು ಇನ್ನೂ ದಟ್ಟವಾಗಿಲ್ಲ. ಈಗಿಂದೀಗಲೇ ಎಲೆಕ್ಷನ್ ನಡೆದರೆ ಹಂಗ್ ಪಾರ್ಲಿಮೆಂಟ್ ಆಗುವ ಸಂಭವವೇ ಹೆಚ್ಚು. ಈಗಾಗಲೇ ಮೋದಿಯ ದುರಹಂಕಾರದಿಂದ ಬೇಸತ್ತು ದೂರ ಸರಿದಿರುವ ಶಿವಸೇನೆ, ಟಿಡಿಪಿಯಂತಹ ಮಿತ್ರಪಕ್ಷಗಳ ಜೊತೆ ಹೊಂದಾಣಿಕೆ ಕುದುರಿಸುವುದಕ್ಕೂ ನಿತಿನ್ ಗಡ್ಕರಿಯಂತಹ ತಟಸ್ಥ ಇಮೇಜಿನ ವ್ಯಕ್ತಿಯೇ ಸೂಕ್ತ ಎನ್ನುವ ಲೆಕ್ಕಾಚಾರದಲ್ಲಿ ಆರೆಸೆಸ್ ಗಡ್ಕರಿಯನ್ನು ಅಖಾಡಕ್ಕಿಳಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...