Homeಮುಖಪುಟಸ್ವರಾಜ್ ಎಂಬ ನಿಜವಾದ ಅಭಿವೃದ್ಧಿ : ಸುಮನಸ್ ಕೌಲಗಿ

ಸ್ವರಾಜ್ ಎಂಬ ನಿಜವಾದ ಅಭಿವೃದ್ಧಿ : ಸುಮನಸ್ ಕೌಲಗಿ

ಸ್ವರಾಜ್‌ ಅಭಿವೃದ್ದಿಯಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬನನ್ನು ಶೋಷಿಸದೆ, ಪ್ರೀತಿಯಿಂದ ಬದುಕುವುದರೊಟ್ಟಿಗೆ, ಬೇರೊಬ್ಬನು ತನ್ನನ್ನು ಶೋಷಿಸದಂತೆ ತಡೆಯುವುದೂ ಕೂಡ ಅಹಿಂಸೆಯ ಭಾಗವಾಗಿದೆ..

- Advertisement -
- Advertisement -

ಕಾಡಂಚಿನ ಒಂದು ಹಳ್ಳಿಯ ಮಧ್ಯವಯಸ್ಕ ವ್ಯಕ್ತಿಯನ್ನು ಅಂದು ಮಾತನಾಡಿಸುತ್ತಿದ್ದೆ. ಮಾತು ತಿರುತಿರುಗಿ ಅತನ ಹಳ್ಳಿಯ ಬಗ್ಗೆ ಬಂತು. ಮಾತಿನ ಮಧ್ಯೆ ಆತ ತನ್ನ ಹಳ್ಳಿ ಹಾಗೆಯೇ ಕುಗ್ರಾಮವಾಗಿಯೇ ಉಳಿದಿದ್ದು ತನ್ನ ಹಳ್ಳಿಯು ಇನ್ನೂ ‘ಡೆವಲಪ್’ ಆಗಿಲ್ಲ ಎಂದು ಕೊರಗತೊಡಗಿದ. ಕೆಲವು ದಿನಗಳ ಹಿಂದೆ ಸಾಫ್ಟ್ವೇರ್ ಗೆಳೆಯನೊಬ್ಬ ಬೆಂಗಳೂರಿನ ಬಗ್ಗೆ ಇದೇ ಮಾತನ್ನು ಹೇಳಿದ್ದು ನೆನಪಿಗೆ ಬಂತು. ಈ ‘ಡೆವಲಪ್’ ಅಥವಾ ಅಭಿವೃದ್ಧಿ ಎಂಬ ಪದ ಇತ್ತೀಚಿನ ಕೆಲವು ವರ್ಷಗಳಲ್ಲಿ ಹೆಚ್ಚು ಚಾಲ್ತಿಗೆ ಬಂದ ಶಬ್ದ. ಹಳ್ಳಿಯಿಂದ ದಿಲ್ಲಿಯವರೆಗೂ ಇದು ಜನರ ಶಬ್ದಭಂಡಾರಕ್ಕೆ ಸೇರಿಹೋಗಿದೆ. ಸಾಮಾನ್ಯರ ಕಲ್ಪನೆಯಲ್ಲಿ ಒಳ್ಳೆಯ ಜೀವನದ ಕನಸೊಂದನ್ನು ನನಸಾಗಿಸುವ ವಿಧಾನವೇ ‘ಡೆವಲಪ್’ ಆಗುವುದಾಗಿದೆ. ಈ ಅಭಿವೃದ್ಧಿ ಎಂಬ ಕಲ್ಪನೆಯು ಒಬ್ಬ ವ್ಯಕ್ತಿಗೆ, ಸಮುದಾಯಕ್ಕೆ ಹಾಗು ದೇಶಕ್ಕೆ ದಿಕ್ಕನ್ನು ತೋರಿಸುವ ದಿಕ್ಸೂಚಿಯಂತೆ ಕೆಲಸಮಾಡತೊಡಗಿದೆ.

