ಭೋರ್ಗರೆವ ಅರಬ್ಬೀಸಮುದ್ರಕ್ಕೆ ಸಮಾನಾಂತರವಾಗಿ ಹಬ್ಬಿರುವ ಹಸಿರು ಸಹ್ಯಾದ್ರಿಗಿರಿ ಶ್ರೇಣಿಯ ಮಡಿಲಲ್ಲಿರುವ ಉತ್ತರಕನ್ನಡ ಅಸಂಖ್ಯ ಜನ, ಜಾತಿ ಮತ್ತು ವೈವಿಧ್ಯಮಯ ಭಾಷೆಯ ನೆಲೆವೀಡು. ಅನನ್ಯ ಪ್ರಕೃತಿ ಸೊಬಗು ಮತ್ತು ಅಪಾರ ನೈಸರ್ಗಿಕ ಸಂಪತ್ತಿನ ಈ ಜಿಲ್ಲೆ ಭೌಗೋಳಿಕವಾಗಿಯೂ ವಿಭಿನ್ನ. ಕರಾವಳಿ, ಮಲೆನಾಡು ಮತ್ತು ಅರೆಬಯಲು ಸೀಮೆ ಪ್ರದೇಶದ ಉತ್ತರ ಕನ್ನಡದಲ್ಲಿರುವಷ್ಟು ಜಾತಿ-ಜನಾಂಗ ಹಾಗೂ ಭಾಷೆ ಬಹುಶಃ ದೇಶದ ಬೇರೆಲ್ಲಿಯೂ ಕಾಣಿಸದೆಂಬ ವಾದವೂ ಇದೆ. ಬರೋಬ್ಬರಿ ನಾಲ್ಕು ಗೋವಾ ರಾಜ್ಯಕ್ಕೆ ಸಮನಾಗಿರುವ ಉತ್ತರ ಕನ್ನಡದಲ್ಲಿ ಹದಿನೈದೂವರೆ ಲಕ್ಷದಷ್ಟು ಜನಸಂಖ್ಯೆಯಿದೆ.
ಒಂದು ಅಂದಾಜಿನಂತೆ ಶೇಕಡಾ 55.50ರಷ್ಟು ಮಂದಿಗೆ ಕನ್ನಡ ಮಾತೃಭಾಷೆ. ಕೊಂಕಣಿಯನ್ನು ಶೇ.20ರಷ್ಟು ಜನರಾಡುತ್ತಾರೆ. ಶೇ.11.83ರಷ್ಟು ಜನರದು ಉರ್ದುದಲ್ಲಿ ಸಂವಹನ ನಡೆಸುತ್ತಾರೆ. ನವಾಯಿತಿ, ತೆಲಗು, ಲಂಬಾಣಿ, ಬ್ಯಾರಿ, ಗುಜರಾತಿ ಭಾಷೆಯವರೂ ಇಲ್ಲಿದ್ದಾರೆ. ಕನ್ನಡ ಮತ್ತು ಕೊಂಕಣಿ ಎರಡು ಪ್ರಮುಖ ಭಾಷೆ. ಈ ಎರಡೂ ಭಾಷೆಯಲ್ಲಿ ವ್ಯವಹರಿಸುವ ಒಂದೊಂದು ಜಾತಿಯದು ಒಂದೊಂದು ಧ್ವನಿ-ಶೈಲಿ. ಮೇಲ್ವರ್ಗದ ಬ್ರಾಹ್ಮಣರು ಮತ್ತು ಕೊಂಕಣಿಗರು ಬಳಸುವ ಕನ್ನಡ ಹಾಗೂ ಕೊಂಕಣಿ ಶಿಷ್ಟ ಭಾಷೆ ಎನ್ನುವವರು. ಹಿಂದುಳಿದವರು-ಬುಡಕಟ್ಟು ಜನಾಂಗದವರು ಆಡುವ ಕನ್ನಡ-ಕೊಂಕಣಿಯನ್ನು ಕಚ್ಚಾ ಅಂತಾರೆ. ಇದು ಪುರೋಹಿತಶಾಹಿ ಪರಿಕಲ್ಪನೆಯ ಕುತರ್ಕ. ಒಟ್ಟಿನಲ್ಲಿ ಉತ್ತರ ಕನ್ನಡ ನಾನಾ ನಮೂನೆಯ ಕೊಂಕಣಿ-ಕನ್ನಡಕ್ಕೆ ಅದರದೇ ಆದ ಸೊಗಡು-ಪ್ರಬಲ ಸಂವಹನ ಶಕ್ತಿಯಿದೆ! ಕುಲಶಾಸ್ತ್ರೀಯ ತತ್ವವಿದೆ!!