ಅಮೂರ್ತವಾಗಿರುವ ಈ ಅಭಿವೃದ್ಧಿ ಕಲ್ಪನೆ ಸಮಾಜದ ಎಲ್ಲಾ ಸ್ಥರದವರಲ್ಲಿ ಹೆಚ್ಚು ಕಡಿಮೆ ಒಂದೇ ರೀತಿಯದಾಗಿದೆ. ಈ ಕಲ್ಪನೆ ನೂರಕ್ಕೆ ನೂರು ಭೌತಿಕ ಅಭಿವೃದ್ಧಿಯನ್ನು ತನ್ನ ಒಡಲಾಳದಲ್ಲಿ ಇಟ್ಟುಕೊಂಡಿದೆ. ಈ ಕಲ್ಪನೆಯಲ್ಲಿ ಹೆಚ್ಚಿನ ಭೌತಿಕ ವಸ್ತು ಸಂಗ್ರಹಣೆಯು ವ್ಯಕ್ತಿಯ, ಸಮುದಾಯದ ಅಥವಾ ದೇಶದ ಅಭಿವೃದ್ಧಿಯ ಸಂಕೇತವಾಗಿದೆ. ಜೀವನದಲ್ಲಿ ನೆಮ್ಮದಿ ಹಾಗು ಶಾಂತಿಯನ್ನು ಪಡೆವುದು ಈ ‘ಡೆವಲಪ್’ ಆಗುವುದರ ಹಿಂದಿನ ಬಯಕೆ ಎಂಬುದು ಯಾರೇ ಜನಸಾಮಾನ್ಯರೊಟ್ಟಿಗೆ ಮಾತನಾಡಿದರೆ ತಿಳಿಯುತ್ತದೆ. ಆದರೆ ನಾವು ನಂಬಿರುವ ಈ ವಸ್ತುಕೇಂದ್ರಿತ ಅಭಿವೃದ್ಧಿ, ಎಷ್ಟರ ಮಟ್ಟಿಗೆ ಈ ಬಯಕೆಯನ್ನು ಈಡೇರಿಸಿದೆ ಎಂದು ಪರೀಕ್ಷಿಸಿಕೊಳ್ಳುವುದು ಇಂದಿಗೆ ಅತ್ಯಗತ್ಯ. ಈ ಪರಾಮರ್ಶೆಯಿಂದ ಒಂದು ನಾಗರೀಕತೆಯಾಗಿ ನಾವು ಸರಿಯಾದ ದಿಕ್ಕಿನೆಡೆಗೆ ಹೆಜ್ಜೆ ಇಡುತ್ತಿದ್ದೇವೆಯೆ ಅಥವಾ ಇಲ್ಲವೆ ಎಂಬುದು ತಿಳಿಯಬೇಕಿದೆ.

ಒಂದೆಡೆ, ವಸ್ತು ಕೇಂದ್ರಿತ ಅಭಿವೃದ್ಧಿಯಿಂದ ಪರಿಸರದ ಮೇಲೆ ಮಿತಿಮೀರಿದ ಒತ್ತಡ ಉಂಟಾಗಿ ನಾವು ಬದುಕಲೇ ಆಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇತ್ತಿಚೆಗಷ್ಟೆ, ಮೆಲ್‌ಬರ್ನ್‌ನ ‘ಬ್ರೇಕ್‌ಥ್ರೂ ನ್ಯಾಶನಲ್ ಸೆಂಟರ್ ಫಾರ್ ಕ್ಲೈಮೇಟ್ ರಿಸ್ಟೊರೇಶನ್’ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ನಾವು