ಕಾರವಾರ, ಜೋಯಿಡಾ, ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕಲ್ಲಿ ಪಕ್ಕದ ಗೋವಾದ ಕೊಂಕಣಿ ಪ್ರಭಾವವಿದೆ. ಇವತ್ತಿಗೂ ಜಿಲ್ಲಾಕೇಂದ್ರ ಕಾರವಾರದಲ್ಲಿ ಕೊಂಕಣಿಯೇ ಪ್ರಮುಖ ವ್ಯಾವಹಾರಿಕ ಮತ್ತು ಮನೆ ಭಾಷೆ. ಕನ್ನಡ ಅರ್ಥವಾಗದವರೂ ಇಲ್ಲಿದ್ದಾರೆ. ಜೋಯಿಡಾದ ಕಾಡು-ಮೇಡುಗಳ ಬುಡಕಟ್ಟು ಗೌಳಿ-ಕಣವಿ-ಕುಂಬ್ರಿ ಮರಾಠಿಗಳಲ್ಲಿ ಕನ್ನಡದ ಪರಿಚಯ ಇಲ್ಲದವರಿದ್ದಾರೆ. ಕನ್ನಡ ಅಭಿವೃದ್ಧಿ ಮಂಡಳಿ, ಗಡಿ ಅಭಿವೃದ್ಧಿ ಮಂಡಳಿಗಳ ಪ್ರಭೃತಿಗಳಿಂದಲೂ ಇವರಿಗೆಲ್ಲಾ ಕನ್ನಡ ಕಲಿಸಲಾಗಿಲ್ಲ ಎಂಬುದು ದೊಡ್ಡ ದುರಂತ. ಕರಾವಳಿ ಮತ್ತು ಘಟ್ಟದ ಮೇಲಿನ ಹವ್ಯಕರ ಭಾಷೆಯಲ್ಲಿ ಸಣ್ಣ ವ್ಯತ್ಯಾಸವಿದೆ. ಆದರೆ ಘಟ್ಟದ ಬ್ರಾಹ್ಮಣರ ಕನ್ನಡ, ನಾಡವರ ಕನ್ನಡದಷ್ಟೇ ಕಸುವು. ಬುಡಕಟ್ಟು, ಹಾಲಕ್ಕಿ ಒಕ್ಕಲಿಗರ, ದಲಿತ ಮುಕ್ರಿಗಳ ಕನ್ನಡಕ್ಕೂ ವ್ಯತ್ಯಾಸವಿದೆ. ಘಟ್ಟದ ಕೆಳಗಿನ ಹಾಗೂ ಘಟ್ಟದ ಮೇಲಿನ ದೀವರ ಭಾಷೆಯಲ್ಲೂ ಪ್ರತ್ಯೇಕ “ಧ್ವನಿ”ಗಳಿವೆ. ಸೇರುಗಾರ, ಸೊನಗಾರ, ಭಂಡಾರಿ, ಕೊಂಕಣಿ ಮರಾಠ, ಕೋಮಾರಪಂತ… ಹೀಗೆ ಬೇರೆ ಬೇರೆ ಜಾತಿಯವರ ಕೊಂಕಣಿ ಬಳಕೆಯಲ್ಲಿ ವಿಭಿನ್ನತೆಯಿದೆ. ಶಬ್ದಗಳಲ್ಲೂ ವ್ಯತ್ಯಾಸವಿದೆ; ಆಡುವ ಶೈಲಿಯಲ್ಲಿ ಬದಲಾವಣೆಯಿದೆ.