ಅನುಸರಿಸುತ್ತಿರುವ ಅಭಿವೃದ್ಧಿ ಮಾದರಿಯು 2050ನೇ ಇಸವಿಯ ವೇಳೆಗೆ ಮನುಷ್ಯನ ಮೂಲಭೂತ ಅಗತ್ಯಗಳಾದ ಒಳ್ಳೆಯ ಗಾಳಿ, ನೀರು, ಮಣ್ಣು ಸಿಗದಂತೆ ಮಾಡಿ ಮಾನವ ಕುಲವೇ ವಿನಾಶದ ಅಂಚಿಗೆ ತಲುಪುತ್ತದೆ ಎನ್ನುತ್ತದೆ. ಇಂಗ್ಲೆಂಡಿನ ಆಕ್ಸಫಾಮ್ ಸಂಸ್ಥೆಯ ವರದಿಯ ಪ್ರಕಾರ ಈ ಅಭಿವೃದ್ಧಿಯ ಮಾದರಿಯಿಂದಾಗಿ ಬಡವ ಬಲ್ಲಿದರ ನಡುವಿನ ಅಂತರ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಗುತ್ತಿದೆ. ಭಾರತ ದೇಶದ ಶೇ.77ರಷ್ಟು ಸಂಪತ್ತು ಕೇವಲ ಶೇ.10ರಷ್ಟು ಜನರ ಬಳಿ ಸೇರಿದೆ. ವರ್ಷದಿಂದ ವರ್ಷಕ್ಕೆ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ, ಬಡವರು ಬಡವರಾಗುತ್ತಿದ್ದಾರೆ. ಇದಷ್ಟೇ ಅಲ್ಲದೆ ಜನರಿಗೆ ತಮ್ಮ ಜೀವನದ ಮೇಲಿನ ಹಿಡಿತ ಕಡಿಮೆಯಾಗಿ, ನೆಮ್ಮದಿ ಹಾಗು ಸಂತೋಷ ಕುಸಿಯುತ್ತಿದೆ. ಹಾಗಾಗಿ ಪರಿಸರ ಸುಸ್ಥಿರತೆ ಮತ್ತು ಸಾಮಾಜಿಕ ಆರ್ಥಿಕ ಸಮಾನತೆಯನ್ನು ಹೆಚ್ಚಿಸಿ, ಜನರಿಗೆ ತಮ್ಮ ಬದುಕಿನ ಮೇಲೆ ಹೆಚ್ಚಿನ ಹಿಡಿತವನ್ನು ನೀಡಬಲ್ಲ ಅಭಿವೃದ್ಧಿಯ ಕಲ್ಪನೆಯನ್ನು ನೀಡಬೇಕಿದೆ. ಇಂತಹ ಒಂದು ಅಭಿವೃದ್ಧಿ ಕಲ್ಪನೆಯು ಮಹಾತ್ಮಗಾಂಧಿ ಹಾಗು ಅವರ ಒಡನಾಡಿ ಜೆ.ಸಿ ಕುಮಾರಪ್ಪನವರ ಚಿಂತನೆಯಲ್ಲಿ ಅಡಗಿದೆ. ಅದು ಸ್ವರಾಜ್ ಅಭಿವೃದ್ಧಿ ಕಲ್ಪನೆಯಾಗಿದೆ.

ಜೆ.ಸಿ ಕುಮಾರಪ್ಪ

ಸ್ವರಾಜ್ ಎಂದರೆ ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ತನ್ನ ಜೀವನದ ಮೇಲೆ ಹಿಡಿತವನ್ನು ತಾನೇ ಹೊಂದಿರುವುದು ಎಂಬುದಾಗಿದೆ. ಸ್ವರಾಜ್ ಅಭಿವೃದ್ಧಿ ಕಲ್ಪನೆಯು ನ್ಯಾಚುರಲ್ ಆರ್ಡರ್ ಎಂಬ ಸಮಷ್ಟಿ ದೃಷ್ಟಿಯ ಮೇಲೆ ನಿಂತಿದೆ. ಈ ಸಮಷ್ಟಿ ನೋಟವು ಪರಿಸರದಲ್ಲಿ ಮಾನವನ ಸ್ಥಾನವನ್ನು ಗುರುತಿಸಿ, ಸತ್ಯ ಮತ್ತು ಅಹಿಂಸೆ ಎಂಬ ಮೂಲ ತತ್ವಗಳನ್ನು ಆಧಾರವಾಗಿ ಹೊಂದಿದೆ. ಸತ್ಯವೆಂದರೆ ಮನುಷ್ಯನನ್ನೂ ಒಳಗೊಂಡಂತೆ ವಿಶ್ವದಲ್ಲಿರುವ ಎಲ್ಲಾ ಜೀವ ಹಾಗು ನಿರ್ಜೀವ ವಸ್ತುಗಳ ನಡುವೆ ಒಂದು ಅವಿನಾಭಾವ ಸಂಬಂಧವಿದೆ ಎಂಬ ದೃಷ್ಟಿಕೋನ. ಒಬ್ಬ ವ್ಯಕ್ತಿಯ ಒಳಿತು ವಿಶ್ವದ ಒಳಿತಿನಲ್ಲಿದೆ ಎಂಬುದು ಈ ದೃಷ್ಟಿಕೋನದ ನೈತಿಕ ನಿಲುವು. ಹಾಗಾಗಿ ಸತ್ಯದ ಅರಿವಿನಲ್ಲಿ ಬದುಕಲು, ಅಹಿಂಸಾತ್ಮಕ ಜೀವನ ಅನಿವಾರ್ಯವಾಗುತ್ತದೆ. ಇಲ್ಲಿ ಕೇವಲ ಒಬ್ಬ ವ್ಯಕ್ತಿ ಮತ್ತೊಬ್ಬನನ್ನು ಶೋಷಿಸದೆ, ಪ್ರೀತಿಯಿಂದ ಬದುಕುವುದರೊಟ್ಟಿಗೆ, ಬೇರೊಬ್ಬನು ತನ್ನನ್ನು ಶೋಷಿಸದಂತೆ ತಡೆಯುವುದೂ ಕೂಡ ಅಹಿಂಸೆಯ ಭಾಗವಾಗಿದೆ. ಈ ರೀತಿಯ ಅಹಿಂಸಾತ್ಮಕ ಬದುಕನ್ನು ನಡೆಸಲು ಎಲ್ಲ ಮನುಷ್ಯರಿಗೂ ತಮ್ಮ ಮೂಲಭೂತ ಭೌತಿಕ ಅಗತ್ಯತೆಗಳಾದ ಆಹಾರ, ಬಟ್ಟೆ ಮತ್ತು ವಸತಿಯ ಪೂರೈಕೆಯಾಗುವುದು ಅತ್ಯಗತ್ಯ. ಈ ಮೂಲಭೂತ ಅಗತ್ಯಗಳಿಂದ ವಂಚಿತನಾದವನಿಗೆ, ತನ್ನ ದೈಹಿಕ ಬದುಕು ಮುಖ್ಯವಾಗಿ, ಸಮಾಜದ ಒಳಿತು ಹಿಂದಕ್ಕೆ ಸರಿಯುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಸ್ವರಾಜ್ ಕಲ್ಪನೆಯಲ್ಲಿ ಅಭಿವೃದ್ಧಿಯು ಮೂಲಭೂತ ಭೌತಿಕ ಅಗತ್ಯತೆಗಳನ್ನು ಪೂರೈಸಿದ ನಂತರ ನೈತಿಕತೆಯ ಕಡೆಗೆ ಮುಖಮಾಡುತ್ತದೆ. ಇದು ಒಬ್ಬ ವ್ಯಕ್ತಿ ತನ್ನ ಅಹಂಅನ್ನು ಕಳೆದುಕೊಂಡು ವಿಶ್ವದೊಟ್ಟಿಗೆ ಒಂದಾಗಿ ಬದುಕಲು ಪ್ರೇರೇಪಿಸುತ್ತದೆ. ಇದರ ಫಲವೇ ವ್ಯಕ್ತಿಜೀವನದಲ್ಲಿ ಹಾಗೂ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ ನೆಲೆಗೊಳ್ಳುವಂತೆ ಮಾಡುತ್ತದೆ.

ಸ್ವರಾಜ್ ಅಭಿವೃದ್ಧಿಯು ಮೂಲಭೂತ ಭೌತಿಕ ಅಗತ್ಯತೆಗಳನ್ನು ಎಲ್ಲರು ಪೂರೈಸಿಕೊಳ್ಳುವಂತೆ ಮಾಡಲು ರಾಜಕೀಯ ವಿಕೇಂದ್ರಿಕರಣ ಹಾಗು ಸ್ವಾವಲಂಬಿ ಆರ್ಥಿಕ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ರಾಜಕೀಯ ವಿಕೇಂದ್ರಿಕರಣವು ಎರಡು ಮುಖವನ್ನು ಹೊಂದಿದೆ. ಒಂದು, ಅಹಿಂಸಾತ್ಮಕ ಪ್ರಜಾಪ್ರಭುತ್ವ, ಮತ್ತೊಂದು ಸತ್ಯಾಗ್ರಹದ ಮೂಲಕ ಶೋಷಣೆಯ ವಿರುದ್ಧ ಅಹಿಂಸಾತ್ಮಕ ಹೋರಾಟ. ಅಹಿಂಸಾತ್ಮಕ ಪ್ರಜಾಪ್ರಭುತ್ವವು ಹೆಚ್ಚಿನ ರಾಜಕೀಯ ಅಧಿಕಾರವನ್ನು ಸಮುದಾಯಕ್ಕೆ ನೀಡಿ, ನಿರ್ಧಾರಗಳನ್ನು ಆದಷ್ಟು ಒಮ್ಮತದ ಮೇಲೆ ಮಾಡುವಂತೆ ಪ್ರೋತ್ಸಾಹಿಸುತ್ತದೆ. ಈ ವ್ಯವಸ್ಥೆಯು ಸಮುದಾಯದ ಭಾಗವಾಗಿರುವ ವ್ಯಕ್ತಿಗೆ ತನ್ನ ಜೀವನದ ಮೇಲೆ ಹೆಚ್ಚಿನ ಹಿಡಿತವನ್ನು ನೀಡಿ ರಾಜಕೀಯ ಶೋಷಣೆಯನ್ನು ಕಡಿಮೆಗೊಳಿಸುತ್ತದೆ. ಈ ರೀತಿಯ ಪ್ರಜಾಪ್ರಭುತ್ವವು, ಬೆಂಗಳೂರಿನಲ್ಲೋ ಅಥವ ದೆಹಲಿಯಲ್ಲೋ ಕುಳಿತು ಯಾವುದೋ ಒಂದು ಹಳ್ಳಿಗೆ ಅಲ್ಲಿಯ ಜನರನ್ನು ಗಮನಕ್ಕೇ ತೆಗೆದುಕೊಳ್ಳದೇ ಏನು ಬೇಕು ಏನು ಬೇಡ ಎಂದು ನಿರ್ಧರಿಸುವ ಇಂದಿನ ರಾಜಕೀಯ ವ್ಯವಸ್ಥೆಗೆ ತದ್ವಿರುದ್ಧವಾಗಿದೆ. ಮನುಷ್ಯನಿಗೆ, ಪರಹಿತದ ಜೊತೆಗೆ ಸ್ವಹಿತಾಸಕ್ತಿಯ ಮುಖವೂ ಇರುವುದರಿಂದ ಅಹಿಂಸಾತ್ಮಕ ಪ್ರಜಾಪ್ರಭುತ್ವದಲ್ಲಿಯೂ ಶೋಷಣೆಯ ಸಾಧ್ಯತೆಗಳಿರುತ್ತದೆ. ಹಾಗಾಗಿ ಸತ್ಯಾಗ್ರಹ ಅಥವಾ ಪ್ರೀತಿಯ ಮೂಲಕ ಶೋಷಿತರು ಶೋಷಣೆ ಮಾಡುವರ ಮನಸ್ಸನ್ನು ಗೆದ್ದು ಶೋಷಣೆಯಿಂದ ಹೊರಬರುವುದು ಸ್ವರಾಜ್ ಅಭಿವೃದ್ಧಿಯಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.