ಕ್ರಿಶ್ಚಿಯನ್ ಕೊಂಕಣಿಯ ಛಾಪು ವಿಶಿಷ್ಟ. ಆ ಭಾಷೆ ಕೇಳಿದಾಕ್ಷಣವೇ ಕ್ರಿಶ್ಚಿಯನ್ನರನ್ನು ಗುರುತಿಸಿಬಿಡಬಹುದು. ಮುಸ್ಲಿಮರು ಉರ್ದು ಮಾತಾಡಿದರೆ, ಭಟ್ಕಳ ಮತ್ತು ಹೊನ್ನಾವರದ ಹೊಳೆಸಾಲಿನಲ್ಲಿರುವ ನವಾಯತ ಮುಸ್ಲಿಮರು “ನವಾಯಿತಿ” ಮಾತಾಡುತ್ತಾರೆ. ಇದು ಕೊಂಕಣಿಮಿಶ್ರಿತ ಭಾಷೆ. ಕೇರಳ-ಮಂಗಳೂರು ಕಡೆಯಿಂದ ವಲಸೆಬಂದ ಬ್ಯಾರಿಗಳೂ ಕರಾವಳಿಯಲ್ಲಿದ್ದಾರೆ. ಉತ್ತರ ಕನ್ನಡದಲ್ಲಿ ಬೇರೆ-ಬೇರೆ ಜನಾಂಗದವರು ವ್ಯವಹರಿಸುವ ಭಾಷೆ ಮೇಲಿಂದಲೇ ಆ ಜಾತಿ ಹೆಸರೇಳಿ ಬಿಡಲಾಗುತ್ತಿದೆ. ಉದಾ: ಗೌಡಸಾರಸ್ವತ ಬ್ರಾಹ್ಮಣ(ಜಿಎಸ್ಬಿ)ಗಳದು ಒಂಥರಾ ಪಾಲಿಶ್ಡ್ ಕೊಂಕಣಿಯಾದರೆ ಬುಡಕಟ್ಟು ಕುಂಬ್ರಿ ಮರಾಠಿಗಳದು ಅವರಿಗಷ್ಟೇ ಅರ್ಥವಾಗಬಲ್ಲಷ್ಟು ಸಂಕೀರ್ಣವಾಗಿದೆ.
ಬುಡಕಟ್ಟು ಹಾಲಕ್ಕಿ ಒಕ್ಕಲಿಗರ ಕನ್ನಡದಲ್ಲಿ ನೆಲಮೂಲದ ಸಂಸ್ಕೃತಿಯ ಧ್ವನಿಯಿದೆ. ಮುಗ್ಧತೆ-ನಿಯತ್ತು ಮತ್ತು ಶ್ರಮ ಸಂಸ್ಕೃತಿಯ ಈ ಜನಾಂಗ ಉತ್ತರ ಕನ್ನಡದ ಕರಾವಳಿಗುಂಟದ ಕಾಡಿನಂಚಿನಲ್ಲಿ ಹೆಚ್ಚಿದೆ. ಇವರ ಉಡುಗೆ-ತೊಡುಗೆ-ಸಂಪ್ರದಾಯದಂತೆಯೇ ಮಾತುಗಾರಿಕೆಯಲ್ಲೂ ವಿಶಿಷ್ಟತೆಯಿದೆ. ಜಿಲ್ಲೆಯ ಮಲೆನಾಡಿನ ಭಾಗದಲ್ಲಿರುವ ಗೌಳಿಗರು ಗೋವಾ-ಮಹಾರಾಷ್ಟ್ರ ಗಡಿಯ ರತ್ನಗಿರಿ ಮೂಲದವರು. ಹೀಗಾಗಿ ಈ ಜನಾಂಗದ ಭಾಷೆಯಲ್ಲಿ ಕೊಂಕಣಿ ಜತೆಗೆ ಮರಾಠಿ ಬೆರೆತಿದೆ. ಆದರೆ ಕುಣಬಿ, ಕುಂಬ್ರಿ ಮರಾಠಿ ಸಮುದಾಯದ್ದು ಅವರದೇ ಆದ ಕೊಂಕಣಿ. ಸಿದ್ದಿ ಜನಾಂಗವೂ ಕುಣಬಿಗಳಂತೆ ಗೋವಾ ಕಡೆಯಿಂದ ಉತ್ತರಕನ್ನಡದ ಕಾಡುಮೇಡು ಸೇರಿಕೊಂಡಿದೆ. ಈ ಸಿದ್ದಿಗಳಲ್ಲಿ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಂಬ ವರ್ಗವಿದೆ. ಹೆಚ್ಚಿನವರದು ಕೊಂಕಣಿ ಆಡುಭಾಷೆ. ಆದರೆ ಹಿಂದೂಗಳಲ್ಲಿ ಕನ್ನಡ, ಕ್ರಿಶ್ಚಿಯನ್ನರಲ್ಲಿ ಕೊಂಕಣಿ ಮತ್ತು ಮುಸ್ಲಿಮರಲ್ಲಿ ಉರ್ದು ಪ್ರಭಾವ ಜಾಸ್ತಿ.
ಕುಂಬ್ರಿ ಮರಾಠಿಗರು ವ್ಯವಸಾಯಗಾರರು. ಗೌಳಿ-ಕುಣಬಿಗಳು ಹೈನುಗಾರಿಕೆ ಮೇಲೆ ಅವಲಂಬಿಸಿದ್ದಾರೆ. ಸಿದ್ದಿಗಳು ಕೃಷಿಕ ಕೃಷಿ ಕೂಲಿಯಾಗಿ ದುಡಿಯುತ್ತಿದ್ದಾರೆ. ಅವರ ಕಸುಬು ಬದುಕಿನ ಸಂಪ್ರದಾಯವೂ ಭಾಷೆಯನ್ನು ಪ್ರಭಾವಿಸಿದೆ. ಗೋಕರ್ಣದಲ್ಲಿ ವಲಸಿಗ ಬ್ರಾಹ್ಮಣರಿದ್ದಾರೆ. ಮರಾಠೀ ಬ್ರಾಹ್ಮಣರು ಮತ್ತು ಕೋಟಬ್ರಾಹ್ಮಣರು ಗೋಕರ್ಣ ಮಹಾಬಲೇಶ್ವರನ ಪೂಜೆ-ಪೌರೋಹಿತ್ಯ ಮಾಡಿಕೊಂಡು ಬದುಕುತ್ತಿದ್ದಾರೆ. ಮರಾಠಿ ಬ್ರಾಹ್ಮಣರ ಆಡುಭಾಷೆ ಮರಾಠಿಯಾದರೆ, ಕೋಟ ಬ್ರಾಹ್ಮಣರದು ಕನ್ನಡ. ಮಹಾರಾಷ್ಟ್ರ ಮೂಲದ “ಜೋಗಳೇಕರ್” ಎಂಬ ಮರಾಠಿ ಬ್ರಾಹ್ಮಣರು ಸುಮಾರು 80 ವರ್ಷದಿಂದ ಪಾತ್ರೆ-ಪಗಡೆ ಮಾರಾಟ ಮಾಡುತ್ತ ಇಲ್ಲೇ ನೆಲೆನಿಂತಿದೆ. ಉತ್ತರ ಕನ್ನಡದಲ್ಲಿನ ಅಸಂಖ್ಯ ಜಾತಿ-ಜನಾಂಗದಂತೆ ಅದರ ಭಾಷೆ-ಸಂಸ್ಕೃತಿ ಸಂಪ್ರದಾಯವೂ ಬೆರಗು ಹುಟ್ಟಿಸುವಂತದ್ದು.