ರಾಜಕೀಯ ವಿಕೇಂದ್ರಿಕರಣಕ್ಕೆ, ಸ್ವಾವಲಂಬಿ ಆರ್ಥಿಕ ವ್ಯವಸ್ಥೆಯು ಅತ್ಯಗತ್ಯ. ಈ ವ್ಯವಸ್ಥೆಯು ಉತ್ಪತ್ತಿ ಹಾಗು ಕೊಳ್ಳುವಿಕೆಯು ಕೇವಲ ಭೌತಿಕ ವ್ಯವಹಾರವಲ್ಲದೆ, ನೈತಿಕ ವ್ಯವಹಾರ ಕೂಡ ಆಗಿದೆ ಎಂಬುದನ್ನು ಗುರುತಿಸುತ್ತದೆ. ಉದಾಹರಣೆಗೆ ಮಕ್ಕಳನ್ನು ಶೋಷಿಸಿ ತಯಾರಾದ ಒಂದು ವಸ್ತುವನ್ನು ಕೊಂಡ ವ್ಯಕ್ತಿಯೊಬ್ಬ ಪರೋಕ್ಷವಾಗಿ ಆ ಮಕ್ಕಳ ಶೋಷಣೆಗೆ ಕಾರಣನಾಗಿರುತ್ತಾನೆ. ಆದ್ದರಿಂದ ಒಬ್ಬ ವ್ಯಕ್ತಿಯು ಅಹಿಂಸಾತ್ಮಕ ಬದುಕನ್ನು ನಡೆಸಬೇಕಾದರೆ, ತಾನು ಕೊಂಡಿರುವ ವಸ್ತು ಹೇಗೆ ತಯಾರಾಗಿದೆ, ಅದರ ತಯಾರಿಕೆಯ ಹಿಂದಿನ ಕತೆಯೇನು ಎಂಬುದನ್ನು ಖುದ್ದು ತಿಳಿಯುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಉತ್ಪಾದಕ ಮತ್ತು ಗ್ರಾಹಕರ ನಡುವಿನ ಅಂತರ ಕಡಿಮೆ ಇರುವಂತೆ ಸ್ವಾವಲಂಬಿ ಆರ್ಥಿಕ ವ್ಯವಸ್ಥೆಯು ಪ್ರೇರೇಪಿಸುತ್ತದೆ. ಈ ಅರ್ಥ ವ್ಯವಸ್ಥೆಯು ಮಾನವ ಶ್ರಮ ಆಧಾರಿತ ಉದ್ಯೋಗಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಏಕೆಂದರೆ ಮಾನವ ಶ್ರಮವನ್ನು ಒಂದು ಶಕ್ತಿಯ ರೂಪವಾಗಿ ನೋಡಿದರೆ, ಅದರಷ್ಟು ಪರಿಸರ ಸ್ನೇಹಿಯಾದ ಶಕ್ತಿಯ ಮೂಲ ಮತ್ತೊಂದಿಲ್ಲ. ಹಣದ ಬಂಡವಾಳ ಕೇವಲ ಕೆಲವರ ಬಳಿ ಮಾತ್ರ ಇದೆ. ಶ್ರಮಕ್ಕೆ ಬೇಕಾದ ಶಕ್ತಿ ಎಲ್ಲರ ಬಳಿಯಲ್ಲೂ ಇದೆ. ಹಾಗಾಗಿ ಶ್ರಮಾಧಾರಿತ ವ್ಯವಸ್ಥೆ ಹೆಚ್ಚಿನ ಜನ ತಮ್ಮ ಕಾಲ ಮೇಲೆ ನಿಲ್ಲಲು ಸಾಧ್ಯ ಮಾಡಿಕೊಡುತ್ತದೆ. ಉದಾಹರಣೆಗೆ ಶ್ರಮಾಧಾರಿತ ಕೈಮಗ್ಗಕ್ಕೆ ಬೇಕಾದ ಬಂಡವಾಳವು ಕೇವಲ ಇಪ್ಪತ್ತು ಸಾವಿರ ರೂಪಾಯಿಗಳಾದರೆ, ಬಂಡವಾಳ ಆಧಾರಿತ ವಿದ್ಯುತ್ ಮಗ್ಗಕ್ಕೆ ಎರಡು ಲಕ್ಷ ರುಪಾಯಿಗಳಷ್ಟು ಬೇಕಾಗುತ್ತದೆ. ಕೈಮಗ್ಗದ ಸ್ಥಾಪನೆಗೆ ಬಂಡವಾಳ ಕಡಿಮೆ ಇರುವುದರಿಂದ ಹೆಚ್ಚಿನ ಜನ ಸ್ವಂತ ಉದ್ಯೋಗವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಉತ್ಪಾದನೆಯ ಹಂತದಲ್ಲಿಯೇ ಸಂಪತ್ತು ಹಂಚಿಕೆಯಾಗಿ ಸಮಾಜದಲ್ಲಿ ಹೆಚ್ಚಿನ ಸಮಾನತೆ ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ ಸ್ವರಾಜ್ ಅಭಿವೃದ್ಧಿಯತ್ತ ಹೊರಳುವುದು, ಮಾನವಕುಲದ ಉಳಿವಿಗೆ ಅನಿವಾರ್ಯವಾಗಿದೆ ಎಂಬುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಈ ಅನಿವಾರ್ಯತೆಯೇ 150 ವರ್ಷಗಳ ನಂತರವೂ ಗಾಂಧಿಯ ಪ್ರಸ್ತುತತೆಯನ್ನು ನಮಗೆ ತಿಳಿಸುತ್ತದೆ.

  • ಸುಮನಸ್ ಕೌಲಗಿ

ಮೇಲುಕೋಟೆಯವರಾದ ಸುಮನಸ್, ಗಾಂಧಿ ವಿಚಾರಧಾರೆಯನ್ನು ಸ್ವತಃ ಮೈಗೂಡಿಸಿಕೊಂಡಿರುವುದಲ್ಲದೆ ಅದರ ಪ್ರಚಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ‘ಸ್ವರಾಜ್ ಅಭಿವೃದ್ಧಿ ಚಿಂತನೆ’ಯ ಬಗ್ಗೆ ಇಂಗ್ಲೆಡಿನ ಯೂನಿವರ್ಸಿಟಿ ಆಫ್ ಸಸೆಕ್ಸ್‌ನಲ್ಲಿ ಪಿಎಚ್‌ಡಿ ಪ್ರಬಂಧ ಮಂಡಿಸಿದ್ದಾರೆ.


ಇದನ್ನೂ ಓದಿ: ಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...